ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ: ಅಚಲಸಿಂಹಾಸನವನಿಕ್ಕಿ / ಸಚರಾಚರವ ನುಂಗುವ ಪರಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಚಲಸಿಂಹಾಸನವನಿಕ್ಕಿ;
ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
ರುಚಿಗಳೆಲ್ಲವ ನಿಲಿಸಿ
ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,
ಖೇಚರಾದಿಯ ಗಮನ.
ವಿಚಾರಿಪರ ನುಂಗಿ. ಗುಹೇಶ್ವರ ನಿಂದ ನಿಲುವು
ಸಚರಾಚರವ ಮೀರಿತ್ತು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-196)


ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:
ಸಂಚದೋವರಿ: ಹೃದಯವೆಂಬ ಗೂಢಗವಿ, ಶಿರದ ಅಂತರಂಗದ ಚಿತ್‌ ಆಕಾಶದ ಗವಿ.
ಓವರಿ: ರಹಸ್ಯದ ಕೋಣೆ, ಒಳಮನೆ, ಪಕ್ಕದ ಮನೆ, ಕವಚ, ಒರೆ.
ರುಚಿ: ಕಾಂತಿ, ಕಿರಣ, ಆಸಕ್ತಿ.
ಪಂಚರತ್ನಗಳು: ವಜ್ರ, ವೈಢೂರ‍್ಯ, ನೀಲಿ, ಪದ್ಮರಾಗ ಮತು ಹವಳ.
ಖೇಚರ: ಗಂಧರ್ವ.
ಖೇಚರಾದಿಯ ಗಮನ: ವಿವೇಕಿಯ ಗಮನಾಗಮನ.

ಅಲ್ಲಮ ಪ್ರಭುದೇವರು ಈ ನಾಡು ಕಂಡ ಅಪರೂಪದ ದಾರ್ಶನಿಕರು. ಎಲ್ಲ ತತ್ವ ಚಿಂತನೆಗಳ ಸಾಕಾರ ರೂಪ. ಬಯಲು ತಬ್ಬಿಕೊಂಡ ಮಹಾಂತ. ಲೋಕಪರ್ಯಟಣೆಯನ್ನು ಕೈಗೊಂಡ ಜಗದ ಜಂಗಮ. ಜ್ಞಾನ ಮತ್ತು ವೈರಾಗ್ಯಗಳ ಮ್ಯೋಮಮೂರ್ತಿ, ಅಲ್ಲಮ ಪ್ರಭುಗಳ ವಚನಗಳೆಂದರೆ ಕೆಂಡಗಿರಿಯ ಮೇಲಿನ ಅನರ್ಘ್ಯ ರತ್ನ. ಬೆಡಗಿನಿಂದ ಕೂಡಿದ, ಗುಹ್ಯಾತ್ ಗುಹ್ಯ (ರಹಸ್ಯ) ಗಳನ್ನು ತನ್ನೊಡಲೊಳಗೆ ಇರಿಸಿಕೊಂಡ ಜ್ಞಾನಾಂಬುದಿ. ಅಂತಹ ಬೆಡಗಿನಿಂದ ಕೂಡಿದ, ಗುಹ್ಯಾತ್ – ಗುಹ್ಯತೆ ಹೊಂದಿರುವ “ಗುಹೇಶ್ವರ” ನನ್ನು ಸಾಕ್ಷೀಕರಿಸಿಕೊಂಡಿರುವ ಅಲ್ಲಮ ಪ್ರಭುಗಳ ಅದ್ಭುತವಾದ ಒಂದು ವಚನವಿದು.

ಅಲ್ಲಮ ಪ್ರಭುಗಳು ಈ ವಚನವನ್ನು “ಪ್ರಾಣಲಿಂಗಿಸ್ಥಲ” ದಲ್ಲಿ ನಿಂತು ಬರೆಯುತ್ತಾರೆ. ಸೃಷ್ಟಿಯ ರಚನೆ, ಲಿಂಗ, ಲಿಂಗದ ದ್ವೆತ್ವತೆ, ಷಟಸ್ಥಲ ಸಾಧನೆ, ಅಂಗ – ಲಿಂಗ (ಲಿಂಗಾಂಗ) ಸಾಮರಸ್ಯದ ಅದ್ವೆತ್ವತೆಯ ವಿಚಾರವಾಗಿ ಪ್ರಭುಗಳು ಇಲ್ಲಿ ಮಾತನಾಡುತ್ತಾ, ಷಟಸ್ಥಲಗಳ ಸಾಧನೆಯ ಮಹತ್ವ ಮತ್ತು ಪ್ರಾಣಲಿಂಗಿಸ್ಥಲದ ವಿವರ ಎರಡನ್ನೂ ಒಟ್ಟಿಗೆ ಕಟ್ಟಿಕೊಡುತ್ತಾರೆ. ಅದ್ಭುತವಾದ ಬೆಡಗಿನ ವಚನವಿದು.

ಅಂಗನು ಭಕ್ತನಾಗಿ, ಶರಣನಾಗಿ, ಮಹೇಶನಾಗಿ, ನಾಲ್ಕನೇಯ ಮೆಟ್ಟಿಲನ್ನು ಏರುತ್ತಾನೆ. ಆ ನಾಲ್ಕನೆಯ ಮೆಟ್ಟಿಲು “ಪ್ರಾಣಲಿಂಗಿ ಸ್ಥಲ” ವಾಗಿದೆ. ಇಲ್ಲಿಯೇ ಅಂಗನು ಲಿಂಗನಾಗಿ, ಲಿಂಗನು ಅಂಗನಾಗಿ ಲಿಂಗಾಂಗ ಸಾಮರಸ್ಯ ಹೊಂದುವ ಕ್ರಿಯೆ. ಇದೊಂದು ರೀತಿಯ ಆಧ್ಯಾತ್ಮ ಲೋಕದ ಪ್ರಯೋಗಾಲಯ (Laboratory). ಹೇಗೆಂದರೆ ಈ ಪ್ರಯೋಗಾಲಯದಲ್ಲಿ ಅಂಗಪ್ರಾಣಿಯು ಲಿಂಗಪ್ರಾಣಿಯಾಗುವ, ಪಿಂಡಪ್ರಾಣಿಯು ಮಂತ್ರಪಿಂಡವಾಗುವ, ಜೀವಾತ್ಮನು ಪರಮಾತ್ಮನಾಗುವ, ಪ್ರಾಣವೇ ಲಿಂಗವಾಗುವ, ಲಿಂಗವೇ ಪ್ರಾಣವಾಗುವ, ಪ್ರಾಣಲಿಂಗಿಯಾಗಿ ಅಂತಿಮದಲ್ಲಿ ಮೂರ್ತರೂಪ ತಾಳುವ ಹಂತ.

ಈ ಲಿಂಗಾಂಗ ಸಾಮರಸ್ಯದ ಸಾಧನೆಯಲ್ಲಿ ಪ್ರಾಣವು ಬಹು ಮುಖ್ಯವಾದುದು. ಮಾನವರ ದೇಹದೊಳಗೆ ಅಡಗಿರುವ ಈ ಪ್ರಾಣ ಅನೇಕ ಕಾರಣಗಳಿಂದ ಒಂದಕ್ಕೊಂದು ಜೊತೆಯಾಗಿ ಅಥವಾ ಹೊಂದಿಕೊಂಡು ನಡೆಯುವುದಿಲ್ಲ ಮತ್ತು ವಿಚಲಿತವಾಗುತ್ತಿರುತ್ತದೆ. ಹೀಗೆಯೇ ಪ್ರಾಣದಷ್ಟೆ ಚಂಚಲವಾದದ್ದು ಈ ಮನಸ್ಸು. ಈ ಮನಸ್ಸೂ ಕೂಡಾ ಸಂಚಲನ ಕ್ರಿಯೆಗೆ ವಿಚಲಿತ ಕ್ರಿಯೆಗೆ ಒಳಗಾಗುತ್ತಲೆ ಇರುತ್ತದೆ. ಇಷ್ಟೆಲ್ಲಾ ಅಂಗನ ಬಳಗೆ ಅಸ್ಥಿರತೆಗಳು ಹೊಯ್ದಾಡುತ್ತಿರುವಾಗ ಮಾನಸಿಕ ಸ್ಥಿರತೆ ಸಾಧಿಸುವುದು ಕಷ್ಟ. ಪ್ರಾಣದ ಮತ್ತು ಮನಸ್ಸಿನ ಈ ಅಸ್ಥಿರತೆಯು ಕಾಮನೆಗಳಿಗೆ, ವಿಷಯ ವಾಸನೆಗೆ ಆಹ್ವಾನ ನೀಡುತ್ತಿರುತ್ತದೆ. ಇವುಗಳಿಂದ ಅರಿಷಡ್ವರ್ಗಗಳು, ಅಷ್ಟಮದಗಳು, ಸಪ್ತವ್ಯಸನಗಳು ಅಂಗವನ್ನು ಆಳಲು ಪ್ರಾರಂಭಿಸುತ್ತವೆ.

ಈಗ ಅಂಗನು ತನ್ನ ದೇಹದ ರಚನೆಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಅದರೊಳಗಿನ ಪ್ರತಿ ಅಂಗದ ಕಾರ್ಯಗಳ ಕಡೆಗೆ ಗಮನ ನೀಡಬೇಕಾಗುತ್ತದೆ. ಆಗ ಅಂಗನು ತನ್ನ ದೇಹವನ್ನು ದೇವಾಲಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ದೇವಾಲಯದಲ್ಲಿ ದೇವರಿರಬೇಕು. ಆ ದೇವರನ್ನು ಪ್ರತಿಷ್ಠಾಪಿಸಿ, ದೇವರ ದರ್ಶನಕ್ಕೆ ನಿತ್ಯವೂ ಹೋಗಬೇಕಾಗುತ್ತದೆ. ಇದು ಸ್ಥಾವರ ದೇವಾಲಯವಲ್ಲ. ಅಂಗನು ತನ್ನ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಳ್ಳುವ “ಜಂಗಮ ದೇವಾಲಯ” ವಾಗುವ ಹಂತ. ನಿತ್ಯವೂ ದೇವಾಲಯಕ್ಕೆ ದೇವರ ದರ್ಶನಕ್ಕೆ ಶುಚಿಭೂರ್ತವಾಗಿ, ತ್ರಿಕರಣ ಶುದ್ಧಿಯಿಂದ ಹೋಗುವಂತೆ, ದೇವಾಲಯದೊಳಗೆ ಹೋಗುವವನಿಗೆ ದೇವಾಲಯದೊಳಗೆ ಏನಿದೆ ಎಂಬ ಅರಿವು ಇರುವಂತೆ, ಅಂಗನಿಗೆ ತನ್ನ ದೇಹವೆಂಬ ದೇವಾಲಯದಲ್ಲಿ ಏನಿದೆ ಎಂಬ ಅರಿವು ಮೂಡಬೇಕಾಗುತ್ತದೆ. ತನ್ನ ದೇಹವೇ ದೇಗುಲವಾದಾಗ ಅಲ್ಲಿರುವ ದೇವರ ದರ್ಶನಕ್ಕೆ ಯಾವಾಗಲೋ ಒಮ್ಮೆ ಹೋಗಲಾಗದು. ನಿತ್ಯವೂ ಹೋಗಬೇಕು. ಹಾಗೆ ಹೋಗಬೇಕಾದರೆ ತ್ರಿಕರಣ ಶುದ್ಧವಾಗಿಯೇ ಹೋಗಬೇಕು. ಆ ತ್ರಿಕರಣ ಶುದ್ಧಿಗೆ ಲಿಂಗ ಬೇಕು. ಇಷ್ಟಲಿಂಗವು ಪ್ರಾಣಲಿಂಗವಾಗಬೇಕು. ಇದಕ್ಕೆ ನಿಶ್ಚಲತೆ, ಸ್ಥಿರತೆ ಬೇಕಾಗುತ್ತದೆ. ಇದಕ್ಕೆಲ್ಲ ಜ್ಞಾನ – ಕ್ರಿಯೆ ಎರಡೂ ಬೇಕಾಗುತ್ತದೆ. ಹೀಗೆ ಮಾನವನು ದೇವನಾಗುವಲ್ಲಿ, ದೇಹವು