
ಕಣ್ಣು ನೋಡಲು, ಕಿವಿ ಕೇಳಲು, ಮೂಗು ವಾಸಿಸಲು, ಬಾಯಿ ರುಚಿ ನೋಡಲು ಮತ್ತು ಚರ್ಮ ಸ್ಪರ್ಶಿಸಲು-ಹೀಗೆ ಮನುಷ್ಯನ ಪಂಚೇಂದ್ರಿಯಗಳು, ತಮಗೆ ಅವಕಾಶವಿರುವ ಮಾರ್ಗಗಳ ಮೂಲಕ ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸದಾ ಪಹಪಿಸುತ್ತಿರುತ್ತವೆ ಮತ್ತು ಹವಣಿಸುತ್ತಿರುತ್ತವೆ. ಮನಸ್ಸೆಂಬ ಮಹಾನಿಯಂತ್ರಕಶಕ್ತಿಯು ಪಂಚೇಂದ್ರಿಯಗಳ ಮೂಲಕವೇ ತನ್ನ ಸಕಾರಾತ್ಮಕ ಮತ್ತು ನಕಾರಾತ್ಮಕ, ಎರಡೂ ಬಗೆಯ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುತ್ತದೆ. ಮನುಷ್ಯನ ಭಾವಕೋಶದೊಂದಿಗೆ ಬಿಡಿಸಿಕೊಳ್ಳಲಾರದಂತೆ ಬೆಸೆದುಕೊಂಡಿರುವ ಈ ಮನಸ್ಸು ಮತ್ತು ಪಂಚೇಂದ್ರಿಯಗಳ ಬೇಡಿಕೆಗಳನ್ನು ನಿರಾಕರಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಕಾರಣಕ್ಕಾಗಿಯೇ ಮನುಷ್ಯ ಅವುಗಳ ಬೇಡಿಕೆಗಳನ್ನು ಈಡೇರಿಸಲು ಒಳ್ಳೆಯ ಕೆಲಸಗಳಂತೆಯೇ ಕೆಟ್ಟ ಕೆಲಸಗಳನ್ನೂ ಮಾಡುತ್ತಾನೆ. ಆದರೆ, ಕೆಟ್ಟ ಕೆಲಸಗಳು ಸಮಾಜದಲ್ಲಿ ಅಪರಾಧಗಳೆಂದು ಪರಿಗಣಿತವಾಗುವುದರಿಂದ ಆತ ಅವುಗಳನ್ನು ಕದ್ದು-ಮುಚ್ಚಿ ಮಾಡುತ್ತಾನೆ. ಹಾಗೆ ಮಾಡಿ ಸಿಕ್ಕಿಹಾಕಿಕೊಂಡಾಗ ಮಾತ್ರ ಅವನು ಇನ್ನಿಲ್ಲದ ಅವಮಾನ ಅನುಭವಿಸಬೇಕಾಗುತ್ತದೆ. ಇದೆಲ್ಲದರ ಅರಿವಿದ್ದೂ ಕೆಲವರು ವಿವಿಧ ಮುಖವಾಡಗಳನ್ನು ಹಾಕಿಕೊಂಡು, ನಾವು ಆಸೆಗಳನ್ನೆಲ್ಲ ಗೆದ್ದಿದ್ದೇವೆ, ಪ್ರಾಮಾಣಿಕರಾಗಿದ್ದೇವೆ ಎಂದು ಪೋಜು ಕೊಡುತ್ತ, ಒಳಗೊಳಗೇ ಎಲ್ಲವನ್ನೂ ಯಥೇಚ್ಛವಾಗಿ ‘ಅನುಭೋಗಿಸುವ’ ದಂಧೆ ನಡೆಸುತ್ತಾರೆ. ಇದು ನಾಚಿಕೆಗೇಡಿನ ಸಂಗತಿ. ಶರಣರು ಇಂಥ ಅನೈತಿಕ ವ್ಯಕ್ತಿಗಳ ಮತ್ತು ಕೃತ್ಯಗಳ ಕಡುವಿರೋಧಿಗಳಾಗಿದ್ದರು.
