ಅಕ್ಕಮಹಾದೇವಿ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ ಪಾಪಿ ಎಂದು ಸಾರುತ್ತಾ ಸ್ತ್ರೀ ಸ್ವಾತಂತ್ರ‍್ಯತೆಗೆ ಅರ್ಹಳಲ್ಲ ಎಂದು ಹೇಳಿ ಆಕೆಯನ್ನು ಅವಳ ವ್ಯಕ್ತಿತ್ವವನ್ನು ನಿಷ್ಕ್ರರ್ಯೆಗೊಳಿಸಿದ್ದರು. ಅಂತಹ ದುರ್ಧರ ಪ್ರಸಂಗದಲ್ಲಿ ಬಸವಾದಿ ಶರಣರು ಅವಳಿಗೆ ಸ್ವಾತಂತ್ರ ನೀಡಿ ಸುತ್ತಿಕೊಂಡ ಬಂಧನಗಳಿಂದ ಮುಕ್ತಿಗೊಳಿಸಿದರು. ‘ಹೆಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ” ಎಂದು ಅಲ್ಲಮ ಪ್ರಭುಗಳು ನುಡಿದರೆ “ಹೆಣ್ಣು ಸಾಕ್ಷಾತ ಕಪಿಲಸಿದ್ಧ ಮಲ್ಲಿಕಾರ್ಜುನ” ಎಂಬುದು ಸಿದ್ದರಾಮ ಶಿವಯೋಗಿಗಳ ನುಡಿಯಾಗಿದೆ. “ಪರವಧು ಮಹಾದೇವಿ ಎಂಬೆ” ಬಸವಣ್ಣನವರ ದೃಷ್ಟಿ. ಇಂತಹ ಮಾತುಗಳು ಅಂದಿನ ಸ್ತ್ರೀಯರನ್ನು ಎಚ್ಚರಿಸಿದವು. ಅವರಿಗೆ ಊರುಗೋಲಾದವು. ಕಾರ್ಯನ್ನುಖಿಗೊಳ್ಳುವಂತೆ ಮಾಡಿದವು. ಎಚ್ಚೆತ್ತುಕೊಂಡು ಆ ಸ್ತ್ರೀಯರ ಒಳಗಿದ್ದ ಅರಿವನ್ನು ವಿಕಾಸಗೊಳಿಸಿದರು. ಅವರಲ್ಲಿ ಅತ್ಯಂತ ಪ್ರಮುಖ ಹೆಸರು ಮಹಾದೇವಿ ಅಕ್ಕನವರದು. ಆ ಹೆಸರು ಅಭಿಮಾನಯುಕ್ತವಾದುದು. ಆ ಹೆಸರಿನಲ್ಲಿದೆ ಧೈರ್ಯ, ಜ್ಞಾನ, ವೈರಾಗ್ಯ, ಭಕ್ತಿ, ಸ್ವಾಭಿಮಾನ. ಅಕ್ಕ ಸ್ತ್ರೀಕುಲದ, ಆತ್ಮೋನ್ನತಿಯ ಸಂಕೇತವಾಗಿದ್ದಾಳೆ. ಅಂತೆಯೇ ಜನಪದರ ಮನದಲ್ಲಿ ಇಂದಿಗೂ ನೆಲೆಸಿದ್ದಾಳೆ.

ಅಕ್ಕ ನಿನ್ನ ಹಾಡು ಎತ್ತಿನಾ ಹಾಡುತ್ತಾ
ಮಾಡಿದ ಪಾಪ ಕಳಕೊಂಡೆ ಮುಂದಿನ
ಹಾದಿಯು ಕಂಡೆ ಅದರಾಗ.

ಮಾಡಿದಂತಹ ಪಾಪಗಳೆಲ್ಲ ಆ ಗರತಿ ಪುಣ್ಯರೂಪಿ ಅಕ್ಕನ ಶಿವಜೀವನವನ್ನು ಭಕ್ತಿಯಿಂದ ಹಾಡಿ ಕಳೆದುಕೊಂಡಳಲ್ಲದೆ. ಮುಂದೆ ಹೇಗಿರಬೇಕು? ಎಂಬುದನ್ನು ತಿಳಿದುಕೊಂಡಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಓಂಕಾರ ಶೆಟ್ಟಿ ಮತ್ತು ಲಿಂಗಮ್ಮ ತಾಯಿಯ ಗರ್ಭದಲ್ಲಿ ಹುಟ್ಟಿದ ಅಕ್ಕ ಸ್ಪುರದ್ರೂಪಿ ಆಗಿದ್ದಳು. ಅಂಗಾಲು ತನಕ ಕೂದಲು ಆ ಸೌಂದರ್ಯಕ್ಕೆ ಮೆರುಗು ಕೊಟ್ಟಿದೆ. ಅಕ್ಕ ತನ್ನ ಕೂದಲು ಬಿಚ್ಚಿದರೆ ‘ಬೆನ್ನಿಹಿಂದ ಕರಿಮೋಡ ಮುಸುಕಿದ್ಹಾಂಗ’ ಎನ್ನುತ್ತಾರೆ. ಉಡುತಡಿ ಊರಿನ ಮೃಢರೂಪಿ ಗುರುಗಳು. ಅಕ್ಕಳಿಗೆ ಲಿಂಗದೀಕ್ಷೆ ಮಾಡುತ್ತಾರೆ, ವಚನ ಕಲಿಸುತ್ತಾರೆ, ಅರ್ಥ ವಿವರಣೆ ನೀಡುತ್ತಾರೆ. ಹೀಗಾಗಿ ಬಾಲ್ಯದಿಂದಲೇ ಆ ತಾಯಿಗೆ ಪರಶಿವನೇ ಪತಿಯಾದ. ಯಾವಾಗಲೂ ಕಟ್ಟಿಕೊಂಡ ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪೂಜೆ ಮಾಡುವವಳು. ಆತನ ಧ್ಯಾನದಲ್ಲಿಯೇ ಇರುವವಳು.

ಗಟ್ಟಿಯಲಿಂಗವು ಕಟ್ಟಲು ಎದಿಮ್ಯಾಲ
ಮೆಟ್ಟಿತಾ ನಿಂತು ಆರುವೈರಿ ಮಹಾದೇವಿ
ಇಟ್ಟಾಳ ದೃಷ್ಟಿ ಲಿಂಗಕ್ಕೆ.

ಭಕ್ತಿ ಸ್ವರೂಪಿಯಾಗಿದ್ದ ಅಕ್ಕ ಬೆಳೆಯತೊಡಗಿದಂತೆ ಆಕೆ ಹೊರಮೈ ಒಳಮೈ ಎರಡು ಸುರಸುಂದರಗೊಂಡವು.

ಉಡುತಡಿ ಪುರದ ರಾಜ ಕೌಶಿಕ. ಒಂದು ದಿವಸ ತನ್ನ ಆತ ವೈಹಾಳಿ ಮುಗಿಸಿಕೊಂಡು ಬರುತ್ತಿರುವಾಗ.

