
ಕನ್ನಡ ನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಸಮಾನತೆಯ ನೆಲೆಯಲ್ಲಿ ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ವಿಶಿಷ್ಟವಾಗಿ ಬೆಳೆಯಿತು. ಅಕ್ಷರ ಕಲಿಕೆಯು ಪ್ರತಿಯೊಬ್ಬರ ಹಕ್ಕು ಎಂದು ಸಾಬೀತು ಪಡಿಸಿದವರು ಶಿವಶರಣರು. ಬಸವಾದಿ ಪ್ರಮಥರು ನಡೆಯಲ್ಲಿ ನುಡಿಯಲ್ಲಿ ಒಂದಾದವರು. ದುಡಿತ ವರ್ಗದವರಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದವರು ಬಸವಣ್ಣನವರು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮಾನವೀಯ ಮೌಲ್ಯಗಳನ್ನು ಸಾರಿ ಸಾಕ್ಷೀಕರಿಸಿದವರು. ಲಿಂಗ ಬೇಧ, ವರ್ಗಬೇಧ ತಾರತಮ್ಯ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ ಸರ್ವ ಸಮಾನತೆಯ ಬಸವಣ್ಣನವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರೆಲ್ಲಾ ಅಕ್ಷರ ಕಲಿತು ವಚನಗಳನ್ನು ಬರೆದು ತಮ್ಮ ಅಭಿವ್ಯಕ್ತಿ ಕೌಶಲ್ಯ ಮೆರೆದು ವ್ಯಕ್ತಿತ್ವವನ್ನು ಅನಾವರಣ ಗೊಳಿಸಿದ್ದು ನಮ್ಮ ನಾಡಿನ ಹೆಮ್ಮೆಯ ಸಂಗತಿಯಾಗಿದೆ. ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಸಾಕಷ್ಟು ಮೌಢ್ಯ, ಕಂದಾಚಾರಗಳಿದ್ದವು. ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಸರಳೀಕರಿಸಿ ಮಾದರಿ ಸಮಾಜ ನಿರ್ಮಿಸಿದವರು ಶಿವಶರಣರು.
ಅಕ್ಕನಾಗಮ್ಮ, ಗಂಗಾಬಿಕೆ, ನೀಲಾಂಬಿಕೆ, ಅಕ್ಕಮಹಾದೇವಿ, ಮುಕ್ತಾಯಕ್ಕ, ದುಗ್ಗವ್ವೆ, ಕಾಳವ್ವೆ, ಕದಿರೆ ರೆಮವ್ವೆ, ಕೊಟ್ಟಣದ ಸೋಮವ್ವೆ, ಕಾಯಕ ನಿಷ್ಠೆಯ ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಮಹಿಳೆಯರೆಲ್ಲಾ ಅಕ್ಷರ ಕಲಿತು ಮಹಾಮನೆಯಲ್ಲಿ ಸದಸ್ಯರಾಗಿದ್ದರು. ಅನುಭವ ಮಂಟಪದಲ್ಲಿ ಸಹಭಾಗಿತ್ವ ಪಡೆದು ವಚನಗಳನ್ನು ಬರೆದು ಪ್ರಕಟಿಸಿದರು. ಕದಿರೆ ರೇಮವ್ವೆಯು