ಮನುಷ್ಯನ ಮರ್ಕಟ ಮನಸ್ಸಿನ ಎಡಬಿಡಂಗಿತನವನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಿದ ಶರಣರು, ಅದನ್ನು ನಿಯಂತ್ರಿಸುವುದು ಅಸಾಧ್ಯವೆಂಬ ಸತ್ಯವನ್ನು ಖಚಿತವಾಗಿ ಅರಿತಿದ್ದರು. ಅದಕ್ಕೆಂದೇ ಅದನ್ನು ಹತೋಟಿಯಲ್ಲಿಡುವುದರ ಬದಲಾಗಿ, ಮನಸ್ಸು ಮತ್ತು ಇಂದ್ರಿಯಗಳ ಆಸೆ-ಆಕಾಂಕ್ಷೆಗಳನ್ನು ನೈತಿಕ ನೆಲೆಯಲ್ಲಿ ಪೂರೈಸಿಕೊಳ್ಳುವ ಅತ್ಯಂತ ಸರಳ ಮತ್ತು ನ್ಯಾಯಯುತ ಮಾರ್ಗಗಳನ್ನು ಅವರು ತೋರಿಸಿದರು. ಶರಣರ ಇಂಥ ಚಿಂತನೆಗಳು ಸಾಮಾಜಿಕ ಆರೋಗ್ಯ ಕಾಪಾಡುವ ಮೌಲ್ಯಗಳಾಗಿದ್ದವಷ್ಟೇ ಅಲ್ಲ, ಅವು ಮನೋವೈಜ್ಞಾನಿಕ ಸತ್ಯದ ಪ್ರತಿಪಾದನೆಗಳೂ ಆಗಿದ್ದವು. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ ಬಳಲಿ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ಸಿದ್ಧರಾಮೇಶ್ವರರ ಈ ವಚನಕ್ಕೆ ವಿವರಣೆ-ವ್ಯಾಖ್ಯಾನ ಬೇಕಿಲ್ಲ. ಮನುಷ್ಯನ ಮನಸ್ಸು ಹೆಣ್ಣು, ಮಣ್ಣು, ಹೊನ್ನುಗಳನ್ನು ಅಪೇಕ್ಷಿಸಿಸುವುದು ಸಹಜ. ಇಂಥ ಅದರ ಆಸೆಗಳನ್ನು ನಿಯಂತ್ರಿಸದೆ ಮತ್ತು ತಳ್ಳಿಹಾಕದೆ, ಅವುಗಳನ್ನು ನೈತಿಕ ನಡೆಗಳ ಮೂಲಕ ಪೂರೈಸಿಕೊಳ್ಳುವ ಮಹಾಮಾರ್ಗವನ್ನು ಅತ್ಯಂತ ಸರಳವಾಗಿ ತೋರಿಸುತ್ತದೆ ಪ್ರಸ್ತುತ ವಚನ. ಇದು ಮನಸ್ಸಿನ ಆಸೆಗಳನ್ನು ಪೂರೈಸಿಕೊಳ್ಳುವ ಕ್ರಮವಾದರೆ, ಇನ್ನೂ ಮುಂದುವರೆದು ಅದರ ಮೂಲಕ್ಕೇ ಹೋಗುವ ಶರಣರು, ಮನಸ್ಸು ಮತ್ತು ಶರೀರದ ವಾಂಛೆಗಳನ್ನು ಮೀರಲು ಸಾಧ್ಯವಾಗದ ಕಾರಣ, ಅವುಗಳನ್ನು ನಿರಾಕರಿಸಲೇಬಾರದೆಂಬ ಬಹುಮುಖ್ಯ ಸೂಚನೆಯನ್ನೂ ಕೊಡುತ್ತಾರೆ. ಮನುಷ್ಯನದು ‘ಪ್ರಸಾದಕಾಯ’ವಾಗಿರುವುದರಿಂದ ಅದರ ಆಸೆ-ಅಪೇಕ್ಷೆಗಳನ್ನು ನಿರಾಕರಿಸಬಾರದೆಂಬುದೇ ಅವರ ಅಭಿಮತ.
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ.
ಕೂಡಲಸಂಗಮದೇವರನೊಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು.
ಬೇಕೆಂಬುದೇ ಕಾಯಗುಣವಾಗಿರುವಾಗ, ಬೇಡವೆಂಬ ವೈರಾಗ್ಯಕ್ಕೆ ಅರ್ಥವೇ ಇಲ್ಲ. ಇಂಥ ವೈರಾಗ್ಯವು ಹುಸಿ ಅಥವಾ ತೋರಿಕೆಯದಾದರೆ ಅದು ಒಳಗೊಳಗೇ ನಡೆಸುವ ಕಳ್ಳಾಟ ಬಹಿರಂಗಕ್ಕೆ ಬೀಳದೇ ಇರಲಾರದು. ಅದಕ್ಕಾಗಿ ಈ ಎಲ್ಲ ನಾಟಕ ಬಿಟ್ಟು, ಮನಸ್ಸು ಮತ್ತು ದೇಹ ಅಪೇಕ್ಷಿಸುವುದನ್ನೆಲ್ಲ ಪಡೆಯಲೇಬೇಕು ಎನ್ನುತ್ತಾರೆ ಬಸವಣ್ಣನವರು. ಆದರೆ ಇದು ಅಂದಾದುಂದಿಯಾಗಿ ಮಾತ್ರ ಅಲ್ಲ. ಇದನ್ನು ಸ್ಪಷ್ಟಪಡಿಸಲೆಂದೇ, ‘ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ’ ಎಂದು ಬಹಳ ಮುಖ್ಯ ನಿರ್ಬಂಧ ಹಾಕುತ್ತಾರೆ ಅವರು. ಸೂಕ್ತಾಸೂಕ್ತತೆಗಳನ್ನು ನಿಷ್ಕರ್ಷಿಸಿ ನಿರ್ಣಯಿಸುವ ಸಾಮರ್ಥ್ಯವಿರುವ ಲಿಂಗಕ್ಕೆ (ಲಿಂಗ-ಪ್ರಾಣಲಿಂಗ, ಅರಿವು, ಆತ್ಮಶಕ್ತಿ ಎಂಬ ಅರ್ಥದ್ದು) ತಾನು ಭೋಗಿಸುವ ವಸ್ತು-ವಿಷಯಗಳ ಮಾಹಿತಿ ಕೊಟ್ಟು, ಅದು ಒಪ್ಪಿದ ಮೇಲೆಯೇ ಸ್ವೀಕರಿಸಬೇಕೆಂಬ ಕಟ್ಟುಪಾಡು ಇದು. ಹೀಗೆ ಲಿಂಗ ಒಪ್ಪುವುದೇ ಸಮಾಜ ಒಪ್ಪುವ ಮೌಲ್ಯವಾಗಿರುತ್ತದೆ ಮತ್ತು ನೀತಿಯಾಗಿರುತ್ತದೆ. ಈ ಕ್ರಮ ಅನುಸರಿಸಿ ಭೋಗಿಸುವುದೇ ‘ಪ್ರಸಾದ ಕಾಯ’ದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನ್ಯಾಯಯುತ ಮಾರ್ಗವೆಂಬುದು ಅವರ ಪ್ರತಿಪಾದನೆ.
ಇನ್ನೂ ಮುಂದೆ ಹೋಗುವ ಬಸವಣ್ಣನವರು, ಯಾಕೆ ಹೀಗೆ ಮಾಡಬೇಕೆಂಬುದರ ಕಾರಣಗಳನ್ನೂ ತಿಳಿಸುತ್ತ, ‘ಇಂದ್ರಿಯ ನಿಗ್ರಹ ಮಾಡಿದಡೆ ಹೊಂದುವುವು ದೋಷಂಗಳು, ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು’ ಎಂದು ವೈಜ್ಞಾನಿಕ ಸತ್ಯದ ಅನಾವರಣ ಮಾಡುತ್ತಾರೆ. ನಿಗ್ರಹಿತ ಇಂದ್ರಿಯಗಳಿಗೆ, ಆ ನಿಗ್ರಹವೇ ಇನ್ನೂ ಹೆಚ್ಚಿನ ಒತ್ತಡವಾಗಿ, ಅವು ಇನ್ನೂ ತೀವ್ರವಾದ ಪ್ರತಿರೋಧ ತೋರಿಸುತ್ತವೆಯೆಂಬ ಮನೋದೈಹಿಕ ವ್ಯಾಪಾರದ ಸ್ಪಷ್ಟನೆ ಇಲ್ಲಿರುವುದು ಗಮನಾರ್ಹ. ಪಂಚೇಂದ್ರಿಯಗಳ ಮತ್ತು ಮನಸ್ಸಿನ ಆಸೆ-ಆಕಾಂಕ್ಷೆಗಳನ್ನು ನಿಗ್ರಹಿಸದೆ, ನೈತಿಕ ಮಾರ್ಗದಲ್ಲಿ ಬಯಕೆಗಳನ್ನು ಪೂರೈಸಿಕೊಂಡು ಸುಖಿಸುವ ರಾಜಮಾರ್ಗ ಇದು.
ಇಂಥ ರಾಜಮಾರ್ಗವಿದ್ದೂ, ಅಪಮಾರ್ಗದಲ್ಲಿ ಹರಗ್ಯಾಡುವ ಕಳ್ಳ ಜನರ ಸಂಖ್ಯೆ ಕಡಿಮೆಯೇನಿಲ್ಲ. ಇದರಲ್ಲಿ ಸಾಮಾನ್ಯರಿಗಿಂತ ಅಸಾಮಾನ್ಯರ ಹಾಗೂ ‘ಕೆಲವು’ ಮಠಾಧಿಪತಿಗಳ ಸಂಖ್ಯೆಯೇ ಹೆಚ್ಚಾಗಿರುವುದು ವರ್ತಮಾನದ ವಾಸ್ತವ ವಿದ್ಯಮಾನ. ಬೆಕ್ಕು ಮಠ ಅಥವಾ ಎತ್ತರದ ಸ್ಥಾನದಲ್ಲಿದ್ದ ಮಾತ್ರಕ್ಕೆ ಇಲಿಯನ್ನು ಕಂಡರೆ ಪುಟನೆಗೆಯದೇ ಇದ್ದೀತೆ? ಮನುಷ್ಯ ಕಾವಿ, ಖಾದಿ, ಖಾಕಿ ಅಥವಾ ಕೌಪೀನ ಹಾಕಿಕೊಂಡರೆ ಆತನ ಮನೋದೈಹಿಕ ವಾಂಛೆಗಳು ಬಂಧಿತವಾಗಲು ಅಥವಾ ಮರೆಯಾಗಲು ಸಾಧ್ಯವೆ? ಅವು ತಮ್ಮ ಕರಾಮತ್ತನ್ನು ತೋರಿಸದೆ ಇದ್ದಾವೆಯೆ? ಹೀಗಿರುವಾಗ ಸನ್ಯಾಸ, ವಿರಕ್ತಿ ಮತ್ತು ದೊಡ್ಡ ದೊಡ್ಡ ಮಾತು ಎಲ್ಲವೂ ಬೂಟಾಟಿಕೆಗಳಾಗಿಯೇ ಕಾಣುವುದು ಸಹಜ. ಈ ನಾಟಕ ಬೇಕೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಶರಣ ಸಂಸ್ಕೃತಿಯಲ್ಲಿ ವಿವಾಹ ಮತ್ತು ಸಾಂಸಾರಿಕ ಬದುಕಿಗೇ ಪ್ರಥಮ ಪ್ರಾಶಸ್ತö್ಯವಿರುವಾಗ, ಇಂಥ ಸನ್ಯಾಸತ್ವ ಯಾಕೆ ಬೇಕು? ಅದನ್ನು ಆಚರಿಸಲು ಇಂಥವರಿಗೆ ಹೇಳಿದರ್ಯಾರು? ಇವೆಲ್ಲವೂ ಉತ್ತರವಿರುವ ಪ್ರಶ್ನೆಗಳೇ. ಆದರೆ ಉತ್ತರ ಕೊಡುವವರು ಯಾರು? ಮನುಷ್ಯನ ಈ ಎಲ್ಲ ಎಡಬಿಡಂಗಿತನಗಳನ್ನೂ ಶರಣರು ಸಾದ್ಯಂತವಾಗಿ ಅರಿತಿದ್ದರು. ಅಂತೆಯೇ, ಪರಿಶುದ್ಧ ವಿರಾಗಿ ಅಲ್ಲಮಪ್ರಭು ಇಂಥ ತಲೆಹಿಡುಕ ಭಕ್ತ ಮತ್ತು ಜಂಗಮರನ್ನು ಕುರಿತು ಇಡೀ ಜಗತ್ತೇ ಒಪ್ಪುವಂಥ ಅಂತಿಮ ಸತ್ಯದ ಮಾತುಗಳನ್ನು ಹೇಳುತ್ತಾರೆ ತಮ್ಮ ಒಂದು ವಚನದಲ್ಲಿ.