‘ಭವಿಕಣ್ಣು’ ಎಂತಹ ಶಬ್ದಪ್ರಯೋಗ ಜನಪದರದು. ಭವಿ ಭಕ್ತರ ವ್ಯತ್ಯಾಸವಿದೆಯೆಂಬುದನ್ನು ಅರಿತಿದ್ದಾರೆ ಜನಪದರು. ಭಕ್ತರ ಕಣ್ಣಲ್ಲಿ ಪ್ರೀತಿ, ಗೌರವ, ದಯೆಗಳಿದ್ದರೆ ಭವಿಯ ಕಣ್ಣಲ್ಲಿ ಕಾಮ, ಕ್ರೋಧ, ಮೋಹಗಳು ತುಂಬಿರುವುದು. ಅಂತಹ ಕಣ್ಣುಗಳು ಭಕ್ತಗಣ ಅರಿಯಲು ಸಾಧ್ಯವಿಲ್ಲವೆಂಬ ವಿಚಾರ ಅವರದಾಗಿದೆ. ಆ ಭವಿಕಣ್ಣು ಭಕ್ತರೂಪಿಯ ಮೇಲೆ ಬಿತ್ತು. ಆ ಕಣ್ಣಿನೊಳಗೆ ಅಡಗಿದ ಕಾಮ ಕೌಶಿಕನನ್ನು ಹುಚ್ಚಾಗಿಸಿತು. ಅಷ್ಟೇ ಅಲ್ಲ ಅವಳು ತನ್ನವಳಾಗಬೇಕೆಂದು ವಿಚಾರ ಮಾಡತೊಡಗಿದ. ಕುಳಿತಿರುವದು ಆನೆಯ ಮೇಲೆ ಆದರೆ ವ್ಯಕ್ತಿತ್ವ ಮಾತ್ರ ಕೀಳು ಭವಿಗಳು ಹೀಗೆ ಬದುಕುವದು ಎನ್ನುತ್ತಾರೆ ಜನಪದರು.

ಹಣೆಬರಹ ನಗುತಿತ್ತು. ಕೌಶಿಕ ಅರಿಯಲಿಲ್ಲ. ಅವನ ಮನದಲ್ಲಿ ಆ ಮಾಳಿಗೆಯ ಮೇಲಿನ ಹುಡುಗಿ ನನ್ನ ಮಡದಿ ಆಗಬೇಕು ಎನ್ನುವದು.

ನಿರ್ಭಯಿಗಳಾಗದ ಶರಣರು ಅಂಜಬಹುದೆ ಇಂತಹ ಕುನ್ನಿಗಳನ್ನೇ! ಇವರೊಳಗಿನ ಮದಮತ್ಸರ ಅಹಂಕಾರ ಇಳಿಸುವದಕ್ಕಾಗಿಯೇ ಹುಟ್ಟಿಬಂದವರೇ ಶರಣರು. ಭವಿಗಳನ್ನು ಭಕ್ತರನ್ನಾಗಿಸಿದ ಅಸಂಖ್ಯಾತ ಶರಣರ ಚರಿತ್ರೆ ನಮ್ಮ ಕಣ್ಣಮುಂದಿದೆ. ಮಹಾ ಶಿವಶರಣೆ ಅಕ್ಕ ಹೆದರಬಹುದೆ! ಅವಳ ತಂದೆ-ತಾಯಿ ಹೆದರಿದ್ದಾರೆ. ಅವರಿಗೂ ಆತನಿಗೆ ತಮ್ಮ ಮಗಳನ್ನು ಧಾರೆಯೆರೆಯುವ ಮನಸ್ಸಿಲ್ಲ.

ಎಂದು ವಿಚಾರ ಮಾಡುತ್ತಾರೆ ಓಂಕಾರ ಶಟ್ಟಿ ಲಿಂಗಮ್ಮ. ರಾಜನಿರಲಿ, ಮಹಾರಾಜನಿರಲಿ ತಮಗೆ ಅಳಿಯುನಾಗುವದು ಬೇಡ ಎಂಬ ಭಾವನೆ ಅವರದು. ಹೀಗಾಗಿ ರಾಜನು ಈಗ ತನ್ನ ಮಗಳಿಗೆ ಯಾವ ಕಷ್ಟಕೊಡುತ್ತಾನೋ ಎಂಬ ಚಿಂತೆ ಅವರಿಗೆ.

ಮಗಳ ಧೈರ್ಯವೇ ಧೈರ್ಯ ಆ ಧೈರ್ಯ ಕಂಡು ತಂದೆ ತಾಯಿ ಧೈರ್ಯವಾಗಿದ್ದಾರೆ.

ಆದರೆ ಕೌಶಿಕ ಈ ಮಾತು ಒಪ್ಪುತ್ತಿಲ್ಲ. ಯಾರೆಷ್ಟು ಹೇಳಿದ್ದರೂ ಕೇಳುತ್ತಿಲ್ಲ. ಏಕೆಂದರೆ.

ಆತನ ಜನರು ಬಂದು ಮಾದೇವಿ ಅಕ್ಕಳ ಮೇಲೆ ಬಹಳಷ್ಟು ಒತ್ತಾಯ ಹೇರುವರಲ್ಲದೆ, ಬೇರೆ ಬೇರೆ ರೀತಿ ಮಾನಸಿಕ ಹಿಂಸೆ ಕೊಡಲು ಪ್ರಾರಂಭಿಸಿದಾಗ ಅಕ್ಕ ಸಿಡಿದೇಳುತ್ತಾಳೆ. ಚಿಕ್ಕ ವಯಸ್ಸಿನಲ್ಲಿರುವ ಅಕ್ಕ ಮಾಡಿದ ಮುಂದಾಲೋಚನೆ, ಧೈರ್ಯ ಗಮನಿಸುವಂತಹವುಗಳು.

ಮದುವೆಗೆ ಮೂರು ಷರತ್ತು ಹಾಕುತ್ತಾಳೆ ಅಕ್ಕ. ಅಕೆಗೆ ಗೊತ್ತು ಮುಂದೆನಾಗುವದಿದೆ ಎಂಬುದು. ಆ ಮೂರು ಷರತ್ತುಗಳೆಂದರೆ.

ಗುರು-ಲಿಂಗ-ಜಂಗಮರ ಆರಾಧಕಳು ಅಕ್ಕ. ಯಾವ ತತ್ವಕ್ಕಾಗಿ ಹುಟ್ಟಿದ್ದಾಳೋ ಆ ತತ್ವಕ್ಕೆ ಅಡ್ಡಿಯಾದರೆ ಆಕೆ ಸುಮ್ಮನಿರಬಹುದೇ? ಅದನ್ನು ಕೌಶಿಕನಿಗೆ ಮೊದಲೇ ಮನನ ಮಾಡುತ್ತಿದ್ದಾಳೆ. ಕೌಶಿಕ ಒಪ್ಪುತ್ತಾನೆ ಈ ಎಲ್ಲ ಷರತ್ತುಗಳಿಗೆ, ಏಕೆಂದರೆ ಅಕ್ಕನ ವ್ಯಕ್ತಿತ್ವದ ಅರಿವಿಲ್ಲ ಆತನಿಗೆ. ಅರಮನೆಯ ವೈಭವ ನೋಡಿದರ ತಾನಾಗಿಯೇ ಒಲಿದು ಬರುವವಳು ಎಂದು ಹುಚ್ಚು ಕೌಶಿಕನಿಗೆ ಒಪ್ಪಿಯೇ ಬಿಟ್ಟ.

ಕೌಶಿಕ ಒಪ್ಪಿದ ಮೇಲೆ ನೇರವಾಗಿ ಅರಮನೆಗೆ ಹೋಗುತ್ತಾಳೆ. ಅಳುತ್ತಿರುವ ತಂದೆ-ತಾಯಿಗೆ ಸಂತೈಸುತ್ತಾಳೆ.

ಧೈರ್ಯದ ಮಗಳು ಅಕ್ಕಮಹಾದೇವಿ ಧೈರ್ಯಗುಂದಿದ ತಂದೆ-ತಾಯಿಗಳನ್ನು ಸಂತೈಸುವ ಆಕೆಯ ರೀತಿಗೆ ಓದುಗರು ಆಶ್ಚರ್ಯ ಪಡಬೇಡು. ಜನಪದರ ನಿಲುವುಗಳಿಗೆ ಅಭಿಮಾನ ಪಡಬೇಕು. ಏಕೆಂದರೆ ಕವಿಗಳಿಗೂ ಅಸಾಧ್ಯವಾದುದನ್ನು ಸಾಧಿಸಿದ ತೋರುವ ಜನಪದರ ರೀತಿ ಆಶ್ಚರ್ಯ ಪಡುವಂತಹದು.

ನನ್ನ ಹಾದಿ ಮುಂದಿದೆ ಇಂತಹ ಭವಿಗಳ ಮನೆ ಅರಮನೆಯಾಗಿರಲಿ, ಮತ್ತೇನೂ ನನ್ನನ್ನು ತನ್ನತ್ತ ಎಳೆಯಲಾರವು. ಏಕೆಂದರೆ ನನ್ನೊಡೆಯ ಚನ್ನಮಲ್ಲಿಕಾರ್ಜುನ ಅರಮನೆಯಲ್ಲಿ ಇಲ್ಲ. ಗುರುಮನೆಯಲ್ಲಿದ್ದಾರೆ. ಆ ಗುರುಮನೆಗೆ ಮಗಳಾಗಿ ನಾನು ಹೋಗಿ ನನ್ನೊಡೆಯನನ್ನು ಕೂಡಬೇಕಾಗಿದೆ. ಮುಂದೆ ನೀವು ಅದನ್ನು ಅರಿಯುವಿರಿ ಎಂದು ಹೇಳುತ್ತಾ ನಡೆದಳು ಅಕ್ಕ ಭವಿ ಕೌಶಿಕನ ಅರಮನೆಗೆ.

‘ಶರಣಾರ್ಥಿ’ ಎನ್ನುತ್ತಾ ದೃಢ ಮನಸ್ಸಿನಿಂದ ಮಾದೇವಿ ಅರಮನೆಗೆ ಕಾಲಿಡುತ್ತಾಳೆ. ಎದುರಿಗೆ ದಾರಿ ನೋಡುತ್ತಾ ನಿಂತಿದ್ದ ಕೌಶಿಕನನ್ನು ಕಂಡು ಯಾವೊಂದು ಭಾವನೆ ತೋರಿಸದೆ ಒಳನಡೆದಳು.

ಆದರೆ ಅಲ್ಲಿಯೂ ಮಾದೇವಿಯ ಲಿಂಗಪೂಜೆಯು ದಿನಂಪ್ರತಿ ನಡೆಯಿತು. ಅರಮನೆಯ ಯಾವ ಭೋಗವು ಅವಳನ್ನು ಆಕರ್ಷಿಸಲಿಲ್ಲ. ತಾನಾಯಿತು ತನ್ನ ಲಿಂಗ ಪೂಜೆಯಾಯಿತು. ಅರಸನ ಕಡೆಗೂ ಲಕ್ಷವಿಲ್ಲದೆ ಮುಂದಿನ ದಿನಗಳಿಗಾಗಿ ಕಾಯುತ್ತಿದ್ದಳು ಅಕ್ಕ. ಒಂದು ದಿನ ಅಕ್ಕ

ಒಂದೆಡೆ ಬೆಳದಿಂಗಳು, ಇನ್ನೊಂದೆಡೆ ಬಿಳಿದಾದ ಸೀರೆ ಉಟಿದ್ದಾಳೆ, ಹಣೆಯ ಮೇಲೆ ವಿಭೂತಿ ಇವು ಆ ತಾಯಿಯ ಆಧ್ಯಾತ್ಮಿಕ ನಿಲುವಿಗೆ ಸಾಕ್ಚಿಯಾಗಿವೆ. ಮಾಳಿಗೆಯು ಏರಿದ್ದಾಳೆ. ಶಾಂತವಾದ ವಾತಾವರಣದಲ್ಲಿ ತನ್ನೊಳು ತಾನು ಒಂದಾಗಿದ್ದಾಳೆ. ಕೌಶಿಕನು ಬಂದಿದ್ದಾನೆ. ಅಕ್ಕಳ ಭೌತಿಕರೂಪ ಅವನಿಗೆ ಹುಚ್ಚು ಹಿಡಿಸಿತು.

“ಬೆಂಕಿಯ ಸೆರಗು” ಜನಪದರ ನುಡಿಗೆ ಎಂತಹ ಶಕ್ತಿಯಿದೆ ಎಂಬುದನ್ನು ಈ ಪದ ಪ್ರಯೋಗದಿಂದ ಅರಿಯಬಹುದು. ಶರಣರ ಉಟ್ಟ ಬಟ್ಟೆ, ಮೆಟ್ಟ ಆವುಗೆ ಇವುಗಳು ಸಮಾನ್ಯವಾದವುಗಳಲ್ಲ. ಅವುಗಳನ್ನು ಮುಟ್ಟಬೇಕಾದರೂ ಅವರೂ ಅದೇ ನಿಲವಿನೊಳು ಇರಬೇಕಾಗುತ್ತದೆ. ಅದನ್ನು ಜನಪದರು ತಮ್ಮ ತ್ರಿಪದಿಗಳ ಮುಖಾಂತರ ಅರಿಕೆ ಮಾಡಿ ಕೊಟ್ಟಿದ್ದಾರೆ. ಮಾತು ಕೊಟ್ಟು ಮರೆತು ತಾ ನಿಂತ ಕೌಶಿಕನಿಗೆ ಆತನಿಗೆ ಆ ಮಾತುಗಳು ಅಂದು ಅತೀ ಸಾಮಾನ್ಯ ಎನಿಸಿದ್ದವು. ಅವುಗಳಿಗೆ ಎಂತಹ ಶಕ್ತಿ ಇದೆಯೆಂಬ ಅರಿವು ಈಗ ಅವನಿಗೆ ಉಂಟಾಗಿದೆ. ಅಕ್ಕ ಉಟ್ಟ ಸೀರೆಯು ವಿಷಯ ವಾಸನೆಯಿಂದ ಉಟ್ಟಿದ್ದಲ್ಲ. ಅದು ಬೆಂಕಿಯ ಪ್ರತಿರೂಪ ಎಂಬುದರ ನೈಜತೆ ತಿಳಿದನು ಕೌಶಿಕ.

ಅಕ್ಕಳ ಸೆರಗ ಹಿಡಿದ ಕೂಡಲೆ ಬೆಂಕಿ ಹಿಡಿದಂತಾಯ್ತು ಕೌಶಿಕನಿಗೆ. ಉರಿ ಉರಿ ಎನ್ನುತ ಚೀರತೊಡಗಿದ ತನ್ನ ಲಿಂಗಪೂಜೆಯಲ್ಲಿ ಮೈಮರೆತ ಅಕ್ಕ ಎಚ್ಚರಗೊಂಡು ಎದ್ದು ನಿಲ್ಲುತ್ತಾಳೆ. ತಾನ್ಯಾರು? ತನ್ನ ಉದ್ದೇಶವೇನು ಎಂಬುದನ್ನು ಈಗ ತಿಳಿಸುತ್ತಾಳೆ ರಾಜ ಕೌಶಿಕನಿಗೆ. ಅಲ್ಲದೆ ರಾಜನಾದವನು ಹೇಗಿರಬೇಕು ಎಂಬುದನ್ನು ತಿಳಿಸುತ್ತಾಳೆ.

ವಚನದ ಸಾಲುಗಳಂತೆ ಈ ತ್ರಿಪದಿಗಳು. ಒಂದೆಡೆ ಅಕ್ಕ ಆತನಿಗೆ ರಾಜಧರ್ಮ ತಿಳಿಸಿದ್ದರೆ, ಇನ್ನೊಂದೆಡೆ ಎಚ್ಚರಿಕೆಯ ಮಾತುಗಳು ಕೂಡಾ ಆಡುತ್ತಾಳೆ. ಅರಸತನ ಎನ್ನುವದು ಹುಚ್ಚಾಟವಲ್ಲ, ಹುಡುಗರಾಟವಲ್ಲ. ಇಡೀ ದೇಶ ಕುಸಿದು ಹೋಗುತ್ತದೆ. ಅಲ್ಲಿ ಧರ್ಮವಿರುವದಿಲ್ಲ. ಕರ್ಮ ಹೆಚ್ಚಾಗುತ್ತದೆ. ನ್ಯಾಯ ಬಿದ್ದು ಹೋಗುತ್ತದೆ. ಅನ್ಯಾಯ ಎದ್ದುನಿಲ್ಲುತ್ತದೆ. ತ್ಯಾಗ ನಿಂತರೆ ಭೋಗ ಓಡುತ್ತದೆ. ಇಂತಹ ದುರಾಡಳಿತದಲ್ಲಿ ಪ್ರಜೆಗಳು ಸುಖಿಗಳಾಗಬೇಕು ಹೇಗೆ? ಮುಂತಾದ ನುಡಿಗಳು ಅಕ್ಕ ಬಿಚ್ಚುತ್ತಾ ಹೋಗಿ

ಇದು ಅಕ್ಕಳ ಪ್ರಖರ ಜ್ಞಾನ. ವಯದಲ್ಲಿ ಬಹಳ ಸಣ್ಣವಳಾಗಿರುವ ಅಕ್ಕ ಏರಿದ ನಿಲುವು ಎಂತಹದು ಎಂಬುದರ ಅರಿವು ನಮಗಾಗುತ್ತದೆ. ಕಾಯ ಏನು ಎಂಬುದನ್ನು ತಿಳಿದುಕೊಂಡಿದ್ದಾಳೆ. ಬರೀ ರಕ್ತ ಮಾಂಸಗಳಿಂದ ಈ ಕಾಯ ಬಿದ್ದು ಹೋಗುವಂತಹದು. ಸುಡುಸುಡು ಈ ಕಾಯ ಎನ್ನುತ್ತಾ.

ಅಕ್ಕ ಉಟ್ಟ ಸೀರೆ ತೊಟ್ಟ ಕುಪ್ಪಸ ಎಲ್ಲವು ಕಳೆದು ದಿಗಂಬರಿಯಾಗಿ ನಿಂತಿದ್ದಾಳೆ. ಬತ್ತಲೆಯಾಗಿ ತನ್ನ ಮುಂದೆ ನಿಂತ ಕೌಶಿಕನಿಗೆ ‘ನೋಡು ಈ ದೇಹ ಏನಿದೆ ಇದರಲ್ಲಿ’ ಎಂದು ಕೇಳುತ್ತಿರುವಷ್ಟರಲ್ಲಿ ಕೌಶಿಕನಿಗೆ ಏರಿದ ಕಾಮವು ಅಷ್ಟೇ ಜರ‍್ರಂತ ಇಳಿದಿದೆ.

ಆತನ ಕೈಯೊಳಗೆ ಹರಿದು ಹೋಗುವ ಸೀರೆ ಕುಪ್ಪಸಗಳನ್ನು ಕೊಟ್ಟು ಅಕ್ಕ,

ಕೌಶಿಕನ ಅರಮನೆ ಭೋಗದ ಜಾಗ. ಆ ಜಾಗವು ಆಕೆಗೆ ಮುಳ್ಳಿನಂತೆ ಚುಚ್ಚುತಿತ್ತು. ಅಂತೆಯೇ ಅದನ್ನು ತೊರೆಯಲು ಅಕ್ಕ ಹಾತೊರೆಯುತ್ತಿದ್ದಾಳೆ.

ಅಕ್ಕ ಅರಮನೆಯಿಂದ ಹೊರ ಬಿದ್ದಿದ್ದಾಳೆ. ನೇರವಾಗಿ ದೀಕ್ಷಾ ಗುರುವಿನ ಆಶ್ರಮದ ಕಡೆ ಹೊರಟಿದ್ದಾಳೆ. ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ತಂದೆ ತಾಯಿ ಕಿವಿಗೂ ಬಿದ್ದಿದೆ. ಮನೆಕಡೆ ಬರುತ್ತಾಳೆಂಬ ಆಶೆಯಲ್ಲಿ ತಂದೆ-ತಾಯಿಗಳು ಮಠದ ಕಡೆಗೆ ಮಗಳು ಹೋಗಿದ್ದಾಳೆಂಬ ಸುದ್ದಿ ತಿಳಿದು ಅವರು ಮಠದ ಕಡೆಗೆ ಬಂದಿದ್ದಾರೆ. ಮಠದ ಅಂಗಳದಲ್ಲಿ ದಿವ್ಯರೂಪಿಯಾಗಿ ನಿಂತಿದ್ದಾಳೆ. ಅದೇ ಆಗ ಪೂಜೆ ಮುಗಿಸಿ ಪ್ರಸಾದ ಪಡೆಯುತ್ತಿರುವ ಗುರುಗಳು ಮಹಾದೇವಿ ಅಂಗಳದಲ್ಲಿ ನಿಂತಿದ್ದಾಳೆಂಬುದನ್ನು ಅರಿತು ಪ್ರಸಾದ ಬಿಟ್ಟು ಹೊರಗಡೆ ಬರುತ್ತಾರೆ. ನೋಡುತ್ತಲೆ ದಿಗ್ಭ್ರಮೆಗೊಳ್ಳುತ್ತಾರೆ. ಅವರಿಗೂ ತಿಳಿದಿರಲಿಲ್ಲ ಹೀಗೆ ಆಗುತ್ತದೆಯೆಂಬುದು. ಮೈಮೇಲೆ ಬಟ್ಟೆಯಿಲ್ಲ, ಆದರೆ ಮೈಮುಚಿದ ಕೂದಲುಗಳು ಅಕ್ಕನ ಇಡೀ ದೇಹ ಮುತ್ತಿಕೊಂಡಿವೆ. ಅಂಗಳಕ್ಕೆ ಬಂದ ಗುರುಗಳು ಆಕೆಯ ಕೈ ಹಿಡಿದು ಮೇಲಕ್ಕೆ ಒಯ್ಯುತ್ತಾರೆ. ಅಲ್ಲಿಯೇ ಇದ್ದ ತಂದೆ-ತಾಯಿ ಊರಿನ ಜನರೆಲ್ಲರೂ ಕಕ್ಕಾಬಿಕ್ಕಿಗೊಂಡು ನೋಡುತ್ತಿದ್ದಾರೆ. ʼಈ ಹೆಣ್ಣು ಸಾಮಾನ್ಯಳಲ್ಲʼ ಎಂದು ಎಲ್ಲರೂ ಕೈ ಜೋಡಿಸಿ ನಿಂತಿದ್ದಾರೆ.

ತಾಳುತ್ತಿಲ್ಲ ಅಕ್ಕನ ಸ್ಥಿತಿ ಹಡದವರಿಗೆ. ಊರಿನ ಮಗಳಾದ ಅಕ್ಕಳ ಪರಿಸ್ಥಿತಿ ಊರ ಜನರಿಗೂ ಕಳವಳವನ್ನುಂಟುಮಾಡಿತು ಸಹಜತಾನೆ! ಅಕ್ಕ ಅವರ ಮಗಳಲ್ಲವೇ? ಮಗಳ ದು:ಖ ಅವರ ದು:ಖವಲ್ಲವೇ? ಆ ದು:ಖ ಅಕ್ಕನೊಳಗಿಲ್ಲವೆಂಬುದು ಹೆತ್ತ ಕರುಳಿಗೆ ಗೊತ್ತಾಗುತ್ತಿಲ್ಲ. ರಾಜನ ಯಾವ ದರ್ಪ, ಆಕೆಯ ಮೇಲೆ ಈಗ ನಡೆಯುದಿಲ್ಲವೆಂಬುದು ಅವರಿಗೆ ತಿಳಿದಿಲ್ಲ. ಎಲ್ಲಿ ರಾಜ ಮತ್ತು ಆತನ ಭಟರು ಬಂದು ಆಕೆಗೆ ಹಿಂಸೆ ಕೊಡುತ್ತಾರೋ ಎಂಬ ಚಿಂತೆ ಅವರಿಗೆ. ಆದರೆ ಅಕ್ಕ ನಿರ್ಭಯಿ ಯಾವ ಲೌಕಿಕರು ಆಕೆಯನ್ನು ಏನು ಮಾಡಲಾರರು. ಅಂತೆಯೆ ಅಕ್ಕ ತನ್ನ ಮನಸ್ಸಿನ ವಿಚಾರಗಳನ್ನು ಗುರುವಿನ ಸಾಕ್ಷಿಯಾಗಿ ಹಡೆದವರಾದಿಯಾಗಿ ಎಲ್ಲರಿಗೂ ತಿಳಿಸುತ್ತಾಳೆ.

ಮಗಳ ಮಾತು ಅವರಿಗೆ ತಿಳಿಯುತ್ತಿಲ್ಲ. ಗುರುಗಳ ಮುಖ ನೋಡುತ್ತಿದ್ದಾರೆ. ಆಗ ಗುರುಗಳು ಅಕ್ಕಳ ಬದುಕಿನ ಗುರಿ ಎಲ್ಲವನ್ನು ಅಲ್ಲಿದ್ದವರಿಗೆಲ್ಲಾ ಬಿಚ್ಚಿ ಹೇಳುತ್ತಾರೆ. ನಾನು ನೀವುಗಳಲ್ಲ ಸಾಕ್ಷಾತ್ ದೇವರು ಹೇಳಿದ್ದರೂ ಆಕೆ ಕೇಳುವದಿಲ. ಅಸಾಮಾನ್ಯ ವ್ಯಕ್ತಿತ್ವದ ಈ ತಾಯಿ ಮುಂದೆ ನಾರಿ ಬಳಗದ ಗುರು ಆಗುತ್ತಾಳೆ, ನಿಲ್ಲಿರಿ. ಹೋಗಲಿ ಆಕೆ ಮುಂದಕ್ಕೆ” ಎಂದು ಅಜ್ಞಾಪಿಸುತ್ತಾರೆ. ತಾಯಿ ತಂದೆಯರ ಕರುಳು ಕಿವಿಚಿದಂತಾಗಿದೆ. ‘ಸಣ್ಣ ವಯದವಳು ಹೀಗೆ ಹೇಗೆ ಹೋಗುತ್ತಾಳೆ ಗುರುಗಳೆ’ ಎನ್ನುತ್ತಾರೆ. ಆ ತಾಯಿಯನ್ನೆ ಗುರುಗಳು ಸಂತೈಸುತ್ತಾರೆ. ವಿಶ್ವದೊಡೆಯ ಆ ತಾಯಿಯ ಬೆನ್ನಿನ ಹಿಂದೆ ಇದ್ದಾನೆ. ಆಕೆಯನ್ನು ತಡೆಯ ಬೇಡವ್ವಾ ಎಂದು ಬಿನ್ನವಿಸಿಸಿಕೊಳ್ಳುತ್ತಾರೆ. ಅಕ್ಕ ತಂದೆ-ತಾಯಿ-ಗುರು-ಹಿರಿಯರೆಲ್ಲರಿಗೂ ಸಾಷ್ಠಾಗ ಹಾಕುತ್ತಾಳೆ. ಅವರೆಲ್ಲರ ಹರಕೆಯನ್ನು ಪಡೆದು.

ಅಕ್ಕಳ ಗುಂಗು ಕಲ್ಯಾಣದಲ್ಲಿ ಕಲ್ಯಾಣದ ಹಾದಿ ಗೊತ್ತಾಗುತ್ತಿಲ್ಲ. ಆದರೂ ಬಸವಣ್ಣನವರ ನಾಮ ಸ್ಮರಿಸುತ್ತಾ ಕಾಲುಗಳು ಯಾವಕಡೆಗೆ ನಡೆದಿಯೋ ಅಕ್ಕನ ಅಂಗ ನಡೆಯಿತು ಆ ಕಡೆ. ಜಗದ ಕಣ್ಣಿಗೆ ಹುಚ್ಚಳ ಹಾಗೆ ಕಾಣುತ್ತಿದ್ದಾಳೆ.
ಕೂಳಿಲ್ಲ ಹೊಟ್ಟಿಗೆ ಎಣ್ಣಿಲ್ಲ ನೆತ್ತಿಗೆ
ಮೈಮ್ಯಾಲ ಇಲ್ಲ ಅರವಿಯು ಮಾದೇವಿಯ
ಖಳಿಯೆಂಬುದು ಹುಚ್ರ‍್ಹಾಂಗ.

ಆದರೂ

ಜಗಕ್ಕೆ ಹುಚ್ರ‍್ಹಾಂಗೆ ಕಂಡವರ ಮುಂದೆ ಕಿಚ್ಚಿನಲ್ಲಿ ಹೊರಟಿದ್ದಾಳೆ ಅಕ್ಕ. ಹುಚ್ಚು ಜಗತ್ತು ಕಂಡ ಹಾಂಗೆ ನುಡಿದಿದ್ದರೂ ಆ ಕಡೆ ಲಕ್ಷವಹಿಸದೆ, ಶಿವನಿಗೆ ಮೆಚ್ಚಿ ಹೊರಟಿದ್ದಾಳೆ. ದಾರಿಯಲ್ಲಿ ಕಾಮುಕರು ಕಾಡುತ್ತಿದ್ದಾರೆ. ಅದ್ಯಾವುದನ್ನು ಲೆಕ್ಕಿಸದೆ ಕಲ್ಯಾಣದ ಜಪಗೈಯುತ್ತಾ, ಬಸವನ ನಾಮ ಸ್ಮರಿಸುತ್ತಾ ಮುಂದೆ ಮುಂದೆ ಬರುತ್ತಿದ್ದಾಳೆ.

ಕಲ್ಯಾಣದ ಹೆಬ್ಬಾಗಿಲಿಗೆ ಬಂದಿದ್ದಾಳೆ ಅದಕ್ಕೆ ಕೈ ಮುಗಿಯುತ್ತಿದ್ದಾಳೆ. ಮನಸ್ಸು ತುಂಬಿ ಬಂದಿದೆ. ‘ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ’ ಎನ್ನುತ್ತಾ ಪಾವನ ಭೂಮಿ ಮೇಲೆ ಪವಿತ್ರವಾದ ಪಾವನ ಕಾಲಿಟ್ಟಿದ್ದಾಳೆ. ಅಲ್ಲಿ ಇದ್ದ ಕಿನ್ನರಿ ಬೊಮ್ಮಣ್ಣ ಶರಣರನ್ನು ಕಂಡು ಕೈಮುಗಿಯುತ್ತಾಳೆ.

ಅನುಭವ ಮಂಟಪದೂಳಗೆ ಬಸವಾದಿ ಶರಣರು-ಶರಣೆಯರು ಕುಳಿತಿದ್ದಾರೆ. ಎದುರಿಗೆ ಸಿಂಹಾಸನದಲ್ಲಿ ಅಲ್ಲಮ ಪ್ರಭುಗಳು ಗಂಭೀರರಾಗಿ ಕುಳಿತಿದ್ದಾರೆ. ಆಧ್ಯಾತ್ಮಿಕ ಬಾಗಿಲಿಗೆ ಬಂದ ಮಹಾದೇವಿ ನೊಡಿದ ಕೂಡಲೇ ಬಸವಾದಿ ಪ್ರಮಥರು ಎದ್ದು ನಿಲ್ಲುತ್ತಾ ಅಕ್ಕಳಿಗೆ ಕೈಮುಗಿಯುತ್ತಾರೆ. ಆದರೆ ಪ್ರಭುದೇವರು ಮಾತ್ರ ಏನೊಂದು ನುಡಿಯುತ್ತಿಲ್ಲ.

ಎಂದಾಗ ಎಲ್ಲರೂ ಚಕಿತರಾಗುತ್ತಾರೆ. ಅಕ್ಕಳ ವ್ಯಕ್ತಿತ್ವ ಎಂತಹದೆಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಪ್ರಭುದೇವರಿಗೆ. ಅದಕ್ಕಾಗಿ ಅಕ್ಕಳನ್ನು ಪ್ರಶ್ನಿಸಲು ಮುಂದಾಗುತ್ತಾರೆ.

ಎಂದು ಮೊದಲಿನ ಪ್ರಶ್ನೆ ಪ್ರಾರಂಭಿಸಿಯೇ ಬಿಟ್ಟರು ಪ್ರಭುಗಳು. ಏಕೆಂದರೆ ಎಲ್ಲೆಡೆ ಇದೇ ಚರ್ಚೆಯಿದೆ ಗಂಡನನ್ನು ಬಿಟ್ಟು ಹೊರಟಿದ್ದಾಳೆಂದು. ಅವಳ ಬಾಯಿಂದಲೇ ಉತ್ತರ ಕೊಡಿಸಬೇಕಾಗಿದೆ ಅವರಿಗೆ.

ಅಂಜಿಲ್ಲ ಮಾದೇವಿ ಅಳುಕಿಲ್ಲ ಮಾದೇವಿ
ನಂಜುಂಡ ನನ್ನಗಂಡ ಎನುತಾಳ ಪಡಿಲಾಕ
ಹೆಜ್ಜಿನಾ ಇಟ್ಟಿನಿ ಇಲ್ಲಿಗೆ.

ಚನ್ನಮಲ್ಲಿಕಾರ್ಜುನನೇ ಗಂಡ ಎನಗೆ, ಉಳಿದವರುನನಗ ಸಂಬಂಧವಿಲ್ಲ ಪ್ರಭುದೇವ ಎನ್ನುತ್ತ ಬಹಳದಿನದ ತನ್ನ ಮನದಿಂಗಿತವನ್ನು ಅಕ್ಕ ಬಲ್ಲವರ ಮಧ್ಯೆ ನಿಂತುಕೊಂಡು ಬಹಿರಂಗ ಪಡಿಸಿದ್ದಾಳೆ. ಪರಶಿವನೇ ಗಂಡ ಆಗಿರುವಾಗ ಲೌಕಿಕ ಪುರುಷರೊಂದಿಗೆ ಯಾವ ಸಂಬಂಧವಿಲ್ಲವೆಂದು ಸ್ಪಷ್ಟವಾಗಿ ನಿರೂಪಿಸುತ್ತಾಳೆ. ಅಂತಹ ಗಂಡನನ್ನು ಒಲಿಸಿಕೊಳ್ಳುವ ಪರಿಯಾವುದು ಎಂಬುದನ್ನು ಅರಿಯುವದಕ್ಕಾಗಿ ನಿಮ್ಮಂತಹ ಅನುಭಾವಿಗಳ ತಾಣಕ್ಕೆ ಬಂದಿದ್ದೇನೆ. ಇಲ್ಲಿ ನನ್ನನ್ಯಾರು ಕಾಮ ದೃಷ್ಟಿಯಿಂದ ನೋಡುವವರಿಲ್ಲ. ಪ್ರೇಮದ ಸ್ವರೂಪಿಗಳಾಗಿರುವ ತಮ್ಮ ಮಡಿಲಿನಲ್ಲಿ ನಿರಾಳವಾಗಿದ್ದು ಬದುಕಬಲ್ಲೆ ಗುರುವೆ ಎಂಬುತ್ತರ ಕೊಡುತ್ತಾಳೆ ಅಕ್ಕ ಆದರೂ ಪ್ರಭುದೇವರು ಮುಂದುವರೆಯುತ್ತಾರೆ.

ಪರಶಿವನೇ ತನ್ನ ಗಂಡ ಎಂದು ಹೇಳಿದ್ದರೂ ಪ್ರಭುದೇವ ಕರಿಕೇಶದಿಂದ ಮುಚ್ಚಿಕೊಂಡು ನಿನಗೆ ಈ ಕಾಯದ ಪ್ರೇಮ ಅಳಿಸಿ ಹೋಗಿಲ್ಲ. ನಾನು ನನ್ನದೆಂಬ ಭಾವನೆ ನಿನ್ನೊಳಗಿಂದ ಇನ್ನು ಮಾಸಿಲ್ಲ. ಇದು ನ್ಯಾಯದ ಪೀಠ ಈ ಪೀಠದ ಎದುರಿಗಿ ನಿಂತು ನ್ಯಾಯದ ಉತ್ತರಕೊಡು ಎನ್ನುತ್ತಾರೆ.

ಕಾಯದ ಭ್ರಾಂತಿ ಕಳೆದುಕೊಂಡಿಲ್ಲ ನೀನಿನ್ನು ಎಂದಾಗ ಕಾಯದ ವಿವರಣೆ ಕೊಟ್ಟು ನ್ಯಾಯದ ಉತ್ತರ ಕೊಡುತ್ತಾಳೆ ಅಕ್ಕ. ಮಾಯ, ಮೋಹ, ಮದ, ಮತ್ಸರ ಸುಟ್ಟಿರುವೆನೆಂದೇ ಉಟ್ಟಸೀರೆ ಕಳಚಿ ಬಂದಿದ್ದೇನೆ. ಈ ಕಾಯ ಎಷ್ಟು ಸುಂದರವಾಗಿದೆಯೋ ಒಳಗೆ ಅಷ್ಟೆ ವಿಕಾರಗೊಂಡಿದೆ. ಈ ವಿಕಾರತೆಗಾಗಿಯೇ ಹೆಣ್ಣನ್ನು ಕಾಮದ ದೃಷ್ಠಿಯಿಂದ ನೋಡುತ್ತಿದ್ದಾರೆ. ಈ ಕಾಯ ವಿಕಾರ ಎಂತ್ಹೆಂತವರ ಮನಸ್ಸು ಕೆಡಿಸಿದೆ.ನಿಮ್ಮಂತಹ ನ್ಯಾಯವಂತರೂ ಇದರಿಂದ ಬೇಸರಿಸಿಕೊಳ್ಳಬಾರದೆಂಬ ಭಾವನೆಯಿಂದ ಕೂದಲನ್ನು ಮುಚ್ಚಿದೆ ಪ್ರಭುದೇವ ಎಂದು ಉತ್ತರ ಕೊಡುತ್ತಾಳೆ. ಪ್ರಭುದೇವರ ನುಡಿಗೊಂದು ಅಕ್ಕ ಉತ್ತರ ಕೊಟ್ಟಿದ್ದಾಳೆ. ಬಸವಾದಿ ಶರಣರೆಲ್ಲರಿಗೂ ಅಕ್ಕಳ ಮಾತುಗಳಿಂದ ಧೈರ್ಯ ಬಂದಿದೆ. ಪ್ರಭುದೇವರು ಸಂತುಷ್ಟಗೊಂಡಿದ್ದಾರೆ.

ಎಂದು ಸ್ವತಃ ಪ್ರಭುದೇವರು ನುಡಿಯುತ್ತ ಕೆಳಗೆ ಬಂದು ಶರಣಾರ್ಥಿ ಮಾದೇವಿ ಸಣ್ಣವಳು ನೀನಲ್ಲವ್ವ ಎಲ್ಲರಿಗೂ ಅಕ್ಕ ನೀನು. ಜ್ಞಾನದಲ್ಲಿ ಅನುಭವದಲ್ಲಿ ನೀನು ಬಹಳ ದೊಡ್ಡವಳು ತಾಯಿ ಎಂದು ನಡಿಯುತ್ತಾರೆ. ಪ್ರಭುದೇವರ ಮಾತು ಮುಗಿಯುವಷ್ಟರಲ್ಲಿಯೇ ಎಲ್ಲರೂ ಕೈಮುಗಿಯುತ್ತಾರೆ.

ಮಗಳಾದಳು ಅಕ್ಕ ಎಲ್ಲ ಶರಣರಿಗೆ. ಎಲ್ಲರೂ ಆ ದಿವ್ಯರೂಪದ ಅಂತರಂಗ ಬಹಿರಂಗಕ್ಕೆ ಮಾರುಹೋದವರೆ. ಅಕ್ಕಳ ನಡೆ-ನುಡಿ ಅನುಪಮ.

ಅಂತಹ ಅಕ್ಕಳಿಗೆ ಮಗಳೆಂದು, ತಾಯಿಯೆಂದು, ಅಕ್ಕಳೆಂದು ಗೌರವಿಸುವ ಶರಣರ ಬಳಗದೊಂದಿಗೆ ಅಕ್ಕ ಕಲ್ಯಾಣದಲ್ಲಿ ಪರಮತೆಯನ್ನು ಸಾಧಿಸಿಕೊಂಡಳು.ಮುಂದಿನ ದಾರಿಯನ್ನು ಸ್ಪಷ್ಟವಾಗಿ ಅರಿತಳು. ಬಸವಣ್ಣನವರ ಭಕ್ತಿ, ಚನ್ನಬಸವಣ್ಣನವರ ಜ್ಞಾನ, ಪ್ರಭುದೇವರ ತ್ಯಾಗ ತತ್ವಗಳನ್ನು ಅಕ್ಕಳ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. ಅಂತೆಯೆ ಭಕ್ತಿ, ಜ್ಞಾನ, ತ್ಯಾಗದಿಂದ ಮುಪ್ಪುರಿಗೊಂಡಿದ್ದಳು. ಕಲ್ಯಾಣದಲ್ಲಿ ಅಕ್ಕ ಏರಿದ ನೀಲವನ್ನು ಗುರುತಿಸಿ ಪ್ರಭುದೇವರು ಕದಳಿಗೆ ಹೋಗಲು ತಿಳಿಸುತ್ತಾರೆ. ಅಕ್ಕಳಿಗೆ.

ತನ್ನ ಮನದೊಡೆಯನನ್ನು ಕಂಡು ಕೂಡಲು ಅಕ್ಕ ಕದಳಿಗೆ ಹೋಗಲೇಬೇಕು ಎಂಬ ಪ್ರಭುದೇವರ ಮಾತಿಗೆ ಅಕ್ಕ ಹರುಷದಿಂದ ಒಪ್ಪಿಕೊಂಡಳು. ಹೊರಟೇ ಬಿಟ್ಟಳು. ಆದರೆ ಬಸವಣ್ಣನವರ ಮಾನಸ ಮಗಳಾದ ಅಕ್ಕಳನ್ನು ಬಿಟ್ಟು ಹೋಗುವದು ಅವರಿಗೆ ಅತೀವ ದುಃಖವನ್ನುಂಟು ಮಾಡುತ್ತಿದೆ. ಆದರೂ ಪ್ರಭುದೇವರ ಮಾತು ಮಿರುವಂತಿಲ್ಲ. ಅಕ್ಕಳ ದಿನ ನಿಗದಿಯಾಯಿತು. ಆದಿನ,

ಇಡೀ ಬಸವ ಬಳಗವೇ ಮಹಾಮನೆಯಲ್ಲಿ ಕೂಡಿದೆ ಎಲ್ಲರ ಮನಸ್ಸಿನಲ್ಲಿ ತಳಮಳ ದುಃಖ ತಮ್ಮಲ್ಲರ ಮಧ್ಯೆ ಉಳಿದು ಎಲ್ಲರ ಬಾಯಲ್ಲಿರುವ ಅಕ್ಕ ತಮ್ಮೆಲ್ಲರನ್ನು ಬಿಟ್ಟು ಹೋಗುತ್ತಿರುವದು ಅವರಿಗೆ ನೋವನ್ನುಂಟು ಮಾಡಿದೆ. ಮಗಳಿಗೆ ಗಂಡನ ಮನೆಗೆ ಕಳುಹಿಸುವ ದೃಶ್ಯ ಅಲ್ಲಿ ನಿರ್ಮಾಣವಾಗಿದೆ. ಎಷ್ಟೆ ದುಃಖವಿದ್ದರೂ ಮಗಳಿಗೆ ಕಳುಹಿಸಬೇಕೆಲ್ಲವೆ? ಇಲ್ಲಿ ಸಹ ಅಕ್ಕಳಿಗೆ ಚನ್ನಮಲ್ಲಿಕಾರ್ಜುನ ಮನೆಗೆ ಕಳುಹಿಸಲು ಸಮಸ್ತ ಶರಣರು ನೆರೆದಿದ್ದಾರೆ. ಉಡುತಡಿಯಂದ ಕಲ್ಯಾಣಕ್ಕೆ ಬರುವಾಗ ದಿಗಂಬರಿಯಾಗಿ ಬಂದ ಅಕ್ಕ ಇಂದು ತವರು ಮನೆಯ ತನ್ನ ತಂದೆ ಬಸವಣ್ಣನವರು ಉಡಿಸಿದ ಬಿಳಿಸೀರೆ ಉಟ್ಟಿದ್ದಾಳೆ, ಕೂದಲು ಹಾಗೆ ಬಿಟ್ಟಿದ್ದಾಳೆ. ಹಣೆಯ ಮೇಲೆ ವಿಭೂತಿ ಕೊರಳಲ್ಲಿ ಲಿಂಗ, ರುದ್ರಾಕ್ಷಿ. ನೋಡಿದರೆ ಆ ಸಾತ್ವಿಕ ಕಳೆಗೆ ಇನ್ನೊಮ್ಮೆ ನೋಡಬೇಕು ಎನ್ನುವಷ್ಟು ಸೌಂದರ್ಯ.

ಅಷ್ಟಾವರಣೆಯಾದ ಅಕ್ಕ ಲಿಂಗಾನುಭೋಗಿಯಾದ ಅಕ್ಕಳ ಶರೀರದ ತುಂಬೆಲ್ಲಾ ಜನಪದರು ಅಷ್ಟಾವರಣ ಷಟ್‌ಸ್ಥಲಗಳನ್ನೆ ಗುರುತಿಸುತ್ತಾರೆ. ಆಕೆಯ ಸೆರಗು ಅರ್ಥಾತ ಶಿರದ ಮೇಲೆ ಬಸವಣ್ಣನವರ ಆಶೀರ್ವಾದ.

ಕರುಣರಸದ ಘಟ್ಟವಿದು. ಜನಪದರ ಅದ್ಭುತ ಕಲ್ಪನೆ! ಶರಣರ ಸಂಬಂಧಗಳು ಎಷ್ಟುಗಟ್ಟಿಯಾಗಿದ್ದವು ಎಂಬುದನ್ನು ಅರಿಯಬಹುದಾಗಿದೆ. ಎಲ್ಲರ ಕಣ್ಣಲ್ಲಿ ನೀರು ಕಂಡ ಅಕ್ಕಳಿಗೆ ದುಃಖವಾಗಿ ಅವಳ ಕಣ್ಣಲ್ಲಿ ನೀರು ಹರಿಯಲು ಆರಂಭಿಸಿತು. ಗದ್ಗಗೊಂಡ ಅಕ್ಕ

ಬಸವಣ್ಣನವರ ತಲೆಗೆ ಹೊವು ತರುವೆನು ಹೊರತು ಹುಲ್ಲು ತಾರೆನು! ನಿಮ್ಮೆಲ್ಲರ ಮಾರ್ಗವೇ ನನಗೆ ಶಿವ ಮಾರ್ಗ ಆ ಮಾರ್ಗದಲ್ಲಿ ನಡೆದು ನನ್ನ ಗುರಿ ತಲುಪುತ್ತೆನೆಂಬ ವಿಶ್ವಾಸದ ಮಾತು ಆಡುತ್ತಾ ಕಲ್ಯಾಣದ ಭೂಮಿಗೆ ನಮಿಸುವಷ್ಟರಲ್ಲಿ ಮಡಿವಾಳ ಮಾಚಿದೇವರು ಬಂದು.

ಹಡೆದಿಗೆ ನಮಿಸಿ. ಕಲ್ಯಾಣ ತಾಯಿಗೆ ನಮಿಸಿ ಅಕ್ಕ ಕಲ್ಯಾಣ ಬಿಟ್ಟು ಭರಭರನ ಹೆಜ್ಜೆ ಹಾಕುತ್ತಾ ನಡೆದೆ ಬಿಟ್ಟಳು. ಶರಣರು ಅಕ್ಕ ಮರೆಯಾಗುವ ತನಕ ಅಲ್ಲಿಯೇ ನಿಂತರು. ಒಬ್ಬರಿಗೊಬ್ಬರು ಸಮಾಧಾನ ಮಾಡುತ್ತ ತಮ್ಮ ತಮ್ಮ ಕಾಯಕಗಳಿಗೆ ನಡೆಯುತ್ತಾರೆ.

ಈ ಕಡೆ ಅಕ್ಕ ಬಸವಾದಿ ಶರಣರನ್ನು ನೆನೆಯುತ್ತಾ ಕದಳಿಗೆ ಬಂದಿದ್ದಾಳೆ. ಶರಣರಿಗೆ ಹೇಳಿದಂತೆ ಅಕ್ಕ ತನ್ನ ಸಾಧನೆಯನ್ನು ಮುಂದುವರಿಸುತ್ತಾಳೆ.

ಹಸಿವು ನೀರಡಿಕೆ ಇಲ್ಲ ಅಕ್ಕಳಿಗೆ ಲಿಂಗದೊಂದಿಗೆ ಮಾತು ನಡೆದಿವೆ ಮೌನವಾಗಿ. ಭಕ್ತಿಯೊಂದೇ ಮೈಮನದಲ್ಲಿ ಹಾಸು ಹೊಕ್ಕಾಗಿದೆ. ಹುಲಿ, ಆನೆ, ಹಾವುಗಳೆಲ್ಲ ಸುತ್ತೆಲೂ ಹರಿದಾಡುತ್ತಿವೆ. ಆದರೆ ಅಕ್ಕ ಸ್ಥಿತಪ್ರಜ್ಞೆಳಾಗಿದ್ದಾಳೆ.

ಶರೀರದಿಂದಲೇ ಎಲ್ಲವೂ ಸಾಧ್ಯ ಎಂಬುದುನ್ನು ಅಕ್ಕ ಸಾಧಿಸಿ ತೋರಿಸಿದ್ದಾಳೆ. ಜಂಗಮಮೂರ್ತಿ ಚನ್ನಮಲ್ಲಿಕಾರ್ಜುನನ್ನು ಲಿಂಗದೊಳು ಕಂಡು ಅಂಗಲಿಂಗ ಸಮಸರಗೊಳಿಸಿದ್ದಾಳೆ. ತಾನಾರು? ಎಂಬುದನ್ನು ಸಾಧಿಸಿ ತೋರಿದ್ದಾಳೆ.

ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್‌ ನಂ. 94821 47084

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.

Loading

Leave a Reply