“ಅಕ್ಕನಾಗಮ್ಮನ ದೃಷ್ಟಿಯಲ್ಲಿ ಬಸವಣ್ಣ”/ಡಾ.ರಾಜೇಶ್ವರಿ ವೀ.ಶೀಲವಂತ

ಇಡೀ ಮನುಕುಲಕ್ಕೆ ಮಾನವೀಯತೆಯ ಮೌಲ್ಯಗಳ ಪಾಠವನ್ನು ನೀಡಿದ ಅಮೂಲ್ಯ ರತ್ನಗಳೇ ವಚನಗಳು. ಇಂತಹ ವಚನ ಸಾಹಿತ್ಯ ನಮಗೆಲ್ಲರಿಗೂ ಇಂದು ಲಭ್ಯವಾಗಿದೆ ಎಂದರೆ ಅದಕ್ಕೆ ಮೂಲ ಕಾರಣಿಭೂತರು ಅಕ್ಕನಾಗಮ್ಮ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಏಳೆಹೂಟಿ ಪ್ರಸಂಗದಿಂದ ಮನನೊಂದ ಮೃದುಹೃದಯಿ ಬಸವಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳಿ ಅಲ್ಲಿಯೇ ಐಕ್ಯನಾಗುತ್ತಾನೆ. ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯ ಶರಣರ ಹತ್ಯೆ ಮತ್ತು ವಚನಕಟ್ಟುಗಳ ಸುಡಲು ತೊಡಗುತ್ತದೆ. ಆಗ ಮಗನಂತೆ ಬೆಳಸಿದ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದರು ಕಲ್ಯಾಣದ ಮಹಾಮನೆಗೆ ತಾಯಿಯಂತಿದ್ದ ಅಕ್ಕನಾಗಮ್ಮ ಶರಣರ ಮತ್ತು ಶರಣರ ಮತ್ತು ವಚನಗಳ ರಕ್ಷಣೆಯ ಜವಾಬ್ದಾರಿ ಹೊರಡುತ್ತಾಳೆ.ಮಗ ಚೆನ್ನಬಸವಣ್ಣನ ನೇತೃತ್ವದಲ್ಲಿ ಸೈನ್ಯ ಪಡೆ ರಚಿಸುತ್ತಾಳೆ.ಶರಣೆಯರ ಬಳಗದ ಮುಂದಾಳತ್ವ ವಹಿಸಿ ವಚನಕಟ್ಟುಗಳನ್ನು ಹೊತ್ತು ಉಳವಿಯತ್ತ ತೆರಳುತ್ತಾಳೆ.ದಾರಿಯಲ್ಲಿ ಶರಣರ ಪ್ರಸಾದದ ಜವಾಬ್ದಾರಿ ನಿರ್ವಹಿಸುತ್ತಾಳೆ.ಉಳವಿಗೆ ತೆರಳುವಾಗ ಆಕ್ರಮಣ ಮಾಡಿದ ಬಿಜ್ಜಳನ ಸೈನ್ಯವನ್ನು ಮತ್ತು ವೈದಿಕಶಾಹಿಗಳನ್ನು ಖಡ್ಗ ಹಿಡಿದು ಹೋರಾಡಿ ಅವರ ರುಂಡಮುಂಡ ಚೆಂಡಾಡುತ್ತಾಳೆ.ಗಂಡೆದೆಯ ಗುಂಡಿಗೆಯ ಅಕ್ಕನಾಗಮ್ಮ ಒಂದು ಕೈಯಲ್ಲಿ ವಚನಕಟ್ಟುಗಳನ್ನು ಮತ್ತೊಂದು ಕೈಯಲ್ಲಿ ಖಡ್ಗವನ್ನು ಹಿಡಿದು ಹೋರಾಡಿ ವಚನ ಸಾಹಿತ್ಯದ ರಕ್ಷಣೆ ಮಾಡುತ್ತಾಳೆ. ಇಂತಹ ಧೀರ ಗುಂಡಿಗೆಯ ಅಕ್ಕನಾಗಮ್ಮ ಮಾನವೀಯತೆಯ ಸಾಕಾರಮೂರ್ತಿಯೂ ಹೌದು.ತಮ್ಮ ಬಸವಣ್ಣನಲ್ಲಿ ಅಂತಹ ಮಾನವೀಯ ಗುಣಗಳನ್ನು ತುಂಬಿ ಅವನನ್ನು ವಿಶ್ವಗುರು ವನ್ನಾಗಿಸುತ್ತಾಳೆ. ಅಣ್ಣ ಬಸವಣ್ಣ ಜಗಜ್ಯೋತಿ ಆಗಿ ಬೆಳಗುವಲ್ಲಿ, ಆ ಜ್ಯೋತಿಗೆ ತೈಲವಾಗಿ ತನ್ನನ್ನೇ ಸಮರ್ಪಿಸಿಕೊಂಡು, ಆತನಲ್ಲಿ ಅಂತಹ ಮಾನವೀಯತೆಯ ಗುಣಗಳನ್ನು ತುಂಬಿ ಆತನಿಗೆ ಮಾತೃತ್ವ ಮತ್ತು ಕರ್ತತ್ವ ಶಕ್ತಿಯಾಗಿ ನಿಂತ ಅಕ್ಕನಾಗಮ್ಮನ ಪಾತ್ರ ಬಹುಮುಖ್ಯ.

೧೨ ನೆಯ ಶತಮಾನದಲ್ಲಿ ಅಣ್ಣ ಸ್ಥಾಪಿಸಲು ಹೊರಟ ಸಮಾನತೆಯ ಸಮಾಜದ ಮುಖ್ಯ ಅಂಶಗಳಲ್ಲಿ ಲಿಂಗ ಸಮಾನತೆಯು ಒಂದು.ಸಮಾಜದಲ್ಲಿದ್ದ ಲಿಂಗ ಅಸಮಾನತೆಯೇ ಅಣ್ಣನ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ್ದು ಎಂಬುದರಲ್ಲಿ ಎರಡು ಮಾತಿಲ್ಲ.ಕಮ್ಮೆಕುಲ ಬ್ರಾಹ್ಮಣರ ಪದ್ದತಿಯಂತೆ ಬಸವಣ್ಣನಿಗೆ ಉಪನಯನ ಮಾಡಲು ಹೊರಟಾಗ ಬಾಲಬಸವ ತನ್ನೊಂದಿಗೆ ತನ್ನ ಅಕ್ಕನಿಗೂ ಉಪನಯನ ಮಾಡಬೇಕೆಂದು ಹೇಳುತ್ತಾನೆ.ಆದರೆ ಸ್ತ್ರೀಯರಿಗೆ ಉಪನಯನ ಮಾಡುವದು ನಮ್ಮ ಸಂಸ್ಕೃತಿ ಅಲ್ಲ ಎಂದು ಅವರು ನಿರಾಕರಿಸಿದಾಗ ಅಕ್ಕನಿಗಿಲ್ಲದ ಉಪನಯನ ನನಗು ಬೇಡ ಎಂದು ಉಪನಯನ ತಿರಸ್ಕರಿಸಿದ ಬಾಲಕ ಅಂದೇ ಮನೆ ಬಿಟ್ಟು ಹೊರಡುತ್ತಾನೆ.ಆತ ಮುಂದೆ ಕಟ್ಟಲು ಹೊರಟ ಸಮಾನತೆಯ ಸಮಾಜಕ್ಕೆ ಈ ಘಟನೆ ಮೂಲ ಕಾರಣವಾಗುತ್ತದೆ. ಆ ಘಟನೆ ನಡೆಯಲು ಮುಖ್ಯ ಕಾರಣಾದವಳೇ ಬಾಲಬಸವನಿಗೆ ಮಾತೃಸ್ವರೂಪಿಣಿ ಆಗಿದ್ದ ಪ್ರೀತಿಯ ಅಕ್ಕ ಅಕ್ಕನಾಗಮ್ಮ.



ಅಕ್ಕನಾಗಮ್ಮ ಬಾಗೇವಾಡಿಯ ಮಾದರಸ ಮಾದಲಾಂಬಿಕೆಯರ ಹಿರಿಯಮಗಳು.ಹುಟ್ಟಿದ್ದು ತಾಯಿಯ ತವರುಮನೆ ಇಂಗಳೇಶ್ವರ ದಲ್ಲಿ. ಪತಿ ಶಿವಸ್ವಾಮಿ. ಮಗ ಚೆನ್ನಬಸವಣ್ಣ. ತಮ್ಮ ಬಸವಣ್ಣ ತನಗೆ ಉಪನಯನ ಮಾಡುವಾಗ ಅಕ್ಕನಿಗೂ ಮಾಡಬೇಕೆಂದು ಹಠ ಹಿಡಿದಾಗ ಬ್ರಾಹ್ಮಣ ಸಮಾಜ ಅದನ್ನು ನಿರಾಕರಿಸಿದಾಗ ಬಸವಣ್ಣ ಮನೆ ಬಿಟ್ಟು ಹೊರಟು ಸಂಗಮಕ್ಕೆ ತೆರಳುತ್ತಾನೆ.ಅಲ್ಲಿಂದ ಕಲ್ಯಾಣಕ್ಕೆ ತೆರಳುತ್ತಾನೆ.ಆಗ ಅಣ್ಣನಿಗೆ ಜೊತೆಯಾದವಳು ಅಕ್ಕನಾಗಮ್ಮ.

ಅಕ್ಕನಾಗಮ್ಮ ಕಲ್ಯಾಣದಲ್ಲಿ ಅಣ್ಣನ ಜೊತೆಗೆ ನೆಲಸಿ ಆತನ ಕ್ರಾಂತಿಕಾರಕ ವಿಚಾರಗಳಿಗೆ ನೀರೆರೆದು ಪೋಷಿಸುತ್ತಾಳೆ.ಅಣ್ಣ ಶರಣರ ವಿಚಾರ ಮಂಥನಕ್ಕಾಗಿ ಅನುಭವ ಮಂಟಪ ಸ್ಥಾಪಿಸಿದಾಗ ಅನುಭವ ಮಂಟಪದಲ್ಲಿ ಇತರ ಶರಣೆಯರೊಂದಿಗೆ ಉತ್ಸಾಹದಿಂದ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸುತ್ತಾಳೆ.ಅಣ್ಣನ ಮಹಾಮನೆಯ ದಾಸೋಹ ಕಾರ್ಯದ ಜವಾಬ್ದಾರಿ ಹೊತ್ತು ಮಹಾಮನೆಯ ಅನ್ನಪೂರ್ಣೆಯಾಗಿ ಮುತುವರ್ಜಿಯಿಂದ ನಿರ್ವಹಿಸುತ್ತಾಳೆ.ಕಲ್ಯಾಣದ ಶರಣರಿಗೆ ಅಕ್ಕನಾಗಿ ಪ್ರೀತಿಯನ್ನು ಧಾರೆಯೆರೆದು,ಅವರ ಕಾಳಜಿ ಮಾಡುತ್ತಾಳೆ. ತನ್ನ ಪೂರ್ವಾರ್ಧದ ಜೀವನದಲ್ಲಿ ಸೋದರ ಬಸವಣ್ಣನನ್ನು ಬೆಳಸಿದರೆ, ತನ್ನ ಉತ್ತರಾರ್ಧದ ಜೀವನದಲ್ಲಿ ಮಗ ಚೆನ್ನಬಸವಣ್ಣನನ್ನು ಬೆಳಸುತ್ತಾಳೆ.

ವಚನ ರಕ್ಷಣೆಯಲ್ಲಿಯೂ ಅಕ್ಕನಾಗಮ್ಮ ಮಾಡಿದ ಸೇವೆ ಅನನ್ಯ. ಕಲ್ಯಾಣದಲ್ಲಿ ಕ್ರಾಂತಿ ಏರ್ಪಟ್ಟು ಅದರಿಂದ ಮನನೊಂದ ಅಣ್ಣ ಕೂಡಲಸಂಗಮಕ್ಕೆ ತೆರಳಿ ಅಲ್ಲಿಯೇ ಐಕ್ಯನಾಗುತ್ತಾನೆ.ಮಗನಂತೆ ಬೆಳಸಿದ ತಮ್ಮನ ಅಗಲಿಕೆಯಿಂದ ಅಕ್ಕನಾಗಮ್ಮ ಪರಿತಪಿಸುತ್ತಾಳೆ.ತಮ್ಮನಿಲ್ಲದ ಕಲ್ಯಾಣವೇ ಆಕೆಗೆ ಬರಿದೆನಿಸುತ್ತದೆ.ಆದರೆ ಕೇವಲ ಪರಿತಪಿಸುತ್ತಾ ಕುಳಿತರೆ ಆಗದೆಂದು ಮನಗಂಡ ಅಕ್ಕನಾಗಮ್ಮ ಕಲ್ಯಾಣದ ಶರಣರಲ್ಲಿ ಹೊಸ ಶಕ್ತಿ ತುಂಬಲು ಮುಂದಾಗುತ್ತಾಳೆ.

ಆಗ ವಚನ ಸಂಪತ್ತಿನ ರಕ್ಷಣೆಗಾಗಿ ಚೆನ್ನಬಸವಣ್ಣ ಗಣಾಚಾರ ಪಂಥದ ಶರಣರನ್ನೆಲ್ಲ ಒಗ್ಗೂಡಿಸಿ ಸೈನ್ಯ ತುಕಡಿ ಕಟ್ಟಿ ವಚನಗಳ ರಕ್ಷಣೆಗೆ ಮುಂದಾಗುತ್ತಾನೆ. ಆಗ ಅಕ್ಕನಾಗಮ್ಮ ತನ್ನ ಹಿರಿತನದಲ್ಲಿ ಶರಣೆಯರನ್ನೆಲ್ಲ ಒಗ್ಗೂಡಿಸಿ ಯುದ್ಧಮುಖವನ್ನು ಹಿಂಬಾಲಿಸುತ್ತಾಳೆ.ಗಂಡೆದೆ ಗುಂಡಿಗೆಯ ನಾಗಮ್ಮ ಖಡ್ಗ ಹಿಡಿದು ಬಿಜ್ಜಳನ ರಾಜಸೈನಿಕರನ್ನು ಮತ್ತು ವೈದಿಕಶಾಹಿಗಳನ್ನು ಚೆಂಡಾಡುತ್ತಾಳೆ.ಯುದ್ಧದಲ್ಲಿ ಸೆರೆಸಿಕ್ಕು ಮೂರ್ಛೆ ಹೋದ ಬಿಜ್ಜಳನ ಅಳಿಯನಿಗೆ ಪ್ರಾಣದಾನ ಮಾಡುತ್ತಾಳೆ.ವೀರಗತ್ತಿ ಹಿಡಿದು ವಚನ ಸಾಹಿತ್ಯದ ರಕ್ಷಣೆಗಾಗಿ ತನ್ನ ಬದುಕನ್ನೆ ಮುಡಿಪಾಗಿಡುತ್ತಾಳೆ. ವಚನ ರಕ್ಷಣೆಗೆ ನಿಂತ ಶರಣರ ಪ್ರಸಾದದ ವ್ಯವಸ್ಥೆ ಮಾಡುತ್ತಾಳೆ.ಶರಣರ ಪಡೆಯೊಂದಿಗೆ ಉಳವಿಗೆ ತೆರಳುತ್ತಾಳೆ. ಉಳವಿಗೆ ಬಂದ ಸ್ವಲ್ಪ ದಿನದಲ್ಲಿ ಮಗ ಚೆನ್ನಬಸವಣ್ಣ ಲಿಂಗೈಕ್ಯನಾಗುತ್ತಾನೆ.ಆತನ ಐಕ್ಯದ ನಂತರ ಶರಣರ ರಕ್ಷಣೆಯ ಜವಾಬ್ದಾರಿ ಹೊತ್ತು ಶರಣ ನೂಲಿಯ ಚಂದಯ್ಯ ನೊಂದಿಗೆ ಅಕ್ಕನಾಗಮ್ಮ ತುಂಗಭದ್ರಾ ನದಿಯ ತೀರಪ್ರದೇಶದಕ್ಕೆ ಬರುತ್ತಾಳೆ.ಕೊನೆಗೆ ಚಿಕ್ಕಮಗಳೂರು ಜಿಲ್ಲೆಯ ಎಣ್ಣೆಹೊಳೆ ತೀರದ ತರಿಕೇರಿಯಲ್ಲಿ ಅಕ್ಕನಾಗಮ್ಮ ಬಯಲಿನಲ್ಲಿ ಬಯಲಾಗುತ್ತಾಳೆ.

ಅಣ್ಣ ಬಸವಣ್ಣನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅಕ್ಕನಾಗಮ್ಮ ಇತರ ಶರಣರಂತೆ ವಚನಗಳ ರಚನೆಯನ್ನು ಮಾಡುತ್ತಾಳೆ. ಆಕೆ ಸಹ ಇತರ ಶರಣರಂತೆ ಅನೇಕ ವಚನಗಳನ್ನು ರಚಿಸಿರುವ ಸಾಧ್ಯತೆ ಇದ್ದು ನಮಗೆ ಉಪಲಬ್ಧ ಆಗಿರುವ ವಚನಗಳು ಮಾತ್ರ ಕೇವಲ ೧೫. “ಬಸವಣ್ಣಪ್ರಿಯ ಚೆನ್ನಸಂಗಯ್ಯ ” ಎಂಬುದು ಅಕ್ಕನಾಗಮ್ಮನ ವಚನಗಳ ಅಂಕಿತ.ಆಕೆಯ ವಚನಗಳಲ್ಲಿ ಅಣ್ಣನ ಸ್ತುತಿ ಮಾಡಿದ ವಚನಗಳ ಸಂಖ್ಯೆಯೇ ಅಧಿಕ. ಜೊತೆಗೆ ತನ್ನ ವಚನಗಳಲ್ಲಿ ತನ್ನ ಬದುಕಿನಲ್ಲಿ ಬಂದೆರಗಿದ ಏಡರು ತೊಡರುಗಳು ಅವನ್ನು ಆಕೆ ಧೈರ್ಯದಿಂದ ಎದುರಿಸಿದ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ.

ಯುಗಪ್ರವರ್ತಕನಾದ ಬಸವಣ್ಣನನ್ನು ಕುರಿತು ಸಮಕಾಲೀನ ಬಹುತೇಕ ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅಕ್ಕನಾಗಮ್ಮನು ಹೊರತಲ್ಲ.ಅಕ್ಕನಾಗಮ್ಮನಿಗೆ ಬಸವಣ್ಣ ಕೇವಲ ತಮ್ಮನಲ್ಲ ಆತ ಆಕೆಯ ‘ ಮಾನಸಪುತ್ರ. ‘ ಹೆಣ್ಣು ಹುಟ್ಟಿನಿಂದಲೇ ತಾಯಿ’ ಎಂಬ ಮಾತಿನಂತೆ ಅಕ್ಕನಾಗಮ್ಮ ಬಾಲ್ಯದಿಂದಲೂ ಅಣ್ಣನಿಗೆ ತಾಯಿ ಸ್ವರೂಪದಲ್ಲಿ ಇದ್ದವಳು.ಅವಳು ಕೊಟ್ಟ ಪ್ರೀತಿಯ ಕಾರಣಕ್ಕಾಗಿಯೇ ತನಗೆ ಉಪನಯನ ಮಾಡುವಾಗ ಬಾಲಬಸವ ತನ್ನೊಂದಿಗೆ ಅಕ್ಕಿನಿಗು ಮಾಡಿ ಎಂದು ಹಠಹಿಡಿದು ಮನೆಬಿಟ್ಟ.ತಮ್ಮನ ಮೇಲಿನ ಪ್ರೀತಿಯಿಂದ ತಮ್ಮನೊಂದಿಗೆ ಅಕ್ಕನಾಗಮ್ಮನು ಆಗ ಕಲ್ಯಾಣಕ್ಕೆ ಆಗಮಿಸುತ್ತಾಳೆ.ಅಕ್ಕನಾಗಮ್ಮನಿಗೆ ಚೆನ್ನಬಸವಣ್ಣ ಹೊಟ್ಟೆಯಲ್ಲಿ ಹುಟ್ಟಿದ ಮಗನಾದರೂ ಆಕೆಗೆ ತಮ್ಮ ಬಸವಣ್ಣನಲ್ಲಿ ಮಾತೃಸದೃಶ್ಯವಾದ ಅವ್ಯಾಜಪ್ರೇಮ.ಅದಕ್ಕಾಗಿಯೇ ಆಕೆ ಅಣ್ಣನನ್ನು ಕುರಿತು ಮಾತೃಪ್ರೇಮದಿಂದ ಹೇಳುತ್ತಾಳೆ.

ಬಸವನೇ ಮುಖಸೆಜ್ಜೆ,ಬಸವನೇ ಅಮಳೋಕ್ಯ
ಬಸವನ ನಾನೆತ್ತಿ ಮುದ್ದಾಡಿಸವೆನು
ಬಸವ ಸಂಗನಬಸವಿದೇವಾ ಜಯತು
ಬಸವಾ ಸಂಗನಬಸವಲಿಂಗಾ ಜಯತು
ಬಸವಗೂ ಎನಗೂ ಭಾವಭೇಧವಿಲ್ಲ
ಬಸವಗೂ ಎನಗೂ ರಾಸಿಕೂಟವುಂಟು ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
ಬಸವನ ಬೆಸಲಾದ ಬಾಣತಿ ನಾನಯ್ಯ ಬಸವಾ ಬಸವಾ ಬಸವಾ
(ಸ.ವ.ಸಂ-೫,ವ.ಸಂ-೭೧೨,ಪು.ಸಂ- ೨೩೩)


ಕಕ್ಷೆ ,ಕರಸ್ಥಲ,ಉತ್ತಮಾಂಗ,ಉರಸೆಜ್ಜೆ,ಮುಖಸೆಜ್ಜೆ,ಅಮಳೋಕ್ಯ ಇವು ಇಷ್ಟಲಿಂಗವನ್ನು ಧರಿಸುವ ಶ್ರೇಷ್ಠ ಸ್ಥಳಗಳು.ಅಕ್ಕನಾಗಮ್ಮನ ದೃಷ್ಟಿಯಲ್ಲಿ ಅಂತಹ ಶ್ರೇಷ್ಠತೆ ಇರುವದು ಬಸವಣ್ಣನಲ್ಲಿ.ಅಂತಹ ಶ್ರೇಷ್ಠನನ್ನು ನಾನು ಎತ್ತಿ ಮುದ್ದಾಡುವೆ.ಅವನಿಗೂ ನನಗು ಯಾವುದೇ ಬೇಧವಿಲ್ಲ.ಅವನಿಗೂ ನನಗು ಒಂದು ಹೊಂದಾಣಿಕೆಯ ಋಣವಿದೆ.ಆತನನ್ನು ಹೆತ್ತು ನಾನು ಬಾಣಂತಿಯಾದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.ಆತನನ್ನು ಹೆರದಿದ್ದರು ಹೆತ್ತು ತಾಯಿಯಾದೆ ಎಂಬ ಅವಳ ಮಾತು ಬಸವಣ್ಣನ ಮೇಲೆ ಅವಳಿಗಿದ್ದ ಅಗಾಧವಾದ ಪ್ರೀತಿಯನ್ನು ವ್ಯಕಪಡಿಸುತ್ತದೆ. ಹಿರಿಯಕ್ಕ ಹೆತ್ತತಾಯಿ ಬೇರೆಯಲ್ಲ ಎಂಬ ಮಾತು ಇಲ್ಲಿ ಪೂರ್ಣ ಸತ್ಯವಾಗಿದ.

ಅಕ್ಕನಾಗಮ್ಮನಿಗೆ ಅಣ್ಣ ಮಗನು ಹೌದು, ತಂದೆಯು ಹೌದು.ಅಷ್ಟೇ ಅಲ್ಲ ಆತ ಆಕೆಗೆ ಗುರುವು ಹೌದು.ತಂದೆ ಗುರುವನ್ನು ತೋರಿಸಿದರೆ,ಗುರು ಭವಬಂಧನ ಕಳೆಯುವ ದಾರಿಯನ್ನು ತೋರಿಸುತ್ತಾನೆ.ಅಣ್ಣನ ಪಂಚಸದೃಶ್ಯ ಶಕ್ತಿಗಳಿಂದ ನಾನು ಪಂಚಸೂತಕಗಳನ್ನು ಕಳೆದುಕೊಂಡು ನಾನು ಪರಿಶುದ್ಧಳಾದೆನೆಂದು ಅಕ್ಕನಾಗಮ್ಮ ಹೇಳಿಕೊಳ್ಳುತ್ತಾಳೆ.
ಎನ್ನ ಕುಲಸೂತಕವ ಕಳೆದಾತ ಬಸವಣ್ಣ ಎನ್ನ ಛಲಸೂತಕವ ಕಳೆದಾತ ಬಸವಣ್ಣ
ಎನ್ನ ತನುಸೂತಕವ ಕಳೆದಾತ ಬಸವಣ್ಣ
ಎನ್ನ ಮನಸೂತಕವ ಕಳೆದಾತ ಬಸವಣ್ಣ
ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ
ಎನ್ನ ಭಾವಸೂತಕವ ಕಳೆದಾತ ಬಸವಣ್ಣ
ಎನ್ನ ಅರುಹುಮರಹಿನ ಸಂದುಸಂಶಯವ ಬಿಡಿಸಿದಾತ ಬಸವಣ್ಣ
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ನಿಜವ ನಿರಯವ ಬಾಗಿಲ ತೋರಿದಾತ ಬಸವಣ್ಣ
ಬಸವಣ್ಣಪ್ರಿಯ ಚೆನ್ನಸಂಗನ ಹೃದಯದಲ್ಲಿ ನಿಜನಿವಾಸಿಯಾಗಿ ಇರಿಸಿದ ಎನ್ನ ತಂದೆ ಸಂಗನಬಸವಣ್ಣ
(ಸ.ವ.ಸಂ-೫,ವ.ಸಂ-೭೦೭,ಪು.ಸಂ-೨೩೧)

ನನ್ನೊಳಗಿನ ಕುಲದ ಬಗೆಗಿನ ಜಂಜಾಟಗಳನ್ನು,ನನ್ನಲ್ಲಿನ ಅಹಂಮಿಕೆಯನ್ನು,ಹೆಣ್ಣಾದ ಕಾರಣಕ್ಕೆ ಅಂಟಿದ ತನುವಿನ ಸೂತಕಗಳನ್ನು, ಮನೋವೈಕಲ್ಯಗಳನ್ನು ,ನನ್ನ ಭಾವನೆಗಳಲ್ಲಿರುವ ಕಲ್ಮಶಗಳನ್ನೆಲ್ಲ ತನ್ನ ವೈಚಾರಿಕ ಪ್ರಜ್ಞೆಯಿಂದ ಕಳೆದು ನನ್ನಲ್ಲಿರುವ ಸಂಶಯಗಳನ್ನೆಲ್ಲ ನಿವಾರಿಸಿದಾತ.ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ನಮ್ಮಿಬ್ಬರ ನಡುವೆ ಅಬೇಧ್ಯವನ್ನು ಕಲ್ಪಿಸಿದಾತ.ನಿಜ ನರಕ ಯಾವುದೆಂದು ಅರುಹಿದಾತ.ನನ್ನ ಆತ್ಮಲಿಂಗದಲ್ಲಿ ನನ್ನ ಮನಸ್ಸು ಧೃಡವಾಗಿ ನೆಲೆಗೊಳ್ಳುವಂತೆ ಮಾಡಿದವನು ನನ್ನ ತಂದೆ ಬಸವಣ್ಣ ಎಂದು ತನ್ನ ತಮ್ಮನಲ್ಲಿ ತಂದೆ ಗುರುವನ್ನು ಕಾಣುತ್ತಾಳೆ ಅಕ್ಕನಾಗಮ್ಮ.
ತನ್ನಲ್ಲಿರುವ ಇಂತಹ ಪಂಚಸೂತಕಗಳನ್ನು ಕಳೆದು ತಾನು ಲಿಂಗಾಂಗ ಸಾಮರಸ್ಯ ಸಾಧಿಸಲು ಕಾರಣನಾದವ ಬಸವಣ್ಣ. ಹಾಗಾಗಿ ಆಕೆ ತನ್ನ ಸರ್ವಸ್ವವನ್ನೂ ಆತನಿಗೆ ಅರ್ಪಿಸುತ್ತಾಳೆ.

ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತವಾದವು
ಎನ್ನ ಅವಧಾನ ಅನುಭಾವ ಬಸವಣ್ಣಂಗರ್ಪಿತವಾದವು
ಎನ್ನ ಸರ್ವಾಚಾರಸಂಪತ್ತು ಬಸವಣ್ಣನಲ್ಲಿ ವೇದ್ಯವಾಯಿತ್ತು
ಬಸವಣ್ಣಪ್ರಿಯ ಕೂಡಲ ಚೆನ್ನಸಂಗಮದೇವರಲ್ಲಿ ನಿಜವಾಸಿಯಾಗಿರ್ದೆನು
(ಸ.ವ.ಸಂ-೫,ವ.ಸಂ- ೭೦೬,ಪು.ಸಂ-೨೩೧ )

ಹೀಗೆ ಅಕ್ಕನಾಗಮ್ಮ ತನ್ನ ಆಚಾರ, ವಿಚಾರ, ಅವಧಾನ,ಅನುಭಾವ ಸರ್ವಾಚಾರ ಸಂಪತ್ತನ್ನು ತನ್ನ ಗುರುವಾದ ಬಸವಣ್ಣನಗೆ ಅರ್ಪಿಸುತ್ತಾಳೆ.
ಇನ್ನೂ ಅಣ್ಣ ಈ ಭೂವಿಯಲ್ಲಿ ಮಾಡಿದ ಸಾಧನೆ ಅಮೋಘವಾದುದು.ಭೂಮಿಯ ಮೇಲೆ ಭಕ್ತಿಯ ಬೆಳೆಯನ್ನು ಬಿತ್ತಿದ ಅಣ್ಣನ ಕಾರ್ಯವನ್ನು ಆಕೆಗೆ ಎಷ್ಟು ಹೊಗಳಿದರು ಸಾಲದು.

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು
ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ
ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು
ಬಸವ ಮಾಡಿದಡಾಯ್ತು ಭಕ್ತ ಭಕ್ತರಲ್ಲಿ ಸಮಭಾವ
ಎನ್ನ ಕಂಗಳೊಳಗಿಂಬಾದ ಬಸವ
ಎನ್ನ ಮನ ಭಾವಂಗಳೊಳಗಾದ ಬಸವ
ಎನ್ನಂತರಂಗ ತುಂಬಿ ನಿಂದಾತ ಬಸವ
ಹೊರಗೆ ಗುರುಬಸವನ ಕೀರುತಿ
ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ
ಬಸವಾ ಬಸವಾ ಜಯತು
ಗುರುಸಂಗನಬಸವಾ ಜಯತು
(ಸ.ವ.ಸಂ-೫,ವ.ಸಂ-೭೧೩,ಪು.ಸಂ-೨೩೩)


ಬಸವಣ್ಣ ಭೂಮಿಯ ಮೇಲೆ ಭಕ್ತಿಯ ಬೆಳಕನ್ನು ಹರಡಿಸಿದವ.ಗುರು ಲಿಂಗ ಜಂಗಮದ ಮಹತ್ವವನ್ನು ತಿಳಿಸಿ, ಅವುಗಳಿಗೆ ಪೂಜ್ಯನೀಯ ಸ್ಥಾನ ಕಲ್ಪಿಸಿದವ.ಶರಣರು ಲಿಂಗಾಂಗ ಸಾಮರಸ್ಯವನ್ನು ಸಾಧಿಸಲು ಮಾರ್ಗ ತೋರಿದವ. ಶರಣರಲ್ಲಿ ವರ್ಗ,ವರ್ಣ,ಲಿಂಗ, ಜಾತಿ ಬೇಧವನ್ನು ತೊರೆದು ಸಮಾನತೆ ತಂದವ.ನನ್ನ ಕಣ್ಣು, ಮನಸ್ಸು, ಅಂತರಂಗದಲ್ಲಿ ಆತನೆ ತುಂಬಿದ್ದಾನೆ.ಹೊರಗೆ ಆತನ ಕೀರ್ತಿ ತುಂಬಿದ್ದರೆ ಒಳಗೆ ಆತನ ಮೂರ್ತಿ ತುಂಬಿದೆ.ಅಣ್ಣ ಸಂಪೂರ್ಣವಾಗಿ ನನ್ನನ್ನು‌ ಆವರಿಸಿದ್ದಾನೆ ಎಂದು ಆಕೆ ತನ್ನ ಮೇಲಾದ ಅಣ್ಣನ ಪ್ರಭಾವವನ್ನು ತಿಳಿಸುತ್ತಾಳೆ. ಅಣ್ಣ ಜಗತ್ತಿಗೆ ಕೊಟ್ಟ ಕೊಡುಗೆಯನ್ನು ಸವಿಸ್ತಾರವಾಗಿ ವಿವರಿಸುತ್ತಾಳೆ.

ತನ್ನ ಸರ್ವಸ್ವವೂ ಬಸವಣ್ಣನೆಂದು ಭಾವಿಸಿದ ಅಕ್ಕನಾಗಮ್ಮನಿಗೆ ಕಲ್ಯಾಣ ಕ್ರಾಂತಿಯಿಂದ ಮನನೊಂದ ಅಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳಿದಾತ ಅಲ್ಲಿಯೇ ಐಕ್ಯನಾದನೆಂಬ ಸುದ್ದಿ ಬರಸಿಡಿಲಿನಂತೆ ಬಂದೆರಗುತ್ತದೆ.ಆಗ ಆಕೆ ಶೋಕಾರ್ತಳಾಗಿ ಪರಿತಪಿಸುತ್ತಾಳೆ.

ಬಸವಣ್ಣಾ ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ
ಅಯ್ಯಾ ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ,ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ
ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯಾ
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ
ಎನ್ನನೊಯ್ಯದೆ ಹೋದೆಯಲ್ಲಾ,ಪಂಚಪರುಷಮೂರ್ತಿ ಬಸವಣ್ಣಾ
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ
(ಸ.ವ.ಸಂ- ೫,ವ.ಸಂ- ೭೧೧,ಪು.ಸಂ- ೨೩೨)


ನೀನು ಈ ಭೂಮಿಯ ಮೇಲೆ ಬಂದಾಗಿನಿಂದ ಸ್ವರ್ಗ ನರಕ ಪಾತಾಳ ಎನ್ನದೆ ದಿಕ್ಕುದಿಕ್ಕುಗಳಲ್ಲಿ ಭಕ್ತಿಯ ಬೆಳೆ ಹಬ್ಬಿತು.ನಿಮ್ಮ ಭಕ್ತಿಯ ಮಹತ್ವವನ್ನು ಅರಿತವರಾರು.ಶಿವನು ಭೂಮಿಯ ಮೇಲೆ ನಿನಗೆ ವಹಿಸಿದ ಜವಾಬ್ದಾರಿ ಮುಗಿಯಿತೆಂದು ನೀನು ಲಿಂಗೈಕ್ಯವಾದೊಡೆ ನಿನ್ನೊಂದಿಗೆ ಭಕ್ತಿ, ಸದಾಚಾರಗಳೆಲ್ಲವೂ ಹೋದವು.ಈ ಕಲ್ಯಾಣದ ಕ್ರಾಂತಿಯಲ್ಲಿ ಅಸಂಖ್ಯಾತ ಮಹಾಗಣಂಗಳು ಲಿಂಗೈಕರಾದರು.ನೀನು ಕಟ್ಟಿದ ಮಹಾಮನೆಯು ನೀನಿಲ್ಲದೆ ಈಗ ಶೂನ್ಯವಾಗಿದೆ.ಇಷ್ಟೆಲ್ಲಾ ಮಹಾಗಣಂಗಳು ನಿನ್ನನ್ನು ಹಿಂಬಾಸಿದರು. ಆದರೆ ನೀನು ನನ್ನ ಬಿಟ್ಟು ಹೋದೆಯಲ್ಲಾ.ಭೂಮಿಯ ಮೇಲೆ ಇಷ್ಟೆಲ್ಲಾ ಸತ್ಕಾರ್ಯ ಮಾಡಿದ ನೀನು ನಿನ್ನ ಅಂತರಾತ್ಮದ ಲಿಂಗದಲ್ಲಿ ಬೆರೆತು ಹೋದೆಯಲ್ಲಾ ಎಂದು ತಾಯಿ ಕಣ್ಣಿರುಗರೆಯುತ್ತಾಳೆ.
ತನ್ನ ಮುಂದೆ ತನ್ನ ಮಕ್ಕಳು ಸತ್ತಾಗ ತಾಯಿ ಹೇಗೆ ಪರಿತಪಿಸುತ್ತಾಳೊ ಹಾಗೆ ತಮ್ಮನನ್ನು ಕಳೆದುಕೊಂಡು ಆರ್ತನಾದಗೈಯುತ್ತಾಳೆ.” ಎನ್ನನೊಯ್ಯದೆ ಹೋದೆಯಲ್ಲಾ ” ಎಂಬ ಆಕೆಯ ಪರಿತಪಸುವ ರೀತಿ ಮನಕಲಕಿ ಓದುಗರ ಕಣ್ಣಲ್ಲಿ ಅಶ್ರುಧಾರೆ ಹರಿಸುತ್ತದೆ
.ಸರ್ವಸ್ವವೂ ಆಗಿದ್ದ ನಿನ್ನ ಕಳೆದುಕೊಂಡು ನನ್ನ ಪಯಣ ಎತ್ತ ಎಂಬ ಶೂನ್ಯ ಭಾವನೆ ಅವಳಲ್ಲಿ ತುಂಬಿ ಅವಳ ಶೋಕ ಸಾಗರೋಪಾದಿಯಲ್ಲಿ ಹರಿಯುತ್ತದೆ.ಆಕೆ ಅಣ್ಣನನ್ನು ಮಗನಿಗಿಂತ ಹೆಚ್ಚಾಗಿ ಭಾವಿಸಿದ್ದಳು ಎಂಬುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇರಾವುದಿಲ್ಲ.
ಹೀಗೆ ಪುತ್ರ ಮರಣದ ಶೋಕ ಅನುಭವಿಸುತ್ತಿರುವ ತಾಯಿಗೆ ಅದು ಕೇವಲ ಕಣ್ಣೀರು ಹಾಕುತ್ತಾ ಕೂಡುವ ಹೊತ್ತು ಆಗಿರಲಿಲ್ಲ. ಶರಣರಿಂದ ರಚನೆಗೊಂಡ ವಚನಗಳನ್ನು, ಶರಣರನ್ನು ರಕ್ಷಿಸುವ ಹೊಣೆ ಅವಳ ಹೆಗಲ ಮೇಲಿತ್ತು. ಹಾಗಾಗಿ ಮುಂದಿನ ಕಾರ್ಯಕ್ಕೆ ಆತನೇ ಮಾರ್ಗತೋರುವನೆಂದು ಭರವಸೆಯನ್ನು ಇಟ್ಟುಕೊಂಡು ಸಜ್ಜಾಗುತ್ತಾಳೆ ಅಕ್ಕನಾಗಮ್ಮ.

ಆಚಾರವೆಂಬುದು ಅಗೋಚರ ನೋಡಯ್ಯಾ,ಅರಿಗೆಯೂ ಸಾಧ್ಯವಿಲ್ಲ
ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು
ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ
ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ
ಹಾದಿಯನೆಲ್ಲರಿಗೆ ತೋರಿದ
ಶಿವಾಚಾರದ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು
ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ
ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ
ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ
ನಾನು ಹಿಂದುಳಿದವಳೆಂದು ಮುಂದಣ ಗತಿಯ ತೋರಿ
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ
ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು
(ಸ.ವ.ಸಂ-೫,ವ.ಸಂ- ೭೦೫_ಪು.ಸಂ-೨೩೦)


ಆಚಾರ ಎಂಬುದು ಅಗೋಚರವಾದ್ದು.ಈ ಭೂಮಿಯ ಮೇಲೆ ಸದಾಚಾರವನ್ನು ಬಿತ್ತಲು ಬಂದ ನೀನು ಎಲ್ಲರಿಗೂ ಭಕ್ತಿಸ್ಥಲವನ್ನು ತೋರಿಸಿದೆ.ಶರಣರಿಗೆಲ್ಲ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ದಾಸೋಹದ ಮಹತ್ವವನ್ನು ಅರುಹಿದೆ.ಶಿವಾಚಾರದ ಬೆಳವಣಿಗೆಯನ್ನು ಬಿಜ್ಜಳ ಸಹಿಸದಾದಾಗ ಅವನು ಶಿವಾಚಾರವನ್ನು ಒಪ್ಪುವಂತೆ ಮಾಡಿದೆ.ನೀನು ಭೂಮಿಯ ಮೇಲೆ ನಿರ್ವಹಿಸಬೇಕಾದ ಕರ್ತವ್ಯ ಮುಗಿಯಿತೆಂದು ಲಿಂಗೈಕ್ಯವಾದೆ.ಲೋಕದ ನೀತಿಯನ್ನು ತಿಳಿಸಿಕೊಟ್ಟೆ.ನಾನು ಹಿಂದುಳಿದವಳೆಂದು ಮುಂದೆ ನಾನು ಮುಂದೆ ಮಾಡಬೇಕಾದ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದೆ.ನೀನು ತೋರಿದ ಹಾದಿಯಲ್ಲಿಯೇ ನಡೆಯುತ್ತೆನೆ ತಂದೆ ಎನ್ನುತ್ತಾಳೆ.

ಅಣ್ಣ ಶರಣರ ಮೇಲಿಟ್ಟ ಪ್ರೀತಿ, ವಚನಗಳ ಮೇಲಿಟ್ಟ ಗೌರವ ಅರಿತಿದ್ದ ಅಕ್ಕನಾಗಮ್ಮ ಅಣ್ಣನ ನಂತರ ರಕ್ಷಣೆಯ ಜವಾಬ್ದಾರಿ ನನ್ನದೆಂದು ಭಾವಿಸಿ ಅದಕ್ಕಾಗಿ ದುಃಖ ಮರೆತು ಸಜ್ಜಾಗುತ್ತಾಳೆ.ಶರಣರ ಸೈನ್ಯ ಕಟ್ಟಿ ವಚನಗಳ ರಕ್ಷಣೆ ಮಾಡುತ್ತಾಳೆ.
ಅಣ್ಣನ ಸಮಕಾಲೀನ ವಚನಕಾರರೆಲ್ಲ ಅಣ್ಣನನ್ನು ಸ್ತುತಿಸುತ್ತಾರೆ.ಅವನ ಕಾರ್ಯವನ್ನು ಕೊಂಡಾಡುತ್ತಾರೆ. ಅಣ್ಣ ಅವರಿಗೆಲ್ಲ ಒಬ್ಬ ಸತ್ಪುರುಷ,ಮಾರ್ಗದರ್ಶಕ,ಆದರ್ಶ ವ್ಯಕ್ತಿ ಮಾತ್ರ. ಆದರೆ ಅಕ್ಕನಾಗಮ್ಮನಿಗೆ ಅಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ ಆತ ಆಕೆಯ ಶಕ್ತಿ .ಮಗ,ತಂದೆ ಗುರು ಎಲ್ಲವೂ ಅತನೇ.ಆತ ಆಕೆಯ ದೇಹದ ಒಂದು ಅವಿಭಾಜ್ಯ ಅಂಗ.ತನ್ನ ಕರುಳಿನ ಕುಡಿ.ಇತರ ವಚನಕಾರರಲ್ಲಿ ಅಣ್ಣನ ಬಗ್ಗೆ ಗೌರವ ಕಂಡರೆ ಅಕ್ಕನಾಗಮ್ಮನ ವಚನಗಳಲ್ಲಿ ಅಣ್ಣನ ಬಗ್ಗೆ ಪ್ರೀತಿಯ ಮಹಾಪೂರವನ್ನೆ ಕಾಣಬಹುದು.

ಡಾ.ರಾಜೇಶ್ವರಿ ವೀ.ಶೀಲವಂತ
ಕನ್ನಡ ಉಪನ್ಯಾಸಕರು
ಬೀಳಗಿ

ಫೋನ್ ನಂ:+91 9945456451

Loading

Leave a Reply