ನಿಂದಡೆ, ಹೊನ್ನು ಹೆಣ್ಣು ಮಣ್ಣು ಹಿಡಿದು, ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದಡೆ, ಹೊನ್ನು, ಹೆಣ್ಣು, ಮಣ್ಣು ಬಿಟ್ಟು, ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ?
ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯು ಮನುಷ್ಯನ ಎಲ್ಲ ಆಸೆ-ಆಕಾಂಕ್ಷೆಗಳ ಪೂರೈಕೆಗೂ ಅತ್ಯಂತ ಸರಳ, ಶುದ್ಧ, ತಾರ್ಕಿಕ ಮತ್ತು ನ್ಯಾಯಯುತ ಮಾರ್ಗಗಳನ್ನು ನಿರ್ಮಿಸಿ ಕೊಟ್ಟಿದೆ. ಆ ದಾರಿಯಲ್ಲಿ ನಡೆದು ಸುಖದಿಂದ ಬದುಕುವುದನ್ನು ಬಿಟ್ಟು, ಇಲ್ಲದ ನಾಟಕ ಮಾಡುತ್ತ, ಸಲ್ಲದ ನಡವಳಿಕೆ ತೋರುತ್ತ, ಅಲ್ಲೂ ಬೇಕು, ಇಲ್ಲೂ ಬೇಕು ಎಂದು ಎಲ್ಲೆಲ್ಲೂ ಸಲ್ಲಲು ಹೊರಟು ಎಲ್ಲ ಕಡೆಗಳಿಂದಲೂ ಮುಖಕ್ಕೆ ಮಸಿ ಬಳಿಸಿಕೊಳ್ಳಬೇಕೆ? ಇಂಥ ಉಭಯಭ್ರಷ್ಟರಿಗೆ ಏನೆನ್ನಬೇಕು? ಎಂಬುದೇ ಪ್ರಭುವಿನ ಮುಖ್ಯ ಪ್ರಶ್ನೆ. ಅಂಥ ಲಜ್ಜೆಗೆಟ್ಟವರನ್ನು ಕರೆಯಲು ಸೂಕ್ತವಾದ ಹೆಸರು ಅಲ್ಲಮಪ್ರಭುವಿಗೂ ಸಿಗಲಿಲ್ಲವೇನೋ ಅನ್ನಿಸುತ್ತದೆ. ಅಂಥವರಿಗೆ ಒಂದು ಸೂಕ್ತ ಹೊಸ ಹೆಸರನ್ನು ಯಾರಾದರೂ ಈಗಲೂ ಸೂಚಿಸಬಹುದು; ಇದ್ದರೆ ಅಥವಾ ಹೊಳೆದರೆ!
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು, ಆಕಾಶವಾಣಿ, ಬೆಂಗಳೂರು (ನಿ)
#303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
Hennigaagi sattavru koti koti, Mannigaagi sattavaru koti koti, Honnigaagi sattavaru koti koti, ninagaagi sattavara naanyaru kane….. This amplifies the fact that all those who live in the world of lust can not simply forego enjoying them. That is the worldly life in which everybody like to enjoy them but in varying degrees. What matters here is the perspectives people hold. Social standards vary from time to time and place to place. The worldly behaviour of man is dependent upon so many other variables.