
ಕನ್ನಡ ಸಾಹಿತ್ಯ ಲೋಕದಲ್ಲಿ 12 ನೇಯ ಶತಮಾನ, ಆ ಸಂದರ್ಭದಲ್ಲಿ ಬಂದಂತಹ ವಚನ ಸಾಹಿತ್ಯ, ಇತಿಹಾಸದಲ್ಲಿ ಒಂದು ಅಪೂರ್ವವಾದ ದಾಖಲೆಯನ್ನು ನಿರ್ಮಿಸಿತು. ಅದು ಸಾಹಿತ್ಯದ ರೀತಿಯನ್ನು, ಭಾಷೆಯನ್ನು, ಛಂದಸ್ಸನ್ನು ಮಾತ್ರ ಗಮನಿಸಲಿಲ್ಲ, ಬದಲಿಗೆ ಸಮಾಜವನ್ನೇ ಹೊಸ ದಿಕ್ಕಿನೆಡೆಗೆ ನೋಡುವಂತೆ ಮಾಡಿತು. ಆ ಹೊಸ ದಿಕ್ಕು ತನ್ನ ದಿಕ್ಸೂಚಿಯನ್ನು ರಚಿಸಿದ್ದು, ಸತ್ಯದ ಶುದ್ಧ ಬದುಕಿಗಾಗಿ ಎನ್ನುವಂತಹದು ಅಚ್ಚರಿಯನ್ನು ಮೂಡಿಸಿದರೂ, ಅದು ಇಂದಿನ ಜೀವನಕ್ಕೂ ಸರಿ ಹೊಂದಬಲ್ಲ ತಾತ್ವಿಕ ಮಾತೃಕೆಯನ್ನು ರಚಿಸಿದೆ ಎನ್ನುವುದು ಸದಾ ಸಂಸ್ಮರಣೀಯವಾದ ಸಂಗತಿಯಾಗಿದೆ. ಅನೇಕ ಶರಣರು ಬಸವಣ್ಣನವರ ನೇತೃತ್ವದಲ್ಲಿ, ನವ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿದರು. ಹಾಗೆ ಬುನಾದಿಯನ್ನು ಭದ್ರಗೊಳಿಸಿದವರಲ್ಲಿ ಶಿಖರಪ್ರಾಯವಾಗಿ ನಿಲ್ಲುವ ವ್ಯಕ್ತಿತ್ವದ ಶರಣ ʼಅಲ್ಲಮ ಪ್ರಭುʼ. ಅಲ್ಲಮನ ಜನನದ ಬಗೆಗಾಗಲೀ, ದೇಶದ ಬಗೆಗಾಗಲೀ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. “ಬಳ್ಳಿಗಾವಿಯ ಅಲ್ಲಿರ್ಪ ನಾಗವಾಸಾಧಿಪತಿಯಪ್ಪ, ಸಲ್ಲಲಿತ ನಾಯಕನ ಬಸಿರೊಳ್” ಎಂದು ʼಹರಿಹರʼ ಸೂಚಿಸಿದರೆ, ಕವಿ ʼಚಾಮರಸ” ಅಲ್ಲಮನ ತಂದೆ-ತಾಯಿ ʼನಿರಹಂಕಾರ-ಸುಜ್ಞಾನಿʼ ಎನ್ನುತ್ತಾನೆ. ಮೃದಂಗ ವಾದನವನ್ನು ಮೈಗೂಡಿಸಿಕೊಂಡಿದ್ದ ಅಲ್ಲಮ ʼಕಾಮಲತೆʼಯನ್ನು ಪ್ರೀತಿಸಿ ಆನಂತರ ವೈರಾಗ್ಯ ಪರನಾದ ಎಂದು ಹರಿಹರ ಚಿತ್ರಿಸಿದರೆ, ʼಮಾಯೆʼಯನ್ನು ಆಡಿಸಿದ ಮದ್ದಳೆಯ ಅಲ್ಲಮ ಚಾಮರಸನಲ್ಲಿ ಮೂಡಿ ಬಂದಿದ್ದಾನೆ. ಅಲ್ಲಮ ಗುರುವಾಗಿ ಭಾವಿಸಿದ ʼಅನಿಮಿಷ ದೇವʼನ ಚಿತ್ರಣವನ್ನು ಎಲ್ಲ ಕಾವ್ಯಗಳೂ ನೀಡಿವೆ. ಅಲ್ಲಮ ಜಂಗಮವಾಗಿ ಚರಿಸಿದವನು, ತತ್ವವೇ ತಾನಾದವನು. ಆತ ಸೈದ್ಧಾಂತಿಕವಾಗಿ ಚರ್ಚಿಸಿರುವ ವಿಷಯಗಳು ಹಲವಿದ್ದರೂ ʼಮಾತುʼ ವಾಕ್ಕಿನ ಅಗಾಧತೆಯನ್ನು ವಿಪುಲವಾಗಿ ಚರ್ಚಿಸಿದ್ದಾನೆ. ಶರಣನಾದವನು ತನ್ನ ಮಾತಿನ ಮೂಲಕವೇ ಆತ್ಮವಿಮರ್ಶೆ, ದೈವಕ್ಕೆ ಮೊರೆಯಿಡುವುದನ್ನು ಒಟ್ಟಿಗೆ ಮಾಡಿ, ಮಾತಿನ ಮೂಲಕವೇ ಪರವನ್ನು ಸಾಧಿಸುವುದೇ ಈ ವಾಕ್ಕಿನ ಉದ್ದೇಶ.
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳು ಓಷ್ಟ್ರ ಸಂಪುಟವೆಂಬುದು ನಾದಬಿಂದು ಕಳಾತೀತ,
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ.
ಶರಣರು ಸೂತಕಿಗಳಾಗದೇ ಇರುವುದಕ್ಕಿರುವ ಮುಖ್ಯ ಕಾರಣವೆಂದರೆ, ಅವರು ದರ್ಶಿಸುವ ಪರಮಾತ್ಮ ಅವನು ಎಲ್ಲ ಕಡೆ ಇದ್ದೂ ಇಲ್ಲದಿರುವಂತೆಯೇ, “ಶಬ್ದದೊಳಗಣ ನಿಶಬ್ದದಂತೆ” ಇರುವವನು, ಕಾರಣ ಶಿವನ ಘನವನ್ನು ಭೇದಿಸಬಲ್ಲ ಶಬ್ದವೇ ಭುವಿಯಲ್ಲಿಲ್ಲ. ಶಿವ ಹೇಗೇ ಮಹಾದೇವನೋ ಹಾಗೆಯೇ ಮಹಾಮೌನಿ ಕೂಡ. ಅದೇ ನಿಶಬ್ದ, ಆತನ ಸುತ್ತಲಿರುವ ಎಲ್ಲ ಮಾತುಗಳಿಗೂ ಶಬ್ದವನ್ನು – ಅರ್ಥವನ್ನು ತುಂಬಿದರೂ, ಶಿವನ ಮೌನಕ್ಕೆ – ನಿಶಬ್ದಕ್ಕೆ ಸಾಟಿಯಾದ ಶಬ್ದವೇ ಜಗತ್ತಿನಲ್ಲಿಲ್ಲ. ಆ ನಿಶಬ್ದ ಬ್ರಹ್ಮನನ್ನು ಕುರಿತು ಮಾತುಗಳು ಹೊರಚೆಲ್ಲಬಾರದು.
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
ಮುನ್ನಿ ನೀ ಬಾಯ ಮುಚ್ಚಿಕೊಂಡಿರ್ದೆ ಎಂಬುದ
ನಾ ನಿನ್ನ ಕಣ್ಣಿಂದ ಕಂಡೆನು
ಎನ್ನ ನಾನರಿದ ಬಳಿಕ ಇನ್ನು ನೀ ಬಾಯ್ದೆರೆದು ಮಾತನಾಡಿದಡೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ!
ಎನ್ನ ಕಾಂಬ ನಿನಗೆ ನಿನ್ನ ಕಾಂಬ ಎನಗೆ
ಸಂಚದ ನೋಟ ಒಂದೆ ನೋಡಾ!
ಗುಹೇಶ್ವರಾ, ನಿನ್ನ ಬೆಡಗಿನ ಬಿನ್ನಾನರಿದೆ ನೋಡಾ
ಶರಣನೊಬ್ಬನ ಸ್ವ-ವಿಮರ್ಶೆ ಇಲ್ಲಿ ನಡೆಯುತ್ತಿದೆ. ತನ್ನನ್ನು ತಾನು ತಿಳಿಯಬೇಕಾದರೆ, ಪರವಸ್ತುವಿಗಿಂತ ಭಿನ್ನವಾಗಿ ನಿಂತೇ ಅರಿಯಬೇಕು. ಆಗ ನೀನು ಮಾತನ್ನೇ ಆಡದೆ ಮೌನವಾಗಿದ್ದೆ, ಆ ಶಬ್ದವಿಲ್ಲದ ಸ್ಥಿತಿಯೇ ನಾನು ನಿನ್ನನ್ನು ನೋಡುವಂತೆ ಮಾಡಿತು. ಈ ಅರಿವಿನ ಜಾಗೃತಿ ಶರಣನಲ್ಲಿ ಉಂಟಾದಾಗಲೇ ಪರವಸ್ತು ಗೋಚರಿಸುವುದು. ನನ್ನನ್ನು ನೋಡುವ ನಿನಗೆ, ನಿನ್ನನ್ನು ನೋಡುವ ನನಗೆ ಎರಡು ದೃಷ್ಟಿಗಳಿಲ್ಲ, ಒಂದೇ ದೃಷ್ಟಿಯಿರುವುದು ಎನ್ನುವುದು ತಿಳಿದ ಮೇಲೆ, ಭಗವಂತನ ನಿಗೂಢ ಸ್ವರೂಪದ ಅರಿವುಂಟಾದ ಮೇಲೆ ಮಾತಿನ ಭ್ರಮೆ ಅಳಿದು, ಮೌನವಾಗುತ್ತಾನೆ ಶರಣ. ಅಲ್ಲಮ ಮಾತು ಎಲ್ಲಿ ಮೌನವಾಗುವುದೆನ್ನುವುದನ್ನು ಬಹುಸೂಕ್ಷ್ಮವಾಗಿಯೇ ತಿಳಿಸುತ್ತಾನೆ. “ಪಾತಾಳದಿಂದತ್ತತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ” – ಮಾನವನ ಎರಡು ಮಿತಿಗಳಿವು, ಒಂದು ಅಧೋಮುಖ – ಅದುವೇ ಪಾತಾಳ, ಮತ್ತೊಂದು ಗಗನ – ಊರ್ಧ್ವಮುಖ. ಮೇಲ್ಮುಖದಲ್ಲಿರುವ ಅಲಭ್ಯವೆನಿಸುವ ತತ್ವವೇ ಪರವಸ್ತು, ಯಾರಿಗೆ ಆ ತತ್ವದ ಅನುಭವವಾಗುವುದೋ ಅದನ್ನವರು ನುಡಿಯಲಾರರು. ಬರಿಯ ಪದಗಳನ್ನು, ಮೇಲ್ಮುಖದ ಇಲ್ಲವೇ ಹೊರಗಿನ ಮಾತನಾಡುವವರ ರೀತಿಯೇ ಬೇರೆ, ಅವರು –
ಅಕ್ಷರ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೋಳ್ಳರಯ್ಯಾ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗು ಹೋಗೆಂಬುದನರಿಯರು!
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು,
ಮತ್ತೂ ವಾದಕೆಳಸುವರು ಹೋದರು,
ಗುಹೇಶ್ವರಾ, ಸೆಲೆ ಕೊಂಡ ಮಾರಿಂಗೆ !
