ಕನ್ನಡ ಸಂಶೋಧನ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡಿದ ಮಾರ್ಗ-1 / ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

“ಮಾರ್ಗ” ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯಕ್ಷೇತ್ರದಲ್ಲಿ ಈ ಮೂರೂ ಬಗೆಯ ಕಾರ್ಯಮಾಡಿರುವ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ತಮ್ಮ ಎಲ್ಲ ಸಂಶೋಧನ ಪ್ರಬಂಧಗಳ ಸಂಕಲನವಾಗಿರುವ 8 ಸಂಪುಟಗಳಿಗೆ ಇಟ್ಟ ಶೀರ್ಷೀಕೆ “ಮಾರ್ಗ” ಹೆಸರು ತುಂಬ ಅನ್ವರ್ಥಕವಾಗಿದೆ. ಇದಲ್ಲದೆ ಅವರ ಪಿಎಚ್.ಡಿ ಪ್ರಬಂಧದ ಹೆಸರು “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ”, ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥದ ಹೆಸರು “ಮಹಾಮಾರ್ಗ”, ಅವರು ಹುಟ್ಟಿದ್ದು ಮಾರ್ಗಶೀರ್ಷ ಮಾಸದಲ್ಲಿ. ಈ ಎಲ್ಲ ಆಕಸ್ಮಿಕಗಳ ಸಮನ್ವಯವೂ ಕುತೂಹಲಕರವೆನಿಸುತ್ತದೆ.

ಕನ್ನಡ ಸೃಜನಶೀಲ ಸಾಹಿತ್ಯವು ನವೋದಯ, ನವ್ಯ, ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸಿಕೊಳ್ಳುತ್ತ ಬಂದ ಹಾಗೆ, ಕನ್ನಡ ಸಂಶೋಧನ ಸಾಹಿತ್ಯವೂ ರೂಪಿಸಿಕೊಳ್ಳುತ್ತ ಬಂದ ಸಾಮಗ್ರಿ ಶೋಧನಿಷ್ಠ, ಸಾಮಗ್ರಿ ವಿಶ್ಲೇಷಣನಿಷ್ಠ, ಸಾಮಗ್ರಿ ವ್ಯಾಖ್ಯಾನನಿಷ್ಠ ಘಟ್ಟಗಳಲ್ಲಿ ನಾನು ದುಡಿಯುತ್ತ ಬಂದಿದ್ದೇನೆ. ಎರಡನೆಯದಾಗಿ ಕನ್ನಡ ಸಂಶೋಧನೆ ಆಗಾಗ ಅಳವಡಿಸಿಕೊಳ್ಳುತ್ತ ಬಂದ ಸಂಸ್ಕೃತಿ, ಶಾಸನ, ಜಾನಪದ, ನಾಮ ವಿಜ್ಞಾನ ಇತ್ಯಾದಿ ಹೊಸಹೊಸ ಕ್ಷೇತ್ರಗಳಲ್ಲಿಯೂ ಡಾ. ಎಮ್.‌ ಎಮ್. ಕಲಬುರ್ಗಿ ಅವರು ಕೃಷಿ ಮಾಡಿ ಮಹಾಮಾರ್ಗದ ಪಥಿಕರೆನಿಸಿದ್ದಾರೆ. ಡಾ.‌ ಎಮ್.‌ ಎಮ್. ಕಲಬುರ್ಗಿಯವರ ಸಂಶೋಧನೆಯ ವಿಧಾನ ಮೂರು ಘಟ್ಟಗಳಲ್ಲಿ ಕವಲೊಡೆದಿದೆ.

  1. ಹೊಸ ಆಕರಗಳ ಶೋಧ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಮಾಡುವ ಶೋಧ. ಹೀಗೆ ಎರಡು ಬಗೆಗಳಲ್ಲಿ ಸಂಶೋಧನೆಯನ್ನು ಗುರುತಿಸಲಾಗುತ್ತಿದೆ. ಸಾಮಾನ್ಯವಾಗಿ ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರು ವಿಪುಲ. ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಮಾತ್ರ ಹೊಸ ಆಕರಗಳನ್ನೂ ಶೋಧಿಸಿದ್ದಾರೆ, ಇನ್ನೊಬ್ಬರು ಶೋಧಿಸಿದ ಆಕರಗಳನ್ನು ಬಳಸಿಯೂ ಸಂಶೋಧನೆ ಮಾಡಿದ್ದಾರೆ.
  2. ಕನ್ನಡ ಸಂಶೋಧನೆಯ ಇತಿಹಾಸದಲ್ಲಿ ಆಕರ ನಿಷ್ಠಶೋಧ, ವಿಶ್ಲೇಷಣ ನಿಷ್ಠಶೋಧ, ವ್ಯಾಖ್ಯಾನ ನಿಷ್ಠಶೋಧ ಹೀಗೆ ಮೂರು ಮಜಲುಗಳು ಕಂಡುಬರುತ್ತವೆ. ಈ ಮೂರೂ ಮಜಲುಗಳಲ್ಲಿ ಡಾ. ಎಮ್.‌ ಎಮ್. ಕಲಬುರ್ಗಿ ಅವರು ಕಾರ್ಯ ಮಾಡಿದ್ದಾರೆ.
  3. ಸಂಶೋಧನೆ ಏಕಶಿಸ್ತೀಯ ಅಧ್ಯಯನ ಕ್ಷೇತ್ರವಲ್ಲ, ಬಹುಶಿಸ್ತೀಯ ಅಧ್ಯಯನಕ್ಷೇತ್ರ. ಈ ಮಾತಿಗೆ ಅರ್ಥ ತುಂಬುವಂತೆ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಛಂದಸ್ಸು, ಹಸ್ತಪ್ರತಿ ಶಾಸ್ತ್ರ, ಗ್ರಂಥಸಂಪಾದನ ಶಾಸ್ತ್ರ, ನಾಮಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಕೆಲಸ ಮಾಡಿದ್ದಾರೆ. ಇವುಗಳನ್ನು ಬಳಸಿಕೊಂಡು ಅಂತರ್ಶಿಸ್ತೀಯ ಸಂಶೋಧನೆಯನ್ನು ಪೂರೈಸಿದ್ದಾರೆ.

ಹೀಗೆ ಸಂಶೋಧನೆಯ ಎಲ್ಲ ಹಂತ, ಎಲ್ಲ ಆಯಾಮ, ಎಲ್ಲ ವಿಷಯಗಳನ್ನು ತೆಕ್ಕೆಗೆ ಅಳವಡಿಸಿಕೊಂಡು ದುಡಿಯುವವ ಸಮಗ್ರ ಸಂಶೋಧಕರೆನಿಸಿದ್ದರು. ಮಾರ್ಗ ಸಂಪುಟದ ಮೊದಲ ಭಾಗ “ಸಾಹಿತ್ಯಮಾರ್ಗ” ದಲ್ಲಿ 71 ಲೇಖನಗಳಿವೆ.

ಕನ್ನಡದಲ್ಲಿ ದುರ್ವಿನೀತನ “ಬೃಹತ್ ಕಥೆ” ಬೆಳೆದು ಬಂದ ಬಗೆಯಿಂದ ಪ್ರಾರಂಭವಾದ ಈ ಲೇಖನಗಳು ಕನ್ನಡ ಸಾಹಿತ್ಯ ಚರಿತ್ರೆಯ ಅನೇಕ ಹೊಸ ಹೊಸ ಹೊಳಹುಗಳನ್ನು ತೆರೆದು ತೋರಿಸುತ್ತವೆ. ಪೊನ್ನನ “ಭುವನೈಕ್ಯರಾಮಾಭ್ಯುದಯ” ಎಂಬ ಕೃತಿ ಇರುವಂತೆ, “ನೃಪತುಂಗಾಭ್ಯುದಯ” ಎಂಬ ಕೃತಿ ಇರಬಹುದು ಎಂದು ಡಾ. ಎಮ್.‌ ಎಮ್. ಕಲಬುರ್ಗಿ ಅವರು ಊಹಿಸುತ್ತಾರೆ. ಕವಿರಾಜಮಾರ್ಗ ಕೃತಿಗೆ ಈ ಹೆಸರು ಇತ್ತು ಎಂಬುದನ್ನು ಶೋಧಿಸಿರುವುದು ಅವರ ಪ್ರತಿಭೆಗೆ ಹಿಡಿದ ಸಾಕ್ಷಿಯಾಗಿದೆ. “ನೃಪತುಂಗಾಭ್ಯುದಯ” ಹೆಸರಿನ ಹಸ್ತಪ್ರತಿ ಅವರಿಗೆ ಪಿಎಚ್.ಡಿ. ಮಾಡುವ ಕಾಲಕ್ಕೆ ಸಿಕ್ಕಿರಲಿಲ್ಲ. ಅದು 1973 ರಲ್ಲಿ ಧರ್ಮಸ್ಥಳದಲ್ಲಿ ಅವರಿಗೆ ದೊರೆಯಿತು. “ಧವಲ-ಜಯಧವಲ-ಮಹಾಧವಲ” ಎಂಬ ಲೇಖನ ಜೈನಧರ್ಮದ ಮೂರು ಪ್ರಮುಖ ಗ್ರಂಥಗಳ ವಿಸ್ತರವಾದ ವಿವರಣೆ ಇದೆ. ಶಾಂತಿನಾಥ ಶಾಸ್ತ್ರಿಗಳಿಂದ ಪರಿಷ್ಕೃತವಾದ ಈ ಮೂರೂ ಕೃತಿಗಳು ಬೆಳಕಿಗೆ ಬಂದ ಇತಿಹಾಸವನ್ನು ಅತ್ಯಂತ ರಮ್ಯವಾಗಿ ಇಲ್ಲಿ ಚಿತ್ರಿಸಿದ್ದಾರೆ.

ಪೊನ್ನನ “ಭುವನೈಕರಾಮಾಭ್ಯುದಯ” ಎಂಬ ಲೇಖನ ವಿಶೇಷ ಗಮನ ಸೆಳೆಯುವುದು. ಕೃತಿಯ ಕರ್ತೃ ಯಾರು ಎಂಬುದಕ್ಕೆ? ಶಂಕರಗಂಡನೋ, ಪೊನ್ನನೊ? ಎಂಬ ವಿಷಯವಾಗಿ ಇನ್ನೂ ಗೊಂದಲವಿದ್ದ ಕಾಲದಲ್ಲಿ ಈ ಲೇಖನವನ್ನು ಡಾ. ಎಮ್.‌ ಎಮ್. ಕಲಬುರ್ಗಿಯವರು ಅವರು ಪ್ರಕಟಿಸಿದ್ದರು. ಈ ವಿಷಯವಾಗಿ ಡಾ. ಎಂ. ಬಿ. ನೇಗಿನಹಾಳ ಅವರು ಆಳವಾಗಿ ಅಧ್ಯಯನ ಮಾಡಿ, “ಭುವನೈಕ್ಯರಾಮಾಭ್ಯದಯ” ದ ಕರ್ತೃ ಶಂಕರಗಂಡ ಎಂದು ಸಿದ್ಧಪಡಿಸಿದಾಗ, ಅವರ ವಾದವನ್ನು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದರು. “ಶಬ್ದಮಣಿದರ್ಪಣ” ದ ಒಂದು ಸೂತ್ರದಲ್ಲಿ ಉದಾಹರಣೆಯಾಗಿರುವ ಪದ್ಯ ಹೀಗಿತ್ತು:

ಉದಯಾಸ್ತೋನ್ನತ ಶೈಲಸೇತು ಹಿಮವತ್ಕುತ್ಕೀಲ ಪರ್ಯಂತ ಸಂ
ಪದೆಯಂ ವಾರ್ಧಿತರತ್ತರಂಗಸನಿನದತ್ಕಾಂಚೀಕಳಾಪಾಂಚಿತಾ
ಸ್ಪದೆಯಂ ಸಾಧಿಸಿ ಕಬ್ಬಿಗಂಗೆ ನೆಲನಂ ನಿರ್ವ್ಯಾಜದಿಂದಂ ನಿಮಿ
ರ್ಚಿದ ಗೆಲ್ಲಂ ಭುವನೈಕ್ಯರಾಮ ಮಹಿಪಂಗಕ್ಕುಂ ಪೆರ್ಗಕ್ಕುಮೇ

ಅಂದರೆ ಸಮಸ್ತ ಭರತಖಂಡವನ್ನು ಸಾಧಿಸಿ ಕಬ್ಬಿಗನಿಗೆ ಒಪ್ಪಿಸಿದ ಗೆಲವು ಭಯವನೈಕ್ಯರಾಮನೃಪನ ಹೊರತು ಬೇರೆಯವರಿಗಲ್ಲ ಎಂದು ಅದರ ಅರ್ಥ. ಅಂದರೆ ಭುವನೈಕ್ಯರಾಮನು ಯುದ್ಧದಲ್ಲಿ ಗೆದ್ದ ಸಮಸ್ತ ವಸುಂಧರೆಯನ್ನು “ಕಬ್ಬಿಗ” ನಿಗೆ ಕೊಟ್ಟನೆಂದು ಅರ್ಥವೇ? ಇದು ಆಭಾಸ; ಆದ್ದರಿಂದ ಇಲ್ಲಿಯ ಕಬ್ಬಿಗ ಪದದ ಬದಲಾಗಿ ಅದು ಕಚ್ಚೆಗ ಎಂದಿರಬೇಕು. ಆಗ ಕಚ್ಚೆಗನೆಂದರೆ ರಾಷ್ಟ್ರಕೂಟ ಚಕ್ರವರ್ತಿಯಾದ 3 ನೇ ಕೃಷ್ಣನೆಂದಾಗಬಹುದು. “ಭುವನೈಕ್ಯರಾಮ” ನೆಂದು ಬಿರುದು ಇರುವವನು ಆತನ ಸಾಮಂತ ಶಂಕರಗಂಡನಾಗಿರಬೇಕು ಎಂಬ ವಿಚಾರವನ್ನು ಮೊದಲು ಹೇಳಿದವರು ಡಾ. ನೇಗಿನಹಾಳರು. ಕಾವ್ಯಾಲೋಕನದ 620 ನೇ ಪದ್ಯದಲ್ಲಿ ಒಂದೆಡೆ “ರಟ್ಟರಮೇರು ದಂತಿಗಂ” ಎಂಬ ಪದ ಬರುತ್ತದೆ. ರಟ್ಟರಮೇರು ವೆಂಬುದು ರಾಷ್ಟ್ರಕೂಟ ಮೂರನೆಯ ಕೃಷ್ಣನ (ಪಟ್ಟದ) ಆನೆಯಾಗಿರಬಹುದೆಂದು ಕೆಲವು ವಿದ್ವಾಂಸರ ಊಹೆಯಾಗಿತ್ತು.  ಇದನ್ನು ಡಾ. ನೇಗಿನಹಾಳರು ತುಂಬ ಅರ್ಥವತ್ತಾಗಿ ವಿಶ್ಲೇಷಿಸಿದರು.  ಬೆಟಗೇರಿಯ ಶಾಸನದಲ್ಲಿ ಶಂಕರಗಂಡನ ಕೆಲವು ಬಿರುದುಗಳಲ್ಲಿ “ರಟ್ಟರ [ಮೇರು]” ಎಂಬುದೊಂದು ಉಂಟು. ಇಲ್ಲಿ “ರಟ್ಟರಮೇರು ದಂತಿ” ಎಂದರೆ ರಟ್ಟರ ಮೇರುವಿನ ದಂತಿ ಎಂಬ ಹೊಸ ಅರ್ಥವನ್ನು ಹೇಳಬೇಕಾಗುತ್ತದೆ. ಹೀಗಾಗಿ ಈ ಪದ್ಯದಲ್ಲಿ ಬರುವ ರಟ್ಟರ ಮೇರು ಶಂಕರಗಂಡನೆಂದೆ ತಿಳಿಯಬಹುದು. ಇದು ಭುವನೈಕ್ಯರಾಮಾಭ್ಯುದಯದಿಂದ ಎತ್ತಿದ ಪದ್ಯವಾಗಿದ್ದ ಪಕ್ಷದಲ್ಲಿ ಅದರ ನಾಯಕನು ಶಂಕರಗಂಡನೆಂದೇ ಹೇಳಬೇಕಾಗುತ್ತದೆ. ಎಂಬ ನಿರ್ಣಯಕ್ಕೆ ಡಾ. ನೇಗಿನಹಾಳರು ಬಂದರು. ಪೂರ್ವಸೂರಿಗಳಾದ ಡಿ. ಎಲ್. ಎನ್. ಡಾ. ಎಂ. ಎಂ. ಕಲಬುರ್ಗಿ ಅವರ ವಿಚಾರಗಳಿಗಿಂತ ಸ್ಪಷ್ಟವಾಗಿ ಡಾ. ನೇಗಿನಹಾಳರು ಭುವನೈಕ್ಯರಾಮಾಭ್ಯುದಯದ ಕಾವ್ಯನಾಯಕ ಶಂಕರಗಂಡನೆಂದು ಸಿದ್ಧಪಡಿಸಿದರು. ಭುವನೈಕ್ಯರಾಮಾಭ್ಯುದಯವು ಲೌಕಿಕ ಕಾವ್ಯವೆಂಬುದು ನಿಜ. ಬೆಟಗೇರಿಯ ಶಾಸನ, ಕಾವ್ಯಾವಲೀಕನದ 68 ನೇ ಪದ್ಯ ಸೂಚಿಸುವ “ಜಯಧೀರ” ಎಂಬ ಬಿರುದು, ಶಬ್ದಮಣಿ ದರ್ಪಣದ 167 ನೇ ಸೂತ್ರದ “ಕಬ್ಬಿ [ಕಚ್ಚೆ] ಗ” ಎಂಬ ಹೆಸರು, ಬೆಟಗೇರಿಯ ಶಾಸನ ಹಾಗೂ ಕಾವ್ಯಾವಲೋಕನದ 620 ನೇ ಪದ್ಯಗಳಲ್ಲಿಯ ರಟ್ಟರಮೇರು, ಮತ್ತು ಭುವನೈಕ್ಯರಾಮನೆಂಬ ಬಿರುದು ಇವೆಲ್ಲ ಸಂಗತಿಗಳು ಕಾವ್ಯನಾಯಕನು ಶಂಕರಗಂಡನಾಗಿರಬೇಕೆಂಬ ಊಹೆಗೆ ಬಲವಾದ ಆಧಾರಗಳಾಗುತ್ತವೆ. ಈ ಎಲ್ಲ ವಿಷಯಗಳನ್ನು ಡಾ. ಎಮ್.‌ ಎಮ್. ಕಲಬುರ್ಗಿ ಅವರು “ಶಂಕರಗಂಡ” ಎಂಬ ಇನ್ನೊಂದು ಲೇಖನದಲ್ಲಿ ಮುಕ್ತಮನದಿಂದ ಒಪ್ಪಿಕೊಂಡಿದ್ದರು.

“ಶಾಸ್ತ್ರಕಾವ್ಯ-ಶ್ಲೇಷಕಾವ್ಯ-ಸಮಸ್ತಕಾವ್ಯ” ಎಂಬ ಲೇಖನದಲ್ಲಿ ಶಾಸ್ತ್ರ, ಕಾವ್ಯ, ಪುರಾಣ ಕಾವ್ಯ ಮತ್ತು ಇತಿಹಾಸ ಕಾವ್ಯ ಹೀಗೆ ಕೆಲವು ಸ್ವತಂತ್ರ ಪ್ರಕಾರಗಳು ಭರತಖಂಡದಲ್ಲಿ ಬೆಳೆದು ಬಂದಿವೆ. ಜೊತೆಗೆ ಇವುಗಳಲ್ಲಿ ಯಾವುದೇ ಎರಡನ್ನು ಸಮನ್ವಯಗೊಳಿಸಿದ ಮಿಶ್ರಕಾವ್ಯ ಪ್ರಯೋಗಗಳೂ ಬೆಳೆದು ಬಂದಿವೆ. ಈ ಮಿಶ್ರಕಾವ್ಯ ಪ್ರಕಾರಗಳನ್ನು ಶಾಸ್ತ್ರಕಾವ್ಯ, ಶ್ಲೇಷಕಾವ್ಯ, ಸಮಸ್ತಕಾವ್ಯವೆಂದು ವರ್ಗೀಕರಿಸಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಶ್ಲೇಷಕಾವ್ಯ ಕುರಿತು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಹೇಳುವ ಇನ್ನೊಂದು ಮಹತ್ವದ ಮಾತೆಂದರೆ ಶ್ಲೇಷಕಾವ್ಯವು ಶ್ಲೇಷೆಯ ಮೂಲಕ ಏಕಕಾಲಕ್ಕೆ ಎರಡು ಕಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಕಾವ್ಯಪ್ರಯೋಗ. ಶಾಸ್ತ್ರಕಾವ್ಯದಂತೆ ಒಂದು ಪ್ರಯೋಗವಾಗಿರುವ ಇದು ಪ್ರತಿಭೆಯ ಜೊತೆ ಪ್ರಕಾಂಡ ಪಾಂಡಿತ್ಯವನ್ನೂ ಬಯಸುತ್ತದೆ” ಎಂದು ಹೇಳಿರುವುದು ಸಮಂಜಸವಾಗಿದೆ.

  1. ಪಂಪನ ಪರಿಸರಗಳು
  2. ಪಂಪನ ಧರ್ಮಪುರ: ಕ್ಷೇತ್ರಕಾರ್ಯ
  3. ಪಂಪನ ಐತಿಹಾಸಿಕ ಧಾರ್ಮಿಕ ಹಿನ್ನೆಲೆ
  4. ಪಂಪನ ತಮ್ಮ ಜಿನವಲ್ಲಭ
  5. ಪಂಪಭಾರತದ ಮಂಗಲಪದ್ಯ
  6. ಪಂಪಭಾರತದ ಒಂದು ನಂಬಿಕೆ-ಒಂದು ಮೌಲ್ಯ
  7. ಪಂಪಭಾರತದಲ್ಲಿ ವೀರರ ಮರಣಚಿತ್ರ
  8. ಪಂಪಭಾರತದಲ್ಲಿ ವೀರರ ವೀರಸಿದ್ಧಾಂತ
  9. ಕೆಸರ ಕಡಿತ

ಈ ಒಂಬತ್ತು ಲೇಖನಗಳು ಪಂಪನ ಕುರಿತಾಗಿ ಅನೇಕ ಹೊಸ ವಿಚಾರಗಳನ್ನು ತಿಳಿಸುವ ಶೋಧಗಳಾಗಿವೆ. ಪಂಪ ಒಬ್ಬ ಕವಿಯಲ್ಲ, ಒಂದು ಕಾವ್ಯಪ್ರಕಾರ, ಒಂದು ಕಾವ್ಯಪರಂಪರೆ. ಅವನ ಕೃತಿಗಳು ಕೇವಲ ಸಾಹಿತ್ಯಿಕ ಮಹಾಕಾವ್ಯಗಳಲ್ಲ, ಸಾಂಸ್ಕೃತಿಕ ಮಹಾಕಾವ್ಯಗಳು. ಅವನು ತನ್ನ ಕಾಲದ ಕನ್ನಡಿಗರ ಸಮಗ್ರ ಸಂಸ್ಕೃತಿಯನ್ನೇ ಅವುಗಳಲ್ಲಿ ಸಾಹಿತ್ಯಗೊಳಿಸಿದ್ದಾನೆ. ಹೀಗಾಗಿ ಈತನ ಕೃತಿಗಳು ಕನ್ನಡಿಗರ ಸಾಹಿತ್ಯಿಕ ಆಸ್ತಿಯೂ ಹೌದು, ಸಾಂಸ್ಕೃತಿಕ ಆಸ್ತಿಯೂ ಹೌದು. 10 ನೆಯ ಶತಮಾನದಲ್ಲಿ ಅವನನ್ನು ಮೀರಿಸುವ ಕವಿಗಳು ಭಾರತದಲ್ಲಿಯೇ ಏಕೆ? ಬಹುಶಃ ಜಗತ್ತಿನಲ್ಲಿಯೇ ಇರಲಿಲ್ಲವೆಂಬುದು ಕನ್ನಡಕ್ಕೆ ಸಲ್ಲುವ ಜಾಗತಿಕ ಮನ್ನಣೆಯೂ ಹೌದು.

ಇತ್ತೀಚೆಗೆ ಪಂಪನ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಕನ್ನಡ ಶಾಸನವೊಂದು ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಕುರ್ಕಿಯಾಲ ಗ್ರಾಮದಲ್ಲಿ ಲಭ್ಯವಾಗಿದೆ. ಈ ಶಾಸನವನ್ನು ಅರ್ಥೈಸುವಲ್ಲಿ, ಲೇಖನದ ಮೇಲೆ ಲೇಖನ ಬರೆದು ಅದರ ವಿಷಯವನ್ನು ಕನ್ನಡಿಗರಿಗೆ ಪರಿಚಯಿಸುವಲ್ಲಿ, ದುಡಿದ ಸಂತೃಪ್ತಿ ಡಾ. ಎಮ್.‌ ಎಮ್. ಕಲಬುರ್ಗಿ ಅವರಿಗಿತ್ತು. ಅಪೂರ್ವ ದಾಖಲೆಯಾಗಿರುವ ಈ ದೊಡ್ಡ ಶಾಸನವನ್ನು ಬೆಳಕಿಗೆ ತಂದ ಶ್ರೇಯಸ್ಸು ಅವರದು. ಭೂಗತವಾದ ಪಂಪನ ಧರ್ಮಪುರದಲ್ಲಿ ಉತ್ಖನನ ಕಾರ್ಯವು ಜರುಗಬೇಕಾಗಿದೆ ಎಂದು ಪದೇ ಪದೇ ಹೇಳುತ್ತಿದ್ದರು.

ಪಂಪನ ತಾಯಿಯ ತವರುಮನೆ, ಧಾರವಾಡ ಜಿಲ್ಲೆಯ ಅಣ್ಣಿಗೆರೆಯೆಂದು ಈ ಶಾಸನ ತಿಳಿಸುತ್ತದೆ. ಹಿರಿಯ ಮಗನಾದ ಪಂಪನು ತಾಯಿಯ ತವರೂರಿನಲ್ಲಿ ಹುಟ್ಟಿರುವುದು ಸಹಜವಾಗಿರುವುದರಿಂದ ಅಣ್ಣಿಗೆರೆ ಅವರ ಜನ್ಮಸ್ಥಳವೆಂದು ಹೇಳಬೇಕಾಗುತ್ತದೆ. ಪಂಪನ ವಂಶಸ್ಥರು ಇಂದಿಗೂ ಜೈನರಾಗಿ, ಲಿಂಗಾಯತರಾಗಿ ಅಲ್ಲಿ ಮುಂದುವರಿದಿದ್ದಾರೆ ಎಂದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಹೇಳಿದ್ದು ಐತಿಹಾಸಿಕ ಮಹತ್ವ ಪಡೆದು ಇಂದು ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ನಿರ್ಮಾಣವಾಗಿದೆ.

ಕನ್ನಡ ಕಾವ್ಯಗಳಲ್ಲಿ ವೀರ-ವೀರಮರಣ-ವೀರಸ್ವರ್ಗಾರೋಹಣವು ಕನ್ನಡ ಪ್ರಾಚೀನ ಮರಣ ಪರಂಪರೆಯನ್ನು ತಿಳಿಸುವ ಅಪರೂಪದ ಲೇಖನವಿದು. ಈ ಲೇಖನವೇ ವಿಸ್ತಾರಗೊಂಡು ಸಮಾಧಿ-ಬಲಿದಾನ-ವೀರಮರಣ ಎಂಬ ಕೃತಿಗೆ ಬೀಜಾಂಕುರವಾಯಿತು. “ಆತ್ಮಬಲಿದಾನ-ಬ್ರಹ್ಮಶಿವನ ವಿಚಾರಗಳು” ಮತ್ತು “ಬಲಿದಾನ ಸಂಪ್ರದಾಯಕ್ಕೆ ಶರಣರ ಪ್ರತಿಕ್ರಿಯೆ” ಎಂಬ ಲೇಖನಗಳು ಇದಕ್ಕೆ ಪೂರಕವಾಗಿಯೇ ಪ್ರಕಟವಾಗಿದೆ.

“ನಾಗವರ್ಮನು ಜನ್ನನ ಗುರುವಲ್ಲ” ಜನ್ನನ ಗುರು ನಾಗವರ್ಮ ಎಂಬ ಪೂರ್ವಸೂರಿಗಳ ವಾದವನ್ನು ಡಾ. ಎಮ್.‌ ಎಮ್. ಕಲಬುರ್ಗಿ ಅವರು ಈ ಲೇಖನದ ಮೂಲಕ ಅಲ್ಲಗಳೆದಿದ್ದಾರೆ.

“ವಜ್ರಭಟ್ಟನ ವೀರಾವಳಿ”, “ಬಾಲಚಂದ್ರನ ತಿಲೋಯಪಣ್ಣತ್ತಿ” ಮತ್ತು “ಕೇಶಿರಾಜ ಕಂಡ ಅನುಪಲಬ್ಧ ಭಾರತಗಳು” ಈ ಮೂರೂ ಲೇಖನಗಳು ಪ್ರಾಚೀನ ಅನುಪಲಬ್ಧ ಕೃತಿಗಳ ಕುರಿತು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ಹುಡುಕಾಟದ ಫಲವಾಗಿ ಮೂಡಿಬಂದಿವೆ. “ಇಟ್ಟಿಗೆಯ ಸುಟ್ಟವನು” ಮತ್ತು “ಪಾಂಡುರಂಗ ವಿಠ್ಠಲ-ಪುರಂದರ ವಿಠ್ಠಲ” ಎರಡೂ ಪಂಡರಪುರದ ವಿಠಲನ ಕುರಿತಾದ ಲೇಖನಗಳಾಗಿವೆ. “ಆಹವಮಲ್ಲನುಪ್ಪಳನುಂ” “ವೀರಶೈವ ಮತ್ತು ಚಾಲುಕ್ಯ ಜಯಸಿಂಹ” “ಪೆರ್ಮಾಡಿರಾಯ ಮತ್ತು ಶಿವಶರಣರ ಆಂದೋಲನ” “ದೇವೂರ ದಾಸಿಮಯ್ಯ” ಈ ನಾಲ್ಕೂ ಲೇಖನಗಳು ಚಾಲುಕ್ಯರ ಕಾಲದ ವೀರಶೈವರ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ಚಾಲುಕ್ಯ ಜಯಸಿಂಹ ಮತ್ತು ಅವನ ಹೆಂಡತಿ ದಾಸಿಮಯ್ಯನಿಂದ ಲಿಂಗದೀಕ್ಷೆ ಪಡೆದ ಸಂದರ್ಭವನ್ನು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ “ಬಸವಣ್ಣನವರು ಗಮನಿಸಿದ ಜೇಡರ ದಾಸಿಮಯ್ಯನ ಎರಡು ವಿಶೇಷ ಅಂಶಗಳು” ಎಂಬ ಲೇಖನ ಬರೆದಿದ್ದಾರೆ. 

“ಇಷ್ಟಲಿಂಗ” ವೀರಶೈವರು ಬಳಿಸುವ ಒಂದು ವಿಶಿಷ್ಟ ಪಾರಿಭಾಷಿಕ ಪದವಾಗಿದೆ. ಇಂದು ಇಷ್ಟಲಿಂಗವೆಂದರೆ ಕೊರಳಲ್ಲಿ ಕಟ್ಟಿಕೊಳ್ಳುವ ಲಿಂಗವೆಂದು ಪರಿಭಾವಿಸಲಾಗುತ್ತದೆ. ಆದರೆ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಸ್ಥಾವರರೂಪದ ಲಿಂಗವನ್ನೇ ಭಕ್ತರು ತಮಗೆ ಬೇಕಾದ ಕಡೆ ಒಯ್ದು ಪೂಜಿಸುತ್ತಿದ್ದರು. ಇದನ್ನು ಇಷ್ಟಲಿಂಗವೆಂದು ಕರೆದರೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಈ ವಿಷಯವಾಗಿ ವೀರಶೈವರು ಹೆಚ್ಚು ವಿಚಾರ ಮಾಡಿದಂತೆ ತೋರುವುದಿಲ್ಲ.

“ಅಭಿನವ ಪಾಶುಪತ ಮತ್ತು ವೀರಶೈವ” ಎಂಬ ಲೇಖನದಲ್ಲಿ ಕರ್ನಾಟಕದಲ್ಲಿ ಬೆಳೆದು ಬಂದ ಶೈವಧಾರೆಗಳು ಮತ್ತು ವೀರಶೈವ ಧರ್ಮದ ವಿಲೀನಿಕರಣ ಪ್ರಕ್ರಿಯೆ ಸಂದರ್ಭವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಶೈವದ ಧಾರೆಗಳಲ್ಲಿ ಅಭಿನವ ಪಾಶುತವೆಂಬುದು ನಕುಲೀಶ ಪಾಶುಪತದ ರೂಪಾಂತರವಿರಬಹುದೆಂಬ ನಿರ್ಣಯಕ್ಕೆ ಇನ್ನಷ್ಟು ಆಧಾರಗಳು ಬೇಕೆನಿಸುತ್ತವೆ. “ನಕುಲೀಶ ಪಾಶುಪತರು ಮತ್ತು ವಚನಸಾಹಿತ್ಯ” ಲೇಖನದಲ್ಲಿ ಶೈವದ ನಾಲ್ಕು ಪ್ರಮುಖ ಪ್ರಭೇದಗಳಲ್ಲಿ ನಕುಲೀಶ ಪಾಶುಪತವೂ ಒಂದು. ನಕುಲೀಶರು ಸ್ವಲ್ಪ ವೈಚಾರಿಕ ಪ್ರಜ್ಞೆಯತ್ತ ಮುಖ ಮಾಡಿದವರು, ಅವರ ಮುಂದುವರಿಕೆಯೇ ವೀರಶೈವವಾಗಿ, ವಚನ ಸಾಹಿತ್ಯಕ್ಕೆ ಅವರೇ ಮೂಲರಾಗಿರಬಹುದು ಎಂಬ ನಿರ್ಣಯಕ್ಕೆ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಬಂದಿದ್ದಾರೆ. (ಆದರೆ ಈ ಅಭಿಪ್ರಾಯವನ್ನು ಮಾರ್ಗ-4 ರಲ್ಲಿ ಬದಲಾಯಿಸಿಕೊಂಡಿದ್ದಾರೆ)

“ಅಲ್ಲಮಪ್ರಭುವಿನ ಜನ್ಮಗ್ರಾಮ” “ಅಲ್ಲಮನ ಚರಿತ್ರೆ: ಬೆಳವಣಿಗೆಯ ರೀತಿಗಳು” ಈ ಎರಡು ಲೇಖನಗಳು ಅಲ್ಲಮಪ್ರಭುವಿನ ಚಾರಿತ್ರಿಕ ಜೀವನದ ಮಹತ್ವದ ಸುಳಿವುಗಳನ್ನು ನೀಡುತ್ತವೆ. ಅಲ್ಲಮನ ಊರು ಕರವೂರು, ಬನವಾಸಿ ಯಾವುದು? ಎಂಬ ವಿದ್ವಾಂಸರ ವಾದಕ್ಕೆ ತೆರೆ ಎಳೆದೆದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ಶೋಧದ ಹೆಚ್ಚುಗಾರಿಕೆಯೆನಿಸಿದೆ. ಪುರಾಣ, ಕಾವ್ಯ ಮತ್ತು ವಚನಗಳ ಹಿನ್ನೆಲೆಯಲ್ಲಿ ಬಸವಣ್ಣನವರ ಜನನದ ಉದ್ದೇಶವನ್ನು “ಬಸವಣ್ಣನವರ ಜನನದ ಉದ್ದೇಶ” ಎಂಬ ಲೇಖನದಲ್ಲಿ ತಿಳಿಸಿದ್ದಾರೆ. ಕವಿ ಹೃದಯದ ಬಸವಣ್ಣನವರು ತಮ್ಮ ವಚನಗಳಲ್ಲಿ ಆತ್ಮನಿವೇದನ ಪರ ವಚನಗಳನ್ನು ರಚಿಸುವ ಮೂಲಕ ವೈಯಕ್ತಿಕ ವಿವರಗಳನ್ನು ತಿಳಿಸಿರುವುದನ್ನು “ಬಸವಣ್ಣನವರ ವಚನಗಳಲ್ಲಿ ವ್ಯಕ್ತಿಗತ ಸಂಗತಿಗಳು” ಎಂಬ ಲೇಖನದಲ್ಲಿ ಸಾದರಪಡಿಸಿದ್ದಾರೆ.

“ಸಕಲಪುರಾತನರ ವಚನಕಟ್ಟು: ಕೆಲವು ಸಮಸ್ಯೆಗಳು” ಎಂಬ ಲೇಖನದಲ್ಲಿ ಡಾ. ಎಂ. ಎಸ್. ಸುಂಕಾಪುರ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿಸಿದ “ಸಕಲ ಪುರಾತನರ ವಚನಗಳು” ಕೃತಿಯ ದೋಷವನ್ನು ತೋರಿಸಿಕೊಟ್ಟಿದ್ದಾರೆ. ಈ ದೋಷವನ್ನು ಸರಿಪಡಿಸಲು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಬಹಳಷ್ಟು ಚಡಪಡಿಸಿ ಸುತ್ತೂರು ಮಠದಿಂದ “ಸಕಲ ಪುರಾತನರ ವಚನಗಳು” ಎಂಬ ಮೂರು ಸಂಪುಟಗಳನ್ನು ಪ್ರಕಟಿಸಿ, ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ.

“ನೀಲಲೋಚನೆ” ಎಂಬ ಲೇಖನ ಸಮಾಜದಲ್ಲಿ ವಿವಾದಕ್ಕೆ ಒಳಗಾಯಿತು. ಬಸವರಾಜದೇವರ ರಗಳೆಯಲ್ಲಿ ಬರುವ ಪ್ರಸಂಗವೊಂದನ್ನು ಉಲ್ಲೇಖಿಸಿ ನೀಲಲೋಚನೆ ಬಸವಣ್ಣನವರಿಗೆ “ಬೌದ್ಧಿಕ ಸಂಗಾತಿ” ಯಾಗಿದ್ದಳೆಂಬ ತೀರ್ಮಾನಕ್ಕೆ ಬರುತ್ತಾರೆ. “ನೀಲಲೋಚನೆಯ ಬದುಕಿನಲ್ಲಿ ಒಂದು ತಿರುವು” ಎಂಬ ಲೇಖನ ಎರಡನೆಯ ಮುದ್ರಣದ ಸಂದರ್ಭದಲ್ಲಿ ತೆಗೆದು ಹಾಕಿದ್ದಾರೆ.  “ಬಸವಣ್ಣನವರ ವಂಶಜರ ಕವಿಳಾಸಪುರ” ಎಂಬ ಲೇಖನವನ್ನು ಅರ್ಜುನವಾಡ ಶಾಸನವನ್ನು ಆಧರಿಸಿ ಬರೆದಿದ್ದಾರೆ.  ಕವಿಳಾಸಪುರವು ಒಂದು ಭೂಗತವಾಗಿದೆ.

“ಭಕ್ತಿಯ ಮರುಳ” ಮೈಲಾರಲಿಂಗನ ಭಕ್ತರ ವಿಷಯವಾಗಿ ಬರೆದ ಲೇಖನವಾಗಿದೆ. “ದೃಷ್ಟಿಯಾರೆ-ದೃಷ್ಟಿವಾರಿ” ಬಸವಣ್ಣನವರ ವಚನದಲ್ಲಿ ಬರುವ ಒಂದು ಶಬ್ದ. ಈ ಶಬ್ದವನ್ನು ಕುರಿತು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು “ದೃಷ್ಟಿಯಾರೆ ಶರಣೆಂದಡೆ? ದೃಷ್ಟಿ[ವಾರಿ] ಶರಣೆಂದಡೆ?” ಎಂಬ ವಚನದ ಮೂಲ ರೂಪ ದೃಷ್ಟಿವಾರಿ ಎಂದರೆ ಎವೆ ಪಿಳುಕಿಸದೆ ಶಿವಲಿಂಗವನ್ನು ನೋಡುತ್ತ ಕುಳಿತುಕೊಳ್ಳುವ ಒಂದು ವ್ರತ. ಈ ವ್ರತವನ್ನು ಹಿನ್ನೆಲೆಯಾಗಿಟ್ಟುಕೊಂಡು ಬಸವಣ್ಣ ಈ ವಚನಗಳನ್ನು ಬರೆದಿರುವುದರಿಂದ “ದೃಷ್ಟಿವಾರಿ” ಯೆಂಬುದೇ ಇಲ್ಲಿಯ ನಿಜಪಾಠ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

“ವೀರಶೈವ ಸ್ವರವಚನ ಸಾಹಿತ್ಯ” ಎಂಬ ಲೇಖನದ ಮೂಲಕ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು  ವಚನದಂತೆಯೇ “ಸ್ವರವಚನ” ಎಂಬ ಸಾಹಿತ್ಯ ಪ್ರಕಾರ ಇರುವುದನ್ನು ತಿಳಿಸುತ್ತಾರೆ. ಈ ವಿಷಯವನ್ನು ಮೊದಲ ಬಾರಿಗೆ ತಿಳಿಸಿಕೊಟ್ಟ ಶ್ರೇಯಸ್ಸು ಅವರದು. ಕೈವಲ್ಯ ಪದವೆಂದೂ, ಅನುಭಾವ ಪದವೆಂದೂ, ತತ್ವ ಪದವೆಂದೂ ಇತ್ತೀಚೆಗೆ ಶಿವದಾಸ ಗೀತಾಂಜಲಿ ಎಂದೂ ಕರೆದು ಶರಣಸಾಹಿತ್ಯದ ಬಹುದೊಡ್ಡ ಪ್ರಕಾರದ ನಿಜನಾಮವಾದ “ಸ್ವರವಚನ” ಎಂಬುದನ್ನು ಮರೆಮಾಚಲಾಗಿದ್ದಿತು. ಈ ಪ್ರಕಾರವನ್ನು ಬೆಳಕಿಗೆ ತರುವುದರೊಂದಿಗೆ “ಸ್ವರವಚನ” ಎಂಬ ಹೆಸರನ್ನು ಪದೇ ಪದೇ ಬಳಸಿ, ಅದಕ್ಕೆ ಸಾರ್ವತ್ರಿಕವಾಗಿ ಶಾಶ್ವತ ಅಸ್ತಿತ್ವವನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರದಾಗಿದೆ.

ಶರಣರು ಮೌಲ್ಯಾಧಾರಿತ ಬದುಕಿಗೆ ಮಹತ್ವ ಕೊಟ್ಟರು. ನಡೆ-ನುಡಿ ಒಂದಾದ, ಮಾತು-ಮನ ಒಂದಾದ ಸರ್ವಸಮಾನತೆಯ ಮೌಲ್ಯಗಳನ್ನು ತಾವು ಆಚರಿಸುವ ಮೂಲಕ ಜೀವನ ಮೌಲ್ಯಗಳನ್ನು ಪ್ರಸಾರಗೊಳಿಸಿದರು. “ವಚನಸಾಹಿತ್ಯ ಮತ್ತು ಜೀವನಮೌಲ್ಯಗಳು” ಎಂಬ ಲೇಖನದಲ್ಲಿ ಈ ಮೌಲ್ಯಗಳನ್ನು ಡಾ. ಎಮ್.‌ ಎಮ್.‌ ಕಲಬುರ್ಗಿಯವರು ಸಂಗ್ರಹಿಸಿ, ವಿಶ್ಲೇಷಿಸಿದ್ದಾರೆ.

“ಜಂಗಮ” ಮತ್ತು “ದಾಸೋಹ” ಲಿಂಗಾಯತ ಧರ್ಮದ ಎರಡು ಮೌಲಿಕ ಪಾರಿಭಾಷಿಕ ಪದಗಳ ವಿವರಣೆ ಕುರಿತ ಬರಹಗಳಾಗಿವೆ. “ಜಂಗಮ” ವಚನಗಳಲ್ಲಿ ನಾನಾ ಅರ್ಥಗಳಲ್ಲಿ ಬಳಕೆಯಾಗಿದೆ. ಪುಲ್ಲಿಂಗ ವಾಚಕ ಪ್ರಯೋಗಕ್ಕಿಂತ, ನಪುಸಕಲಿಂಗದ ಪ್ರಯೋಗದಲ್ಲಿ ಹೆಚ್ಚು ಸಾರ್ಥಕ್ಯ ಪಡೆದಿದೆ. ಆದ್ದರಿಂದ “ಜಂಗಮ” ಎಂದರೆ ಇಲ್ಲಿ “ಸಮಾಜ” ಎಂಬ ಬಹುವ್ಯಾಪಕ ಅರ್ಥ ಇದೆ ಎಂಬುದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ಅಭಿಪ್ರಾಯ. ಹಾಗೆಯೇ ಪ್ರಾಚೀನ ಕಾಲದಿಂದಲೂ “ದಾನ” ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ದಾನದ ಬದಲಾಗಿ “ದಾಸೋಹ” ಎಂಬ ಸಿದ್ಧಾಂತವನ್ನು ಮೊಟ್ಟಮೊದಲ ಬಾರಿಗೆ ಬಳಕೆಗೆ ತಂದವರು ಬಸವಾದಿ ಶರಣರು, ದಾಸೋಹ ವ್ಯಕ್ತಿಯ ವೈಯಕ್ತಿಕ ಉದ್ಧಾರವಷ್ಟೇ ಅಲ್ಲ, ಸಮಾಜದ ಸರ್ವಾಂಗೀಣ ಉದ್ಧಾರವನ್ನೂ ಒಳಗೊಂಡಿದೆ ಎಂಬುದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ವಿವರಣೆ.

ಭಾರತದಲ್ಲಿ ಐದು ಸಾವಿರ ವರ್ಷಗಳಿಂದ ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ಧತಿ ಇದೆ. ಈ ಪದ್ಧತಿಯನ್ನು ಹೊಡೆದು ಹಾಕಲು ಮೊಟ್ಟಮೊದಲು ಪ್ರಯತ್ನಿಸಿದವನು ಬುದ್ಧ. ಬುದ್ಧನ ತರುವಾಯ ಮತ್ತೆ ಅಂಥ ಪ್ರಯತ್ನ ನಡೆದದ್ದು ಬಸವಣ್ಣನವರ ಕಾಲದಲ್ಲಿ. ಬಸವಣ್ಣನವರು ಬುದ್ಧನಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿಲೋಮ ಪದ್ಧತಿಯ ವಿವಾಹ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಅಸ್ಪೃಶ್ಯತೆಯ ಮೂಲೋಚ್ಛಾಟನೆಗೆ ಪ್ರಯತ್ನಿಸಿದರು ಎಂಬ ಅಂಶವನ್ನು “ಅಸ್ಪೃಶ್ಯತೆಯ ನಿರ್ಮೂಲನ: ಶರಣರ ಕಾರ್ಯವಿಧಾನ” ಲೇಖನದಲ್ಲಿ ಕಾಣಬಹುದು.

“ಪ್ರಕ್ಷಿಪ್ತ ವಚನಕಾರರು” ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ಆಳವಾದ ಅಧ್ಯಯನದ ಪರಿಶ್ರಮದ ಫಲವಾಗಿ ಮೂಡಿಬಂದ ಲೇಖನ. 110 ಕ್ಕೂ ಪ್ರಕ್ಷಿಪ್ತ ವಚನಕಾರರನ್ನು ಶೋಧಿಸಿದ ಕೀರ್ತಿ ಅವರದು.

ಡಾ. ಎಮ್.‌ ಎಮ್.‌ ಕಲಬುರ್ಗಿ ಅವರಿಗೆ ಯಾವುದೋ ಶಾಸನದ ಒಂದು ಶಬ್ದ, ಯಾವುದೋ ಕಾವ್ಯದ ಒಂದು ಚರಣ ಸಿಕ್ಕರೆ ಸಾಕು! ಒಂದು ಸಂಶೋಧನ ಲೇಖನ ಬರೆಯುವಷ್ಟರ ಮಟ್ಟಿಗೆ ಅವರ ಅಧ್ಯಯನದ ವ್ಯಾಪ್ತಿ ಹರವು ಪಡೆದಿತ್ತು. 15 ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ಹುಟ್ಟಿಕೊಂಡ ವಿರಕ್ತ ಪರಂಪರೆ ಐದು ಕವಲುಗಳಾಗಿ ಬೆಳೆದು ನಿಂತಿತು. ಅವುಗಳಲ್ಲಿ “ಚೀಲಾಳ ಸಮಯ” ವೂ ಕೂಡ ಒಂದು. ಡಂಬಳ ತೋಂಟದಾರ್ಯ ಸಂಸ್ಥಾನಮಠಕ್ಕೆ ಸಂಬಂಧಿಸಿದ “ಚೀಲಾಳ ಸ್ವಾಮಿ”ಯ ಕುರಿತಾದ ಒಂದು ಪದ್ಯ ವೀರಶೈವಾಮೃತ ಮಹಾ ಪುರಾಣದಲ್ಲಿತ್ತು. ಈ ಪದ್ಯವನ್ನು ಆಧರಿಸಿ ಚೀಲಾಳ ಸಮಯದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನವನ್ನು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಮಾಡಿದ್ದಾರೆ.

ಬಸವಾದಿ ಶಿವಶರಣರು ಉಭಯಪ್ರಧಾನ ಕುಟುಂಬಕ್ಕೆ ತುಂಬ ಮಹತ್ವ ಕೊಟ್ಟರು. ಕಾಲ-ದೇಶಗಳ ಪರಿಸ್ಥಿತಿಗನುಗುಣವಾಗಿ ಸ್ತ್ರೀವರ್ಗ ಇಲ್ಲವೇ ಪುರುಷವರ್ಗಗಳು ಸಮಾಜದಲ್ಲಿ ಪ್ರಧಾನ, ಅಪ್ರಧಾನ ಮತ್ತು ಸಮಾನ ಸ್ಥಾನಮಾನಗಳನ್ನು ಪಡೆಯುತ್ತವೆ. ಇವುಗಳನ್ನೇ ಸಮಾಜಶಾಸ್ತ್ರಜ್ಞರು ಪುರುಷ ಪ್ರಧಾನವಾಗಿ ಸ್ತ್ರೀ ಅಪ್ರಧಾನಳಾಗಿದ್ದರೆ, “ಪಿತೃಪ್ರಧಾನ ಕುಟುಂಬಪದ್ಧತಿ” ಯೆಂದು, ಸ್ತ್ರೀ ಪ್ರಧಾನಳಾಗಿ ಪುರುಷ ಅಪ್ರಧಾನವಾಗಿದ್ದರೆ “ಮಾತೃಪ್ರಧಾನ ಕುಟುಂಬ ಪದ್ಧತಿ” ಯೆಂದು, ಸ್ತ್ರೀಪುರುಷರಿಬ್ಬರೂ ಪ್ರಧಾನರಾಗಿದ್ದರೆ “ಉಭಯ ಪ್ರಧಾನ ಕುಟುಂಬಪದ್ಧತಿ” ಎಂದು ಹೆಸರಿಟ್ಟು ಕರೆಯುತ್ತಾರೆ.

ದ್ರಾವಿಡ ಮೂಲಕ್ಕೆ ಸೇರಿದ ಕರ್ನಾಟಕದಲ್ಲಿ ಮೂಲತಃ “ಮಾತೃಪ್ರಧಾನ ಕುಟುಂಬ ಪದ್ಧತಿ” ರೂಢಿಯಲ್ಲಿದ್ದಿತೆಂದು ವಿದ್ವಾಂಸರ ಅಭಿಮತ. ಶಾತವಾಹನರು ಗೌತಮೀಪುತ್ರಶಾತಕರ್ಣಿ ಇತ್ಯಾದಿಯಾಗಿ ತಾಯಿಯ ಹೆಸರಿನಿಂದ ಕರೆದುಕೊಂಡುದು, ಪ್ರಾಚೀನ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಅಸ್ತಿತ್ವದಲ್ಲಿದ್ದುದು, ಇಂದಿಗೂ ಈ ದೇಶದಲ್ಲಿ ಮಾತೃದೇವತೆಗೆ ಪ್ರಾಧಾನ್ಯತೆ ಇದ್ದುದು ಈ ಅಭಿಪ್ರಾಯವನ್ನು ಬೆಂಬಲಿಸುತ್ತವೆ. ಆದರೆ ಆರ್ಯರ “ಪಿತೃಪ್ರಧಾನ ಕುಟುಂಬಪದ್ಧತಿ” ಈ ಪ್ರಾಂತವನ್ನು ಪ್ರವೇಶಿಸುತ್ತಲೇ ಸ್ತ್ರೀ ಪ್ರಾಪಂಚಿಕವಾಗಿ ಪಾರಮಾರ್ಥಿಕವಾಗಿ ಅಪ್ರಧಾನಳಾದಳು.

ವ್ಯಕ್ತಿಯನ್ನು ಪ್ರಾಪಂಚಿಕವಾಗಿ ಅಪ್ರಧಾನಗೊಳಿಸುವುದು ಆರ್ಥಿಕ ವ್ಯವಸ್ಥೆ ಹಾಗೂ ಪಾರಮಾರ್ಥಿಕವಾಗಿ ಅಪ್ರಧಾನಗೊಳಿಸುವುದು ಧಾರ್ಮಿಕ ವ್ಯವಸ್ಥೆ, ಈ ವ್ಯವಸ್ಥೆಗಳ ಬಲದಿಂದ ಪುರುಷ ಮಹಿಳೆಯನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಅಪ್ರಧಾನಗೊಳಿಸಿ, ಅಸಹಾಯಕಗೊಳಿಸಿ ಇತಿಹಾಸದುದ್ದಕ್ಕೂ ಅವಳನ್ನು ಶೋಷಣೆಯ ವಸ್ತುವನ್ನಾಗಿಸಿಕೊಳ್ಳುತ್ತ ಬಂದಿರುವದು.

ಈ ದೇಶದಲ್ಲಿ ಸ್ತ್ರೀ ಗೌರವವೆನ್ನುವುದು ಕೆಲವು ಸಲ “ಎಲ್ಲಿ ಸ್ತ್ರೀಯರು ಪೂಜೆಗೊಳ್ಳುತ್ತಾರೋ ಅಲ್ಲಿ ದೇವತೆಗಳು ಸುಪ್ರೀತರಾಗುತ್ತಾರೆ” ಎಂಬಂತೆ ಕೇವಲ ಬಾಯಿಮಾತಿನ ಘೋಷಣೆಯಾಗಿದ್ದಿತು. ಅಥವಾ ಹೆಂಡತಿಯ ಕೈಯಿಂದ ಗಂಡನೇ  ದಾನಧರ್ಮ ಮಾಡಿಸುವಂತೆ ತೋರಿಕೆಯಾಗಿದ್ದಿತು. ಇನ್ನು ಕೆಲವು ಸಲ ಆಡಳಿತ  ಇತ್ಯಾದಿ ಕ್ಷೇತ್ರಗಳಲ್ಲಿ ಮಹಿಳೆ ಚಟುವಟಿಕೆ ತೋರಿಸುತ್ತಿದ್ದರೂ ಅದು ಕೇವಲ ಪ್ರಾಪಂಚಿಕಕ್ಕೆ ಸೀಮಿತವಾಗಿದ್ದಿತು. ಶರಣರು ಮಾತ್ರ ಪ್ರಾಪಂಚಿಕ ಸ್ಥರ ಮತ್ತು ಪಾರಮಾರ್ಥಿಕ ಸ್ಥರಗಳೆರಡರಲ್ಲಿಯೂ ಅವಳಿಗೆ ಪುರುಷ ಸಮಾನ ಸ್ಥಾನವನ್ನು ದೊರಕಿಸಿ ಕೊಟ್ಟ ಕಾರಣ ಕರ್ನಾಟಕದಲ್ಲಿ ಏಕೆ, ಸಮಗ್ರ ಭಾರತದಲ್ಲಿಯೇ ಶರಣರದು ಸ್ತ್ರೀ ಸ್ವಾತಂತ್ರ್ಯದ ಪ್ರಥಮ ಚಳುವಳಿ ಎನಿಸಿಕೊಳ್ಳುತ್ತದೆ.

ಲಿಂಗಾಯತ ಧರ್ಮ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಸ್ತರಗಳಲ್ಲಿ ಪುರುಷನಷ್ಟೇ ಸ್ತ್ರೀಯರಿಗೆ ಅವಕಾಶ ನೀಡಿ “ಉಭಯಪ್ರಧಾನ ಕುಟುಂಬಪದ್ಧತಿ” ಯನ್ನು ಅನುಮೋದಿಸುತ್ತ ಅವರು ವೈಚಾರಿಕ ದಂಪತಿಗಳಾಗಿ, ಶರಣಸತಿ-ಲಿಂಗವತಿ ಭಾವದಿಂದ ಬದುಕುವುದನ್ನು ಬಯಸುತ್ತದೆ ಎಂದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು “ಶರಣರು ಕಟ್ಟಬಯಸಿದ ಸ್ತ್ರೀ ಸಮಾಜ” ಎಂಬ ಲೇಖನದಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.

“ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾಲಯ” ಮತ್ತು “ಸಿದ್ಧರಾಮಪುರಾಣ ಮತ್ತು ಸೊಲ್ಲಾಪುರದ ಅವಶೇಷಗಳು” ಎರಡು ಲೇಖನಗಳು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಕ್ಷೇತ್ರಕಾರ್ಯ ಮಾಡಿ ಬರೆದ ಅಪರೂಪದ ಬರಹಗಳು.  ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದ ಮಾದರಿಯಲ್ಲಿಯೇ ರಚನೆಗೊಂಡ ಈ ದೇವಾಲಯವನ್ನು ಸಿದ್ಧರಾಮೇಶ್ವರರು ಕಟ್ಟಿಸಿದರೆಂಬ ಇತಿಹಾಸವಿದೆ. ಈ ವಿಷಯವನ್ನು ಶಾಸನ-ಕ್ಷೇತ್ರಕಾರ್ಯದ ಮೂಲಕ ಸಿದ್ಧಗೊಳಿಸಿದ್ದಾರೆ.

“ಪುಲಿಗೆರೆಯ ಸೋಮೇಶ್ವರ” ಎಂಬ ಲೇಖನದಲ್ಲಿ ಜೈನಬಸದಿಗಳು ಆಕ್ರಮಣದ ಪರಿಣಾಮವಾಗಿ ಶೈವ ದೇವಾಲಯಗಳಾಗಿ ಸಾಂಸ್ಕೃತಿಕ ಪಲ್ಲಟಗೊಂಡ ಇತಿಹಾಸವನ್ನು ತಿಳಿಸುತ್ತಾರೆ. “ಶರಣ ಗೋವೆಯ ವಜ್ರರಾಯ” ಮತ್ತು “ಚಾಮರಸನ ಪರಿಸರ ಮತ್ತು ಚರಿತ್ರೆ” ಈ ಎರಡೂ ಲೇಖನಗಳು ಕ್ಷೇತ್ರಕಾರ್ಯದ ಅಧ್ಯಯನದ ಫಲಗಳಾಗಿವೆ.

12 ನೇ ಶತಮಾನದ ಶರಣರು ಅಚ್ಚಕನ್ನಡದಲ್ಲಿ ವಚನಗಳನ್ನು ಬರೆದರು. 15 ನೇ ಶತಮಾನದ ಹೊತ್ತಿಗೆ ವಚನಗಳು ಬೇರೆ ಭಾಷೆಗೆ ಅನುವಾದವಾಗತೊಡಗಿದವು.  ಮಗ್ಗೆಯ ಮಾಯಿದೇವರು ಪ್ರಭುದೇವರ ವಚನಗಳನ್ನು ಸಂಸ್ಕೃತ ಭಾಷೆಗೆ ಅನುವಾದಿಸಿರುವುದು ವಿಶೇಷ. “ಪ್ರಭಗೀತೆ” ಹೆಸರಿನ ಒಂದೇ ಒಂದು ಹಸ್ತಪ್ರತಿ ಕರ್ನಾಟಕದಲ್ಲಿ ಲಭ್ಯವಾಗಿತ್ತು. ಈ ಹಸ್ತಪ್ರತಿಯನ್ನು ಗಮನಿಸಿ “ಪ್ರಭುಗೀತಿಯ ಹಸ್ತಪ್ರತಿ” ಎಂಬ ಲೇಖನ ಬರೆದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಮೊದಲ ಬಾರಿಗೆ ಗಮನ ಸೆಳೆದರು. ಇವರ ಲೇಖನವನ್ನು ಆಧರಿಸಿ ಡಾ. ಸಿ. ಮಹಾದೇವಪ್ಪನವರು ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಸಂಪಾದಿಸಿ “ಪ್ರಭುಗೀತೆ” ಕೃತಿಯನ್ನು ಇತ್ತೀಚೆಗೆ ಪ್ರಕಟಿಸಿದರು.

850 ವರ್ಷಗಳ ಇತಿಹಾಸ ಇತಿಹಾಸವಿರುವ ಲಿಂಗಾಯತ ಸಾಹಿತ್ಯದ ಮೊದಲ ಪೈರು ವಚನಸಾಹಿತ್ಯ. ಲಿಂಗಾಯತರ ಮನಸ್ಸಿನ ಭಾವಕೋಶದ ಭಾಷಿಕ ಬೆಳವಣಿಗೆಯಾದ ವಚನಸಾಹಿತ್ಯವನ್ನು ಹರಿಹರ-ರಾಘವಾಂಕಾದಿಗಳು ಸಾಹಿತ್ಯಿಕ ವ್ಯಾಖ್ಯಾನಕ್ಕೆ ಬಳಸಿದರೆ, 15 ನೆಯ ಶತಮಾನದಲ್ಲಿ ಮಹಾಲಿಂಗದೇವ, ಶಿವಗಣ ಪ್ರಸಾದಿ ಮಹಾದೇವಯ್ಯ ಮೊದಲಾದವರು ತಾತ್ವಿಕ, ಆನುಭಾವಿಕ ನೆಲೆಯಲ್ಲಿ ದಾರ್ಶನಿಕ ವ್ಯಾಖ್ಯಾನ ರೂಪ ಕೊಡುವ ಕೆಲಸ ಮಾಡಿದರು. ಕವಿಹೃದಯದವರು ವಚನಗಳಲ್ಲಿ ಸೌಂದರ್ಯ ಉಪಾಸನೆಗೈದು ಪುಷ್ಪರಾಶಿ ಸಂಗ್ರಹಿಸಿದರೆ, ಚಿಂತಕರು, ಅನುಭಾವಿಗಳು ತತ್ವೋಪಾಸಕರಾಗಿ ವಚನಗಳಲ್ಲಿ ಬೀಜಕೋಶಗಳನ್ನು ಗುರುತಿಸುವ ಕೆಲಸ ಮಾಡಿದರು. ಹೀಗಾಗಿ ವಚನಸಾಹಿತ್ಯವನ್ನು “ಲಿಂಗಾಯತ ಸೃಜನಸಾಹಿತ್ಯ” ಮತ್ತು “ಲಿಂಗಾಯತ ಸಂಪಾದನ ಸಾಹಿತ್ಯ” ಎಂಬ ಎರಡು ಭಾಗಗಳಲ್ಲಿ ಗುರುತಿಸುತ್ತ ಬರಲಾಯಿತು.

ಹರಿಹರ ರಾಘವಾಂಕ, ಭೀಮಕವಿಗಳ ಕಾಲಾನಂತರ ವಚನಸಾಹಿತ್ಯ ಗುಪ್ತಗಾಮಿನಿಯಾಯಿತು. ಒಂದು ರೀತಿಯ ಅಲಕ್ಷ್ಯಕ್ಕೆ ಗುರಿಯಾಯಿತು. ಅಷ್ಟರಲ್ಲಿ ಕರ್ನಾಟಕದ ಮೇಲೆ ಮುಸಲ್ಮಾನರ ದಾಳಿ ಆರಂಭವಾಗಿತ್ತು. ಇಂಥ ಸಂಕ್ರಮಣ ಸ್ಥಿತಿಯಲ್ಲಿ ಪ್ರೌಢದೇವರಾಯ ವಿಜಯನಗರದ ಗದ್ದುಗೆಯನ್ನು ಏರಿದ. ಎರಡನೆಯ ಕಲ್ಯಾಣವೆನಿಸಿದ್ದ ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ವಚನ ಸಾಹಿತ್ಯದ ಸಂಗ್ರಹ-ಸಂಪಾದನ-ಸಂಕಲನ ಈ ಮೂರೂ ಆಯಾಮಗಳಲ್ಲಿ ಸಂರಕ್ಷಿಸುವ ಕಾರ್ಯ ಆರಂಭವಾಯಿತು. ವಚನಸಾಹಿತ್ಯವನ್ನು ಶೋಧಿಸುವ, ಸಂಗ್ರಹಿಸುವ, ಟೀಕಿ-ಟಿಪ್ಪಣಿ ಬರೆವ, ಓದುವ, ವ್ಯಾಖ್ಯಾನಿಸುವ ಕಾರ್ಯಗಳು ಭರದಿಂದ ನಡೆದವು.  ಇವುಗಳ ಸಮಗ್ರ ವಿವರಣೆ “ವಚನಗಳ ಸಂಗ್ರಹ-ಸಂಕಲನ-ಸಂಪಾದನ” ಎಂಬ ಲೇಖನದಲ್ಲಿದೆ.

ಶೂನ್ಯಸಂಪಾದನೆ ಕುರಿತು ಈವರೆಗಿನ ನಮ್ಮ ವಿದ್ವಾಂಸರ ಬರೆಹಗಳು ಕೇವಲ ಪರಿಚಯಾತ್ಮಕವಾಗಿದ್ದವು. ಶೂನ್ಯಸಂಪಾದನೆಯ ಕಾಲ, ಅದರ ವಿಷಯ ಮತ್ತು ಔಚಿತ್ಯ ಕುರಿತು “ಶೂನ್ಯಸಂಪಾದನೆ: ಇನ್ನಷ್ಟು ವಿಚಾರಗಳು” ಲೇಖನದಲ್ಲಿ ಚರ್ಚಿಸಿದ್ದಾರೆ.

“ತೋಂಟದ ಸಿದ್ಧಲಿಂಗಯತಿಗಳ ಕಾಲ” “ತೋಂಟದ ಸಿದ್ಧೇಶ್ವರನ ಭಾವರತ್ನಾಭರಣಸ್ತೋತ್ರ” “ಅಬ್ಬಲೂರು ಚರಿತೆ: ಒಂದು ಲಘುಪುರಾಣ” “ಬಸವಣ್ಣನವರ ಷಟ್ಸಸ್ಥಲ ವಚನವ್ಯಾಖ್ಯಾನದ ಕರ್ತೃ” “ಸೋಮಶೇಖರ ಶಿವಯೋಗಿಯ ಕಾಲವಿಚಾರ” ಈ ಐದೂ ಲೇಖನಗಳು ಕಾಲ-ಕರ್ತೃ-ಕೃತಿಗಳ ವಿಷಯವಾಗಿ ನಡೆಸಿದ ಶೋಧಗಳಾಗಿವೆ.

ಕನ್ನಡಿಗರಿಗೆ ಚಾರಿತ್ರಿಕ ಪ್ರಜ್ಞೆ ಕಡಿಮೆ. ಹೀಗಿದ್ದೂ ನಮ್ಮ ಪ್ರಾಚೀನ ಕವಿಗಳು ಆಗಾಗ ದೊಡ್ಡ ದೊಡ್ಡ ಅರಸುಮನೆತನಗಳ ಇತಿಹಾಸವನ್ನು ಮಾತ್ರ ಸಾಹಿತ್ಯದಲ್ಲಿ ದಾಖಲಿಸುತ್ತ ಬಂದ ಕಾರಣ, ಸಣ್ಣ ಸಣ್ಣ ಅರಸುಮನೆತನಗಳು ಅವರ ಅಲಕ್ಷ್ಯಕ್ಕೆ ಗುರಿಯಾದವು. ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಮೊದಲು ಪಾಶ್ಚಿಮಾತ್ಯ ರಾಜಕೀಯ ಇತಿಹಾಸ, ಆಮೇಲೆ ಮೌರ್ಯ ಗುಪ್ತರಂಥ ಔತ್ತರೇಯ ದೊಡ್ಡ ಮನೆತನಗಳ ಇತಿಹಾಸ, ಬಳಿಕ ಕದಂಬ, ಚಾಲುಕ್ಯರಂಥ ದಾಕ್ಷಿಣಾತ್ಯ ದೊಡ್ಡ ಮನೆತನಗಳ ಇತಿಹಾಸಗಳು ವಿಜೃಂಭಿಸದವು. ಮತ್ತು ಇವು ಬಹುಪುಟಗಳನ್ನು ಆಕ್ರಮಿಸಿ, ಸಣ್ಣ ಅರಸು ಮನೆತನಗಳನ್ನು ಇತಿಹಾಸ ಕೃತಿಗಳಿಂದ ಹೊರದೂಡಿದವು. ಈ ವಿಷಯವಾಗಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಆಲೋಚಿಸಿ, ಕರ್ನಾಟಕದ “ಲಿಂಗಾಯತ ಅರಸು ಮನೆತನಗಳ” ಚರಿತ್ರೆಯನ್ನು ಮೊಟ್ಟಮೊದಲು ಕಟ್ಟಿಕೊಟ್ಟರು. 25 ಕ್ಕೂ ಹೆಚ್ಚು ರಾಜಮನೆತನಗಳ ಚರಿತ್ರೆಯನ್ನು ಅವರು ತಿಳಿಸಿಕೊಟ್ಟಿದ್ದಾರೆ.

ವಚನಗಳನ್ನು ಈ ವರೆಗೆ ಕನ್ನಡದಲ್ಲಿ ಹಸ್ತಪ್ರತಿಗಳನ್ನಿಟ್ಟುಕೊಂಡು ವಿದ್ವಾಂಸರು ಪರಿಷ್ಕರಣ ಕಾರ್ಯವನ್ನು ಪೂರೈಸಿದುದುಂಟು. ಆದರೆ ಕಾವ್ಯ ಸಾಹಿತ್ಯ ವಿಷಯವಾಗಿ ಮಾಡುವುದು ಸುಲಭ; ವಚನಸಾಹಿತ್ಯ ವಿಷಯವಾಗಿ ಮಾಡುವುದು ಕಠಿಣ. ಏಕೆಂದರೆ ಕಾವ್ಯಸಾಹಿತ್ಯದಲ್ಲಿ ಪಾಠಾಂತರಗಳು ವಿರಳ ಮತ್ತು ವ್ಯವಸ್ಥಿತ; ವಚನ ಪಾಠಗಳು ಲೋಪ, ಆಗಮ, ಆದೇಶ ಕಾರಣವಾಗಿ ಸಂಕ್ಷಿಪ್ತ, ವಿಸ್ತಾರ, ಪಲ್ಲಟ ಇತ್ಯಾದಿ “ರೂಪ” ಗಳಲ್ಲಿ ಸಿಗುತ್ತವೆ. ಹೀಗಾಗಿ ಇವುಗಳಲ್ಲಿ ವಚನ “ರೂಪ” ವನ್ನು ಮೊದಲು ಒಪ್ಪಿಕೊಂಡು, ಅದರಲ್ಲಿಯೇ ಪಾಠಶುದ್ಧಿ ಮಾಡಬೇಕಾಗುತ್ತದೆ. ಆದ್ದರಿಂದ ವಚನ ರೂಪಕ್ಕೂ ಧಕ್ಕೆ ಬರದಂತೆ, ಜೊತೆಗೆ ಲಿಂಗಾಯತ ತತ್ವಕ್ಕೂ ಚ್ಯುತಿ ಬರದಂತೆ, ಗ್ರಂಥಸಂಪಾದನ ಶಾಸ್ತ್ರಕ್ಕೂ ಭಂಗ ಬರದಂತೆ, ಈ ತ್ರಿಶೂಲ ಸಾಕ್ಷಿಯಾಗಿ ವಚನಗಳ ಪರಿಷ್ಕರಣ ಕಾರ್ಯ ಮಾಡಬೇಕೆಂಬುದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ಆಶಯ. ಈ ವಿಷಯವನ್ನು “ವಚನ ಪರಿಷ್ಕರಣ” ಲೇಖನದಲ್ಲಿ ಚರ್ಚಿಸಿದ್ದಾರೆ. ಇದೇ ದಾರಿಯಲ್ಲಿ “ವಚನಸಾಹಿತ್ಯ: ಸಂಪಾದನೆಯ ವಿಧಾನ-ಇತಿಹಾಸ” ಎಂಬ ಬರಹವನ್ನು ಗಮನಿಸಬಹುದು.

“ವಚನಸಾಹಿತ್ಯ ಪ್ರಕಟನೆಯ ಇತಿಹಾಸ” ಈ ವಿಷಯವಾಗಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ತೋಂಟದಾರ್ಯಮಠದಲ್ಲಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು.  ನೂರು ವರುಷಗಳ ಕಾಲಾವಧಿಯಲ್ಲಿ ವಚನ ಸಾಹಿತ್ಯ ಪ್ರಕಟವಾಗುತ್ತ ಬಂದ ಘಟ್ಟಗಳನ್ನು ಗುರುತಿಸುತ್ತ, ಆಯಾ ಘಟ್ಟಗಳಲ್ಲಿ ಜರುಗಿದ ಸಂಪಾದನ ಕೆಲಸದ ಸಾಧನೆ-ಮಿತಿಗಳನ್ನು ಡಾ. ಎಮ್.‌ ಎಮ್.‌ ಕಲಬುರ್ಗಿ ತಿಳಿಸುತ್ತಾರೆ. ಇಲ್ಲಿ ಪ್ರಮುಖವಾಗಿ ನಾಲ್ಕು ಘಟ್ಟಗಳನ್ನಾಗಿ ಮಾಡಿಕೊಂಡಿದ್ದಾರೆ.

  1. ಆರಂಭದ ಘಟ್ಟ: ಬಳ್ಳಾರಿ ಶೆಟ್ಟರ ಅವಧಿಯಲ್ಲಿ ಆದ ಬಿಡಿ ಬಿಡಿ ಪ್ರಕಟನೆಗಳು,
  2. ಎರಡನೆಯ ಘಟ್ಟ: ಡಾ. ಫ. ಗು. ಹಳಕಟ್ಟಿಯವರ ಶಿವಾನುಭವ ಗ್ರಂಥಮಾಲೆ,
  3. ಮೂರನೆಯ ಘಟ್ಟ: ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್. ಸಿ. ಹಿರೇಮಠರ ಸಾಂಘಿಕ ಪ್ರಯತ್ನ.
  4. ನಾಲ್ಕನೆಯ ಘಟ್ಟ: ತೋಂಟದಾರ್ಯಮಠದ “ಲಿಂಗಾಯತ ಅಧ್ಯಯನ ಸಂಸ್ಥೆ”

ಎಂಬ ನಾಲ್ಕು ಘಟ್ಟಗಳಲ್ಲಿ ಪ್ರಕಟವಾದ ವಚನಸಾಹಿತ್ಯದ ಇತಿಹಾಸವನ್ನು ಕಣ್ಣು ಮುಂದೆ ತಂದು ನಿಲ್ಲಿಸಿದ್ದಾರೆ.

ಜರ್ಮನ್ ದೇಶದಿಂದ ಬಂದ ಕಿಟೆಲ್ಲರು “ಶಬ್ದಕೋಶ”ದ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಅವರು ಕನ್ನಡ ಸಾಹಿತ್ಯ ಚರಿತ್ರೆಗೆ ಕೊಟ್ಟ ಅಮೂಲ್ಯ ಕಾಣಿಕೆಯನ್ನು “ಕನ್ನಡ ಸಾಹಿತ್ಯಚರಿತ್ರೆಗೆ ಕಿಟೆಲ್ಲರ ಕೊಡುಗೆ” ಎಂಬ ಲೇಖನದಲ್ಲಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ತುಂಬ ಸುಂದರವಾಗಿ ಚಿತ್ರಿಸಿದ್ದಾರೆ.

ಹೀಗೆ 71 ಲೇಖನಗಳು ಸಾಹಿತ್ಯಕ್ಕೆ ಸಂಬಂಧಿಸಿವೆ. ಈ ಮೂಲಕ ಪ್ರಾಚೀನ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಪ್ರಮುಖ ಕೃತಿಗಳ ಕಾಲನಿರ್ಣಯ, ಕರ್ತೃ ನಿರ್ಣಯ, ಅನುಪಲಬ್ಧ ಕೃತಿಗಳ ಶೋಧ ಮೊದಲಾದ ಘಟ್ಟಗಳಲ್ಲಿ ಈ ಎಲ್ಲ ಲೇಖನಗಳು ಬೆಳಕುಕಂಡಿವೆ.

ಈ ಸಂಪುಟದ ಎರಡನೆಯ ಭಾಗ “ಗ್ರಂಥಸಂಪಾದನ ಮಾರ್ಗ” ದಲ್ಲಿ ಗಾತ್ರದಲ್ಲಿ ಕಿರು ಕೃತಿಗಳಾದ “ರನ್ನ ನಿಘಂಟು” “ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ಮುದ್ರಿಕೆಯ ವಚನಗಳು” “ನೂರೊಂದು ವಿರಕ್ತರ ಸ್ತೋತ್ರ” ಮತ್ತು “ಸಿದ್ಧನಂಜೇಶನ ಬಸವಶತಕ” ದ ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. “ಬಸವ ಶತಕ” ಅಪೂರ್ಣವಾಗಿ ಇಲ್ಲಿ ಪ್ರಕಟವಾಗಿತ್ತು. ಸಿದ್ಧನಂಜೇಶನ ಮೇಲೆ ಪಿಎಚ್.ಡಿ. ಮಾಡಿದ ಸಾರಾಪುರೆ ಅವರಿಗೂ ಈ ಕೃತಿಯ ಪೂರ್ಣಪ್ರತಿ ದೊರೆತಿರಲಿಲ್ಲ. ಆದರೆ ಇತ್ತೀಚೆ ಎಸ್. ಶಿವಣ್ಣ ಅವರು ಈ ಕೃತಿಯನ್ನು ಶೋಧಿಸಿ ತೋಂಟದಾರ್ಯಮಠದಿಂದ ಪ್ರಕಟಿಸಿದ್ದಾರೆ.

ಈ ಸಂಪುಟದ ಮೂರನೆಯ ಭಾಗ “ವಿಮರ್ಶಾ ಮಾರ್ಗ”. ಇದರಲ್ಲಿ ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ವಿಮರ್ಶಾ ದೃಷ್ಟಿಯ ಲೇಖನಗಳಿವೆ. ವ್ಯಾಖ್ಯಾನಾತ್ಮಕ-ವಿಶ್ಲೇಷಣಾತ್ಮಕ ಬರಹಗಳು ಇಲ್ಲಿವೆ. ಇಂದು ವಿಮರ್ಶೆ ಮತ್ತು ಸಂಶೋಧನೆ ಒಂದಕ್ಕೊಂದು ಪೂರಕವೆಂಬಂತೆ ಬೆಳೆಯುತ್ತವೆ. ಈ ಕುರಿತು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರು ಹೇಳುವ ಮಾತುಗಳು ಮೌಲಿಕವಾಗಿವೆ:

“ವಿಶ್ಲೇಷಣಮುಖಿ” ಸಂಶೋಧನೆಯ ಮೂಲಕ ಚರಿತ್ರೆಯ ಶೋಧ (Fact finding) ಪೂರೈಸಿದ ಬಳಿಕ, ಅದನ್ನು “ವ್ಯಾಖ್ಯಾನಮುಖಿ” ಸಂಶೋಧನೆಗೆ ಗುರಿಪಡಿಸಿ, ಅದರ ಹಿಂದಿರುವ ಸತ್ಯಶೋಧ (Truth finding) ಕೆಲಸ ಮಾಡುವಲ್ಲಿ ಸಂಶೋಧನೆಯು ವಿಮರ್ಶೆಯ ಹಾದಿ ಹಿಡಿಯುತ್ತದೆ. ಅದಕ್ಕಾಗಿಯೇ “ಸಂಶೋಧನೆಯೆನ್ನುವುದು ವಿಶ್ಲೇಷಣಾತ್ಮಕ ವಿಮರ್ಶೆ, ವಿಮರ್ಶೆಯೆನ್ನುವುದು ವ್ಯಾಖ್ಯಾನಾತ್ಮಕ ಸಂಶೋಧನೆ” ಎನ್ನುವುದು. ಅಂದರೆ ಇವೆರಡೂ ಒಂದೇ ಮೂಲದಲ್ಲಿ ಹುಟ್ಟುತ್ತಿದ್ದರೂ ಸಂಶೋಧನೆಯು ಒಂದು ಹಂತದಲ್ಲಿ ನಿಂತು ಬಿಟ್ಟರೆ, ವಿಮರ್ಶೆಯು ನಿಲ್ಲದೆ ಮುನ್ನಡೆಯುತ್ತದೆ. ಏಕೆಂದರೆ ವಿಮರ್ಶಕರ ವಿಭಿನ್ನ ಅಭ್ಯಾಸ, ಧೋರಣೆಗಳಿಗೆ ತಕ್ಕಂತೆ ಅದು ಹೊಸ ಹೊಸ ನೆಲೆಗಳಲ್ಲಿ ಬಿಚ್ಚುತ್ತಲೇ ಹೋಗುತ್ತದೆ. ನನ್ನ ಅನೇಕ ಲೇಖನಗಳು ಸಂಶೋಧನೆಯಾಗುತ್ತಲೇ ವಿಮರ್ಶೆಯಾಗಿ ಬೆಳೆದುದನ್ನು ಇಲ್ಲಿ ನೆನೆಯಬಹುದಾಗಿದೆ.”

ಮೇಲಿನ ಮಾತುಗಳಿಗೆ ಪೂರಕವೆಂಬಂತೆ ಡಾ. ಎಮ್.‌ ಎಮ್.‌ ಕಲಬುರ್ಗಿಯವರ “ಪಂಪಯುಗದವ್ಯಾಪ್ತಿ: ಒಂದು ವಿವೇಚನೆ” “ವೀರಶೈವಯುಗದ ವ್ಯಾಪ್ತಿ” “ಕನ್ನಡ ಸಾಹಿತ್ಯದಲ್ಲಿ ಬ್ರಾಹ್ಮಣಯುಗ” “ಹರಿಹರನ ಸಾಹಿತ್ಯದಲ್ಲಿ ಹೋರಾಟದ ಧ್ವನಿಗಳು”  “ಬಸವರಾಜದೇವರ ರಗಳೆಯಲ್ಲಿ ಬಸವಮೌಲ್ಯ ಪ್ರತಿಪಾದನೆ” “ಬಸವಪುರಾಣದ ಪ್ರಭಾವಪರಂಪರೆ” ಮೊದಲಾದ ಲೇಖನಗಳನ್ನು ಗಮನಿಸಬೇಕು.

ನಡುಗನ್ನಡದ ಪ್ರಮುಖ ಕಾವ್ಯಗಳಾದ ಪ್ರಭುಲಿಂಗಲೀಲೆ, ಕುಮಾರವ್ಯಾಸ ಭಾರತ, ವೀರಶೈವ ಚಂಪೂಕಾವ್ಯ, ದಾಸಸಾಹಿತ್ಯ ಕುರಿತು ವಿಚಾರಪ್ರಚೋದಕ ಲೇಖನಗಳನ್ನು ಬರೆದಿದ್ದಾರೆ. ಪಂಪನ ಆದಿಪುರಾಣ ಮತ್ತು ಪ್ರಭುಲಿಂಗಲೀಲೆ ತೌಲನಿಕವಾಗಿ ನೋಡುವ ಅವರ ದೃಷ್ಟಿ ವಿನೂತನವಾಗಿದೆ.

“ಕನ್ನಡಿಗರ ಮಾತೃಭಾಷಾಪ್ರಜ್ಞೆಯ ಇತಿಹಾಸ” ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ನಿಷ್ಠುರ ವಿಮರ್ಶೆ ಮತ್ತು ಸಂಶೋಧನೆಗೆ ಸಾಕ್ಷಿಯಾದ ತುಂಬ ಗಟ್ಟಿಯಾದ ಲೇಖನವೆನ್ನಬೇಕು.  ಬ್ರಾಹ್ಮಣ ಸಮುದಾಯದವರು ಕನ್ನಡ ಭಾಷೆಯನ್ನು ಬಳಸಿದ ರೀತಿಯನ್ನು ಅವರು ಹೀಗೆ ವಿವರಿಸುತ್ತಾರೆ: “ಮಾಧ್ವರು 15 ನೇ ಶತಮಾನದ ಸುಮಾರಿಗೆ ಕನ್ನಡಕ್ಕೆ ಸ್ಪೃಶ್ಯ ಮರ್ಯಾದೆಯನ್ನು ತೋರಿದುದರ ಫಲವಾಗಿ ಬ್ರಾಹ್ಮಣರಿಂದ ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳಂಥ ಮಹಾಕೃತಿಗಳು ಹುಟ್ಟಿಬಂದವು. ಆದರೆ 18 ನೇ ಶತಮಾನದಲ್ಲಿ ಪೇಶ್ವೆಯವರು ಕರ್ನಾಟಕದ ಆಡಳಿತದ ಸೂತ್ರವನ್ನು ಕೈವಶ ಮಾಡಿಕೊಳ್ಳುವುದೇ ತಡ, ನಿಂತ ಕಾಲ ಮೇಲೆಯೇ ಕನ್ನಡವನ್ನು ಕೈಬಿಟ್ಟು, ಮರಾಠಿಯನ್ನು ಕೈಗೆತ್ತಿಕೊಂಡರು. ಪ್ರತಿಷ್ಠಿತ ಬ್ರಾಹ್ಮಣ ಕುಟುಂಬಗಳಲ್ಲಿ ಮರಾಠಿ ಮನೆಮಗನಂತೆ, ಕನ್ನಡ ಮಲಮಗನಂತೆ ಬದುಕುವುದನ್ನು ಈಗಲೂ ಗಮನಿಸಬಹುದು. ಮುಂದೆ 19 ನೇ ಶತಮಾನದಲ್ಲಿ ಆಡಳಿತ ಸೂತ್ರ ಇಂಗ್ಲೀಷರ ಹಸ್ತಗತವಾದ ಕೂಡಲೇ ಮನೆ ತುಂಬಿದ ಮರಾಠಿಯನ್ನು ಉಪೇಕ್ಷಿಸಿ ಇಂಗ್ಲಿಷನ್ನು ಮನ ತುಂಬಿಸಿಕೊಂಡರು. ಹೀಗೆ ಕನ್ನಡವನ್ನು ಕೈ ಬಿಟ್ಟು ಮರಾಠಿಯನ್ನು, ಮರಾಠಿಯನ್ನು ಕೈಬಿಟ್ಟು ಇಂಗ್ಲಿಷನ್ನು ಸ್ವಾಗತಿಸಿ ಅವೆರಡರ ಪುಣ್ಯತೀರಿ “ಕನ್ನಡ ಚಳುವಳಿ” ಪ್ರಾರಂಭವಾಗುವಲ್ಲಿ ಧಾವಿಸಿ ಬಂದು ಮತ್ತೆ ಮುಂಚೂಣಿಯಲ್ಲಿ ನಿಂತುಕೊಂಡರು. ಭಾಷೆಯ ಬಗ್ಗೆ ತೋರುವ ಈ ಸಮಯಾನುವರ್ತನ ಭಾವವನ್ನು ನೋಡಿದರೆ ಪ್ರಾಚೀನ ಕರ್ನಾಟಕದ ಬ್ರಾಹ್ಮಣ ಜನಾಂಗ ಸಂಸ್ಕೃತವನ್ನು ಬಿಟ್ಟರೆ ಮಿಕ್ಕ ಭಾಷೆಗಳ ಕೂಡ ದುರ್ಬಲವಾದ (ಪ್ರಯೋಜನಾತ್ಮಕವಾದ) ಸಂಬಂಧವನ್ನಿಟ್ಟುಕೊಂಡದ್ದು ಇತಿಹಾಸದುದ್ದಕ್ಕೂ ಸ್ಪಷ್ಟವಾಗುತ್ತದೆ. ಇಂಥ ನಿಷ್ಠುರ ಮಾತುಗಳನ್ನು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರಲ್ಲದೆ ಮತ್ತಾರು ಬರೆಯಲು ಸಾಧ್ಯ.

ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಕಂಡವರು ಲಿಂಗಾಯತರು ಮಾತ್ರ ಎಂಬ ನಿರ್ಣಯಕ್ಕೆ ಅವರು ಬರುತ್ತಾರೆ. ಅವರು ನೀಡುವ ಮೂರು ಕಾರಣಗಳು ಹೀಗಿವೆ:

  1. ಕನ್ನಡ ಸಂಪರ್ಕಭಾಷೆ, ಸಂಸ್ಕೃತ ಧರ್ಮಭಾಷೆಯಾಗಿದ್ದ ಕರ್ನಾಟಕದ ಪ್ರಾಚೀನ ಬ್ರಾಹ್ಮಣರಿಗೆ ಮಾತೃಭಾಷೆಯೆಂಬುದು ಇರಲಿಲ್ಲ.
  2. ಜೈನರಿಗೆ ಕನ್ನಡ ಮಾತೃ ಭಾಷೆಯಾಗಿದ್ದಿತು. ಮಾಧ್ಯಮವಾಗಿಸಿಕೊಂಡ ರೀತಿ ಕೆಲಮಟ್ಟಿಗೆ ಸಂಕುಚಿತವಾಗಿದ್ದಿತು; ಅಸ್ವಾಭಾವಿಕವಾಗಿದ್ದಿತು.
  3. ಲಿಂಗಾಯತರಿಗೆ ಕನ್ನಡ ಮಾತೃ ಭಾಷೆಯಾಗಿದ್ದಿತು. ಮಾಧ್ಯಮವಾಗಿಸಿ ಕೊಂಡ ರೀತಿ ಉದಾರವಾಗಿದ್ದಿತು; ಸ್ವಾಭಾವಿಕವಾಗಿದ್ದಿತು.

ಡಾ. ಎಮ್.‌ ಎಮ್.‌ ಕಲಬುರ್ಗಿಯವರು ತಮಗಿಂತಲೂ ಹಿರಿಯರಾದ ಕನ್ನಡ ಸಾಹಿತ್ಯದ ಪೂರ್ವಸೂರಿಗಳಾದ ಬಿ. ಎಂ. ಶ್ರೀ, ಟಿ. ಎಸ್. ವೆಂಕಣ್ಣಯ್ಯ, ಗೋವಿಂದ ಪೈ, ಪು. ತಿ. ನ.  ಡಿ. ಎಲ್. ಎನ್. ಮೊದಲಾದ ವಿದ್ವಾಂಸರ ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದವರು. “ಬಿ. ಎಂ. ಶ್ರೀ. ಅವರ ಸಾಹಿತ್ಯ ಚರಿತ್ರೆಯ ವಿಚಾರಗಳು” ಎಂಬ ಲೇಖನದಲ್ಲಿ ಅಷ್ಟೇನೂ ಶ್ಲಾಘನೀಯವಾದ ಅಂಶಗಳಿಲ್ಲ, “ವೆಂಕಣ್ಣಯ್ಯನವರ ವಿಮರ್ಶೆ-ಸಂಶೋಧನೆ-ಸಂಪಾದನೆ” ಉತ್ತರ ಕರ್ನಾಟಕದ ವಿದ್ವಾಂಸರಿಗಿಂತ ಕೆಳಮಟ್ಟದ್ದು, “ಗೋವಿಂದ ಪೈಗಳ ಸಂಶೋಧನೆಯ ಪದ್ಧತಿ-ಸಾಧನೆ” ಲೇಖನದಲ್ಲಿ ಅವರದು ನೀರಸ ಬರವಣಿಗೆಯಾಗಿತ್ತು ಎಂದು ಹೀಗೆ ಅನೇಕ ಸಂವಾದಕ್ಕೆ ಚರ್ಚೆಗೆ ಯೋಗ್ಯವಾದ ವಿಚಾರಗಳನ್ನು ತಿಳಿಸಿದ್ದಾರೆ. “ಪಾಂಡಿತ್ಯದ ಡಿ. ಎಲ್. ನರಸಿಂಹಾಚಾರ್” “ಎಪ್ಪತ್ತರ ಬೇಂದ್ರೆ” “ಪ್ರೊ. ಮಾಳವಾಡ: ವಿಚಾರ ಸಾಹಿತ್ಯ” “ಡಾ. ಆರ್. ಸಿ. ಹಿರೇಮಠ ಅವರ ವರ್ಗಬೋಧನೆ” ಈ ನಾಲ್ಕು ಲೇಖನಗಳು ವಿಮರ್ಶಾತ್ಮಕವಾಗಿ-ಪರಿಚಯಾತ್ಮಕ ನೆಲೆಯಲ್ಲಿ ಮೂಡಿಬಂದಿವೆ.

ಹೀಗೆ ಒಟ್ಟು ನೂರು ಲೇಖನಗಳಲ್ಲಿ ಕನ್ನಡ ಸಂಸ್ಕೃತಿ ವಿಕಾಸದ ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸಿರುವುದು ಡಾ. ಎಮ್.‌ ಎಮ್.‌ ಕಲಬುರ್ಗಿ ಅವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಒಟ್ಟಾರೆಯಾಗಿ ಮಾರ್ಗ ಸಂಪುಟ-1 ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿದ ಮಹಾಕೃತಿಯಾಗಿದೆ.

ಶ್ರೀ. ಪ್ರಕಾಶ ಗಿರಿಮಲ್ಲನವರ,
ಐ. ಟಿ. ಐ ಕಾಲೇಜು,
ಶಿವಬಸವ ನಗರ,
ಬೆಳಗಾವಿ – 590 010
ಮೊಬೈಲ್‌ ಸಂ. 99021 30041.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vacjanamandara.in

Loading

Leave a Reply