
ತುಂಬಿದ ಸಭೆಯಲ್ಲಿ ರಾಜ ತನ್ನ ಎಲ್ಲ ಮಂತ್ರಿಗಳನ್ನುದ್ದೇಶಿಸಿ, ನಮ್ಮ ರಾಜ್ಯದ ಸರ್ವಾಂಗೀಣ ಏಳಿಗೆಗೆ ಕಾರಣರಾದವನ್ನು ಗುರುತಿಸಿರಿ. ಅವರನ್ನು ನಾನು ಸನ್ಮಾನಿಸಬೇಕು ಎಂದು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಒಬ್ಬ ಮಂತ್ರಿ ನಮ್ಮ ರಾಜ್ಯದಲ್ಲಿರುವ ಇಂಜನೀಯರುಗಳಿಗೆ ಇದರ ಶ್ರೇಯಸ್ಸು ತಲುಪಬೇಕು. ಏಕೆಂದರೆ ಈ ಕೋಟೆ, ಅರಮನೆ, ರಸ್ತೆಗಳು, ಆಣೆಕಟ್ಟುಗಳು ಮತ್ತು ನೀರಾವರಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅಂಥ ಇಂಜನೀಯರುಗಳಲ್ಲಿ ಶ್ರೇಷ್ಠರಾದವರನ್ನು ಈಗಲೇ ಗುರುತಿಸಿ ಕರೆತನ್ನಿ ಎಂದು ರಾಜ ಆಜ್ಞೆ ಮಾಡುತ್ತಾನೆ. ಆದರೆ ಇನ್ನೊಬ್ಬ ಮಂತ್ರಿ ವೈದ್ಯರು ಈ ರಾಜ್ಯವನ್ನು ಸ್ವಸ್ಥವಾಗಿಡುವಲ್ಲಿ ಶ್ರಮ ವಹಿಸಿದ್ದಾರೆ ಎಂದಾಗ ಒಬ್ಬ ಶ್ರೇಷ್ಠ ವೈದ್ಯರನ್ನು ಕರೆತರಲು ರಾಜನು ಕಳಿಸುತ್ತಾನೆ. ಇದನ್ನು ಕೇಳಿದ ಮತ್ತೊಬ್ಬ ಮಂತ್ರಿ ಇಲ್ಲ ಮಹಾರಾಜರೆ ಸೈನಿಕರು ಇಲ್ಲಾ ಅಂದಿದ್ದರೆ ನಮ್ಮ ರಾಜ್ಯ ಪರರ ಪಾಲಾಗುತ್ತಿತ್ತು ಎಂದಾಗ ಶ್ರೇಷ್ಠ ಸೈನಿಕರನ್ನು ಕರೆಸುವಂತೆ ಹೇಳುತ್ತಾನೆ. ಹೀಗೆ ಎಲ್ಲರೂ ಒಂದೊಂದು ವೃತ್ತಿಯಲ್ಲಿರುವವರನ್ನು ಹೆಸರಿಸಿದಾಗ, ಅವರವರ ವೃತ್ತಿಯಲ್ಲಿ ಶ್ರೇಷ್ಠ ಕೆಲಸ ಮಾಡಿದವರ ದಂಡೇ ಸಭೆಗೆ ಹರಿದು ಬಂತು. ರಾಜ ಸ್ವಲ್ಪ ಗಲಿಬಿಲಿಗೊಂಡು ಪ್ರಧಾನಿಯತ್ತ ತನ್ನ ದೃಷ್ಟಿ ಹರಿಸಿದಾಗ, ನಿಮ್ಮ ಗೊಂದಲ ನನಗೆ ಗೊತ್ತಾಯ್ತು ಮಹಾರಾಜಾ ಎರಡು ಘಳಿಗೆ ವೇಳೆ ಕೊಡಿ ರಾಜ್ಯವನ್ನು ಕಟ್ಟುವಲ್ಲಿ ನೆರವಾದ ಶ್ರೇಷ್ಠ ವ್ಯಕ್ತಿಯನ್ನು ಕರೆ ತರುತ್ತೇನೆ ಎಂದು ಸಭೆಯಿಂದ ನಿರ್ಗಮಿಸಿದ.
ಸ್ವಲ್ಪ ಹೊತ್ತಾಗಿತ್ತು ರಾಜ್ಯದ ಪ್ರಧಾನಿ ಸ್ವಲ್ಪ ವಯಸ್ಸಾದ ಮಹಿಳೆಯೊಂದಿಗೆ ಸಭೆಯನ್ನು ಪ್ರವೇಶಿಸಿದಾಗ ಎಲ್ಲ ವೃತಿಗಳಲ್ಲಿ ಶ್ರೇಷ್ಠ ಕೆಲಸ ಮಾಡಿದ ಎಲ್ಲ ಮಹನೀಯರೂ ಆ ಮಹಿಳೆಗೆ ಗೌರವಪೂರ್ಣ ವಂದನೆಗಳನ್ನು ಸಲ್ಲಿಸಲು ಎದ್ದು ನಿಂತರು. ಈ ಘಟನೆಯನ್ನು ನೋಡಿದ ಮಹಾರಾಜ ತಾನೂ ಕೂಡ ಎದ್ದು ನಿಂತು ಪ್ರಧಾನಿಯನ್ನುದ್ದೇಶಿಸಿ ಯಾರು ಈ ಮಹಿಳೆ ಮತ್ತು ಎಲ್ಲರೂ ಇವರಿಗೆ ಯಾಕೆ ಇಷ್ಟು ಗೌರವ ನೀಡಿದರು ಎಂದು ಪ್ರಶ್ನಿಸಿದ. ಪ್ರಧಾನಿ ಅತ್ಯಂತ ವಿನಯದಿಂದ ಇವರು ಈ ಎಲ್ಲ ವೃತಿಯವರಿಗೆ ಕಲಿಸಿದ ಶಿಕ್ಷಕಿ ಎಂದು ಪರಿಚಯ ಮಾಡಿದನು. ಆಗ ರಾಜ ಶಿಕ್ಷಕಿಯನ್ನು ರಾಜೋಚಿತವಾಗಿ ಗೌರವಿಸಿದನು. ನಮ್ಮ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರು ಶಿಕ್ಷಕ ದಿನಾಚರಣೆಯಂದು President’s Protocol ನ್ನೂ ಮೀರಿ ಅವರಿಗೆ ಕಲಿಸಿದ ಗುರುಗಳ ಕಾಲುಗಳಿಗೆ ನಮಸ್ಕರಿಸಿದ್ದನ್ನೂ ಸಹ ನಾವೆಲ್ಲರೂ ಗಮನಿಸಿದ್ದೇವೆ.
ನಮ್ಮ ಜೀವನವೆಂಬ ದೋಣಿ ಇಂಜನೀಯರ್, ವೈದ್ಯ, ಸೈನಿಕ, ವ್ಯಾಪಾರಿಗಳ ಮಾರ್ಗದರ್ಶನ ಇಲ್ಲದೇ ನಡೆಯಬಹುದು. ಆದರೆ ಶಿಕ್ಷಕರಿಲ್ಲದೇ ಜೀವನದ ಮಾರ್ಗದರ್ಶನ ಪಡೆಯುವುದು ಹೇಗೆ ಎಂಬುದನ್ನು ಊಹಿಸಿಕೊಳ್ಳಲೂ ಸಹ ಕಷ್ಟ. ಶಿಕ್ಷಕರಾದವರಿಗೂ ಸಹ ಶಿಕ್ಷಕರ ಮಾರ್ಗದರ್ಶನ ಬೇಕೆ ಬೇಕು. ಎಲ್ಲ ರಂಗದ ಜನರೂ ಶಿಕ್ಷಕರಿಲ್ಲದೇ ಮುಂದೆ ಬರುವುದು ಸಾಧ್ಯವೇ. ಇದು ಶಿಕ್ಷಕ ವೃತ್ತಿಯಲ್ಲಿರುವ ಪಾವಿತ್ರ್ಯತೆ, ಘನತೆ, ಗೌರವ ಮತ್ತು ಮಹತ್ವವನ್ನು ತಿಳಿಸುತ್ತದೆ.
ಶಿಕ್ಷಕ ವೃತಿಯ ಗೌರವ ಮತ್ತು ಘನತೆಯ ಬಗ್ಗೆ ಯಾಕೆ ಈಗ ಪ್ರಸ್ತಾಪ ಬಂತು ಅಂದರೆ ವಿಶೇಷ ಶರಣ ದಂಪತಿಗಳಾದ ಡಾ. ಕಲ್ಯಾಣಮ್ಮ ಲಂಗೋಟಿ ಮತ್ತು ಪ್ರೋ. ಸಿದ್ಣಣ್ಣ ಲಂಗೋಟಿ ಅವರು ಶರಣ ಧರ್ಮವನ್ನೆ ತಮ್ಮ ಉಸಿರಾಗಿಸಿಕೊಂಡ, ಅಪ್ಪಟ ಬಸವಾಭಿಮಾನಿಗಳು. ಸಾಹಿತ್ಯ, ಮತ್ತು ವಚನ ಸಾಹಿತ್ಯದ ಅಭಿರುಚಿ ಇರುವುದರ ಜೊತೆಗೆ ಸಮಾಜಕ್ಕೆ, ಶಿಕ್ಷಣ ರಂಗಕ್ಕೆ ಮತ್ತು ಪತ್ರಿಕಾ ಮಾಧ್ಯಮದಲ್ಲಿ ತಮ್ಮದೇ ಆದ ವಿಶಿಷ್ಠ ಸೇವೆ ಸಲ್ಲಿಸಿ, ಅರಿವು, ಆಚಾರ, ಅನುಭಾವವನ್ನು ಪರಿಶುದ್ಧವಾಗಿ ಮೈಗೂಡಿಸಿಕೊಂಡ ಅಪರೂಪದ ಶರಣ ದಂಪತಿಗಳು ಕೂಡ ಹೌದು.
ಇಂತಹ ಅಪರೂಪದ ಶರಣ ದಂಪತಿಗಳು ನಮಗೆ ಚಿರಪರಿಚಿತರಾದದ್ದು ನಮ್ಮ ಇಳಕಲ್ಲ ಶ್ರೀಮಠದಿಂದ. ಶರಣ ಸಿದ್ದಣ್ಣನವರು ಜನಿಸಿದ್ದು ಬಸವ ಜನ್ಮ ಭೂಮಿಯಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಚಾಂದಕವಠೆ ಎಂಬ ಗ್ರಾಮದಲ್ಲಿ ಶರಣ “ಯಮನಪ್ಪ” ಮತ್ತು ಶರಣೆ “ರಾಚವ್ವ” ದಂಪತಿಗಳ ಪುಣ್ಯ ಗರ್ಭದಲ್ಲಿ 01/06/1951 ರಲ್ಲಿ ಜನಿಸಿದರು. ಚಾಂದಕವಠೆ ಮತ್ತು ಕನ್ನೊಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೈಸ್ಕೂಲ ಶಿಕ್ಷಣವನ್ನು ಸಿಂದಗಿಯಲ್ಲಿ ಪೂರೈಸಿದರು. ಮುಂದೆ ವಿಜಯಪುರ ಬಿ, ಎಲ್, ಡಿ, ಇ ಯಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದರು. ತಮ್ಮ ಉನ್ನತ ವ್ಯಾಸಂಗವನ್ನು ಇವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ, ಎ ತತ್ವಜ್ಞಾನ, ಎಂ, ಎ ಹಿಂದಿ, ಎಂ, ಎ ಕನ್ನಡ, ಎಲ್,ಎಲ್,ಬಿ (ಸ್ಪೇಷಲ್) ಹಾಗೂ ಸಿ,ವಾಯ್,ಇ,ಡಿ, (ಯೋಗ ಶಿಕ್ಷಣ) ಪದವಿಗಳನ್ನು ಪಡೆದರು. ಒಂದು ಪದವಿ ಪಡೆಯಲು ಹೆಣಗಾಡುವ ನಮಗೆ, ಇದು ಇವರ ಓದಿನ ಹಸಿವನ್ನು ತಿಳಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಎಲ್ಲವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅಭ್ಯಸಿಸಲು ಅನುಕೂಲವಾವಿತು. ಅದಕ್ಕಾಗಿಯೇ ಬಸವ ತತ್ವ ಇವರನ್ನು ಕೈಬೀಸಿ ಕರೆಯಿತು. ಅಷ್ಟೆ ಅಲ್ಲದೆ ಹಲವಾರು ಪೂಜ್ಯರ ಪ್ರವಚನಗಳು ಇವರ ಮೇಲೆ ಪ್ರಭಾವ ಬೀರಿದವು. ಶಿಕ್ಷಣಕ್ಕೆ ತಕ್ಕ ಸಂಸ್ಕಾರ, ಸಂಸ್ಕಾರಕ್ಕೆ ತಕ್ಕ ವಿನಯಶಾಲಿಗಳು ಅಷ್ಟೇ ವಿಧೇಯರು ನಮ್ಮ ಸಿದ್ದಣ್ಣ ಶರಣರು.
ನಮ್ಮ ಇಳಕಲ್ಲ ಪೂಜ್ಯರಾದ ಮಹಾಂತ ಜೋಳಿಗೆಯ ಹರಿಕಾರರು ಆದ ಪರಮ ಪೂಜ್ಯ ಡಾ|. ಮಹಾಂತಪ್ಪಗಳವರ ಬಲಗೈ ಬಂಟರಂತಿದ್ದ ಸಿದ್ದಣ್ಣ ಶರಣರು ನಮ್ಮ ಪೂಜ್ಯರ ಪ್ರತಿ ಕಾರ್ಯಕ್ಕೂ ಬೆನ್ನೆಲುಬಾಗಿ, ಹೆಗಲಿಗೆ ಹೆಗಲು ಕೊಟ್ಟು ನಿಂತವರು. ಪೂಜ್ಯರು ಕೈಯಲ್ಲಿ ತೋರಿದ್ದನ್ನು ತಲೆಯಮೇಲೆ ಹೊತ್ತು ನಡೆದ ಅಪ್ಪಟ ಬಸವಾಭಿಮಾನಿಗಳು. ಶರಣ ಸಿದ್ದಣ್ಣನವರು ನಮ್ಮ ಮಠದಿಂದ ಏರ್ಪಡಿಸಿದ “ಶರಣ ಸಿದ್ಧಾಂತ ವಿದ್ಯಾಪೀಠದ ತರಗತಿಗಳ ನೇತೃತ್ವವನ್ನು ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ನಮ್ಮ ಪೂಜ್ಯರ ಜೊತೆಗೆ ಮಹಾಂತ ಜೋಳಿಗೆಯನ್ನು ಹೊತ್ತು ದೇಶ, ವಿದೇಶಗಳನ್ನು ಸುತ್ತಾಡಿ ಬಸವಧರ್ಮವನ್ನು ಬೆಳೆಸಿ ಅದನ್ನು ಪೋಷಿಸುವಲ್ಲಿ ಅದಕ್ಕೆ ಬೆಂಗಾವಲಾಗಿ ನಿಂತು ಬಸವತತ್ವ ಹೆಮ್ಮರವಾಗಿ ಬೆಳೆಯಲು ಇವರ ಪಾತ್ರವು ಅನನ್ಯವಾದದ್ದು. ಅನೇಕ ಜನಸಾಮಾನ್ಯರ ದುಶ್ಚಟಗಳನ್ನು ಬಿಡಿಸಿ, ಅವರನ್ನು ಶರಣ ಮಾರ್ಗಕ್ಕೆ ತಂದು ಎಷ್ಟೋ ಬಡ ಕುಟುಂಬಗಳನ್ನು ದುಶ್ಚಟಗಳಿಂದ ಪಾರುಮಾಡಿದ ಕೀರ್ತಿ ಸಿದ್ದಣ್ಣನವರಿಗೂ ಸಲ್ಲುತ್ತದೆ.
ಬಸವ ತತ್ವದ ಮೂಲ ಅಂಶಗಳಾದ ಅಷ್ಟಾವರಣ, ಪಂಚಾಚಾರ, ಷಟ್ಥ್ಸಲಗಳನ್ನು ಅರಿತು ಆಚರಿಸಿ, ಬಸವಾಭಿಮಾನಿಗಳಿಗೂ ಮನಮುಟ್ಟುವಂತೆ ಮನದಟ್ಟುಮಾಡಿಕೊಟ್ಟ ಹಿರಿಮೆ ಸಿದ್ದಣ್ಣ ಶರಣರದು. “ಕಾಯಕವೇ ಕೈಲಾಸ” ಎಂಬ ಅಣ್ಣನವರ ನುಡಿಯಂತೆ ನಡೆದು ತೋರಿ ಸಮಾಜಕ್ಕೆ ಮಾದರಿಯಾದವರು ಈ ಶರಣ ದಂಪತಿಗಳು.
“ಬಂದುದನರಿತು ಬಳಸುವಳು
ಬಂದುದ ಪರಿಣಾಮಿಸುವಳು
ಬಂದುಬಳಗವಾ ಮರೆಸುವಳು
ಇಂತಪ್ಪ ದುಗ್ಗಳೆಯ ತಂದು ಬದುಕಿದೆನು
ಕಾಣಾ ರಾಮನಾಥ ||
ಎಂಬ ಜೇಡರ ದಾಸಿಮಯ್ಯನವರ ವಚನದಂತೆ ಮತ್ತು “ಸತಿ ಪತಿಗಳೊಂದಾದ ಭಕ್ತ ಹಿತವಪ್ಪುದು ಶಿವಂಗೆ” ಎಂಬ ಶರಣರ ವಾಣಿಯಂತೆ ಬದುಕು ಸಾಗಿಸುತ್ತಿರುವವರು ಈ ಸಿದ್ದಣ್ಣ ಶರಣರು.
ತಾಯಿಯವರಾದ ಕಲ್ಯಾಣಮ್ಮನವರು ಕೂಡ ಅತ್ಯಂತ ಸರಳ ವ್ಯಕ್ತಿತ್ವದ, ಆತ್ಮಸೌಂದರ್ಯದ, ಮಾತೃಹೃದಯಿ, ಅಪ್ಪಟ ಬಸವಭಕ್ತೆ. ಹೆಸರಿಗೆ ತಕ್ಕಂತೆ ಸದಾ ಸಮಾಜದ ಕಲ್ಯಾಣವನ್ನು ಬಯಸುವ, ವೀರ ಗಣಾಚಾರಿ ಅಭಿವಂದಿತ ಅಕ್ಕನಾಗಲಾಂಬಿಕೆ ಎಂದರೆ ತಪ್ಪಾಗಲಾರದು. ಪತಿಗೆ ತಕ್ಕ ಸತಿಯಾಗಿ, ತಮ್ಮ ವೃತ್ತಿಯ ಜೊತೆಗೆ ಬಸವ ಭಕ್ತಿಯನ್ನು ಹೊತ್ತು ನಡೆದವರು ಕಲ್ಯಾಣಮ್ಮನವರು. ಶರಣರ ನಡೆ ನುಡಿ ಏಕವಾದಂತೆ ನಡೆದು ತೋರಿದವರು. ಮೃದು, ಮಿತಭಾಷಿ, ನಿರರ್ಗಳವಾಗಿ ಮನಮುಟ್ಟುವಂತೆ ವಿಷಯ ವಿವರಿಸುವಲ್ಲಿ ತಮ್ಮದೇ ಛಾಪುಮೂಡಿಸಿದ, ಸದಾ ಬಸವಸೇವೆಗೆ ತಮ್ಮನ್ನು ತೊಡಗಿಸಿಕೊಂಡು, ಮತ್ತೊಬ್ಬರನ್ನು ಪ್ರೆರೇಪಿಸುವಲ್ಲಿ ಸದಾ ಸಿದ್ಧಹಸ್ತರು.
ಇಂತಹ ಕಲ್ಯಾಣಮ್ಮನವರು ಜನಿಸಿದ್ದು ಕರ್ನಾಟಕದ ಮೇರುಭಾಗದಲ್ಲಿರುವ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಗಿ ಎಂಬ ಗ್ರಾಮದ ಶರಣ ಹಾವಪ್ಪ ಕೋಟೆ ಮತ್ತು ಶರಣೆ ಅನ್ನಪೂರ್ನಮ್ಮನವರ ಪುಣ್ಯಗರ್ಭದಲ್ಲಿ 1956 ಫೆಬ್ರುವರಿ 5 ರಂದು ಜನಿಸಿದರು. ಇವರ ಮೊದಲ ಹೆಸರು “ಶಕುಂತಲಾ” ಪೂಜ್ಯರಾದ ಶತಾಯುಷಿ ಚೆನ್ನಬಸವ ಪಟ್ಟದೇವರು“ ನೀನು ಕಲ್ಯಾಣ ನಾಡಿನ ಮಗಳು, ಕಲ್ಯಾಣಮ್ಮ ಎಂಬ ಹೆಸರಿನಿಂದ ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕು” ಎಂದು ಆಶೀರ್ವದಿಸಿದರಂತೆ. ಅಂದಿನಿಂದ ಶಕುಂತಲಾ ಕಲ್ಯಾಣಮ್ಮನವರಾದರು. ಹಲವಾರು ಕಡೆಗಳಲ್ಲಿ ಶಿಕ್ಷಣ ಪಡೆದದ್ದರಿಂದ ಹಲವಾರು ಸಂಸ್ಕೃತಿ, ಸಂಸ್ಕಾರಗಳನ್ನು ಪಡೆಯಲು ಅನುಕೂಲವಾಯಿತು. ಅನೇಕ ಪೂಜ್ಯರ ಪ್ರವಚನದ ಪ್ರಸಾದವು ಇವರನ್ನು ವೀಶೇಷವಾಗಿ ಆಕರ್ಷಿಸಿತು. ಉನ್ನತ ವ್ಯಾಸಂಗವನ್ನು ಪೂರೈಸಿದ ಮೇಲೆ ದಲಿತ ವಚನಕಾರರಾದ “ಕುಮಾರ ಕಕ್ಕಯ್ಯನ ವಚನಗಳು – ಒಂದು ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. 1980 ರಲ್ಲಿ ಸಿ, ಎಸ್ ಬೆಂಬಳಗಿ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
ಇಂತಹ ಅಪರೂಪದ ದಂಪತಿಗಳನ್ನು, ಮತ್ತು ಅವರ ಬಸವ ಸೇವೆಗೆ ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. “ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗ ಭೋಗ” ಎಂಬಂತೆ ಯಾವುದನ್ನು ಇವರು ಅರಸಿ ಹೋದವರಲ್ಲ. ಅದಾವುದನ್ನು ಬಯಸದೇ ಬಸವಭಾವದ, ನಿರ್ಭಾವದಿಂದ ಬಸವಸೇವೆಗೆ ