ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಡ್ಯೆಪುಟಿ ಚೆನ್ನಬಸಪ್ಪನವರಿಂದ ಪ್ರವರ್ಧಮಾನಕ್ಕೆ ಬಂದ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ | ಶ್ರೀ. ಮಹೇಶ ಚನ್ನಂಗಿ | ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.

05.05.1915 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿರುವುದು ಜಗಜ್ಜಾಹೀರಾದ ಸಂಗತಿ. ಇದರ ಕೇಂದ್ರ ಕಚೇರಿ ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ 18 ವರ್ಷ ಮೇಲ್ಪಟ್ಟ ಓದು ಬರಹ ಬರುವರೆಲ್ಲರೂ ಇದರ ಸದಸ್ಯರಾಗಬಹುದು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜರ ಒಡೆಯರು ಎಷ್ಟೊಂದು ಹಣಕಾಸಿನ ಸಹಾಯವನ್ನು ನೀಡಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಸಹಾಯವನ್ನು ಬೆಳಗಾವ ಜಿಲ್ಲೆಯ ಮಹಾದಾನಿ ರಾಜ ಲಖಮನಗೌಡ ಸರದೇಸಾಯಿ ಅವರು ನೀಡಿದ್ದಾರೆ. ಸಂಸ್ಥಾಪನೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ನೀಡಿದ ವಂಟಮುರಿಯ ದೇಸಾಯಿಗಳಾಗಿದ್ದ ರಾಜ ಲಕಮನಗೌಡ ಸರದೇಸಾಯಿಯಂಥ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸದೆ ಇದ್ದರೆ ತಪ್ಪಾಗುವುದು.

ಆರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ನಂತರದ ಅಂದರೆ 1935 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ತನ್ನ ಹೆಸರನ್ನ ಬದಲಾವಣೆ ಮಾಡಿಕೊಂಡಿದೆ. 1915 ರಿಂದ 1940 ರವರೆಗೆ ಸಾಹಿತ್ಯ ಪರಿಷತ್ತಿನ ಆಸಕ್ತರು, ಸದಸ್ಯರೆಲ್ಲರೂ ಕೊಡಿಸಿ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡುತ್ತಿದ್ದರು.

ಆದರೆ 1941 ರಲ್ಲಿ ಚುನಾವಣೆ ನಡೆದು ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಪರಿಸ್ಥಿತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿತು. ಬೆಳಗಾವಿ ಜಿಲ್ಲೆಯ ಮಹಾದಾನಿ ರಾಜ ಲಕಮನಗೌಡ ಸರದೇಸಾಯಿ ಅವರ ಮಗನಾಗಿರುವ ಬಸವಪ್ರಭು ರಾಜಾಲಖಮನಗೌಡ ಸರದೇಸಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಚುನಾಯಿತ ಅಧ್ಯಕ್ಷರು (1941-1946) ಎನ್ನುವುದು ಬೆಳಗಾವಿಗರಾದ ನಮ್ಮ ಹೆಮ್ಮೆ.

1856 ರಲ್ಲಿ ಧಾರವಾಡದಲ್ಲಿ ನಾರ್ಮಲ್ ಶಾಲೆ ಪ್ರಾರಂಭವಾಗಿತ್ತು. ಮುಂದೆ ನಾರ್ಮಲ್ ಶಾಲೆ 1861 ರಲ್ಲಿ ಬೆಳಗಾವಿಗೆ ವರ್ಗಾವಣೆಯಯಿತು. ಡೆಪ್ಯುಟಿ ಚೆನ್ನಬಸಪ್ಪನವರು ಅದರ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪ್ರಯತ್ನದಿಂದ ಬ್ರಿಟಿಷ್ ಸರ್ಕಾರ ಸದರಿ ಪ್ರೌಢಶಾಲೆಯನ್ನು ಗಂಡು ಮಕ್ಕಳ ತರಬೇತಿ ಶಾಲೆಯನ್ನಾಗಿ 1864 ರಲ್ಲಿ ಪರಿವರ್ತನೆ ಮಾಡಿದರು.

ಇದು ಕನ್ನಡದ ಬಾಷೆ, ಸಂಸ್ಕ್ರತಿ, ಸಾಹಿತ್ಯದ ಇತಿಹಾಸವನ್ನೇ ಬದಲಾವಣೆ ಮಾಡಿತು. ಕಾರಣ ಇವತ್ತಿನ ಕಿತ್ತೂರು ಕರ್ನಾಟಕ (ಹಿಂದಿನ ಮುಂಬೈ ಕರ್ನಾಟಕ) ವನ್ನು ಬ್ರಿಟಿಷರು “ದಕ್ಷಿಣ ಮಹಾರಾಷ್ಟ್ರ” ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಸರ್ಕಾರಿ ಕಚೇರಿ, ಕೋರ್ಟು, ನ್ಯಾಯಾಲಯದ ಭಾಷೆ ಮರಾಠಿಯಾಗಿತ್ತು. ಇರುವ ಸರಕಾರಿ ನೌಕರರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿರುವ ಕಾರಣ ಮರಾಠಿಯೇ ಆಡಳಿತ ಭಾಷೆಯಾಗಿತ್ತು.

ಆ ಸಂದರ್ಭದಲ್ಲಿ ಕನ್ನಡ ಗಂಡುಮಕ್ಕಳ ತರಬೇತಿ ಶಾಲೆ ಪ್ರಾಂಶುಪಾಲರಾಗಿ ಬ್ರಿಟಿಷರಿಗೆ ಮುಂಬೈ ಕರ್ನಾಟಕದ ಭಾಗದ ಜನರ ಭಾವದ ಭಾಷೆ ಕನ್ನಡ ಎಂಬುದನ್ನು ಬ್ರಿಟಿಷ್ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟು ಇದನ್ನು ಮುಂಬೈ ಕರ್ನಾಟಕ ಎಂದು ಕರೆಯುವಂತೆ ವಾತಾವರಣವನ್ನು ನಿರ್ಮಾಣ ಮಾಡಿದವರು ಡೆಪ್ಯುಟಿ ಚೆನ್ನಬಸಪ್ಪನವರು. ಡೆಪ್ಯುಟಿ ಯವರ ಕರ್ಣಧಾರತ್ವದಿಂದ ಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯಲ್ಲಿ ವೆಂಕಟರಂಗೋ ಕಟ್ಟಿ, ಹುಯಿಲಗೋಳ ಭುಜಂಗರಾಯರು, ಗಂಗಾಧರ ಮಡಿವಾಳೇಶ್ವರ ತುರಮರಿ ಮುಂತಾದವರು ಕನ್ನಡ ಕಟ್ಟುವ ಪಡೆಯನ್ನೇ ಡೆಪ್ಯುಟಿ ಚನ್ನಬಸಪ್ಪನವರು ಕಟ್ಟಿದರು. ಇವರೇ ಮುಂದೆ ಚೆಲುವ ಕನ್ನಡ ನಾಡಿಗೆ ಅಡಿಪಾಯವನ್ನು ಹಾಕಿದ ಮಹನೀಯರು. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಕನ್ನಡಕ್ಕೆ ಒಂದು ಅಚ್ಚುಕಟ್ಟಾದ ಬುನಾದಿಯನ್ನು ಹಾಕಿರುವುದು ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಧಾರವಾಡ ಎಂದರೆ ತಪ್ಪಾಗಲಾರದು. ಇಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತನ್ನು ಅಲ್ಲಗಳೆಯುತ್ತಿಲ್ಲ ಎನ್ನುವುದನ್ನು ಮನಗಾಣಿಸುತ್ತೆನೆ.

ಈ ಸಂದರ್ಭದಲ್ಲಿ ಕನ್ನಡದಲ್ಲಿ ಬರೆಯುವ ಓದುವ ಮಾತಾನಾಡುವ ಮನಸ್ಸಿದ್ದರೂ ಅವಕಾಶಗಳಿರಲಿಲ್ಲ. ಪ್ರಿನ್ಸಿಪಾಲರಾದಾಗ 1864 ಜನವರಿ 21 ರಂದು ಕೇವಲ 26 ವಿದ್ಯಾರ್ಥಿಗಳು ತರಬೇತಿ ಶಾಲೆಯಲ್ಲಿದ್ದರು. ಡೆಪ್ಯುಟಿ ಚನ್ನಬಸವಣ್ಣನವರು ಎರಡು ವರ್ಷ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕೆಲಸವನ್ನು ನಿರ್ವಹಿಸಿದರು. ಮಹಾರಾಷ್ಟ್ರ ದಕ್ಷಿಣ ವಿಭಾಗಿಯ ಶಿಕ್ಷಣಾಧಿಕಾರಿ ರೆಸಲ್ ಅವರು ಡೆಪ್ಯುಟಿ ಚೆನ್ನಬಸಪ್ಪನವರನ್ನು ಬೆಳಗಾವಿಯ ಡೆಪ್ಯುಟಿ ಎಜುಕೇಶನಲ್ ಇನ್ಸಪೆಕ್ಟರ್ ಎಂದು ನೇಮಕ ಮಾಡಿದರು. ಡ್ಯೆಪುಟಿ ಚೆನ್ನಬಸಪ್ಪನವರ ಅಧಿಕಾರ ಅವಧಿಯಲ್ಲಿ ಅವರ ಭಗೀರಥ ಪ್ರಯತ್ನದಿಂದ ಕನ್ನಡ ಪ್ರಾಥಮಿಕ ಶಿಕ್ಷಣ ವ್ಯಾಪಕವಾಗಿ ಮುಂಬೈ ಕರ್ನಾಟಕವನ್ನು ಆವರಿಸಿಕೊಂಡಿತು.

1855-56 ನೇ ಸಾಲಿನಲ್ಲಿ ಬೆಳಗಾವಿ ಧಾರವಾಡ ಬಿಜಾಪುರ ಈ ಮೂರು ಜಿಲ್ಲೆಗಳು ಮುಂಬೈ ಕರ್ನಾಟಕದ ವ್ಯಾಪ್ತಿಯಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ 12 ಧಾರವಾಡ ಜಿಲ್ಲೆಯಲ್ಲಿ 13 ಬಿಜಾಪುರ ಜಿಲ್ಲೆಯಲ್ಲಿ 9 ಕನ್ನಡ ಶಾಲೆಗಳಿದ್ದವು. 1882 ರಲ್ಲಿ ಡ್ಯೆಪುಟಿ ಚೆನ್ನಬಸಪ್ಪನವರು ನಿಧನವಾಗುವ ಸಮಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 166 ಧಾರವಾಡ ಜಿಲ್ಲೆಯಲ್ಲಿ 341 ಬಿಜಾಪುರ ಜಿಲ್ಲೆಯಲ್ಲಿ 150 ಕನ್ನಡ ಪ್ರಾಥಮಿಕ ಶಾಲೆಗಳ ಸಂಖ್ಯೆಗೆ ಹೆಚ್ಚಿದ್ದವು. ಇದು ಡೆಪ್ಯುಟಿ ಚೆನ್ನಬಸಪ್ಪನವರು ಅಧಿಕಾರಿಯಾಗಿ ಕನ್ನಡವನ್ನು ಕಟ್ಟಿರುವ ವೇಗವನ್ನು ಈ ಅಂಕಿ ಅಂಸಗಳು ತೋರಿಸುತ್ತದೆ. ಇದೆಲ್ಲವೂ ಕಸಾಪ ಹುಟ್ಟಿಕೊಳ್ಳುವ 35 ವರ್ಷ ಮುಂಚೆಯೇ ನಡೆದಿರುವಂಥದ್ದು. ಅದರ ಹಿಂದಿನ ಶಕ್ತಿ ಡೆಪ್ಯುಟಿ ಚನ್ನಬಸಪ್ಪರವರು.

ಮಠ ಪತ್ರಿಕೆಯ ಮೂಲಕ ಕನ್ನಡ ಕಟ್ಟಿದ ಡೆಪ್ಯುಟಿ ಚನ್ನಬಸಪ್ಪನವರು:
ಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯ ಮುಖವಾಣಿಯಾಗಿ ಡೆಪ್ಯುಟಿ ಚೆನ್ನಬಸಪ್ಪನವರು 1865 ಏಪ್ರಿಲ್ ತಿಂಗಳಲ್ಲಿ “ಮಠ” ಪತ್ರಿಕೆಯನ್ನು ಪ್ರಾರಂಭ ಮಾಡಿದರು ಪತ್ರಿಕೆಯ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಈ “ಕರ್ನಾಟಕ ಸೀಮೆಯಲ್ಲಿ ಶುದ್ಧವಾದ ಕನ್ನಡ ಭಾಷೆಯು ವಿಸ್ತಾರ ಆಗತಕ್ಕದ್ದೆಂಬುದು” ಎಂಬ ಮೊದಲ ಸಾಲಿನ ಮಾತುಗಳು ಡೆಪ್ಯುಟಿ ಚೆನ್ನಬಸಪ್ಪನವರಿಗೆ ಕನ್ನಡ ಭಾಷೆಯ ಭವಿಷ್ಯದ ಶ್ರೀಮಂತಿಕೆ ಕುರಿತು ಕರ್ನಾಟಕ ಏಕೀಕರಣದ ಭವಿಷ್ಯದ ಕುರಿತು 160 ವರ್ಷ ಮುಂಚೆಯೇ ಭವಿಷ್ಯ ನುಡಿದಂತಿದೆ ಎಂದರೆ ತಪ್ಪಾಗಲಾರದು.

ಮಠ ಪತ್ರಿಕೆ 160 ವರ್ಷಗಳಿಂದ ಪತ್ರಿಕೆ ಸತತವಾಗಿ ಮುದ್ರಣಗೊಂಡು ಆ ಮೂಲಕ ಶಿಕ್ಷಕರ ಮನಸ್ಸನ್ನು ಕಟ್ಟಿ ಆ ಶಿಕ್ಷಕರ ಮೂಲಕ ನಾಡಿನ ಮಕ್ಕಳ ಮನಸ್ಸನ್ನು ಕಟ್ಟುವುದರ ಮೂಲಕ ನಾಡಿನಲ್ಲಿ ಕನ್ನಡದ ಕಂಪನ್ನು ಹೊರ ಸೂಸುವುದರಲ್ಲಿ ಅಪ್ರತ್ಯಕ್ಷವಾಗಿ ತನ್ನದೇ ಆಗಿರುವ ಕೆಲಸವನ್ನು ಮಠ ಪತ್ರಿಕೆ ಮಾಡಿದೆ. ಈ ಪತ್ರಿಕೆಯ ಸ್ಥಾಪನೆ ಹಿಂದಿನ ರೂವಾರಿಯಾಗಿರುವ ಡೆಪ್ಯುಟಿ ಚೆನ್ನಬಸಪ್ಪನವರಿಗೆ ಇದರ ಕೀರ್ತಿ ಸಲ್ಲಬೇಕಾದದ್ದು. ಈ ಪತ್ರಿಕೆಯ ಮೂಲಕ ತರಬೇತಿ ಶಾಲೆಗೆ ಬರುವ ವಿದ್ಯಾರ್ಥಿಗಳ ಭಾಷಾ ಶುದ್ದಿ, ಲಿಪಿ ಶುದ್ದಿ, ಉಚ್ಚಾರ ಶುದ್ದಿ, ಬರಹ ಶುದ್ದಿಯತ್ತ ಗಮನ ಹರಿಸಿ ಕನ್ನಡಿಗರ ಮರಾಠಿ ಮೋಹವನ್ನು ಬಿಡಿಸಿ ಕನ್ನಡ ಭಾಷೆ ಶಿಕ್ಷಣ ಸಂಸ್ಕೃತಿಗಳತ್ತ ಅವರನ್ನು ಸೆಳೆದಿದ್ದು ಮಠಪತ್ರಿಕೆ. ಅದರ ಕೀರ್ತಿ ಎಲ್ಲವೂ ಸಹಿತ ಡೆಪ್ಯೂಟಿ ಚೆನ್ನಬಸಪ್ಪನವರಿಗೆ ಸಲ್ಲಬೇಕು. ಇಂದು ಈ ಪತ್ರಿಕೆ ಜೀವನ ಶಿಕ್ಷಣ ಎಂಬ ಹೆಸರಿನಿಂದ ಪ್ರಕಟವಾಗುತ್ತಿದೆ.

ಡೆಪ್ಯುಟಿಯವರ ಸಾಹಿತ್ಯ ಸೌರಭ:
ಚನ್ನಬಸಪ್ಪನವರು Shakespeare ನ Comedy of Errors ಮತ್ತು McBeth ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತಕ್ಕೆ ಸಂಬಂಧಿಸಿದಂತೆ ನಾಲ್ಕು ಕೃತಿಗಳನ್ನು ಡೆಪ್ಯುಟಿ ಚೆನ್ನಬಸಪ್ಪನವರು ಬರೆದಿದ್ದಾರೆ. ಎರಡು ಕನ್ನಡ ಎರಡು ಮರಾಠಿ ಪುಸ್ತಕಗಳು. ಕನ್ನಡ ಅಂಕಗಣಿತಕ್ಕೆ ಸಂಬಂಧಪಟ್ಟಂತವು. ಮರಾಠ ಗಣಿತ ಪುಸ್ತಕ ಗಳು ಬೀಜಗಣಿತಕ್ಕೆ ಸಂಬಂದಿಸಿದಂರವು. ಮುಂಬೈ ಕರ್ನಾಟಕದ ಇತಿಹಾಸದಲ್ಲಿ ಕನ್ನಡದಲ್ಲಿ ಗಣಿತ ಪುಸ್ತಕಗಳನ್ನು ಬರೆದು ಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಿದ ಮಹಾನುಭಾವರಲ್ಲಿ ಮೊದಲಿಗರು ಡೆಪ್ಯುಟಿ ಚೆನ್ನಬಸಪ್ಪನವರು.

ಬಹಳಷ್ಟು ಜನರಿಗೆ ತಿಳಿದಿಲ್ಲದಿರುವ ಸಂಗತಿ ಎಂದರೆ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯ ಒಡಲೊಳಗೆ ಎರಡು ಅತ್ಯುತ್ತಮ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿದ್ಯಾಲಯ ಹುಟ್ಟಿಕೊಂಡವು. ಇವುಗಳ ಆರಂಭದ ತರಗತಿಗಳು ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯ ಕೊಠಡಿಯೊಳಗೆ ನಡೆದಿವೆ ಎನ್ನುವುದು ನಾಡಿನ ಬಹುತೇಕರಿಗೆ ತಿಳಿದಿಲ್ಲ.

ಡೆಪ್ಯೂಟಿ ಚನ್ನಬಸಪ್ಪನವರ ಕಟ್ಟಿದ ಕನ್ನಡ ಬಳಗ ತಂಡ:
ಡೆಪ್ಯುಟಿ ಚೆನ್ನಬಸಪ್ಪನವರು ಆಡಳಿತದ ಮೂಲಕ ಕನ್ನಡವನ್ನು ಕಟ್ಟಿದ್ದಲ್ಲದೆ ತಾವು ಒಂದಿಷ್ಟು ಕೃತಿಗಳನ್ನು ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಬರೆದು ಮಕ್ಕಳ ಮನಸ್ಸನ್ನು ಕಟ್ಟಿದರು ಚನ್ನಬಸಪ್ಪನವರು ಇದರ ಜೊತೆಗೆ ಸಾಹಿತಿಕವಾಗಿ ಶಾಸ್ತ್ರೀಯವಾಗಿ ಆಡಳಿತಾತ್ಮಕವಾಗಿ ವಿಮರ್ಶಾತ್ಮಕವಾಗಿ ಕನ್ನಡ ಕಟ್ಟುವ ತಂಡವನ್ನು ರಚನೆ ಮಾಡಿದರು. ಅಷ್ಟೇ ಅಲ್ಲದೆ ಅವರನ್ನೆಲ್ಲಾ ಕೈಹಿಡಿದು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಬೆಳಸುವುದರ ಮೂಲಕ ಅವರನ್ನು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ವಿರಾಜಮಾನರನ್ನಾಗಿಸಿದವರು ಡೆಪ್ಯುಟಿ ಚನ್ನಬಸಪ್ಪನವರು.

ಗಂಗಾಧರ ಮಡಿವಾಳೇಶ್ವರ ತುರುಮರಿ, ಹುಯಿಲಗೋಳ ಭುಜಂಗ ರಾವ್, ಶಾಂತವೀರ ರಾಚಿದೇವ ಕಿತ್ತೂರು, ವೆಂಕಟರಂಗೋ ಕಿಟ್ಟಿ, ಚುರುಮುರಿ ಶೇಷಗಿರಿರಾಯ, ರೊದ್ದ ಶ್ರೀನಿವಾಸರಾಯ ಮುಂತಾದವರೆಲ್ಲರೂ ಚೆನ್ನಬಸಪ್ಪನವರ ಗರಡಿಯಲ್ಲಿ ಪಳಗಿ ಕನ್ನಡ ನಾಡು-ನುಡಿಯನ್ನು ಕಟ್ಟುವುದರ ಮೂಲಕ ಕನ್ನಡದ ಇಂದಿನ ಶ್ರೀಮಂತಿಕೆಗೆ ಕಾರಣೀಭೂತರಾದವರು. ಹಾಗಾಗಿ ಇಂದಿನ ವೈಭವದ ಸ್ಥಿತಿಗತಿಯ ಹಿಂದೆ ಡೆಪ್ಯುಟಿ ಚೆನ್ನಬಸಪ್ಪನವರು ತಳಹಂತದಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದು ಕಾರ್ಯ ನಿರ್ವಹಿಸುವವರನ್ನು ಸೃಷ್ಟಿಸಿದ್ದು ಕಾರಣಿಭೂತವಾಗಿದೆ.

ಮೇಲಿನ ಎಲ್ಲ ಘಟನೆಗಳನ್ನು ಅವಲೋಕನ ಮಾಡಿದಾಗ ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ಕೆಲಸವನ್ನು ಡೆಪ್ಯುಟಿ ಚೆನ್ನಬಸಪ್ಪನವರ ನೇತೃತ್ವದಲ್ಲಿ ಪ್ರವರ್ಧಮಾನಕ್ಕೆ ಬಂದ ಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಮತ್ತು ಅದರಿಂದ ಕಲಿತು ಹೋದ ಶಿಕ್ಷಕ ಬಳಗ ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಮರಾಠಿಮಯವಾಗಿದ್ದ ದಕ್ಷಿಣ ಮಹಾರಾಷ್ಟ್ರ ಎಂದು ಕರೆಯುತ್ತಿದ್ದ ಮುಂಬೈ ಕರ್ನಾಟಕದ ಭಾಗವನ್ನು ಬ್ರಿಟಿಷರಿಗೆ ಈ ಭಾಗದ ಜನರ ಭಾವದ ಭಾಷೆ ಕನ್ನಡ ಎಂದು ಅರ್ಥೈಸಿ ಈ ಭಾಗದಲ್ಲಿ ಕನ್ನಡದ ಶಾಲೆಗಳನ್ನು ಪ್ರಾರಂಭಿಸಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಅಚ್ಚು ಹಾಕಿಸಿ ಮಕ್ಕಳಿಗೆ ಪೂರೈಸುವಂತೆ ಮಾಡಿದ ಮತ್ತು ಕನ್ನಡದಲ್ಲಿ ಶಿಕ್ಷಕರಿಗೆ ಕಲಿಸಲು ಪ್ರೇರೆಪಿಸಿದ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಡೆಯನ್ನು ಕಟ್ಟಿದ ಚೆನ್ನಬಸಪ್ಪನವರ ಪಾತ್ರ ಮತ್ತು ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯ ಪಾತ್ರ ಕನ್ನಡ ಸಾಹಿತ್ಯ ಪರಿಷತ್ತಿನಷ್ಟೇ ವಿಶಾಲವಾದದ್ದಾಗಿದೆ .

ಸಮಾರೋಪ:
ಆದರೆ ಮುಂದೆ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಒಂದು ಸಾಂಸ್ಥಿಕ ಶಿಕ್ಷಣ ಸಂಸ್ಥೆಯಾಗಿ ಮುಂದುವರೆಯಿತು. ಆದರೆ ನಂತರ 1890 ರಲ್ಲಿ ಪ್ರಾರಂಭವಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘ, 1915 ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ಸಂಘಟನೆಗಳಾಗಿ ಜನರನ್ನು ಹೆಚ್ಚು ಆಕರ್ಷಿಸಿದವು. ಹೀಗಾಗಿ ಇವುಗಳು ಬೆಳೆಯುತ್ತಾ ಸಾಗಿದವು. ಸಾಂಸ್ಥಿಕ ಸಂಸ್ಥೆಯಾದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆಯಾಗಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಶಿಕ್ಷಕರಾಗುವ ತರಬೇತಿಯನ್ನು ನೀಡಿ ಆ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಮಾಡಿತು. ಹಾಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚು ಪ್ರಚಾರಕ್ಕೆ ಬಂದಂತೆ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಬರಲಿಲ್ಲ. ಈ ನಿಟ್ಟಿನಲ್ಲಿ ಚಿಂತಕರು ಸಂಶೋಧಕರು ವಿಚಾರ ಮಾಡದೇ ಇರುವುದು ಖೇದಕರ ವಿಷಯ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆ ಸಂದರ್ಭದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರನ್ನು ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ ಧಾರವಾಡವನ್ನು ಸ್ಮರಿಸುವುದು ನಮ್ಮ ನೈತಿಕ ಆದ್ಯ ಕರ್ತವ್ಯವೆಂದರೆ ತಪ್ಪಾಗಲಾರದು.

ಶ್ರೀ. ಮಹೇಶ್ ನೀಲಕಂಠ ಚನ್ನಂಗಿ.
ಉಪ ಪ್ರಾಂಶುಪಾಲರು
ಸರ್ಕಾರಿ ಬಾಲಕಿಯರ ಪ್ರೌಢಶಾಲೆ,
ಚನ್ನಮ್ಮನ ಕಿತ್ತೂರು.
ಮೋಬೈಲ್. ಸಂ. 97403 13820.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply