
ಅವಳ ವಚನ ಬೆಲ್ಲದಂತೆ,
ಹೃದಯದಲಿಪ್ಪುದು ನಂಜು ಕಂಡಯ್ಯಾ.
ಕಂಗಳಲೊಬ್ಬನ ಕರೆವಳು,
ಮನದಲೊಬ್ಬನ ನೆರೆವಳು.
ಕೂಡಲಸಂಗಮದೇವ ಕೇಳಯ್ಯಾ,
ಮಾನಿಸಗಳ್ಳಿಯ ನಂಬದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-110)
ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ನಂಜು: ವಿಷ,
ಮಾನಿಸಗಳ್ಳಿ: ಕಳ್ಳಮನಸ್ಸಿನ ಜಾರೆ.
ಬಸವಣ್ಣನವರ ಈ ವಚನದಲ್ಲಿ ವಿಶೇಷವಾಗಿ ಬಳಕೆಯಾದ ಶಬ್ದ “ಮಾನಿಸಗಳ್ಳಿ” ಎಂಬುದು. ಮನದಿಂದ ಮಾಡುವ ಕಳ್ಳತನದ ಪ್ರತೀಕ. ಮೋಸ, ವಂಚನೆ, ಕಪಟ, ಕಳ್ಳತನಗಳು ಲೌಕಿಕ ಜಗತ್ತಿನಲ್ಲಿ ಸರ್ವೇ ಸಾಮಾನ್ಯ. ವೈರಿಗಳೊಂದಿಗೆ ಮುಖಾಮುಖಿಯಾಗಿ ಹೋರಾಡಬಹುದು. ಅಲ್ಲಿ ಗೆಲುವಾದರೂ ಆಗಬಹುದು ಅಥವಾ ಸೋಲಾದರೂ ಆಗಬಹುದು. ಆದರೆ ನಯವಂಚಕರೊಂದಿಗೆ ನಡೆಸುವ ವ್ಯವಹಾರಗಳು ಅಪಾಯದ ಮಟ್ಟವನ್ನೂ ಮೀರಿ ನಮ್ಮನ್ನು ಒಯ್ಯುತ್ತವೆ. ಇಲ್ಲಿ ಪ್ರಾಣಹಾನಿಗಿಂತ ಮಾನಹಾನಿ, ನಂಬಿಕೆ ದ್ರೋಹದಂಥ ಕುಕೃತ್ಯಗಳೇ ಜರುಗುತ್ತವೆ. ಇದು ಜೀವ ಹಿಂಸಾತ್ಮಕವಾದದ್ದು. ಸಾಮಾಜಿಕವಾಗಿ ಇಂತಹ ಮುಖವಾಡದ ಮುಖಗಳು ಸಾಕಷ್ಟು ದೊರೆಯುತ್ತವೆ.
ಈ ಮೂಲಕ ಬಸವಣ್ಣನವರು ಆಧ್ಯಾತ್ಮಿಕವಾಗಿ ಇದನ್ನು ಸ್ಪಷ್ಟಪಡಿಸುತ್ತಾ ಭಕ್ತನಲ್ಲಿ ಭಕ್ತಿಯು ಇಬ್ಬಂದಿತನದಿಂದ ಕೂಡಿರಬಾರದು. ಅದು ಶ್ರದ್ಧೆ, ನಿಷ್ಠೆ, ಅಚಲತೆಯಿಂದ ಕೂಡಿರಬೇಕು ಎಂಬ ಭಾವದಲ್ಲಿ ಅದನ್ನು ವಿಸ್ತರಿಸುತ್ತಾರೆ. ಕಪಟ ಭಕ್ತಿ ವ್ಯರ್ಥವಾದದ್ದು ಎಂಬುದಕ್ಕೆ “ಮಾನಿಸಗಳ್ಳಿ” ಎಂಬ ರೂಪಕವನ್ನು ತಮ್ಮ ಇಡೀ ವಚನದಲ್ಲಿ ಕೇಂದ್ರೀಕರಿಸುತ್ತಾರೆ.
“ಅವಳ ವಚನ ಬೆಲ್ಲದಂತೆ ಹೃದಯದಲ್ಲಿ ನಂಜು” ಎಂಬಲ್ಲಿ ಮಾತು ಸಿಹಿಯಾಗಿದ್ದರೂ ಮನದಲ್ಲಿರುವುದು ವಿಷ ಎಂಬಂತೆ ಮೇಲ್ನೋಟಕ್ಕೆ ಬಾಯಲ್ಲಿ ಶಿವಮಂತ್ರ ಒಳಗೆ ತುಂಬಿರುವುದು ವಿಷಯಲೋಲುಪತೆ, ಕಪಟತನ. ಇದು ಕುಟಿಲ ಸ್ತ್ರೀಯ ಚಂಚಲ ಬುದ್ಧಿಯಂತೆ ಕುಟಿಲ ಭಕ್ತನ ನಡಾವಳಿಗೆ ಬಸವಣ್ಣನವರು ನೀಡುವ ನೇರ ಉದಾಹರಣೆ.
“ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು” ಎಂಬಲ್ಲಿ ಭಕ್ತನಾದವನು ಕೈಯಲ್ಲಿ ಹಿಡಿದಿರುವುದು ಇಷ್ಟಲಿಂಗವಾದರೆ ಭಕ್ತನ ಕಂಗಳು ನೆನೆಯುವುದು ಬೇರೆ. ನಮ್ಮ ದೇಹದಲ್ಲಿ ಕಣ್ಣುಗಳಿಗೆ ತುಂಬಾ ಮಹತ್ವದ ಸ್ಥಾನವಿದೆ. ಕಂಗಳ ನೋಟ ಮನದ ವಿಷಯ ವಾಸನೆಗೂ ಕಾರಣವಾಗುತ್ತದೆ. ಕಂಗಳಲ್ಲಿ ಇಷ್ಟಲಿಂಗವಿಲ್ಲ, ಮನದಲ್ಲಿ ಭಕ್ತಿಯಿಲ್ಲ. ಆದರೂ ಭಕ್ತ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದಾನೆ. ಇದು ಭಕ್ತನ ಇಬ್ಬಂದಿತನವನ್ನು ತೋರಿಸುವುದು. ಲಿಂಗದಲ್ಲಿ ನಿಷ್ಠೆಯಿಲ್ಲದಿದ್ದರೆ ಮನದಲ್ಲಿ ಅನ್ಯ ವಿಷಯವನ್ನು ನೆನೆಯುವುದು ಬೇರೆ ಭಾವಗಳಿಗೆ ಆಸ್ಪದ ನೀಡುವುದು. “ಮಾನಸಗಳ್ಳಿ” ಯ ಪೂಜೆಯಂತಾಗುವುದು. ಇದನ್ನು ನಂಬಬಾರದು ಎಂಬುದು ಬಸವಣ್ಣನವರ ನಿಲುವು.
ಸಾಧಕರಿಗೆ ಅವರು ಎಚ್ಚರಿಕೆಯನ್ನು ಕೊಡುತ್ತಾ ಅಂತರಂಗದಲ್ಲಿರುವ ಮೋಹಪಾಶಕ್ಕೆ, ವಿಷಯ ವಾಸನೆಗೆ ಒಳಗಾದ ಮನಸ್ಸನ್ನು ಉದಾತ್ತೀಕರಿಸಿಕೊಳ್ಳಬೇಕು. ಚಂಚಲವಾಗಿರುವ ಮನಸ್ಸೇ ಎಲ್ಲದಕ್ಕೂ ಕಾರಣ. ಆ ಮನಸ್ಸನ್ನು ನಿಗ್ರಹಿಸಿಕೊಂಡು ಅದಕ್ಕೆ ಸಂಸ್ಕಾರ ನೀಡಿ ಲಿಂಗನಿಷ್ಠೆ ಹೊಂದಬೇಕಾದುದೇ ನಿಜವಾದ ಸಾಧಕರ ಅಥವಾ ಭಕ್ತರ ಗಮ್ಯವಾಗಿರಬೇಕು. ಮನಸ್ಸಿನ ಇಬ್ಬಗೆಯ ತಳಮಳಗಳಿಂದ ಮುಕ್ತರಾಗಿ ಲಿಂಗನಿಷ್ಠೆ ಹೊಂದುವುದೇ ಭಕ್ತನು ಮಾಡಬೇಕಾದ ಸಾಧನೆಯ ಮೊದಲ ಪ್ರಯತ್ನ. ತಮ್ಮೊಳಗಿರುವ ತಾಮಸಗಳನ್ನು ಕಳೆದುಕೊಂಡು ಉದಾತ್ತೆಯೆಡೆಗೆ ನಡೆಯಬೇಕಾದುದೇ ಭಕ್ತನು ಅನುಸರಿಸಬೇಕಾದ ಮಾರ್ಗ ಎಂಬುದೇ ಈ ವಚನದ ಸಾರ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in