ಅಕ್ಷರಗಳನ್ನು ತಿಳಿದಾಕ್ಷಣ, ಅಕ್ಷರಗಳ ಪರಿಚಯದಿಂದ ಪದ-ವಾಕ್ಯಗಳನ್ನು ಓದಬಲ್ಲೆವೆಂದೊಡನೆಯೇ, ಅಹಂಕಾರ ಮಾಡಿ ಶಾಸ್ತ್ರವನ್ನು ತಿಳಿದಿದ್ದೇವೆಂದು ಭಾವಿಸಿ ಬಿಡುತ್ತಾರೆ. ಈ ಹಿಂದೆ ಸಾಧನೆ ಮಾಡಿದ ಗುರು ಹಿರಿಯರು ಅನುಭಾವದಿಂದ ನೀಡಿದ ಉಪದೇಶಗಳನ್ನೇ ತಮ್ಮದೆಂದು ಭಾವಿಸುವ, ಶಬ್ದಗಳ ಅದ್ವೈತವನ್ನು ಮಾತ್ರ ಭಾವಿಸುತ್ತಾರೇ ಹೊರತು ನಿಜವಾದ ಅನುಭಾವದ ಮಾತುಗಳನ್ನಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಏನೋ ಅವರಿಗೆ ದೇವನಲ್ಲಿ ಭಕ್ತಿಯ ಭಾವೇ ಇಲ್ಲ. ಕಾರಣ ಸಂಸಾರದಿಂದ ಹೊರಗುಳಿಯಬಲ್ಲ ಉಪಾಯವೇ ತಿಳಿದಿಲ್ಲ. ಇವೆರಡೂ ಇಲ್ಲವೆಂದ ಮೇಲೆ ಮುಕ್ತಿಯ ಸುಳಿವಿರಲೂ ಸಾಧ್ಯವಿಲ್ಲ, ಇಂತಹ ಮಾತುಗಳೆಲ್ಲ ವಾದವೇ ಹೊರತು ಸತ್ಯವಾಗಲು ಸಾಧ್ಯವಿಲ್ಲವಾದ್ದರಿಂದ, ಶರಣನಾದವನು ಈ ಪರಿಧಿಗೆ ಬರುವುದೂ ಇಲ್ಲ, ಮಾತನ್ನಾಡಿ ವ್ಯರ್ಥ ಪ್ರಯಾಸಪಡುವುದೂ ಇಲ್ಲ. “ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ, ಬ್ರಹ್ಮವ ನುಡಿದು ಭ್ರಮಿತೆನಾದೆನಯ್ಯಾ, ಶೂನ್ಯವ ನುಡಿದು ಸುಖದುಃಖಕ್ಕೆ ಗುರಿಯಾದೆನಯ್ಯಾ”. ಯಾವುದು ಅನುಭಾವರಹಿತವಾಗಿರುವುದೋ, ಅದು ಅಹಂಕಾರಕ್ಕೆ ಭ್ರಮೆಗೆ ದಾರಿ ಮಾಡಿ ಕೊಡುತ್ತದೆ. ಬಯಲೆಂದರೇನು? ಶೂನ್ಯವೆಂದರೇನು? ಎನ್ನುವುದೇ ತಿಳಿಯದಿದ್ದಲ್ಲಿ ಅದು ಸುಖ-ದುಃಖಗಳಿಗೆ ಎಡೆಮಾಡಿಕೊಡುವ ವಾಕ್ಯಗಳಷ್ಟೇ ಆಗಬಲ್ಲವು. ಇಂತಹ ಮಾತಿನಿಂದ ಭಕ್ತನಾದವನು ದೂರವಿರಲೇಬೇಕು. ಹಲವು ಮಾತುಗಳನ್ನು ಆಡುವುದು ಅಗತ್ಯವೇ ಇಲ್ಲ, “ಒಂದು ಮಾತಿನೊಳಗೆ ವಿಚಾರವಿದೆ; ಕನ್ನಡಿಯೊಳಗೆ ಕಾರ್ಯವದೆ”. ಎಲ್ಲಿ ವಿಚಾರಗಳೂ ಅಡಗಿರುವುದು ಒಂದೇ ಮಾತಿನಲ್ಲಿ ಅದುವೇ ʼಲಿಂಗಾಂಗ ಸಾಮರಸ್ಯʼ ಎನ್ನುವ ಮಹಾವಾಕ್ಯ. ಈ ವಾಕ್ಯದೊಳಗೆ ಸದಾಚಾರ, ಇಷ್ಟಲಿಂಗದ ಭಕ್ತಿ, ಅದನ್ನೇ ಕಾಣುತ್ತಿರುವ ದೃಷ್ಟಿ ಎಲ್ಲವೂ ಇದೆ. ಕನ್ನಡಿಯಲ್ಲಿ ಆಳೆತ್ತರದ ವ್ಯಕ್ತಿತ್ವವೂ ಹೇಗೆ ಅಡಗಿ ಕಾಣುವುದೊ ಹಾಗೆ ಬೃಹತ್ತಾದ ʼಶಿವಯೋಗʼ ಎನ್ನುವ ಮಾತಿನಲ್ಲಿಯೇ ಲಿಂಗಾಂಗ ಸಾಮರಸ್ಯದಂತಹ ಅನುಭಾವದ ಮೊತ್ತವೇ ಸಾರವಾಗಿ ಇಡಿಕಿರಿದಿದೆ. ಆಡಿದರೆ ಇಂತಹ ವಾಕ್ಕುಗಳನ್ನು ಮಾತ್ರವೇ ಆಡಬೇಕು. ಅದಕ್ಕಾಗಿ ಆತ “ಶಾರದೆಯ ಬಾಯಕಟ್ಟಿ . . . . . ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ” – ಶಾರದೆಯೆಂದರೆ ವಾಣಿ, ವಾಣಿಯ ಬಾಯಕಟ್ಟುವುದೆಂದರೆ ಮಾತಿನ ಜಾಲಕ್ಕೆ ತಡೆ ಇಡುವುದು, ವಾಗ್ವಿಲಾಸವನ್ನು ನಿಲ್ಲಿಸುವುದು, ಶರಣನಾದವನು ಬಾಯನ್ನು ಹರಿಬಿಡಬಾರದು, ಮಾತನಾಡುವೆನೆಂಬ ಚಪಲಕ್ಕೆ ಬೀಳದಿದ್ದಾಗ ಭಕ್ತ ನಿಶ್ಚಿಂತ ಸ್ಥಿತಿಯಲ್ಲಿರುತ್ತಾನೆ. ಅಕಸ್ಮಾತ್ತಾಗಿ ಭಕ್ತಿಯ ಪರಾಕಾಷ್ಠೆಯಲ್ಲೂ ಮಾತುಗಳು ಹೊರಬಂದಲ್ಲಿ “ಶಿವಚಿಂತೆ ಶಿವಜ್ಞಾನಿಗಳ ಕಂಡಡೆ ಆಳವಾಡಿ ನುಡಿವರು, ಗುಹೇಶ್ವರನನರಿಯದ ಕರ್ಮಿಗಳು”. ಮನಸ್ಸಿನಲ್ಲಿ, ದೇಹದಲ್ಲಿ ವಿಕಾರವಿದ್ದವರು ಮಾತ್ರ ಅನುಭಾವಿಗಳನ್ನು ಹಳಿಯಬಲ್ಲರು, ಅವರು ಗುಹೇಶ್ವರನನ್ನು ತಿಳಿಯದೆ ಕೇವಲ ಕರ್ಮಕ್ಕೆ ಮಾತ್ರ ಬದ್ಧವಾಗಿರುವವರು.
ಅಳವರಿಯದ ಭಾಷೆ, ಬಹುಕುಳವಾದ ನುಡಿ –
ಇಂತೆರಡರ ನುಡಿ ಹುಸಿಯಯ್ಯಾ.
ಬಹುಭಾಷಿತರು ಸುಭಾಷಿತವರ್ಜಿತರು
ʼಶರಣಸತಿ ಲಿಂಗಪತಿʼ ಎಂಬರು, ಹುಸಿಯಯ್ಯಾ,
ಇಂತಪ್ಪವರ ಕಂಡು ನಾಚುವೆನಯ್ಯಾ ಗುಹೇಶ್ವರಾ.
ಗುಹೇಶ್ವರನ ಶರಣರು ಆಡುವ ಭಾಷೆ ಹೇಗಿರಬಾರದು ಎನ್ನುವುದನ್ನು ಅಲ್ಲಮ ಮತ್ತೆ ಮತ್ತೆ ಒತ್ತಿ ಹೇಳಿದ್ದಾನೆ. ಅರ್ಥವೇ ಇಲ್ಲದ, ಜಾಳು ಜಾಳಾದ, ಕೇವಲ ರಂಜನೆಗಾಗಿ ಆಡುವ ಮಾತು, ಮಾತಾಗದೇ ಸುಳ್ಳಿನ ಕಂತೆಯಾಗಿ ಬಿಡುತ್ತದೆ. ಯಾರು ವಿಪರೀತವಾಗಿ ಮಾತಿನಲ್ಲಿ ತೊಡಗಿಕೊಳ್ಳುವರೋ ಅವರು ಸು-ಭಾಷಿತರಾಗುವುದಿಲ್ಲ, ಅವರ ಯಾವ ಹೇಳಿಕೆಗಳಿಗೂ ಬೆಲೆಯೂ ಇಲ್ಲ, ಇಂತಹವರನ್ನು ಕಂಡರೆ ನಾಚಿಕೆಯಾಗುತ್ತದೆ. “ಆ ಮಾತು ಈ ಮಾತು ಹೋ ಮಾತು ಎಲ್ಲವೂ ನೆರೆದು ಹೋಯಿತ್ತಲ್ಲಾ”. ಅಕ್ಷರ, ಭಾಷೆ ಬಂದ ಕ್ಷಣದಿಂದ ಮಾತುಗಳು ಪುಂಖಾನುಪುಂಖವಾಗಿ ಹೊರಹೊಮ್ಮುತ್ತಲೇ ಇರುತ್ತದೆ. ಇಹ-ಪರಗಳೆರಡರ ಬಗೆಗೂ ಕೇವಲ ಒಣ ಮಾತುಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. “ಸಾವನ್ನಕ್ಕರ ಸರಸ ಉಂಟೆ ಗುಹೇಶ್ವರಾ” ಬರಿಯ ಮಾತು ಸಾಯುವವರೆಗೂ ಅಂದರೆ, ನಿಲ್ಲುವವರೆಗೂ ಲಿಂಗದೊಡನೆ ಭಕ್ತಿಯ ಒಡನಾಟ ಶಾಧ್ಯವಾಗುವುದಿಲ್ಲ. “ಸಂಸಾರದ ಮೆಚ್ಚು ಬಿಡದನ್ನಕ್ಕ, ಸೂಕ್ಷ್ಮ ಶಿವಪಥವು ಸಾಧ್ಯವಾಗದು. ಗುಹೇಶ್ವರ ಲಿಂಗದಲ್ಲಿ ವಾಕು ಪಾಕವಾದಡೇನೋ, ಮನಪಾಕವಾಗದನ್ನಕ್ಕರ”. ಸಂಸಾರದ ಇಚ್ಛೆ ಕೊನೆಗೊಳ್ಳುವುದು, ಅಲ್ಲಿನ ಆಸೆಗಳು – ಇಚ್ಛೆ ಕೊನೆಗೊಂಡಾಗ ಮಾತ್ರವೇ. ಇದಾಗದೇ ಶಿವಪಥದಲ್ಲಿ ಕ್ರಮಿಸುವುದಿರಲಿ ಕಾಣಲೂ ಸಾಧ್ಯವಾಗುವುದಿಲ್ಲ. ಈ ದಾರಿಯಲ್ಲಿ ಹೋಗಲು ಮನಸ್ಸು ಸಿದ್ಧವಾಗಿ ಪಕ್ವವಾದರೆ, ವಾಕ್ – ಮಾತು ಕೂಡಾ ಪಕ್ವವಾಗುತ್ತದೆ. ಎರಡರಲ್ಲಿ ಒಂದು ಪಕ್ವವಾದರೆ ಸಾಲುವುದಿಲ್ಲ. ಎರಡೂ ಆದಾಗ ಮಾತ್ರ ಮಾತಿಗೊಂದಿಷ್ಟು ಶಕ್ತಿ ಉಂಟಾಗುತ್ತದೆ. “ಶಿವನಿಚ್ಛೆಯನರಿಯದೆ ಮಾತನಾಡುವವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗನು” ಬಾಯಿಂದ ಹೊರಬರುವ ಪ್ರತಿ ಮಾತೂ, ಶಿವ ಮೆಚ್ಚುವಂತಿರಬೇಕು ಮತ್ತು ಶಿವನ ಆದೇಶದಿಂದಲೇ ಹೊರಬರಬೇಕು, ಅದಿಲ್ಲದೆ ಮಾತನಾಡುವವನು ಶರಣನಲ್ಲ.
ಅಲ್ಲಮರು ತಮ್ಮ ಒಂದು ಸುದೀರ್ಘವಾದ ವಚನದಲ್ಲಿ ಅಕ್ಷರಗಳು, ಅವುಗಳ ವರ್ಣ, ಇರುವ ಚಕ್ರ, ಅಧಿದೇವತೆ ಎಲ್ಲವನ್ನೂ ವಿವರಿಸುತ್ತಾರೆ.
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ, ಚೌದಳಪದ್ಮ, ಅಲ್ಲಿಹ ಅಕ್ಷರ ನಾಲ್ಕು ವ ಶ ಷ ಸ,
ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ಬ್ರಹ್ಮ
ಲಿಂಗಸ್ತಾನದಲ್ಲಿ ಸ್ವಾಧಿಷ್ಟಾನಚಕ್ರ, ಅಪ್ಪುವೆಂಬ ಮಹಾಭೂತ
ಧನುರ್ಗತಿ, ಷಡುಸ್ಥಳ ಪದ್ಮ, ಅಲ್ಲಿಹ ಅಕ್ಷರವಾರು ಬ ಭ ಮ ಯ ರ ಲ
ಅದರ ವರ್ಣ ಪಚ್ಚೆಯವರ್ಣ, ಅದಕ್ಕೆ ಅಧಿದೇವತೆ ವಿಷ್ಣು.
ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣೆ, ದಶದಳ ಪದ್ಮ, ಅಲ್ಲಿಹ ಅಕ್ಷರ ಹತ್ತು
ಡ ಢ ಣ ತ ಥ ದ ಧ ನ ಪ ಫ
ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ರುದ್ರ
ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣೆ, ದ್ವಾದಶದಳ ಪದ್ಮ, ಅಲ್ಲಿಹ ಅಕ್ಷರ ಹನ್ನೆರಡು
ಕ ಖ ಗ ಘ ಙ ಚ ಛ ಜ ಝ ಞ ಟ ಠ
ಅದರ ವರ್ಣ ನೀಲವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರ.
ಕಂಠಸ್ತಾನದಲ್ಲಿ ವಿಶುದ್ಧಿ ಚಕ್ರ, ಆಕಾಶವೆಂಬ ಮಹಾಭೂತ,
ವರ್ತುಳಾಕಾರ, ಷೋಡಶದಳಪದ್ಮ, ಅಲ್ಲಿಹ ಅಕ್ಷರ ಹದಿನಾರು
ಅ ಆ ಇ ಈ ಉ ಊ ಋ ಋ ೠ ಲೃ ಲೈ ಏ ಐ ಓ ಔ ಅಂ ಅಃ
ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು.
ನಮ್ಮ ಶರೀರದಲ್ಲಿ 6 ಚಕ್ರಗಳಿವೆ, ಅವು ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ ಮತ್ತು ಆಜ್ಞಾಚಕ್ರ. ಈ ಚಕ್ರಗಳ ನಡುವೆಯೇ ಪ್ರಾಣ ಮತ್ತು ಮನಸ್ಸು ಓಡಾಡುತ್ತಿರುವುದು, ಅವುಗಳ ಚಲನೆ ಮತ್ತು ಚಿಂತನೆಯಿಂದಲೇ ಮಾತು ರೂಪುಗೊಳ್ಳುವುದು. ಯಾವಾಗ ಆಲೋಚನೆ ಮೇಲ್ಮುಖವಾಗುತ್ತದೋ ಆಗ ಅಕ್ಷರಗಳೂ ಲಯವಾಗಿ, ಮಾತು ನಿಂತು ಪ್ರಣವ ಸ್ವರೂಪವಾದ ಓಂಕಾರ ಮಾತ್ರ ಉಳಿಯುತ್ತದೆ. ಕೊನೆಯದಾದ ಆಜ್ಞಾಚಕ್ರವನ್ನು ಮನಸು ದಾಟಿದಾಗ, ಮಾತು ಮರೆಯಾಗಿ, ಉನ್ಮನಿಜ್ಯೋತಿಯಾದ ಪ್ರಣವ ಪರಬ್ರಹ್ಮನ ದರ್ಶನವಾಗುತ್ತದೆ. ಅದೇ ನಿಶ್ಚಿಂತ ಸ್ಥಿತಿ, ಪ್ರಾಣಲಿಂಗಿಯ ಸ್ಥಿತಿ, ಇದನ್ನು ಒಂದು ಕೋಷ್ಟಕವಾಗಿ ಗಮನಿಸಿದರೆ ಅನುಕೂಲವಾಗಬಹುದೆಂದು ಸಿದ್ಧಗೊಳಿಸಿದೆ.

ದೇಹ ಅಮೃತ ಸ್ವರೂಪವನ್ನು ಕಂಡ ಮೇಲೆ, ದೇವಾಲಯವಾಗಿ ಬಿಡುತ್ತದೆ.
ಕಾಲೇ ಕಂಭಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ
ಎನ್ನ ನಾಲಿಗೆಯ ಗಂಟೆ, ಶಿರ ಸುವರ್ಣದ ಕಲಶ; ಇದೇನಯ್ಯಾ;
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ, ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ
ಪಲ್ಲಟವಾಗದಂತಿದ್ದೆನಯ್ಯಾ!
ಗುಹೇಶ್ವರನಲ್ಲಿ ಶರಣಾದವನು ನುಡಿದು ಸೂತಕಿಯಾಗಲು ಸಾಧ್ಯವಿಲ್ಲ. ಮಾತಿನ ಅಪಭ್ರಂಶ, ಅಪವ್ಯಯವೇ ಸಾವಿನಂತಹ ಸೂತಕವನ್ನು ತಂದಿಡಬಲ್ಲುದು. ಮಾತು ಘನತೆಯನ್ನು ಕಳೆದುಕೊಂಡರೆ, ಮಾತಿನ ಹದ ತಪ್ಪಿದರೆ, ಭಾಷೆ-ಭಾವ ಒಂದಾಗದೇ ಇದ್ದಾಗ, ಮಾತು ಮತ್ತೊಬ್ಬರ ಬದಿಕನ್ನು ಬಲಿ ತೆಗೆದುಕೊಂಡರೆ ಅದು ಸೂತಕವಾಗಿ ಬಿಡುತ್ತದೆ. ಶಿವನಲ್ಲಿ ಶರಣಾಗತನಾದವನ ದೇಹವೇ ದೇವಾಲಯವಾಗಿ, ಮಾತನಾಡುವ ನಾಲಿಗೆಯೇ ಘಂಟಾನಾದವಾಗುತ್ತದೆ. ಶಿರವೇ ಜ್ಞಾನದ ಕಲಶವಾಗಿ, ಹೊರಡುವ ಸ್ವರ ಓಂಕಾರವಾಗುತ್ತದೆ, ಆಗ ಕಾಣುವುದೇ ಚಿಜ್ಜ್ಯೋತಿ. ಪ್ರಾಣಲಿಂಗದ ಭಾವ ಅಲುಗದೇ ಇದ್ದಾಗ, ಮಾತೂ ಪಲ್ಲಟವಾಗುವುದಿಲ್ಲ. “ಹೃದಯ ಕಮಲದಲ್ಲಿ ʼಶಿವಶಿವಾʼ ಎಂಬ ಶಬ್ದ ಮಾತ್ರವೇ ಅನುರಣನಗೊಳ್ಳುತ್ತಿರುತ್ತದೆ”. “ಗಗನಮಂಡಲದ ಸೂಕ್ಷ್ಮನಾಳದಲ್ಲಿ ʼಸೋSಹಂ ಸೋSಹಂ ಎನ್ನುತ್ತಿದ್ದೀತು ಒಂದು ಬಿಂದು”. ಶಿವನಾದಬಿಂದು ಕಳಾತೀತನು. ಭಕ್ತ ಅದನ್ನು ತನ್ನ ಅನುಭವಕ್ಕೆ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಗಗನಮಂಡಲ – ಸಹಸ್ರಾರದಲ್ಲಿರುವ ಸೂಕ್ಷ್ಮನಾಳ – ಸುಷುಮ್ನ, ಅದರ ಕೊನೆಯ ಭಾಗ ಬ್ರಹ್ಮರಂಧ್ರದಲ್ಲಿ ʼಸೋSಹಂʼ ಎನ್ನುವುದು ಅರಿವಿಗೆ ನಿಲುಕಿದಾಗ – ಅವನೇ ನಾನು ಎನ್ನುವುದು ಅರ್ಥವಾದಾಗ, ದೇಹ – ಜೀವ ಎನ್ನುವ ಭಾವವೆಲ್ಲ ಅಳಿದು ಕೇವಲ ʼಶಿವೋಹಂʼ ಎನ್ನುವ ಸ್ಥಿತಿಗೆ ಶರಣ ತಲುಪುತ್ತಾನೆ. ಆಗ ಹೊರಡುವ ಮಾತು ಹೀಗಿರುತ್ತದೆ.
ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ
ಚಂದ್ರಸೂರ್ಯರೆಂಬ ಅಂಕಿಣಿ,ಬ್ರಹ್ಮನೆ ಹಲ್ಲಣ
ಸುರಾಳವೆಂದಲ್ಲಿ ನಿರಾಳವಾಯಿತ್ತು
ಗುಹೇಶ್ವರನೆಂಬ ರಾವುತಂಗೆ !
ಬಹು ಸುಂದರವಾದ ವಿವರಣೆಯನ್ನು ಅಲ್ಲಮರು ಈ ವಚನದಲ್ಲಿ ನೀಡಿದ್ದಾರೆ. ಮಾತು ಹೊರಬರಬೇಕಾದರೆ ಸ್ವರಬೇಕು. ಆ ಸ್ವರ ಎನ್ನುವುದೇ ವಾಯುವೆನ್ನುವ ಕುದುರೆ, ಇಲ್ಲವೆ ಪ್ರಾಣಶಕ್ತಿ. ಅದಕ್ಕೆ ನಿಯಮಗಳನ್ನು ರೂಪಿಸುವವನು ವಿಷ್ಣು. ನಿಯಮಗಳನ್ನು ಮಾಡಿ ಕಡಿವಾಣ ಹಾಕುತ್ತಾನೆ, ಅಂದರೆ ಪ್ರಾಣವಾಯುವನ್ನು ಹಿಡಿತದಲ್ಲಿರಿಸುವುದು ಪ್ರಾಣಾಯಾಮ. ಇದಕ್ಕೆ ಚಂದ್ರ ಸೂರ್ಯರೆಂಬ ಅಂಕಿಣಿ. ಚಂದ್ರ-ಸೂರ್ಯರು, ಸುಷುಮ್ನಾನಾಡಿಯ ಎಡಬಲದಲ್ಲಿರುವ ಇಡಾ ಮತ್ತು ಪಿಂಗಳಾನಾಡಿಯನ್ನು ಸೂಚಿಸಿದೆ. ಪ್ರಾಣವಾಯುವನ್ನು ನಿಯಂತ್ರಣ ಮಾಡುವ ರಿಕಾಬಿನ ಮಾದರಿಯಲ್ಲಿ ಈ ಎರಡೂ ಪಥಗಳು ಮಹತ್ವದ ಪಾತ್ರವಹಿಸುತ್ತವೆ. ಇದಕ್ಕೆ ಹಲ್ಲಣವೇ ಬ್ರಹ್ಮ – ಬ್ರಹ್ಮನಾಳ ಅಥವಾ ಬ್ರಹ್ಮರಂಧ್ರ. ಇಂತಹ ಒಂದು ವ್ಯವಸ್ಥೆಯನ್ನು ಅಂದರೆ ಎಲ್ಲ ರೀತಿಯಲ್ಲೂ ಊರ್ಧ್ವಮುಖಿಯಾದ ಪ್ರಾಣವಾಯು ಅಥವಾ ಪ್ರಾಣಶಕ್ತಿಯನ್ನು ನಡೆಸುವವನು ಗುಹೇಶ್ವರನೇ ಆಗಿರುವ ಶರಣ, ಆತ ನುಡಿದು ಸೂತಕಿಯಾಗುವುದಿಲ್ಲ.
ಹೊರ ಮತ್ತು ಒಳ ಮಾತಿನ ಭಾಷೆಗೆ ಯಾವ ಅಕ್ಷಗಳನ್ನು ತಿಳಿಯಬೇಕೆನ್ನುವುದನ್ನೂ ಅಲ್ಲಮ ಸೂಕ್ಷ್ಮವಾಗಿ ತಿಳಿಯಪಡಿಸುತ್ತಾನೆ. “ತ್ರಿಕೋಣದ್ವಾರ ಮಂಟಪದ ಐವತ್ತೆರಡಕ್ಷರದ ಶಾಸನ ಲಿಪಿಯಂ ತಿಳಿಯಲೋದಿ” ತ್ರಿಕೋಣದ್ವಾರ – ಅಧೋಚಕ್ರ ಇದರ ಮೇಲೆ ಆರು ಅಂತಸ್ತಿನ ಮಂಟಪ. ಪ್ರತಿ ಅಂತಸ್ತಿನಲ್ಲಿ ಸಾಂಕೇತಿಕ ಬ್ರಹ್ಮ ಶಾಸನ ಅಕ್ಷರ ಲಿಪಿಗಳು. ಮೊದಲನೆಯ ಅಂತಸ್ತಿನಲ್ಲಿ ವ ಶ ಷ ಸ ಅಕ್ಷರಗಳು, ಎರಡನೇಯ ಅಂತಸ್ತಿನಲ್ಲಿ ಬ ಭ ಮ ಯ ಲ ಅಕ್ಷರಗಳು, ಮೂರನೆಯ ಅಂತಸ್ತಿನಲ್ಲಿ ಡ ಢ ಣ ತ ಥ ದ ಧ ನ ಪ ಫ ಅಕ್ಷರಗಳು, ನಾಲ್ಕನೆಯ ಅಂತಸ್ತಿನಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟ ಠ ಅಕ್ಷರಗಳು, ಐದನೆಯ ಅಂತಸ್ತಿನಲ್ಲಿ ಅ ಆ ಇ ಈ ಉ ಊ ಋ ಋ ೠ ಲೃ ಲೈ ಏ ಐ ಓ ಔ ಅಂ ಅಃ ಅಕ್ಷರಗಳು, ಆರನೆಯ ಅಂತಸ್ತಿನಲ್ಲಿ ಹಂ, ಕ್ಷಂ ಎಂಬ ಎರಡು ನಾದಾಕ್ಷರಗಳು. ರೇಚಕ ಮತ್ತು ಪೂರಕ ವಾಯುಗತಿಯಲ್ಲಿ ಈ ಎರಡೂ ಅಕ್ಷತಗಳು ಹುದುಗಿರುವುದನ್ನು ನಾವು ವಾಯುಗತಿ ನಿರೀಕ್ಷೆಯಿಂದ ಗುರುತಿಸಬಹುದು. ಇವುಗಳಲ್ಲಿ ಒಂದು ಸ್ವರಗಳ ಮೂಲ, ಇನ್ನೊಂದು ವ್ಯಂಜನಗಳ ಮೂಲ. ಈ ʼಅʼ ಮತ್ತು ʼಹʼಗಳ ಪ್ರವಾಹದಲ್ಲಿ ವ್ಯಕ್ತವಾಗುವುದೇ ʼನಾನುʼ ಎಂಬ ಜೀವಭಾವ. ಸಾಧನೆಯಿಂದ ಇದು ಶುದ್ಧಗೊಂಡರೆ ‘ಸೋSಹಂ’ ಪ್ರಜ್ಞೆ ಉದಿಸುತ್ತದೆ. ಈ ಬ್ರಹ್ಮ ಶಾಸನ ಲಿಪಿಯನ್ನು ಯೋಗಿಯಾದವನು ಓದಬೇಕು. ದೇಹರಚನೆಯ ಇಂಗಿತವನ್ನು ಅರಿಯಬೇಕು. ಶಕ್ತಿ ಕೇಂದ್ರಗಳನ್ನು ಗುರುತಿಸಬೇಕು. ಸಾಧನೆಯಿಂದ ಆ ಪ್ರಾಣ ಶಕ್ತಿಯನ್ನು ಹೊರಹೊಮ್ಮಿಸಬೇಕು. ಆಗ ಆತ ಸಿದ್ಧಯೋಗಿಯಾಗುತ್ತಾನೆ. (ಅಲ್ಲಮ ಪ್ರಭುದೇವರ ವಚನ – ನಿರ್ವಚನ, ಪು. 395).
ಶರಣನಾದವನು ಸಹಸ್ರರ ಮುಟ್ಟಿದಾಗ ಅಲ್ಲಿರುವುದು ಮಾತಲ್ಲ ನಾದ ಮಾತ್ರವೇ. “ಗಗನ ಗಂಭೀರದ ಶಿವಸ್ತುತಿಯ ನೋಡಲೊಡನೆ ಪಿಂಡ ಬ್ರಹ್ಮಾಂಡವಾಯಿತ್ತು. ಅಖಂಡಿತ ನಿರಾಲ ಗುಹೇಶ್ವರಾ”. ಪಂಚೇಂದ್ರಿಯಗಳಿಗೆ ನಾದ ಕೇಳಿದಾಗ, ಅದು ಶಿವಸ್ತುತಿ ಎನ್ನುವುದರ ಅರಿವು ಬಂದೊದಗುತ್ತದೆ. ಆ ಅರಿವು ಮೂಡಿದಾಗ ತಾನು ದೇಹವೆಂಬ ಪಿಂಡ ಭಾವವೂ ಮರೆಯಾಗಿ, ಬ್ರಹ್ಮನಾದದಲ್ಲಿ ಶರಣ ಸಮಾಹಿತನಾಗುತ್ತಾನೆ, ಲೀನವಾಗುತ್ತಾನೆ ಅದೇ ಖಂಡಿತವಾಗದ, ಅಖಂಡಿತ ನಿರಾಳಸ್ಥಿತಿ. ಇಲ್ಲಿಗೆ ಮುಟ್ಟಿದ ವ್ಯಕ್ತಿ ತನ್ನ ನುಡಿಯ ಮೇಲೆ ಮಾತ್ರ ಹಿಡಿತವಿಡುವುದಲ್ಲದೆ
ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,
ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು.
ಸುಡಲವಂದಿರೊಡನೆ ಮಾರಿ ಹೋರಲಿ!
ಗುಹೇಶ್ವರಾ, ನಿಮ್ಮ ಶರಣರಲ್ಲದವರೊಡನೆ
ಬಾಯಿದೆರೆಯಲಾಗದು !
ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಸಂವಾದವೆನ್ನುವುದು ಸಮಾನ ಮನಸ್ಕರಲ್ಲಿ ಮಾತ್ರ ಸಾಧ್ಯವಾಗುವಂತಹುದು. ತಾನು ಮೊದಲು ನಿಯಂತ್ರಣದಲ್ಲಿದ್ದು, ಮಾತು – ನಾದವನ್ನು ತಿಳಿದು, ಮನದ ಭಾವಗಳನ್ನು ಸತ್ಯವಿದ್ದವರ, ಶರಣರಾದವರ ಜೊತೆಯಲ್ಲಿ ಮಾತ್ರ ಹಂಚಿಕೊಳ್ಳಬಹುದೇ ಹೊರತು, ಮತ್ತೊಬ್ಬರ ಜೊತೆಗಲ್ಲ ಎನ್ನುವುದೂ ಅಷ್ಟೇ ಸತ್ಯ. “ಅಜ್ಞಾನಿಗಳ ಕೂಡೆ ಅಖಿಳ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು” ಮುಂತಾದ ವಾಕ್ಕುಗಳನ್ನು ಅನುಭಾವಿಗಳು ಪದೇ ಪದೇ ಹೇಳಿರುವುದು ಮಾತಿನ ಮಹತ್ವವನ್ನು ಅರಿತಿದ್ದರಿಂದ. ಯಾರಲ್ಲಿ ಗುಹೇಶ್ವರ ನೆಲೆಸಿರುತ್ತಾನೆಯೋ ಅವರಲ್ಲಿ ಮಾತ್ರ ಸಂವಾದ ಸಾಧ್ಯ ಕಾರಣ “ಗುಹೇಶ್ವರ ಲಿಂಗವು ಒಬ್ಬನೆ ಅಚಲ; ಉಳಿದವರೆಲ್ಲರೂ ಸೂತಕಿಗಳು” ಆತನಿಲ್ಲದ ದೇಹ ಬಾಲು ಬಿದ್ದ ಮನೆಯಂತೆ. “ಶರಣನಲ್ಲದವರೊಡನೆ ಬಾಯಿದೆರೆಯಲಾಗದು” ಮಾತೇ ಲಿಂಗವೆನ್ನುವುದು ಅಲ್ಲಮ ನೀಡುವ ನಿತ್ಯನೂತನ ವ್ಯಾಖ್ಯಾನ. ಅದೇ ಇಹ-ಪರಕ್ಕೆರಡಕ್ಕೂ ಹಾದಿಯನ್ನು ಕಲ್ಪಿಸಿರುವುದು. ಅಂತಹ ಅನರ್ಘ್ಯವಾದ ವಾಕ್ಕನ್ನು ಬರಿಯ ಬಯಲಾಡಂಬರಕ್ಕೆ ಬಳಸುವುದೇ ಒಳಿತಲ್ಲ, ತಿಳಿದವರೊಡನೆಯೂ ಸಲ್ಲದು. ಇದಕ್ಕಾಗಿಯೇ ಅಲ್ಲಮ ಮಾತು ಬರಿಯ ಮಾತಾಗದೇ ʼಜ್ಯೋತಿರ್ಲಿಂಗʼವಾಗಬೇಕೆಂದಿರುವನು, ಶರಣರು ನುಡಿದು ಸೂತಕಿಗಳಲ್ಲ ಎನ್ನುವ ಮಾತನ್ನು ಗಂಭೀರವಾಗಿ ಚರ್ಚಿಸಿರುವುದು. ಅಲ್ಲಮರ ಈ ಮಾತುಗಳು ಅಂತರಂಗದ ದೀಪ್ತಿಯಾದಾಗ ಬದುಕು ಸಾರ್ಥಕವೆನಿಸುತ್ತದೆ.
ಡಾ. ಜ್ಯೋತಿ ಶಂಕರ,
ಮೈಸೂರು.
ಫೋನ್ ನಂ:+91 9448603159
ಪರಾಮರ್ಶನ ಗ್ರಂಥಗಳು
- ಅಲ್ಲಮ ಪ್ರಭುದೇವರ ವಚನ – ನಿರ್ವಚನ, ಶ್ರೀ ಸಿದ್ಧೇಶ್ವರ ಸ್ವಾಮಿಗಳು, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2016.
- ಶರಣರ ಅನುಭಾವ ಸಾಹಿತ್ಯ, ಡಾ. ಎಚ್. ತಿಪ್ಪೇರುದ್ರಸ್ವಾಮಿ, ಶ್ರೀ ಮುರುಘರಾಜೇಂದ್ರ ಗ್ರಂಐಮಾಲೆ, ಚಿತ್ರದುರ್ಗ, 2016.
- ಅರಿವಿನೊಡನೆ ಅನುಸಂಧಾನ, ಡಾ. ನಾ. ಮೊಗಸಾಲೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, 2016.
- ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು, ಡಾ. ಸಿ. ನಾಗಭೂಷಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2000.
- ವೀರಶೈವ ಸಾಹಿತ್ಯ ಮತ್ತು ಇತರ ಲೇಖನಗಳು, ಪ್ರೊ. ಸಿ. ಮಹಾದೇವಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2000.