ದೇವಾಲಯವಾಗುವಲ್ಲಿ, ಅಂಗವು ಲಿಂಗವಾಗುವಲ್ಲಿ ಎಲ್ಲದಕ್ಕೂ ಸಂಸ್ಕಾರಬೇಕು. ಇದೇ ಗಮನ. ಆದರೆ ಅರಿವು ಇಲ್ಲದೆ ಸಂಸ್ಕಾರ ಬರಲು ಸಾಧ್ಯವೇ ಇಲ್ಲ. ಆದ್ದರಿಂದ ಮಾವನರ ದೇಹ ರಚನೆಯ ಸೂಕ್ಷ್ಮತೆಯನ್ನು, ವೈಶಿಷ್ಟತೆಯನ್ನು ತಿಳಿಯದೆ ಹೋದರೆ ಅಂಗವು ಲಿಂಗವಾಗುವುದು ಕಷ್ಟವಾಗುತ್ತದೆ. ಈ ಕ್ರಮಗಳನ್ನೇ ಅಲ್ಲಮಪ್ರಭುಗಳು “ಅಚಲ ಸಿಂಹಾಸನ” ಮತ್ತು “ನಿಶ್ಚಲ ಮಂಟಪ” ಎಂಬ ಎರಡು ಪ್ರಮುಖ ರೂಪಕಗಳ ಮೂಲಕ ಹೇಳುತ್ತಾರೆ.

ಅಚಲ ಸಿಂಹಾಸನವೆಂದರೆ ಅಂಗನ “ದೇಹ”, ನಿಶ್ಚಲ ಮಂಟಪವ ಎಂದರೆ ದೇಹದ ಒಳಗಿರುವ ಪ್ರಾಣ ಮತ್ತು ಮನಸ್ಸು. “ಅಚಲಸಿಂಹಾಸನವನಿಕ್ಕಿ ನಿಶ್ಚಲಮಂಟಪದ ಸಂಚದೋವರಿಯೊಳಗೆ ರುಚಿಗಳೆಲ್ಲವ ನಿಲ್ಲಿಸಿ” ಈ ಸಾಲಿನ ಮಹತ್ವವೆಂದರೆ ಪ್ರಾಣಲಿಂಗಿಸ್ಥಲವನ್ನೇರಲು ಹೊರಟಿರುವ ಭಕ್ತ ಅಥವಾ ಸಾಧಕ ಅಥವಾ ಅಂಗನು ಮೊದಲು ತನ್ನ ದೇಹವನು ಶುಚಿಭೂರ್ತವಾಗಿಸಿಕೊಂಡು ಸ್ಥಿರವಾಗಿರಿಸಿಕೊಂಡು ಒಪ್ಪವಾದ ಸಿಂಹಾಸವನ್ನಾಗಿಸಿಕೊಳ್ಳಬೇಕು. “ಸಿಂಹಾಸನ” ಎಂದರೆ ಹೆಸರೇ ಸೂಚಿಸುವಂತೆ ಸಿಂಹ ಆಸನವಾಗುವ ಗಂಭೀರವಾದ ಸ್ಥಲ. ಅದು ಮುತ್ತು, ರತ್ನ, ಹವಳ, ನೀಲ, ಪಜ್ಜೆಗಳಂತಹ ಅಮೂಲ್ಯ ರತ್ನಗಳಿಂದ, ಬಂಗಾರ, ಬೆಳ್ಳಿಗಳಂತಹ ಶ್ರೇಷ್ಠ ಲೋಹಗಳಿಂದ ಮಾಡಲ್ಪಟ್ಟಂತೆ, ಅಂಗನ ಅಚಲ ಸಿಂಹಾನ ಅಂದರೆ ದೇಹವನ್ನು ಸ್ನಾನದಿಂದ ಶುಚಿಯಾಗಿಸಿ, ಭಸಿತ, ರುದ್ರಾಕ್ಷಿಗಳಿಂದ ಅಲಂಕೃತವಾಗಿಸಿ ಮಂತ್ರಗಳಿಂದ ಪವಿತ್ರವಾಗಿಸಬೇಕಾಗುತ್ತದೆ. ಆಗ ಸ್ಥಿರವಾದ ಮನಸ್ಸು, ಪ್ರಾಣವೆಂಬ ಮಂಟಪದ ಪ್ರತಿಷ್ಠಾಪನೆ ಆಗುತ್ತದೆ. ಅದೇ “ನಿಶ್ಚಲಮಂಟಪ”. ಆಗ ಯಾವ ಹರಿತವಾದ ಖಡ್ಗವನ್ನು ಒಬ್ಬ ರಾಜನೂ ಕೂಡ ಹಾನಿಯನ್ನುಂಟು ಮಾಡಬಾರದು ಎಂದು ಸದಾ ತನ್ನ ಓವರಿ (ಕವಚ, ಒರೆ) ಒಳಗೆ ಇಟ್ಟುಕೊಳ್ಳುತ್ತಾನೋ ಹಾಗೇ ಲಿಂಗವಾಗುತ್ತಿರುವ ಅಂಗನು ತನ್ನ ವಿಷಯಾಸಕ್ತಿಗಳನ್ನು (ವಿಷಯ ವಾಸನ, ಕಾಮನೆ) ಒರೆಯೊಳಗೆ ಖಡ್ಗವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಆ ಸ್ಥಿರ ಮನಸ್ಸನ್ನು ಆಚೆ ಈಚೆ ಸಂಚರಿಸದಂತೆ ನಿಲ್ಲಿಸಿಕೊಳ್ಳಬೇಕು.

ಮುಂದಿನ ವಚನದ ಸಾಲುಗಳು ಅಂಗನ ದೇಹ ರಚನೆಯತ್ತ ಗಮನ ಸೆಳೆಯುತ್ತವೆ. ಅಂಗ – ಲಿಂಗವಾಗುವ ರಾಸಾಯನಿಕ ಕ್ರಿಯೆಯೆಡೆಗೆ ಕೊಂಡೊಯ್ಯುತ್ತವೆ. ಪಂಚರತ್ನದ ಶಿಖರ ಅಂಗನ ದೇಹ ಅಂದರೆ ಪಂಚ ಇಂದ್ರಿಯಗಳು. “ಪಂಚರತ್ನಗಳು” ಎಂಬ ಶಬ್ದವು ಅಂಗನು ತನ್ನ ಅಂಗೇಂದ್ರಿಯಗಳನ್ನು ಲಿಂಗೇಂದ್ರಿಯ ಮಾಡಿಕೊಂಡಾಗ ಅವು ಪಂಚರತ್ನಗಳಾಗುತ್ತವೆ. ಕಣ್ಣು, ಬಾಯಿ, ಮೂಗು, ಕಿವಿ, ಚರ್ಮಗಳು ರೂಪು, ರಸ, ಗಂಧ, ಶ್ರವಣ, ಸ್ವರ್ಶ ಗ್ರಹಿಕೆಯಲ್ಲಿ ಅರಿವಿನಿಂದ ಕೂಡಿರಬೇಕು. ಆ ಅರಿವಿನ ರೂಪವೇ “ಮಿಂಚುಕೋಟಯ ಕಳಸ”. ಅಂದರೆ ಅಂಗನ ಶಿರ, ಶಿರವೇ ದೇಹದ ಪ್ರಮುಖ ಅಂಗ. ಅಲ್ಲಿ ಅರಿವಿಗೆ ಆಶ್ರಯ ನೀಡುವ ಮೆದುಳು ಇದೆ. ಇದನ್ನೇ ಬಸವಣ್ಣನವರು ತಮ್ಮ ವಚನದಲ್ಲಿ ನಿಚ್ಚಳವಾಗಿ ಉಲ್ಲೇಖಿಸುತ್ತಾರೆ.

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-229/ವಚನ ಸಂಖ್ಯೆ-821)

ಎಂದು ದೇಹವನ್ನು ದೇವಾಲಯವನ್ನಾಗಿ ಮಾಡುವ ಕಲ್ಪನೆ ನೀಡುವಾಗ “ಶಿರ” ವನ್ನು ಬಂಗಾರದ ಕಳಸಕ್ಕೆ ಹೋಲಿಸಿದಂತೆ ಅಲ್ಲಮ ಪ್ರಭುಗಳು ಅದನ್ನು “ಮಿಂಚುಕೋಟಿಯ ಕಳಸ” ಎಂದಿದ್ದಾರೆ. ಮೆದುಳಿನೊಳಗಿನ ಅರಿವು ಮಿಂಚಿಗೆ ಸಮ. ಹೀಗೆ ಈ ಜ್ಞಾನದಿಂದ ಪಂಚೇಂದ್ರಿಯಗಳ ಕ್ರಿಯೆ ನಿಯಂತ್ರಿಸಲ್ಪಡುತ್ತದೆ. ಅಂಗಕ್ರಿಯೆಯು ಲಿಂಗಕ್ರಿಯೆಗೆ ಬಳಪಡುವಾಗ ಜ್ಞಾನದ ಅವಶ್ಯಕತೆ ಬೇಕೇ ಬೇಕು. ಹೀಗೆ ಅಂಗ ಪ್ರಾಣಿ ಲಿಂಗ ಪ್ರಾಣಿಯಾಗುವ ಜ್ಞಾನ ಮತ್ತು ಕ್ರಿಯೆ ಎರಡರ ಅವಶ್ಯಕತೆ ಬಹಳ ಮುಖ್ಯ. ಅಂಗೇಂದ್ರಿಯಗಳು ಲಿಂಗೇಂದ್ರಿಯಗಳಾಗಿ ಆಗಿ ಪರಿವರ್ತಿತವಾಗುವ ಅಂಗಭಾವ ತ್ಯಜಿಸಿ ಲಿಂಗಭಾವ ಬೆಳೆಸಿಕೊಳ್ಳುವಾಗ ಜ್ಞಾನ ಮತ್ತು ಕ್ರಿಯೆ ಎರಡೂ ಅವಶ್ಯಕವಾಗಿವೆ. ಏಕೆಂದರೆ “ಜ್ಞಾನವು ಕ್ರಿಯೆಯ ಅವ್ಯಕ್ತ ರೂಪವಾದರೆ ಕ್ರಿಯೆಯು ಜ್ಞಾನದ ವ್ಯಕ್ತ ರೂಪ”. ಅದಕ್ಕೆ ತಾರ್ಕಿಕವಾಗಿ ಏನಾದರೂ ತಪ್ಪಾದ ಕೆಲಸವಾಗಿದ್ದರೆ ಹಿರಿಯರು “ಅರಿವು ಎಲ್ಲಿ ಹೋಗಿತ್ತು, ಅರಿವುಗೇಡಿ, ಅರಿವಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಬೈಯುವುದು ಸರ್ವೇ ಸಾಮಾನ್ಯ. ಆದ್ದರಿಂದ ತಿಳಿದುಕೊಳ್ಳುವುದು ಜ್ಞಾನವಾದರೆ, ತಿಳಿದಂತೆ ನಡೆಯುವುದು ಕ್ರಿಯೆ ಆಗುತ್ತದೆ. ಅರಿತು ನಡೆಯದಿದ್ದರೆ ಅದೇ ಅಜ್ಞಾನವಾಗುತ್ತದೆ ಎನ್ನುವ ಮೂಲಕ ಅಲ್ಲಮಪ್ರಭುಗಳು ಅಂಗನು ಲಿಂಗವಾಗಲು ಜ್ಞಾನ ಮತ್ತು ಕ್ರಿಯೆಯ ಸಾಮರಸ್ಯ ಹೊಂದಬೇಕು. ಎರಡನ್ನೂ ಸಮನ್ವಯಗೊಳಿಸಿಕೊಳ್ಳಬೇಕು ಎಂಬ ತತ್ವವನ್ನು ತಿಳಿಸುತ್ತಾರೆ.

ಮುಂದಿನ ಸಾಲುಗಳು ಅಂಗವು ಲಿಂಗವಾಗುವ, ಅಂಗೇಂದ್ರಿಯ ಜ್ಞಾನ – ಲಿಂಗೇಂದ್ರಿಯ ಜ್ಞಾನ ನೀಡುವ “ವಚನ ವಿಚಿತ್ರದ ಪುಷ್ಪದ ರಚನೆಯ ನವರಂಗ” ಎಂಬುದಾಗಿದೆ. ಅಂಗನ ದೇಹದ ರಚನೆ ಮತ್ತು ಅದರ ವಿಕಾಸದ ಜೊತೆಗೆ ಲಿಂಗನ ದೇಹದ ರಚನೆ ಮತ್ತು ವಿಕಾಸದ ವಿವರಗಳು ಕಾಣಿಸಿಕೊಳ್ಳುತ್ತವೆ. ತುಂಬಾ ಸುಂದರವಾಗಿ ಇದನ್ನು ಪ್ರಭುಗಳು ನಿರೂಪಿಸುತ್ತಾರೆ. ಷಟಸ್ಥಲ ಸಿದ್ಧಾಂತದಲ್ಲಿ ವಿಶ್ವದ ಮೂಲತತ್ವವೇ “ಸ್ಥಲ” ವಾಗಿದೆ. ವಿಶ್ವದ ಮೂಲತತ್ವ ತನ್ನ ಲೀಲಾ ವಿನೋದದಿಂದ ಜಗತ್ತಿನ ರೂಪ ತಾಳಿ ಅಂಗ, ಲಿಂಗ ಎಂಬ ದ್ವೆತ್ವ ಎಂಬ ಭಿನ್ನ ಭಾವ ತಾಳುವುದು ನಂತರದಲ್ಲಿ ಅಂಗನು ಸಾಧನಾ ಮಾರ್ಗಗಳನ್ನು ಕ್ರಮಿಸುತ್ತಾ ಅಂಗನು ತ್ಯಾಗ್ಯಾಂಗ, ಭೋಗಾಂಗ, ಯೋಗಾಂಗ ಎಂಬ ಮೂರು ರೂಪ ಧರಿಸಿ ಮುಂದೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಆರು ರೂಪವಾಗಿ ಒಟ್ಟು ನವರೂಪ (ಒಂಭತ್ತು) ಹಂತದಲ್ಲಿ ಅರಳುತ್ತಾನೆ. ಇದೇ ನವರಂಗದಲ್ಲಿ ಅಂಗನು ಅರಳುವಿಕೆ. ಹಾಗೆಯೇ ಲಿಂಗವು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಚರಲಿಂಗ, ಪ್ರಸಾದಲಿಂಗ, ಮಹಾಲಿಂಗ ಆಗುತ್ತದೆ. ಇದನ್ನು ಪ್ರಭುಗಳು “ವಚನ ವಿಚಿತ್ರದ ಪುಷ್ಟ ರಚನೆ ನವರಂಗ” ಎನ್ನುತ್ತಾರೆ. ಅಂದರೆ ಸೃಷ್ಟಿಕ್ರಿಯೆಯಲ್ಲಿ ಪುಷ್ಪದ ರಚನೆ ಅನಿರ್ವಚನೀಯ (ವಚನ ವಿಚಿತ್ರ). ಮುಗುಳಾಗಿ, ಮೊಗ್ಗಾಗಿ, ಅರಮೊಗ್ಗಾಗಿ ಅರಳಿ, ಸಂಪೂರ್ಣವಾಗಿ ಅರಳಿ ಸಾರ್ಥಕವಾಗುವುದು. ಮುಗುಳಾದದ್ದು ವಿಕಸಿತ ಪುಷ್ಪದ ರಚನೆಯಾಗುವುದು ನಿಸರ್ಗದ ರಹಸ್ಯವೂ ಹೌದು, ಚೋದ್ಯವೂ ಹೌದು. ಈ ಕ್ರಿಯೆ ಯಾವಾಗ, ಹೇಗೆ, ಎಷ್ಟೊತ್ತಿಗೆ ನಡೆಯಿತು ಎಂದು ಹೇಗೆ ವಿವರಿಸಲು ಅಸಾಧ್ಯವೋ ಹಾಗೆಯೇ ಅಂಗನು ನವರಂಗವಾಗಿ ಲಿಂಗನಾಗುವುದು, ಲಿಂಗವು ನವರಂಗವಾಗಿ ಮಹಾಲಿಂಗವಾಗುವ Process ಇದು ಇದು ರಹಸ್ಯವೇ ಆಗಿರುತ್ತವೆ ಮತ್ತು ಚೋದ್ಯವೂ ಆಗಿರುತ್ತವೆ.

ಕೊನೆಯ ಸಾಲುಗಳಂತೂ ಇನ್ನೂ ಅದ್ಭುತವಾಗಿವೆ. “ವಿಚಾರಿಪರ ನುಂಗಿ ಗುಹೇಶ್ವರ ನಿಂದ ನಿಲುವು ಸಚರಾಚರವ ಮೀರಿತ್ತು” ಎಂಬುದು ವಿಚಾರಿಪರು, ತರ್ಕವಾದಿಗಳು, “ಸಚರಾಚರ” ಜಗತ್ತು, ಲೋಕ, ಸೃಷ್ಟಿ ಎಂಬುದು.

ಷಟಸ್ಥಲ ಸಿದ್ಧಾಂತದಲ್ಲಿ ಜಗತ್ತು ಮಿಧ್ಯೆಯಲ್ಲ ಅದು ಸತ್ಯವಾದದ್ದು. ಈ ಜಗತ್ತಿನ ಉಗಮಕ್ಕೆ ಮೂಲಕಾರಣ ಓಂಕಾರ ಪ್ರಣಮ. ಈ ಪಣಮದಿಂದ ಪಂಚಭೂತಗಳ ಉಗಮ. ಪಂಚಭೂತಗಳ ಮಿಲನದಿಂದ ದೇಹದ ಉಗಮ. ಇಂತಹ ದೇಹದಲ್ಲಿ ಒಳ್ಳೆಯ ವ್ಯಾಪಾರ, ಕೆಟ್ಟ ವ್ಯಾಪಾರಗಳು ನಡೆಯುತ್ತಿರುತ್ತವೆ. ಯಾರು ಅರಿವು – ಕ್ರಿಯೆಗಳಿಂದ ಸಂಸ್ಕಾರ ಹೊಂದುತ್ತಾರೋ ಅವರು ಅಂಗದಿಂದ ಲಿಂಗದೆಡೆಗೆ ಸಾಗುತ್ತಾರೆ. ನಡೆ – ನುಡಿಗಳ ಪರಿಶುದ್ಧಿಯನ್ನು ಯಾರು ಮಾಡಿಕೊಳ್ಳುತ್ತಾರೋ ಅವರಲ್ಲಿ ಭಕ್ತಿ – ಶಕ್ತಿ ಸದಾ ಜಾಗೃತವಾಗಿರುತ್ತದೆ. ಜ್ಞಾನ, ವೈರಾಗ್ಯಗಳು ತನ್ನಿಂದ ತಾನೇ ನೆಲೆಯಾಗುತ್ತವೆ. ಇದು ತರ್ಕಕ್ಕೆ ನಿಲುಕುವುದಲ್ಲ. ಆದ್ದರಿಂದ ಈ ಕ್ರಿಯೆ “ವಿಚಾರಿಪರನ್ನೇ ನುಂಗುವುದು”. ಈ ಮಹಾಜ್ಞಾನವೇ, ಭಕ್ತಿ – ಶಕ್ತಿಗಳೆಲ್ಲಾ ಒಂದಾಗಿ ಸಚರಾಚರವನ್ನೇ ನುಂಗುತ್ತವೆ. ಅಂದರೆ ಅಜ್ಞಾನದ ತಿಮಿರನ್ನು ಜ್ಞಾನವು ನುಂಗುವ ಕ್ರಿಯೆ. ಇದು ಒಂದರ್ಥದಲ್ಲಿ “ಕೋಡಗನನ್ನು ಕೋಳಿ” ನುಂಗುವಂತೆ ಒಟ್ಟಿನಲ್ಲಿ ಅಂಗನು – ಲಿಂಗವಾಗಿ ಪರಿವರ್ತಿತವಾಗುವ, ಪ್ರಾಣವು ಲಿಂಗವಾಗುವ, ಲಿಂಗವು ಪ್ರಾಣವಾಗುವ ಬಹುದೊಡ್ಡ ಕ್ರಿಯೆ. ಇದನ್ನು ಅತ್ಯದ್ಭುತವಾಗಿ, ಸುಂದರವಾಗಿ, ಅರ್ಥಗರ್ಭಿತವಾಗಿ ಪ್ರಭುಗಳು ಈ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply