ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.

ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ ಬಗ್ಗೆ ಅಲ್ಲಿ ಪ್ರಸ್ತಾಪವಿದೆಯೆ, ಶರಣರು ಅಂಗವಿಕಲರ ಬಗ್ಗೆ ಏನಾದರೂ ಕಾಳಜಿ ತೋರಿದ್ದಾರೆಯೇ? ಎಂದು ಪ್ರಶ್ನೆ ಕೇಳಿದಾಗ, ಆ ಸಭೆಯೆಲ್ಲೆಲ್ಲ ದೊಡ್ಡ ಕರತಾಡನ! ಡಾ. ಕಲಬುರ್ಗಿಯವರಿಗೆ ಇದು ಒಮ್ಮೆಲೇ ದಿಗಿಲು! ತಕ್ಷಣ ಅವರು ವೇದಿಕೆಗೆ ಬಂದವರೆ, ‘ನಿಮ್ಮ ಪ್ರಶ್ನೆ ಭಾಳ ಅರ್ಥಪೂರ್ಣ ಐತಿ. ಆದ್ರ, ಇದಕ್ಕ ತಕ್ಷಣ ಉತ್ರಾ ಕೊಡಾಕ್ ಆಗೂದಿಲ್ಲ. ಸ್ವಲ್ಪ ಅವಕಾಶ ಕೊಡ್ರಿ, ಖಂಡಿತ ನಾನಿದಕ್ಕ ಉತ್ತರಾ ಕೊಡತೇನಿ’ ಎಂದವರೆ, ಮರಳಿ ತಮ್ಮ ಆಸನದಲ್ಲಿ ಹೋಗಿ ಕುಳಿತಿದ್ದರು. ಅವರ ತಲೆಯಲ್ಲಿ ಆಗಲೇ ಹೊಕ್ಕಿತ್ತು ಮತ್ತೊಂದು ಹೊಸ ಗುಂಗೀಹುಳ.

ಅಂದೇ ರಾತ್ರಿ ಡಾ. ಕಲಬುರ್ಗಿ ಅವರು ವಚನ ಸಾಹಿತ್ಯದ ಸಂಪುಟಗಳನ್ನು ಎದುರಿಟ್ಟುಕೊಂಡು ಅವುಗಳನ್ನು ಬೆಳ್ಳಂಬೆಳತನಕ ಮತ್ತೊಮ್ಮೆ ತಿರುವಿ ಹಾಕತೊಡಗಿದರು. ಹಾಗೆ ವಚನಗಳನ್ನು ಓದುತ್ತಿದ್ದಾಗ ಅವರಿಗೆ ಸಿಕ್ಕದ್ದು ಈ ಮುಂದಿನ, ಬಸವಣ್ಣನವರ ವಚನ.

ಹಾಲ ಕಂದಲು, ತುಪ್ಪದ ಮಡಕೆಯ ಬೋಡು ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ: ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ
ಅಂಗಹೀನರೆಂದಡೆ ನಾಯಕನರಕ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-41 / ವಚನ ಸಂಖ್ಯೆ-417)

ಈ ವಚನ ಕಣ್ಣಿಗೆ ಬಿದ್ದಾಗ, ಡಾ. ಕಲಬುರ್ಗಿಯವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಮತ್ತೊಂದು ಸಭೆಯಲ್ಲಿ ಈ ವಚನವನ್ನೇ ಇಟ್ಟುಕೊಂಡು, ಅರ್ಥಪೂರ್ಣ ವಿಶ್ಲೇಷಣೆ ಮಾಡಿ, ಶರಣರಿಗೆ ಅಂಗವಿಕಲರ ಬಗೆಗೂ ಎಂಥ ಕಾಳಜಿ ಇತ್ತೆಂಬುದನ್ನು ಅವರು ಅಲ್ಲಿದ್ದವರಿಗೆಲ್ಲ ಮನದಟ್ಟಾಗುವಂತೆ ವಿವರಿಸಿದರು. ಸಕಲ ಜೀವಾತ್ಮರ ಲೇಸನ್ನೇ ಬಯಸಿದ ಶರಣರು ಅಂಥದೇ ಜೀವಾತ್ಮವಿರುವ ಅಂಗವಿಕಲರ ಬಗ್ಗೆ ಕಾಳಜಿ ತೋರಿಸದೇ ಇರುತ್ತಾರೆಯೆ? ಖಂಡಿತ ಸಾಧ್ಯವಿಲ್ಲ. ಬಸವಣ್ಣನವರ ಈ ವಚನವೇ ಅದಕ್ಕೆ ಸಮರ್ಥ ಸಾಕ್ಷಿ.

ನೆಲ ಮೂಲದ ರೂಪಕದೊಂದಿಗೆ ಆರಂಭವಾಗುವ ಈ ವಚನ, ಆ ರೂಪಕದ ಮೂಲಕವೇ ಅಂಗವಿಕಲರ ಅಂತರಂಗದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಕಾರ್ಯ ಮಾಡುತ್ತದೆ. ಬಸವಣ್ಣನವರು ಅಂಗವಿಲಕರ ಬಗ್ಗೆ ತೋರಿಸುವ ಪ್ರೀತಿ, ಆದರ, ಅನುಕಂಪೆ ಮತ್ತು ಕಾಳಜಿ ಇವೆಲ್ಲ ಇಲ್ಲಿ ಒಳಧ್ವನಿಯಾಗಿದ್ದುಕೊಂಡೇ ಅವರನ್ನು ಸಮಾಜ ಹೇಗೆ ನೋಡಬೇಕೆಂಬ ಸೂಚನೆಯನ್ನೂ ಕೊಡುತ್ತವೆ.

ಹಾಲನ್ನು ಗಡಿಗೆಯಲ್ಲಿ (ಕಂದಲು ಅಂದರೆ ಮಣ್ಣಿನಿಂದ ಮಾಡಿದ ಗಡಿಗೆ. ಇದನ್ನು ಚಟಿಗೆ ಎಂದೂ ಹೇಳುತ್ತಾರೆ) ಹಾಗೂ ತುಪ್ಪವನ್ನು ಮಡಕೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಹಿಂದಿನ ಕಾಲದ ನಮ್ಮ ಜನಸಾಮಾನ್ಯರಲ್ಲಿದ್ದ ರೂಢಿ. ಇಂಥ ಮಣ್ಣಿನ ಗಡಿಗೆ-ಮಡಕೆಗಳನ್ನು ಮತ್ತೆ ಮತ್ತೆ ಉಪಯೋಗಿಸುತ್ತಿದ್ದ ಕಾರಣ ಅವುಗಳ ಅಂಚು ಅಲ್ಲಲ್ಲಿ ಬಡಿದು ಒಡೆಯುತ್ತಿದ್ದುದು ಸಾಮಾನ್ಯ. ಗಡಿಗೆ-ಮಡಕೆಗಳು ಹೀಗೆ ಒಡೆಯುವುದನ್ನೇ ‘ಮುಕ್ಕಾಗುವುದು’ ಎಂದು ಹೇಳುತ್ತಾರೆ. ಅವು ಹಾಗೆ ಒಡೆದಾಗ ಅಥವಾ ಮುಕ್ಕಾದಾಗಲೂ ಬಿಸಾಕದೆ, ಅವುಗಳಲ್ಲೇ ಹಾಲು-ತುಪ್ಪ ತುಂಬಿಟ್ಟುಕೊಳ್ಳುವ ಪರಿಪಾಠವಿತ್ತು. ಹೀಗೆ ಅಂಚು ಒಡೆದ ಗಡಿಗೆ-ಮಡಕೆಗಳಲ್ಲಿ ಹಾಲು-ತುಪ್ಪ ತುಂಬಿ ಇಟ್ಟರೆ ಅದರಿಂದ ಹಾಲಿನ ಸಿಹಿಗುಣ ಮತ್ತು ತುಪ್ಪದ ಕಂಪು ಕಡಿಮೆಯೇನೂ ಆಗುವುದಿಲ್ಲವೆಂಬ ಖಚಿತ ಅರಿವು ಇದ್ದ ಕಾರಣಕ್ಕಾಗಿಯೇ ಅವರು ಹಾಗೆ ಮಾಡುತ್ತಿದ್ದರು. ಹೀಗಿದ್ದಾಗ ಆ ಗಡಿಗೆ-ಮಡಕೆಗಳು ಮುಕ್ಕಾದವುಗಳು ಎನ್ನಲಾದೀತೆ? ಖಂಡಿತ ಇಲ್ಲ. ಅದನ್ನೇ ಬಸವಣ್ಣನವರು, ‘ಮುಕ್ಕೆನಬೇಡ’ ಎಂದು ಸ್ಪಷ್ಟವಾಗಿ ಹೇಳಿದ್ದು. ಹೀಗೆ ಒಡೆದ ಗಡಿಗೆ-ಮಡಕೆಗಳಲ್ಲಿ ತುಂಬಿ ಇಟ್ಟ ಹಾಲು-ತುಪ್ಪಕ್ಕೆ ಆ ಮುಕ್ಕಿನಿಂದ ಯಾವ ಬಾಧೆಯೂ ಆಗಲಾರದಷ್ಟೇ ಅಲ್ಲ, ಅವು ಲಿಂಗಕ್ಕೆ ಅರ್ಪಿಸಲು ಶುದ್ಧ ಹಾಗೂ ಯೋಗ್ಯವೇ ಆಗಿರುತ್ತವೆ. ಈ ವಸ್ತುಸತ್ಯವನ್ನು ವಚನದಲ್ಲಿ ಖಚಿತವಾಗಿ ಮಂಡಿಸುವ ಬಸವಣ್ಣನವರು, ಮುಂದೆ ಇದೇ ರೂಪಕವನ್ನು ಅಂಗವಿಕಲರ ಶಕ್ತಿ-ಸಾಮರ್ಥ್ಯ-ಕ್ರಿಯಾಶೀಲತೆಗಳಿಗೂ ಹೋಲಿಸಿ ವಿಸ್ತರಿಸುತ್ತಾರೆ. ಅಂಗವಿಕಲರ ಭೌತಿಕ ಶರೀರದಲ್ಲಿ ಏನೇ ಐಬುಗಳಿದ್ದರೂ ಅವರ ಅಂತರಂಗ ಹಾಲು-ತುಪ್ಪಗಳ ಗುಣದಂತೆ ಪರಿಶುದ್ಧವೇ ಆಗಿರುವಂಥದ್ದು ಎಂದು ಪ್ರತಿಪಾದಿಸುವುದೇ ಇಲ್ಲಿರುವ ಮುಖ್ಯ ಉದ್ದೇಶ.

ಅಂಚು ಒಡೆದ ಗಡಿಗೆ-ಮಡಕೆಗಳಲ್ಲಿ ತುಂಬಿಟ್ಟ ಹಾಲು ಮತ್ತು ತುಪ್ಪ ಲಿಂಗಕ್ಕೆ ಅರ್ಪಿಸಲು ಹೇಗೆ ಸದಾ ಯೋಗ್ಯವೇ ಆಗುತ್ತವೆಯೋ, ಹಾಗೆಯೇ ಅಂಗವೈಕಲ್ಯವುಳ್ಳ ವ್ಯಕ್ತಿಗಳ ಹೊರ ಆವರಣದಲ್ಲಿ ಒಂದಿಷ್ಟು ಕೊರತೆಯಿದ್ದರೂ ಅವರ ಅಂತರಂಗದ ಶಕ್ತಿಯಲ್ಲಿ ಆ ಕೊರತೆ ಖಂಡಿತ ಇರುವುದಿಲ್ಲ. ಅಂದರೆ ಅವರ ಆ ಗುಣಗಳಿಗೆ, ಊನಗೊಂಡ ಹೊರ ಆವರಣ ಯಾವುದೇ ಬಗೆಯಲ್ಲಿ ಬಾಧಕವಾಗಲಾರದು. ಈ ಕಾರಣಕ್ಕಾಗಿಯೇ ಅವರನ್ನು ‘ಅಂಗಹೀನ’ ಎಂದು ಕರೆಯಬಾರದು ಎಂಬುದು ಬಸವಣ್ಣನವರ ಗಟ್ಟಿ ಆದೇಶ. ಅಂಗಹೀನರೆಂದು ಕರೆದರೆ, ಹಾಗೆ ಕರೆಯುವವರಿಗೆ ನಾಯಕ ನರಕ ತಪ್ಪದು ಎಂದೂ ಅವರು ಎಚ್ಚರಿಸುತ್ತಾರೆ. ಅಂಗವಿಕಲರ ಬಗ್ಗೆ ಬಸವಣ್ಣನವರಿಗಿದ್ದ ಗೌರವದ ಭಾವೆನೆ ಎಷ್ಟು ಉನ್ನತ ಮಟ್ಟದ್ದಾಗಿತ್ತು ಎಂಬುದು ಇಲ್ಲಿ ಸುವ್ಯಕ್ತವಾಗುತ್ತದೆ. ಮುಕ್ಕಾದರೂ ಗಡಿಗೆ-ಮಡಕೆಗಳಲ್ಲಿನ ಹಾಲು ನೈವೇದ್ಯಕ್ಕೆ ಸೂಕ್ತವೇ ಆಗುವಂತೆ, ಅಂಗವೈಕಲ್ಯ ಹೊಂದಿದ ಮನುಷ್ಯರೂ ಏನೆಲ್ಲ ಕೆಲಸ-ಕಾರ್ಯಗಳಿಗೆ ಸೂಕ್ತರು, ಸಮರ್ಥರು ಎಂಬುದೇ ಇಲ್ಲಿರುವ ಅರ್ಥ-ಧ್ವನಿ.

‘ಅಂಗಹೀನರೆಂದಡೆ ನಾಯಕ ನರಕ’ ಎಂಬ ಪಂಕ್ತಿ ಇಲ್ಲಿ ವಿಶೇಷವಾಗಿದ್ದು, ಅದು ಬಸವಣ್ಣನವರ ದೃಢ ಭಾಷೆಯಾಗಿ ಗಮನ ಸೆಳೆಯುತ್ತದೆ. ಅಂಗಹೀನರೂ ಮನುಷ್ಯರೇ ಎಂಬುದನ್ನು ಮರೆತಿರುವ ಸಮಾಜ ಅವರನ್ನು ಕೆಲವೊಮ್ಮೆ ಉಪೇಕ್ಷೆಯಿಂದ ಕಾಣುತ್ತದೆ. ಇದು ನಿಜಕ್ಕೂ ಅಮಾನವೀಯ ನಡೆ. ಸೃಷ್ಟಿಕ್ರಿಯೆ ಅಥವಾ ಅಪಘಾತಗಳಲ್ಲಿ ಅನಿವಾರ್ಯವಾಗಿ ಅಂಗವಿಕಲರಾದವರು ಇರಬಹುದು. ಆದರೆ ಅವರೂ ಕೂಡ ಸರ್ವಾಂಗಸುಂದರರಂತೆ, ಅಥವಾ ಅವರಿಗಿಂತ ಹೆಚ್ಚಿನ ಹಾಗೂ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರೂ ಹಾಗೆ ಮಾಡಬಲ್ಲರೆಂಬುದಕ್ಕೆ ವಿಶ್ವದಲ್ಲಿ ಅಸಂಖ್ಯ ಉದಾಹರಣೆಗಳಿವೆ. ಈ ಕಾರಣಕ್ಕಾಗಿ ಅಂಥವರನ್ನು ‘ಅಂಗಹೀನರೆಂದು’ ಕರೆಯಬಾರದು ಎಂಬುದೇ ಬಸವಣ್ಣನವರ ಸಮರ್ಥನೆ. ಇದು ಅನುಕಂಪೆ ಮಾತ್ರವಲ್ಲ, ಅಂಗವಿಕಲರ ಶಕ್ತಿ, ಸಾಮರ್ಥ್ಯ, ಗುಣಾತ್ಮಕತೆ ಎಲ್ಲವನ್ನೂ ಗುರುತಿಸಿಕೊಡುವ ಹಾಗೂ ಎತ್ತಿ ತೋರಿಸುವ ವೈಚಾರಿಕತೆ.

ಅಂಗವಿಕಲತೆಯುಳ್ಳವರನ್ನು ಅಂಗಹೀನರೆಂದು ಕರೆಯಲಾಗದೆಂದು ಖಚಿತವಾಗಿ ಹೇಳುವ ಶರಣರು, ಅದಕ್ಕೂ ಮುಂದೆ ಹೋಗಿ, ಅಂಥವರನ್ನು ಕಂಡು ‘ಅಯ್ಯೋ ಪಾಪ’ ಎಂದು ಮನದಲ್ಲೇ ಮರುಕ ವ್ಯಕ್ತಪಡಿಸುವವರ ನಡೆಯನ್ನೂ ಪ್ರಶ್ನಿಸುತ್ತಾರೆ-ಖಂಡಿಸುತ್ತಾರೆ. ಶರಣರ ಇಂಥ ಕಾಳಜಿಯನ್ನು ಪ್ರತಿಬಿಂಬಿಸುವ ಚಂದಿಮರಸನ ವಚನವೊಂದನ್ನು ಇಲ್ಲಿ ಗಮನಿಸಬಹುದು.

ಕುರುಡ ಕಾಣನೆಂದು, ಕಿವುಡ ಕೇಳನೆಂದು
ಹೆಳವ ಹರಿಯನೆಂದು, ಮರುಳ ಬಯ್ದನೆಂದು,
ಪಿಶಾಚಿ ಹೊಯ್ದನೆಂದು ಮನಕತಬಡುವರೆ ಹೇಳಾ?
ತಾನರಿವುಳ್ಳಾತ ತತ್ವವನರಿಯದವರಲ್ಲಿ
ಗುಣದೋಷವನರಸುವರೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1262 / ವಚನ ಸಂಖ್ಯೆ-586)

ಕಣ್ಣಿಲ್ಲದವ ಕಾಣಲಾರನೆಂದು, ಕಿವಿಯಿಲ್ಲದವ ಕೇಳನೆಂದು, ಕಾಲಿಲ್ಲದವ ನಡೆಯಲಾರನೆಂದು, ಮಾನಸಿಕ ರೋಗಿಯಾದವ ಬೈಯ್ಯುತ್ತಾನೆಂದು, ಮರುಳು ಬಡಿದವ ಹೊಡೆಯುತ್ತಾನೆಂದು-ಹೀಗೆ ವಿವಿಧ ಬಗೆಯ ಅಂಗವೈಕಲ್ಯವುಳ್ಳವರು ತಮ್ಮ ಆ ಅಂಗವೈಕಲ್ಯಕ್ಕೆ ಅನುಗುಣವಾಗಿ ವರ್ತಿಸುವಾಗ ಅದನ್ನು ಕೀಳಾಗಿ ಅಥವಾ ವ್ಯಂಗ್ಯದೃಷ್ಟಿಯಿಂದ ನೋಡುವವರನ್ನು ಇಲ್ಲಿ ಪ್ರಶ್ನಿಸುತ್ತಾನೆ ಚಂದಿಮರಸ. ಅರಿವುಳ್ಳ ಮತ್ತು ತತ್ವಸಿದ್ಧಾಂತಗಳಲ್ಲಿ ನಂಬಿಗೆಯುಳ್ಳ ಮನುಷ್ಯರು ಹಾಗೆ ಅವರಲ್ಲಿ ಕುಂದುಕೊರತೆಗಳನ್ನು ಕಾಣಲಾರರೆಂದು ಹೇಳುತ್ತ, ಅಂಗಾಂಗ ಕೊರತೆಯುಳ್ಳವರ ಬಗೆಗೆ ಅಂತಃಕರಣವನ್ನೂ, ಕಾಳಜಿಯನ್ನೂ ವ್ಯಕ್ತಪಡಿಸುತ್ತಾನೆ ಆತ. ಮನುಷ್ಯತ್ವದ ಅರಿವಿಲ್ಲದವರು ಮಾತ್ರ ಅಂಗವೈಕಲ್ಯವುಳ್ಳವರಲ್ಲಿ ಹೀಗೆ ಗುಣದೋಷಗಳನ್ನು ಹುಡುಕುತ್ತಾರೆ ಎನ್ನುವ ಚಂದಿಮರಸನ ಮಾತಿನಲ್ಲಿ ಒಂದಿಷ್ಟು ರೋಷವೂ ಇರುವುದನ್ನು ಗುರುತಿಸಬಹುದು. ಇದು ಅಂಗವಿಕಲರ ಬಗೆಗೆ ಶರಣರಿಗಿದ್ದ ಅನನ್ಯ ಕಾಳಜಿಯ ಪ್ರತಿರೂಪ.

ಅಂಗಹೀನರನ್ನು ಸಮಾಜ ಅನ್ಯದೃಷ್ಟಿಯಿಂದ ಕಾಣುವುದನ್ನೇ ಆಧಾರವಾಗಿಟ್ಟುಕೊಂಡು, ಈಗಿನ ಸರಕಾರಗಳು ಅವರನ್ನು ಹಾಗೆ ಕರೆಯಬಾರದೆಂದು, ‘ವಿಕಲಾಂಗಚೇತನರು’, ‘ದಿವ್ಯಾಂಗರು’, ವಿಶಿಷ್ಟಚೇತನರು’ ‘ವಿಕಲಚೇತನರು’ ಮುಂತಾದ ಶಬ್ದಗಳನ್ನು ಬಳಸಿ ಗುರುತಿಸುವ ಹಾಗೂ ಗೌರವಿಸುವ ಕಾರ್ಯ ಮಾಡುತ್ತಿವೆ. ಅಚ್ಚರಿಯೆಂದರೆ, ಈ ಕೆಲಸವನ್ನು ಬಸವಣ್ಣ ಮತ್ತಿತರ ಶರಣರು ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ಹೇಳಿದ್ದರು ಮತ್ತು ಹಾಗೆ ನಡೆದು ತೋರಿಸಿದ್ದರು ಕೂಡ. ಇದಕ್ಕೆ ಸಾಕ್ಷಿಯಂತಿದೆ ಅಮುಗೆದೇವಯ್ಯನ ಒಂದು ವಚನ. 

ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?
ನೆನದ ಮಾತ್ರಕ್ಕೆ ಅಹುದೆ? ಕಾರ್ಯದಲಲ್ಲದೆ?
ಕುರುಡ ಕಾಣ ಪಥವ, ಹೆಳವ ನಡೆಯಲರಿಯ,
ಒಂದಿಲ್ಲದಿರ್ದಡೊಂದಾಗದು.
ಜ್ಞಾನವಿಲ್ಲದ ಕ್ರೀ ಜಡನು, ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು.
ಇದು ಕಾರಣ, ಸಿದ್ಧಸೋಮನಾಥಲಿಂಗವ
ಕೂಡುವ ಶರಣಂಗೆ ಎರಡೂ ಬೇಕು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-978 / ವಚನ ಸಂಖ್ಯೆ-331)

ಈ ವಚನದಲ್ಲಿ ಜ್ಞಾನ ಮತ್ತು ಕ್ರಿಯೆಗಳನ್ನು ಕರುಡ ಮತ್ತು ಹೆಳವನಿಗೆ ಸಮೀಕರಿಸುವ ಅಮುಗೆದೇವಯ್ಯನು, ಎರಡೂ ಕೂಡಿದಾಗಲೇ ಒಂದು ಕಾರ್ಯ ಸಂಪೂರ್ಣವಾಗುತ್ತದೆ ಎಂಬುದನ್ನು ದೃಷ್ಟಾಂತೀಕರಿಸುತ್ತಾನೆ. ಕುರುಡ-ಕುಂಟರು ಸಮಾಜಕ್ಕೆ ಹೊರೆ ಎಂದು ಭಾವಿಸಿದ್ದ ಕೆಲವರ ಸಂಕುಚಿತ ಮನೋಭಾವಕ್ಕೆ ಪಾಠ ಕಲಿಸುವಂತೆ, ಅವರಿಬ್ಬರನ್ನೂ ಒಂದುಗೂಡಿಸಿ, ಕುರುಡನ ಹೆಗಲ ಮೇಲೆ ಹೆಳವನನ್ನು ಕೂಡಿಸಿ, ಮುನ್ನಡೆಸಿ ಇಬ್ಬರ ಉದ್ಧಾರದ ಮಾರ್ಗವನ್ನು ತೋರಿಸಿದ ಶರಣರ ಕ್ರಮ ಅಪೂರ್ವವಾದುದು. ವಿಭಿನ್ನ ಚೇತನಗಳನ್ನು ಒಗ್ಗೂಡಿಸಿ, ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ, ಎಲ್ಲರ ಕ್ರಿಯಾಶೀಲತೆಯನ್ನೂ ಸಮಾಜಕ್ಕೆ ಉಪಯೋಗಿಸಿಕೊಳ್ಳುವ ಅನನ್ಯ ಚಿಂತನೆ ಇಲ್ಲಿರುವುದನ್ನು ಗಮನಿಸಬೇಕು. ಜೊತೆಗೆ ಅಂಗಾಂಗ ಊನತೆ ಇದ್ದವರಿಗೂ ಗೌರವದಿಂದ ಬದುಕುವ ಹಕ್ಕಿದೆ ಎಂಬುದನ್ನು ಕ್ರಿಯಾತ್ಮಕವಾಗಿ ಸಾಧಿಸಿ ತೋರಿಸಿದ ಈ ಕ್ರಮವು ಸಣ್ಣದಲ್ಲ. ಎರಡು ಊನಗಳು ಅರ್ಥಪೂರ್ಣವಾಗಿ ಒಂದಾದಾಗ ಒಂದು ಪೂರ್ಣ ಸ್ಥಿತಿ ನಿರ್ಮಾಣವಾಗುವ ಪ್ರಾಯೋಗಿಕ ಸತ್ಯವಿದು. ‘ಎರಡೂ ಬೇಕು’ (ಎಲ್ಲವೂ ಬೇಕು ಎಂಬರ್ಥ) ಎಂಬ ಶರಣರ ವೈಚಾರಿಕ ಕ್ರಿಯಾಸಿದ್ಧಾಂತವೇ ಸಮಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿತೆಂಬುದುನ್ನು ಮರೆಯುವಂತಿಲ್ಲ.

ಸಮಾಜದಲ್ಲಿ ವರ್ಣ, ವರ್ಗ ಮತ್ತು ಲಿಂಗಸಮಾನತೆ ತರುವುದು ಮಾತ್ರ ಶರಣರ ಆಶಯ ಮತ್ತು ಗುರಿಯಾಗಿರಲಿಲ್ಲ. ಅವುಗಳ ಜೊತೆಗೆ ವಿವಿಧ ಕಾರಣಗಳಿಂದಾಗಿ ನೋಯುತ್ತಿದ್ದ, ತಿರಸ್ಕೃತರಾದ ಹಾಗೂ ಅವಮಾನಕ್ಕೀಡಾಗುತ್ತಿದ್ದ ಜನರನ್ನೂ ಆ ಸ್ತಿತಿಯಿಂದ ಮೇಲೆತ್ತಿ, ಅವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅಸಮಾನತೆಯೇ ಸೃಷ್ಟಿಯ ಮೂಲ ಲಕ್ಷಣ ಎಂದು ತಿಳಿದಿದ್ದ ಮೂಲಭೂತವಾದಿಗಳಿಗೆ ಈ ಬಗೆಯ ಸಮಾನತೆಯ ಪಾಠ ಕಲಿಸಿದ್ದಲ್ಲದೆ, ಜನಸಾಮಾನ್ಯರಿಗೂ ವಾಸ್ತವದ ಬಗ್ಗೆ ಅರಿವು ಮೂಡಿಸಿದ್ದು ಹನ್ನೆರಡನೆಯ ಶತಮಾನದ ವಚನಕಾರರ ಹೆಚ್ಚುಗಾರಿಕೆ. ಈ ನೆಲೆಯಲ್ಲಿ ಗಮನಿಸಿದಾಗ, ಅಂಗವಿಕಲರಿಗಾಗಿ ಅವರು ತಮ್ಮ ವಚನಸಂವಿಧಾನದ ಮೂಲಕ ಮಿಡಿದದ್ದು, ಮತ್ತು ಅವರನ್ನೂ ಸಮಾಜದ ಪ್ರಧಾನ ನೆಲೆಗೆ ತರಲು ಪ್ರಯತ್ನಿಸಿದ್ದು ಇತಿಹಾಸದಲ್ಲೇ ಪ್ರಥಮ ದಾಖಲೆಯೆನಿಸುತ್ತದೆ. ಶರಣರು ಮಾಡಹೊರಟಿದ್ದ ಸಮಗ್ರ ಕ್ರಾಂತಿಯಲ್ಲಿ ಇದೂ ಒಂದು ಪ್ರಮುಖ ಸಾಧನೆ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು, ಆಕಾಶವಾಣಿ, ಬೆಂಗಳೂರು (ನಿ)
#303, ಎಸ್.‌ ಎಲ್.‌ ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

Loading

This Post Has 4 Comments

  1. Pramod

    It shows Dr. M M Kalaburgi’s commitment and concern and his continuous research . Handicapped ness is only in the body, their mind is perfect and they can do wonders , more than the common man. the Vachanas are created for all future generations and they are true at all times. Lord Basavanna had concern for all mankind, it shows

    1. ಶಂಕರ ಎಮ್. ಜಾಲವಾದಿ.

      ತಮ್ಮ ವೇದಿಕೆಯಲ್ಲಿ ಪಾಲ್ಗೊಂಡು, ತಮ್ಮ ಅನುಭಾವದ ಎಡೆಯನ್ನು ನಮಗೆ ತ್ರುಪ್ತಿಯಾಗುವಂತೆ ಬಡಿಸಿದ ಮೂವರೂ ಅನುಭಾವಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
      ತಾವೆಲ್ಲರೂ ಬಸವ ಸಮಿತಿ,ಬೆಂಗಳೂರು ಇವರು ಪ್ರಕಟ ಪಡಿಸಿದ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಳಿಕೊಳ್ಳುತ್ತೇನೆ.

  2. Dharmanna dhanni

    ಅರ್ಥಪೂರ್ಣ ವಿಶ್ಲೇಷಣೆ ಸರ್. ಧನ್ಯವಾದಗಳು 🙏🙏

  3. C U Bellakki

    Very interesting information and meaningful interpretation of rare vachana.Thanks for sharing such unique Vachana.

Leave a Reply