ಬಸವಾದಿ ಶರಣರ ಕಾಲಘಟ್ಟವಾದ 1160 ರಲ್ಲಿ ಇದ್ದುದ್ದು ಸ್ಪಷ್ಟವಾಗುತ್ತದೆ. ಕದಿರೆ ರೇಮವ್ವೆಯರಿಗೆ ತಿಮ್ಮವ್ವೆ ಮತ್ತು ರೆಬ್ಬವ್ವೆ ಎಂದೂ ಕರೆಯುತ್ತಿದ್ದರು. ಕದಿರೆ ರೇಮಯ್ಯನವರ ಧರ್ಮಪತ್ನಿಯಾಗಿರಬೇಕೆಂದು ಊಹಿಸಲಾಗಿದೆ. ಇಂದಿನ ರಬಕವಿ ಊರಿನ ರೆಬ್ಬವ್ವೆ ಎಂದು ಇವರನ್ನು ಗುರುತಿಸುತ್ತಾರೆ. ರೆಬ್ಬವ್ವೆಯ ಗವಿ ರಬಕವಿ ಆಗಿರಬೇಕು. ರಬಕವಿಯ ಕುಬುಸ ಬನಹಟ್ಟಿ ಸೀರೆ ಎಂದೇ ಇಂದಿಗೂ ಪ್ರಸಿದ್ದವಾಗಿವೆ. ಅದರ ಜೊತೆಗೆ ಗುಳೇದಗುಡ್ಡ, ಇಳಕಲ್ಲ, ರಾಮದುರ್ಗ ಮುಂತಾದ ಊರುಗಳಲ್ಲಿ ನೇಕಾರರು ಹೆಚ್ಚಾಗಿ ನೆಲೆಸಿದ್ದಾರೆ. ಕದಿರೆ ರೇಮವ್ವೆಯು ನೇಕಾರರ ಪ್ರತಿನಿಧಿತ್ವವನ್ನು ಸಾಬೀತು ಪಡಿಸಿದವರು ಇವರ ವಚನದ ಅಂಕಿತನಾಮ “ಕದಿರೆ ರೆಮ್ಮಿಯೊಡೆಯ ಗುಮ್ಮೇಶ್ವರಾ”. ರೇಮವ್ವೆಯು ಅನುಭವ ಮಂಟಪದಲ್ಲಿ ವಚನಗಳನ್ನ ಬರೆದು ತನ್ನ ವಿಶಿಷ್ಟ ಪ್ರತಿಭೆಯನ್ನು ಸಾಬೀತುಪಡಿಸಿದ ಅವಿರಳ ವಚನಕಾರ್ತಿ. ಆಧ್ಯಾತ್ಮ ಮತ್ತು ಕಾಯಕವನ್ನು ಒಂದಾಗಿಸಿ ತನ್ನದೇ ಆದ ವೈವಿಧ್ಯಮಯ ಪದಗಳನ್ನು ಬಳಸಿ ವಚನಗಳನ್ನು ಬರೆದು ವಿಶಿಷ್ಟ ಮಹಿಳಾ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ ಕದಿರೆ ರೇಮವ್ವೆ.
ಕದಿರೆ ರೇಮವ್ವೆಯು ಕೌಟುಂಬಿಕ ವಲಯದಲ್ಲಿ ಬರುವ ಅನುಭಾವದ ಅನುಭೂತಿಯ ನೇರನುಡಿ. ಆಕೆಯು ದಿಟ್ಟ ವ್ಯಕ್ತಿತ್ವದ ಮಾತಿನ ಛಾತಿ ಮತ್ತು ಛಾಯೆಯ ಛಾಪು ಪ್ರಖರವಾಗಿದೆ. ದುಡಿಮೆಯ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ರೇಮವ್ವೆ. ಒಂದೆಡೆ ಕದಿರು ಇನ್ನೊಂದೆಡೆ ಇಷ್ಟಲಿಂಗ ಗುಮ್ಮೇಶ್ವರ. ಇಲ್ಲಿ ವೃತ್ತಿ ಧರ್ಮ ಕದಿರೆ ಮತ್ತು ಇಷ್ಟಲಿಂಗ ಧರ್ಮ ಗುಮ್ಮೇಶ್ವರವಾಗಿದ್ದಾನೆ ಈ ಎರಡರ ಅನೂಹ್ಯವಾದ ಅವಿನಾಭಾವವನ್ನು ಈ ವಚನದಲ್ಲಿ ಕದಿರೆ ರೇಮವ್ವೆಯ ಅಭಿವ್ಯಕ್ತಿ ಕುಶಲಗಾರಿಕೆಗೆ ಸಾಕ್ಷಿಯಾಗಿದೆ. ಸತಿ ಪತಿಯರ ಪ್ರಕ್ರಿಯೆ ಪ್ರಕೃತಿಯಲ್ಲಿ ಸಹಜವಾಗಿಯೇ ನಡೆವ ಕ್ರಿಯೆ. ಅದೆಲ್ಲವೂ ಮೀರಿದ ಬಂಧ ನಮ್ಮದು. ಈ ಭಾವವು ಹೀಗೆ ಎಂದೆನಲಾಗದು ಗುಮ್ಮೇಶ್ವರ. ಎನ್ನ ಒಡೆಯ ಇಷ್ಟಲಿಂಗ ಭಾವದೊಂದಿಗೆ ಕಾಯಕ ಮತ್ತು ಸಂಸಾರ ಸಾಗರದ ಭಾವದಲ್ಲಿ ರೇಮವ್ವೆ ನಡೆ ನಮಗೆ ವಿಸ್ತೃತ ರೂಪದಲ್ಲಿ ಒಳತೋಟಿಯ ಮಿಡಿತ ಅರಿತವರಿಗೆ೨ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಎಲ್ಲರ ಹೆಂಡಿರು ತೊಳಸಿಕ್ಕುವರು;
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು;
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-283/ವಚನ ಸಂಖ್ಯೆ-744)
ಈ ವಚನದಲ್ಲಿ ರೇವಮ್ಮೆಯು ನಿಜ ಬದುಕಿನ ಗಂಡ ಹೆಂಡತಿಯರ ಒಡಂಬಡಿಕೆಯನ್ನು ಅಲೌಕಿಕವಾದ ನಿಲುವಿನಲ್ಲಿ ಮಾತನಾಡುತ್ತಾಳೆ. ಈ ವಚನವನ್ನು ನಾವು ಓದಿದರೆ ವೀರ ವೈರಾಗಿನಿ ಅಕ್ಕಮಹಾದೇವಿಯು ನೆನಪಾಗುತ್ತಾಳೆ. ಸತಿಪತಿ ಭಾವ ಲಿಂಗಸಂಗಮವಿದ್ದಂತೆ! ಗಂಡ ಹೆಂಡತಿಯರು ಆತ್ಮಾವಲೋಕನದಿಂದ ಆಧ್ಯಾತ್ಮವಾಗಿ ಒಬ್ಬರನ್ನೊಬ್ಬರು ಅರಿತು ಸತಿಪತಿ ಭಾವದಲ್ಲಿ ಮನಸಾರೆ ಒಂದಾಗುವಿಕೆ. ನಾನು ಹೆಚ್ಚು ನೀನು ಕಡಿಮೆ ಎಂಬ ಭೇದಭಾವ ಬೇಡ. ನೀವು ನಾವು ಸಮತೂಕ. ಸಮಭಾವ. ಸಮತೆಯ ವ್ಯಕ್ತಿತ್ವ ಸಮಾನತೆಯ ನಡೆಯಲ್ಲಿ ಒಂದಾಗುವ ಪ್ರಕೃತಿಯ ಕ್ರಿಯೆ. ಬಹಳ ಸೂಕ್ಷ್ಮವಾಗಿ ಕದಿರೆ ರೇಮವ್ವೆ ಗಂಡ ಹೆಂಡತಿಯರ ಲೌಕಿಕ ಅಸಮಾನತೆಯನ್ನು ಅಲೌಕಿಕ ಚಿಂತನೆಯ ಮೂಲಕ ತನ್ನ ತಾನರಿದು ಪತಿಯು ಶ್ರೇಷ್ಠನೆಂಬುವವರಿಗೆ ಈ ವಚನದ ಮೂಲಕ ಉತ್ತರಿಸುತ್ತಾಳೆ. ಸಮಾಜಕ್ಕೆ ತನ್ನ ಸೋಪಜ್ಞತೆಯನ್ನು ಅಭಿವ್ಯಕ್ತಿಸಿದ್ದಾಳೆ ಕದಿರೆ ರೇಮವ್ವೆ. ಕಾಲಘಟ್ಟಗಳಲ್ಲಿ ಎಷ್ಟೋ ಅಸಮಾನತೆಗಳನ್ನು ಇಂದಿಗೂ ನಾವು ಕಾಣುತ್ತೇವೆ. ಭಾವಾನುಭಾವದಲ್ಲಿ ಎರಡು ಜೀವಗಳು ಏಕವಾಗುವುದರಲ್ಲಿ ಯಾವ ಹೆಚ್ಚಿಗಾರಿಕೆ ಇರಲಾರದು ಎಂಬುದೇ ಕದಿರೆ ರೇಮವ್ವೆಯ ಅಭಿಮತ.
ಎಲ್ಲರ ಗಂಡಂದಿರು ಪರದಳವಿಭಾಡರು;
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು;
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು;
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ;
ಅದೊಂದೂ ಸಂದೇಹ,
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-283/ವಚನ ಸಂಖ್ಯೆ-743)
ಈ ವಚನದಲ್ಲಿ ಸಮಾಜದಲ್ಲಿ ಎಷ್ಟೋ ಪುರುಷರು ಪ್ರಕೃತಿಯೊಂದಿಗೆ ತಮ್ಮ ಪೌರುಷವನ್ನು ಮೆರೆಯುತ್ತಾರೆ. ಪ್ರಕೃತಿಯಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಅವರವರ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ವಿಶಿಷ್ಟರೇ ಆಗಿರುತ್ತಾರೆ. ಗಜವನ್ನು ಪಳಗಿಸುವ ಚಟುವಟಿಕೆಯಲ್ಲಿ ಎಷ್ಟೋ ಪುರುಷರು ಮೆರೆಯುತ್ತಾರೆ. ಆದರೆ ರೇಮವ್ವೆಯು ತನ್ನ ಪುರುಷ ಮನದ ಮಹಾಧೀರ. ತನ್ನನ್ನು ಅರಿತುಕೊಳ್ಳುವ ಮನ ಬೇಟೆಗಾರ. ಎನ್ನ ಗಂಡ ಎನ್ನ ಮನವ ಭೇಟೆಯಾಡಿದ ಧೀರನು. ಯಾವ ಅಹಂಕಾರಗಳನ್ನು ಹೊಂದಿರದ ನನ್ನನ್ನು ಅರಿಯುವ ಮನಸ್ಥಿತಿಯವನು. ಆದ್ದರಿಂದ ಎನ್ನ ಗಂಡನೇ ನನ್ನ ಮನದಾಳದ ವಿಭಾಡ ನನ್ನ ಪ್ರಿಯ. ಎಲ್ಲರ ಗಂಡದಿರರಿಗೂ ನನ್ನ ಗಂಡನಿಗೂ ಇರುವ ವ್ಯತ್ಯಾಸ ಇದೆ. ನನ್ನ ಮನವನ್ನು ಅರಿತು ನಡೆಯುವ ಎನ್ನ ಗಂಡನ ಕುರಿತು ನಾನು ಸಂದೇಹ ಪಡದ ಮನಸ್ಥಿತಿಗೆ ಒಳಗೊಳ್ಳಬೇಕಿದೆ. ಕದಿರೆಮ್ಮಿಯೊಡೆಯ ಗುಮ್ಮೇಶ್ವರಾ ಎಂದು ಮನಸಾರೆ ರೇಮವ್ವೆ ಅರಹುತ್ತಾಳೆ.
ಕುಲ ಕಸುಬಿನ ದುಡಿಯುವ ಜನತೆಗೆ ವೃತ್ತಿ ಗೌರವ ತಂದುಕೊಟ್ಟವರು ಬಸವಾದಿ ಪ್ರಮಥರು. ಶ್ರಮದ ಘನತೆ ಎತ್ತಿ ಹಿಡಿದು ಶ್ರಮಿಕರನ್ನು ಒಂದಾಗಿಸಿ ಅವರಿಗೆ ಅವರ ವೃತ್ತಿಗೆ ಕಾಯಕ ಧರ್ಮವೆಂದು ಕರೆದು ದುಡಿಮೆಯಲ್ಲಿ ದೈವವನ್ನು ಕಾಣಲು ಮಾರ್ಗ ತೋರಿದವರು ವಚನಕಾರರು. ಹಲವು ಕುಲಕಸಬಿನ ಕುಶಲಗಾರರು ತಮ್ಮ ವೃತ್ತಿಯಲ್ಲಿ ಅನನ್ಯತೆ ಪಡೆದರು. ಅಂಥ ವೃತ್ತಿಯಾದ ನೇಕಾರಿಕೆಯಲ್ಲಿ ಹತ್ತಿಯನ್ನು ರಾಟೆಗೆ ಹೊಂದಿಸಿ ಎಳೆ ಎಳೆಯಾಗಿ ಬಿಡಿಸಿಟ್ಟು ಬಟ್ಟೆಗಳನ್ನು ತಯಾರಿಸುವ ರಾಟೆಯ ಬಗ್ಗೆ ಇಲ್ಲಿ ಕದಿರೆ ರೇಮವ್ವೆ ವಚನದಲ್ಲಿ ಹೀಗೆ ಅಭಿವ್ಯಕ್ತ ಪಡಿಸುವರು.
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ,
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-284/ವಚನ ಸಂಖ್ಯೆ-745)
ಕದಿರೆ ರೆಮ್ಮವ್ವೆಯು ಅನುಭಾವದ ನೆಲೆಯಲ್ಲಿ ಕುಲಜಾತಿಯ ಬಗ್ಗೆ ಹೀಗೆ ಹೇಳುವರು. ನೂಲನ್ನು ತೆಳುವಾಗಿ ನವಿರಾಗಿಸುವ ತಿರುಹುವ ರಾಟೆಯ ಕುಲ ಜಾತಿಯ ಕೇಳಲು ಸಾಧ್ಯವೇ? ನಾವು ಬಳಸುವ ಪರಿಕರಗಳ ಕುಲಜಾತಿಯನ್ನು ಕೇಳದ ನಾವುಗಳು, ಮನುಷ್ಯರಲ್ಲಿ ಮಾತ್ರ ಕುಲಜಾತಿಯ ಪ್ರಶ್ನೆ ಬರುವುದು ಏಕೆ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಪರಿಕರಗಳೇ ಬ್ರಹ್ಮ, ವಿಷ್ಣು, ಮಹೇಶ್ವರರು ನಮ್ಮ ಕಾಯಕವನ್ನು ಮುನ್ನಡೆಸುವರು. ಕಾಯಕ ನಿರತ ರೇಮವ್ವೆ ಆಧ್ಯಾತ್ಮಿಕವಾಗಿ ಹತ್ತಿಯಿಂದ ನೂಲನ್ನು ಮಾಡಿ ಆ ನೂಲಾಗಿಸುವ ಕದಿರೆ, ರಾಟಿ, ಚಕ್ರ, ಹತ್ತಿಯಿಂದ ಎಳೆ ಎಳೆಯನ್ನು ನವಿರಾಗಿಸುವ ಕೌಶಲ್ಯ. ಆ ಕರಕುಶಲಗಾರರೇ ಅನುಭವಿಕರು. ಅಂತಹ ಸಾಮಥ್ಯವನ್ನು ಹೊಂದಿರುವ ರೇಮವ್ವೆಯು ಕುಟುಂಬ ಜೀವನವನ್ನು ಸಮೀಕರಿಸುತ್ತಲೇ ಬೆಡಗಿನ ವಚನವನ್ನು ಬರೆದು ತನ್ನ ತಾಕತ್ತನ್ನು ಅಭಿವ್ಯಕ್ತಿಸಿದ್ದಾಳೆ. ಇಲ್ಲಿ ಗಂಡ ಎನ್ನುವ ಶಬ್ಧ ಹಲವು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತದೆ.
ಲೌಕಿಕವಾಗಿರುವ ಗಂಡ ಎಂಬ ಪದ ಅಲೌಕಿಕ ಪಾರಮಾರ್ಥಿಕ ಸತ್ಯವನ್ನು ಕಂಡುಕೊಳ್ಳಲು ಇಲ್ಲಿ ಸಾಧ್ಯವಾಗುತ್ತದೆ. ಭಕ್ತಿಯ ಕೈಯಲ್ಲಿ ಅರಿವೆಂಬ ಕದಿರು ಇದೆ. ರಾಟೆಯ ತಿರುವಾಗ ನೂಲು ಸುತ್ತುವಾಗ ಕದಿರು ತುಂಬಿತ್ತು. ಎನ್ನಯ ಒಡೆಯ ಎಂದು ಇಷ್ಟಲಿಂಗವಾದ ಗುಮ್ಮೇಶ್ವರನಿಗೆ ಕದಿರೆ ರೇಮವ್ವೆ ಮನದ ಇಂಗಿತವನ್ನು ಹೀಗೆ ವ್ಯಕ್ತಪಡಿಸುತ್ತಾಳೆ. ಇಲ್ಲಿ ಭಕ್ತಿಯಿಂದ ರೇಮವ್ವೆಯು ನೂಲನ್ನು ಸುತ್ತುವಾಗ ಕದಿರೆ ತುಂಬಿತ್ತು. ಇಂದಿನ ಕಾಯಕ ಇಲ್ಲಿಗೆ ಸಾಕು. ಏನಿದ್ದರೂ ಮಹಾಮನೆಯಲ್ಲಿ ಭಕ್ತಿಯಿಂದ ದಾಸೋಹ ಚಿಂತನೆಯ ಹಾದಿಯಲ್ಲಿ ನಾವು ನಡೆಯಬೇಕಿದೆ. ಅವಶ್ಯಕತೆಗೆ ತಕ್ಕಂತೆ ನಮ್ಮ ಬದುಕು ಸರಳವಾಗಿ ಇರಬೇಕು. ಅತೀ ಯಾವುದು ಇರಬಾರದು ಎಂದು ರೇಮವ್ವೆಯು ತನ್ನ ಇಷ್ಟಲಿಂಗಕ್ಕೆ ಕದಿರೆ ತುಂಬಿತ್ತು ಎನ್ನೊಡೆಯ ಎನ್ನುತ್ತಾಳೆ. ಅಂದರೆ ಭಕ್ತಿಯಿಂದ ಮಾಡುವ ಕಾಯಕವು ಅನವಶ್ಯಕವಾಗಿ ಇರಕೂಡದು. ಎಲ್ಲದಕ್ಕೂ ಅದರದೇ ಆದ ಮಿತಿ ಇದೆ. ಹಿತಮಿತವಾದ ಬದುಕು ನಮ್ಮತನವನ್ನು ಅನಾವರಣಗೊಳಿಸುತ್ತದೆ ಎನ್ನುವುದಕ್ಕೆ ಕದಿರೆ ರೇವಮ್ಮೆಯ ಚಿಂತನೆ ಮತ್ತು ಬದುಕು ನಮಗೆ ಅನುಕರಣೀಯವಾಗಿದೆ.
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ.
ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ.
ಎನ್ನ ಕಾರಣತನುವೆ ಪ್ರಭುದೇವರಯ್ಯಾ,
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-283/ವಚನ ಸಂಖ್ಯೆ-742)
ಅಕ್ಕಮಹಾದೇವಿಯು ಬಸವಣ್ಣ ಅಲ್ಲಮ ಇವರನ್ನೆಲ್ಲ ವಿಶಿಷ್ಟರು ಎಂದೇ ಹೇಳುತ್ತಾಳೆ. ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ಎಂದು ಬಸವಣ್ಣ ಅಲ್ಲಮರಿಗೆ ಜ್ಯೋತಿಯಾದಿರಿ ಎನ್ನುತ್ತಾರೆ. ಕಲ್ಯಾಣದ ಕೊನೆ ಕಾಲಘಟ್ಟದಲ್ಲಿ ತೈಲ ಮುಗಿಯಿತು. ಬತ್ತಿ ಬಿದ್ದಿತು ಜ್ಯೋತಿ ಆರಿತು ಎನ್ನುತ್ತಾರೆ. ಇಂತಹ ಬಸವಾದಿ ಶರಣರಿಗೆ ಕದಿರೆ ರೇಮವ್ವೆಯು ಬಸವಣ್ಣನು ನನ್ನ ಸ್ಥೂಲಕಾಯ, ಚೆನ್ನಬಸವಣ್ಣನು ಎನ್ನ ಸೂಕ್ಷ್ಮವಾದ ದೇಹಕಾಯ, ಎನ್ನ ಕಾರಣತನುವೇ ಪ್ರಭುದೇವರು. ಈರ್ವರ ಕರುಣೆ, ಗೌರವ, ಪ್ರೀತಿ, ಶ್ರಮದ ಘನತೆ. ಈ ಎಲ್ಲವನ್ನು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರ ಕರುಣೆ ಮತ್ತು ಕಕ್ಕುಲಾತೆಯಿಂದ ನಾನು ಬದುಕಿದೆನು ಎಂದು ರೇಮವ್ವೆ ತನ್ನ ತನುಮನವನ್ನು ಕಾಯಕ ದಾಸೋಹಕ್ಕೆ ಅರ್ಪಿಸಿದ್ದಾಳೆ.
ವಚನಕಾರರ ಕಾಲಘಟ್ಟಲದಲ್ಲಿ ತನ್ನ ಘನವ್ಯಕ್ತಿತ್ವವನ್ನು ಅಕ್ಷರ ಜ್ಞಾನದ ಮೂಲಕ ನಡೆ ನುಡಿಯಲ್ಲಿ ರೇಮವ್ವೆಯು ತನ್ನತನವನ್ನು ನಿರ್ಭಿಡೆಯಿಂದ ಕರಕುಶಲಗಾರಿಕೆಯ ಕಾಯಕದೊಂದಿಗೆ ಜೀವನದ ಮಹತ್ವವನ್ನು ಸಾರಿದ್ದಾಳೆ. ಸರಳತೆಯ ಅರಿವನ್ನು ವಚನದಲ್ಲಿ ಹಾಡಿ ಭಕ್ತಿ ಪರಂಪರೆಯ ಕಾಯಕವನ್ನು ಕಂಡುಂಡು ವೈಚಾರಿಕ ನಿಲುವಿನಲ್ಲಿ ಕದಿರೆ ರೇಮವ್ವೆ ನಮಗೆ ದಿಟ್ಟ ಹೆಜ್ಜೆಯ ಶಿವಶರಣೆಯಾಗಿ ಮಾದರಿಯಾಗಿ ನಿಲ್ಲುತ್ತಾಳೆ.
ಬೆಡಗಿನ ವಚನಗಳನ್ನು ಬರೆದಿರುವ ಕದಿರೆ ರೇಮವ್ವೆಯು ಕಾಯಕ ಭಕ್ತಿಯೊಂದಿಗೆ ತನ್ನ ಸೋಪಜ್ಞತೆಯನ್ನು ಶರಣತತ್ವದಲ್ಲಿ ಅನಾವರಣ ಮಾಡುವಳು. ಗಂಡ ಎನ್ನುವುದು ಇಲ್ಲಿ ಅಹಂಕಾರ. ಆ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿತ್ವ ಯಾವತ್ತೂ ಅದು ಮೇಲಾಗದು. ಎಂಬ ಅಭಿಮತ ಕದಿರೆ ರೇಮವ್ವೆಯದ್ದು.
ಕದಿರೆ ರೇಮವ್ವೆಯು ಅರಿವಿನ ದಾರಿಯಲ್ಲಿ ಒಳತೋಟಿಯ ತುಡಿತ ಬಹಳ ಪ್ರಮುಖವಾದುದು. ಕುಟುಂಬ ಎಂಬುದು ಸಮತೆಯ ಪ್ರತೀಕ. ಕೌಟುಂಬಿಕ ಬಂಧನ ಅನೂಹ್ಯವಾದ ಬಂಧ. ಅದಕ್ಕೆ ಅದರದೇ ಆದ ಮಾರ್ಮಿಕವಾದ ಚೌಕಟ್ಟು ಇದೆ. ಏಕದೇವೋಪಾಸನೆಯ ಶರಣರು ನಿತ್ಯಮುಕ್ತರು. ಅಂದಂದಿಗೆ ಅವರು ಸೃಜನಶೀಲರು. ಪ್ರಕೃತಿಯಲ್ಲಿ ಅವರ ಅನುಭಾವವನ್ನು ಮನದ ಪ್ರಖರ ಚಿಂತನೆಗೆ ಹಚ್ಚುವ ಮೂಲಕ ತನ್ನ ಭಾವವನ್ನು ರೇಮವ್ವೆ ಇಲ್ಲಿ ಅಭಿವ್ಯಕ್ತಗೊಳಿಸುವಳು. ಆದ್ದರಿಂದ ಮಹಿಳಾ ವಚನಕಾರ್ಥಿಯಲ್ಲಿ ಕದಿಮೆ ರೇಮವ್ವೆಯು ನಮಗೆ ವಿಶಿಷ್ಟವಾಗಿ ಕಾಣುವ ವ್ಯಕ್ತಿತ್ವ ಆದರ್ಶನೀಯವೇ ಸರಿ.
ಡಾ. ಸುಜಾತಾ ಅಕ್ಕಿ.
ಮನೆ ನ. 57, 6 ನೇ ಮುಖ್ಯ ರಸ್ತೆ,
ಮಾರುತಿ ದೇವಸ್ಥಾನ ರಸ್ತೆ,
ಸರಸ್ವತಿಪುರಂ,
ಮೈಸೂರು – 580 009
ಮೋಬೈಲ್ ಸಂ. +91 99012 85196