
ವೃಷ್ಟಿಮೂಲ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಮ್ |
ತಸ್ಮಾದಾದೌ ಪ್ರಯತ್ನೇನ ವೃಷ್ಟಿಜ್ಞಾನಂ ಸಮಾಚರೇತ್ ||
(ಕೃಷಿ ಪರಾಶರ – ಪರಾಶರ ಮುನಿ: 10 ನೇ ಶ್ಲೋಕ)
ಮೂಲತಃ ಕೃಷಿಯು ಮಳೆಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಸಮಗ್ರ ಜೀವನವೇ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮೊಟ್ಟಮೊದಲನೆಯದಾಗಿ ಮಳೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯವೆಂದು ಪ್ರಾಚೀನ ಋಷಿ ಪರಾಶರ ಹೇಳಿದ್ದಾನೆ. ಕೃಷಿ ಮಳೆಯನ್ನು ಅವಲಂಬಿಸುವುದೆಂದರೆ ನೀರನ್ನು ಅವಲಂಬಿಸುವುದೆಂದೇ ಅರ್ಥ. ‘ಮಣ್ಣು-ನೀರು-ಸಸ್ಯ-ಆಹಾರ’ ಇಷ್ಟು ಹೇಳಿಬಿಟ್ಟರೆ ಅದು ಪ್ರಕೃತಿಯಾಗುತ್ತದೆ. ‘ಕೃಷಿ’ ಎಂದು ಬಿಟ್ಟರೆ ಅದು ಮಾನವ ನಿರ್ಮಿತವಾಗುತ್ತದೆ. ಮನುಷ್ಯನ ಪ್ರವೇಶಿಕೆ ಎಂದರೆ ನಿಸರ್ಗದ ನಿಯತಿಯನ್ನು ಮೀರುವುದೆಂದರ್ಥ. ಕಾಡಿನಲ್ಲಿರುವುದೂ ಸಸ್ಯ, ನಾಡಿನಲ್ಲಿರುವುದೂ ಸಸ್ಯ. ಅಷ್ಟೇ ಏಕೆ, ಕೃಷಿ ಬೆಳೆಯೂ ಸಸ್ಯ. ಬೆಳೆಯ ನಡುವೆ ಎದ್ದಿರುವ ಕಳೆಯೂ ಸಸ್ಯ. ಯಾವುದು ಹೆಚ್ಚು ಬಾಧೆಗೊಳಗಾಗುತ್ತದೆ? ಯಾವುದು ಹೆಚ್ಚು ಬಾಧೆಯನ್ನು ಸೃಷ್ಟಿಸುತ್ತಿದೆ? ಇದನ್ನು ಸರಿಯಾಗಿ ಅರ್ಥೈಸಿಕೊಂಡರೆ ಆಧುನಿಕ ಕೃಷಿಯ ಗುಣಾವಗುಣಗಳು ತಂತಾನೇ ಅನಾವರಣಗೊಳ್ಳುತ್ತವೆ.
ಪರಾಶರ ಮುನಿ ನೀಡಿರುವ ಬಹಳಷ್ಟು ಶ್ಲೋಕಗಳು ಮಳೆಯ ಪ್ರಮಾಣ, ಅದರ ಹಂಚಿಕೆ, ತತಿ-ತಿಥಿ-ನಕ್ಷತ್ರಾದಿಗಳು, ಮಳೆಯ ವರ್ತನೆ, ಏರುಪೇರು; ಅದನ್ನು ಅರಿಯುವ, ಅರ್ಥೈಸುವ, ಅದಕ್ಕೆ ತಕ್ಕಂತೆ ಸಾಗುವಳಿಯನ್ನು ಅನುಸರಿಸುವ ಬಗ್ಗೆ ವಿವರಿಸುತ್ತವೆ. ಕೃಷಿಯೊಂದಿಗೆ ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ಇರಿಸಿಕೊಳ್ಳಬೇಕಾದ ವಿವೇಕ, ವಿವೇಚನೆಗಳ ಕುರಿತಾಗಿಯೇ ಮಾತನಾಡುತ್ತವೆ. ಒಟ್ಟಾರೆ ಕೃಷಿಯೆಂಬುದು ಪಂಚಭೂತಗಳಿಂದಾಗಿದೆ. ಮನುಷ್ಯನೂ ಅದೇ ಪಂಚಭೂತಗಳಿಂದಾಗಿದ್ದಾನೆಂದು ಒಂದಷ್ಟು ಸಾಂಕೇತಿಕವಾಗಿ, ಒಂದಷ್ಟು ವಸ್ತುನಿಷ್ಟವಾಗಿ ಹೇಳುವ ಕ್ರಮ ನಮ್ಮ ಪರಂಪರೆಯಲ್ಲಿದೆ.
‘ಕಾಡು ನೋಡಿ ಕೃಷಿ ಮಾಡು’ ಎಂಬುವ ಮಾತಿದೆ. ಕಾಡಿನಲ್ಲಿ ಗಿಡಮರಗಳ ಬೆಳವಣಿಗೆಗೆ ಯಾರು ನೀರು ಕೊಟ್ಟರು? ಸಸ್ಯದ ಬೆಳವಣಿಗೆಗೆ ನೀರು ಬೇಕೆಂಬುದು ಪರಮ ಸತ್ಯ ಮತ್ತು ನಿಸರ್ಗ ಸತ್ಯ. ನಿಸರ್ಗದತ್ತವಾಗಿ ಕೃಷಿಗೆ ಮಳೆಯಿಂದ ನೀರು ದೊರೆಯುತ್ತದೆ. ಅದನ್ನು ಮನುಷ್ಯ ಕೃತಕವಾಗಿ ಒದಗಿಸಿದರೆ ‘ನೀರಾವರಿ’ ಎನಿಸಿಕೊಳ್ಳುತ್ತದೆ. ವ್ಯವಸಾಯದಲ್ಲಿ ಹೊರಗಿನಿಂದ ನೀರು ನೀಡಿ ಹೆಚ್ಚಿನ ಉತ್ಪನ್ನವನ್ನು ಪಡೆಯಬಹುದೆಂಬುದು ರೈತನ ನಂಬಿಕೆ ಮತ್ತು ಅನುಭವ. ಅದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಒಂದೇ ಒಂದು ಎಕರೆ ಜಮೀನು ಮುಳುಗಡೆ ಆಗದಂತೆ ಆಣೆಕಟ್ಟು ಕಟ್ಟಿ 11 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ನೀಡಿದ ವಿಜಯನಗರ ಅರಸರ ಮಾದರಿ ನಮ್ಮ ಮುಂದಿದೆ. ಆ ಕಾಲದ ಕಾಲುವೆ ನೀರಾವರಿಯನ್ನು ಇಂದಿಗೂ ಬಳಸಲಾಗುತ್ತಿದೆ ಎಂದರೆ ಕಾಮಗಾರಿಯ ಗುಣಮಟ್ಟವನ್ನು ಇಂದಿನವರು ಉಹಿಸಬಹುದಾಗಿದೆ. ನೀರಾವರಿಯನ್ನು ನಾನಾ ರೂಪಗಳಲ್ಲಿ ಮಾಡಬಹುದು. ವಿವಿಧ ಪ್ರಕಾರದ ನೀರಾವರಿ ಪದ್ಧತಿಗಳಿದ್ದು, ಅವುಗಳಲ್ಲಿ ಆಣೆಕಟ್ಟಿನಲ್ಲಿ ಸಂಗ್ರಹಿಸಿದ ನೀರನ್ನು ಕಾಲುವೆ ಮೂಲಕ ಬೆಳೆಗಳಿಗೆ ಕೊಡುವ ‘ಹಾಯ್ನೀರು’ ಪದ್ದತಿ ಬಹಳ ಮುಖ್ಯವಾದದು. ವಿಶಾಲವಾದ ವಿಸ್ತೀರ್ಣವನ್ನು ಆಕ್ರಮಿಸಿರುವ, ನಾಡಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗಿರುವ, ಒಕ್ಕುಲುತನದ ಲಾಭ-ನಷ್ಟದ ಮಾನದಂಡವನ್ನೇ ಬದಲಾಯಿಸಿರುವ, ‘ಕಾಲುವೆ ನೀರಾವರಿ’ ಸೃಷ್ಟಿಸಿರುವ ಸನ್ನಿವೇಶ ಎಂಥದ್ದು? ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ.
ರಾಜ್ಯದಲ್ಲಿ 6 ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳಿದ್ದು ಆಯಾ ಪ್ರದೇಶದ ನೀರಾವರಿ ಸಂಬಂಧಿ ಚಟುವಟಿಕೆಗಳನ್ನು ನಿಯಂತ್ರಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಕಾವೇರಿ, ಕೃಷ್ಣಾ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾಗಳೊಂದಿಗೆ ಹಲವಾರು ನದಿಗಳು, ಉಪನದಿಗಳಲ್ಲದೇ ಅನೇಕ ರೀತಿಯ ನೀರಿನ ಮೂಲಗಳಿವೆ. ಅವು ಎಷ್ಟೇ ಇದ್ದರೂ, ಇಡೀ ರಾಜ್ಯವನ್ನು ನದಿ ಪಾತ್ರಗಳಿಗೆ ಅನ್ವಯಿಸಿ 2 ಮುಖ್ಯ ಭಾಗಗಳನ್ನಾಗಿ ವಿಭಾಗಿಸಲಾಗಿದೆ. ಒಂದು ಕಾವೇರಿ ಕೊಳ್ಳ, ಇನ್ನೊಂದು ಕೃಷ್ಣಾ ಕೊಳ್ಳ. ನಮ್ಮೆಲ್ಲ ನೀರಿನ ಮೂಲಗಳು ಇವೆರಡು ನದಿಪಾತ್ರಗಳ ವ್ಯಾಪ್ತಿಯಲ್ಲಿರಬೇಕು, ಇಲ್ಲವೇ ಒಂದಿಲ್ಲೊಂದು ರೀತಿಯಲ್ಲಿ ಅವುಗಳೊಂದಿಗೆ ಜೋಡಿಸಿಕೊಂಡಿರಬೇಕು. ಇದರೊಂದಿಗೆ ಅಪಾರ ಪ್ರಮಾಣದ ಬಾವಿಗಳು, ಕೆರೆಗಳು, ಕೊಳವೆಬಾವಿಗಳು ಇತ್ಯಾದಿ ಇವೆ. 19.1 ದಶಲಕ್ಷ ಹೆಕ್ಟೇರ್ ಭೂ ಪ್ರದೇಶವಿರುವ ಕರ್ನಾಟಕದ ಸಾಗುವಳಿ ಕ್ಷೇತ್ರ 12 ದಶಲಕ್ಷ ಹೆಕ್ಟೇರ್ಗಿಂತಲೂ ಹೆಚ್ಚು. ಇದರಲ್ಲಿ 40 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವಿದೆ. ಇದನ್ನು ಹೊರತುಪಡಿಸಿದ ಭೂಪ್ರದೇಶದಲ್ಲಿ ಒಕ್ಕಲುತನ ಮಾಡುವ ರೈತರು ತಮ್ಮನ್ನು ತಾವು ನತದೃಷ್ಟರೆಂದೇ ಭಾವಿಸಿದ್ದಾರೆ. ನೀರಾವರಿ ಪ್ರದೇಶದಲ್ಲಿ ಬೃಹತ್ ನೀರಾವರಿ, ಸಣ್ಣ ನೀರಾವರಿ ಯೋಜನೆಗಳಲ್ಲದೇ, ಸ್ಥಳೀಯವಾಗಿರುವ ಸಣ್ಣಪುಟ್ಟ ಯೋಜನೆಗಳು, ಕೆರೆಕಟ್ಟೆ, ಕೊಳವೆ ಬಾವಿಗಳಿಂದ ಬೆಳೆಗಳಿಗೆ ನೀರುಣಿಸಲಾಗುತ್ತಿದೆ. ಆಯಾವರ್ಷ ಆಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವನ್ನು ಆಧರಿಸಿ, ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಇಲ್ಲವೇ ಎರಡು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಯಥೇಚ್ಛವಾಗಿ ನೀರು ಹರಿದು ಬರುವಾಗ ರಾಗಿ, ಜೋಳ, ಸಜ್ಜೆ, ಸಾವಿ, ಹೆಸರು, ಉದ್ದು, ಅಲಸಂದಿಗಳಂತಹ ಸಣ್ಣಪುಟ್ಟ ಬೆಳೆಗಳನ್ನು ಬೆಳೆಯಲಾದೀತೆ? ಲಾಭ ತರುವ ವಾಣಿಜ್ಯ ಬೆಳೆಗಳನ್ನೇ ಬೆಳೆಯಬೇಕು. ಹಣದ ತೈಲಿ ತುಂಬುವಂತಹ ಬೆಳೆಗಳನ್ನೇ ಬೆಳೆಯಬೇಕು. ಹಣ ಒಂದು ಹರಿದು ಬಂದರೆ ಮನೆಗೆ ಬೇಕಾದ ದವಸ-ಧಾನ್ಯಗಳು, ಬೇಳೆ-ತರಕಾರಿಗಳು, ಹಣ್ಣು-ಹಂಪಲಗಳು, ಮೇವು-ಹೊಟ್ಟುಗಳನ್ನು ಕೊಳ್ಳಬಹುದಲ್ಲವೇ? ಹೀಗೆ ನೀರಾವರಿ ಪ್ರದೇಶದಲ್ಲಿನ ಬಿತ್ತುವ, ಬೆಳೆಯುವ, ಸಾಗುವಳಿ ಕ್ರಮಗಳು, ಆಹಾರ ವಿಹಾರಗಳು, ಜೀವನ ಪದ್ಧತಿಗಳು, ಬದಲಾಗುತ್ತ ಹೋದವು. ಎಲ್ಲ ಕಡೆ ವಾಣಿಜ್ಯ ಕೃಷಿ ಹೆಚ್ಚಾಗುತ್ತಿದ್ದ ಹಾಗೆ ಸೊಪ್ಪು-ಸೆದೆ-ಮೇವಿನ ಕೊರತೆಯಾಗುತ್ತಿದ್ದಂತೆ ದನಕರುಗಳು ಕೃಷಿ ಪರಿಸರದಿಂದ ಹೊರನಡೆದವು. ಸಾಲಸೋಲ ಮಾಡಿ ವ್ಯವಸಾಯದಲ್ಲಿ ಹಾಕಿದ ಪ್ರತಿಯೊಂದು ರೂಪಾಯಿಗೆ ಎಷ್ಟು ಲಾಭ ಬರುತ್ತದೆಯೆಂದು ಲೆಕ್ಕ ಹಾಕುವುದು ರೈತನಿಗೆ ಅನಿವಾರ್ಯವಾಯಿತು. ಬೆಳೆಯಲಾರದ ಬಂಜರು ಭೂಮಿಯಲ್ಲಿಯೂ ಒಂದಷ್ಟು ತಂತ್ರಜ್ಞಾನಗಳನ್ನು ಬಳಸಿ ಅಷ್ಟಿಷ್ಟು ಉತ್ಪನ್ನಗಳನ್ನು ತೆಗೆಯುವುದು ಸಾಧ್ಯವಾಯಿತು. ಕ್ರಮೇಣ ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತು. ಇದರಿಂದ ಅವರ ಜೀವನ ಮಟ್ಟದಲ್ಲಿ (standard of living) ಕೂಡ ಸಾಕಷ್ಟು ಸುಧಾರಣೆ ಕಂಡುಬಂದಿತು. ಕೃಷಿ ಸಂಬಂಧಿ ವ್ಯಾಪಾರ ವಹಿವಾಟುಗಳು ಹೆಚ್ಚಾದವು. ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡುವ ಹಂತಗಳಲ್ಲಿ ದಲ್ಲಾಳಿಗಳು ಹುಟ್ಟಿಕೊಂಡರು. ವಿವಿಧ ವಲಯದ ಜನಗಳಿಗೆ ಲಾಭ ತಟ್ಟಿ ನೀರಾವರಿ ಪ್ರದೇಶದಲ್ಲಿನ ಬದುಕಿನ ಚಿತ್ರಣ ಸಂಪೂರ್ಣ ಬದಲಾಯಿತು. ಬಾರುಗಳ ಸಂಖ್ಯೆ ಹೆಚ್ಚಾಯಿತು ಎಂಬ ಕುಚೋದ್ಯದ ಜೋಕುಗಳೂ ಹುಟ್ಟಿಕೊಂಡವು.
ಕರ್ನಾಟಕದಲ್ಲಿರುವ ಅಚ್ಚುಕಟ್ಟು ಯೋಜನೆಗಳೆಂದರೆ ಮುನಿರಾಬಾದಿನ ತುಂಗಭದ್ರಾ ಆಣೆಕಟ್ಟು; ಬೆಳಗಾವಿಯ ಮಲಪ್ರಭಾ ಮತ್ತು ಘಟಪ್ರಭಾ ಆಣೆಕಟ್ಟುಗಳು; ಮೈಸೂರಿನ ಕೃಷ್ಣರಾಜಸಾಗರ(ಕಾವೇರಿ) ಆಣೆಕಟ್ಟು, ಭೀಮರಾಯನಗುಡಿಯ ಕೃಷ್ಣ ಮೇಲ್ದಂಡೆ ಯೋಜನೆ; ಶಿವಮೊಗ್ಗದ ಭದ್ರಾ ಜಲಾಶಯ; ಕಲಬುರ್ಗಿಯ ನೀರಾವರಿ ಯೋಜನೆ ವಲಯ; ಈ ಎಲ್ಲಾ ಬೃಹತ್ ಯೋಜನೆಗಳ ನೀರಾವರಿ ಪ್ರದೇಶ ಸೇರಿಕೊಂಡು ಒಟ್ಟು 2.16 ಲಕ್ಷ ಹೆಕ್ಟೇರ್ ಜಮೀನು ಜೌಗು ಪ್ರದೇಶವಾಗಿದೆ. 98 ಸಾವಿರ ಹೆಕ್ಟೇರ್ ಪ್ರದೇಶ ಸವಳು ಭೂಮಿಯಾದರೆ, 65,000 ಹೆಕ್ಟೇರ್ ಕರಲಾಗಿದೆ. ಆಯಾ ಅಚ್ಚುಕಟ್ಟು ಪ್ರಾಧಿಕಾರಿಗಳ ಅಡಿಯಲ್ಲಿ ಈ ರೀತಿಯ ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಯ ಪ್ರಯತ್ನಗಳು ನಡೆದಿವೆ. 1.63 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಇನ್ನೂ ಉಪಚಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಮ್ಮ ರಾಜ್ಯದಲ್ಲಿರುವ 6 ಕಾಡಾ (Command Area Development Authority) ವಲಯಗಳಲ್ಲಿ ಕೃಷ್ಣಾ ಕೊಳ್ಳವು ಅತಿ ಹೆಚ್ಚು ಜೌಳು, ಸೌಳು, ಕರ್ಲು ಆಗಿರುವುದು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಸುಮಾರು 1 ಲಕ್ಷ 7 ಸಾವಿರ ಹೆಕ್ಟೇರ್ ಪ್ರದೇಶವು ಒಂದಲ್ಲಾ ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ಇವೆಲ್ಲ ಸಮಸ್ಯೆಗಳು ಉಂಟಾಗಲು ನೀರಿನ ಅತಿಯಾದ ಬಳಕೆ ಕಾರಣವೆಂದು ಹೇಳುವುದು ಸುಲಭ. ಆದರೆ ಈ ಸನ್ನಿವೇಶದ ಆಳದಲ್ಲಿ ಅನೇಕ ರೀತಿಯ ಸಂಕೀರ್ಣತೆಗಳು ಹೆಣೆದುಕೊಂಡಿವೆ. ಉದಾಹರಣೆಗೆ ಮಣ್ಣಿನ ಗುಣಧರ್ಮ. ಎಲ್ಲ ರೀತಿಯ ಮಣ್ಣುಗಳಿಗೆ ಒಂದೇ ರೀತಿಯ ನೀರಾವರಿ ಮಾಡಲಾಗುವುದಿಲ್ಲ. ಕೆಂಪು ಮಣ್ಣಿನಲ್ಲಿ ವಾರಕ್ಕೊಮ್ಮೆ ನೀರು ಉಣಿಸಿದರೆ, ಕಪ್ಪು ಮಣ್ಣಿನಲ್ಲಿ 2 ವಾರಕ್ಕೊಮ್ಮೆ ಬೆಳೆಗೆ ನೀರು ಕೊಡಬೇಕೆಂದು ಬೇಸಾಯ ಶಾಸ್ತ್ರ ಹೇಳುತ್ತದೆ. ನಮ್ಮ ರಾಜ್ಯದಲ್ಲಿರುವ ವಿವಿಧ ಕೃಷಿ ಹವಾಮಾನ ವಲಯಗಳಿಗೆ ನಿರ್ಧಿಷ್ಟವಾದ ವ್ಯವಸಾಯ ತಂತ್ರಜ್ಞಾನಗಳನ್ನು ಸೂಚಿಸಲಾಗಿದೆ. ಈ ಶಿಫಾರಸುಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ. ಇಂಥ ಇನ್ನೂ ಅನೇಕ ಸಂದಿಗ್ಧ ವಿಷಯಗಳಿದ್ದು ರೈತರು ಇವನ್ನೆಲ್ಲ ಅರಿತುಕೊಂಡು ಮುನ್ನಡೆಯುತ್ತಿದ್ದಾರೆಯೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನಾ ಪ್ರದೇಶವನ್ನೇ ತೆಗೆದುಕೊಂಡರೆ, ಅದರ ವ್ಯಾಪ್ತಿಯು 18.50 ಲಕ್ಷ ಹೆಕ್ಟೇರು ಸಾಗುವಳಿ ಕ್ಷೇತ್ರದಲ್ಲಿ ನೀರಾವರಿಯಾಗುವ ವಿಸ್ತೀರ್ಣ 6.50 ಲಕ್ಷ ಹೆಕ್ಟೇರು ಮಾತ್ರ. ಅಂದರೆ ಮೂರನೆಯ ಒಂದು ಭಾಗ ಪ್ರದೇಶಕ್ಕೆ ಮಾತ್ರ ನೀರಾವರಿಯ ಭಾಗ್ಯ ಲಭಿಸಿದೆ. 8.70 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಒಣ ಬೇಸಾಯವನ್ನೇ ಅವಲಂಬಿಸಿದ್ದಾರೆ. ಈ ಪ್ರದೇಶದಲ್ಲಿ 1.13 ಲಕ್ಷ ಹೆಕ್ಟೇರ್ ಬಂಜರು ಭೂಮಿ ಇದೆ ಎನ್ನುವುದು ಗಮನಾರ್ಹ ಸಂಗತಿ. ಇದನ್ನು ಅರಣ್ಯ ಕೃಷಿ, ಇಲ್ಲವೇ ಇನ್ನಿತರ ವಿಶೇಷ ಕೃಷಿ ಪದ್ಧತಿಗಳ ಮೂಲಕ ಸಾಗುವಳಿಗೆ ತರುವುದು ಸೂಕ್ತ. ಸುಮಾರು 4 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿದ್ದರೆ, 2.30 ಲಕ್ಷ ದೊಡ್ಡ ರೈತರಿದ್ದಾರೆ. ನೀರಾವರಿ ಸೌಲಭ್ಯವಿರುವ ಲಕ್ಷಾನುಗಟ್ಟಲೆಯ ಸಣ್ಣ ಮತ್ತು ಅತಿಸಣ್ಣ ರೈತರು ತಮಗಿರುವ 2-3 ಎಕರೆ ಜಮೀನನ್ನು ನೀರೆಂಬ ಮಾಯಾವಿಯಿಂದ ರಕ್ಷಿಸಿಕೊಳ್ಳದಿದ್ದರೆ ತುಂಬಾ ಕಷ್ಟವನ್ನು ಎದುರಿಸುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಉಂಟಾದ ಭೂ ಅವನತಿಯನ್ನು ನೆನಪಿಸಿಕೊಂಡರೆ ಅವರಿಗೆ ಅರ್ಥವಾಗುತ್ತದೆ, ಇರುವ ತುಂಡುಭೂಮಿ ಸಾಗುವಳಿ ಮಾಡಲು ಕೂಡ ಯೋಗ್ಯವಾಗಿ ಉಳಿಯುವುದಿಲ್ಲ. ನೀರನ್ನು ಗಂಗೆ, ಜೀವಜಲ ಎಂದೆಲ್ಲ ಪವಿತ್ರ ಭಾವನೆಯಿಂದ ಹೇಳುವುದು ಸರಿ. ಆದರೆ ಆಕೆ ಲೋಹವನ್ನು ಕತ್ತರಿಸುವಷ್ಟು ಕಠಿಣವಾಗಬಲ್ಲಳು ಎಂಬುದನ್ನೂ ಕೂಡ ತಿಳಿದಿರಬೇಕು.
ಅದೇ ಕೃಷ್ಣೆಯ ಮಡಿಲಲ್ಲಿರುವ ನಮ್ಮ ನೀರಾವರಿ ಜಮೀನಿನ ಪೈಕಿ 71 ಸಾವಿರ ಹೆಕ್ಟೇರ್ ಜೌಳು ಜೌಳಾಗಿಯೂ, 20 ಸಾವಿರ ಹೆಕ್ಟೇರ್ ಸೌಳು ಸೌಳಾಗಿಯೂ, 16 ಸಾವಿರ ಹೆಕ್ಟೇರ್ ಕರ್ಲು ಕರ್ಲಾಗಿಯೂ ಪರಿವರ್ತನೆಯಾಗಿದೆ. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಅವುಗಳ ಸುಧಾರಣೆಯ ಪ್ರಕ್ರಿಯೆಗಳು ನಿರಂತರವಾಗಿ ನಡೆದಿವೆ. ಇನ್ನೂ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಏನೇ ಆದರೂ ರೈತರು ತಮ್ಮ ತಮ್ಮ ವೈಯಕ್ತಿಕ ಮಟ್ಟದಲ್ಲಿ ತಮಗೆ ದಕ್ಕಿರುವ ಅಂಗೈಯಗಲದಷ್ಟು ಭೂಮಿಯನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಗಂಗೆ ಮತ್ತು ಭಗೀರಥರಿಬ್ಬರೂ ಅವರ ರಕ್ಷಣೆಗೆ ಬರುವುದಿಲ್ಲ.
2025 ನೇ ಇಸ್ವಿಯಲ್ಲಿ 25 ವರ್ಷದ ಯುವಕನೊಬ್ಬ ತನ್ನ ನೀರಾವರಿ ಜಮೀನಿನ ಕೃಷಿಗೆ ಬರುತ್ತಾನೆಂದು ಇಟ್ಟುಕೊಳ್ಳಿ. 2050 ಮತ್ತು 2075 ನೇ ವರ್ಷಕ್ಕೆ ಅವನು ಮತ್ತು ಅವನ ಜಮೀನಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ದಿನಗಳೆದಂತೆ ಅವನಿಗೆ ಮುಪ್ಪು ಆವರಿಸಿಕೊಳ್ಳುತ್ತದೆ. ಈಗಿರುವಂತೆ ನೀರಾವರಿ ಮಾಡುತ್ತ ಇದೇ ಕೃಷಿ ಪದ್ಧತಿಯನ್ನು ಮುಂದುವರೆಸಿದರೆ ಅವನ ಜಮೀನು ಈಗಿರುವಷ್ಟು ಸತ್ವವನ್ನು ಉಳಿಸಿಕೊಳ್ಳಬಲ್ಲುದೆ? ಇದನ್ನರಿಯಲು ಯಾವ ಕಾಲಜ್ಞಾನದ ಪಂಚಾಂಗ ಬೇಕು? ನೀರಿನ ಯಥೇಚ್ಛ ಬಳಕೆಯಿಂದ ಈಗಾಗಲೇ ಆಗಿರುವ ಹಾನಿಯನ್ನು ನಾವು ನೋಡಿದ್ದೇವೆ. ಪಾಠ ಕಲಿತುಕೊಳ್ಳಲು ಇನ್ನೆಷ್ಟು ಕಾಲಬೇಕು? 2005 ನೇ ನವೆಂಬರ್ 20 ರಂದು ಮಾಜಿ ರಾಷ್ಟ್ರಪತಿಗಳಾದ ದಿ. ಎ ಪಿ ಜೆ ಅಬ್ದುಲ್ ಕಲಾಂರವರು ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಕೃಷಿಯ ಸರ್ವತೋಮುಖ ಅಭಿವೃದ್ಧಿ (Mission for Karnataka’s Agricultural Prosperity) ಕುರಿತು ಮಾತನಾಡಿದ್ದರು. ಅವರು ನೀಡಿದ ನಾಲ್ಕು ಮಾರ್ಗೋಪಾಯಗಳಲ್ಲಿ ‘ಜಲ ನಿರ್ವಹಣೆ’ ಯೂ ಒಂದು. ತಮ್ಮ ಜಲ ನಿರ್ವಹಣೆ ಪರಿಕಲ್ಪನೆಯಲ್ಲಿ ಅವರು ‘ಮಳೆ ನೀರು ಕೊಯ್ಲು ಮತ್ತು ಅನುಪಯುಕ್ತ ನೀರಿನ ಪುನರ್ಬಳಕೆ’ ಕುರಿತಾಗಿ ಹೇಳಿದರೇ ಹೊರತು ಬೃಹತ್ ನೀರಾವರಿ ಯೋಜನೆ ಕುರಿತು ಮಾತನಾಡಲಿಲ್ಲ. ಹಿಂದಿನ ಕೇಂದ್ರ ಸಚಿವರಾದ ಶ್ರೀ. ಕೆ. ಎಲ್. ರಾವ್ ಅವರು ಪ್ರತಿಪಾದಿಸಿದ ಗಂಗಾ-ಕಾವೇರಿ ನದಿ ಜೋಡಣೆ ಯೋಜನೆ ಪರಿಸರವಾದಿಗಳ ತೀವ್ರ ವಿರೋಧವನ್ನು ಎದುರಿಸಿತ್ತು. ಎಲ್ಲೋ ಬಿದ್ದ ಮಳೆ ನೀರನ್ನು ಎಲ್ಲಿಗೋ ತಂದು ಬಳಸುವ ಕ್ರಮವೇ ನಿಸರ್ಗಕ್ಕೆ ಘಾತಕವಾದುದು. ಬಿತ್ತುವುದು, ಬೆಳೆಯುವುದು, ನೀರು ಹಾಯಿಸುವುದು, ಸೃಷ್ಟಿಯ ಸಹಜಕ್ರಿಯೆಗಳನ್ನು ಮೀರುವ ಕ್ರಮಗಳು. ಹಾಗೆಂದು ಕೃಷಿ ಮಾಡದೆ, ಬೆಳೆಗೆ ನೀರುಣಿಸದೇ ಇರಲು ಸಾಧ್ಯವಿಲ್ಲ. ಆದರೆ ನಮ್ಮೆಲ್ಲ ವ್ಯವಸಾಯ ಕ್ರಮಗಳು ಪ್ರಕೃತಿಯ ನಿಯತಿಯಂತೆ ಮತ್ತು ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗಿರಬೇಕೆಂಬುದನ್ನು ಯಾರೂ ಅಲ್ಲಗಳೆಯಲಾರರು.
ಕೃಷ್ಣಾ ಮೇಲ್ದಂಡೆ ಯೋಜನೆಯು ಯಾದಗಿರಿ, ಗುಲ್ಬರ್ಗಾ, ಬಿಜಾಪುರ, ಬಾಗಲಕೋಟ, ರಾಯಚೂರು ಜಿಲ್ಲೆಗಳ 15 ತಾಲೂಕುಗಳಲ್ಲಿ ವ್ಯಾಪಿಸಿಕೊಂಡಿದೆ. 1 ಸಾವಿರ ಗ್ರಾಮಗಳು ನೀರಾವರಿಗೆ ಒಳಪಡುತ್ತಿದ್ದು, 25 ಮುಖ್ಯ ಕಾಲುವೆಗಳು, 425 ವಿತರಣಾ ಕಾಲುವೆಗಳಿವೆ. ನಂತರ ಉಪಕಾಲುವೆ ಮತ್ತು ಕ್ಷೇತ್ರ ಕಾಲುವೆಗಳ ಮೂಲಕ ನೀರು ರೈತರ ಜಮೀನನ್ನು ತಲುಪುತ್ತದೆ. ಆಕಾಶದಿಂದ ನೋಡಿದರೆ ಈ ಎಲ್ಲಾ ಕಾಲುವೆಗಳು ಸೇರಿ ಜೇಡರ ಬಲೆಯಂತೆ ಕಾಣಬಹುದು. ಆದರೆ ನೀರಿನ ಹಂಚಿಕೆಯು ಜೇಡದ ನೂಲಿನಂತೆ ಎಲ್ಲಾ ಕಡೆಗೂ ಸರಿಸಮನಾಗಿಲ್ಲ. ಉಪಕಾಲುವೆಗಳಿಗೆ ಅಲ್ಲಲ್ಲಿ ತೂಬುಗಳನ್ನು ಅಳವಡಿಸಿ ನೂರಾರು ಹೆಕ್ಟೇರ್ ಪ್ರದೇಶದ ನೀರಿನ ಹರಿವನ್ನು ನಿಯಂತ್ರಿಸುವ ವ್ಯವಸ್ಥೆ ಮಾಡಿರುತ್ತಾರೆ. ಸ್ಥಳೀಯ ಜನರು ಅವುಗಳಿಗೆ ಪೊಲೀಸ್ಗೌಡರ ಪೈಪು, ಮಾಲಿಗೌಡರ ಪೈಪು ಅಂತಲೂ; ಜಮೀನು ಈಗಾಗಲೇ ಆಂಧ್ರದವರ ಪಾಲಾಗಿದ್ದರೆ ಪಾಪಾರಾವ್ ಪೈಪು, ಶೇಷಗಿರಿರಾವ್ ಪೈಪು, ವೆಂಕಟೇಶರೆಡ್ಡಿ ಪೈಪು ಅಂತಲೂ ಕರೆಯುತ್ತಾರೆ. ಅಂದರೆ ಈ ತೂಬಿಗೆ ಹೊಂದಿಕೊಂಡು ಅವರ ಜಮೀನುಗಳು ಪ್ರಾರಂಭವಾಗುತ್ತಿದ್ದು ಸಹಜವಾಗಿಯೇ ಅವರಿಗೆ ಹೆಚ್ಚು ನೀರು ಲಭ್ಯವಾಗುತ್ತದೆ (Head region). ಮುಂದೆ ಹೋದಂತೆಲ್ಲ ನೀರಿನ ಹರಿವು ಕಡಿಮೆಯಾಗಿ ಕೊನೆಕೊನೆಗೆ ಇರುವ ಜಮೀನುಗಳಿಗೆ ಅದು ತಲುಪುವುದೇ ಇಲ್ಲ (Tail end). ಇದನ್ನು ಬಗೆಹರಿಸಲು ನೀರು ಬಳಕೆದಾರರ ಸಂಘಗಳನ್ನು ಕಟ್ಟಿ, ‘ನೀರಗಂಟಿ’ ಎಂಬ ವ್ಯಕ್ತಿಯನ್ನು ನೇಮಿಸಲಾಗುತ್ತದೆ. ಭೀಮರಾಯನ ಗುಡಿ ಕಾಡಾ ತನ್ನ ವ್ಯಾಪ್ತಿಯಲ್ಲಿ 621 ನೀರು ಬಳಕೆದಾರರ ಸಂಘಗಳನ್ನು ರಚಿಸಿದೆ. ಮೇಲ್ಮಟ್ಟದವರ ಹೊಲಗಳಲ್ಲಿ ಹೆಚ್ಚಾದಂತ ನೀರು ವ್ಯರ್ಥವಾಗಿ ಹಳ್ಳಗಳಿಗೆ ಹರಿದರೆ, ಬಾಲಂಗೋಚಿ ರೈತರು ಒಂದೆರಡು ಪಾಳಿಯ ನೀರೂ ಸಿಗದೇ ನಷ್ಟ ಅನುಭವಿಸುತ್ತಾರೆ. ಹೆಚ್ಚುವರಿ ಆದ ನೀರು ಅಪಾರ ಪ್ರಮಾಣದ ಗೊಬ್ಬರ, ಕಳೆನಾಶಕ, ಕ್ರಿಮಿನಾಶಕದಂತ ಅಪಾಯಕಾರಿ ವಸ್ತುಗಳನ್ನು ತನ್ನಲ್ಲಿ ಕರಗಿಸಿಕೊಂಡು ಹಳ್ಳದ ಮೂಲಕ ಮತ್ತೆ ಅದೇ ನದಿಯನ್ನು ತಲುಪುತ್ತದೆ. ಮನುಷ್ಯ ಹೊಳೆಯ ನೀರನ್ನು ಹೊಳೆಗೆ ಚೆಲ್ಲಿ ಕೃತಾರ್ಥನಾಗುತ್ತಿದ್ದಾನೆ.
ನಮ್ಮ ನಾಡಿನ ನೀರಾವರಿ ಪ್ರದೇಶದಲ್ಲುಂಟಾದ ಒಂದು ರೀತಿಯ ಸಾಮಾಜಿಕ ಪಲ್ಲಟವನ್ನು ಗಮನಿಸಬೇಕು. ಬಹಳ ಹಿಂದೆಯೇ ಕನ್ನಡಿಗರು ತಮ್ಮ ಹೊಲಗಳನ್ನು ಆಂಧ್ರದವರಿಗೆ ಮಾರಾಟ ಮಾಡಿ ಈಗ ತಮ್ಮ ಹೊಲಗಳಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಾರೆಂದು ಕೇಳಪಟ್ಟಿದ್ದೇನೆ. ತುಂಗಭದ್ರಾ ಅಚ್ಚುಕಟ್ಟಿನ ಸಿಂಧನೂರು, ಮಾನ್ವಿ, ಗಂಗಾವತಿ, ಸಿರಗುಪ್ಪ ಭಾಗಗಳಲ್ಲಿನ ರೈತರು ಒಂದು ಮಾತನ್ನು ಆಡಿಕೊಳ್ಳುತ್ತಾರೆ. ಏನೆಂದರೆ ‘ಆಂಧ್ರದ ರೈತರು ಇಲ್ಲಿನ ಜಮೀನುಗಳನ್ನು ಮನಸೋ ಇಚ್ಚೆ ಬಳಸಿ, ಬೇಕಾಬಿಟ್ಟಿ ನೀರು ಕೊಟ್ಟು, ಅವು ಹಾಳಾದ ಮೇಲೆ ಮನೆಯಲ್ಲಿ ರೇಡಿಯೋ ಹಚ್ಚಿಟ್ಟು, ರಾತ್ರೋರಾತ್ರಿ ಓಡಿ ಹೋಗುತ್ತಾರೆ’ ಅಂತ. ಅಂದರೆ ಭೂಮಿಯ ಸತ್ವ ತೀರಿ, ಮುಂದಿನ ನಷ್ಟವನ್ನು ಎದುರಿಸಲಾಗದೆ ಪಲಾಯನ ಗೈಯುತ್ತಾರೆ, ಎಂಬಂರ್ಥದಲ್ಲಿ. ಇಲ್ಲಿಯವರೆಗೆ ಯಾವನಾದರೂ ಒಬ್ಬ ರೈತ ಹಾಗೆ ಮಾಯವಾಗಿದ್ದಾನೋ ಇಲ್ಲವೋ ಗೊತ್ತಿಲ್ಲ. ನಮ್ಮ ಜನರು ತಮ್ಮ ಜಮೀನಿಗೆ ಒದಗುವ ದುಸ್ಥಿತಿ ತಿಳಿದಿದ್ದಾರೆ ಎಂಬುದಂತೂ ಗೊತ್ತಾಗುತ್ತದೆ. ಮುಂದೆ?
ಆಯಾ ಕಾಡಾ ವ್ಯಾಪ್ತಿಯಲ್ಲಿ ಪ್ರತಿ ಹಂಗಾಮಿಗೆ ಬೆಳೆವಾರು ಇಂತಿಷ್ಟು ವಿಸ್ತೀರ್ಣವನ್ನು ಯೋಜಿತ ಪ್ರದೇಶವೆಂದು ಗುರಿ ನಿಗದಿ ಮಾಡಿರುತ್ತಾರೆ. ಕೃಷ್ಣಾ ನೀರಾವರಿ ಪ್ರದೇಶದಲ್ಲಿ 2018-19 ನೇ ಸಾಲಿನಲ್ಲಿ ಶೇಂಗಾಕ್ಕೆ 48 ಸಾವಿರ ಹೆಕ್ಟೇರ್ ಗುರಿಯನ್ನು ಇಟ್ಟುಕೊಂಡರೆ, 13 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆಯಾಗಿತ್ತು. ಅದೇ ರೀತಿ ಸೂರ್ಯಕಾಂತಿ 46 ಸಾವಿರಕ್ಕೆ 16 ಸಾವಿರ, ಮೆಕ್ಕೆಜೋಳ 46 ಸಾವಿರಕ್ಕೆ 13 ಸಾವಿರ, ಹೈಬ್ರಿಡ್ ಜೋಳ 13 ಸಾವಿರಕ್ಕೆ ಕೇವಲ 610, ಅಲಸಂದಿ 10 ಸಾವಿರಕ್ಕೆ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ. ಅದೇ ಪ್ರದೇಶದಲ್ಲಿ ತೊಗರಿಯನ್ನು 74 ಸಾವಿರ ಹೆಕ್ಟೇರ್ ಗುರಿಯ ಬದಲಾಗಿ 1.23 ಲಕ್ಷ ಹೆಕ್ಟೇರ್, ಹತ್ತಿಯನ್ನು 1.11 ಲಕ್ಷ ಹೆಕ್ಟೇರ್ಗೆ 1.22 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯಲಾಗಿದೆ. ಇದೆಲ್ಲಕ್ಕಿಂತ ಹೆಚ್ಚು ಲಕ್ಷ ವಹಿಸಬೇಕಾದದ್ದು ಭತ್ತ ಮತ್ತು ಕಬ್ಬುಗಳಿಗೆ ಯೋಜಿತ ಗುರಿ ಇರದಿದ್ದರೂ ಕೂಡ ಅವೆರಡು ಕ್ರಮವಾಗಿ 86 ಸಾವಿರ ಮತ್ತು 31 ಸಾವಿರ ಹೆಕ್ಟೇರ್ ಪ್ರದೇಶವನ್ನು ಆಕ್ರಮಿಸಿವೆ. ಭತ್ತದ ಬೆಳೆಯಲ್ಲಿ ನೀರನ್ನು ಉಳಿತಾಯ ಮಾಡುವ ಶ್ರೀ ಪದ್ಧತಿ, ನೇರ ಬಿತ್ತನೆ ಪದ್ಧತಿ (ಡಿ.ಎಸ್.ಆರ್.), ಕೂರಗಿ ಬಿತ್ತನೆ ಪದ್ಧತಿ ಮುಂತಾದವುಗಳನ್ನು ಶಿಫಾರಸ್ಸು ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಕೃಷಿ ಇಲಾಖೆಯಿಂದ ಭದ್ರಾ ಅಚ್ಚುಕಟ್ಟಿನ ಸಾವಿರಾರು ಹೆಕ್ಟೇರ್ ಭತ್ತದಲ್ಲಿ ‘ಪರ್ಯಾಯವಾಗಿ ನೀರುಣಿಸುವ ಮತ್ತು ಒಣಗಿಸುವ’ ಪ್ರಯೋಗವನ್ನು ನಡೆಸಲಾಗಿದೆ. ಈ ಪದ್ಧತಿಯಲ್ಲಿ ಅಪಾರ ಪ್ರಮಾಣದ ನೀರನ್ನು ಉಳಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಲಾಗಿದೆ. ಇಂತಹ ಪ್ರಯೋಗಗಳನ್ನು ನಡೆಸುತ್ತಲೇ ಇರಬೇಕಾಗುತ್ತದೆ. ಆದರೆ ಡ್ಯಾಮ್ನಿಂದ ಓತಪ್ರೋತವಾಗಿ ನೀರು ಹರಿದು ಬರುವಾಗ ಜನರು ನೀರುಳಿಸಲು ಮನಸ್ಸು ಮಾಡುವುದಿಲ್ಲ. ನೀರಿನೊಂದಿಗೆ ತಮ್ಮ ಜಮೀನಿನ ಅಮೂಲ್ಯವಾದ ಮಣ್ಣನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅರಿಯುವದಿಲ್ಲ.
ಒಂದು ಸಮಾಧಾನದ ಸಂಗತಿ ಎಂದರೆ ಕೃಷ್ಣಾ ಕಣಿವೆಯಲ್ಲಿ ಪ್ರಮುಖ ಸಿರಿಧಾನ್ಯವಾದ ಸಜ್ಜೆ ಹಾಗೂ ದ್ವಿದಳ ಜಾತಿಯ ಬೆಳೆಯಾದ ಹೆಸರನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆಂಬುದು. ಯೋಜಿತ ಗುರಿ ಇದ್ದಾಗಲೂ ಉದ್ದು ಮತ್ತು ಸೋಯಾ ಅವರೆಯನ್ನು ಒಂದು ಎಕರೆಯಲ್ಲೂ ಬೆಳೆದಿಲ್ಲ. ಎಲ್ಲವೂ ನಮ್ಮ ನೆಲದ ಬೆಳೆಗಳೇ. ಯಾವುದನ್ನು ಎಷ್ಟು ಬೆಳೆಯಬೇಕೆಂಬುದು ರೈತರ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ. ಆದರೆ ನೀರಾವರಿ ಎಂಬ ಮಾಯಾಜಾಲವು ರೈತನನ್ನು ವಾಣಿಜ್ಯ ಕೃಷಿಯೆಡೆಗೆ ಸೆಳೆದುಕೊಳ್ಳುತ್ತಲೇ ಇರುತ್ತದೆ. ಯಥೇಚ್ಛ ನೀರು ಸಿಗುವಾಗ ಸಾವೆ, ನವಣೆ, ಉದ್ದು, ಅಲಸಂದಿ ಜುಜುಬಿ ಬೆಳೆಗಳಾಗಿ ಕಾಣುತ್ತವೆ. ಭತ್ತ ಮತ್ತು ಕಬ್ಬು ಈ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ಬೆಳೆಗಳೇ ಅಲ್ಲ. ತುಂಗಭದ್ರಾ ಯೋಜನೆಯು ಸೇರಿದಂತೆ ಉತ್ತರ ಕರ್ನಾಟಕದ ಎರೆಮಣ್ಣಿನಲ್ಲಿ ಒಂದು ಹಂಗಾಮಿಗೆ 2-3 ರಕ್ಷಣಾತ್ಮಕ ನೀರಾವರಿ ಕೊಡುವ ಅಲ್ಪಾವಧಿ ಬೆಳೆಗಳನ್ನಷ್ಟೇ ಬೆಳೆಯಬೇಕು. ಆದರೆ ಇಲ್ಲಿನ ರೈತರು ಟ್ಯಾಕ್ಟರನ ಹಿಂದಿನ ಗಾಲಿಯನ್ನು ತೆಗೆದು, ಪಡ್ಲರ್ ಗಾಲಿಗಳನ್ನ ಜೋಡಿಸಿ ನೀರು ತುಂಬಿದ ಎರೆ ಹೊಲದಲ್ಲಿ ಮನಸೋ ಇಚ್ಛೆ ಓಡಾಡಿಸುತ್ತಾರೆ. ಹಲವು ದಶಕಗಳಿಂದ ಇಂತಹ ಸಾಗುವಳಿಯ ಚಟುವಟಿಕೆಗಳು ನಡೆದಿದ್ದು ಈ ಜಮೀನುಗಳು ಎಂದೋ ಕೆಟ್ಟು ಹೋಗಬೇಕಾಗಿತ್ತು. ಆದರೆ ಉತ್ತಮ ಗುಣಮಟ್ಟದ ನೀರನ್ನು ಹೊಂದಿರುವ ತುಂಗೆ, ಭದ್ರೆ, ಮಲಪ್ರಭೆ, ಕಾವೇರಿ ನಮ್ಮನ್ನು ಕಾಯ್ದಿದ್ದಾರೆ. ಅವರ ಸಹನೆ ಮತ್ತು ಸಾಮರ್ಥ್ಯಕ್ಕೂ ಒಂದು ಮಿತಿ ಇದೆ ಎನ್ನುವುದನ್ನು ನಾವು ಮರೆಯಬಾರದು. ನೀರಾವರಿ ವಾಣಿಜ್ಯ ಕೃಷಿಯನ್ನು ಪ್ರಚೋದಿಸಿದಷ್ಟೇ ಏಕಬೆಳೆ ಪದ್ಧತಿಗೂ ರೈತನನ್ನು ದೂಡುತ್ತದೆ. ಕೃಷಿ ಪರಿಸರದಲ್ಲಿ ಏಕಬೆಳೆ ವ್ಯವಸ್ಥೆಯು ಕ್ರಿಮಿಕೀಟ, ರೋಗದೊಂದಿಗೆ ಇನ್ನೂ ಅನೇಕ ಪ್ರಕೃತಿ ವಿಕೋಪಗಳನ್ನು ಕೈಮಾಡಿ ಕರೆಯುತ್ತದೆ. ಬದಲಾಗಿ ವೈವಿಧ್ಯತೆಯು ಬೆಳೆಗೆ ಒದಗಬಹುದಾದ ಗಂಡಾಂತರಗಳನ್ನು ನಿಯಂತ್ರಿಸುತ್ತದೆ.
