
ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಕ್ರಾಂತಿಯು ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಉದ್ಧರಿಸುವುದಾಗಿತ್ತು. ಅಕ್ಷರಲೋಕಕ್ಕೆ ಅಪರಿಚಿತರಾದಂತ ಮಹಿಳೆಯರಿಗೆ ಆತ್ಮ ಗೌರವ ಕೊಟ್ಟು ಅಷ್ಟೇ ಅಲ್ಲ ಅವರನ್ನು ವಚನಕಾರ್ತಿಯರನ್ನಾಗಿ ಮಾಡಿದ್ದು ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಬಹುದೊಡ್ಡ ಸಾಧನೆ.
ವಚನ ಸಾಹಿತ್ಯದಲ್ಲಿ ಒಟ್ಟು 67/68 ಶರಣೆಯರ ಉಲ್ಲೇಖ ಬರುತ್ತದೆ. ಹೆಸರುಗಳು ಒಂದಕ್ಕೊಂದು ಸೇರಿರಬಹುದು. ಮಹಾದೇವಿ ಅಂತಾನೇ ಸುಮಾರು 8/9 ಶರಣೆಯರ ಹೆಸರುಗಳಿವೆ. ಗುಡ್ಡವ್ವೆ ಅಂತಾನೇ 3 ಹೆಸರುಗಳಿವೆ. ಒಟ್ಟಾರೆ ವಚನ ಸಾಹಿತ್ಯದಲ್ಲಿ If we delete the cross reference names, ನಮಗ ಸುಮಾರು 57 ಶರಣೆಯರ ಉಲ್ಲೇಖ ಸಿಗುತ್ತದೆ. ಅದರಲ್ಲಿ ಪ್ರಮುಖವಾಗಿ 37 ಶರಣೆಯರು ವಚನಗಳನ್ನು ಬರದಿರುವ ಉಲ್ಲೇಖ ಇದೆ. ಕೆಲವರು ಒಂದೊಂದೇ ವಚನಗಳನ್ನು ಬರೆದಿದ್ದಾರೆ.
ಸಂವೇದನೆ :
ಸಂವೇದನೆ ಬಹಳ ಸಂಕೀರ್ಣ ಶಬ್ದ. ಭಾಷಾ ಶಾಸ್ತ್ರದ ಪ್ರಕಾರ ಮೂರು ಶಬ್ದಗಳನ್ನು ಒಳಗೊಂಡಿದೆ. ಮೂರು ಶಬ್ದಗಳ ಸಂಗಮ ಈ “ಸಂವೇದನೆ”
- Cognition / Awareness – ಅರಿವು, ಜ್ಞಾನ
- Feeling / Sensitivity – ಭಾವನೆ, ಅನುಭಾವ
- Conation – ಸಂಕಲ್ಪ, ಇಚ್ಛಾಶಕ್ತಿ.
ಅರಿವು, ಭಾವನೆ, ಸಂಕಲ್ಪಗಳು ಅಥವಾ ಜ್ಞಾನ, ಅನುಭಾವ, ಇಚ್ಛಾಶಕ್ತಿಗಳ ಸಂಗಮ ಈ ಸಂವೇದನೆ ಅನ್ನುವ ಶಬ್ದ. ಮನಸ್ಸಿಗೆ ತಟ್ಟುವುದು, ಅಂತರಾಳದ ಅಭಿವ್ಯಕ್ಕಿ, ಅಂತರಂಗದ ನೋವು ನಲಿವಿನ ಬಾಹ್ಯ ನಿರೂಪಣೆ ಇವು ಕೆಲ ವ್ಯಾಖ್ಯಾನಗಳು.
