ಪ್ರಥಮ ಶೂನ್ಯ ಸಿಂಹಾಸನ ಪೀಠಾಧಿಪತಿ ಅಲ್ಲಮ ಪ್ರಭುದೇವರು
ಕನ್ನಡ ಸಾಹಿತ್ಯಕ್ಕೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಾಗಾಗಿ ಇದು ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಂಸ್ಕೃತಿ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಎನ್ನುವ ನದಿಯು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಜೊತೆಗೆ ನವೋದಯ ಕನ್ನಡ ಎನ್ನುವ ವಿವಿಧ ಉಪನದಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾ ಹರಿಯುತ್ತಾ ವಿಶಾಲವಾಗಿ ಸಾಗುತ್ತಾ ಸಮುದ್ರವನ್ನು ಸೇರುತ್ತದೆ. ಇತ್ತೀಚಿನ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹನಿಗವನಗಳು, ಹಾಯ್ಕುಗಳು, ರುಬಾಯಿ, ಮುಕ್ತಕಗಳು, ಇನಿಗವನಗಳು, ಶಾಯರಿಗಳು, ಟಂಕಾಗಳು ಮತ್ತಿತರೇ ಸಾಹಿತ್ಯ ಪ್ರಾಕಾರಗಳ ಜೊತೆಗೆ ಚುಟುಕು ಸಾಹಿತ್ಯ ಅತ್ಯಂತ ಜನಪ್ರೀಯತೆಯನ್ನು ಹೊಂದಿದೆ.
ಚುಟುಕು ಅಂದರೇನೆ ಸಣ್ಣದು, ಸಂಕ್ಷಿಪ್ತವಾದುದು, ಕುಟುಕೋದು ಎನ್ನುವ ಅರ್ಥ ಕೊಡುವ ಸಾಹಿತ್ಯ ಶೈಲಿ. ಮೂರು ಅಥವಾ ನಾಲ್ಕು ಸಾಲುಗಳಲ್ಲಿ ಮೂಡಿ ಬರುವ ಚುಟುಕು ಸಣ್ಣದಾದರೂ ಅದರ ಒಳಗಿನ ಅರ್ಥ, ಗಾಂಭೀರ್ಯ, ಬದುಕು ಕಟ್ಟಿಕೊಡುವ ಘನತೆ ಅರ್ಥಪೂರ್ಣವಾಗಿರುತ್ತದೆ. ಅವು ವ್ಯಕ್ತಪಡಿಸುವ ಅಗಾಧ ಸಂದೇಶ, ವಿಡಂಬನೆ ಮತ್ತು ಹಾಸ್ಯ ಅದ್ಭುತ ಪರಿಣಾಮವನ್ನು ನೀಡುತ್ತದೆ.
ದಕ್ಷಿಣ ಪೂರ್ವ ಯೂರೋಪಿನ ಒಂದು ದೇಶ ಗ್ರೀಸ್. ಗ್ರೀಸ್ ದೇಶಕ್ಕೆ “ಹೆಲೆನಿಕ್ ರಿಪಬ್ಲಿಕ್” ಅಂತಾನೂ ಕರಿತಾರೆ. ಪ್ರಾಚೀನ ಗ್ರೀಕ್ ಶಬ್ದ “ಹೆಲ್ಲಾಸ್” ಎನ್ನುವ ಶಬ್ದದ ರೂಪಾಂತರವೇ ಹೆಲಿನಿಕ್ ಅಥವಾ ಹೆಲಿನಿಸ್ಟಿಕ್. ಸಾಮ್ರಾಟ್ ಅಲೆಕ್ಸಾಂಡರ್ (356-323 BC) ನಿಧನದ ನಂತರ ಮತ್ತು ಕೋರಿಂತ್ ಯುದ್ಧ (146 BC) ದ ಕಾಲಘಟ್ಟದ ನಡುವೆ ಬಂದಂಥಾ ಹೆಸರು ಹೆಲೆನಿಕ್ ರಿಪಬ್ಲಿಕ್. ಉತ್ತರ ಪಶ್ಚಿಮಕ್ಕೆ ಅಲ್ಬೇನಿಯಾ, ಉತ್ತರಕ್ಕೆ ಮ್ಯಾಸಿಡೋನಿಯಾ ಮತ್ತು ಬಲ್ಗೇರಿಯಾ ಮತ್ತು ಉತ್ತರ ಪೂರ್ವಕ್ಕೆ ಟರ್ಕೀ ದೇಶಗಳೊಂದಿಗೆ ತನ್ನ ಗಡಿಯನ್ನು ಗ್ರೀಸ್ ದೇಶ ಹಂಚಿಕೊಂಡಿದೆ. ಒಟ್ಟು 13 ಪ್ರಾದೇಶಿಕ ಆಡಳಿತ ವಿಭಾಗಗಳನ್ನು ಗ್ರೀಸ್ ದೇಶ ಹೊಂದಿದೆ.

ಇವುಗಳಲ್ಲಿ ಪ್ರಮುಖ ಪ್ರರ್ಯಾಯ ಆಡಳಿತ ದ್ವೀಪಗಳಲ್ಲೊಂದು ಪೆಲೊಪ್ಪೋನೀಸ್. ಈ ಪ್ರದೇಶದಲ್ಲಿ ಒಂದಾದ “ಲ್ಯಾಕೋನಿಯಾ” ಈ ಲೇಖನದ ಕೇಂದ್ರ ಬಿಂದು. ಲ್ಯಾಕೋನಿಯಾದ ಆಡಳಿತದ ಕೇಂದ್ರ ಪಟ್ಟಣ “ಸ್ಪಾರ್ಟಾ”. ಲ್ಯಾಕೋನಿಯಾದ ನಿವಾಸಿಗಳು ಸಂಕ್ಷಿಪ್ತವಾಗಿ, ತೀಕ್ಷ್ಣವಾಗಿ, ನೇರವಾಗಿ ಮತ್ತು ಅತ್ಯಂತ ಕಟುವಾಗಿ ಮಾತನಾಡುತ್ತಾರೆ. ಹಾಗಾಗಿ ಇವರಿಗೆ “ಲ್ಯಾಕೋನಿಕ್” ಅಂತಾ ಅಡ್ಡ ಹೆಸರು ಬಂದಿದೆ. ಹಾಗಾಗಿ “ಲ್ಯಾಕೋನಿಕ್” ಎನ್ನುವುದು ಗುಣವಾಚಕ ಅಥವಾ ವಿಶೇಷಣ. ಇಂಗ್ಲೀಷಿನಲ್ಲಿ Adjective ಅಂತಾ ಹೇಳತಾರೆ. ಈ ಲ್ಯಾಕೋನಿಕ್ ವಿಷಯಕ್ಕೂ ಒಂದು ಹಿನ್ನೆಲೆಯೂ ಕೂಡ ಇದೆ.
ಪ್ರಾಚೀನ ಸಾಮ್ರಾಜ್ಯವಾದ ಮ್ಯಾಸಿಡೋನಿಯಾದ ರಾಜ 2 ನೇ ಫಿಲಿಪ್. ಈ ರಾಜನು ಮ್ಯಾಸಿಡೋನಿಯಾವನ್ನು 359 BC ಯಿಂದ 336 BC ಯ ವರೆಗೆ ಆಳಿದವನು. ಈತನು ಲ್ಯಾಕೋನಿಯಾವನ್ನು ಆಕ್ರಮಿಸುತ್ತೇನೆ, ನಿಮ್ಮ ನಗರವನ್ನು ಸುಟ್ಟು ಹಾಕುತ್ತೇನೆ, ನಿಮ್ಮೆಲ್ಲರನ್ನೂ ಗುಲಾಮರನ್ನಾಗಿ ಮಾಡಿಕೊಳ್ಳುತ್ತೇನೆ ಎನ್ನುವ ಸಂದೇಶವನ್ನು ರವಾನಿಸುತ್ತಾನೆ. ಅದಕ್ಕೆ ಲ್ಯಾಕೋನಿಯಾ ಒಂದೇ ಒಂದು ಶಬ್ದದ ಮೂಲಕ ಉತ್ತರ ನೀಡುತ್ತದೆ. ಅದೇ “IF” ಎನ್ನುವ ಶಬ್ದ. ಇದು ಜಗತ್ತಿನಲ್ಲಿಯೇ ಅತ್ಯಂತ ಚಿಕ್ಕದಾದ ಉತ್ತರ ಆಗಿತ್ತು. ಇದು ಲ್ಯಾಕೋನಿಯಾ ಪ್ರಜೆಗಳ ಹೇಳಿಕೆ ಮತ್ತು ಬೆದರಿಕೆಯೂ ಕೂಡ ಆಗಿತ್ತು. ಅಂದಿನಿಂದ ಈ ಸರಳ ಮತ್ತು ಚಿಕ್ಕ ಉತ್ತರಗಳನ್ನು “ಲ್ಯಾಕೋನಿಕ್-ಸ್ಪಾರ್ಟನ್” ಅಥವಾ “ಲ್ಯಾಕೋನಿಕ್” ಸಂವಹನ ಮಾಧ್ಯಮವೆಂದು ಕರೆಯಲಾಯಿತು.

ಲ್ಯಾಕೋನಿಕ್ ಗುಣವಾಚಕ ಅಥವಾ ವಿಶೇಷಣಕ್ಕೆ ವ್ಯಾಖ್ಯಾನ ಬಹಳ ಸರಳವಾಗಿದೆ.
- ಅತ್ಯಂತ ಕಡಿಮೆ ಶಬ್ದ ಬಳಕೆ.
- ಸೂಕ್ಷ್ಮ ಸಂವೇದನೆಗಳನ್ನು ಬಿಂಬಿಸುವುದು.
- ಸಂಕ್ಷಿಪ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದು.
- ಸಂಕೀರ್ಣ ಮತ್ತು ಆಲೋಚನೆಗಳನ್ನು ಸರಳವಾಗಿ ತಿಳಿಸುವುದು.
- ಕೆಲವು ಸಾರಿ ಒರಟುತನದಿಂದ ತೋರ್ಪಡಿಸುವುದು.
- ಒಮ್ಮೊಮ್ಮೆ ನಿಗೂಢವೆನಿಸುವಂಥ ಅಭಿಪ್ರಾಯ ಮಂಡನೆ.
ಮೇಲೆ ನಿರೂಪಿಸಲಾದ ಎಲ್ಲ ಗುಣವಾಚಕಗಳನ್ನು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಅತ್ಯಂತ ಪ್ರಬುದ್ಧವಾಗಿ ಬಳಸಿದ್ದಾರೆ. ಇಡೀ ಪ್ರಪಂಚ ಅರಿವಿನ ಕತ್ತಲೆಯಲ್ಲಿದ್ದಾಗ ಅದ್ಭುತ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡಿ ಬೆಳಕನ್ನಿತ್ತ ಶಿವನ ಪ್ರಕಾಶ ಅದು 12 ನೇ ಶತಮಾನ. ಜಗತ್ತಿನಲ್ಲಿ ಭಾಷೆ ಎನ್ನುವುದು ಸಂಜ್ಞೆಗಳ ರೂಪದಲ್ಲಿದ್ದ “Creole” ನ ಕಾಲಘಟ್ಟದಲ್ಲಿ ಕನ್ನಡದಲ್ಲಿ ಅತ್ಯಂತ ಸಮೃದ್ಧ ಮತ್ತು ವಿಪುಲವಾದ ಸಾಹಿತ್ಯ ನಿರ್ಮಾಣವಾಗಿದ್ದು 12 ನೇ ಶತಮಾನದಲ್ಲಿ. ಆ ಕಾಲಘಟ್ಟದಲ್ಲಿದ್ದ ಶರಣ ಸಂಸ್ಕೃತಿ, ಶರಣ ಪರಂಪರೆ, ಶರಣರ ಸಾಮಾಜಿಕ ಜನ–ಜೀವನ ನೆನೆಸಿಕೊಂಡರೆ ಹೃದಯದಲ್ಲಿ ಒಂದು ತಂಗಾಳಿಯ ಸಿಂಚನ ಈಗಲೂ ಆಗುತ್ತದೆ. ಶ್ರೇಣೀಕೃತ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿದ್ದ ಶರಣರು ಅಂತರಂಗ ಮತ್ತು ಬಹಿರಂಗದ ಸದಾಚರಣೆಯಿಂದ ಜೀವನವನ್ನು ಬೆಳಗಿಸಿಕೊಂಡಿದ್ದರು. ಶರಣರ ಜೀವನವನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ ಏಕೆಂದರೆ ಅಂಥ ತತ್ವ ಸಿದ್ಧಾಂತಕ್ಕೆ ಶರಣರು ಯಾವಾಗಲೂ ಬದ್ಧರಾಗಿದ್ದರು.
ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ಸಮರ್ಥವಾಗಿ ಬದುಕಿನ ಸತ್ಯವನ್ನು ಚಿತ್ರಿಸಿದವರು ಬಸವಾದಿ ಶರಣರು. ಅಲ್ಲಲ್ಲಿ ಕೆಲವು ವಚನಗಳು ದೀರ್ಘವಾಗಿದ್ದರೂ ಸಾಮಾನ್ಯವಾಗಿ ವಚನಗಳು ಸರಳ ಮತ್ತು ಕಡಿಮೆ ಸಾಲುಗಳಿಂದ ಕೂಡಿವೆ. ಸಮರ್ಥವಾಗಿ ಬದುಕಿನ ತತ್ವ ಸಿದ್ಧಾಂತಗಳನ್ನು ನಿರೂಪಿಸುತ್ತವೆ. ಅಲ್ಲಮ ಪ್ರಭುಗಳ ಈ ವಚನ ಅತ್ಯಂತ ಸೂಕ್ಷ್ಮ ಸಿದ್ಧಾಂತವನ್ನು ಹೇಳುತ್ತದೆ.
ಹುಟ್ಟು ಬಂಜೆಯ ಮಗನೊಬ್ಬ
ಈಯದೆಮ್ಮೆಯ ಗಿಣ್ಣವ ಬೇಡಿದನು
ಕೊಂಬಿಲ್ಲದ ಮರನನೇರಿ ತುಂಬ ಹಣ್ಣ ಮೆಲಿದನು
ಗುಹೇಶ್ವರ ಗುಹೇಶ್ವರ ಇಳಿ ಎಂದಡೆ ಅಳುತ್ತೈದಾನೆ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-288 / ವಚನ ಸಂಖ್ಯೆ-1600)
ತನ್ನ ಅಂತರಂಗವೇ ಅರಿವಾಗದ ಮತ್ತು ಮಾನವ ಐಹಿಕ ಸುಖಭೋಗಗಳ ಜಾಲದಲ್ಲಿ ಸಿಕ್ಕಿಬಿದ್ದಿರುವ, ಆಧ್ಯಾತ್ಮದ ಸೊಗಡಿರುವ ಅದ್ಭುತ ಪರಿಕಲ್ಪನೆಯ ಅಲ್ಲಮ ಪ್ರಭುಗಳ ವಚನವಿದು. ಇನ್ನೂ ಹುಟ್ಟದೇ ಇರುವ ಅಂತರಂಗದ ಅರಿವನ್ನು ಹುಟ್ಟು ಬಂಜೆಗೆ ಹೋಲಿಸುವ ಅದ್ಭುತ ಶಬ್ದ ಪ್ರಯೋಗ. Pure Philosophical Terminology ನಲ್ಲಿ ಇದನ್ನು “ಆತ್ಮಗರ್ಭ” ಅಂತಾರೆ. ಪ್ರತೀದಿನ ಏನಾದರೊಂದು ಹೊಸದನ್ನು ಕಲಿತು ತನ್ನನ್ನು ತಾನು ಮರುಹುಟ್ಟು ಪಡೆಯುವುದು. Every day we learn something by which we take a rebirth a little bit by little bit. ಹುಟ್ಟು ಬಂಜೆಯ ಮಗ ಅಂದರೆ ಅರಿವು ಇಲ್ಲದೇ ಹುಟ್ಟಿದ ಜ್ಞಾನ. ಇಂಥ ಮಗ ಈಯದ ಎಮ್ಮೆಯ ಗಿಣ್ಣವನ್ನು ಬೇಡತಾ ಇದ್ದಾನೆ. ಅಂದರೆ readymade food which is not possible to manufacture. ಅಂದರೆ ಅರಿವಿನ ವಿಸ್ತಾರ ಮತ್ತು ಜ್ಞಾನವನ್ನು ಸಂಪಾದಿಸದೇ ಎಲ್ಲವೂ ಬೇಕೆನ್ನುವ ಹುಚ್ಚುತನ. ಅಜ್ಞಾನಿಯೊಬ್ಬ ಲಂಚ ಕೊಟ್ಟು ಸಾಹಿತ್ಯ ಪಂಡಿತ ಪ್ರಶಸ್ತಿ ತೆಗೆದುಕೊಂಡ ಹಾಗೆ.
ಪಂಚೇಂದ್ರಿಯಗಳನ್ನು ರೆಂಬೆ ಕೊಂಬೆಗಳಿಲ್ಲದ ಮರಕ್ಕೆ ಹೋಲಿಸುವ ಮತ್ತು ತುಂಬ ಹಣ್ಣು ಮೆಲಿದನು ಎನ್ನುವ ಐಹಿಕ ಸುಖಭೋಗಗಳು ಎನ್ನುವ ಅಲ್ಲಮ ಪ್ರಭುಗಳ ಅನುಭಾವ ಸಾಹಿತ್ಯದ ಅದ್ಭುತ ಶಬ್ದ ಜೋಡಣೆ. ಅಂತರಂಗದ ಅರಿವು ಮೂಡಿಸುತ್ತೇನೆ ಮರದಿಂದ ಇಳಿದು ಬಾ ಎಂದರೆ ಅಳುತ್ತಾನೆ ಎನ್ನುವಲ್ಲಿ ಮಾನವ ಐಹಿಕ ಸುಖಭೋಗಗಳಲ್ಲಿ ಎಷ್ಟು ತಲ್ಲೀನನಾಗಿದ್ದಾನೆ ಎನ್ನುವುದನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ ಅಲ್ಲಮ ಪ್ರಭುಗಳು. ಅಲ್ಲಮ ಪ್ರಭುಗಳ ಈ ಬೆಡಗಿನ ವಚನ ಇದೇ ಸಮೂಹ ಸಂವಹನ ತತ್ವ ಸಿದ್ಧಾಂತವನ್ನು ತಿಳಿಸುತ್ತದೆ.
ಸಂಕೀರ್ಣ ಮತ್ತು ಆಲೋಚನೆಗಳನ್ನು ಸರಳವಾಗಿ ತಿಳಿಸುವುದು ಲ್ಯಾಕೋನಿಕ್ ಸಂವಹನ ಮಾಧ್ಯಮದ ಪ್ರಬುದ್ಧತೆ. ಇದನ್ನು 12 ನೇ ಶತಮಾನದ ವಚನಕಾರರು ಮನೋಜ್ಷವಾಗಿ ಮತ್ತು ಶ್ರೇಷ್ಠವಾಗಿ ಉಪಯೋಗಿಸಿಕೊಂಡಿದ್ದಾರೆ. ಬತ್ತಲೇಶ್ವರನ ಪುಣ್ಯಸ್ತ್ರೀ ಶರಣೆ ಗುಡ್ಡವ್ವೆ ಹೇಳತಾರೆ:
ತನು ಬತ್ತಲೆಯಾದಡೇನು
ಮನ ಬತ್ತಲೆಯಾಗದನ್ನಕ್ಕ
ವೃತವಿದ್ದಡೇನು ವೃತಹೀನರಾದ ಬಳಿಕ
ನೆರೆದಡೆ ನರಕವಯ್ಯಾ ನಿಂಬೇಶ್ವರಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1087)
ಎಂಥ ಉನ್ನತ ವಿಚಾರ. ಎಲ್ಲಿವರೆಗೂ ಮನಸ್ಸಿನಲ್ಲಿ ಕಲ್ಮಷ ತೆಗೆದು ಮನಸ್ಸು ನಿರಾಳ ಆಗೋದಿಲ್ಲವೋ ಅಲ್ಲೀವರೆಗೂ ತನು ಶುದ್ಧವಾಗೋದಿಲ್ಲ. ವೃತ, ನಿಯಮಗಳನ್ನು ಎಷ್ಟು ಮಾಡಿದರೂ ವೃತ ತಪ್ಪಿದರೆ ಕಷ್ಟ ತಪ್ಪಿದ್ದಲ್ಲ. ಎಷ್ಟು ಸಂವೇದನಾಶೀಲ ವಿಷಯ ಕೊಡತಾರೆ ಶರಣೆ ಗುಡ್ಡವ್ವೆ. ಅಂತರಂಗದೊಳಗೆ ಕಲ್ಮಷ ಇದ್ದಾಗ ತನು ಶುದ್ಧವಾದರೂ ಪ್ರಯೋಜನ ಇಲ್ಲಾ. ಎಂಥ ಸಂಕೀರ್ಣವಾದ ಬದುಕಿನ ಜಂಜಾಟಗಳನ್ನೂ ಕೂಡ ಸರಳ ಮತ್ತು ಚಿಕ್ಕದಾದ ಈ ವಚನದಲ್ಲಿ ಮೂಡಿಸಿದ್ದಾರೆ ಶರಣೆ ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆಯವರು.
ಕೆಲವು ಸಾರಿ ಒರಟುತನ ತೋರ್ಪಡಿಸುವುದು ಮತ್ತು ನಿಗೂಢವೆನಿಸುವಂಥ ಅಭಿಪ್ರಾಯ ಮಂಡನೆಗಳನ್ನು ತಲುಪಿಸುವುದು ಲ್ಯಾಕೋನಿಕ್ ಸಂವಹನ ಮಾಧ್ಯಮದ ವಿಶೇಷತೆ. ಇದನ್ನು ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಣಬಹುದು.
ಅತ್ಯಂತ ಕಠೋರವಾಗಿ, ನೇರವಾಗಿ, ನಿಷ್ಠೂರವಾಗಿ ವಚನಗಳನ್ನು ಬರೆದ ಅಂಬಿಗರ ಚೌಡಯ್ಯನವರು ದಿಟ್ಟ ಗಣಾಚಾರಿಗಳು. ಅವರು ವಚನಗಳಲ್ಲಿ ಬಳಸಿದ ಭಾಷೆಯಲ್ಲಿ ಒರಟುತನವಿದ್ದರೂ ವಿಚಾರಗಳಲ್ಲಿ ಜಿಗುಟುತನವಿದೆ. ಅವರು ಶೋಷಣೆಯ ಕರಾಳ ಮುಖವನ್ನು ಸ್ವತಃ ಅನುಭವಿಸಿದ್ದರಿಂದ ಸನಾತನಿಗಳ ಒಡೆತನದ ವರ್ಗಗಳ ಬಗ್ಗೆ ಕೆಚ್ಚು ಕ್ರೋಧ, ನೋವು ಎಲ್ಲವೂ ಹೆಪ್ಪುಗಟ್ಟಿವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇವರೊಬ್ಬರೇ ಎಂದು ತೋರುತ್ತದೆ. ಎಲ್ಲಾ ಶರಣರಂತೆ ಇವರೂ ಸಹ ಕಾಯಕಯೋಗಿ, ದೋಣಿ ನಡೆಸುವುದು ಅವರ ಕಾಯಕ. ಅಂಬಿಗ ಎಂದು ಕೀಳು ನುಡಿಯದಿರಿ ಎಂದು ಅವರ ವಚನವೊಂದರಲ್ಲಿ ಉತ್ತರಿಸಿದ್ದಾರೆ:
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರಿ
ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ
ಹಾಯಿಸುವನೆಂದಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-945 / ವಚನ ಸಂಖ್ಯೆ-17)
ಆವ ಕಾಯಕವಾದರೂ ಜ್ಯೇಷ್ಠತೆಗೆ ಅಡ್ಡಿ ಬರಲಾರದು ಎಂದು ತಮ್ಮ ಕಾಯಕದ ಶ್ರೇಷ್ಠತೆಯನ್ನು ಹೇಳುತ್ತಾರೆ ಚೌಡಯ್ಯನವರು. ಈ ಸಂಸಾರದಲ್ಲಿ ನಾನೊಬ್ಬನೇ ಅಲ್ಲ, ನನ್ನ ಜೊತೆ ಏರ ಬನ್ನಿ ನನ್ನ ದೋಣಿಯನ್ನು, ಒಂದೇ ಹುಟ್ಟಿನಲ್ಲಿ ಭವವೆಂಬ ಸಾಗರವನ್ನು ದಾಟಿಸಿಬಿಡುವೆ ಎಂಬಲ್ಲಿ ಅವರ ಧಾರ್ಷ್ಟ್ಯತೆ, ಕಳಕಳಿ, ಗೋಚರವಾಗುತ್ತದೆ. ಆತ್ಮ ವಿಶ್ವಾಸದ ನುಡಿಗಳು ಇವರ ವಚನಗಳಲ್ಲಿ ಪ್ರಜ್ವಲಿಸಿವೆ. ಅದಕ್ಕೆಂದೇ ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿ ಬಳಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಇವರ ಸುಮಾರು 270 ವಚನಗಳು ಇಲ್ಲಿಯವರೆಗೆ ನಮಗೆ ದೊರಕಿವೆ. ಇಂಥ ಅಮೂಲ್ಯವಾದ ಸಂಕೀರ್ಣವಾದ ತತ್ವ ಸಿದ್ಧಾಂತವನ್ನು ಕೇವಲ ಮೂರೇ ಮೂರು ಸಾಲುಗಳಲ್ಲಿ ದಿಟ್ಟತನದಿಂದ ನಿರೂಪಿಸಿದ್ದು ಲ್ಯಾಕೋನಿಕ್ ಸಂವಹನ ಮಾಧ್ಯಮಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಇದು ವಚನಕಾರರ ಪ್ರಬುದ್ಧ ಚಿಂತನೆ ಮತ್ತು ಆಧುನಿಕ ಜಗತ್ತಿಗೆ ಒಂದು ಮಾದರಿ ಸಾಹಿತ್ಯ.
ಅಮೂಲ್ಯವಾದ ತತ್ವಗಳನ್ನು ತಮ್ಮ ವಚನಗಳಲ್ಲಿ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸಿದವರು 12 ನೇ ಶತಮಾನದ ವಚನಕಾರರು ಮತ್ತು ವಚನಕಾರ್ತಿಯರು. ಇವರ ವಚನಗಳು ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳನ್ನು ಎತ್ತಿ ತೋರುತ್ತವೆ. ಹೀಗೆ ಶರಣರು ನಮಗಾಗಿ ಬದುಕಿ ತಮ್ಮ ಗುರುತುಗಳಾದ ವಚನಗಳನ್ನು ಬಿಟ್ಟು ಹೋಗಿದ್ದಾರೆ. ನಮಗೆ ವಚನಗಳು ಅರಿವನ್ನು ಹುಟ್ಟಿಸಬೇಕು. ಆಗ ಶರಣರು ಕಂಡ ಕನಸು ನನಸಾಗುತ್ತದೆ ಅವರು ನಮಗಾಗಿ ಮಾಡಿದ ತ್ಯಾಗ ಸಾರ್ಥಕವಾಗುತ್ತದೆ.
ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com
ಸಹಾಯಕ ಗ್ರಂಥಗಳು :
- ಶಾಸನಗಳಲ್ಲಿ ಶಿವಶರಣರು : ಡಾ. ಎಮ್. ಎಮ್. ಕಲಬುರ್ಗಿ.
- ಬಸವಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ.
- ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ : ಡಾ. ಎಸ್. ಎಮ್. ವೃಷಭೇಂದ್ರಸ್ವಾಮಿ.
- Just Enough Words, Laconic : George Francis Reid.
- A Dictionary of Thoughts : Tryon Edwards
- Intro Laconic : W H Rose