ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲ / ಮೌನೇಶ್ವರರ ವಚನ / ಡಾ. ವೀರೇಶ ಬಡಿಗೇರ, ಹಂಪಿ.

ಕರಗಿ ಮಾಡಲಿಬಲ್ಲ ಒರೆದು ನೋಡಲಿಬಲ್ಲ
ಪರಿಪರಿಯ ವಸ್ತು ಒಡವೆ ದೇವರಾಭರಣ
ಜಡಿದು ಮಾಡುವ ಗುಣಮಣಿ ಚಿಂತಾಮಣಿ
ಧರೆಗಿಳಿದ ಚೆನ್ನಬಸವಣ್ಣ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-2016 / ಡಾ. ವೀರೇಶ ಬಡಿಗೇರ / ಪುಟ ಸಂ. 7 / ವ. ಸಂ. 14)

ಕಾಸಿ ನೋಡಲಿ ಬಲ್ಲ ಕೀಸಿ ನೋಡಲಿಬಲ್ಲ.

ವಿಶ್ವಕರ್ಮರ ಕುಲಕಸುಬುಗಳು ಜ್ಞಾನ ಮತ್ತು ಕೌಶಲ್ಯದ ರೂಪಗಳು. ಲೋಹವನ್ನು ಕರಗಿಸುವ, ಅರಗಿಸುವ, ಒರೆದು ನೋಡುವ, ಬಡಿದು ಬಗ್ಗಿಸುವ ಮೂಲಕ ಹಲವು ಬಗೆಯ ವಸ್ತು ಒಡವೆ, ದೇವರ ಆಭರಣಗಳನ್ನು ಸೃಜಿಸುವ, ಆಕೃತಿಗೊಳಿಸುವ ಗುಣಮಣಿಗಳು. ಬೇಡಿದ್ದನ್ನು ಕೌಶಲ್ಯಯುತವಾಗಿ ಮಾಡಿ ಕೊಡುವ ಚಿಂತಾಮಣಿಗಳು. ಅಕ್ಕಸಾಲಿಯರ ಪ್ರತಿನಿಧಿಯಾದ ಮೌನಯ್ಯನವರು ಈ ಜಡಗೊಂಡ ಜಗತ್ತನ್ನು ಕರಗಿಸಿ, ಅರಗಿಸಿ, ಒರೆದು, ಜಡಿದು ಪುನಃಸೃಷ್ಟಿಸಲು ಬಂದಿರುವರು. ಅಂದರೆ ನವಸಮಾಜದ ನಿರ್ಮಾಣದ ಹಂಬಲ ಈ ವಚನದಲ್ಲಿದೆ.

ವಿಶ್ವಕರ್ಮ ತತ್ವ ದರ್ಶನಗಳ ಆಧುನಿಕ ವ್ಯಾಖ್ಯಾನವನ್ನು ಮೌನೇಶ್ವರರು ಮಾಡಿದ್ದಾರೆ ಅನಿಸುತ್ತದೆ. ವಿಶ್ವಕರ್ಮ ತಾತ್ವಿಕತೆಯೇ ಪ್ರಕ್ರಿಯಾತ್ಮಕ ಸ್ವರೂಪದ್ದು, ವಿಶ್ವಕರ್ಮ ಧರ್ಮ ತತ್ವಗಳು ಮುಗಿದು ಹೋದ ಅಥವಾ ಮುಗಿಸಿರಬಹುದಾದವುಗಳಲ್ಲ. ಅವು ವರ್ತಮಾನದೊಂದಿಗೆ ಎದುರು ಬದುರಾಗುತ್ತಾ ಸೃಜನಶೀಲ ವಿಸ್ತಾರ ಪಡೆವ ತಿಳಿವಿನ ಪ್ರಯಾಣ. ಇಲ್ಲಿ ಅಂತಿಮ ಪ್ರಯಾಣ ಮತ್ತು ಅಂತಿಮ ಪ್ರಮಾಣ ಎನ್ನುವುದಿಲ್ಲ. ನಿರಂತರ ಚಲಿಸುವ ಲೋಕ ಪ್ರವಾಹದಲ್ಲಿ ಜಡವಾದುದು ನಿರುಪಯುಕ್ತವಾದುದು ಇಲ್ಲ. ವಿಶ್ವಕರ್ಮ ಜ್ಞಾನ ಮತ್ತು ಕರ್ಮಗಳು ಕಾಲ ಮತ್ತು ಸಂಧರ್ಭದ ಅಗತ್ಯಕ್ಕೆ ಹೊಸ ರೂಪ ಪಡೆಯುತ್ತ ಬಂದಿವೆ.

ಕರಗುವುದು ಮತ್ತು ಮಾಡುವುದು, ಕಾಸಿ ನೋಡುವುದು ಕೀಸಿ (ಕೆಡಿಸಿ) ನೋಡುವ ಈ ಕ್ರಿಯಾಪದಗಳು ಬಹುದೊಡ್ಡ ಪ್ರಕ್ರಿಯಾತ್ಮಕ ಮೀಮಾಂಸೆಯ ಅರ್ಥವನ್ನು ಎದೆಯಲ್ಲಿಟ್ಟುಕೊಂಡಿವೆ. ಪೂರ್ವದ ಕಲ್ಪಿತ ಗ್ರಹಿಕೆಯ ಕ್ರಮಗಳನ್ನು, ಅರ್ಥಗಳನ್ನು, ರೂಪಗಳನ್ನು ತಿರಸ್ಕರಿಸದೆ ಹೊಸದು ಹುಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಸಾಧ್ಯವಾದರೆ ಅದು ಪೂರ್ವದ ಅನುಕರಣೆ ಆಗುತ್ತದೆಯೇ ಹೊರತು ಅನುಸಂಧಾನವಾಗುವುದಿಲ್ಲ.

ಭಾಷೆಯಲ್ಲಿ ಅಥವಾ ಧಾತುಗಳಲ್ಲಿ ನಿರ್ಮಿತವಾದ ಅಥವಾ ಕಟ್ಟಿದ ಕಾಲ್ಪನಿಕ ಸಂಗತಿಗಳನ್ನು ವಿಸರ್ಜಿಸಿದಾಗ ಮಾತ್ರ ಹೊಸ ರೂಪ ದಕ್ಕಲು ಸಾಧ್ಯ.

ಮೌನೇಶ್ವರರ ಪ್ರಕಾರ ಲೋಕ ಮತ್ತು ಅಲ್ಲಿ ಕಟ್ಟಿ ನಿಲ್ಲಿಸಿರುವ ರೂಪಗಳು ಶಾಶ್ವತವಾದವುಗಳಲ್ಲ. ಅವು ಆಗುತ್ತಲೇ ಇರುವ, ಇರುತ್ತಲೇ ಮುಗಿಯು, ಮುಗಿಯುತ್ತಲೇ ಮತ್ತೇ ಹೊಸ ರೂಪಧಾರಣ ಮಾಡುವ ಪ್ರಕ್ರಿಯಾತ್ಮಕ ಸ್ವರೂಪದವು. ನಾವು ಬದುಕುತ್ತಿರುವ ಈ ಲೋಕದಲ್ಲಿ ಶಾಶ್ವತವಾಗಿ ಮತ್ತು ಸ್ವತಂತ್ರವಾದ ಯಾವ ವಸ್ತುಗಳೂ ಇಲ್ಲ. ಲೋಕದ ಸಮಸ್ತವೂ ಅನೇಕ ಅಂಶಗಳ ಸಂಯೋಜನೆಯಿಂದ, ಒಟ್ಟಗೂಡುವಿಕೆಯಿಂದ ಮಾತ್ರ ಉಂಟಾಗಿವೆ. ತಾಯಿಯ ಗರ್ಭದಂತೆ, ಅದೂ  ಕೂಡ ಖಾಲೀಯೂ ಅಲ್ಲ, ತುಂಬಿದ್ದು ಅಲ್ಲ.

ಹೀಗೆ ಮೌನೇಶ್ವರರು ಈ ಲೋಕವನ್ನು ಅದರ ಕಟು ವಾಸ್ತವದೊಂದಿಗೆ ಮುಚ್ಚು ಮರೆಯಿಲ್ಲದೆ ತೆರೆದಿಟ್ಟವರು. ಬೆರೆತು ಕರಗಿಹೋಗಿ, ಗುರುತು ಹಿಡಿಯಲು ಸಾಧ್ಯವಾಗದ ಹಾಗೆ ಸಾಂಸ್ಕೃತಿಕ ಛದ್ಮವೇಷ (Cultural Camouflage) ಧರಿಸಿರುವ ಸಾಂಸ್ಕೃತಿಕ ಸಂಕಥನಗಳ ಒಳ ಹೊಕ್ಕು ಸತ್ಯದರ್ಶನ ಮಾಡಿಸುತ್ತಾರೆ.

ಬಂಗಾರ ಆಭರಣವಾಗಲು ಬೇರೊಂದು ಲೋಹದ ಸ್ಪರ್ಶ ಹೇಗೆ ಅಗತ್ಯವೋ, ಸಾಮರಸ್ಯ ಸಹಬಾಳ್ವೆಗಳು ಸಧೃಡ ಸಮಾಜದ ಬೀಜಮಂತ್ರಗಳು. ಕಣ್ಣಿಗೆ ಕಾಣುವ ಬಂಗಾರದ ಆಭರಣ ಎಷ್ಟು ಸತ್ಯವೋ, ಅದು ಆಭರಣ ಆಗುವಲ್ಲಿ ಜೀವತೇದು ಕರಗಿ ಆಭರಣವಾದ ಅನ್ಯಲೋಹದ ಅಸ್ತಿತ್ವವೂ ಅಷ್ಟೇ ಸತ್ಯ. ಕಣ್ಣಿಗೆ ಕಾಣುವ ಸಾಂಸ್ಕೃತಿಕ ಛದ್ಮವೇಷಗಳನ್ನು ಒಳಹೊಕ್ಕು ಗುರುತಿಸದಿದ್ದರೆ ಸತ್ಯದ ದರ್ಶನವಾಗುವುದಿಲ್ಲ.

ಡಾ. ವೀರೇಶ ಬಡಿಗೇರ,
ಮುಖ್ಯಸ್ಥರು, ಸಂಗೀತ ಮತ್ತು ನೃತ್ಯ ವಿಭಾಗ,
ಕನ್ನಡ ವಿಶ್ವವಿದ್ಯಾಲಯ,
ವಿದ್ಯಾರಣ್ಯ, ಹಂಪಿ,
ವಿಜಯನಗರ ಜಿಲ್ಲೆ.
ಮೋಬೈಲ್. ಸಂ.‌ +91 94488 45789.

Loading

This Post Has One Comment

  1. ಡಾ. ಕಮಲಾ ದೇಶಿಕ

    ಒಳ್ಳೆಯ ವಿಚಾರ ಚಿಂತನೆ

Leave a Reply