
ನಮ್ಮ ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಪರಸ್ಪರ ಪೂರಕವಾದ ಎರಡು ಅಂಶಗಳಿಗೆ ಒತ್ತುಕೊಡುತ್ತೇವೆ. ಒಂದು ಭೌತಿಕ ಇನ್ನೊಂದು ಆಧ್ಯಾತ್ಮಿಕ. ಭಕ್ತಿಯ ಮೇರುತನವನ್ನು ಬಿಂಬಿಸುವ ಶರಣ ಧರ್ಮದ ಅಷ್ಟಾವರಣ ಆಧ್ಯಾತ್ಮಿಕ ಬೆಳವಣಿಗೆಯ ಪವಿತ್ರತೆಯನ್ನು ಬಿಂಬಿಸುವ ಸಾಧನವದು. ಅರಿವಿನ ಚಿಂತನೆಯನ್ನು ಅಧ್ಯಾತ್ಮದಲ್ಲಿ ಅನುಷ್ಠಾನಗೊಳಿಸುವ ಶಕ್ತಿಯದು. ಸುಪ್ತ ಶಕ್ತಿಯ ಆರಾಧನೆ ಅದುವೇ ರುದ್ರಾಕ್ಷಿಯಾಗಿದೆ. ರುದ್ರಾಕ್ಷಿಯನ್ನು ಧರಿಸುವ ಆರಾಧನೆ ವೈಯಕ್ತಿಕ ಪ್ರಾರ್ಥನೆಯಲ್ಲ. ಶರಣ ಧರ್ಮದ ಶ್ರೇಷ್ಠತೆಯನ್ನು ಬಿಂಬಿಸುವ ಕ್ರಮ ರುದ್ರಾಕ್ಷಿಯಾಗಿದೆ.
ವಿಭೂತಿಯಂತೆ ರುದ್ರಾಕ್ಷಿಯು ಭಕ್ತಿಯ ಸಾಧನೆಯನ್ನು ಬಿಂಬಿಸುವಬಹಿರ್ಮುಖದ ಆವರಣವಾಗಿದೆ. ಅಕ್ಷಿ ಎಂದರೆ ಕಣ್ಣು. ರುದ್ರಾಕ್ಷಿ ಎಂದರೆ ಶಿವನ ಕಣ್ಣು. ತ್ರಿಪುರ ಸಂಹಾರದ ಸಂದರ್ಭದಲ್ಲಿ ಶಿವನ ಕಣ್ಣುಗಳಿಂದ ಜಲಬಿಂದುಗಳು ಉದುರಿದವೆಂದೂ ಅವುಗಳಿಂದ ರುದ್ರಾಕ್ಷಿಗಳು ಉತ್ಪನ್ನವಾದವೆಂದು ನಂಬಲಾಗಿದೆ. ಶರಣ ಧರ್ಮದಲ್ಲಿ ಕೇವಲ ಬಾಹ್ಯ ಆಚರಣೆಯಾಗದೆ ಆಧ್ಯಾತ್ಮಿಕ ಜ್ಞಾನದ ವಾಹಕವನ್ನಾಗಿ ಗುರುತಿಸಲಾಗಿದೆ. ಶರಣರು ಕಂಡುಕೊಂಡಂತೆ ಅಂತರಂಗದ ಅರಿವಿನ ಸಮರ್ಥನೆ ರುದ್ರಾಕ್ಷಿಯಾಗಿದೆ. ಪರಶಿವನ ಜ್ಞಾನದಕಣ್ಣುಗಳೆಂದು ಶಾಸ್ತ್ರೀಯ ಅರ್ಥದಲ್ಲಿ ಶರಣರು ಸ್ಪಷ್ಟಪಡಿಸಿದ್ದಾರೆ.
ರುದ್ರ ಎಂಬುದು ಶಿವನ ಇನ್ನೊಂದು ಹೆಸರು. ರುದ್ರ ಎಂಬ ಹೆಸರಿಗೆ ಹಲವಾರು ಅರ್ಥಗಳಿವೆ. ಶಂಕರಾಚಾರ್ಯರು ರುದ್ರ ಎಂಬ ಹೆಸರನ್ನು ವಿಶ್ವದ ವಿಸರ್ಜನೆಯ ಸಮಯದಲ್ಲಿ ಎಲ್ಲಾ ಜೀವಿಗಳನ್ನು ಆಳುವಂತೆ ಮಾಡುವವನು ಎಂದು ವ್ಯಾಖ್ಯಾನಿಸಿದ್ದಾರೆ. ಶಿವನ ಮೂರನೇ ಕಣ್ಣಿನಿಂದ ಉದುರಿದ ಜಲವೇ ರುದ್ರಾಕ್ಷಿಯಾಯಿತೆಂದು ಶೈವ ಪುರಾಣಗಳು ಸ್ಪಷ್ಟಪಡಿಸಿವೆ.
ಪರಶಿವನ ಅನುಗ್ರಹಕ್ಕೆ ಪಾತ್ರರಾಗಲು ರುದ್ರಾಕ್ಷಿಯನ್ನು ಬಳಸಬಹುದು ಎಂಬ ನಂಬಿಕೆ ಶರಣ ಧರ್ಮದ್ದು. ರುದ್ರಾಕ್ಷಿಗೆ ಶಿವಮಣಿ, ದೈವಮಣಿ, ನಾಯಕಮಣಿ ಎಂಬ ಅರ್ಥಗಳಿವೆ. ಶಿವನನ್ನು ನಿರಾಕಾರವಾಗಿ ಕಂಡಂತಹ ಶರಣರು ರುದ್ರಾಕ್ಷಿ ಪರಶಕ್ತಿಯ ಅಂಶವೆಂದು ತೀರ್ಮಾನಿಸಿದ್ದರು. ನಿಸರ್ಗದ ಕಂಪನಗಳು ರುದ್ರನ ಪ್ರತೀಕ. “ರು” ಮತ್ತು “ದ್ರ” ಪಂಚಭೂತಗಳ ಒಡೆಯ ಶಿವ.
ಓಂ ನಮಃ ಶಿವಾಯ ಓಂಕಾರ ಗುರುವಾಗಿ ಮಂತ್ರ ಸಾಕ್ಷಾತ್ಕಾರದ ಗುರು ಶಿವನೇ ಎಂಬ ಸ್ಪಷ್ಟತೆಯನ್ನು ಕೊಟ್ಟಿದ್ದಾರೆ ಶರಣರು. ಅಧ್ಯಾತ್ಮದ ಮೂಲಕ ವೈಜ್ಞಾನಿಕತೆಯನ್ನು ಕಂಡುಕೊಂಡಂತಹ ಶರಣರು ಅದನ್ನು ತಮ್ಮ ವಚನಗಳಲ್ಲಿ ಬಿಂಬಿಸಿದ್ದಾರೆ.
ಶರಣರಲ್ಲಿ ವಿಭೂತಿ ಮತ್ತು ರುದ್ರಾಕ್ಷಿ ಭಕ್ತಿಯ ಸಂಬಂಧ ತೋರಿಕೆಯ ಸಂಬಂಧವಲ್ಲ. ರುದ್ರಾಕ್ಷಿ ಎಂದರೆ ಪರಶಿವನ ಸೃಷ್ಟಿಯ ಚೈತನ್ಯದ ಸತ್ಯವಾಗಿದೆ. ವಿಭೂತಿ ಮತ್ತು ರುದ್ರಾಕ್ಷಿಯ ಸಂಬಂಧದಲ್ಲಿ ಅನೇಕ ತಾತ್ವಿಕ ಧಾರೆಗಳು ಮುಖಾಮುಖಿಯಾಗುತ್ತಾ ಶರಣ ಧರ್ಮದ ಎಚ್ಚರಿಕೆಯನ್ನು ಮುಂದು ಮಾಡುತ್ತದೆ..
ಭಸಿತವನಿಟ್ಟಿಹೆ, ರುದ್ರಾಕ್ಷಿಯ ಧರಿಸಿಹೆ,
ನೀನೊಲ್ಲೆ, ನೀನೊಲಿದೆ.
ನಿನ್ನೊಲುಮೆ ಏಕೆ ಎಲೆ ಅಯ್ಯಾ,
ನಿನ್ನವರೊಲ್ಲರು! ಆ ಒಲುಮೆ ತಾನೆನಗೇಕೆ?
ಹೇಳಾ ಎಲೆ ಅಯ್ಯಾ.
ಪುರುಷರಿಲ್ಲದ ಸ್ತ್ರೀಯರ ಶೃಂಗಾರದಂತೆ
ನಿನ್ನೊಲುಮೆ ಏಕೆ? ಹೇಳಾ!
ನಿಜ ಭಕ್ತಿಯಲ್ಲಿರಿಸಿ ಸದ್ಭಕ್ತನೆಂದೆನಿಸಿ
ಸದಾಚಾರಿಗಳ ಸಂಗಡ ಎನ್ನ ಹುದುವಿನಲ್ಲಿ ಕುಳ್ಳರಿಸಿ
ಓರಂತೆ ಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನಾ,
ನೀನೊಲಿದುದಕ್ಕೆ ಇದು ಕುರುಹು,
ಅಲ್ಲದಿರ್ದಡೆ ಇದು ವೈಶಿಕ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-638 / ವಚನ ಸಂಖ್ಯೆ-842)
ಆಧ್ಯಾತ್ಮಿಕತೆ ಎನ್ನುವುದು ವಿಜ್ಞಾನದ ಒಂದು ನಂಬಿಕೆಯಾಗಿದೆ. ಭಕ್ತಿಯ ಆರೋಹಣದಲ್ಲಿ ಶಿವನ ಒಲವು ಬಹು ಮುಖ್ಯವಾದದ್ದು. ರುದ್ರಾಕ್ಷಿ ದೈವಿಕ ಬೆಳಕಿನ ಶಕ್ತಿಯನ್ನು ನೀಡುತ್ತದೆ. ನಮ್ಮನ್ನು ರಕ್ಷಿಸುತ್ತದೆ. ಶರಣರ ವಿಚಾರದಂತೆ ಭೌತಿಕ ರುದ್ರಾಕ್ಷಿ ತೋರಿಕೆಯಾಗಬಾರದು. ಶಿವನ ಚೈತನ್ಯದ ಒಲವಿನಲ್ಲಿ ಲೀನವಾಗಬೇಕು. ಹೀಗಾಗಿ ಶರಣ ಧರ್ಮದ ನಿಷ್ಠೆಯನ್ನು ಸಾಧನೆಯನ್ನಾಗಿಸಿಕೊಳ್ಳಬೇಕು. ಅಷ್ಟಾವರಣದ ಅಲಂಕಾರವನ್ನು ಸಮರ್ಪಿಸಿಕೊಳ್ಳಬೇಕು. ಶರಣರು ಕಂಡುಕೊಂಡಂತೆ ರುದ್ರಾಕ್ಷಿ ಧಾರಣೆಯಿಂದ ದೇಹ ಮತ್ತು ಮನಸ್ಸು ಪ್ರಾಣಶಕ್ತಿಗಳೆಲ್ಲವೂ ಕೆಲಸ ಮಾಡುತ್ತವೆ. ರುದ್ರಾಕ್ಷಿ ಸದ್ಭಕ್ತನ ಸಂಕೇತದ ಚಿಹ್ನೆ. ಆನಂದವನ್ನು ಉಂಟು ಮಾಡುವ ಶರಣರ ವಿಶಿಷ್ಟ ವಿಜ್ಞಾನವೆಂದು ಸ್ಪಷ್ಟಪಡಿಸಬಹುದು.
ನಾವು ಕಾಣುವ ನಿಸರ್ಗದಲ್ಲಿ ದೇವರಿದ್ದಾನೆ ಎಂದರೆ ತಟ್ಟನೆ ಅರಿವಿಗೆ ಬರುವುದಿಲ್ಲ. ನಿಸರ್ಗದ ಶಕ್ತಿಯಲ್ಲಿ ಶಿವನಿರುವ ನಂಬಿಕೆ ಇದೆ. ನಮ್ಮಲ್ಲಿ ಹುದುಗಿರುವ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಸಾಕಷ್ಟು ಮಾರ್ಗಗಳಿವೆ. ಅವುಗಳಲ್ಲಿ ರುದ್ರಾಕ್ಷಿಯ ಧಾರಣೆಯು ಒಂದಾಗಿದೆ.
ಕರಸ್ಥಲದ ಲಿಂಗದ ಜೊತೆಗೆ ರುದ್ರಾಕ್ಷಿಯು ಶಿವನ ಬೆಸುಗೆಯ ಮಣಿ ಎಂಬ ದೈವಿಕ ನಂಬಿಕೆ ನಮ್ಮಲ್ಲಿ ಅಡಗಿದೆ. ಮಾನವ ಕುಲಕ್ಕೆ ಒಳಿತನ್ನು ಮಾಡುವ ರುದ್ರನ ದುಃಖದ ಕಣ್ಣೀರನ್ನು ಆನಂದದ ಕಣ್ಣೀರಾಗಿ ಪರಿವರ್ತಿಸುತ್ತಾನೆ ಎಂಬ ನಂಬಿಕೆ ಶರಣರದು. “ರುಡ್” ಎಂದರೆ ಅಳುವುದು “ರಾ” ಎಂಬುದು ಬೆಳಕು. ಯಾವುದೇ ಜೀವಿಯು ದೈವತ್ವವನ್ನು ಅನುಭವಿಸಿದಾಗ ಕಣ್ಣುಗಳಲ್ಲಿ ನೀರು ಬರುತ್ತದೆ. ಶಿವನೊಂದಿಗೆ ಉಂಟಾಗುವ ಈ ಸಮಾಾಗಮದಲ್ಲಿ ಸಂತೋಷ ಪ್ರೀತಿ ಆನಂದ ಮತ್ತು ಕೃತಜ್ಞತೆ ಏಕ ಸಮಯದಲ್ಲಿ ಉಂಟಾಗುವ ಪ್ರಜ್ಞೆಯೇ ರುದ್ರ. ಹೀಗೆ ರುದ್ರಾಕ್ಷಿಯ ದೈವಿಕ ಬಾಂಧವ್ಯ ರುದ್ರನ ಕಣ್ಣೀರಿನ ಸತ್ಯವೆಂದು ಶರಣರು ತಮ್ಮ ವಚನಗಳಲ್ಲಿ
ಸ್ಪಷ್ಟ ಪಡಿಸಿದರು.
ರುದ್ರಾಕ್ಷಿಯನ್ನು ಧರಿಸಿದವರನ್ನು ಲಿಂಗವೆಂದು, ಧರಿಸದ ಅಧಮರನ್ನು ಭವಿಗಳೆಂದು ಶರಣರು ಹೇಳಿದ್ದಾರೆ. ಇತ್ತೀಚಿನ ವಿಜ್ಞಾನಿಗಳು ರುದ್ರಾಕ್ಷಿಯು ನಮ್ಮ ದೇಹದ ಮೇಲೆ ಪ್ರಭಾವ ಬೀರುವ ಸೂಕ್ಷ್ಮವಾದ ವಿದ್ಯುತ್ಕಾಂತೀಯ ಪರಮಾಣುಗಳನ್ನು ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಶರಣರು ಹೇಳಿದಂತೆ “ನೀನೊಲಿದುದಕ್ಕೆ ಇದು ಕುರುಹು ಅಲ್ಲದಿರ್ದಡೆ ವೈಶಿಕ”. ನಮ್ಮ ಸುಪ್ತ ಆಂತರಿಕ ಅರಿವಿಗೆ ಕಾರಣ ರುದ್ರಾಕ್ಷಿ ಭಕ್ತಿಯ ಶಕ್ತಿ ಚೈತನ್ಯ ನೀಡುವ ನಮ್ಮ ಪಾಪಗಳಿಂದ ಬಿಡುಗಡೆ ಹೊಂದಲು ಸಹಾಯ ಮಾಡುವ ರುದ್ರಾಕ್ಷಿ ಶರಣರ ಅಷ್ಟಾವರಣದ ಸಾಲಿನಲ್ಲಿ ದೈವಿಕ ಶಕ್ತಿಯಾಗಿ ನಮ್ಮನ್ನು ಪ್ರೇರೇಪಿಸುತ್ತದೆ.
ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ,
ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ
ಶ್ರೀ ವಿಭೂತಿಯ ಹೂಸದೆ, ರುದ್ರಾಕ್ಷಿಯ ಧರಿಸದೆ,
ಶ್ರೀ ಪಂಚಾಕ್ಷರಿಯ ನೆನೆಯದೆ
ಶಿವ ಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣೆರಣ್ಣಾ!
ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪಬಹುದೇ?
ಮುಕ್ಕಣ್ಣನ ಆಭರಣವೆನಿಸುವ ಬಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ
ಭವದಗ್ದವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ದಮಲ್ಲಿನಾಥಪ್ರಭುವೇ.
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1178 / ವಚನ ಸಂಖ್ಯೆ-1130)
ಪಂಚಾಕ್ಷರಿ ಮಂತ್ರಕ್ಕೆ ಓಂಕಾರ ಸೇವಿಸಿದರೆ ಓಂ ನಮಃ ಶಿವಾಯ ಅಥವಾ ಪ್ರಣವ ಷಡಕ್ಷರಿ ಮಂತ್ರವಾಗುತ್ತದೆ. ಹೇಮಗಲ್ಲ ಹಂಪರ ಈ ವಚನ ರುದ್ರಾಕ್ಷಿ ಸಿದ್ದಾಂತದ ವಾಸ್ತವತೆಯನ್ನು ಸ್ಪಷ್ಟಪಡಿಸಿದರೂ ರುದ್ರಾಕ್ಷಿಯ ಆಂತರಿಕ ಶಕ್ತಿ ಮಾತ್ರ ಕಾರಣವಲ್ಲ. ವಿಭೂತಿಯು ಸಹಿತ ಕಾರಣವಾಗುತ್ತದೆ. ನಮಃ ಶಿವಾಯ ಮಂತ್ರ ಪಠಿಸಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವ್ಯಕ್ತಿ ಪುನಃ ಚೈತನ್ಯಶೀಲನಾಗಿ ಮಾರ್ಪಡುತ್ತಾನೆ. ರುದ್ರಾಕ್ಷಿ ಎಂಬ ದೈವಶಕ್ತಿಯಲ್ಲಿ ಪಂಚಾಕ್ಷರಿ ಮಂತ್ರದ ದೈವಶಕ್ತಿ ಅಡಗಿದೆ. ಮನುಷ್ಯನಿಂದ ಸಾಧ್ಯವಾಗದೇ ಇದ್ದದ್ದು ರುದ್ರಾಕ್ಷಿ ಎಂಬ ದೈವಿಕ ಶಕ್ತಿಯಿಂದಾಗುತ್ತದೆ. ಮಾನಸಿಕ ಒತ್ತಡ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರುದ್ರಾಕ್ಷಿ ಧಾರಣೆಯಿಂದ ಮನದ ದ್ವಂದ್ವಗಳನ್ನು ಶಮನಗೊಳಿಸಲು ಸಹಾಯಕವಾಗುತ್ತದೆ.
ರುದ್ರಾಕ್ಷಿಯಲ್ಲಿ 1 ರಿಂದ 21 ಮುಖಗಳ ರುದ್ರಾಕ್ಷಿಗಳಿವೆ ಎಂದು ಆಧ್ಯಾತ್ಮಿಕ ಚಿಂತಕರು ಗುರುತಿಸಿದ್ದಾರೆ. ಪ್ರತಿಯೊಂದು ರುದ್ರಾಕ್ಷಿಗೂ ತನ್ನದೇ ಆದ ವಿಶೇಷ ಪ್ರಾಮುಖ್ಯತೆ ಇದೆ. ರುದ್ರಾಕ್ಷಿ ಕಣದ ಮಣಿಗಳು ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳಲು ಉತ್ತೇಜಿಸುತ್ತದೆ. ನಮ್ಮ ಯಾಂತ್ರಿಕ ಜೀವನದಲ್ಲಿ ಆಧ್ಯಾತ್ಮಿಕ ಅನ್ವೇಷಣೆ ಬೆಳವಣಿಗೆ ಬಹು ಮುಖ್ಯವಾದದ್ದು. ಮನದ ನೆಮ್ಮದಿಗೋಸ್ಕರ ನಮ್ಮ ಆಂತರಿಕ ಶಕ್ತಿ ಮತ್ತು ಶಾಂತತೆಯನ್ನು ಪಡೆದುಕೊಳ್ಳಲು ಪ್ರಸ್ತುತ ದಿನಗಳಲ್ಲಿ ರುದ್ರಾಕ್ಷಿಯ ಅವಶ್ಯಕತೆ ಇದೆ.
ಶರಣರು ಕಂಡಕೊಂಡಂತೆ ಧ್ಯಾನ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಪಡೆದುಕೊಳ್ಳಲು ನಮ್ಮದಾಗಿಸಿಕೊಳ್ಳಲು ರುದ್ರಾಕ್ಷಿ ಬೇಕು. ದೇಹದ ಆರೋಗ್ಯದಲ್ಲಿ ಏರುಪೇರಾಗುವ ಸಂದರ್ಭದಲ್ಲಿ ದೇಹದ ಶಕ್ತಿ ಕೇಂದ್ರಗಳಲ್ಲಿ ಸಮತೋಲನ ಕಾಪಾಡಲು ರುದ್ರಾಕ್ಷಿ ನಮಗೆ ಬೇಕಾಗುತ್ತದೆ. ಶರಣರು ಇದನ್ನು ಅರಿತಿದ್ದರು. ಹೀಗಾಗಿ ಧರ್ಮದ ಪವಿತ್ರತೆಗೆ ಧಾರ್ಮಿಕ ಕುರುಹಾಗಿ ಶರಣರು ಅಷ್ಟಾವರಣದಲ್ಲಿ ವಿಶೇಷ ಸ್ಥಾನವನ್ನು ನೀಡಿ ಗೌರವಿಸಿದ್ದಾರೆ.
ಡಾ. ಸರ್ವಮಂಗಳ ಸಕ್ರಿ
ಮ. ನಂ. 6-2-74/8/4
ಮಾಣಿಕ ಪ್ರಭು ದೇವಸ್ಥಾನ ರಸ್ತೆ,
ಪಂಚಲಿಂಗೇಶ್ವರ ಕಾಲೋನಿ,
ರಾಯಚೂರು – 584 101
ಮೋಬೈಲ್ ಸಂ: 94499 46839
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in