ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ಶ್ರೀಮತಿ. ದೇವೇಂದ್ರಮ್ಮ, ರಾಯಚೂರು.

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708)

ಆಸೆ ಅನ್ನುವುದು ಅರಸನಾದ ಭವಿಗೆ ಇರತದ. ಅರಸನಿಗೆ ಈ ರಾಜ್ಯ ಗಳಿಸಿದರೆ ಇನ್ನೊಂದು ರಾಜ್ಯ ಗಳಿಸಬೇಕು. ಇನ್ನೊಂದು ರಾಜ್ಯ ಗಳಿಸಿದರೇ ಮಗದೊಂದು ರಾಜ್ಯದ ಅಧಿಕಾರ ನನ್ನ ಕೈಲಿ ಇರತದ, ಅಧಿಕಾರ ಇದ್ದರೇ ನನಗ ಮರ್ಯಾದೆ ಗೌರವ ಸಿಗತದ ಅನ್ನುವ ಭಾವನೆ ರಾಜನಿಗೆ ಇರುತ್ತದೆ. ಶಿವಭಕ್ತರಾದ ನಮಗ ಯಾಕೆ ಅಂತಹ ಆಸೆ? ಯಾವ ಅಧಿಕಾರ, ಆಸ್ತಿ, ದುಡ್ಡು, ಅನ್ಯಾಯದ ದುಡಿಮೆಯ ಆಸೆಯೂ ನಮಗೆ ಬೇಡ. ಸತ್ಯ ಶುದ್ಧ ಕಾಯಕದಿಂದ ಬಂದದು ಸಾಕು ನಮಗೆ, ನಾವು ಆಯಗಾರರು ಇಂದು ನಿಮಗೆ ಇಷ್ಟೊಂದು ಅಕ್ಕಿ ಏಕೆ ಕೊಟ್ಟರು? ಇಂದು ಬದುಕಲಾದರೇ ಸಾಕು, ನಾಳೆಯ ಚಿಂತೆ ನಮಗೇಕೆ? ನಾವು ಇವತ್ತು ನಮ್ಮ ಮನೆಗೆ ಹೆಚ್ಚಿನ ಅಕ್ಕಿ ತಂದರೆ ಇಂದು ಬೇರೆಯವರ ಅನ್ನವನ್ನು ನಾವು ಕಸಿದುಕೊಂಡಂತೆ ಆಗುತ್ತದೆ. ಇಂದು ನಮ್ಮಿಬ್ಬರಿಗೂ ಊಟಕ್ಕೆ ಮತ್ತು ಜಂಗಮರಿಗೆ ಅಥವಾ ದಾಸೋಹಕ್ಕೆ ಆದರೆ ಸಾಕು ಎಂದು ತಮ್ಮ ಪತಿಗೆ ಬುದ್ಧಿವಾದ ಹೇಳುತ್ತಾರೆ ಶರಣೆ ಆಯ್ದಕ್ಕಿ ಲಕ್ಕಮ್ಮನವರು.

ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ದಂಪತಿಗಳು ಅಂದಿನ ದಾಸೋಹಕ್ಕೆ ಅಂದಂದಿನ ದುಡಿಮೆ ಉಪಯೋಗ ಮಾಡತಾ ಇದ್ದರು. ದುಡಿಮೆಯಲ್ಲಿ ತಾವು ಬದುಕಿ ಉಳಿದದನ್ನು ಮರಳಿ ಸಮಾಜಕ್ಕೆ ವ್ಯಯ ಮಾಡೋದು ದಾಸೋಹ ಅಂದರು. ಜಂಗಮರಿಗೆ ಅಂದರೇ ಸ್ವಾಮಿಗಳು ಅಂತ ಅರ್ಥ ಅಲ್ಲ. ಯಾರು ಲಿಂಗಧಾರಣೆ ಮಾಡಿಕೊಂಡು ಸತ್ಯ ಶುದ್ಧವಾಗಿ ಪರಿಶುದ್ಧವಾದ ಭಾವನೆ ನಿರ್ಮಲ ಮನಸ್ಸಿನಿಂದ ಕೂಡಿರತಾರೋ ಅವರೆಲ್ಲರೂ ಜಂಗಮ ಸ್ವರೂಪಿ ಎಂದು ಹೇಳಿದರು ಶರಣರು.

ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು?
`ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-697)

ಎಂದು ಹೇಳುವ ಬಸವಣ್ಣನ ತತ್ವದವರು ನಾವು.

ನಮಗೇಕೇ ಅಕ್ಕಿಯಾಸೆ? ಅಧಿಕಾರದ ಆಸೆ? ಎಂದು ಗಂಡನನ್ನು ಪ್ರಶ್ನೆ ಮಾಡಿ, ಗಂಡನಿಗೆ ವಿನಯದಿಂದ ತಿಳುವಳಿಕೆ ಹೇಳಿ ಕಳುಹಿಸಿದಳು ಆ ಮಹಾ ತಾಯಿ.

ಆದರೆ ಇಂದು ನಾವು ನಾಳೆ ನಮಗ ಬೇಕು, ವಯಸ್ಸಾದ ಕಾಲಕ್ಕೆ ಬೇಕು ಅಂತೀವಿ. ಒಂದು ವೇಳೆ ಗಂಡ ಹೆಂಡತಿಗೆ ಹೇಳಿದರೇ ನಿನಗೇನು ಗೊತ್ತು ಕೊಡಿ, ನಾಳೆ ವಯಸ್ಸಾದ ಕಾಲಕ್ಕೆ ಬರತದ ಅಂತ ಹೇಳುವ ಅಥವಾ ಹೆಂಡತಿ ಹೇಳಿದರೂ ಗಂಡನು ಕೇಳದೇ ಇರುವ ಪರಿಸ್ಥಿತಿ ನಮ್ಮದು, ಕೂಡಿಡುವ ಜನರೇ ಬಹಳ ಇದ್ದೇವೆ.

ಆ ತಾಯಿಯ ಗಂಡ ಮರು ಮಾತನಾಡದೇ, ಹೌದಲ್ಲವೇ ನನ್ನ ಹೆಂಡತಿ ಹೇಳೋದು ಸರಿ ಇದೆ, ನಮಗ ಯಾಕೆ ಬೇಕು ಹೆಚ್ಚಿನ ಅಕ್ಕಿಯ ಆಸೆ, ಹೆಚ್ಚಿನ ದುಡಿಮೆಯ ಆಸೆ, ನಾವು ಒಬ್ಬರೇ ಹೆಚ್ಚು ಗಳಿಸಿದರೇ ಇನ್ನೊಬ್ಬರಿಗೆ ಇಲ್ಲದಂತೆ ಆಗುತ್ತದೆ ಅನ್ನುವ ಭಾವನೆ ಆ ಶರಣರಿಗೆ. ಪರ ಚಿಂತನೆ, ಪರರ ಏಳಿಗೆ ಬಯಸುವವನೇ ಶರಣರು, ನಾಳೆ ಚಿಂತೆ ನಾವು ಯಾಕ ಮಾಡೋಣ ಎಂದು ತನ್ನ ಗಂಡನಿಗೆ ಹೆಂಡತಿ ಹೇಳಿದರೇ, “ನಾನು ಆರಂಭ ಮಾಡುವೆ ಗುರುಪೂಜೆಗೆಂದು ನಾನು ವ್ಯವಹಾರ ಮಾಡುವೆ ಲಿಂಗಾರ್ಚನೆಗೆಂದು ನಾನು ಪರಸೇವೆ ಮಾಡುವೆ ಜಂಗಮ ದಾಸೋಹಕ್ಕೆಂದು” ಎಂದು ನಮ್ಮ ಅಣ್ಣ ಬಸವಣ್ಣನವರು ಅನುಭವ ಮಂಟಪದಲ್ಲಿ ಹೇಳಿಲ್ಲವೇ ನಾವೂ ಹಾಗೆಯೇ ನಡೆಯಲು ನುಡಿಯಲು ಬಸವಣ್ಣ ಹೇಳಿಲ್ಲವೇ ನಮಗ?