ಪ್ರಪ್ರಥಮ ಸಂವೇದನೆಯ ವಿಷಯವೇ ಲಿಂಗ ಅಸಮಾನತೆ. ಪುರುಷ ಮತ್ತು ಮಹಿಳೆಯರ ದೇಹ ರಚನೆಯ ಅಂತರ ಮತ್ತು ವೈಜ್ಞಾನಿಕವಾಗಿ ಪೂರಕವಾಗಿ ರಚನೆಯಾಗಿರತಕ್ಕಂತ ದೇಹ ರಚನೆ. ಸ್ತ್ರೀತನ ಮತ್ತು ಪುರುಷತನವನ್ನು ಕೇವಲ ದೈಹಿಕ ಕಾರಣಗಳಿಂದಾಗಿಯೇ ಬೇರೆ ಬೇರೆ ಮಾಡಿದರು. ಪುರುಷರು ಶಕ್ತಿಗೆ ಉದಾಹರಣೆಯಾದರೆ, ಸ್ತ್ರೀಯರು ಸಹನಶೀಲತೆ ಮತ್ತು ಸಂವೇದನೆಗೆ ಉದಾಹರಣೆಯಾದದ್ದನ್ನು ನಾವು ಎಲ್ಲ ಕಾಲಕ್ಕೂ ಕಾಣಬಹುದು. ಈ ಸಂವೇದನೆಯನ್ನು ಶರಣ ಜೇಡರ ದಾಸಿಮಯ್ಯನವರು, ಶರಣೆ ಸತ್ಯಕ್ಕ ಮತ್ತು ಶರಣೆ ಗೊಗ್ಗವ್ವೆಯರು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಮೊಲೆ ಮುಡಿ | ಬಂದಡೆ ಹೆಣ್ಣೆಂಬರು ||
ಗಡ್ಡ ಮೀಸೆ | ಬಂದಡೆ ಗಂಡೆಂಬರು ||
ನಡುವೆ | ಸುಳಿವ ಆತ್ಮನು ||
ಹೆಣ್ಣೂ ಅಲ್ಲ | ಗಂಡು ಅಲ್ಲ ||
ಕಾಣಾ | ರಾಮನಾಥ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1284 / ವಚನ ಸಂಖ್ಯೆ-845)
ಮೊಲೆ ಮುಡಿ | ಬಂದಡೆ ಹೆಣ್ಣೆಂಬರು ||
ಮೀಸೆಕಾಸೆ | ಬಂದಡೆ ಗಂಡೆಂಬರು ||
ಈ ಉಭಯದ | ಜ್ಞಾನ ||
ಹೆಣ್ಣೊ ಗಂಡೊ | ನಾಸ್ತಿನಾಥಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-873 / ವಚನ ಸಂಖ್ಯೆ-778)
ಮೊಲೆ ಮುಡಿ ಇದ್ದುದೆ | ಹೆಣ್ಣೆಂದು ಪ್ರಮಾಣಿಸಲಿಲ್ಲ ||
ಕಾಸೆ ಮೀಸೆ ಕಠಾರವಿದ್ದುದೆ | ಗಂಡೆಂದು ಪ್ರಮಾಣಿಸಲಿಲ್ಲ ||
ಅದು ಜಗದ ಹಾಹೆದ | ಬಲ್ಲವರ ನೀತಿಯಲ್ಲ ||
ಏತರ ಹಣ್ಣಾದಡೂ | ಮಧುರವೆ ಕಾರಣ ||
ಅಂದವಿಲ್ಲದ ಕುಸುಮಕ್ಕೆ | ವಾಸನೆಯೆ ಕಾರಣ ||
ಇದರಂದವ ನೀನೇ | ಬಲ್ಲೆ ಶಂಭುಜಕ್ಕೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-915 / ವಚನ ಸಂಖ್ಯೆ-1226)
ಈ ಮೂರೂ ವಚನಗಳಲ್ಲಿ ಕಂಡು ಬರುವ ಒಂದೇ ಆಶಯ, ಸ್ತ್ರೀ ಪುರುಷರು ದೈಹಿಕವಾಗಿ ಬೇರೆ ಬೇರೆ ಅನಿಸಿದರೂ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ವಸ್ತುನಿಷ್ಠ ಚಿಂತನೆಯಲ್ಲಿ ಸರಿ ಸಮಾನರು.
ಸ್ತ್ರೀಯರಲ್ಲಿ ಸಮಾನತೆ, ಬಂಧುಗಳಲ್ಲಿ ಸಮಾನತೆ ಮತ್ತು ಸಮಾಜದಲ್ಲಿ ಸಮಾನತೆ ಕಾಣದೇ ಪೂಜಿಸಿ ಏನು ಫಲ, ಎಲ್ಲವೂ ವ್ಯರ್ಥ ಅಂತಾರೆ ಬಸವಣ್ಣನವರು.
ಲಿಂಗವ ಪೂಜಿಸಿ | ಫಲವೇನಯ್ಯಾ ||
ಸಮರತಿ ಸಮಕಳೆ | ಸಮಸುಖವನರಿಯದನ್ನಕ್ಕ ||
ಲಿಂಗವ ಪೂಜಿಸಿ | ಫಲವೇನಯ್ಯಾ ||
ಕೂಡಲಸಂಗಮದೇವರ | ಪೂಜಿಸಿ ||
ನದಿಯೊಳಗೆ ನದಿ | ಬೆರೆಸಿದಂತಾಗದನ್ನಕ್ಕ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-83 / ವಚನ ಸಂಖ್ಯೆ-930)
ಅಲಕ್ಷಿತ ವಚನಕಾರ್ತಿಯರ ಬಗ್ಗೆ ಹೇಳತಾ ಹೋದರೆ ಒಂದು ಪುಸ್ತಕವೇ ಆದೀತು. ಇಲ್ಲಿ ನಾವು ಕಾಣಬಹುದಾದ ವ್ಯತಿರಿಕ್ತ ಭಾವನೆ ಅಂದರೆ, ಗೊಗ್ಗವ್ವೆ ಮತ್ತು ಸತ್ಯಕ್ಕ ಅವರನ್ನು ಕಡೆಗಣಿಸಿದ್ದು. ಪ್ರಭುದ್ಧ ಭಾಷಣಕಾರರು ಮತ್ತು ಚಿಂತನಾಕಾರರು ಯಾಕೆ ಜೇಡರ ದಾಸಿಮಯ್ಯನವರನ್ನು ಮಾತ್ರ ಉಲ್ಲೇಖ ಮಾಡತಾರೆ ಮತ್ತು ಯಾಕೆ ಈ ವಚನಕಾರ್ತಿಯರನ್ನು ಅಲಕ್ಷ್ಯ ಮಾಡತಾರೆ ಅನ್ನುವುದು ಇಂದಿಗೂ ಅರಗಿಸಿಕೊಳ್ಳಲಾರದ ವಿಷಯ. ಇದು ಸ್ತ್ರೀ ಸಂವೇದನಾ ಶೀಲತೆಯನ್ನು ಕಡೆಗಣಿಸಿದಂತಾಗುವುದು.
