
ಬಸವಾದಿ ಶರಣರು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಸಮಾನತೆಯ, ಸ್ವಾಭಿಮಾನದ ಸಮಾಜವನ್ನು ಕಟ್ಟಬಯಸಿದರು. ಸಂಸ್ಕೃತಿ ಎಂದರೆ, “ಒಂದು ಜನ ಸಮುದಾಯದ ಜೀವನ ವಿಧಾನ”. ಆ ಸಂಸ್ಕೃತಿಗೆ ವೈಚಾರಿಕತೆಯ ಸ್ಪರ್ಷಮಾಡಿ ವೈಜ್ಞಾನಿಕವಾಗಿ ಚಿಂತಿಸುವ, ಮೌಢ್ಯತೆ ಕಳೆದು, ಅರಿವನ್ನು ಮೂಡಿಸುವ, ಸದಾ ಹೊಸದನ್ನು ಅರಸುವ ಕ್ರಿಯಾಶೀಲ ಸಮಾಜದತ್ತ ಹೆಜ್ಜೆಹಾಕಿದರು. ಅನುಭಾವದ ಅರಿವನ್ನು ಮೈಗೂಡಿಸಿಕೊಳ್ಳುತ್ತ, ಮೌಢ್ಯದ ಮಾಯೆಯನ್ನು ಮರೆಮಾಡಿ, ಅಹಂಭಾವದ ಆತ್ಮಾವಲೋಕನ ಮಾಡಿಕೊಂಡರು. ಕಾಯಕಕ್ಕೆ ದೈವತ್ವವನ್ನು ತಂದು ಸ್ವಾಭಿಮಾನದ ಸಂಸ್ಕೃತಿಯನ್ನು ಬೆಳೆಸಿದರು. ಮಾನವೀಯ ಮೌಲ್ಯಗಳನ್ನು ಮೆರೆದು, ಸೋಹಂ ಅಳಿದು ದಾಸೋಹಕ್ಕೆ ಅಡಿ ಇಟ್ಟವರು ನಮ್ಮ ಶರಣರು.
ಅಂತಹ ಶೇಷ್ಠ ಶಿವಶರಣರಲ್ಲಿ ನುಲಿಯ ಚಂದಯ್ಯ ಶರಣರು ಒಬ್ಬರು.
ಗುರು, ಲಿಂಗ, ಜಂಗಮ ತತ್ತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯ ಶರಣರು. ಬಸವಣ್ಣನ ವಿನೂತನ ವಿಚಾರ ಧಾರೆಗೆ, ಸಮಾಜೋ–ಧಾರ್ಮಿಕ ಚಿಂತನೆಗೆ ಆಕರ್ಷಿತರಾಗಿ ತಮ್ಮ ಊರಾದ ಶಿವಣಗಿಯಿಂದ ಕಲ್ಯಾಣಕ್ಕೆ ಬಂದು ಹಗ್ಗ ಹೊಸೆಯುವ ಕಾಯಕ ಮಾಡುತ್ತ, ಬಂದ ಧನದಿಂದ ದಾಸೋಹ ಮಾಡುತ್ತ, ಬದುಕಿದ ಶ್ರೇಷ್ಠ ಕಾಯಕ ನಿರತ ಶರಣರು. ದೇವರಿಗೆ ಕಾಯಕ ಪ್ರತಿಫಲ ಪ್ರಜ್ಞೆಯ ಪಾಠ ಮಾಡಿದ ಶ್ರೇಷ್ಠ ಅನುಭಾವಿ. ನುಲಿಯ ಚಂದಯ್ಯನವರು ಅಂದಿನ ಕಾಲಘಟ್ಟದಲ್ಲಿದ್ದ ಶ್ರೇಣೀಕೃತ ವರ್ಣಾಶ್ರಮ ಸಮಾಜದ ತಳ ವರ್ಗದ ವಚನಕಾರರು. ಮಹಾಮನೆಯ ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊಂಡು ಅನೇಕ ವಚನಗಳನ್ನು ರಚಿಸಿದ್ದಾರೆ. ನಮಗೆ ಲಭ್ಯವಿರುವ ವಚನಗಳ ಸಂಖ್ಯೆ 48 ವಚನಗಳು. “ಚಂದೇಶ್ವರ ಲಿಂಗ” ಎಂಬುದು ಇವರ ವಚನಾಂಕಿತ.
ಪುರಾಣ ಕಾವ್ಯಗಳಲ್ಲಿ ಚಂದಯ್ಯನವರ ಬದುಕಿನ ಘಟನೆಗಳು ಕಂಡು ಬರುತ್ತವೆ. ಶೂನ್ಯ ಚಂಪಾದನೆ, ಶಿವತತ್ವ ಚಿಂತಾಮಣಿ, ಬಸವ ಪುರಾಣ ಗ್ರಂಥಗಳಲ್ಲಿ ವಿಸ್ತಾರವಾಗಿಯೂ, ಗುರುರಾಜ ಚರಿತೆ, ರಾಘವಾಂಕ ಚರಿತ್ರೆ, ಚನ್ನಬಸವ ಪುರಾಣ ಮುಂತಾದ ಕೃತಿಗಳಲ್ಲಿ ಸೂಚ್ಯವಾಗಿಯೂ ಚಂದಯ್ಯನವರ ಅರಿವು, ಕಾಯಕದ ವಿವರಣೆ ಇದೆ.
ಇವರ ಕುರಿತು ಒಂದು ಪೌರಾಣಿಕ ಮಾದರಿಯ ಕಥೆಯೂ ಪ್ರಚಲಿತದಲ್ಲಿದೆ. ಈ ಕಥೆಗೆ ಪೂರಕವಾಗಿ ನುಲಿಯ ಚೆಂದಯ್ಯನವರ ಮತ್ತು ಮಡಿವಾಳ ಮಾಚಿದೇವರ ಹಲವು ವಚನಗಳು ಸಂಭಾಷಣೆಯ ಮಾದರಿಯಲ್ಲಿವೆ. ಇದರಿಂದ ಚಂದಯ್ಯನವರ ಲಿಂಗ ನಿಷ್ಠೆ, ಮತ್ತು ಕಾಯಕದ ಶ್ರದ್ಧೆಯ ಮಹತ್ವ ಅರಿವಾಗುತ್ತದೆ.
ನೂಲಿಯ ಚೆಂದಯ್ಯನವರ ಕುರಿತು ಇರುವ ಒಂದು ಕಂದಪದ್ಯ ಹೀಗಿದೆ.
ನುಲಿಯ ಚೆಂದಯ್ಯನೆಂದೆಂ
ಬಲಘುತರದ ಶರಣ ತನ್ನ ಲಿಂಗದ ಕೈಯಲ್ಲಿ
ಸಲೆ ಕಾಯಕ ಮಾಡಿಸಿದ
ಗ್ಗಳ ಚರಿತವ ಪೇಳ್ವೆನಿಳೆಯೊಳಾನಂದದೊಳಂ|
ಇವರ ಕಾಯಕ ನಿಷ್ಠೆಯನ್ನು ಮೆರೆಯುವ ವಚನಗಳನ್ನು ನೋಡಣ.
ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು
ಅದೇತರ ಪೂಜೆ?
ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ, ಮಡಿವಾಳಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1332 / ವಚನ ಸಂಖ್ಯೆ-1284)
ಯಾವುದೇ ಕಾಯಕವಾಗಲಿ ಭಾವ ಶುದ್ಧವಾಗಿ, ಸಕಾರಾತ್ಮಕ ಧೋರಣೆಯಿಂದ ಸತ್ಯ ಶುದ್ಧ ಮಾರ್ಗದಿಂದ ಬಂದದ್ದು ಮಾತ್ರ ಗುರು, ಲಿಂಗ, ಜಂಗಮ ತತ್ವಕ್ಕೆ ಸಲ್ಲುತ್ತದೆ ಎಂದು ಹೇಳುತ್ತಾರೆ.
ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು,
ಪೂಜೆ-ಪುಣ್ಯ ಮಹಾದೇವನ ಹಂಗು;
ಎನ್ನ ದಾಸೋಹ ಆರ ಹಂಗೂ ಇಲ್ಲ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ,
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1332 / ವಚನ ಸಂಖ್ಯೆ-1286)
ಇವರ ಕಾಯಕ ನಿಷ್ಠೆ ಮತ್ತು ಸ್ವಾಭಿಮಾನದ ಪ್ರತೀಕ ಈ ವಚನ.
‘ಹಂಗಿನ ಅರಮನೆಗಿಂತ ತಂಗಳ ಗಂಜಿಯೇ ಲೇಸು” ಎಂಬಂತೆ ನಾನು ಮಾಡುವ ದಾಸೋಹಕ್ಕೆ ಯಾರ ಹಂಗೂ ಇಲ್ಲ ಎಂದು ಹೃದಯಪೂರ್ವಕವಾಗಿ ಸಾರಿ ಹೇಳುತ್ತಾರೆ. ಪರಮಾತ್ಮನಿಗೂ ಸವಾಲು ಹಾಕುವಷ್ಟು ಸ್ವಾಭಿಮಾನ ಇವರದು.
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ
ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯ ಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1333 / ವಚನ ಸಂಖ್ಯೆ-1291)
ಮತ್ತೊಬ್ಬರನ್ನು ಕಾಡಿ ಬೇಡಿ ತಂದದ್ದು ಪ್ರಸಾದಕ್ಕೆ ಯೋಗ್ಯವಲ್ಲ. ತನು, ಮನ, ಭಾವದಿಂದ ಮಾಡಿದ ಕಾಯಕದ ಪ್ರತಿಫಲ ಮಾತ್ರ ಪ್ರಸಾದಕ್ಕೆ ಯೋಗ್ಯವೆಂದು, ಅದು ಮಾತ್ರ ಲಿಂಗಕ್ಕೆ ಅರ್ಪಿವೆಂಬ ಭಾವ ನುಲಿಯ ಚಂದಯ್ಯ ಶರಣರದು.
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1334 / ವಚನ ಸಂಖ್ಯೆ-1303)
ಇದು ಕಾಯಕ ತತ್ವವನ್ನು ತಿಳಿಸುವ ಅದ್ಭುತ ವಚನ. ಕಾಯಕವು ಜಡತ್ವವನ್ನು ಕಳೆದು ಚೈತನ್ಯವನ್ನು ತುಂಬಿ ಸದಾ ಕ್ರಿಯಾಶೀಲವಾಗಿಡುವುದು. ಜಡಶೀಲತೆಯನ್ನು ಕಳೆದು ಚಲನಶೀಲತೆಯನ್ನು ತುಂಬುವದು. ಅಂತಹ ಭಾವವನ್ನು ಈ ವಚನದಲ್ಲಿ ಕಾಣುತ್ತೆವೆ. ಯಾರೇ ಆಗಲಿ ಕಾಯಕದಿಂದಲೇ ಜೀವನ್ಮುಕ್ತಿಯನ್ನು ಪಡೆಯಬೇಕೆಂಬ ಆಶಯದ ವಚನವಿದು.
ಹೀಗೆ ಗುರು, ಲಿಂಗ, ಜಂಗಮ ಮತ್ತು ಕಾಯಕ ನಿಷ್ಠೆಯನ್ನು ಮಾಡಿಕೊಡುವ ಅದ್ಭುತ ವಚನಗಳನ್ನು ರಚನೆ ಮಾಡಿದ ಅಮರಗಣಂಗಳಲ್ಲಿ ಇವರೂ ಪ್ರಮುಖ ಸ್ಥಾನದಲ್ಲಿ ನಿಲ್ಲುವ ಶರಣರು. ಇಂತಹ ಅದ್ಭುತ ವ್ಯಕ್ತಿತ್ವದ ಶರಣರ ಕುರಿತು ಅಧ್ಯಯನ ಮಾಡುವುದೇ ನಮ್ಮೆಲ್ಲರ ಭಾಗ್ಯ.
ಶ್ರೀಮತಿ. ಸವಿತಾ ಮಾಟೂರ
ಇಳಕಲ್ಲ
ಫೋನ್ ನಂ:+91 78927 10782