
ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು.
ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.
ನಮ್ಮೊಳಗೆ ಇರುವ ಗುರು ಲಿಂಗ ಜಂಗಮ ತತತ್ವವನ್ನು ಅರಿಯದೆ ಅಲೆದಾಡುತ್ತಿದ್ದೆವೆ. ಅಂತರಂಗ ಬಹಿರಂಗ ಶುದ್ಧಿಗೆ ಬೇಕಾದ ಅರಿವು, ಆಚಾರ, ಅನುಭಾವಗಳನ್ನು ಮತ್ತು ಪ್ರಾಣವಾದ ಪಂಚಾಚಾರ, ದೇಹವಾದ ಅಷ್ಟಾವರಣ, ಆತ್ಮವಾದ ಷಟ್ಥ್ಸಲಗಳನ್ನು ಕೇವಲ ಓದಿ ಬರೆದರೆ ಸಾಲದು. ಅವುಗಳನ್ನು ಆಚರಣೆಯಲ್ಲಿ ತರಬೇಕು. ಅಂದಾಗಲೆ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಶರಣರಿಗೆ ನಮ್ಮ ಅಂತರಂಗದ ಆಧ್ಯಾತ್ಮಿಕ ಅಪೂರ್ವ ಶರಣು ಸಮರ್ಪಿಸಿದಂತೆ.
ಸುಪ್ರಭಾತ ಸಮಯದಲ್ಲಿ
ಅರ್ತಿಯಲ್ಲಿ ಲಿಂಗವ ನೆನೆದಡೆ
ತಪ್ಪವವು ಅಪಮೃತ್ಯು
ಕಾಲಕರ್ಮಂಗಳಯ್ಯ.
ಕೇವಲ ನಿಷ್ಟೆಯಿಂದ ಮಾಡುವ ಲಿಂಗಪೂಜೆಯಿಂದಲೆ ಕಾಲಕರ್ಮಗಳನ್ನು ಜಯಿಸುವುದಾದರೆ, ಇನ್ನು ಪಂಚಾಚಾರಗಳನ್ನು ಶ್ರದ್ಧೆಯಿಂದ ಆಚರಿಸಿದರೆ ನಮ್ಮ ಜೀವನ ಹೇಗಿರಬೇಡಾ.
ಪಂಚ ಆಚಾರಗಳಾದ
1) ಲಿಂಗಾಚಾರ – ಏಕದೇವೊಪಾಸನೆ ಜೋತೆಗೆ ತನು ಶುದ್ಧಿ
2) ಸದಾಚಾರ – ದಾಸೋಹಿಯಾಗಿರುವುದರ ಜೋತೆಗೆ ಮನ ಶುದ್ಧಿ
3) ಶಿವಾಚಾರ – ಎಲ್ಲರೂ ಸಮಾನರು ಎನ್ನುವ ಜೋತೆಗೆ ಭಾವ ಶುದ್ಧಿ
4) ಗಣಾಚಾರ – ಲಿಂಗಾಯತ ತತ್ವಗಳ ಪಾಲಣೆ ಪೋಷಣೆ ಮತ್ತು ರಕ್ಷಣೆ ಜೋತೆಗೆ ನಡೆ ಶುದ್ಧಿ
5) ಭೃತ್ಯಾಚಾರ – ಲಿಂಗಭಕ್ತರ ಸೇವೆಯ ಜೋತೆಗೆ ನುಡಿ ಶುದ್ಧಿ
ಇಂದು ನಾವು ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರದ ಎಂಬ ವಿಷಯದ ಬಗ್ಗೆ ನೋಡೋಣ.
ಆದಯ್ಯನವರು ಸೌರಾಷ್ಟ್ರದ ಸೋಮನಾಥ ಪುರದವರು. ವ್ಯಾಪಾರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೆಶ್ವರಕ್ಕೆ ಬಂದರು. ಅಲ್ಲಿ ಜೈನ ಯುವತಿಯಾದ ಪದ್ಮಾವತಿಯೋಂದಿಗೆ ಪ್ರೇಮ ವಿವಾಹವಾದರು. ಪದ್ಮಾವತಿಯ ತಂದೆ ಇದನ್ನು ವಿರೋಧಿಸಿದಾಗ ಅವರ ಸವಾಲನ್ನು ಸ್ವೀಕರಿಸಿ ಒಂದುವರೆ ತಿಂಗಳಿನಲ್ಲಿ ಸೌರಾಷ್ಟ್ರ ದಿಂದ ಸೋಮನಾಥ ನನ್ನು ತಂದು ಲಕ್ಷ್ಮೆಶ್ವರದ ಬಸದಿಯಲ್ಲಿ ಸ್ಥಾಪಿಸಿದ ನೆಂದು ಐತಿಹ್ಯವಿದೆ. ಆದಯ್ಯನವರ ಅಂಕಿತ ನಾಮ ಸೌರಾಷ್ಟ್ರ ಸೋಮೇಶ್ವರ. ಮತ್ತು ನಮಗೆ ದೊರೆತಿರುವ ವಚನಗಳ ಸಂಖ್ಯೆ 403.
“ಭಕ್ತ ಭಕ್ತನ ಮನೆಗೆ ಬಂದಡೆ,
ಭೃತ್ಯಾಚಾರವ ಮಾಡಬೇಕು”
ಎಂಬ ಬಸವಣ್ಣನವರ ನುಡಿಯಂತೆ,
ಮತ್ತು ವೀರ ವಿರಾಗಿನಿ ಅಕ್ಕಮಹಾದೇವಿಯು
“ಲಿಂಗಾಂಗಿಗಳಾದ ಶಿವಭಕ್ತರೆ
ಮರ್ತ್ಯದಲ್ಲಿ ಮಿಗಿಲಹರೆಂದು,
ತಾನು ಅವರ ಭೃತ್ಯನೆಂದರಿದು
ಅಂತಪ್ಪ ನಿಜಲಿಂಗಾಂಗಿಗಳ
ಚಮ್ಮಾವುಗೆಯ ಕಾಯ್ದಿಪ್ಪುದೆ
ಭೃತ್ಯಾಚಾರ ನೋಡಯ್ಯ”
ಎಂದು ಹೇಳಿದ್ದಾಳೆ.
“ಅಂಗದ ಮೇಲೆ ಲಿಂಗವಿದ್ದವರನ್ನು ಸಂಗಯ್ಯನೆಂಬೆ” ಎನ್ನುವಂತೆ ಲಿಂಗ ಭಕ್ತರ ಸೇವೆ ಗೈವುದೆ ಭೃತ್ಯಾಚಾರ.
“ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ” ಬಸವಣ್ಣನವರ ಕಿಂಕರತ್ವ ಭಾವ ಇದಕ್ಕಿಂತಲೂ ಹೆಚ್ಚಿನ ಭೃತ್ಯಾಚಾರ ಮತ್ತೊಂದಿಲ್ಲ.
ಶಿವತತ್ವದ ಮೂಲಾಧಾರದ
ಜ್ಞಾನಶಕ್ತಿಯೆ ಚಿದ್ವಿಭೂತಿ.
ಈ ಚಿದ್ವಿಭೂತಿ ಎನ್ನಂತರಂಗದಲ್ಲಿ
ಲೇಪವಾಗಿ ತೊಳತೊಳಗಿ ಬೆಳಗುವ
ಬೆಳಗಿನಲ್ಲಿಯೇ ಆನು ನಿಮ್ಮ ಕಂಡು
ಬದುಕಿದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಆದಯ್ಯನವರು ಶಿವತತ್ವವನ್ನರಿಯಲು ಮೂಲ ಜ್ಞಾನಶಕ್ತಿ. ಅಂತಹ ಜ್ಞಾನಶಕ್ತಿಯ ಚಿದ್ವಿಭೂತಿಯನ್ನು ಅಂತರಂಗದಲ್ಲಿ ಧರಿಸಿ, ಅದರ ಬೆಳಗಿನಲ್ಲಿ ಪರಶಿವನನ್ನೆ ಕಂಡವರು ಆದಯ್ಯನವರು.
ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ.
ಅದೆಂತೆಂದಡೆ:
ಪೂರ್ವಕರ್ಮದ ದುರ್ಲಿಖಿತವನೊರಸಿ
ವಿಭೂತಿಯ ಪಟ್ಟವ ಕಟ್ಟಿದನಯ್ಯಾ ಶ್ರೀಗುರು.
ಎನ್ನಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ
ಭೂತಕಾಯವ ಬಿಡಿಸಿ ಲಿಂಗತನುವ ಮಾಡಿದನಯ್ಯಾ ಶ್ರೀಗುರು.
ಕರ್ಣದಲ್ಲಿ ಪ್ರಣವಪಂಚಾಕ್ಷರವನೊರೆದು,
ಜಪಿಸ ಕಲಿಸಿ, ಮಂತ್ರರೂಪನ ಮಾಡಿದನಯ್ಯಾ ಶ್ರೀಗುರು.
ಸಂಸಾರದ ಅಜ್ಞಾನಜಡವ ಕೆಡಿಸಿ ಶಿವಜ್ಞಾನಾನುಗ್ರಹವ ಮಾಡಿದ,
ಆ ಶಿವಜ್ಞಾನವೆನ್ನ ಸರ್ವಕರ್ಮವನುರುಹಿತ್ತು
.ಅದೆಂತೆಂದೊಡೆ:
ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇರ್ಜುನ
ಎಂದುದಾಗಿ,
ಶ್ರೀಗುರುವಿನ ಪದಕಮಲದಲ್ಲಿಆನು ಭೃಂಗನಾಗಿದ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಇಲ್ಲಿ ಆದಯ್ಯನವರು ತಮಗೆ ಹಿಂಗದ ಶಿವಲಿಂಗವನ್ನು ಕೊಟ್ಟ ಗುರುವಿನ ಮಹತ್ವವನ್ನು ಅನಾವರನಗೊಳಿಸಿದ್ದರೆ. ಗುರುವಿನ ಕರುಣದಿಂದ ನಾನು ಪವಿತ್ರನಾದೆ. ನನ್ನ ಪೂರ್ವದ ಕರ್ಮಗಳೆಲ್ಲ ಅಳಿಸಿ, ವಿಭೂತಿ ಧರಿಸಿ, ಎಂದೂ ಹಿಂಗದ ಇಷ್ಟಲಿಂಗವಕೊಟ್ಟು ಪ್ರಣವ ಪಂಚಾಕ್ಷರಿ( ನಮ: ಶಿವಾಯ) ಮಂತ್ರವನ್ನು ಕಲಿಸಿ ನನ್ನನ್ನೆ ಮಂತ್ರಸ್ವರೂಪವನ್ನಾಗಿ ಮಾಡಿದ. ಅಂದರೆ ಅಂಗಗುಣ ಅಳಿದು ಲಿಂಗಗುಣ ಅಳವಡಿಸಿ ಭವದ ಭ್ರಾಂತಿಯನ್ನು ಬಿಡಿಸಿ ಶಿವ ಜ್ಞಾನವ ನೀಡಿದ, ಗುರುವಿನ ಜ್ಞಾನಾಗ್ನಿಯಿಂದ ನನ್ನ ಸರ್ವ ಕರ್ಮಗಳು ಸುಟ್ಟು ಭಸ್ಮವಾದವು. ಇಂತಹ ಗುರುವಿನ ಪಾದಕಮಲದಲ್ಲಿ ನಾನು ದುಂಬಿಯಾಗಿ ಇರುವೆ ಎಂದು ಹೇಳಿದ್ದಾರೆ.
ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು,
ಮನದಲ್ಲಿ ಅರಿವಿರಲು ಎನ್ನ ಮನ ನಿರ್ಮಲವಾಯಿತ್ತು,
ಪ್ರಾಣದಲ್ಲಿ ಪ್ರಸಾದವಿರಲು ಎನ್ನ ಪ್ರಾಣ ನಿರ್ಮಲವಾಯಿತ್ತು.
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗವೆಡೆಗೊಂಡಿರಲು
ಇಂದ್ರಿಯಂಗಳು ನಿರ್ಮಲವಾದವು.
ಸೌರಾಷ್ಟ್ರ ಸೋಮೇಶ್ವರನ, ಶರಣರ ಸಂಗದಿಂದಶಿವಪ್ರಸಾದ
ದೊರೆಕೊಂಡಿತ್ತಾಗಿ ಸರ್ವಾಂಗಲಿಂಗವಾಯಿತ್ತು.
“ಅಂಗದ ಮೇಲೆ ಲಿಂಗವಿದ್ದವರಿಗೆ ಅಮಂಗಳ ದಿನಗಳೆ ಇಲ್ಲ” ಎನ್ನುವಂತೆ ಲಿಂಗ ಧರಿಸಿ ಎನ್ನ ತನು ನಿರ್ಮಲವಾಯಿತು. ಮನದಲ್ಲಿ ಗುರು ಲಿಂಗ ಜಂಗಮದ ಅರಿವು ಮೂಡಲು ನನ್ನ ಮನ ಶುದ್ಧವಾಯಿತ್ತು. “ಪ್ರಸಾದ ಕಾಯವಿದು ಕೆಡಿಸಲಾಗದು” ಎನ್ನುವಂತೆ ಪ್ರಸಾದ ಕಾಯದಿಂದ ಪ್ರಾಣ ನಿರ್ಮಲವಾಯಿತು. ಪಂಚೇಂದ್ರೀಯಗಳಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಶಿವಲಿಂಗ, ಮಹಾಲಿಂಗಗಳು ಜಾಗ್ರತಗೊಂಡಿದ್ದರಿಂದ ಎನ್ನ ಇಂದ್ರೀಯಗಳು ಶುದ್ಧವಾದವು. ಹೀಗೆ ಶರಣರ ಸಂಗದಲ್ಲಿ ಅಂತರಂಗ ಬಹಿರಂಗ ಶುದ್ಧಗೊಳಿಸಿ ಅವರ ಅನುಭಾವದ ಪ್ರಸಾದದಿಂದ ನನ್ನ ಸರ್ವಾಂಗವೆಲ್ಲವು ಲಿಂಗಮಯವಾಯಿತು ಎಂದು ಆದಯ್ಯನವರು ಹೇಳಿದ್ದಾರೆ.
ಹೀಗೆ ಆದಯ್ಯನವರು ಶರಣರ ಸಂಗದಲ್ಲಿ ಅವರ ಭೃತ್ಯನಾಗಿ ಮುಕ್ತಿ ಕಂಡವರು. “ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ” ಎಂಬ ದಾಸವಾಣಿಯಂತೆ, ಮುಕ್ತಿ ಮಾರ್ಗಕ್ಕೆ ಶರಣರ ಭ್ರುತ್ಯರಾಗಿರುವುದೆ ಸತ್ಯದ ದಾರಿ.
ಎಲ್ಲರಿಗೂ ಶರಣು ಶರಣಾರ್ಥಿಗಳು
ಶ್ರೀಮತಿ. ಸವಿತಾ ಮಾಟೂರ
ಇಳಕಲ್ಲ
ಫೋನ್ ನಂ:+91 78927 10782