ಬಸವಣ್ಣನವರ ಒಡನಾಟ ಮತ್ತು ಅನುಭಾವದಿಂದ ನೀಲಾಂಬಿಕೆಯು “ವಿಚಾರ ಪತ್ನಿ” ಆಗಿದ್ದಾರೆ ಎಂದು ಹೇಳಿದ್ದಾರೆ. ಮಡದಿ ಎನ್ನುವ ಶಬ್ದ ಇಲ್ಲಿ ನಿಃಶಬ್ದವಾಗಿದೆ. ನನಗೆ ಅತ್ಯಂತ ಸಂವೇದಶೀಲತೆಯನ್ನು ಚಿಂತನೆಗೆ ಹಚ್ಚಿದ್ದು ಶರಣೆ ನೀಲಾಂಬಿಕೆ ಅಕ್ಕನವರ ಈ ವಚನ.
ಮಡದಿಯೆನ್ನಲಾಗದು | ಬಸವಂಗೆ ಎನ್ನನು ||
ಪುರುಷನೆನ್ನಲಾಗದು | ಬಸವನ ಎನಗೆ ||
ಉಭಯ ಕುಳವ | ಹರಿದು ||
ಬಸವಂಗೆ | ಶಿಶುವಾನಾದೆನು ||
ಬಸವನೆನ್ನ | ಶಿಶುವಾದನು ||
ಪ್ರಮಥರು ಪುರಾತರು | ಸಾಕ್ಷಿಯಾಗಿ ||
ಸಂಗಯ್ಯನಿಕ್ಕಿದ | ದಿಬ್ಯವ ||
ಮೀರದೆ | ಬಸವನೊಳಗಾನಡಗಿದೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-894 / ವಚನ ಸಂಖ್ಯೆ-1023)
ಎಂಥ ಅದ್ಭುತ ಸಂವೇದನಾಶೀಲ ಚಿತ್ರಣ ಇದು. ಬಹುಶಃ ವಚನ ಸಾಹಿತ್ಯದಲ್ಲಿ ಮಾತ್ರ ಇಂಥ ಉಪಮೆಯನ್ನು ಕೊಡಲ ಸಾಧ್ಯ ಅನಿಸುತ್ತದೆ. ಸತಿ–ಪತಿ ಎನ್ನುವ ಭಾವ ಶರಣಸತಿ–ಲಿಂಗಪತಿಯೆನ್ನುವದನ್ನು ಇಲ್ಲಿ ತೋರಿದಂತೆ ಕಾಣುತ್ತದೆ. ಬಸವಣ್ಣ ನೀಲಾಂಬಿಕೆಯ ಶಿಶು ಮತ್ತು ನೀಲಾಂಬಿಕೆ ಬಸವಣ್ಣನ ಶಿಶುವಾಗಿದ್ದಾನೆ. ಪರಸ್ಪರರನ್ನು ಪೋಷಿಸುವ ಭಾವನಾತ್ಮಕ ಸಂಬಂಧ. ನೀಲಾಂಬಿಕೆಯ ಸಹಸ್ರಾರು ಭಾವಗಳು ಅವರ ಮನಸ್ಸಿನ ಹೋರಾಟ, ಶಾಂತಿ, ಸಂವೇದನೆಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.
ತೊಳಲಾಟ, ಪೇಚಾಟ ಮತ್ತು ದ್ವಂದ್ವ ಮನಸ್ಸು ಸ್ತ್ರೀಯರ ಒಂದು ವಿಶೇಷತೆ ಎನ್ನಬಹುದು. ಈ ತೊಳಲಾಟ ಪೇಚಾಟದ ನಡುವೆ ಶರಣರ ಸಾಂಗತ್ಯ ಎಂಥ ಅನುಭೂತಿ ನೀಡುತ್ತದೆ ಎನ್ನುವದಕ್ಕೆ ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನ ಈ ಬೋಧೆಯ ವಚನ ಸಾಕ್ಷೀಕರಿಸುತ್ತದೆ.
ನೆನೆವುತ್ತಿದೆ | ಮನ ||
ದುರ್ವಾಸನೆಗೆ | ಹರಿವುತ್ತಿದೆ ಮನ ||
ಕೊನೆಗೊಂಬೆಗೆ | ಎಳೆವುತ್ತಿದೆ ಮನ ||
ಕಟ್ಟಿಗೆ ನಿಲ್ಲದು ಮನ | ಬಿಟ್ಟಡೆ ಹೋಗದು ಮನ ||
ತನ್ನಿಚ್ಛೆಯಲಾಡುವ | ಮನವ ||
ಕಟ್ಟಿಗೆ ತಂದು | ಗೊತ್ತಿಗೆ ನಿಲಿಸಿ ||
ಬಚ್ಚಬರಿಯ | ಬಯಲಿನೊಳಗೆ ||
ಓಲಾಡುವ ಶರಣರ | ಪಾದದಲ್ಲಿ ||
ನಾ | ಬೆಚ್ಚಂತಿದ್ದೆನಯ್ಯಾ ||
ಅಪ್ಪಣ್ಣಪ್ರಿಯ | ಚೆನ್ನಬಸವಣ್ಣಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-917 / ವಚನ ಸಂಖ್ಯೆ-1240)
ಕೇವಲ ನಾಲ್ಕೇ ನಾಲ್ಕು ಸಾಲುಗಳ ಈ ವಚನ ಇಡೀ ಸ್ತ್ರೀಕುಲದ ಸಂವೇದನೆ ಮತ್ತು ವ್ಯಾಕುಲತೆಯನ್ನು ಸಮೀಕರಿಸಿದೆ ಎನ್ನಬಹುದು. ವಿಷಯ ಸುಖಗಳತ್ತ ಮನಸ್ಸು ಹರಿದು ಹೋಗತಾ ಇದೆ. ಕಟ್ಟಿ ನಿಲ್ಲಸೋದಿಕ್ಕೆ ಹೋದರೆ ಓಡಿ ಹೋಗತಾ ಇದೆ. ಶರಣರ ಸಂಗದಲ್ಲಿ ತೊಡಗಿಸಿಕೊಂಡು ಮನಸ್ಸನ್ನು ತಹಬಂದಿಗೆ ತಂದು ನಿಲಿಸಿ ಬೆಚ್ಚಗಿರೋಣ ಎನ್ನುವ ತರ್ಕದಲ್ಲಿ ಲಿಂಗಮ್ಮನವರು ಇಲ್ಲಿ ನಿದರ್ಶಿಸಿದ್ದಾರೆ. ಸ್ತ್ರೀ ಸಂವೇದನೆಗೆ ಇದಕ್ಕಿಂತ ಉತ್ತಮ ಉದಾಹರಣೆ ಇರಲಾರದು. ಅಂಥ ಅದ್ಭುತ ಈ ವಚನ.
ಮೋಳಿಗೆ ಮಹಾದೇವಿಯಕ್ಕನ ಈ ವಚನ ಸ್ತ್ರೀಯರ ಸೂಕ್ಷ್ಮ ಮನಸ್ಸಿನ ಅಗಾಧತೆಯನ್ನು ಬಿಂಬಿಸುತ್ತದೆ.
ಬೀಜದೊಳಗಣ ವೃಕ್ಷದ ಹಣ್ಣ | ಅದನಾರು ಮೆಲಬಹುದು ||
ಸಸಿಯೊಳಗಣ ಲತೆ | ಪರ್ಣ ತಲೆದೋರದ ||
ನಸುಗಂಪಿನ ಕುಸುಮವ | ಅದಾರು ಮುಡಿವರು ||
ಇಂತೀ ಅರಿವಿನ | ಅರಿವ ಕುರುಹಿಟ್ಟು ||
ಕೊಡುವನೆ | ಲಿಂಗಾಂಗಿ ||
ಎನ್ನಯ್ಯಪ್ರಿಯ | ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ||
[ಇದು] ಸ್ವಾನುಭಾವಿಯ | ಸನ್ನದ್ಧ ಸ್ಥಲ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-910 / ವಚನ ಸಂಖ್ಯೆ-1183)
ಸ್ತ್ರೀಯರ ಅಂತರಂಗದ ಅರಿವು ಹಾಗೂ ಸೂಕ್ಷ್ಮ ಸಂವೇದನೆಯನ್ನು ಬೀಜದೊಳಗಣ ವೃಕ್ಷ ಮತ್ತು ಕೆಂಪು ಕುಸುಮ ಬಿಡುವ ಹೂಬಳ್ಳಿಗೆ ಹೋಲಿಸಿದ್ದಾರೆ. ಮಹಿಳೆಯರು ಎಷ್ಟು ಅಂತರ್ಮುಖಿಗಳಾಗಿರತಾರೆ ಮತ್ತು ಎಂಥ ಸಂವೇದನೆಯನ್ನು ತಮ್ಮೊಳಗೆ ತುಂಬಿಕೊಂಡಿರುತ್ತಾರೆ ಎನ್ನುವುದಕ್ಕೆ ಅಲಂಕಾರ ಉಪಮೆಯ ಅದ್ಭುತ ದೃಷ್ಟಾಂತ. ಎಂಥ ಶಬ್ದ ಪ್ರಯೋಗ ನೋಡಿ “ಅರಿವಿನ ಅರಿವ ಕುರುಹಿಟ್ಟು ಕೊಡುವನೇ ಲಿಂಗಾಂಗಿ” ಎಂಥ ತೀಕ್ಷ್ಣ ಸಂದೇಶವನ್ನು ಈ ವಚನ ಕೊಡುತ್ತದೆ. ಮಹಿಳೆಯರ ಅಂತರಾತ್ಮವನ್ನು ತಿಳಿದು ಒಂದಾಗುವ ಅವಶ್ಯಕತೆಯನ್ನು ತಿಳಿಸುವ ಈ ವಚನದ ಸಾಲುಗಳು ಅರ್ಥವಾಗಬೇಕಾದರೆ ಪುರುಷರೂ ಸಹ ಸಂವೇದನಾಶೀಲರಾಗಬೇಕು. Classic example for the sensitive nature of a woman.
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ ಹೇಳತಾಳೆ :
ತನು | ಬತ್ತಲೆಯಾದಡೇನು ||
ಮನ | ಬತ್ತಲೆಯಾಗದನ್ನಕ್ಕ ||
ವೃತವಿದ್ದಡೇನು | ವೃತಹೀನರಾದ ಬಳಿಕ ||
ನೆರೆದಡೆ ನರಕವಯ್ಯಾ | ನಿಂಬೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016/ ಪುಟ ಸಂಖ್ಯೆ-899/ ವಚನ ಸಂಖ್ಯೆ-1087)
ಎಂಥ ಉನ್ನತ ವಿಚಾರ. ಎಲ್ಲಿವರೆಗೂ ಮನಸ್ಸಿನಲ್ಲಿ ಕಲ್ಮಷ ತೆಗೆದು ಮನಸ್ಸು ನಿರಾಳ ಆಗೋದಿಲ್ಲವೋ ಅಲ್ಲೀವರೆಗೂ ತನು ಶುದ್ಧವಾಗೋದಿಲ್ಲ. ವೃತ, ನಿಯಮಗಳನ್ನು ಎಷ್ಟು ಮಾಡಿದರೂ ವೃತ ತಪ್ಪಿದರೆ ಕಷ್ಟ ತಪ್ಪಿದ್ದಲ್ಲ. ಎಷ್ಟು ಸಂವೇದನಾಶೀಲ ವಿಷಯ ಕೊಡತಾರೆ ಶರಣೆ ಗುಡ್ಡವ್ವೆ. ಅಂತರಂಗದೊಳಗೆ ಕಲ್ಮಷ ಇದ್ದಾಗ ತನು ಶುದ್ಧವಾದರೂ ಪ್ರಯೋಜನ ಇಲ್ಲಾ.
“ನಿರ್ಲಜ್ಜೇಶ್ವರ” ಎಂಬ ಅಂಕಿತ ಸೂಳೆ ಸಂಕವ್ವೆ ಮತ್ತು ಕೊಟ್ಟಣದ ಸೋಮವ್ವೆ ಈ ಇಬ್ಬರ ವಚನಗಳಲ್ಲಿ ಕಂಡು ಬರುತ್ತದೆ. ಇದುವರೆಗೆ ದೊರೆತ ಒಂದೊಂದೇ ವಚನದಲ್ಲಿ ಕೊನೆಯ ಸಾಲು ಒಂದೇ ಆಗಿದೆ.
ಒತ್ತೆಯ ಹಿಡಿದು | ಮುತ್ತೊತ್ತೆಯ ಹಿಡಿಯೆ ||
ಹಿಡಿದೆಡೆ ಬತ್ತಲೆ | ನಿಲಿಸಿ ಕೊಲ್ಲುವರಯ್ಯಾ ||
ವ್ರತಹೀನನರಿದು | ಬೆರೆದಡೆ ||
ಕಾದ ಕತ್ತಿಯಲ್ಲಿ | ಕೈಕಿವಿ ಮೂಗ ಕೊಯ್ವರಯ್ಯಾ ||
ಒಲ್ಲೆನೊಲ್ಲೆ ಬಲ್ಲೆನಾಗಿ | ನಿಮ್ಮಾಣೆ ನಿರ್ಲಜ್ಜೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-916 / ವಚನ ಸಂಖ್ಯೆ-1232)
ಹದತಪ್ಪಿ ಕುಟ್ಟಲು | ನುಚ್ಚಲ್ಲದೆ ಅಕ್ಕಿಯಿಲ್ಲ ||
ವೃತಹೀನನ ನೆರೆಯ | ನರಕವಲ್ಲದೆ ಮುಕ್ತಿಯಿಲ್ಲ ||
ಅರಿಯದುದು ಹೋಗಲಿ | ಅರಿದು ಬೆರೆದೆನಾದೆಡೆ ||
ಒಲ್ಲೆ ಬಲ್ಲೆನಾಗಿ | ನಿಮ್ಮಾಣೆ ನಿರ್ಲಜ್ಜೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-870 / ವಚನ ಸಂಖ್ಯೆ-751)
ಸೂಳೆ ಸಂಕವ್ವೆ ಪ್ರತಿ ವೃತ್ತಿಗೂ ಅದರದೇ ಆದ ಗೌರವ, ಮಾನ್ಯತೆ, ಕುರುಹುಗಳಿವೆಯೆಂದು ತನ್ನ ವೃತ್ತಿಯ ರೀತಿ ನೀತಿಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನಿರ್ಭಿಡೆಯಿಂದ ಹೇಳಿಕೊಂಡಿದ್ದಾಳೆ. ಅವಳ ಈ ಬಗೆಯ ದಿಟ್ಟತನದಿಂದ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಾಳೆ. ಎಂಥ ಸಂವೇದನಾಶೀಲತೆಯ ಪ್ರತಿಬಿಂಬವನ್ನು ಸಮಾಜಕ್ಕೆ ನೀಡಿದ್ದಾರೆ ಈ ಇಬ್ಬರೂ ವಚನಕಾರ್ತಿಯರು. ಒಂದೇ ವಚನ ಬರೆದರೂ ಸಂವೇದನೆಯನ್ನು ಚನ್ನಾಗಿ ನಿರೂಪಿಸಿದ್ದಾರೆ.
ಸ್ತ್ರೀ ಸ್ವಾತಂತ್ರ್ಯ:
ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಮತ್ತೊಂದು ಮುಖ ಅಂದರೆ ಸ್ತ್ರೀ ಸ್ವಾತಂತ್ರ್ಯ. ಯಾವುದೇ ಹಮ್ಮು ಬಿಮ್ಮು ಇಲ್ಲದೇನೆ ಸ್ವತಂತ್ರವಾಗಿ ವಚನಗಳನ್ನು ಬರೆದರು. ಎಷ್ಟು ಸ್ವತಂತ್ರ ಆಲೋಚನೆಗಳಿದ್ದವೆಂದರೆ ಅಕ್ಕ ಮಹಾದೇವಿ ಮತ್ತು ಮುಕ್ತಾಯಕ್ಕನಂಥಾ ವಚನಕಾರ್ತಿಯರು ಅಲ್ಲಮ ಪ್ರಭುಗಳನ್ನು ಪ್ರಶ್ನಿಸುವಂಥಾ ಪ್ರಖರ ಬುದ್ಧಿವಂತರಾಗಿದ್ದರು. ಶೂನ್ಯ ಸಂಪಾದನೆಯಲ್ಲಿ ಅಕ್ಕ ಮಹಾದೇವಿ ಮತ್ತು ಮುಕ್ತಾಯಕ್ಕರನ್ನು ಅಗ್ರಪಂಕ್ತಿಯ ಅಧ್ಯಾಯಗಳಲ್ಲಿ ಬರೆದದ್ದನ್ನು ನಾವು ಕಾಣಬಹುದು.
ಇನ್ನು ಎಲ್ಲ ವಚನಕಾರ್ತಿಯರಲ್ಲಿ ನಾವು ಕಾಣಬಹುದಾದ ಬಹು ದೊಡ್ಡ ಗುಣ ಅಂದರೆ ತಮ್ಮನ್ನು ತಾವು ವಿಮರ್ಶೆ ಮಾಡಕೊಳ್ಳೋದು ಅಥವಾ ತಮ್ಮೊಳಗಿನ ತುಡಿತವನ್ನು ಹೇಳಿಕೊಳ್ಳೋದು.
ಕಲ್ಲವ್ವೆ / ಚಿಕ್ಕ ಗೌರಾದೇವಿ ಅಂತ ಒಬ್ಬ ಮುಗ್ಧ ಶರಣೆ ಎಷ್ಟು ಸ್ವತಂತ್ರ ವಿಚಾರಧಾರೆ.
ತೃಷೆಯಡಗುವ | ತನಕ ನೀರಿನಾಸೆ ||
ಕ್ಷುಧೆಯಡಗುವ | ತನಕ ಅನ್ನದಾಸೆ ||
ಪಾಪ ಹೋಗುವ ತನಕ | ಜಪತಪದ ಕರ್ಮಗಳಾಸೆ ||
ಕಲ್ಲಿನಾಥನೆಂದು | ಅರಿಯುವ ತನಕ ||
ಜ್ಞಾನದಾಸೆಯುಳ್ಳ | ಕಲ್ಲೇ ಜಡದೇವರೆಂದು ||
ಅನ್ನಬಹುದೋ | ಹೇಳಾ ಕೇದಾರಯ್ಯ || ಕಲ್ಲವ್ವೆ / ಚಿಕ್ಕ ಗೌರಾದೇವಿ ||
ನನ್ನನ್ನು ನಾನು ಅರಿಯುವ ತನಕ ಕಲ್ಲನ್ನೇ ಪೂಜೆ ಮಾಡಬೇಕಾ ಅಂತ ಪೇಚಾಡುವ ವಚನಗಳಲ್ಲಿ ಸ್ವತಂತ್ರ ಭಾವನೆ ಇದೆ.
ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಇದರ ಒಂದು ಉದಾಹರಣೆ ಈ ವಚನದಲ್ಲಿಯ ಸ್ತ್ರೀ ಸ್ವಾತಂತ್ರ್ಯವನ್ನು ಗುರುತಿಸಬಹುದು.
ವೃತ ಭ್ರಷ್ಠನ | ಲಿಂಗ ಬಾಹ್ಯನ ಕಂಡಡೆ ||
ಸತ್ತ ನಾಯ | ಕಾಗೆಯ ಕಂಡಂತೆ ||
ಅವರೊಡನೆ | ನುಡಿಯಲಾಗದು ಭೀಮೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-916 / ವಚನ ಸಂಖ್ಯೆ-1231)
ಇಲ್ಲಿ ನಾವು ಕಾಣುವುದು ಎಚ್ಚರಿಕೆಯ ಘಂಟೆಯೇ ಹೊರತು ಆಪಾದನೆಯಲ್ಲ, ಅಷ್ಟು ಸ್ವಾತಂತ್ರ್ಯವಿತ್ತು ಹನ್ನೆರಡನೇ ಶತಮಾನದಲ್ಲಿ.
ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನ ವಚನ
ಆವ ಕಾಯಕವ ಮಾಡಿದಡೂ | ಒಂದೇ ಕಾಯಕವಯ್ಯಾ ||
ಆವ ವ್ರತವಾದಡೂ | ಒಂದೆ ವ್ರತವಯ್ಯಾ ||
ಆಯ ತಪ್ಪಿದಡೆ ಸಾವಿಲ್ಲ | ವ್ರತ ತಪ್ಪಿದಡೆ ಕೂಡಲಿಲ್ಲ ||
ಕಾಕಪಿಕದಂತೆ | ಕೂಡಲು ||
ನಾಯಕ ನರಕ | ಗಂಗೇಶ್ವರಲಿಂಗದಲ್ಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-932 / ವಚನ ಸಂಖ್ಯೆ-1347)
ಕಾಯಕದಲ್ಲಿಯೂ ಕೂಡ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಈ ವಚನ ತಿಳಿಸುತ್ತದೆ. ಯಾವ ಕೆಲಸವೂ ಕೀಳು ಮಟ್ಟದ್ದಲ್ಲಾ ಮತ್ತು ಪೂಜ್ಯನೀಯ ಸ್ಥಾನದಿಂದ ಕೆಲಸ ಮಾಡಿದಾಗ ಅದರ ಸಂತೃಪ್ತಿ ಆಗುತ್ತದೆ. ನಿಷ್ಠೆ ತಪ್ಪಿ ಮಾಡಿದ ಕೆಲಸ ಕೋಗಿಲೆ ಮತ್ತು ಕಾಗೆಯ ಸಂಗ ಮಾಡಿದ ಹಾಗೆ ಅನ್ನುವ ಉಪಮಾಲಂಕಾರದಿಂದ ವಿವರಿಸುತ್ತಾಳೆ ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ. ಆ ಕಾಲದಲ್ಲಿ ಅತ್ಯಂತ ಮುಕ್ತ ಮನಸ್ಸಿನಿಂದ ವಚನಗಳನ್ನು ಹೆಣೆದಿದ್ದಾರೆ ಶರಣೆಯರು.
ಕಾಯಕನಿಷ್ಠೆಗೆ ಮತ್ತೊಂದು ಹೆಸರು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ದಂಪತಿಗಳು.
ಕಾಯಕದಲ್ಲಿ | ನಿರತನಾದೊಡೆ ||
ಗುರುದರುಶನವಾದಡೂ | ಮರೆಯಬೇಕು ||
ಲಿಂಗಪೂಜೆಯಾದಡೂ | ಮರೆಯಬೇಕು ||
ಜಂಗಮ ಮುಂದೆ | ನಿಂತಿದ್ದಡೂ ||
ಹಂಗು | ಹರಿಯಬೇಕು ||
ಕಾಯಕವೇ | ಕೈಲಾಸವಾದ ಕಾರಣ ||
ಅಮರೇಶ್ವರ ಲಿಂಗವಾಯಿತ್ತಾದಡೂ | ಕಾಯಕದೊಳು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1068 / ವಚನ ಸಂಖ್ಯೆ-1165)
ಕೆಲಸಾ ಮಾಡಬೇಕಾದರೆ ಎಲ್ಲಿಯೂ ಗಮನ ಕೊಡಬೇಕಾಗಿಲ್ಲ. ಗುರು ಲಿಂಗ ಜಂಗಮ ಅಷ್ಟೇ ಏಕೆ ಸಾಕ್ಷಾತ್ ಅಮರೇಶ್ವರಲಿಂಗ ಪ್ರತ್ಯಕ್ಷವಾದರೂ ಲಕ್ಷ್ಯ ಕೊಡಬಾರದು. ಅಮರೇಶ್ವರಲಿಂಗವೂ ಸಹ ದುಡಿದೇ ತಿನ್ನಬೇಕು ಎನ್ನುವ ಮಾತು ಕಾಯಕನಿಷ್ಠೆಯ ಅನನ್ಯ ಅನುಪಮ ಮತ್ತು ಅಪ್ರತಿಮ ನಿದರ್ಶನ ತಿಳಿಸುತ್ತದೆ ಈ ವಚನ.
ಆಸೆಯೆಂಬುದದು | ಅರಸಿಂಗಲ್ಲದೆ ||
ಶಿವಭಕ್ತರಿಗೆ | ಉಂಟೆ ಅಯ್ಯಾ ||
ರೋಷವೆಂಬುದು | ಯಮದೂತರಿಗಲ್ಲದೆ ||
ಅಜಾತರಿಗುಂಟೆ | ಅಯ್ಯಾ ||
ಈಸಕ್ಕಿಯಾಸೆ ನಿಮಗೇಕೆ | ಈಶ್ವರನೊಪ್ಪ ||
ಇದು ಮಾರಯ್ಯ ಪ್ರಿಯ | ಅಮರೇಶ್ವರಲಿಂಗಕ್ಕೆ ||
ದೂರ | ಮಾರಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-866 / ವಚನ ಸಂಖ್ಯೆ-709)
ಕಾಯಕ ನಿಷ್ಠೆ ತಪ್ಪಿದ್ದಕ್ಕೆ ಎಷ್ಟು ಕಠಿಣ ಶಬ್ದಗಳಲ್ಲಿ ಹೇಳತಾಳೆ ಆಯ್ದಕ್ಕಿ ಲಕ್ಕಮ್ಮ. ಮಾಡಿದ ಕೆಲಸದ ಕೂಲಿಗಿಂತ ಹೆಚ್ಚು ಅಕ್ಕಿಯನ್ನು ತಂದದ್ದಕ್ಕಾಗಿ ಪತಿ ಆಯ್ದಕ್ಕಿ ಮಾರಯ್ಯನವರನ್ನೇ ಪ್ರಶ್ನಿಸುವಷ್ಟು ಪ್ರಭುದ್ಧತೆಯನ್ನು ಹನ್ನೆರಡನೇ ಶತಮಾನದ ಮಹಿಳೆಯರು ಹೊಂದಿದ್ದರು ಎನ್ನುವದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ. ಬದುಕಿನ ಮೌಲ್ಯಗಳನ್ನು ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿ ಬದುಕಿದ ಶರಣರು ಎಷ್ಟು ಉದಾತ್ತ ಸಾಮಾಜಿಕ ಚಿಂತನೆ ಹಾಗು ಕಳಕಳಿಯನ್ನು ಹೊಂದಿದ್ದರು ಎನ್ನುವುದನ್ನು ವಚನಗಳ ಮೂಲಕ ಕಲ್ಪಿಸಿಕೊಳ್ಳಬಹುದು.
ಅಮೂಲ್ಯವಾದ ತತ್ವಗಳನ್ನು ತಮ್ಮ ವಚನಗಳಲ್ಲಿ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸಿದವರು ಹನ್ನೆರಡನೇ ಶತಮಾನದ ವಚನಕಾರರು ಮತ್ತು ವಚನಕಾರ್ತಿಯರು. ಇವರ ವಚನಗಳು ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳನ್ನು ಎತ್ತಿ ತೋರುತ್ತವೆ. ಹೀಗೆ ಶರಣರು ನಮಗಾಗಿ ಬದುಕಿ ತಮ್ಮ ಗುರುತುಗಳಾದ ವಚನಗಳನ್ನು ಬಿಟ್ಟು ಹೋಗಿದ್ದಾರೆ. ನಮಗೆ ವಚನಗಳು ಅರಿವನ್ನು ಹುಟ್ಟಿಸಬೇಕು. ಆಗ ಶರಣರು ಕಂಡ ಕನಸು ನನಸಾಗುತ್ತದೆ ಅವರು ನಮಗಾಗಿ ಮಾಡಿದ ತ್ಯಾಗ ಸಾರ್ಥಕವಾಗುತ್ತದೆ.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com