
ಭಾರತೀಯ ಮೂಲ ಸಂಸ್ಕೃತಿ ಮಾತೃ ಪ್ರಧಾನವಾದದ್ದು. ಕೃಷಿ ಪ್ರಾಧಾನ್ಯತೆಯನ್ನು ಕಾಯ್ದುಕೊಂಡು ಬಂದ ಮಹಿಳೆ ಪ್ರಕೃತಿಯ ಸಹಜತೆಗೆ ಪರ್ಯಾವಾಗಿದ್ದಳು. ಕಾಲದ ಗರ್ಭದಲ್ಲಿ ಮಾತೃ ಪ್ರಾಧಾನ್ಯತೆ ದೂರ ಸರಿದು, ಪುರಾಣದ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಪುರಾಣ ವ್ಯಕ್ತಿಗಳಾಗಿ ಪ್ರಸಿದ್ಧಿ ಪಡೆದಿರುವ ರಾಮಾಯಣದ ಸೀತೆ ಮಣ್ಣನಿಂದ ಜನಿಸಿ ಮಣ್ಣಾದವಳು. ಎಂಥವರನ್ನೂ ಬೆತ್ತಲಗೊಳಿಸಿದ ರೇಣುಕ ಗುಡ್ಡದ ಎಲ್ಲಮ್ಮಳಾಗಿ ಎಲ್ಲೆ ಮೀರಿ ಅಮ್ಮನಾದಳು. ಇದೇ ರೀತಿ ಕರ್ನಾಟಕದಲ್ಲಿ ಮತ್ತು ಕರ್ನಾಟಕದ ಹೊರಗಡೆ ಶಕ್ತಿ ದೇವತೆ ಎಂದು ಪ್ರಸಿದ್ಧಳಾದ ಗುಡ್ಡಾಪುರದ ದಾನಮ್ಮದೇವಿ ಅಸಂಖ್ಯಾತ ಭಕ್ತ ಸಮೂಹದಿಂದ ಪೂಜೆಗೊಂಡು ಪುರಾಣದ ಕಥೆಯಾಗಿ ಉಳಿದುಕೊಂಡಿದ್ದಾಳೆ, ಆದರೆ, ದಾನಮ್ಮ ಒಬ್ಬ ಐತಿಹಾಸಿಕ ವ್ಯಕ್ತಿಯಾಗಿ ಮೆರೆದು ಶಿವಶರಣೆಯಾಗಿ ಬದುಕಿರುವ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇತಿಹಾಸ ಪ್ರಸಿದ್ಧ ಮಹಿಳೆಯರು ಮೂರು ಕಾರಣಕ್ಕೆ ಪುರಾಣ ಗರ್ಭದಲ್ಲಿ ಸೇರಿಕೊಂಡಿದ್ದಾರೆ. ಮೊದಲನೇಯದಾಗಿ, ಜನಪ್ರಿಯ ವ್ಯಕ್ತಿಗಳಿಗೆ ದೈವ ಸ್ವರೂಪ ನೀಡಿ, ಸಲ್ಲದ ಆಚರಣೆಗಳನ್ನು ಜಾರಿಗೆ ತಂದು ಮುಗ್ಧರಿಂದ ಪೂಜೆಗೊಳಪಡಿಸಿ ಹೊಟ್ಟೆ ಹೊರೆದುಕೊಂಡು ತಮ್ಮ ಶ್ರೇಷ್ಠತೆ ಕಾಯ್ದುಕೊಳ್ಳಲು ಬ್ರಾಹ್ಮಣತ್ವ ಹೂಡಿದ ಕುತಂತ್ರ ಪ್ರಮುಖ ಕಾರಣ. ಎರಡನೇಯದಾಗಿ, ಪುರಷ ಪ್ರಧಾನ ಸಮಾಜ ತನ್ನ ಶ್ರೇಷ್ಠತೆಯನ್ನು ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ನಡೆಸಿದ ನಿರ್ಧಯ ದಬ್ಬಾಳಿಕೆ ಇನ್ನೊಂದು ಕಾರಣ. ಮೂರನೇಯದಾಗಿ, ತಮ್ಮ ನಿಸ್ವಾರ್ಥ ಸಾಮಾಜಿಕ ಸೇವೆಯಿಂದ ಜನತೆಯ ಮೆಚ್ಚುಗೆ-ಗೌರವಕ್ಕೆ ಪಾತ್ರವಾಗಿ ಕಾಲದ ಗರ್ಭದಲ್ಲಿ ಇತಿಹಾಸ ಬದಿಗೆ ಸರಿದು, ಪವಾಡುಗಳ ಕಟ್ಟುಕಥೆಗಳು ಹುಟ್ಟಿಕೊಂಡು ಪೌರಾಣಿಕತೆಯಲ್ಲಿ ಸೇರಿ ಹೋದದ್ದು.
ಭಾರತದ ಮಾತೃಪ್ರಧಾನ ಸಮಾಜದ ಪ್ರಸಿದ್ಧ ಮಹಿಳೆಯರು ಈ ಮೂರು ಕಾರಣಗಳಿಂದಾಗಿ ಇತಿಹಾಸದಿಂದ ಮರೆಯಾಗಿ ಪುರಾಣದ ವ್ಯಕ್ತಿಗಳಾಗಿರುವಂತೆ ಶರಣತತ್ವದ ಮೂಲಕ ಸಾಮಾಜಿಕ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ದಾನಮ್ಮನವರು ಇತಿಹಾಸದಿಂದ ಸರಿದು ಪುರಾಣದ ಮೂಲಕ ಜನರ ಪೂಜೆಗೊಳಗಾಗಿ ಉಳಿದುಕೊಂಡಿರುವಲ್ಲಿ ಈ ಮೇಲಿನ ಮೂರು ವಿಷಯಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡಿವೆ.
ಗುಡ್ಡಾಪುರದ ದಾನಮ್ಮದೇವಿಯವರಿಗೆ ವರ್ಗ, ವರ್ಣ, ಲಿಂಗಭೇದವಿಲ್ಲದೆ ಅಸಂಖ್ಯಾತ ಭಕ್ತ ಸಮೂಹವಿದೆ. ಇವರ ಹೆಸರಿನಲ್ಲಿ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹೋತ್ಸವ, ದಾಸೋಹ, ಲಿಂಗಧಾರಣೆ, ವಿಭೂತಿಧಾರಣೆ, ಉಡಿ ತುಂಬುವ ಕಾರ್ಯಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ. ದಾನಮ್ಮದೇವಿಯವರ ಹೆಸರಿನಲ್ಲಿ ಇಂದು ತಾಲೂಕು, ಹಳ್ಳಿ-ಹೋಬಳಿ ಮಟ್ಟದಲ್ಲಿ ಎಲ್ಲೆಡೆ ಸಮಾಜೋ-ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಅನೇಕ ಕಡೆ ಆಕೆಯ ಹೆಸರಿನಲ್ಲಿ ದೇವಾಲಯಗಳು ನಿರ್ಮಾಣಗೊಳ್ಳುತ್ತಿರುವುದರಿಂದ “ದಾನಮ್ಮ” ಇಂದು ಗುಡ್ಡಾಪುರಕ್ಕೆ ಮಾತ್ರ ಕೇಂದ್ರಿಕರಣಗೊಳ್ಳದೆ ಗುಡ್ಡಾಪುರ ಸೀಮೆ ದಾಟಿ ಹಳ್ಳಿಗಳನ್ನು ಪ್ರವೇಶಿಸಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಹುತೇಕವಾಗಿ “ದಾನಮ್ಮದೇವಿ” ಪವಾಡ ಮಾಡಿದವರು, ಕಾರಣ ಪುರುಷಿಣಿ, ಪುರಾಣ ದೇವತೆ ಎಂದೇ ಆರಾಧಿಸುವ ಭಕ್ತ ಸಮೂಹ ಅಪಾರ. ಈ ಮೂಲ ಭಾವನೆಯಿಂದಾಗಿ ಮಕ್ಕಳ ಭಾಗ್ಯಕ್ಕೋ, ಗಂಡನ ಭಾಗ್ಯಕ್ಕೋ ಮುತೈದೆಯ ಕರುಣೆಗೋ ಈ ದೇವಿಗೆ ಭಕ್ತರು ನಡೆದುಕೊಳ್ಳುತ್ತಾರೆ. ಆದರೆ, ಈ ಭಾವನಾತ್ಮ ಆಚರಣೆಗಳೊಂದಿಗೆ ಪುರಾಣದಿಂದ ಹೊರಬಂದು ಗಮನಿಸಿದಾಗ “ದಾನಮದೇವಿ” ಪುರಾಣ ಮೂಲದ ವ್ಯಕ್ತಿಯಾಗಿ ಕಾಣಿಸದೆ, ಐತಿಹಾಸಿಕ ಶಿವಶರಣೆಯಾಗಿ ಗೋಚರಿಸುತ್ತಾರೆ. ಸಮಾಜೋ-ಧಾರ್ಮಿಕ ಕಾರ್ಯಗಳನ್ನು ತುಂಬಾ ನಿಷ್ಠೆ ಹಾಗೂ ಧೈರ್ಯದಿಂದ ನಿರ್ವಹಿಸಿ ಜನಮನ ಗೆದ್ದ ಮಹಿಳೆಯಾಗಿ ಎದುರಾಗುತ್ತಾರೆ. ಈಕೆಯ ಈ ಕಾರ್ಯಸಾಧನೆಯಿಂದಾಗಿ ಮುಗ್ಧ ಜನತೆ ಭಾವೋದ್ವೇಗಕ್ಕೆ ಒಳಗಾಗಿ ಭಕ್ತಿಯಿಂದ ಪೂಜಿಸಿ ಗೌರವಿಸುತ್ತ ಬಂದಿದ್ದಾರೆ. ಈಕೆಯನ್ನು ಈ ರೀತಿ ಪೂಜಿಸುವಂತೆ ಪುರೋಹಿತ ವರ್ಗ ಪ್ರೇರೆಪಿಸುತ್ತಲೂ ಬಂದಿದೆ. ಹೀಗಾಗಿ ದಾನಮ್ಮದೇವಿಯ ಚರಿತ್ರೆಯನ್ನು ನಾಡಿನಲ್ಲಿ ಪುರಾಣ-ಪ್ರವಚನಗಳ ಮೂಲಕ ನಿರೂಪಿಸಲಾಗುತ್ತಿದೆ.
ಪುರಾಣ ವಾಸ್ತವಕ್ಕಿಂತ ಅವಾಸ್ತವ ಮತ್ತು ಕಲ್ಪನೆಗೆ ಆದ್ಯತೆ ನೀಡುವುದು. ಪ್ರಮುಖವಾಗಿ ಮುನುಷ್ಯ ಚರಿತ್ರೆ ಅಲ್ಲದಿದ್ದರೂ ಪ್ರಾಸಂಗಿಕವಾಗಿ ಒಂದು ಕಾಲಕ್ಕೆ ಪ್ರಸಿದ್ಧಿಗಿದ್ದ ಸಂಗತಿಯನ್ನು ಇದು ತಂದುಕೊಳ್ಳುತ್ತದೆ. ಇಲ್ಲಿ ಐತಿಹಾಸಿಕ ಅಲ್ಪ ಪ್ರಮಾಣವಾದರೆ, ಕಾಲ್ಪನಿಕತೆ ಹೆಚ್ಚು ವೈಭವಕ್ಕೆ ಒಳಗಾಗಿರುತ್ತದೆ. ಈ ಕಾರಣದಿಂದಾಗಿ ದಾನಮ್ಮನವರ ವಿಚಾರದಲ್ಲಿ ಪುರಾಣಗಳು ಅವರನ್ನು ದೈವಾಂಶ ಸಂಭೂತೆ ಅಂತಾನೇ ಬಿಂಬಿಸಿ, ಅವರನ್ನು ಪವಾಡಗಳಿಗೆ ಸೀಮಿತಗೊಳಿಸಿವೆ. ಆದರೆ, ಈ ದಾನಮ್ಮನವರು ಶರಣರ ಚಳುವಳಿಯ 12 ನೇ ಶತಮಾನದಲ್ಲಿ ಬಾಳಿ ಬದುಕಿದ ನಿಜ ಶಿವಶರಣೆಯಾಗಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಾಕ್ಷಿ ಹೇಳುತ್ತವೆ. ಈಕೆಗೆ “ವರದಾಯಿನಿ”, “ಗುಡ್ಡವ್ವ”, “ಲಿಂಗಮ್ಮ” ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಡಾ. ಫ. ಗು ಹಳಕಟ್ಟಿ ಮತ್ತು ಪ್ರೊ. ಕೆ. ಜಿ. ಕುಂದಣಗಾರರಂಥ ವಿದ್ವಾಂಸರು ಶಾಸನಗಳನ್ನು ಆಧಾರವನ್ನಾಗಿರಿಸಿಕೊಂಡು ಗುಡ್ಡಾಪುರದ ದಾನಮ್ಮನವರ ಬಗ್ಗೆ ಲೇಖನಗಳನ್ನು ಬರೆದು ಐತಿಹಾಸಿಕ ಸಂಗತಿಗಳ ಮೇಲೆ ಬೆಳಕು ಚಲ್ಲಿದ್ದಾರೆ. ಹಳಕಟ್ಟಿ ಅವರು 1926 ರಲ್ಲಿಯೇ ತಮ್ಮ “ಶಿವಾನುಭವ” ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ದಾನಮ್ಮನವರ ವಿಷಯವನ್ನು ಸೂಚಿಸುತ್ತ 21 ಶಾನಗಳನ್ನು ಅಧ್ಯಯನ ಮಾಡಿದ ಪ್ರೊ. ಕೆ. ಜಿ. ಕುಂದಣಗಾರ ಅವರು ಐತಿಹಾಸಿಕ ಒಳನೋಟಗಳ ಬೀರಿದ್ದಾರೆ. ವಿಜಾಪೂರ ಜಿಲ್ಲೆ ಉತ್ತರ ಭಾಗವನ್ನು ಆಳುತ್ತಿದ್ದ ಮಾಂಡಲಿಕ ಸಾಯಿದೇವ ಎಂಬವ “ವಾತಾಖ್ಯಮರ” ಎಂಬಲ್ಲಿ “ವರದಾಯಿನಿ” ಹೆಸರಿನ ದೇವಾಲಯ ಕಟ್ಟಿಸಿ, ಉಂಬಳಿ ಕೊಟ್ಟ ವಿಷಯ ಶಾಸನಗಳಲ್ಲಿ ಪ್ರಸ್ತಾವಿದೆ. ಈ ಶಾಸನದಿಂದ ತಿಳಿದುಬರುವುದೆಂದರೆ, ಈ ಮಾಂಡಲಿಕ ಕಟ್ಟಿಸಿದ ದೇವಾಲಯ “ವರದಾಯಿನಿ” ಹೆಸರಿನಿಂದ ಗುರುತಿಸಿಕೊಂಡ ದಾನಮ್ಮನವರ ದೇವಾಲಯ ಕಟ್ಟಿಸಿದ್ದಾನೆ. ಅಂದರೆ, ದಾನಮ್ಮವರು ಐತಿಹಾಸಿಕ ವ್ಯಕ್ತಿಯಾಗಿದ್ದು, ತನ್ನ ಕಾರ್ಯ ಸಾಧನೆಯಿಂದಾಗಿ ರಾಜರ, ಮಾಂಡಲಿಕರ ಪ್ರೀತಿ-ಗೌರವಕ್ಕೆ ಪಾತ್ರವಾಗಿದ್ದರು ಎಂಬುದು ತಿಳಿದು ಬರುತ್ತದೆ.
