ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ / ಶ್ರೀಮತಿ. ಅನುಪಮಾ ಪಾಟೀಲ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ.
ಎನ್ನ ಬಿಡು, ತನ್ನ ಬಿಡು ಎಂಬುದು ಮನೊವಿಕಾರ.
ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುಗೆ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-14 / ವಚನ ಸಂಖ್ಯೆ-36)

ಮಾನವನು ತನ್ನ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವದರೊಂದಿಗೆ ಬಹಿರಂಗದ ದುಃಖವನ್ನು ದೂರ ಮಾಡುತ್ತದೆ, ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಸುತ್ತಿರಬೇಕು.

ದೇಹ ಮತ್ತು ಮನಸ್ಸು ಎರಡು ಅತಿ ಮುಖ್ಯ ಅಂಗಗಳು. ದೇಹ ಸ್ಥೂಲ ಶರೀರವಾದರೆ ಮನಸ್ಸು ಸೂಕ್ಷ್ಮ ಶರೀರ ಅಂತ ಗುರುತಿಸಲಾಗಿದೆ. ಎರಡನ್ನೂ ಸಮತೋಲದಲ್ಲಿ ಇರಿಸಿ ಜಿವನ ನಡೆಸಿದರೆ ಅದು ನಮ್ಮನ್ನು ಯೋಗ ಮಾರ್ಗಕ್ಕೆ ಕರೆದೊಯ್ಯುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಅವನ ಪಂಚೆಂದ್ರಿಯಗಳು ಮನಸ್ಸು, ಬುದ್ಧಿ ಮತ್ತು ಹೃದಯದ ಸದ್ಭಾವನೆಗಳನ್ನು ಅವಲಂಬಿಸಿದೆ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳ ಉರುಳಿಗೆ ಸಿಲುಕಿದ ಮಾನವ ಮೇಲೇಳುವದು ಕಷ್ಟ. ಅದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ದೇಹ ಮತ್ತು ಮನಸ್ಸುಗಳು ಕರಣಂಗಳ ಮೂಲಕ ವಿಷಯ ವಸ್ತುಗಳನ್ನು ಗ್ರಹಿಸಿ ಪ್ರತಿ ಕ್ಷಣವೂ ವಿಕಾರಗೊಳ್ಳುತ್ತಿರುತ್ತವೆ. ಅದನ್ನು ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ:
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ ಎಂದು ಮನಸ್ಸನ್ನು ಮೊಲಕ್ಕೆ ಹೋಲಿಸ್ತಾರೆ. ಮನಸ್ಸು ಮೊಲದಂತೆ ಸುಂದರ, ಸೂಕ್ಷ್ಮ ಹಾಗೆಯೇ ಚಂಚಲವೂ ಕೂಡ. ನಮ್ಮ ಮನಸ್ಸನ್ನು ನಮ್ಮೊಳಗೆ ಇರುವ ಕಾಯ ವಿಕಾರ ಎಂಬ ಐದು ನಾಯಿಗಳು ಮತ್ತು ಮನೋವಿಕಾರ ಎಂಬ ನಾಲ್ಕು ನಾಯಿಗಳು ನಮ್ಮನ್ನು ಬಿಟ್ಟೂ ಬಿಡದೆ ಅನವರತವೂ ಬೆನ್ನು ಹತ್ತಿರುತ್ತವೆ.

ಪಂಚ ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಕಾಯವಿಕಾರಗಳಾದರೆ, ಅಂತಃಕರಣ ಚತುಷ್ಟಯಗಳಾದ ಚಿತ್ತ, ಬುದ್ಧಿ, ಮನ ಮತ್ತು ಅಹಂಕಾರಗಳು ಮನೋವಿಕಾರಗಳಾಗಿವೆ. ಈ ಒಂಭತ್ತು ಇಂದ್ರಿಯಗಳು ಎಲ್ಲರನ್ನೂ ಕಾಡುತ್ತವೆ. ಕಣ್ಣಿಗೆ ಸುಂದರವಾದ ವಸ್ತು ಕಂಡಾಗ, ಕಿವಿಗಳಿಗೆ ಇಂಪಾದ ಸಂಗೀತ ಕೇಳಿದಾಗ, ಮೂಗಿಗೆ ಸುವಾಸನೆ ಆವರಿಸಿದಾಗ, ನಾಲಿಗೆಗೆ ರುಚಿಕರವಾದ ಪದಾರ್ಥ ಸಿಕ್ಕಾಗ, ಚರ್ಮಕ್ಕೆ ಸುಖಕರವಾದ ಸ್ಪರ್ಷ ಸಿಕ್ಕಾಗ ಇದರೊಂದಿಗೆ ಹೆಣ್ಣು, ಹೊನ್ನು, ಮಣ್ಣು, ಕೀರ್ತಿಗಳಿಗಾಗಿ ಮನಸ್ಸು ವಿಕಾರಕ್ಕೆ ಒಳಗಾಗಿ ನಿಯಂತ್ರಣಕ್ಕೆ ಬಾರದು. ಅದನ್ನು ನಿಯಂತ್ರಿಸುತ್ತೇವೆ ಅನ್ನೊದು ಭ್ರಮೆ ಅಷ್ಟೆ.

ಎನ್ನ ಬಿಡು ತನ್ನ ಬಿಡು ಎಂಬುದು ಕಾಯವಿಕಾರ, ಎನ್ನ ಬಿಡು ತನ್ನ ಬಿಡು ಎಂಬುದು ಮನೊವಿಕಾರ:
ಇಂತಹ ಕರಣೇಂದ್ರಿಗಳ ಸೆಳೆತವನ್ನು ತಪ್ಪಿಸುವುದು ಸುಲಭವಲ್ಲ. ವಿಷಯ ವಾಸನೆಗಳಿಂದ ದೂರವಿರುವದೂ ಸಾಧ್ಯವಿಲ್ಲ. ಬೇಟೆಗಾರನ ಒಂದು ಸಾದೃಶ್ಯವನ್ನು ಇಲ್ಲಿ ಚಿತ್ರವತ್ತಾಗಿ ಉಪಯೋಗಿಸಿಕೊಂಡಿದ್ದಾರೆ. ಒಂದು ಮೊಲಕ್ಕೆ ಒಂಭತ್ತು ನಾಯಿಗಳನ್ನು ಛೂ ಬಿಟ್ಟಂತೆ, ಒಂದೊಂದು ನಾಯಿಯೂ ನನ್ನನ್ನು ಬಿಡು, ತನ್ನನ್ನು ಬಿಡು ಎಂದು ಉತ್ಸಾಹದಿಂದ ಹಾತೊರೆಯುತ್ತದೆ ಎಂಬ ಚಿತ್ರ ಅರ್ಥವತ್ತಾಗಿದೆ. ನಿಯಂತ್ರಿಸಲು ಮನಸ್ಸಿನ ಗಮನವನ್ನ ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಬೇಕು. ಮನಸ್ಸಿಗೆ ನಿರಂತರ ಸಂಸ್ಕಾರ ಕೊಡುತ್ತಿರಬೇಕು. ನಡೆ-ನುಡಿಗಳು ಸದಾ ಜಾಗೃತೆಯಿಂದ ಇದ್ದು ಮನಸ್ಸನ್ನ ದೇವನಲ್ಲಿ, ಗುರುವಿನಲ್ಲಿ ನೆಲೆಗೊಳಿಸಿ ಸಮತೆಯನ್ನ ಕಾಪಾಡಿಕೊಂಡಾಗ ಮಾತ್ರ ಸಾಧಕನಾಗಲು ಸಾಧ್ಯ.

ಕರಣೇಂದ್ರಿಂಗಳೆಂಬ ಸೊಣಗ ಮುಟ್ಟದ ಮುನ್ನ, ಮನ ನಿಮ್ಮನೈದುಗೆ ಕೂಡಲ ಸಂಗಮ ದೇವಾ:
ಇಂದ್ರಿಯಗಳು ಕೆಲವೊಮ್ಮೆ ಮದಿಸಿದ ಆನೆಯಂತೆ ಕೆಲಸ ಮಾಡಬಲ್ಲವು. ಅದಕ್ಕೆ ಕಾರಣ ಮನಸ್ಸಿನ ವಿಕಾರ ಭಾವನೆಗಳು. ಮನಸ್ಸು ಕಣ್ಣಿಗೆ ಕಾಣದೆ ಇದ್ದರೂ ಅದರ ಚೇಷ್ಟೆಗಳು ಅವರ್ಣನೀಯ. ಮನವೆಂಬ ಮರ್ಕಟದ ಮೇಲೆ ಬುದ್ಧಿ ಮತ್ತು ಹೃದಯ ಹತೋಟಿಯಲ್ಲಿ ಇಟ್ಟುಕೊಂಡರೆ ಮನುಷ್ಯ ಪಂಚೇಂದ್ರಿಯಂಗಳನ್ನು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಂಡರೆ ವಿಕಾಸದ ಮೆಟ್ಟಿಲನ್ನು ಏರಬಲ್ಲ.

ಅದಕ್ಕೇನೆ ಈ ಒಂಭತ್ತು ಇಂದ್ರಿಯಗಳನ್ನು ಬಸವಣ್ಣನವರು ಸೊಣಗ ಎಂದು ಕರೆಯುತ್ತಾರೆ. ನಾಯಿಯ ಮೂಗಿಗೆ ಯಾವ ಪದಾರ್ಥದ ವಾಸನೆ ಸಿಕ್ಕರೂ ತಕ್ಷಣವೆ ವಾಸನೆಯ ಜಾಡನ್ನ ಹೇಗೆ ಹುಡುಕಿಕೊಂಡು ಹೋಗುತ್ತದೆಯೋ ಹಾಗೆಯೆ ಕರಣೇಂದ್ರಿಯಗಳೆಂಬ ನಾಯಿಗಳು ಐಹಿಕ ಭೋಗವೆಂಬ ವಾಸನೆಯನ್ನು ಹಿಡಿದು ಸಾಗುತ್ತವೆ. ಅದಕ್ಕಾಗಿ ಕರಣೇಂದ್ರಿಯಗಳಿಗೆ ದಾಸರಾಗದೆ, ಅವುಗಳ ಪ್ರಚೋದನೆಗೆ ಒಳಗಾಗುವ ಮುನ್ನವೆ ಮನಸ್ಸನ್ನು ದೈವೀಮಯ ಮಾಡಿ ನಿಮ್ಮಲ್ಲಿ ಒಂದಾಗುವಂತೆ ಮಾಡು ಎಂದು ಹೇಳಿದ್ದಾರೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋಬೈಲ್. ಸಂ. +91 9845810708.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು. ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 97413 57132 / e-Mail ID: info@vachanamandara.in

Loading

Leave a Reply