ಅಕ್ಕನಾಗಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ

ತಮ್ಮ ಬಸವನ ದಾಸೋಹ ಮನಿಯಾಗ
ಒಮ್ಮನದಿ ಹುಟ್ಟು ಹಿಡದಾಳ ನಾಗಮ್ಮ
ಓಂಯೆಂದು ತಾನು ನೀಡುತ್ತಾ

12 ನೇಯ ಶತಮಾನದ ಕಲ್ಯಾಣದ ಪವಿತ್ರಭೂಮಿಯಲ್ಲಿ ಎಲ್ಲ ಶರಣರಿಗೂ ಹಿರಿಯರೆನಿಸಿ ಅನುಭವಮಂಟಪದ ಅನುಭಾವಿಯಾಗಿ ದಾಸೋಹ ಮನೆಯ ಪರಂದಾಸೋಹಿಯಾಗಿ ಬಾಳಿಬದುಕಿದ ಶರಣೆ ಕ್ರಾಂತಿಯೋಗಿ ಅಕ್ಕನಾಗಮ್ಮ. ನಾಗಲಾಂಬಿಕೆ, ಅಕ್ಕನಾಗಮ್ಮ ಮುಂತಾದ ನಾಮಗಳಿಂದ ಪ್ರಸಿದ್ಧಿಗೊಂಡಿರುವ ಈ ತಾಯಿಗೆ ಜನಪದರು ಮನತುಂಬಿ ಹಾಡುತ್ತಾರೆ.

ಶಿವಯೋಗದ ಭೂಮಿಯದು ಕಲ್ಯಾಣ ಊರದು
ಶಿವಯೋಗದ ದಂಡು ಹಿಡದಾಳ ನಾಗಮ್ಮ
ಶಿವಯೋಗಿ ಆಗಿ ಕುಂತಾಳ.

ಕಲ್ಯಾಣ ನಾಡು ಶಿವಯೋಗಿಗಳ ನಾಡು. ಶಿವಪಾರಮ್ಯ ಸಾಧಿಸಿದವರ ಬೀಡು ಮಾಡಿದರು ಶಿವನಿಗಾಗಿ, ನೀಡಿದರು ಶಿವನಿಗಾಗಿ. ‘ಶಿವ’ ಎಂಬುದು ಅವರಿಗೆ ಸಮಾಜವೆನ್ನುವ ಜಂಗಮ. ಆ ಜಂಗಮನಿಗಾಗಿ ಶರಣರ ಕಾಯಕ ದಾಸೋಹ ಮೀಸಲಾಗಿದ್ದವು. ಅಂತೆಯೇ ಅಕ್ಕನಾಗಮ್ಮನವರು ಒಂದೆಡೆ ದಾಸೋಹ ಮಾಡಿ ಸಮಾಜ ಜಂಗಮವನ್ನು ತೃಪ್ತಿಪಡಿಸಿದರೆ ಇನ್ನೊಂದೆಡೆ ಶಿವಯೋಗಿಯಾಗಿ ಆತ್ಮೋದ್ಧಾರ ಮಾಡಿಕೊಂಡ ಮಹಾಶರಣೆ.

ಅಕ್ಕನಾಗಮ್ಮನವರು ಮಾದರಸ ಮಾದಲಾಂಬಿಕೆಯರ ಮಗಳಾಗಿ ಬಾಗೇವಾಡಿಯಲ್ಲಿ ಜನಿಸುತ್ತಾರೆ ಎನ್ನುತ್ತಾರೆ.

ಅಪ್ಪನು ಮಾದರಸ ಅವ್ವತಾ ಮಾದಲೆ
ಒಪ್ಯಾರ ಅಕ್ಕ ಬಸವರಿಗೆ ನಾಗಮ್ಮಳ
ಹುಟ್ಟಿದ ಊರು ಬಾಗೇವಾಡಿ.

ಹನ್ನೆರಡು ವರುಷದ ಹಿರಿಯಕ್ಕ ನಾಗಮ್ಮ
ಸಣ್ಣಂವ ಹಾನ ಬಸವಣ್ಣ ತಮ್ಮನಿಗೆ
ಕಣ್ಣಾಂಗ ಜತನ ಮಾಡ್ಯಾಳ
.

ಅಕ್ಕನಾಗಮ್ಮನವರ ಪಾತ್ರ ಬಸವಣ್ಣನವರ ವ್ಯಕ್ತಿತ್ವದಲ್ಲಿ ಬಹು ಮುಖ್ಯವಾಗಿದೆ. ತನಗಿಂತ ಚಿಕ್ಕವನಾಗಿರುವ ತನ್ನ ತಮ್ಮನಿಗೆ ನಾಗಮ್ಮ ತಾಯಿ ಬಾಲ್ಯದಿಂದಲೆ ಪ್ರೀತಿ ತೋರಿದವಳು, ಅಷ್ಟೇ ಅಲ್ಲ ಜೋಪಾನ ಮಾಡಿದವಳು. ಅಕ್ಕನ ಆರೈಕೆಯಲ್ಲಿ ಮಗು ಬಸವಣ್ಣ ಸದೃಢವಾಗಿ ಬೆಳೆದ ಎನ್ನುತಾರೆ ಜನಪದರು ಮುಂದೆ ನಾಗಮ್ಮನವರನ್ನು ಮಾದಲಾಂಬೆ ತನ್ನ ಅಣ್ಣನ ಮಗ ಸೋದರಳಿಯ ಶಿವಸ್ವಾಮಿಗೆ ಧಾರೆ ಎರೆಯುತ್ತಾಳೆ.

ಅಣ್ಣತಮ್ಮರಿಗೆ ಕರಸ್ಯಾಳ ನಡುಮನ್ಯಾಗ ಕೂಡಿಸ್ಯಾಳ
ಸಣ್ಣನ ಶಾವಿಗಿ ಬಸದಾಳ ಮಾದವ್ವ ಸೋಬಾನವೆ
ಚಿನ್ನಮ್ಯಾಲ ಚೆನ್ನ ಸಕ್ಕರಿ ಹರವ್ಯಾಳ ಮಾದವ್ವ
ಖುಸಿಯಿಂದ ಬಳಗಕ್ಕೆ ಬಡಿಸ್ಯಾಳ ಸೋಬಾನವೆ.

ಇಂಗಳಿಗೆಯಿಂದ ತನ್ನ ಅಣ್ಣ-ತಮ್ಮರನ್ನು ಕರೆಯಿಸಿ ಶಾವಿಗೆ ಸಕ್ಕರೆಯ ಪ್ರಸಾದ ಮಾಡಿಸಿ ಮಾತಿಗೆ ಪೀಠಿಕೆ ಹಾಕುತ್ತಾಳೆ ಮಾದಲಾಂಬೆ.

ಹಿಗ್ಗಿಲಿ ಅಣ್ಣತಮ್ಮರಿಗೆ ಹೇಳ್ಯಾಳ ಮಾದಲೆ
ಮಗಳು ನಾಗಮ್ಮ ಗುಣವಂತಿ || “ಸೋ” ||
ಮಗಳು ನಾಗಮ್ಮ ಗುಣವಂತಿ ರೂಪವಂತಿ
ಮಾಡಿಕೋ ಸೊಸೆಯು ನಿಮ್ಮ ಮನಿಗೆ || “ಸೋ” ||

ತಂಗಿಯ ಮನದಿಂಗಿತವನ್ನು ಈಗ ಅರಿತರು ಸೋದರರೆಲ್ಲರು ಅವರಿಗೂ ಮನದಲ್ಲಿ ಅಷ್ಟೇ ಖುಸಿ. ಏಕೆಂದರೆ ಏಕೆಂದರೆ ಇದ್ದೊಬ್ಬ ತಂಗಿ ಮಾದಲಾಂಬೆ ಆಕೆಯ ಮಗಳು ಅಷ್ಟೇ ರೂಪವಂತಿ ಮೇಲಾಗಿ ಗುಣವಂತಿ ಒಪ್ಪದೇ ಅವರು ಹೇಗೆ ಇರುವರು?

ತಂಗಿಯ ಮಗಳಿಗಿ ಹಿಗ್ಗಿಲಿ ಒಪ್ಯಾರ
ತಂದಾರ ಸೊಸಿಮಾಡಿ ನಾಗಮ್ಮಗ
ತಂದಾರ ಸೊಸಿಮಾಡಿ ನಾಗಮ್ಮಗ
ತುಂಬ್ಯಾದ ಖುಸಿಯು ಮನದಾಗ.

ಸೋದರ ಅಳಿಯನು ಶಿವಸ್ವಾಮಿ ಅವನಿಗಿ
ಶೋಧಿಸಿ ನೋಡಿ ಗುಣಗಳು ಹಿಗ್ಗಿಲಿ
ಮುದ್ಧಿನ ಮಗಳಿಗೆ ಕೊಟ್ಟಾರ

ಸೋದರಳಿಯ ಮಗ ಶಿವಸ್ವಾಮಿ ಗುಣಗಳನ್ನು ಶೋಧಿಸಿ ನೋಡಿ ತನ್ನ ಮಗಳು ನಾಗಮ್ಮಗೆ ಕೊಡುತ್ತಾಳೆ ತಾಯಿ ಮಾದಲೆ. ಏಕೆಂದರೆ ತವರುಮನೆ ಎಂಬ ಅಭಿಮಾನವಿದ್ದರೂ ವರನ ಗುಣ ಪರೀಕ್ಷಿಸುವ ಈ ತಾಯಿಯ ಮಗಳ ಪ್ರೇಮವು ನಾವು ತಿಳಿದುಕೊಳ್ಳಬೇಕಾಗಿದೆ.
ಸಂತೋಷದಿಂದ ಮಗಳ ಮದುವೆ ನಡೆದು ಹೋಗುತ್ತದೆ. ಚಿಕ್ಕ ಅಳಲು ಪ್ರಾರಂಭಿಸಿ ಗಂಡನ ಮನೆಗೆ ಹೊರಟಿದ್ದಾಳೆ. ನಾಗಮ್ಮ ಮನೆಯ ಬೆಳಕಾಗಿರುವ ಮಗಳು ಮನೆಬಿಟ್ಟು ತಂದೆ-ತಾಯಿಗೆ ಬಹು ದು:ಖವನ್ನುಂಟುಮಾಡಿದೆ. ತಮ್ಮ ಬಸವನಿಗಂತೂ ತಿಳಿಯುತ್ತಿಲ್ಲ ಅಕ್ಕ ಹೊರಟಾಳೆ ಎಂದರೆ ಹೆಚ್ಚಿಗೆ ದು:ಖ ಪಟ್ಟವರು ತಮ್ಮ ಬಸವಣ್ಣ ಅಂತಹ ತಮ್ಮನಿಗೆ,

ತೆಕ್ಯಾಗ ಹಾಕ್ಕೊಂಡು ಬಿಕ್ಕಿಸಿ ಅಳುತಾಳ
ಮಿಕ್ಯಾದ ದು:ಖ ಇಬ್ಬರಿಗಿ ಕಣ್ಣಿರಿಂದ
ಅಕ್ಕನ ಸೆರಗ ತೊಯ್ದಾದ.

ಬಿಕ್ಕುತ್ತಾ ಚಿಕ್ಕ ತಮ್ಮನನ್ನು ಕೈ ಹಿಡಿದು ಹೊರಟಿದ್ದಾಳೆ ನಾಗಮ್ಮ. ಆದರೆ ಮಾದರಸ ಮುಂದೆ ಬಂದು ಬಸವನನ್ನು ಬಾ ಎಂದು ಕರೆದರೂ ಹಠ ತೆಗೆದು ಅಳಲು ಪ್ರಾರಂಭಿಸಿದ ಆ ಅಳುವಿಗೆ ನಾಗಮ್ಮಳ ಅಳು ಇನ್ನೂ ಹೆಚ್ಚಾಯಿತು ಎನ್ನುತ್ತಾರೆ. ಜನಪದರು ಆದರೂ ನಾಗಮ್ಮ ತಮ್ಮ ಬಸವನನ್ನು ಸಂತೈಸಿ ಹೊರಡುತ್ತಾರೆ.

ಸೋದರ ಮಾವನ ಮಗನಿಗೆ ಕೈಹಿಡಿದು
ಸುದರಾಸಿ ಸಂಸಾರ ಮಾಡ್ಯಾಳ ನಾಗಮ್ಮ
ನೋಡುವ ಮಾವ ಹಿಗ್ಗಾಗಿ.

ಗಂಡನ ಮನೆಯಲ್ಲಿ ಎಲ್ಲರೂ ಒಪ್ಪುವಂತ ಸಂಸಾರ ಮಾಡಿ ಎಲ್ಲರಿಂದ ಒಳ್ಳೆಯವಳೆನಿಸಿಕೊಂಡಳು ನಾಗಮ್ಮ. ಯಾರೊಂದಿಗೆ ಜಗಳವಿಲ್ಲ ತಾತ್ಸಾರವಿಲ್ಲ. ತಾನಾಯಿತು, ತನ್ನ ಕೆಲಸವಾಯಿತು, ಗುರುಹಿರಿಯರ ಸೇವೆಯಾಯಿತು. ಆದರೂ ಮನಸ್ಸಿನಲ್ಲಿ ತಮ್ಮನ ನೆನಪು ಆ ನೆನವಿನೊಂದಿಗೆ ಮತ್ತೇ ಕಣ್ಣೀರು.

ತಮ್ಮನಿಗಿ ನೆನಸುತ್ತಾ ಕುಂತಲ್ಲಿ ಅಳತಾಳ
ಒಮ್ಮೆಲೆ ಬಸವಾ ಎನುತಾಳ ನಾಗಮ್ಮ.

ಮುಂದೆ ನಾಗಮ್ಮ ಗರ್ಭೀಣೆಯಾಗುತ್ತಾರೆ. ಗಂಡು ಮಗನಿಗೆ ತೌರಿನಲ್ಲಿ ಜನ್ಮ ಕೊಡುತ್ತಾಳೆ.

ಶಿವರೂಪಿ ಮಗನಿಗಿ ತಮ್ಮನ ಹೆಸರಿಟ್ಟು
ಚನ್ನಬಸವನೆಂದು ಕರಿತಾಳ ನಾಗಮ್ಮ
ಚಿನ್ನದಂತ ಗುಣವು ಕಲಿಸ್ಯಾಳ.

ಅಕ್ಕಳಿಲ್ಲದೆ ಭಣಭಣ ಬದುಕು ಬಸವಣ್ಣನವರದಾಯಿತು. ಎಂಟು ವರ್ಷಕ್ಕೆ ಅವರು ಕಾಲಿಡುವಷ್ಟರಲ್ಲಿ ಮುಂಜಿವೆ ಮಾಡಲು ನಿರ್ಧರಿಸುತ್ತಾರೆ. ಹಿರಿಯರು ಅಕ್ಕನಾಗಮ್ಮ ತೌರಿಗೆ ಬಂದಿದ್ದಾರೆ ತಮ್ಮನ ಮುಂಜಿವೆ ಕಾರ್ಯಕ್ಕೆ. ಮುಂಜಿವೆಯ ದಿನ ಅಕ್ಕನ ಹಿಂದೆ ನಿಂತಿದ್ದ ಬಸವಣ್ಣ ಮೊದಲು ಅಕ್ಕಳಿಗೆ ಕಟ್ಟಿರಿ ಎನ್ನುತ್ತಾನೆ.

ನನ್ನಕ್ಕ ದೊಡ್ಡಕ್ಕಿ ಅರಿಗರ ಕಟ್ಟಿರಿ
ಸಣ್ಣಂವ ನಾನು ಅಕಿಗಿಂತ ಕಟ್ಟಿದರ
ನಾನು ಕಬರುವೆನು ಅಡಕಿ
ನಿಂತೆಲ್ಲ ಮಂದಿಯ ಗಾಬರಿ ಆಗ್ಯಾರ
ಎಂತಹ ಮಾತು ಇದುಯೆಂದು? ಧರ್ಮವು
ಹಾಳಾಗಿ ಮ್ಯಾಲ ಹೋಳಾಗಿ.

ಅಕ್ಕಗೆ ಮೊದಲು ಕಟ್ಟಿರಿ ಎಂಬ ಬಾಲಕ ಬಸವಣ್ಣನವರ ಮಾತಿಗೆ ಎಲ್ಲರಿಗೂ ಗಾಬರಿ. ಧರ್ಮವೇ ಹಾಳಾಯಿತ್ತು ಅವನ ಮಾತಿನಿಂದ ಎಂಬ ನಿರ್ಧಾರಕ್ಕೆ ಬರುತ್ತಾರೆ ಅಲ್ಲಿದ್ದವರು. ಬಾಲಕನನ್ನು ದೂಷಿಸಲು ಪ್ರಾರಂಭಿಸುತ್ತಾರೆ. ಅಕ್ಕನಾಗಮ್ಮ ಮುಂದೆ ಬಂದು

ನನ್ನ ತಮ್ಮ ಸಣ್ಣಂವ ಅಂದರ ಏನಾಯಿತು
ದೊಡ್ಡವರು ಯಾಕರ ನುಡಿತಿರಿ ಕೇಳಿರಿ
ಕೂಡಿಸಿ ಅವನ ಮಾತದು.

ಆದರೆ ಯಾರೇಟು ಕೇಳಿದರೂ ಬಸವನದು ಒಂದೇ ಮಾತು ಮೊದಲು ಅಕ್ಕಳಿಗೆ ಕಟ್ಟಿರಿ. ಆಗ ತಂದೆ ಮಾದರಸ ಮಗನಿಗೆ ಹೊಡೆಯಲು ಕೈ ಎತ್ತಿದ್ದಾಗ ಬಸವಣ್ಣ ಅಕ್ಕಳ ಹಿಂದೆ ಅಡಗುತ್ತಾನೆ. ಎಳೆದು ಮುಂದಕ್ಕೆ ತಂದು ಆ ಹೋಮದ ಎದುರಿಗೆ ನಿಲ್ಲಿಸಿದಾಗ ಅಲ್ಲಿದ್ದ ಜನಿವಾರವನ್ನು ತೆಗೆದುಕೊಂಡು ಹೋಮದಲ್ಲಿ ಬೀಸಾಡಿಯೇ ಬಿಟ್ಟ! ಧಗಧಗ ಸುಟ್ಟು ಬೂದಿಯಾಯಿತು ಜನಿವಾರ.

ಎಳೆದು ತಾ ತಂದಾನ ಬಾಲ ಬಸವನಿಗೆ
ನಿಲ್ಲಿಸಿ ಹೊಮದ ಮುಂದಕ್ಕೆ ಬಸವಣ್ಣ
ಹಾಕ್ಯಾನ ಜನಿವಾರ ಬೆಂಕ್ಯಾಗ
ಜನಿವಾರ ಹಾಕ್ಯಾನ ಬೆಂಕ್ಯಾಗ ಸಿಟ್ಟಿಲಿ
ಉರದಾದ ದಾರ ಬೆಂಕ್ಯಾಗ ನೋಡಟಗೆ
ಬೂದಿಯು ಆಗಿ ಹೋಗ್ಯಾದ.

ಎಲ್ಲರಿಗಿಂತ ಸಿಟ್ಟು ಬಂದಿದ್ದು ಮಾದರಸನಿಗೆ. ಮಗನಿಗೆ ಎತ್ತಿ ಬೀಸಾಡಬೇಕೆನ್ನುವಷ್ಟರಲ್ಲಿ ಎದ್ದು ಬರುತ್ತಾಳೆ ನಾಗಮ್ಮ. ತಮ್ಮನ ಕೈ ಹಿಡಿದು ಹಾಗೆಯೇ ಹೊರೆಗೆ ಬರುತ್ತಾಳೆ. ತಮ್ಮನನ್ನು ಕರೆದುಕೊಂಡು ಸಂಗಮದ ದಾರಿ ಹಿಡಿದಿದ್ದಾಳೆ. ಆ ನಾಗಮ್ಮಳಿಗೆ ತಮ್ಮನ ಮುಂದಿನ ದಾರಿ ತಿಳಿಯಿತು ಈತ ಸಾಮಾನ್ಯನಲ್ಲ. ಯಾವುದೇ ಮಹಾಕಾರ್ಯಕ್ಕೆ ಹುಟ್ಟಿ ಬಂದಿದ್ದಾನೆ. ಆ ಕಾರ್ಯ ನನ್ನಿಂದ ಪ್ರಾರಂಭವಾಯಿತು ಎಂಬ ವಿಚಾರ ಮಾಡುತ್ತಲೆ ಚಿಕ್ಕ ತಮ್ಮನನ್ನು ಕರೆದುಕೊಂಡು ಬಂದು ಕಪ್ಪಡಿ ಸಂಗಮದ ಆಶ್ರಮದಲ್ಲಿ ಬಿಡುತ್ತಾಳೆ. ದಿನಾಲು ಹೋಗಿ ಆತನನು ಕಂಡು ಧೈರ್ಯ ತುಂಬುತ್ತಾಳೆ. ಎಂಟು ವರ್ಷದ ಬಾಲಕ ಅಕ್ಕಳನ್ನೆ ಎಲ್ಲವನ್ನಾಗಿ ಸ್ವೀಕರಿಸಿದೆ.

ಮುಂದೆ ಬಸವಣ್ಣನವರು ಕಲ್ಯಾಣಕ್ಕೆ ಹೋಗಬೇಕಾದ ಪ್ರಸಂಗ ಬಂದಾಗ ಅವರು ಮೊದಲು ಅಕ್ಕನೊಂದಿಗೆ ಚರ್ಚಿಸುತ್ತಾರೆ. ಅವಳು ಹೇಳಿದ ಎಲ್ಲ ಮಾತುಗಳಿಗೆ ಒಪ್ಪುತ್ತಾರೆ. ಆದರೆ ಸಂಗಡ ನೀನು ಬಂದಾಗ ಮಾತ್ರ ಕಲ್ಯಾಣಕ್ಕೆ ಹೋಗುವೆ ಎಂದು ಹಠ ಹಿಡಿದುಕೊಡುತ್ತಾರೆ. ತಮ್ಮನ ಯಾವ ಇಚ್ಛೆಯು ತಿರಸ್ಕರಿಸದ ಅಕ್ಕನಾಗಮ್ಮ

ಹಡೆದಂತ ಮನಿಬಿಟ್ಟು ಗಂಡನ ಮನಿಬಿಟ್ಟು
ಒಡಹುಟ್ಟಿದ ತಮ್ಮನ ಕೈಹಿಡಿದು ನಾಗಮ್ಮ
ಸಡಗರದಿಂದ ಹೊಂಟಾಳ
ಸಡಗರದಿಂದ ನಡದಾಳ ಅಕ್ಕನಾಗಮ್ಮ
ಗುಡ್ಡದಂತ ತಮ್ಮನ ಬೆನ್ನಹಿಂದ ನಾಗಮ್ಮ
ನಡೆದಾಳ ಕಲ್ಯಾಣಕ ಹಿಗ್ಗಿಲಿ.

ತಮ್ಮನಿಗಾಗಿ ನಾಗಮ್ಮ ನವರು ಹಡೆದವರನ್ನು ಗಂಡನ ಮನೆಯವರನ್ನು ಬಿಡುತ್ತಾಳೆ. ತನ್ನಗಂಡ ಮತ್ತು ಮಗನೊಂದಿಗೆ ತಮ್ಮನ ಹಿಂದೆ ಕಲ್ಯಾಣಕ್ಕೆ ನಡೆಯುತ್ತಾಳೆ. ತನ್ನ ಮುಂಜಿವೆ ತಿರಸ್ಕರಿಸಿದ ತಮ್ಮನಿಗೆ ಪುರಸ್ಕರಿಸಿ ತನ್ನ ಸಂಗಡ ಕರೆದುಕೊಂಡು ಬಂದ ಅಕ್ಕ ಆತನ ಏಳಿಗೆಗಾಗಿ ಏನೆಲ್ಲವನ್ನು ಸಹಿಸುತ್ತಾ ಆತನ ಕಡೆಗೆ ಲಕ್ಷವಹಿಸಿದ್ದಳು. ಇಂದು ತಮ್ಮನಲ್ಲಿ ಪ್ರಖರ ಬದಲಾವಣೆ ಗುರುತಿಸಿದ್ದಾರೆ. ಆ ಬದಲಾವಣೆಗೆ ಕಲ್ಯಾಣವೆ ಪ್ರಣತೆಯಾಗಬಹುದೆಂಬ ದೂರದೃಷ್ಠಿಯು ಅವಳಲ್ಲಿದೆ. ಹೀಗಾಗಿ ತನ್ನ ಗುಡ್ಡದಂತ ತಮ್ಮನ ಬೆನ್ನಿಂದೆ ನಡೆದುಬಿಟ್ಟಿದ್ದಾರೆ.

ಕಲ್ಯಾಣದಲಿ ಬಸವಣ್ಣನವರ ಹೊಸ ಜೀವನ ಪ್ರಾರಂಭವಾಯಿತು. ಶಿವಲಿಪಿಯೊಂದಿಗೆ ಬಿಜ್ಜಳ ಕೊಟ್ಟ ಶಿವಲಿಪಿಯನ್ನು ಓದಿ ಆತನ ಸಿಂಹಾಸನ ಕೆಳಗಿರುವ ಶಿವಧನ ಅಗೆಸಿ ತೆಗೆಸಿಕೊಡುತ್ತಾರೆ.

ಶಿವಲಿಪಿ ಓದ್ಯಾರ ಶಿವನುಡಿ ನುಡದಾರ
ಶಿವಶಿವ ಎನುತ್ತಾ ಬಸವಣ್ಣ ಆಗಳಿಗೆ
ಶಿವಧನ ಅಗೆಸಿ ತರ‍್ಯಾರ.

ಯಾರಿಗೂ ತಿಳಿಯದ ಲಿಪಿಯನ್ನು ಸರಳವಾಗಿ ಓದಿ ಹೇಳಿ ಅದರಂತೆ ಮಾಡಿ ತೋರಿಸಿದ ಬಿಜ್ಜಳನಿಗೆ ಅವರ ಮೇಲೆ ಅಪಾರವಾದ ಗೌರವ ಮೂಡಿತ್ತಲ್ಲದೆ, ಅವರಿಗೆ ತನ್ನ ಅರಮನೆಯಲ್ಲಿ ಅನೇಕ ಹುದ್ದೆಗಳನ್ನು ಕೊಟ್ಟು ಪ್ರಧಾನಿಯನ್ನಾಗಿ ಮಾಡಿದ.

ಬಿಜ್ಜಳ ರಾಜನು ಅವನ್ಹೆಂತ ಪುಣ್ಯವಂತ
ನಂಜುಂಡನಂತ ಪ್ರಧಾನಿ ತಾಪಡೆದು
ರಾಜ್ಯವು ಆಳ್ಯಾನ ಖುಸಿಯಿಂದ.

ಆದರೆ ಎಂತಹ ಹುದ್ದೆ ಬಂದರೂ ಅದನ್ನ ನಂಬಿ ಕೂಡಲಿಲ್ಲ ಬಸವಣ್ಣನವರು ಬದಲಿಗೆ ನಾಡ ಅಭಿವೃದ್ಧಿಗೆ ಸಿದ್ಧರಾದರು. ಅನುಭವ ಮಂಟಪ ಕಟ್ಟಿದರು. ಮಹಾಮನೆ ನಿರ್ಮಿಸಿದರು ಕಾಯಕ, ದಾಸೋಹ, ಸಮಾನತೆ ಮುಂತಾದ ತತ್ವಗಳನ್ನು ಮೊಳಗಿಸಿದರು. ವಚನಗಳ ರಚನೆಯಾಯಿತು. ಅವರವರಿಗೆ ಅವರೇ ಗುರುವಾಗಿ ತಮ್ಮನ್ನು ತಾವು ಪ್ರಶ್ನೆಸಿಕೊಳ್ಳುವಂತೆ ಮಾಡಿದರು. ಹೀಗಾಗಿ ಪ್ರತಿಯೊಬ್ಬರು ಕಲ್ಯಾಣದ ದಾರಿ ಹಿಡಿದರು. ಆ ವೇಳೆಯಲ್ಲಿ ಅಕ್ಕ ನಾಗಮ್ಮ

ತಮ್ಮನ ಬೆನ್ನಿಗೆ ತಾನಿಂತು ನಾಗಮ್ಮ
ಒಮ್ಮನದಿಂದ ದುಡಿದಾಳ ಎಲ್ಲರೊಳು
ತಮ್ಮ ಬಸವನಂತೆ ಕಂಡಾಳ
.

ಅಲ್ಲದೆ

ದಾಸೋಹ ಮನಿಯಾಗ ಒಲಿಹಚ್ಚಿ ಹಂಚಿಟ್ಟು
ಖುಸಿಯಿಂದ ರೊಟ್ಟಿ ಬಡಿತಾಳ ನಾಗಮ್ಮ
ಬಸವನ ದಂಡಿಗೆ ಸಲಿಸ್ಯಾಳ.

ಕೇವಲ ಕುಳಿತು ಮಾತಾಡುತ್ತ ಹೋಗಲಿಲ್ಲ. ಕಾಯಕಯೋಗಿಯಾಗಿ ನಾಗಮ್ಮ ಬರುವ ಶರಣ ಬಳಗಕ್ಕೆ ತನ್ನ ತಮ್ಮನಿಗೆ ತೋರಿದ ಪ್ರೀತಿಯನ್ನೆ ತೋರುತ್ತಾರೆ. ಸ್ವತ: ತಾನೇ ಒಲೆಯನ್ನು ಹಚ್ಚಿ ರೊಟ್ಟಿ ಬಡಿಯುತ್ತಾರೆ. ಸಂತೋಷದಿಂದ ಶರಣಬಳಗದ ಪ್ರಸಾದ ಕೈ ಕೊರತೆಯಾಗದಂತೆ ಗಮನವಹಿಸುತ್ತಾರೆ.

ಅಂಗದಾ ಖಬರಿಲ್ಲದೆ ಜಂಗಮ ಸೇವೆ ಮಾಡಿ
ಸಂಗನೆ ಅವರು ಎನುತಾಳ ನಾಗಮ್ಮ
ಭಂಗವು ತರಲಿಲ್ಲ ಬಸವಗ.

ಈ ಜಂಗಮರು ಸಂಗನ ಬಸವಾ ಎನ್ನುತ್ತಾರೆ. ನಾಗಮ್ಮ ತುಂಬಿದ ಕೊಡವಾಗಿದ್ದಾರೆ. ಹಣೆಯ ಮೇಲೆ ಯಾವಾಗಲು ವಿಭೂತಿ, ತಲೆತುಂಬ ಸೆರೆಗು ನುಡಿದರೆ ಮುತ್ತಿನಂತ ಮಾತು, ನಡೆದರೆ ನಿರ್ಗವಿ ಇಂತಹ ತಾಯಿಯನ್ನು ಕಂಡರೆ ಆ ಶರಣ ಬಳಗಕ್ಕೂ ಅಷ್ಟೇ ಗೌರವ ವಿಶ್ವಾಸ.

ಮಹಾಮನೆಗೆ ಬಂದವರು ಮಹಾತಾಯಿ ಕಂಡಾರ
ಮಹಾದೇವಿ ನೀನೆ ಎನುತಾರ ತಾಯಿಯ
ಮಹಾಪಾದಕ್ಕ ಶರಣು ಎಂದಾರ.

ಪಂಕ್ತಿಯು ಕುಂತಾವ ನೀರುತಾ ಹರದ್ಹಾಂಗ
ಜುಕುತಿಯು ಮಾಡಿಲ್ಲ ನಾಗಮ್ಮ ಹೊಟ್ಟೆ ತುಂಬ
ಪ್ರಸಾದ ಬಡಿಸಿ ಎಲ್ಲರಿಗಿ.

ಅಕ್ಕನಾಗಮ್ಮನವರು ತಮ್ಮ ಕಟ್ಟಿದ ಇಷ್ಟಲಿಂಗದಲ್ಲಿ ಶ್ರದ್ಧೆ ನಿಷ್ಠೆಗಳನ್ನಿಟ್ಟು ಪೂಜಿಸಿದವರು

ಲಿಂಗವೆ ಪತಿಯಾಗಿ ತಾನದಕ್ಕೆ ಸತಿಯಾಗಿ
ಅಂತರಂಗ ಜ್ಯೋತಿ ಪೂಜಿಸುತ್ತಾ ನಾಗಮ್ಮ
ಲಿಂಗಾಂಗ ಸಮರಸ ಮಾಡ್ಯಾಳ.

ಶಿವಧ್ಯಾನ ಗೈಯತಾ ಲಿಂಗಪೂಜೆ ಮಾಡತಾ
ಅವಯವ ಬಂದು ಮಾಡುತ್ತ ನಾಗಮ್ಮ
ಶಿವಯೋಗ ನೆಲೆಯು ತಿಳದಾಳ.

ಮುಂದೆ ಬಿಜ್ಜಳ ಬಸವಣ್ಣನವರಿಗೆ ಕಲ್ಯಾಣ ಬಿಡಲು ತಿಳಿಸಿದಾಗ ಬಹಳ ನೊಂದುಕೊಂಡರು ತಾಯಿ ನಾಗಮ್ಮ. ತನ್ನ ತಮ್ಮ ಮಾಡುವ ಕೆಲಸದಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳತ್ತಿರುವ ಈ ನಾಡು ಎಲ್ಲಾ ಕಡೆಯ ಜನರು ಬಂದು ನಾವೆಲ್ಲರೂ ಒಂದೇ ಎಂದು ಸಾರುತ್ತ ತಮ್ಮ ತಮ್ಮ ಕಾಯಕಗಳಲ್ಲಿ ಮಗ್ನರಾಗಿದ್ದ ಎಲ್ಲಾ ಕೀಳರಿಮೆಯಿಂದ ದೂರಾಗಿದ್ದರೂ ಕೂಡ ತಮಗೂ ಅರಿವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದರು. ಅದ್ಯಾವುದನ್ನು ಲೆಕ್ಕಿಸದೆ ಬಿಜ್ಜಳ ಇದಕ್ಕೆಲ್ಲ ಮೂಲ ಕಾರಣಕರ್ತರಾದ ಬಸವಣ್ಣನವರನ್ನು ದೂರ ಸರಿಸಿದೆ. ಅವರು ಶರಣರನ್ನು ಬಿಟ್ಟು ದೂರ ಹೋದರೆ ಉಳಿದವರು ಮೆತ್ತಗಾಗುತ್ತಾರೆಂಬ ಜಾತಿವಾದಿಗಳ ಮಾತನ್ನು ನಂಬಿದ್ದ ಬಿಜ್ಜಳ. ಆದರೆ ಪ್ರತಿಯೊಬ್ಬರೂ ಬಸವ‌ ಗುರುವಿನಾಶ್ರಯದಲ್ಲಿ ಹೇಗೆ ಬೆಳೆದಿದ್ದರೆಂಬುದು ಅರಿಯದ ಮೂರ್ಖನಾದ. ಎಷ್ಟೋ ಸಲ ಮಡಿವಾಳ ಮಾಚಿದೇವ, ಶಿವನಾಗಿಮಯ್ಯರಂತಹ ಶರಣರನ್ನು ಎದುರು ಹಾಕಿಕೊಂಡು ಕ್ಷಮೆ ಕೇಳಿದ್ದ. ಈಗ ಅವರ ವ್ಯಕ್ತಿತ್ವ ಅರಿಯದೇ ಹೋದ ಬಿಜ್ಜಳ ಆ ಸಂದರ್ಭದಲ್ಲಿ ಮತ್ತೇ ಅಕ್ಕನಾಗಮ್ಮ ಗುರು ಬಸವರಿಗೆ ಧೈರ್ಯ ಕೊಡುತ್ತಾರೆ. ಇದು ಮೂರನೆಯ ಘಟ್ಟ. ಬಾಗೇವಾಡಿಯ ಮೊದಲನೆ ಘಟ್ಟ‌, ಮುಂಜಿವೆ ಪ್ರಸಂಗದಲ್ಲಿ ಅಕ್ಕ ತಮ್ಮನ ಮೇಲಿನ ಕರುಣೆಯಿಂದಾಗಿ ಸಮಾಜ ಎದುರು ಬಿದ್ದರೂ ತಮ್ಮನ ಕೈ ಬಿಡಲಿಲ್ಲ. ಎರಡನೆ ಘಟ್ಟ ಕಪ್ಪಡಿ ಸಂಗಮದಲ್ಲಿ ಗಂಗಾಂಬಿಕೆಯವರನ್ನು ಮದುವೆಯಾಗಿ ಕಲ್ಯಾಣಕ್ಕೆ ಹೋಗುವ ಪ್ರಸಂಗ. ಆ ವೇಳೆಯು ತಮ್ಮನ ಮೇಲೆ ಅತೀ ಪ್ರೀತಿಯಿಂದಾಗಿ ಎಲ್ಲರನ್ನು ತೊರೆದು ಕಲ್ಯಾಣಕ್ಕೆ ಬಂದಿದ್ದರು. ಈಗ ಮೂರನೆಯ ಘಟ್ಟ. ಗುರುವಾಗಿರುವ ತಮ್ಮ ತನ್ನನು ಕಲ್ಯಾಣದಲ್ಲಿ ಬಿಟ್ಟು ಕಪ್ಪಡಿ ಸಂಗಮಕ್ಕೆ ಹೋಗುವ ಪ್ರಸಂಗ. ಈಗ ಬಸವಣ್ಣ ಅಕ್ಕನನ್ನು ಕರೆದುಕೊಂಡು ಹೋಗುತ್ತಿಲ್ಲ. ಅಕ್ಕನಾಗಮ್ಮ ಬರುತ್ತೆನೆಂದು ಹೇಳುತ್ತಿಲ್ಲ. ಅವರಿಬ್ಬರಿಗೂ ಗೊತ್ತು ಮುಂದೇನಾಗುತ್ತೆದೆಂಬುದು. ತನ್ನಕ್ಕ ಎಲ್ಲವನ್ನು ರಕ್ಷಿಸುತ್ತಾಳೆಂಬ ವಿಶ್ವಾಸ ಅವರಲ್ಲಿದೆ. ತನ್ನ ತಮ್ಮನ ಆಸ್ತಿಯಾದ ವಚನ ಸಾಹಿತ್ಯ ರಕ್ಷಿಸಬೇಕಾದ ಹೊಣೆ ಆ ತಾಯಿಯ ಹೆಗಲಿಗಿದೆ. ತಮ್ಮನ ಮನದಿಂಗಿತವನ್ನು ಅರಿತಿದ್ದಾರೆ ನಾಗಮ್ಮ ತಾಯಿ

ತಮ್ಮ ಬಸವನ ತಲೆಮ್ಯಾಲ ಕೈಯಿಟ್ಟು
ಒಮ್ಮನದಿ ನುಡಿತಾಳ ನಾಗಮ್ಮ ಬಸವಣ್ಣ
ಬೈಮಾನ ಮಂದಿಗೆ ಬಿಟ್ಟುಹೋಗು.

ಬೈಮಾನ ಮಂದಿಗೆ ಬಿಟ್ಟುಹೋಗು ಬಸವಣ್ಣ
ಶರಣರ ಮ್ಯಾಲ ನಂಬಿಕಿಡು ಅವರೆಲ್ಲ
ನಿನ್ನಾಸ್ತಿ ಜ್ವಾಕಿಲಿ ಕಾಯ್ತಾರ.

ನಿನ್ನಾಸ್ತಿ ವಚನ ಸಂಪತ್ತು ಬಸವಣ್ಣ
ಕಣ್ಣಾಗ ಕಣ್ಣಿಟ್ಟು ಕಾಯ್ತಾರ ಹರಕೆಯು
ಕೊಟ್ಟುನೀ ಹೋಗು ನನ್ನಪ್ಪ.

ಎಂತಹ ಅಕ್ಕ ತಮ್ಮ ಲೌಕಿಕ ಆಸ್ತಿಯಲ್ಲ ಹೆಂಡರು ಮಕ್ಕಳಲ್ಲ ವಚನಾಸ್ತಿ ಕಾಪಾಡುತ್ತೇವೆ. ಅವರಿಗೆ ಸಂತೋಷದಿಂದ ಕಲ್ಯಾಣ ಬಿಡು. ಶರಣರಿಗೆ ಹರಕೆಯು ಕೊಟ್ಟು ಮುಂದೆ ಹೋಗು ಎಂಬ ಅಕ್ಕನ ಮಾತಿಗೆ ಬಸವಣ್ಣ

ಅಕ್ಕಳ ಪಾದಕ್ಕೆ ನಮಿಸ್ಯಾರ ಬಸವಣ್ಣ
ಮಿಕ್ಯಾದ ದುಃಖ ಒಳಗರ ಇಬ್ಬರೂ
ಸುಮ್ಮನಾಗಿ ಮುಂದೆ ನಡದಾರ

ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಕೂಡಲೆ ಜಾತಿವಾದಿಗಳಿಗೆ ಬಲ ಬಂತು. ಯಾವ ಮಹಾಶಕ್ತಿ ಎದುರು ಇವರ ಕುಶಕ್ತಿ ಕುಂದಿತೊ ಆ ಕೆಟ್ಟ ಶಕ್ತಿ ಈಗ ತಲೆಯೆತ್ತಿತು. ಶರಣರಿಗೆ ಆನೆ ಕಾಲಿಗೆ ಕಟ್ಟಿ ಎಳೆಸಲಾಯಿತು. ಸಿಕ್ಕ ಸಿಕ್ಕಲ್ಲಿ ಅವರೊಂದಿಗೆ ಈ ಜಾತಿವಾದಿಗಳು ಹೋರಾಟ ಪ್ರಾರಂಭವಾಯಿತು.

ಹೊಂಚಹಾಕಿ ಕುಂತಾರ ದುಸ್ಮಾನ ಮಂದಿಯು
ಇಂಚ ಇಂಚು ಕೆಡವಿ ಮಂಟಪವು ದುರುಳರು
ಸಂಚುತಾ ಮಾಡಿ ಮುಂದಿನದು.

ಇಡಬೇಕು ಬೆಂಕಿಯು ವಚನದ ಗಣಿಗರ
ಸುಡಬೇಕು ಬಿಟ್ಟು ಬಿಡದೇರ ಎನುತಲಿ
ಹುಡುಕ್ಯಾಡಿ ವಚನ ರಾಶಿಗಿ.

ಅಪ್ಪ ಬಸವಣ್ಣನವರು ಕಟ್ಟಿದ ಅನುಭವ ಮಂಟಪವನ್ನು ಪೂರ್ಣ ಹಾಳು ಮಾಡುವ ಅವರ ದುಷ್ಟ ಬುದ್ದಿಯನ್ನು ಜನಪದರು ಇಂದಿಗೂ ಕಣ್ಣಿಗೆ ಕಟ್ಟುವಂತೆ ಹಾಡುತ್ತಾರೆ. ಅವರ ಕಣ್ಣು ಮೊದಲಿನಿಂದಲೂ ವಚನ ರಾಶಿಯ ಮೇಲೆ ಇತ್ತು. ಇದು ಉಳಿಯಬಾರದೆಂಬ ನೀಚ ಬುದ್ಧಿ ಅವರಲ್ಲಿತ್ತು. ಹೀಗಾಗಿ ವಚನ ಬಣವಿಗೆ ಬೆಂಕಿ ಇಡಲು ವಿಚಾರಿಸುತ್ತಾರೆ. ಹುಡುಕಾಟ ಪ್ರಾರಂಭವಾಯಿತು. ಆದರೆ ಅಕ್ಕನಾಗಮ್ಮ ಬಸವಣ್ಣನವರಿಗೆ ಮಾತು ಕೊಟ್ಟಿದ್ದಾರೆ. ಅವರ ಆಸ್ತಿಯಾದ ವಚನ ಸಾಹಿತ್ಯವನ್ನು ಕಾಪಾಡುತ್ತೇವೆಂದು ನುಡಿದಂತೆ ನುಡಿಯುವ ಶರಣರು ಒಂದೆಡೆ ಕುಳಿತು ಚರ್ಚಿಸುತ್ತಾರೆ.

ಕಟ್ಯಾರ ವಚನವು ಅರಿವ್ಯಾಗ ಶರಣರು
ಗಂಟುಮಾಡಿ ಹೊರಗೆ ಕಳುವ್ಯಾರ ನೋಡವರ
ಕಣ್ಣಿಗೆ ಕಂಡಾವ ಹಳೆಗಂಟು.

ಅರಿವಿನ ಭಂಡಾರ ಅರವ್ಯಾಗ ಕಟ್ಯಾರ
ಶರಣರು ಕಲ್ಯಾಣ ಬಿಟ್ಟಾರ ನಾಗಮ್ಮ
ಪೊರೆದಾಳ ಎಲ್ಲರ ತಾಯಾಗಿ.

ಆ ಕಡೆ ಜಾತಿವಾದಿಗಳು ಹೊಂಚುತನ ನಡೆದರೆ ಈ ಕಡೆ ಶರಣರ ಅರಿವಿನ ಭಂಡಾರವಾದ ವಚನಗಳನ್ನು ಹಳೆ ಅರಿವೆಯಲ್ಲಿ (ಬಟ್ಟೆ) ಕಟ್ಟುತ್ತಾರೆ. ಶರಣರ ಗಂಟುಗಳನ್ನು ಮಾಡಿ ತಲೆಯ ಮೇಲೆ ಇಟ್ಟುಕೊಂಡು ರಾತ್ರೋರಾತ್ರಿ ಕಲ್ಯಾಣ ತೊರೆಯುತ್ತಾರೆ ಅಕ್ಕನಾಗಮ್ಮನವರು ಧೈರ್ಯ ಕೊಟ್ಟು ಶರಣರನ್ನು ಮುಂದಕ್ಕೆ ಕಳುಹಿಸುತ್ತಾರೆ

ವಚನದ ಗಂಟನ್ನು ಹಿಡಕೊಂಡು ನಾಗಮ್ಮ
ಬಸವನ ಬಳಗ ಕರಕೊಂಡು ಕಲ್ಯಾಣದ
ಅಗಸಿಗೆ ಬಾಗಿ ನಮಿಸ್ಯಾಳ

ಅಗಸಿಯ ಬಾಗಿಲಿಗೆ ಕಲ್ಯಾಣ ಭೂಮಿಗೆ ನಮಿಸುತ್ತ ಕಲ್ಯಾಣ ಊರು ಬಿಡುತ್ತಾರೆ. ಮೊದಲೇ ತಿಳಿಸಿದಂತೆ ಅವರವರು ತಮ್ಮ ಹಾದಿಯಲ್ಲಿ ಮುಂದುವರೆಯುತ್ತಾರೆ. ಅಕ್ಕನಾಗಮ್ಮ ತಾಯಿ ಕೆಲವು ಶರಣರೊಂದಿಗೆ ಕಲ್ಯಾಣದ ಪೂರ್ವ ದಿಕ್ಕಿಗೆ ಹೊರಡುತ್ತಾರೆ ಬಿಜ್ಜಳನ ಜನರಿಗೆ ಗೊತ್ತಾಗಿ ಸೈನಿಕರನ್ನು ಅವರ ಹಿಂದೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ಒಲ್ಲದ ಮನದಿಂದ ಬೆನ್ನಟ್ಟಿದ ಸೈನಿಕರು ಅಕ್ಕನಾಗಮ್ಮನವರ ಗುಂಪನ್ನು ಸೆರೆ ಹಿಡಿಯುತ್ತಾರೆ ಆದರೆ ಅಕ್ಕನಾಗಮ್ಮ

ಗಣಾಚಾರಿ ನಾಗಮ್ಮ ಗಣಂಗಳ ಕರಕೊಂಡು
ಸೈನಿಕರ ಕೂಡ ಬಡಿದಾಡಿ ಅವರಿಗೆ
ಬುದ್ಧಿಯು ಕಲಿಸಿ ಖಳುವ್ಯಾಳ.

ಕಚ್ಚೆಯು ಹಾಕ್ಯಳ ಖಡ್ಗವು ಹಿಡಿದಾಳ
ಎಚ್ಚರದಿಂದಲಿ ನಡೆದಾಳ ನಾಗಮ್ಮ
ವಾಪಸು ಕಳುವಿ ಅವರಿಗೆ.

ತಾಯಿಯು ಇಲ್ಲಿ ತಮ್ಮ ಇನ್ನೊಂದು ರೂಪ ತೋರಿಸಿದ್ದಾರೆ. ಪಂಚಾಚಾರದ ಇನ್ನೊಂದು ಆಚಾರ ಗಣಾಚಾರ ಧರ್ಮಕ್ಕೆ ಶರಣರಿಗೆ ಅನ್ಯಾಯವಾದರೆ ಗಣಾಚಾರಿಗಳಾಗಬೇಕು ಎಂಬುದನ್ನು ತೋರಿಸಿಕೊಟ್ಟರು ನಾಗಮ್ಮ ತಾಯಿ. ಅವರನ್ನು ಕರೆದು ಬುದ್ಧಿ ಹೇಳುತ್ತಾ ತಾಯಿಯ ಮಾತು ಆಲಿಸದ ಸೈನಿಕರು ವಾಪಸ್ಸಾಗಿ ಎದುರಿಗೆ ಬಂದ ಕೆಲದುರುಳರು ಅವರನ್ನು ಬೈದು ಶರಣರ ಹಿಂದೆ ಹೋಗಲು ತಿಳಿಸುತ್ತಾರೆ. ಮನಸ್ಸಿಲ್ಲದ ಮನಸ್ಸಿನಿಂದ ಸೈನಿಕರು ಶರಣರ ಹಿಂದೆ ಬೆನ್ನಟ್ಟುತ್ತಾರೆ ಕೊನೆಗೆ ಶರಣರಿದ್ದ ಸ್ಥಳ ಸಿಗಲು ಮತ್ತೆ ಹೊಡೆದಾಟ ಪ್ರಾರಂಭ.

ಘೊರಯುದ್ಧ ನಡೆದು ಘೋರವಾಡಿ ಆಗ್ಯಾದ
ಖೂಳ ಬಿಜ್ಜಳನ ಮಂದಿಗೆ ಸೋಲಾಗಿ
ಶರಣರು ಮುಂದಕ ನಡೆದಾರ.

ಮುಂದಕ್ಕೆ ನಡೆದ ಶರಣರು ಉಳವಿಯ ಪ್ರಶಾಂತ ವಾತಾವರಣಕ್ಕೆ ಬಂದು ಅಲ್ಲಿ ಕೂಡುತ್ತಾರೆ. ಅಕ್ಕನಾಗಮ್ಮ ತಾಯಿ ಒಳ-ಹೊರ ಎರಡರಲ್ಲಿಯೂ ದಣಿದಿರುತ್ತಾರೆ. ಹೊರಗಿನ ಸನ್ನಿವೇಶಕ್ಕಿಂತ ಒಳಗಿನ ನೋವು ಅವರನ್ನು ಹೆಚ್ಚು ಕಾಡುತ್ತವೆ. ತಮ್ಮ ಕಟ್ಟಿದ ಅನುಭವ ಮಂಟಪ ಹಾಳಾಗಿ ಹೋಯ್ತಲ್ಲ ಎಂಬ ಚಿಂತೆ ಒಂದೆಡೆಯಾದರೆ, ಇನ್ನೊಂದೆಡೆ ಪೂರ್ಣ ವಚನ ಸಾಹಿತ್ಯ ಉಳಿಯುತ್ತೋ ಇಲ್ಲವೆಂಬ ಚಿಂತೆ. ಇಂತಹ ಚಿಂತೆಗಳಿಂದ ತಾಯಿ ನಾಗಮ್ಮ ಶರಣರ ಮಧ್ಯದಲ್ಲಿದ್ದುಕೊಂಡು ತನ್ನ ದಿನಚರಿ ಕಾರ್ಯಕ್ಕೆ ಭಂಗ ತಂದುಕೊಳ್ಳಲಿಲ್ಲ ಇಷ್ಟಲಿಂಗ ಪೂಜೆ, ಅನುಭಾವ ಗೋಷ್ಟಿ, ಕೈಲಾದಷ್ಟು ಕಾಯಕ ಹೀಗೆಯೇ ಇರುವಾಗ

ತಾಯಿಗೆ ಬಂದೊಬ್ಬ ನಿರೂಪ ಕೊಟ್ಟಾನ
ಜಗದಾ ಗುರು ಬಸವಣ್ಣ ಕಪ್ಪಡ್ಯಾಗ
ಬಿಟ್ಟುತಾ ಹೋಗ್ಯಾರ ನಮ್ಮಗೆಲ್ಲ

ಬಿದ್ದಾದ ಕಿವಿಮ್ಯಾಲ ಕೊನೆಯ ನುಡಿಯದು
ಬಿದ್ದಾಳ ತಾಯಿ ನೆಲಕ್ಕರ ಬಸವಣ್ಣ
ಬಿಟ್ಯಾಂಗ ಹೋದಿ ನನ್ನ ಬಿಟ್ಟು.

ಹುಟ್ಟಿದ ದಿನದಿಂದ ಬಿಟ್ಟು ನೀ ಇರಲಿಲ್ಲ
ಕಟ್ಟಕಡೆ ದಿನ ಬಿಟ್ಟಿಯಾ ನನ್ನ ತಮ್ಮ
ಕೆಟ್ಟ ಗಳಿಗೆಯೂ ಜಗಕೆಲ್ಲ.

ಬಂದೊಬ್ಬರು ಬಸವಣ್ಣನವರು ಲಿಂಗೈಕರಾದರೆಂಬ ಸುದ್ದಿ ಕಿವಿಗ ಬಿದ್ದಾಗ ತಾಯಿ ತಾಳಲಿಲ್ಲ. ನೆಲಕ್ಕೆ ಬೀಳುತ್ತಾರೆ. ಒಂದೇ ಸವನೇ ರೋಧಿಸುತ್ತಾರೆ. ಆ ಸನ್ನಿವೇಶ ಓದುಗರ ಕಣ್ಣಮುಂದೆ ನಡೆದಿದೆ ಎನುವಂತೆ ಜನಪದರು ಚಿತ್ರಿಸುತ್ತಾರೆ. ಒಡಹುಟ್ಟಿದವರಾಗಿದ್ದ ಇಬ್ಬರೂ ಒಂದು ದಿನ ಕೂಡ ಬಿಟ್ಟು ಇರಲಿಲ್ಲ ಕಟ್ಟಕಡೆ ದಿನ ನನ್ನನ್ನು ಬಿಟ್ಟು ಹೊರಟ ತಮ್ಮನ ನೆನಪು ಮಾಡುತ್ತಾ ತಾಯಿ ನಾಗಮ್ಮ ರೋದಿಸುವ ಪರಿ.

ತಮ್ಮೆಂದರೆ ತಮ್ಮಲ್ಲ ಮಗನೆಂದರೆ ಮಗನಲ್ಲ
ತಮ್ಮನಿಗಿಂತ ದೊಡ್ಡವ ಬಸವಣ್ಣ
ಮಗಗಿಂತ ಹೆಚ್ಚು ಗುರುವಾದಿ.

ಗುರುವಾಗಿ ಅರುಕೊಟ್ಟೆ ಗುರುವಾಗಿ ಲಿಂಗಕೊಟ್ಟೆ
ಗುರುವಾಗಿ ಕೊಟ್ಟೆ ಗುರುತರ ಕಾಯಕ
ಗುರುವಾಗಿ ಹಾದಿ ನೀ ತೋರಿ.

ಬಸವಣ್ಣ ತನಗೆ ಎಂತೆಂತಹ ಉಪಕಾರಗಳನ್ನು ಮಾಡಿದ್ದಾರೆ ಎನ್ನುವುದನ್ನು ನೆನೆಸಿ ತಾಯಿ ಅಳುತ್ತಾರೆ. ತಮ್ಮನಾಗಿ ಹುಟ್ಟಿದ್ದರೂ ಗುರುವಿಗಿಂತ ಹೆಚ್ಚಾಗಿ ಅರಿವು ಕೊಟ್ಟ, ಲಿಂಗಕೊಟ್ಟ ಜವಾಬ್ದಾರಿಯಿಂದ ಕಾಯಕ ಮಾಡಲು ಕಲಿಸಿ ಮುಕ್ತಿಯೂ ಹಾದಿ ತೋರಿಸಿದೆಯಪ್ಪ ಎಂದು ಅಳುತ್ತಾರೆ ನಾಗಮ್ಮ ತಾಯಿ,

ಸುತ್ತಿದ ಸೂತಕವು ಕಳೆದಿದಿ ನನ್ನ ತಮ್ಮ
ಸುತ್ತಿದ ಬಂಧನ ಬಿಚ್ಚಿಟ್ಟು ತೋರಿದಿ
ಮುಸುಕಿನ ಒಳಗಿನ ಆತ್ಮವು.

ಶರಣರು ಅಳುತಾರ ಎದ್ದು ಬಾ ಬಸವಣ್ಣ
ಶರಣರ ಕಣ್ಣು ನೀ ಒರೆಸು ಈ ಗೋಳು
ಕೇಳದೊ ಏನೊ ಬಸವಣ್ಣ.

ಹೀಗೆ ಅನೇಕ ತ್ರಿಪದಿಗಳು ಅಕ್ಕನಾಗಮ್ಮನವರು ಮತ್ತು ಶರಣರು ದುಃಖದ ಪರಿ ಚಿತ್ರಿಸುತ್ತವೆ. ಕರುಣ ರಸದ ಘಟ್ಟವಾಗಿರುವ ಈ ಸಂದರ್ಭ ಎಂತಹವರ ಕಣ್ಣಿನಲ್ಲೂ ನೀರು ತರಿಸುತ್ತದೆ.

ಆದರೆ ಯಾರೂ ಕಪ್ಪಡಿ ಸಂಗಮಕ್ಕೂ ಹೋಗುವಂತಿಲ್ಲ. ಏಕೆಂದರೆ ವೈರಿಗಳು ಅಲ್ಲಿ ಇಲ್ಲಿ ಇವರನ್ನು ಹುಡುಕುತ್ತಲೇ ಇದ್ದಾರೆ. ವಚನಗಳನ್ನು ಬಿಟ್ಟು ಹೋಗುವುದು ಅಸಾಧ್ಯ. ಯಾರ ಬಾಯೊಳಗೂ ನೀರಿಲ್ಲ. ಲಿಂಗಪೂಜೆ ಹೊರತು ಯಾರು ಏನೂ ತೆಗೆದುಕೊಳ್ಳುತ್ತಿಲ್ಲ. ಕೂಡಲ ಸಂಗಮದಲ್ಲಿ ಬಸವಣ್ಣನಿದ್ದರೆ ತಮ್ಮ ಹಿಂದೆ ಅವರಿದ್ದಾರೆಂಬ ವಿಶ್ವಾಸ ಎಲ್ಲರಿಗೆ ಇತ್ತು. ಈಗ ಶರಣರ ಆತ್ಮವಿಶ್ವಾಸ ಅಡಗಿದೆ. ತಾಯಿ ನಾಗಮ್ಮನವರೇ ಎಚ್ಚೆತ್ತುಕೊಂಡು ಅವರನ್ನು ಸಂತೈಸುತ್ತಾರೆ.

ಮುಂದೆ ಕೆಲವು ದಿನಗಳ ನಂತರ ಮಗ ಚೆನ್ನಬಸವಣ್ಣ ಲಿಂಗೈಕೆರಾಗುತ್ತಾರೆ. ಇದೆಲ್ಲ ತಾಯಿ ನಾಗಮ್ಮನವರ ಮಹಾ ಪರೀಕ್ಷೆಯ ಕಾಲ. ತಮ್ಮ ಹೋದನೆನ್ನುವ ದುಃಖ ಇನ್ನೂ ಮಾಸಿಲ್ಲ ಮಗ ಚೆನ್ನಬಸವರು ಲಿಂಗೈಕ್ಯರಾಗಲು

ಎಣ್ಣಿ ಹೊಳೆಯಲ್ಲಿ ಬಗ್ಗಿ ಒಗೆವರೆಯಾರ
ಅಣ್ಣ ಬಸವನ ಅಕ್ಕ ಶರಣೆತಾ ನಾಗಮ್ಮ
ದಣಿವಿಲ್ಲದೆ ಲಿಂಗವಸ್ತ್ರ ಒಗೆದಾಳ.

Loading

Leave a Reply