ಶಾಸನಗಳ ಆಧಾರದ ಮೂಲಕ ’Inscriptions from Northern Karnataka and Kolhapur’ ಕೃತಿಯ ಮುನ್ನುಡಿಯಲ್ಲಿ, ಪ್ರೊ. ಕೆ. ಜಿ. ಕುಂದಣಗಾರ ಅವರು, “ಕ್ರಿ.ಶ. 1928 ರಲ್ಲಿ ವೀರಶೈವವು ಕೆಲಮಟ್ಟಿಗೆ ಕರ್ನಾಟಕದಲ್ಲೆಲ್ಲ ಪ್ರಸಾರವಾಗಿತ್ತು. ಆದರೆ, ಜನರ ಮನಸ್ಸು ಹಿಂದಿನ ಧೈಯಗಳನ್ನು ತೊರೆಯಲು ಸಿದ್ಧವಿರಲಿಲ್ಲ. ಆದರೂ, ಶರಣಿ ವರದಾನಿ ಗುಡ್ಡಾದೇವಿಯವರ ಮೂರ್ತಿಯನ್ನು ಶೈವ ಬ್ರಾಹ್ಮಣ ಬಸವಿದೇವ ಪ್ರತಿಷ್ಠಾಪಿಸಿ ವೀರಶೈವ ಶರಣೆಯನ್ನು ಆರಾಧಿಸಿದನು” ಎಂದು ಹೇಳಿರುವುದು ದಾನಮ್ಮನ ಕುರಿತಾದದ್ದು.
ಡಾ. ಪಾಂಡುರಂಗರಾವ್ ಬಿ. ದೇಸಾಯಿ ಎಂಬ ವಿದ್ವಾಂಸರು “ಶರಣ ಸಾಹಿತ್ಯ” (ಸಂಪುಟ-21, ಸಂಚಿಕೆ-1. ಪುಟ-29 ರಿಂದ 35) ರಲ್ಲಿ ಇಂಗಳಗಿಯ ಶಾಸನವನ್ನು ಪ್ರಕಟಿಸಿದ್ದು, ಈ ಶಾಸನದಲ್ಲಿ ಗುಡ್ಡವ್ವಯವರ ಬಗ್ಗೆ ಪ್ರಸ್ತಾಪವಿದೆ. “ಗುಡ್ಡವ್ವೆಯ ಅಧ್ಯಕ್ಷತೆಯಲ್ಲಿ ಕ್ಷೇತ್ರ ಸನ್ಯಾಸಿನಿಯಾದ ಬಲ್ಲವೆಯ ಕಾಲತೊಳೆದು ಇಂಗಳಗೆಯ ಗಣ ಮಠಕ್ಕೆ ಬಿಜ್ಜರಸ, ಪ್ರಭು ನಾಗರಸ, ಹೆಗ್ಗಡೆ ಬಸವಯ್ಯ, ಪಂಚಮಠ ಇವರೆಲ್ಲ ಸೇರಿ ಮನೆ, ಭೂಮಿ, ಹೂದೋಟ ಇತ್ಯಾದಿಗಳನ್ನು ಧಾರೆ ಎರೆಯುತ್ತಾರೆ. ಇಂತಹ ಒಂದು ಮಹತ್ವದ ಕಾರ್ಯಕ್ರಮದಲ್ಲಿ ಗುಡ್ಡವ್ವೆಯವರು ಅಧ್ಯಕ್ಷತೆ ವಹಿಸಿರುವುದು ಅವರ ಸಾಮಾಜಿಕ ಕಾರ್ಯ ಮತ್ತು ಪ್ರಸಿದ್ಧಿಯನ್ನು ಸೂಚಿಸುತ್ತದೆ.
ಡಾ. ಎಂ. ಎಂ. ಕಲಬುರ್ಗಿಯವರು “ಶಾಸನಗಳಲ್ಲಿ ಶಿವಶರಣರು” ಕೃತಿಯ 33 ರಿಂದ 35 ನೇ ಪುಟದಲ್ಲಿ ಮತ್ತು ಡಾ. ಎಲ್. ಬಸವರಾಜು ಅವರ “ಶಿವಾದಾಸ ಗೀತಾಂಜಲಿ” ಕೃತಿಯ 8 ನೇ ಪುಟದ ಪೀಠಿಕೆ ಭಾಗದಲ್ಲಿ ಗುಡ್ಡಾಂಬೆಯ ಮಹಿಮೆ ಮತ್ತು ಸಾಧನೆಯ ಬಗ್ಗೆ ಶಾಸನಗಳ ಆಧಾರದ ಮೂಲಕ ಪ್ರಸ್ತಾಪಿಸಿದ್ದಾರೆ. ಹರಿಹರ ಕವಿ ಮಹಾದೇವಿಯಕ್ಕನ ರಗಳೆಯಲ್ಲಿ ಮತ್ತು ಅನೇಕ ಶಿವಶರಣೆಯರ ಮಧ್ಯದಲ್ಲಿ “ವರದಾಯಿನಿ ದಾನಮ್ಮ” ಎಂದು ಸ್ಮರಿಸಿಕೊಂಡಿದ್ದಾನೆ. ಭೀಮಕವಿಯ “ಬಸವಪುರಾಣ” ದಲ್ಲಿ ದಾನಮ್ಮನವರ ಕಥೆ ಬರುತ್ತದೆ. ತಾಳಿಕೋಟೆ, ವಿಜಾಪುರದ ಶಾಸನಗಳು ದಾನಮ್ಮನವರ ಬಗ್ಗೆ ಸೂಚಿಸುತ್ತವೆ. 1923 ರಲ್ಲಿ “ಗುಡ್ಡಾಪುರದ ದಾನಮ್ಮನ ಚರಿತೆ” ಎಂಬ ಪುಸಕ್ತವನ್ನು ಗದುಗಿನ ವೀರಶೈವ ಪ್ರಗತಿಶೀಲ ಯುವಕ ಸಂಘ ಪ್ರಕಟಿಸಿದ. “ಶ್ರೀಕ್ಷೇತ್ರ ಗುಡ್ಡಾಪುರ” ಎಂಬ ಹೆಸರಿನ ಕೃತಿ ಮರಾಠಿಯಲ್ಲಿ ರಚನೆಗೊಂಡಿದೆ. ಇದನ್ನು ಹುಬ್ಬಳಿಯ ನಿವೃತ್ತ ಶಿಕ್ಷಕ ಶ್ರೀ. ಕೆ. ಆರ್. ಪಾವಸೆ ಎಂಬುವರು ಅನುವಾದ ಮಾಡಿದ್ದಾರೆ. ಡಾ. ಪಂ. ಪುಟ್ಟಕವಿ ಗವಾಯಿಗಳು ಭಾಮಿನಿ ಷಟ್ಟದಿಯಲ್ಲಿ “ಶಿವಶರಣೆ ದಾನಮ್ಮ ಪುರಾಣ” ಕೃತಿ ರಚಿಸಿದ್ದಾರೆ. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಸಂಪುಟ-1 ರ 386 ನೇ ಪುಟದಲ್ಲಿ ಗುಡ್ಡವ್ವೆಯವರ ಕಥೆ ಸಂಕ್ಷಿಪ್ತವಾಗಿ ಪ್ರಸ್ತಾಪಗೊಂಡಿದೆ. ಈ ಎಲ್ಲ ಉಲ್ಲೇಖ ಮತ್ತು ಅಧ್ಯಯನಗಳು ದಾನಮ್ಮನವರು ಒಬ್ಬ ಐತಿಹಾಸಿಕ ಮಹಿಳೆಯಾಗಿದ್ದು ಸಾಮಾಜಿಕ ಕಾರ್ಯದಿಂದ ಸಾಮಾನ್ಯ ಜನರ ಮೆಚ್ಚುಗೆಗೆ ಪಾತ್ರವಾಗಿ ಪ್ರಸಿದ್ಧಿಹೊಂದಿರುವುದನ್ನು ಸಾಕ್ಷೀಕರಿಸುತ್ತವೆ.
ಇಂಡಿ ತಾಲೂಕಿನ ಭೀಮಾನದಿ ತೀರದಲ್ಲಿರುವ “ಉಮರಾಣಿ” ಎಂಬ ಗ್ರಾಮ ದಾನಮ್ಮನವರ ಜನ್ಮಸ್ಥಳವೆಂದು ಗುರುತಿಸಲಾಗುತ್ತದೆ. ದಾನಮ್ಮನವರ ತಂದೆ “ಅನಂತರಾಯ” ಅಕ್ಕಸಾಲಿಗ ಕೆಲಸ ನಿರ್ವಹಸುತ್ತಿದ್ದರು. ತಾಯಿ ಹೆಸರು “ಶಿರಸಮ್ಮ”. ಈ ದಂಪತಿಗಳಿಗೆ ಅನೇಕ ದಿನಗಳ ವರೆಗೆ ಮಕ್ಕಳಾಗದ ಕಾರಣ ವೀರಮಲ್ಲಯ್ಯನಿಗೆ ಹರೆಕೆ ಹೊತ್ತಿದಾಗ ಹೆಣ್ಣುಮಗು ಜನಿಸಿದ ಬಗ್ಗೆ ಉಲ್ಲೇಖಗಳಿವೆ. ಇನ್ನೊಂದೆಡೆ ಈಶ್ವರಲಿಂಗ ಪೂಜೆಯಿಂದಾಗಿ ಈ ಮಗು ಜನಿಸಿತು ಎಂದು ಸೂಚಿಸಲಾಗಿದೆ. ಅದೇ ಮಗು ದಾನಮ್ಮ. ಪುರಾಣಗಳ ಮೂಲದ ಪ್ರಕಾರ ದಾನಮ್ಮನವರು ಸಾಕ್ಷಾತ್ ಪಾರ್ವತಿ ದೇವಿಯವರ ಅವತಾರವೆಂದು ಹೇಳಲಾಗುತ್ತದೆ.
ದಾನಮ್ಮನವರ ಹುಟ್ಟಿನ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಇವರ ಪೂರ್ವಾಶ್ರಮದ ಹೆಸರು “ಲಿಂಗಮ್ಮ” ಎಂದು ವಿದ್ವಾಂಸರ ಒಮ್ಮತದ ವಿಚಾರ. ದಾನಮ್ಮನವರ ತಂದೆ-ತಾಯಿ ಅಕ್ಕಸಾಲಿಗ ವೃತ್ತಿಯವರಾಗಿದ್ದರೂ ಲಿಂಗಪೂಜೆಯ ಮೂಲಕ ಮಗುವನ್ನು ಪಡೆದಿರುವುದು ಆ ಸಂದರ್ಭದಲ್ಲಿ ಲಿಂಗಾಯತ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ. ಇದಕ್ಕೆ ಇನ್ನೊಂದು ನಿದರ್ಶನವೆಂದರೆ, ಈ ಹೆಣ್ಣುಮಗು ಜನಿಸಿದಾಗ ಶಾಂತವೀರ ಪಟ್ಟಾಧ್ಯಕ್ಷರು ಮಗುವಿಗೆ ವಿಭೂತಿ ಧಾರಣೆ ಮಾಡಿ ಲಿಂಗಧಾರಣ ಮಾಡುತ್ತಾರೆ. ಆ ಮಗುವಿನ ತಂದೆ-ತಾಯಿಗೆ ತಾವೂ ಸಹಿತ ಲಿಂಗಧಾರಿಗಳಾದರೆ ಮಾತ್ರ ಮಗುವಿನ ಲಾಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿ, ಶಾಂತವೀರರು ಅವರಿಗೂ ಲಿಂಗದೀಕ್ಷೆ ನೀಡುತ್ತಾರೆ. ಈ ಉಲ್ಲೇಖವನ್ನು ಗಮನಿಸಿದರೆ ಅಕ್ಕಸಾಲಿಗ ಸಮುದಾಯದ ಈ ದಂಪತಿಗಳು ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿರಬಹುದು ಇಲ್ಲಾ ಆ ಧರ್ಮದ ಬಗ್ಗೆ ನಿಷ್ಠೆಯುಳ್ಳವರಾಗಿರಬಹುದು. ಈ ಕಾರಣದಿಂದಾಗಿ “ಲಿಂಗಮ್ಮ” ಎಂಬ ಹೆಸರಿನ ಮಗು ಲಿಂಗಾಯತ ಧರ್ಮದ ಪರಿಸರ ಪ್ರಭಾವಳಿಗೆ ಒಳಗಾಗಿರುವ ಸಾಧ್ಯತೆಯಿದೆ. 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಾಯಕ, ದಾಸೋಹ, ಗುರು, ಲಿಂಗ, ಜಂಗಮ ಪರಿಕಲ್ಪನೆಗೆ ತನ್ನನ್ನು ಸಮರ್ಪಿಸಿಕೊಂಡು ಶಿವಶರಣೆ ಎಂದು ಖ್ಯಾತಿ ಪಡೆದಿದ್ದಾರೆ.
ಶಿವ-ಶರಣೆಯರನ್ನು ಎರಡು ರೀತಿ ಗುರುತಿಸಬಹುದು. ಒಂದು ವಚನಗಳನ್ನು ಬರೆದ ಪ್ರಖ್ಯಾತರಾದರೆ, ಇನ್ನೊಂದು ಲಿಂಗಾಯತ ಧರ್ಮದ ತಾತ್ವಿಕ ಪರಿಕಲ್ಪನೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಲಿಂಗಾಯತ ಧರ್ಮ ಪ್ರಚಾರ ಕೈಗೊಂಡವರು. ಮೋಳಿಗೆ ಮಹಾದೇವಿ, ದುಗ್ಗಳೆಯಂಥ ಶರಣೆಯರು ಆದರ್ಶ ದಂಪತಿಗಳಾಗಿದ್ದುಕೊಂಡು ವಚನಗಳನ್ನು ರಚಿಸಿ ಖ್ಯಾತಿ ಹೊಂದಿದರೆ, ದಾನಮ್ಮನಂಥವರು ವಚನಗಳನ್ನು ರಚಿಸದೇ ಲಿಂಗಾಯತ ಧರ್ಮದ ಏಳಿಗೆಗಾಗಿ ಶ್ರಮಿಸಿದ್ದಾರೆ. ಬಸವ ಪೂರ್ವ ಯುಗದಲ್ಲಿಯೇ ಶೈವ ಧರ್ಮದಲ್ಲಿ ನಿರತರಾದ ಅನೇಕ ಸ್ತ್ರೀಯರು ಈ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಪುರಾವೆಗಳು ದೊರೆಯುತ್ತವೆ ಎಂದು ಡಾ. ಬಿ. ಎಸ್. ಸುಮಿತ್ರಾಬಾಯಿ ಅವರು ಸೂಚಿಸುತ್ತಾರೆ. ಉದಾಹರಣೆಗೆ, ಸುಗ್ಗಳೆ, ಶಿವದಾಸಿ, ವೈಜಕವ್ವೆ, ಲಕುಮಾದೇವಿ, ಕೇತಲಾದೇವಿ, ಶಾಂಭವಿದೇವಿ, ಸೌಂದರದೇವಿ, ಚಾಮಲೆಯರಂಥ ಶರಣೆಯರು ವಚನ ರಚಿಸದಿದ್ದರೂ ಲಿಂಗಾಯತ ಧರ್ಮದ ಪ್ರಚಾರಕ್ಕೆ ಶ್ರಮ ವಹಿಸಿದ್ದಾರೆ.
ದೇವರ ದಾಸಿಮಯ್ಯನವರನ್ನು ಗುರುವೆಂದು ನಂಬಿದ್ದ ಸುಗ್ಗಳೆ ಮತ್ತು ತೆಲಗು ಜೊಮ್ಮಯ್ಯನ ಶಿಷ್ಯ ಲಕುಮಾದೇವಿಯವರು ರಾಜಪತ್ನಿಯರು. ತಮ್ಮ ಪತಿಯಂದಿರು ಭಿನ್ನ ಧಾರ್ಮಿಕ ವಿಚಾರದವರಿದ್ದಾಗ, ಅವರ ಧಾರ್ಮಿಕ ನಂಬಿಕೆಯನ್ನೂ, ರಾಜಶಕ್ತಿಯನ್ನೂ ಎದುರಿಸಿ ನಿಂತು ಶಿವಶರಣರ ತತ್ವ ಪ್ರಚಾರಕ್ಕೆ ಬೆಂಬಲ ನೀಡಿದರು. ಕೊಂಡಗುಳಿ ಕೇಶರಾಜನ ಪತ್ನಿ ಗಂಗಾಂಬಿಕೆ ತನ್ನ ಪತಿ ದಂಡನಾಯಕ ಪದವಿ, ಅಂತಸ್ತು, ಆಸ್ತಿಗಳನ್ನು ಪರಿತ್ಯಜಿಸಿ ಹೊರಟಾಗ ಆತನೊಂದಿಗೆ ಹೊರಟು ಧರ್ಮ ಪಾಲನೆಗೆ ಸಹಕರಿಸಿದಳು. ಇಂಥ ಭಕ್ತರು ನಿಷ್ಠೆಯಿಂದ ವ್ಯವಸ್ಥೆಯ ವಿರುದ್ಧ ನಿಂತು ಮುಂದಿನ ಶರಣ ಚಳುವಳಿಗೆ ನೆಲ ಹದಗೊಳಿಸಿದರು. ಹಾಗೆಯೇ ಲಿಂಗಮ್ಮನವರೂ ಕೂಡ ಮನೆಯಲ್ಲಿ ತನ್ನ ವಿವಾಹದ ವಿಚಾರ ಪ್ರಸ್ತಾಪಿಸಿದಾಗ ಅದೃಶ್ಯರಾಗುತ್ತಾರೆ. ವಿವಾಹ ಬಂಧನಕ್ಕೆ ಒಳಗಾದರೆ ಸಮಾಜೋ-ಧಾರ್ಮಿಕ ಕಾರ್ಯಕ್ಕೆ ಅಡ್ಡಿಯಾಗಬಹುದೆಂದು ಲಿಂಗಮ್ಮನವರು ಮನೆಯನ್ನು ತೊರೆದಿರುವ ಸಾಧ್ಯತೆಯಿದೆ. ಧರ್ಮ ಪ್ರಚಾರಕ್ಕೆ ಒಬ್ಬ ಮಹಿಳೆ ವಿವಾಹವನ್ನೇ ತೊರೆದು ತನ್ನನ್ನು ತೊಡಗಿಸಿಕೊಳ್ಳುವುದು ಮಹಿಳೆಯರು ಇಂಥ ನಿರ್ಧಾರದ ತೆಗೆದುಕೊಳ್ಳುವ ಗಟ್ಟಿತನ ಹೊಂದಿದ್ದರು ಎನ್ನುವುದಕ್ಕೆ ನಿರ್ದೇಶನವಾಗಿದ್ದು, ಅಕ್ಕಮಹಾದೇವಿಯ ನಿರ್ಧಾರವೂ ಇದಕ್ಕೆ ಸಾಕ್ಷೀಕರಿಸುತ್ತದೆ.
ಲಿಂಗ ಪುನರ್ ಪ್ರತಿಷ್ಠಾಪಿಸಿದ ವೀರ ಮಹಿಳೆ:
ಆಲಂಪುರ ಎಂಬ ಗ್ರಾಮದ ಮಲಪ್ರಭಾ ನದಿಯ ದಡದಲ್ಲಿ ಶಿವಭಕ್ತರು ಸೇರಿ ಬ್ರಹ್ಮಲಿಂಗೇಶ್ವರ ಎಂಬ ದೇವಾಲಯವೊಂದನ್ನು ನಿರ್ಮಿಸುತ್ತಾರೆ. ಆದರೆ, ವೈಷ್ಣವರು ಶಿವದೇವಾಲಯದ ನಿರ್ಮಾಣಕ್ಕೆ ಅಸೂಯೆಪಟ್ಟು ದೇವಾಲಯದೊಳಗಿನ ಲಿಂಗವನ್ನು ಕಿತ್ತು ನದಿಯಲ್ಲಿ ಎಸೆದು ಆ ಸ್ಥಳದಲ್ಲಿ ವಿಷ್ಣುಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಇದರಿಂದ ರೊಚ್ಚಿಗೆದ್ದ ಶಿವಭಕ್ತರು ತಾವು ಅಲ್ಪಸಂಖ್ಯಾತರಾಗಿರುವುದರಿಂದ ವೈಷ್ಣವರನ್ನು ಎದುರಿಸುವ ಸ್ಥಿತಿಯಲ್ಲಿರಲಿಲ್ಲ. ಆಗ ಅವರು ವೀರನಾಚಯ್ಯ ಎಂಬವರ ಬಳಿ ವಿಷಯ ನಿವೇದಿಸುತ್ತಾರೆ.
ಶಿವಭಕ್ತನಾದ ವೀರನಾಚಯ್ಯ ಈ ಪ್ರಮಾದದಿಂದ ನೊಂದು ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ಆದವಾನಿಯಲ್ಲಿ ಬೀಡು ಬಿಟ್ಟಿದ್ದ ಲಿಂಗಮ್ಮನವರಿಗೂ ಈ ವಿಷಯ ತಿಳಿಸಿದ ಭಕ್ತರು ಲಿಂಗದ ಪುನರ್ ಪ್ರತಿಷ್ಠಾಪನೆಗೆ ಬಿನ್ನಹ ಮಾಡಿಕೊಳ್ಳುತ್ತಾರೆ. ವಿಷಯ ತಿಳಿದು ಕೆರಳಿ ಲಿಂಗಮ್ಮ, ಹೊನ್ನಯ್ಯ, ಪಾಂಡ್ಯ ನಾಯಕ, ಕಿನ್ನರಿ ಬ್ರಹ್ಮಯ್ಯ, ಬೀರಿದೇವ, ಬಿಚ್ಚಯ್ಯ, ಪಡಿಹಾರಿ ಸೋಮಯ್ಯ, ಮನ್ನಣೆಯ ಕಾಳೆವ್ವೆ, ಕೇತಮ್ಮ, ನಂದಿಮುಖ, ಹಂಪಯ್ಯ ಕಂದರ್ಪನಿ, ವಿಜಯ ಕಲ್ಯಾಣ, ಬಾಚಮ್ಮ, ದೇವಯ್ಯ, ಸೇನನಾಥ, ಚಿಕ್ಕರಗಿ ನಾಗಯ್ಯ, ಪೂವಲಬಾಡ ಬಚ ಅಡಿಗಲ್ಲಪ್ಪ ಮೊದಲಾದ ಶಿವಶರಣರೊಡಗೂಡಿ ಭರ್ಚಿ, ಈಟಿ, ಗುರಾಣಿ, ಖಡ್ಗ ಹಿಡಿದು ಯುದ್ಧ ಮಾಡುತ್ತಾರೆ ಈ ವೀರ ಮಹಿಳೆ, ವೈಷ್ಣವರನ್ನು ಸೋಲಿಸಿ, ನದಿಯಲ್ಲಿ ಎಸೆದಿದ್ದ ಲಿಂಗವನ್ನು ತಂದು ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆ ಮಾಡುತ್ತಾಳೆ.
ದಾನ ಧರ್ಮದಿಂದ “ದಾನಮ್ಮ”:
ಲಿಂಗಮ್ಮ ಪ್ರೌಢಾವಸ್ಥೆಗೆ ಬಂದಾಗ ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪಿಸಿದಾಗ ಉಮರಾಣಿ ಗ್ರಾಮದಿಂದ ಮನೆ ತೊರೆದು ಮಾರುವೇಶದಲ್ಲಿ ಹಲವರು ಊರುಗಳನ್ನು ಸಂಚರಿಸುತ್ತಾ ಸಾಗುತ್ತಾರೆ. ಈಕೆ ಮುಂದೆ ಕಲ್ಯಾಣ ಶರಣರ ಸಮ್ಮುಖದಲ್ಲಿ ಮದುವೆಯಾದರೂ ಇಡೀ ಜೀವನವನ್ನು ಜನ ಸೇವೆ ಮಾಡುತ್ತ ಸಂಚಾರದಲ್ಲಿಯೇ ಕಳೆದರು ಎನ್ನಲಾಗುತ್ತದೆ. ಈ ಕಾರಣಕ್ಕಾಗಿಯೇ ಗುಡ್ಡಾಪುರದಲ್ಲಿ ಇವರಿಗೆ ಭಕ್ತರು ಮೂರು ಹೊತ್ತು ಪೂಜೆ ಸಲ್ಲಿಸುವ ಪರಂಪರೆ ಅನುಸರಿಸುತ್ತಾರೆ. ಈ ಮೂರು ಹೊತ್ತು ಪೂಜೆ ದಾನಮ್ಮನವರ ಬಾಲ್ಯ ಯೌವ್ವನ ಮತ್ತು ಮುಪ್ಪಿನ ಕಾಲಮಾನವನ್ನು ಸಂಕೇತಿಸುತ್ತವೆ.
ಒಂದು ಸಲ ದಾನಮ್ಮನವರು ಶರಣ ಸಿದ್ಧರಾಮರೊಂದಿಗೆ ಮುನಿಸಿಕೊಂಡರು ಎನ್ನಲಾಗಿದೆ. ಸಿದ್ಧರಾಮರು ಕಾಯಕಕ್ಕೆ ಮಹತ್ವ ನೀಡಿದ ಶರಣರು. ದುಡಿಯದವರಿಗೆ ಅನ್ನವಿಲ್ಲ ಎಂಬ ಕಟ್ಟನಿಟ್ಟಿನ ತತ್ವದವರು. ಮುದುಕಿಯ ವೇಷದಲ್ಲಿ ಸಿದ್ಧರಾಮರ ಹತ್ತಿರ ಆಗಮಿಸುವ ದಾನಮ್ಮನವರು ಉಣ್ಣಲು ಕೇಳಿದಾಗ ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ ಎಂದು ನಿರಾಕರಿಸುತ್ತಾರೆ. ಆಗ ದಾನಮ್ಮನವು ವೃದ್ಧರಿಗೆ ಈ ನೀತಿ ಸಲ್ಲದು ಎಂದು ಸಿದ್ಧರಾಮರೊಂದಿಗೆ ಮುನಿಸಿಕೊಂಡು ಮುಂದೆ ಸಾಗುತ್ತಾರೆ ಎಂಬ ಪ್ರತೀತಿ ಇದೆ.
ದಾನಮ್ಮನವರು “ಆಕಾಶಗವಿʼ ಎಂಬ ಯೋಗ ಪರಿಣಿತೆಯಾಗಿದ್ದರೆಂಬ ಕಾರಣದಿಂದ ಅದೃಶ್ಯಳಾಗುತ್ತಿದ್ದರು ಎಂದು ಜನರು ಮೌಖಿಕವಾಗಿ ಹೇಳಿಕೊಳ್ಳುವುದಿದೆ. ಶರಣ ಸಿದ್ಧಾಂತ ಜೀರ್ಣಿಸಿಕೊಂಡ ಲಿಂಗಮ್ಮನವರು ಉಮರಾಣಿಯಿಂದ ಹೊರಟು ಬಸವಣ್ಣನವರ ಕಲ್ಯಾಣಕ್ಕೆ ಆಗಮಿಸುತ್ತಾರೆ. ಈ ದಾರಿಯ ಉದ್ದಕ್ಕೂ ಇವರು ಲಿಂಗಪೂಜೆ, ಲಿಂಗಧಾರಣೆಯ ಜೊತೆಗೆ ನಿರಂತರ ದಾನಧರ್ಮ ಕಾಯಕದಿಂದ ಜನ ಮೆಚ್ಚುಗೆ ಪಡೆದಿದ್ದರು. ಈ ದಾನ ಧರ್ಮದ ಉದಾರ ಕಾಯಕದಿಂದಲೇ ಲಿಂಗಮ್ಮ “ದಾನಮ್ಮ” ಎಂಬ ಹೆಸರಿನ ಮೂಲಕ ಖ್ಯಾತಿ ಪಡೆಯುತ್ತಾರೆ. ಜನರ ಕಷ್ಟ ಆಪತ್ತುಗಳಿಗೆ ಸ್ಪಂದಿಸುತ್ತ, ಅನೇಕ ಪವಾಡಗಳಿಂದ ಮೆರೆದ ಲಿಂಗಮ್ಮನವರು ಕಲ್ಯಾಣದಲ್ಲಿ ಶರಣ ಸಮೂಹದ ಮೆಚ್ಚುಗೆಗೆ ಪಾತ್ರಳಾಗುತ್ತಾರೆ. ಇವರ ಲಿಂಗಪೂಜೆ ಮತ್ತು ಜಂಗಮ ಧಾರಣೆಯಿಂದ ಬಸವಣ್ಣನವರೂ ಸಹಿತ ನಿಬ್ಬೆರಗಾಗುತ್ತಾರೆ.
ಅನುಭವ ಮಂಟಪಕ್ಕೆ ಬಸವಣ್ಣನವರು ಕರೆತಂದರು:
ಜಂಗಮ ಸಮೂದಿಂದ ಲಿಂಗಮ್ಮನ ಲೀಲೆಗಳನ್ನು ಕೇಳಿ ತಿಳಿದ ಬಸವಣ್ಣನವರು ಕಲ್ಯಾಣದ ಸಮೀಪ ಬೀಡುಬಿಟ್ಟು ಜಂಗಮರಾಧನೆಯಲ್ಲಿ ತೊಡಗಿದ ಲಿಂಗನಿಷ್ಠೆ ಲಿಂಗಮ್ಮನವರತ್ತ ಸ್ವತಃ ಬಂದು ದರ್ಶನ ಪಡೆಯುತ್ತಾರೆ. ತಮ್ಮ ಶರಣತ್ವದ ಅನುಷ್ಠಾನದಿಂದ ಆ ಮಟ್ಟದವರೆಗೆ ಲಿಂಗಮ್ಮ ಪ್ರಸಿದ್ಧಿ ಪಡೆದಿದ್ದರು. ಲಿಂಗಮ್ಮನವರೂ ಕೂಡ ಸಾಕ್ಷಾತ್ ಬಸವಣ್ಣನವರನ್ನು ಕಂಡು ಆನಂದಭರಿತಳಾಗುತ್ತಾರೆ. ಆಗ ಬಸವಣ್ಣನವರು “ನಡೆ ತಾಯಿ ಕಲ್ಯಾಣಕ್ಕೆ, ಪಲ್ಲಕ್ಕಿಯಲ್ಲಿ ಕುಳಿತುಕೋ” ಎಂದು ಗೌರವಿಸಲು ಮುಂದಾದಾಗ “ನಾನು ಪಲ್ಲಕ್ಕಿಯಲ್ಲಿ ಕೂಡಲಾಗದು. ಇದು ಶರಣರ ನಾಡು. ಶರಣರಬೀಡು. ನಾನು ಶರಣ ಸಂಸ್ಕೃತಿಯುಳ್ಳವಳು. ಅದಕ್ಕೆ ನಿಮ್ಮೊಂದಿಗೆ ನಡೆದುಕೊಂಡೆ ಬರುತ್ತೇನೆ” ಎಂದು ಕಲ್ಯಾಣಕ್ಕೆ ಅಲ್ಲಿಂದ ಅನುಭವದ ಮಂಟಪದವರೆಗೆ ಬಸವಣ್ಣನವರೊಡಗೂಡಿ ಬರುತ್ತಾರೆ.
ಬಸವಣ್ಣ-ಅಲ್ಲಮ್ಮರಿಂದ ಮರು ನಾಮಕರಣ:
ಬಸವಣ್ಣನವರೊಂದಿಗೆ ಅನುಭವಮಂಟಪಕ್ಕೆ ಅಗಮಿಸಿದ ಲಿಂಗಮ್ಮ ಅಲ್ಲಮ ಪ್ರಭುಗಳಿಗೆ, ಇಡೀ ಸರಣ ಸಮುದಾಯಕ್ಕೆ ವಂದಿಸುತ್ತಾರೆ. ಅಕ್ಕನಾಗಮ್ಮ ಅವರಿಗೆ ಉಚಿತ ಆಸನ ನೀಡಿ ಗೌರವಿಸುತ್ತಾರೆ. ಪ್ರಭುದೇವರ ಸಮ್ಮುಖದಲ್ಲಿ ಬಸವಣ್ಣನವರು ಲಿಂಗಮ್ಮನವರ ದಾನ ಧರ್ಮ, ಜಂಗಮಾರಾಧನೆ, ಲಿಂಗನಿಷ್ಠೆ, ಸಮಾಜಕಾರ್ಯವನ್ನು ಪರಿಚಯಿಸುತ್ತಾರೆ. ಅನಂತ ಲೀಲೆಗಳನ್ನು ಮಾಡಿ, ಕೊಡಗೈ ದಾನಿಯಾಗಿರುವುದರಿಂದ ಈ ತಾಯಿಯನ್ನು “ದಾನಮ್ಮ” ಹೆಸರಿನಿಂದ ಕರೆಯಬೇಕೆಂದಿದ್ದೇನೆ ಎಂದು ಬಸವಣ್ಣನವರು ತಮ್ಮಿಚ್ಛೆಯನ್ನು ಪ್ರಕಟಿಸಿದಾಗ, ಇಡೀ ಶರಣಬಳಗ ಒಪ್ಪಿಗೆ ಸೂಚಿಸಿ ಹರ್ಷೋದ್ಗಾರ ಪ್ರದರ್ಶಿಸುತ್ತಾರೆ. ಪ್ರಭುದೇವರೂ ಒಪ್ಪಿಗೆ ಸೂಚಿಸುತ್ತಾರೆ. ಲಿಂಗಮ್ಮನವರಿಗೆ ವರಹಸ್ತನೀಡಿ ಆಶೀರ್ವದಿಸಿದ ಅಲ್ಲಮಪ್ರಭುಗಳು ಇಂದಿನಿಂದ ನೀನು “ವರದಾಯಿನಿ”, ’ದಾನಮ್ಮ’ ಎಂಬ ಹೆಸರುಗಳಿಂದ ಕೀರ್ತಿವಂತಳಾಗು ಎಂದು ಹರಸುತ್ತಾರೆ. ಆನಂತರ ಪ್ರೀತಿಯಿಂದ ದಾನಮ್ಮಳಾದ ಈಕೆ ಶರಣಶ್ರೇಷ್ಠರಿಂದ ಮಾನ್ಯತೆ ಪಡೆದುಕೊಳ್ಳುತ್ತಾಳೆ.
ಗುಡ್ಡದ ಅವ್ವೆ “ಗುಡ್ಡವ್ವ”:
ದಾನಮ್ಮ, ವರದಾಯಿನಿ ಹೆಸರಿನಿಂದ ಗುರುತಿಸಿಕೊಂಡ ಲಿಂಗಮ್ಮನವರಿಗೆ ಕನ್ನಡಿಗರು “ಗುಡ್ಡವ್ವ” ಎಂದೂ ಕರೆದಿದ್ದಾರೆ. ಗುಡ್ಡವ್ವ ಎಂಬುದು ಗುಡ್ಡ ಮತ್ತು ಅವ್ವ ಎಂಬ ಎರಡು ಸಂಯುಕ್ತ ಪದಗಳಿಂದ ನಿರ್ಮಾಣಗೊಂಡಿದೆ. ’ಗುಡ್ಡ’ ಎಂದರೆ, ಪರ್ವತ, ಬೆಟ್ಟ ಎಂಬ ಅರ್ಥಗಳ ಜೊತೆಗೆ ಶಿಷ್ಯ ಎಂಬ ಅರ್ಥವೂ ಇದೆ. ಪರ್ವತ, ಗುಡ್ಡ ಎಂಬ ಅರ್ಥದಲ್ಲಿ ಗುಡ್ಡವ್ವ ಪದದ ಅರ್ಥವನ್ನು ಗಮನಿಸಲಾಗಿ, ಗುಡ್ಡದಲ್ಲಿ ನೆಲೆಸಿದ ಅವ್ವನೇ ’ಗುಡ್ಡವ್ವ’ ಎಂದಾಗುತ್ತದೆ. ದಾನಮ್ಮನವರು ತನ್ನ ಮುಂದಿನ ದಿನಗಳನ್ನು ಗುಡ್ಡದಲ್ಲಿಯೆ ಕಳೆಯುವುದರಿಂದ ಬಡವರ ಪಾಲಿಗೆ ಮಾತೃ ಹೃದಯದ ಅವ್ವಾ ಆಗಿದ್ದರಿಂದ ಇವರು ಗುಡ್ಡವ್ವೆ ಆಗಿ ಪ್ರಸಿದ್ಧಿ ಹೊಂದಿದರು. ಆ ಗುಡ್ಡ ಮುಂದೆ ಊರಾಗಿ ’ಗುಡ್ಡಾಪುರ’ ವಾಗಿ ಬೆಳೆಯುತ್ತದೆ. ವಿಜಾಪೂರದ ವಾಯುವ್ಯ ದಿಕ್ಕಿಗೆ 45 ಕಿಲೋ ಮೀಟರ್ ಅಂತರದಲ್ಲಿ ದಕ್ಷಿಣೋತ್ತರ ಒಂದು ಗುಡ್ಡದ ಸಾಲು ಎದುರಾಗುತ್ತದೆ. ಈ ಸಾಲಿನ ದಕ್ಷಿಣ ತುದಿಯಲ್ಲಿ ಇರುವ ಗ್ರಾಮವೇ ’ಗುಡ್ಡಾಪುರ’ ದಾನಮ್ಮ ಶರಣೆ ಗುಡ್ಡವ್ವ ನೆಲೆನಿಂತ ಈ ಪವಿತ್ರ ಸ್ಥಳಕ್ಕೆ ಕಳೆದ ಅನೇಕ ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ಉಭಯ ಪ್ರಾಂತ್ಯಗಳಿಂದ ಎಲ್ಲ ಸಮೂದಾಯದ ಅಸಂಖ್ಯಾತ ಯಾತ್ರಿಕರು ವರ್ಷದೂದ್ದಕ್ಕೂ ಆಗಮಿಸುತ್ತಾರೆ.
ಧರ್ಮ ಪ್ರಸಾರ ಕಾರ್ಯದಲ್ಲಿ ವೀರಭಕ್ತಿ ತಾಳಿ, ಶಿವ ಸರ್ವೋತ್ತಮ ತತ್ವ, ಏಕದೇವೋಪಾಸನೆಗೆ ಖಡ್ಗ ಹಿಡಿದು ಹೋರಾಡಿದ ಈ ವೀರ ಮಹಿಳೆ ಶೈವ-ವೈಷ್ಣವರಲ್ಲಿ ಉಪಭೇದಗಳಿದ್ದಾಗ ಶಿವತತ್ವವನ್ನು ಎತ್ತಿ ಹಿಡಿದು, ಬ್ರಹ್ಮೇಶ್ವರ ಲಿಂಗವನ್ನು ಆಲಂಪುರದಲ್ಲಿ ಪ್ರತಿಷ್ಠಾಪಿಸಿದ ಕತೆ ಶಿವತತ್ವ ಚಿಂತಾಮಣಿಯಲ್ಲಿಯೂ ಕೂಡ ಪ್ರಸ್ತಾಪವಾಗಿದೆ.
ದಾನಮ್ಮನವರ ಮದುವೆ :
ಗುಡ್ಡವ್ವೆಯವರು ಮೊದಲಿಗೆ ಸೊಲ್ಲಾಪುರದಲ್ಲಿದ್ದರು. ಅಲ್ಲಿ ಇವರಿಗೂ ಮತ್ತು ಶಿವಶರಣ ಸಿದ್ಧರಾಮೇಶ್ವರರಿಗೂ ಮಾತಿನಲ್ಲಿ ಭೇದ ಉಂಟಾಗಿ ಗುಡ್ಡಾಪುರಕ್ಕೆ ಬಂತದು ನೆಲೆಸಿದರೆಂದು ಸ್ಥಳೀಯ ಐತಿಹ್ಯವಿದೆ. ಮದುವೆಯನ್ನು ತೊರೆದು ಕಲ್ಯಾಣಕ್ಕೆ ಬಂದ ದಾನಮ್ಮನವರಿಗೆ ಶರಣ ಬಳಗವೆಲ್ಲ ಸೇರಿಕೊಂಡು “ಸೋಮಲಿಂಗ” ಎಂಬ ವರನೊಂದಿಗೆ “ಸಂಕತೀರ್ಥ” ದಲ್ಲಿ ಮದುವೆ ಮಾಡುತ್ತಾರೆ. ದಾನಮ್ಮನವರ ಮದುವೆಯ ಜೊತೆಗೆ 555 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯವೂ ನೆರವೇರಿರುವುದು ವಿಶೇಷ. ಇದು ಭಾರತದಲ್ಲಿ ನಡೆದ ಮೊಟ್ಟ ಮೊದಲನೇಯ ಸಾಮೂಹಿಕ ವಿವಾಹ ಮಹೋತ್ಸವವೆಂದರೂ ತಪ್ಪಾಗಲಿಕ್ಕಿಲ್ಲ. ಯೇಸೂಬ್ ಎಂಬ ದೊರೆ ಮದುವೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿರುತ್ತಾನೆ.
ಹೀಗೆ ದಾನಮ್ಮನವರು ಅಕ್ಕಸಾಲಿಗ ಮನೆತನದಲ್ಲಿ ಜನಿಸಿ, ಗುರು ಶಾಂತವೀರರಿಂದ ದೀಕ್ಷೆ ಪಡೆದು ಆ ಮೂಲಕ ತನ್ನ ಜನಪರ ಕಾರ್ಯಗಳಿಂದಾಗಿ ಜನತೆಯ ಭಕ್ತಿ ಭಾವಗಳಿಂದಾಗಿ ವಿಭಿನ್ನ ಹೆಸರುಗಳ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮನೆ ಮಾತಾಗಿದ್ದಾರೆ. ಲಿಂಗಭೇದವಿಲ್ಲದೆ ಕನ್ನಡಿಗರಿಗೆ ಅವರು ತೋರಿದ ಮಾನವೀಯತೆ ಅನನ್ಯ. ಅವರು ಬದುಕಿದ್ದಾಲೇ ಅವರ ಸ್ಮಾರಕಗಳು ನಿರ್ಮಾಣಗೊಂಡಿರುವುದು, ಸಮಕಾಲೀನ ಅರಸು ಮಾಂಡಲಿಕರ ಮೇಲೆ ಪ್ರಭಾವ ಬೀರಿರುವುದು ಶರಣೆ ಮಹಾದೇವಿಯಕ್ಕನ ಸಮ ಸಮನಾಗಿ ಬದುಕಿದವರು ಎಂಬುದು ವೇದ್ಯವಾಗುತ್ತದೆ. ಇವರ ಶೌರ್ಯ, ಭಿನ್ನ ವ್ಯಕ್ತಿತ್ವವನ್ನು ನಿದರ್ಶಿಸುತ್ತದೆ. ಬಸವಾದಿ ಶಿವಶರಣರ ಕಾಲದಲ್ಲಿ ಜನಸಾಮನ್ಯರೊಂದಿಗೆ ಬದುಕಿ ಬಾಳಿದ ಗುಡ್ಡವ್ವ ಇಂದು ಗುಡ್ಡಾಪುರದ ದಾನಮ್ಮಳಾಗಿ ಜನರ ಮನದಲ್ಲಿ ಉಳಿದುಕೊಂಡಿದ್ದಾರೆ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್ ಸಂ. 97407 38330
ಪುಷ್ಪಾ ಶರಣಿಯರೆ,, ಮಾಹಿತಿಪೂರ್ಣ ಉತ್ತಮ ಲೇಖನವನ್ನು ಓದುಗರಿಗೆ ಲಭ್ಯ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು
ಧನ್ಯವಾದಗಳು ಶರಣ ಸಹೋದರರೇ 🙏🏼🙏🏼