ನಮಗ ಇವತ್ತಿಗೆ ಇಷ್ಟು ಸಾಕು ಹೋಗು, ಮೊದಲು ಕೊಟ್ಟು ಬನ್ನಿ ಎಂದು ತನ್ನ ಗಂಡನಿಗೆ ಕಳಸತಾಳೆ. ಅಂದು ಅವರು ಮಾಡಿದ ಕೆಲಸಕ್ಕೆ ದಿನ ನಿತ್ಯ ಕೊಡುವ ಆಯಕ್ಕಿಂತ ಅಥವಾ ಅಕ್ಕಿ ಅಥವಾ ಅವರ ದುಡಿಮೆಗೆ ಪ್ರತಿಫಲವಾಗಿ ಕೊಟ್ಟ ಸಂಬಳ ಹೆಚ್ಚು ಕೊಟ್ಟ ಕಾರಣಕ್ಕೆ. ನಮಗ ದುಡಿಮೆಗೆ ಪ್ರತಿಫಲ ಇಷ್ಟು ಸಾಕು ಹೆಚ್ಚಿನದು ಬೇಡ ಅನ್ನವ ಪ್ರಜ್ಞೆ ಉಳ್ಳವರು ಅವರು ಆಗಿದ್ದರು.

ಇಂದಿನ ಕಾಲದಲ್ಲಿ ನಮಗ ಅಷ್ಟು ಸಾಧ್ಯ ಆಗದಿದ್ದರೂ ಅನ್ಯಾಯ ಅಧರ್ಮದಿಂದ ಗಳಸದೇ, ಪರರ ಮನ ನೋಯಿಸುವ ಕೆಲಸ ಮಾಡದೇ ಅನ್ಯಾಯ ಅಧರ್ಮದ ದುಡ್ಡು ಬಳಸದೇ, ಭ್ರಷ್ಟಾಚಾರದಲ್ಲಿ ತೊಡಗದೇ ಬದುಕಿದರೇ ಸಾರ್ಥಕ ಬದುಕು ಆಗುವುದರಲ್ಲಿ ಸಂದೇಹವಿಲ್ಲ.

ನಮ್ಮ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿಜಿಯವರನ್ನು ನಾವು ನೆನಪು ಮಾಡಿಕೊಳ್ಳಬಹದು. ಅವರ ಹೆಂಡತಿ ಒಂದು ತಿಂಗಳಿಗೆ ನಲವತ್ತು ರೂಪಾಯಿ ಗಂಡ ಕೊಟ್ಟಿದ್ದರಲ್ಲಿ ಉಳಿಸಿದ್ದು ಗೊತ್ತು ಆಗಿ ಇನ್ನೂ ಮುಂದೆ ನನ್ನ ವೇತನ ಒಂದು ತಿಂಗಳಿಗೆ ನನಗ ಇಷ್ಟೇ ಸಾಕು, ಅದು ನನಗ ಹೆಚ್ಚು ಆಗುತ್ತದೆ ಎಂದು ಹೇಳಿದ್ದರಂತೆ. ಅವರ ಸರಳ ಜೀವನ ನಡೆ ನುಡಿಯಿಂದ ಇಂದಿಗೂ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದಿಗೂ ಅಂತಹ ವ್ಯಕ್ತಿಗಳು ನಮ್ಮೆಲ್ಲರ ಮಧ್ಯೆ ಇದ್ದಾರೆ ಅನ್ನೋದಕ್ಕೆ ಇಂತಹವರು ಸಾಕ್ಷಿ.

ಎಲ್ಲರೂ ಇದೇ ಭಾವನೆ ಬೆಳಸಿಕೊಂಡರೇ ನಮ್ಮ ನಾಡು ಕಲ್ಯಾಣ ನಾಡು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಾಳೆ ಬರಲಿರುವ ಮರಣ ಇಂದೇ ಬರಲಿ, ಬೇಕಿದ್ದರೆ ಈಗಲೇ ಬರಲಿ, ಅದರ ಅಳುಕು ಅಂಜಿಕೆ ನನಗಿಲ್ಲ. ಹುಟ್ಟಿದವನಿಗೆ ಸಾವು ಬಿಟ್ಟಿದ್ದಲ್ಲ ಎನ್ನುವಂತೆ ನಮ್ಮ ಕೂಡಲಸಂಗಮದೇವರು ಬರೆದ ದೈವ ಲಿಪಿ ಬದಲಿಸಲು ಹರಿ ಬ್ರಹ್ಮಾದಿಗಳಿಗೂ ಸಾಧ್ಯವಿಲ್ಲ. ನಮಗ್ಯಾಕೆ ಬೇಕು ಹಣ, ಅಧಿಕಾರ, ಆಸ್ತಿ, ಹೆಚ್ಚಿನ ದುಡ್ಡು ದುಡಿಮೆ ಆಸೆ ಎಂದು ಆ ಶರಣ ತನ್ನ ಹೆಂಡತಿ ಮಾತು ಹೌದಲ್ಲವೇ ಅಂತ ತಿಳ್ಕೊಂಡು ಮರಳಿ ಹೆಚ್ಚಿಗೆ ಆಯ ನೀಡಿದ ಅಕ್ಕಿಯನ್ನು ಅವರಿಗೆ ಮರಳಿ ಕೊಟ್ಟು ಬರುತ್ತಾನೆ ಶರಣ. ಅದು ಆಯ್ಕಕೊಂಡು ಬಂದ ಅಕ್ಕಿ ಅಲ್ಲ ಆಯದ ಅಕ್ಕಿ. ಅಂದರೆ ನಮ್ಮ ಹಳ್ಳಿಯಲ್ಲಿ ಆಯಗಾರರು ಇರ್ತಾರೆ, ಅಂದರೆ ಕಸುಬುದಾರರು.

ನಮ್ಮ ಹಳ್ಳಿಯಲ್ಲಿ ನಮ್ಮ ರೈತರಿಗೆ ನೆರವಾಗುವ ಬಡಿಗ, ಕುಂಬಾರ, ಕಮ್ಮಾರ, ಸಮಗಾರ, ವಾಲೇಕಾರ, ತಳವಾರ, ಚಮ್ಮಾರ, ಬಾರಕೀರ, ಹಡಪದ ಇನ್ನೂ ಮುಂತಾದ ಕಸುಬುದಾರರು ಇರತಾ ಇದ್ದರು. ಅವರರವರ ಹುದ್ದೆಗಳು ಅಥವಾ ಅವರರವರ ಕೆಲಸ ಇದು, ಆ ಕೆಲಸವನ್ನೇ ನಿಷ್ಠೆ ಪ್ರಾಮಾಣಿಕತೆ ಪರಿಶುದ್ಧವಾದ ಮನಸ್ಸಿನಿಂದ ಪರಿಶುದ್ಧವಾಗಿ ಮಾಡಿ ತಮಗ ಬೇಕಾದಷ್ಟು ಅಂದಿನ ದಿನಕ್ಕೆ ಮಾತ್ರ ದುಡಿಯುವವರು. ಯಾಕೆಂದರೆ ಶರಣರಿಗೆ ನಾಳಿನ ಚಿಂತೆ ಅನ್ನುವುದು ಇರಲಿಲ್ಲ. ನಾಳೆ ಬರುವ ಮರಣ ನಮಗ ಇಂದೇ ಬರಲಿ, ಇಂದು ಬರುವ ಮರಣ ನಮಗ ಈಗಲೇ ಬರಲಿ ಅನ್ನುವ ಶರಣರಿಗೆ ಯಾವ ಅಧಿಕಾರದ, ಹೆಚ್ಚು ದುಡಿಮೆಯ, ದುಡ್ಡಿನ ಆಸೆ ಇರಲಿಲ್ಲ. ಅದಕ್ಕೆ ಅವರು ಶರಣರಾದರು.

ನಮಗ ನಾವು ಮುದಕರಾದ ಮೇಲೆ ಬೇಕು, ನಮ್ಮ ಹೆಂಡತಿ, ಗಂಡ, ಮಕ್ಕಳು, ನಾಳಿಗೆ ಬೇಕು, ನನಗ ಮುಪ್ಪಿನ ಕಾಲಕ್ಕೆ ಬೇಕು ಅದಕ್ಕೆ ಇಂದು ಗಳಿಸಿಡಬೇಕು ಎಂದು ನಾವು ಅಂದುಕೊಳ್ಳತೇವೆ. ಆದರೆ ಶರಣರು ಆ ಶಿವ ಯಾವಾಗ ಕರೆದರೂ ರಡಿ ಇರುವವರಿಗೆ ಯಾಕೆ ಇರತದ ಆಸೆ?

ಉದಾಹರಣೆಗೆ ಇದೇ ಶತಮಾನದ ನಮ್ಮ ವಿಜಯಪುರದ ಪರಮ ಪೂಜ್ಯ ಸಿದ್ದೇಶ್ವರ ಶ್ರೀಗಳು ನಾಳೆ ಚಿಂತೆ ಇಲ್ಲದೆ ಹೇಗೆ ಬದುಕಬೇಕು, ಇಂದಿಗೆ ಮಾತ್ರ ಸಾಕು ಎಂದು ಹೇಗೆ ಬದುಕಬೇಕ ಎಂಬುದನ್ನು ತೋರಿಸಿಕೊಟ್ಟರು. ನಾಳೆ ಬರುವುದು ನಮಗ ಇಂದೇ ಬರಲಿ ಇಂದು ಬರುವುದು ನನಗ ಈಗಲೇ ಬರಲಿ ಎಂದು ಬಸವಣ್ಣನವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಿವಶರಣರಂತೆ ಬದುಕಿ ಸಾಕ್ಷಾತ್ ಶಿವನ ಸ್ವರೂಪ ನಮಗೆಲ್ಲ ಕಂಡು ಈ ಭವದಿಂದ ಮುಕ್ತಿ ಹೊಂದಿದರು.

ಅದರಂತೆ ನಾವು ಸಹ ಬಸವಣ್ಣನವರ ವಚನಗಳನ್ನು ಬಾಯಿಯಿಂದ ಹೇಳುವುದಲ್ಲದೇ ಅವರ ವಚನದ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ, ನಮ್ಮ ಬಾಳಿನಲ್ಲಿ ನಮ್ಮ ಜೀವನದಲ್ಲಿ ಸ್ವಲ್ಪನಾದರೂ ಅವಳವಡಿಸಿಕೊಂಡಿದ್ಧೇಯಾದರೆ ನಮ್ಮ ಬದುಕು ಸಾರ್ಥಕ ಬದುಕು ಆಗುತ್ತದೆ, ಶರಣರ ದಾರಿಯಲ್ಲಿ ನಡೆಯುವ ಬದುಕು ಆಗುತ್ತದೆ.

ಶ್ರೀಮತಿ. ದೇವೇಂದ್ರಮ್ಮ,
ಟ್ರಾಫಿಕ್ ಕಂಟ್ರೋಲರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಅಧ್ಯಕ್ಷರು ತನಿಖಾದಳ ಕಲಬುರ್ಗಿ ವಲಯ ರಾಯಚೂರು.
ಮನೆ. ನಂ. 4-4-401/94, ಗುಲ್ಬರ್ಗಾ ಬಿಲ್ಡರ್ಸ ಲೇ ಔಟ್,
ನವೋದಯ ಆಸ್ಪತ್ರೆ ಎದುರು,
ಮಂತ್ರಾಲಯ ರೋಡ್,
ರಾಯಚೂರು – 584 103.
ಮೋಬೈಲ್‌ ಸಂ. +91 96323 44331.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply