
‘ಅಕ್ಕ‘ ಕನ್ನಡ ನಾಡಿನ ಮೊದಲ ಕವಿಯತ್ರಿ. ವಿಶ್ವದ ಶ್ರೇಷ್ಠ ದಾರ್ಶನಿಕಳು. ‘ಅಕ್ಕ‘ ಎನ್ನುವ ಪದವೆ ಗೌರವ ಸೂಚಕ. ಅಕ್ಕನ ಅನುಭಾವದೆತ್ತರದ ಆಳವನ್ನು ಅರಿಯಲು, ಬಸವಣ್ಣನವರು, ಅಲ್ಲಮ ಪ್ರಭುಗಳು, ಚೆನ್ನಬಸವಣ್ಣನಂತವರಿಗೆ ಮಾತ್ರ ಸಾಧ್ಯ.
ಹುಟ್ಟಿದೆನು ಶ್ರೀ ಗುರುವಿನ ಹಸ್ತದಲ್ಲಿ ಎಂದು ಆರಂಭಿಸುವ ಅಕ್ಕ,
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು. ಅಂಗ ವಿಕಾರದ ಸಂಗವನಿಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು. ಹಿಂದಣ ಜನ್ಮವ ತೊಡೆದು ಮುಂದಣ ಪಥವನ್ನು ತೋರಿದನೆನ್ನ ತಂದೆ! ಚೆನ್ನ ಮಲ್ಲಿಕಾರ್ಜುನ ನಿಜವನರುಹಿದನೆನ್ನ ಗುರು ಎಂದು ನೆನೆದಿದ್ದಾಳೆ.
ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು, ಮುಕ್ತಿ ಎನ್ನ ಮನೆಗೆ ನಡೆದು ಬಂದಿತ್ತು. ಜಯ ಜಯ ಗುರುವೆ ಎನ್ನುವಲ್ಲಿ, ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಭವ ಬಂಧನ ಬಿಡಿಸಿ ಪರಮ ಸುಖ ತೋರಿದ ಗುರುವೆ ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ಚೆನ್ನ ಮಲ್ಲಿಕಾರ್ಜುನ ತಂದೆನ್ನ ಕೈವಶಕೆ ಕೊಟ್ಟ ಗುರುವೆ ಶರಣು ಶರಣು ಎಂದು ಮನತುಂಬಿ ಕೊಂಡಾಡಿದ್ದಾಳೆ.
ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ. ಆನು ಮದುವಣಿಗಳಾದೆ. ವಸುಧೆಯ ಭಕ್ತರೆಲ್ಲ ನಿಬ್ಬಣಿಗರಾದರು. ಗುರುವೇ ಸಂಬಂಧಿಕ ಎಂಬ ಭಾವ ಹೊಂದಿದ್ದಾಳೆ.
ನಡೆವಲ್ಲಿ, ನುಡಿವಲ್ಲಿ ಉಡುವಲ್ಲಿ ಉಂಬಲ್ಲಿ ಬಿಡೆನಯ್ಯ ನಿಮ್ಮ ಚರಣವನು | ಈ ಛಲವ ಕಡೆ ಮುಟ್ಟಿಸೆನೆಗೆ ಗುರು ರಾಯ ಘನ ಗುರುವೆ ನೀನೆಲ್ಲ ಮನದಲ್ಲಿ ಇರುಕಂಡ್ಯಾ ಮನವ ಬಿಟ್ಟಿನಿತು ಅಗಲಿದರೆ | ನಿಮಗಿನ್ನು ಅನಘ ಘನ ಶರಣರಡಿಯಾಣೆ.
ತಮ್ಮ ಸರ್ವಾಂಗವ ಶುದ್ಧವ ಮಾಡಿ ಲಿಂಗಮಯಗೊಳಿಸಿದ ಸದ್ಗುರು ಅರಿವಿನ ಸಾಕಾರ ರೂಪ, ನಿರಾಕಾರನೂ ಅಹುದು.
ನಾನಾ ಜನ್ಮಗಳೊಳಗೆ ನಾ ತೊಳಲುತ್ತಿರರಾಗಿ ನೀ ನನಗೆ ಬಂದು ಕೃಪೆಯಾದ ಕಾರಣವು ನಾ ನಿಮ್ಮ ಪಾದದೊಳೊಡವೆರೆದೆ. ಹಿಂದಣ ಭವವೆಲ್ಲ ಸಂದಿಹವು ಇಲ್ಲಿಗೆ ಮುಂದಿನ್ನು ಎನಗೆ ಭವವಿಲ್ಲ | ಗುರುರಾಯ ಹೊಂದಿದೆನು ನಿಮ್ಮ ಚರಣದೊಳು.
ಅರಿವಿನ ಸದ್ಗುರು ಬಂದು ಭವ ಬಂಧನವ ಬಿಡಿಸುವನು. ಎನ್ನ ಕಾಯವೆ ಗುರು ಎನ್ನ ಪ್ರಾಣವೇ ಲಿಂಗ ಎನ್ನಂತರಾತ್ಮ ಚರಲಿಂಗ | ವಾಗಿರಲು ಇನ್ನುಂಟೆ ಎನಗೆ ತನು ಮನವ.
ಅಕ್ಕ ಮಹಾದೇವಿಯವರ ಕಾಯವು ಅರಿವಿನ ಗುರುವಿಗೆ ಅರ್ಪಿತವಾಗಿದೆ. ಅಂಗ ಅರಿವಿನ ಗುರುವಾಗಿದೆ. ಆಕೆಯ ಅರಿವಿನಿಂದ ಬಂದ ವಚನಗಳೇ ನಮಗೆ ಗುರುವಿನ ಸಾಕಾರ ರೂಪ.
ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆ,
ಆನು ಬೇಡಿದೆ ಎನ್ನ ಅಂಗಕ್ಕೆಂದು,
ಅವು ನೀಡಿದವು ತಮ್ಮ ಲಿಂಗಕ್ಕೆಂದು,
ನಾನು ಬೇಡಿ ಭವಿಯಾದೆ,
ಅವು ನೀಡಿ ಭಕ್ತರಾದರು,
ಇನ್ನು ಬೇಡಿದೆನಾದರೆ ಚೆನ್ನಮಲ್ಲಿಕಾರ್ಜುನನ ಆಣೆ.
ಹೀಗೆ ಅಕ್ಕನ ಅನೇಕ ವಚನಗಳು ಲೋಕಾನುಭವವನ್ನು ನಮಗೆ ನೀಡಿವೆ. ಅಂತೆಯೇ ಅಕ್ಕನಿಗಿಂತ ಮಿಗಿಲಾದ ಗುರುವಿಲ್ಲಾ.
ಅಲ್ಲಮ ಪ್ರಭುಗಳ ವಚನದಂತೆ
ಜ್ಯೋತಿಯೊಳಗಣ ಕರ್ಪುರಕ್ಕೆ ,
ಅಪ್ಪುವಿನ ಕೈಯಲ್ಲಿಪ್ಪ ಉಪ್ಪಿಂಗೆ,
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ,
ಈ ಮೂರಕ್ಕೆಯೂ ಬೇರೆ ಬೇರೆ ಕ್ರಿಯಾ ಕರ್ಮ ವರ್ತನೆಯುಂಟೆ ಗುಹೇಶ್ವರಾ?
ಕರುನಾಡ ಜ್ಯೋತಿ ‘ ಅಕ್ಕ ಮಹಾದೇವಿ‘ ಕದಳಿಯ ಕರ್ಪೂರವಾದಳು, ಎಲ್ಲರ ಶಿರಕ್ಕೆ ಹೂವು ತಂದಳು.
ಶರಣು ಶರಣಾರ್ಥಿಗಳು.
ಶ್ರೀಮತಿ. ಸುಧಾ ಗಂಜಿ
ಹುಬ್ಬಳ್ಳಿ
ಫೋನ್ ನಂ:+91 9740634120