ಜೌಗು, ಕರ್ಲು, ಸೌಳು, ಉಪ್ಪು ಭೂಮಿಗಳನ್ನು ಉಪಚರಿಸಿ ಸುಧಾರಿಸುವ ವೈಜ್ಞಾನಿಕ ಕ್ರಮಗಳು ಕೂಡ ಲಭ್ಯವಿರುತ್ತವೆ. ಜವಳನ್ನು ಬಸಿಗಾಲುವೆಯಿಂದ, ಸೌಳು, ಕರ್ಲನ್ನು ಜಿಪ್ಸಂ ಕೊಡುವುದರಿಂದ, ಮಲೆನಾಡಿನ ಹುಳಿಮಣ್ಣನ್ನು ಕೃಷಿ ಸುಣ್ಣದಿಂದ ಸುಧಾರಿಸುವುದು ನಡೆದೇ ಇದೆ. ಆದರೆ ಅವೆಲ್ಲವೂ ತಾತ್ಕಾಲಿಕ ಪರಿಹಾರಗಳು. ಘಟಪ್ರಭಾ ಅಚ್ಚುಕಟ್ಟಿನ ಜಮೀನುಗಳು ಯಾವ ಸುಧಾರಣೆ ಕ್ರಮಕ್ಕೂ ಜಗ್ಗದಷ್ಟು ಅವನತಿಯಾಗಿವೆ. ಮೊದಲೇ ಮಣ್ಣು ಕಡೆದಂತೆ ಎಚ್ಚರವಹಿಸುವುದು ತೀರ ಅವಶ್ಯ. ಹೆಚ್ಚು ನೀರು ಕೊಡುವಲ್ಲಿ ಹೆಚ್ಚು ಹೆಚ್ಚು ಗೊಬ್ಬರ, ಔಷಧಿ, ಇತ್ಯಾದಿ ರಸಾಯನಿಕಗಳನ್ನೂ ಕೊಡಬೇಕಾಗುತ್ತದೆ. ಅವೆಲ್ಲ ಭೂಮಿಯಲ್ಲಿ ಕರಗಿ ಅಂತರ್ಜಲವನ್ನು ಸೇರಿವೆ.
ನಮ್ಮ ನಾಡಿನಲ್ಲಿ ಕುಡಿಯುವ ನೀರಿನ ಪ್ರಮುಖ ಮೂಲವೆಂದರೆ ಅಂತರ್ಜಲ. ಅದು ಈಗಾಗಲೇ ಕಲುಷಿತಗೊಂಡು ಜನರಲ್ಲಿ ಹೊಸಹೊಸ ರೋಗಗಳನ್ನು ತಂದಿಟ್ಟಿದೆ. ಯಾವುದೇ ನೈಸರ್ಗಿಕ ಸಂಪನ್ಮೂಲವನ್ನು ಅತಿಬಳಕೆ, ಅಪಬಳಕೆ, ದುರ್ಬಳಕೆ ಮಾಡಿಕೊಂಡಾಗ ಪರಿಣಾಮವಷ್ಟೇ ಆಗುವುದಿಲ್ಲ. ಸರಣಿ ದುಷ್ಪರಿಣಾಮಗಳು ಉಂಟಾಗುತ್ತವೆ. ಜನರಿಗೆ ಸೌಳು, ಜೌಳು, ಉಪ್ಪು ಅಷ್ಟೇ ಕಾಣುತ್ತಿವೆ. ಆದರೆ ತಾವು ಹರಿಸುವ ನೀರಿನ ರಭಸಕ್ಕೆ ಫಲವತ್ತಾದ ಮೇಲ್ಮಣ್ಣು ಕೊಚ್ಚಿ ಹೋಗುತ್ತಿರುವುದು ಕಂಡು ಬರುತ್ತಿಲ್ಲ. ನಿಮ್ಮ ಜಮೀನಿನಲ್ಲಿ ಬೆಳೆದು ನಿಂತ ಮರದ ಬೇರುಗಳು ನೆಲದಿಂದ ಮೇಲಕ್ಕೆ ಕಾಣುತ್ತಿರುವುದು ‘ಭೂಸವಕಳಿ’ ಎಂಬ ಮಂದ ಪಾಷಾಣದಿಂದಾಗಿ. ಹಾಗಾದರೆ ಡ್ಯಾಮ್ಗಳನ್ನೆಲ್ಲ ಬಂದ್ ಮಾಡಿ ನೀರಾವರಿಯನ್ನೇ ನಿಲ್ಲಿಸಬೇಕೆ? 12 ನೇ ಶತಮಾನದ ಕೃಷಿ ಕಾಯಕದ ವಚಕಾರರ ಒಕ್ಕಲಿಕ ಮುದ್ದಣ್ಣ ಹೇಳುತ್ತಾನೆ:
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,
ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1167 / ವಚನ ಸಂಖ್ಯೆ-1734)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಕ್ರೀ : ಕ್ರಿಯೆ, ಕಾರ್ಯ, ಕೆಲಸ.
ಘಟಿಸು : ಕೂಡು, ಒಂದಾಗು, ಮಿಳಿತವಾಗು
ಶ್ರೀ. ಚನ್ನಪ್ಪ ಅಂಗಡಿ,
ಸಹಾಯಕ ಕೃಷಿ ನಿರ್ದೇಶಕರು,
‘ಕಾಯಕ’, ಕುಮಾರೇಶ್ವರ ನಗರ,
ಧಾರವಾಡ – 580 008
ಮೊಬೈಲ್: 80731 08487,
e-Mail: ccangadi70@gmail.com
ನವಕರ್ನಾಟಕ ಪ್ರಕಾಶನದ ಹೊಸತು ಪತ್ರಿಕೆಯ ಜುಲೈ ೨೦೨೪ ರ ಸಂಚಿಕೆಯಲ್ಲಿ ನನ್ನ ” ಪೈರಿಗೆ ನೀರು ಬೇಕೆಂಬಲ್ಲಿ ” ಎಂಬ ಲೇಖನ ಪ್ರಕಟವಾಗಿದೆ. ಕೃಷಿಯಲ್ಲಿ ನೀರಾವರಿಯ ಆಗುಹೋಗುಗಳು ಮತ್ತು ಸಾಧಕ-ಬಾಧಕಗಳ ಕುರಿತಾದ ಲೇಖನವನ್ನು ಆಸಕ್ತರು ಹೊಸತು ಪತ್ರಿಕೆಯಲ್ಲಿ ಓದಬಹುದಾಗಿದೆ.
—-ಚನ್ನಪ್ಪ ಅಂಗಡಿ, ಧಾರವಾಡ.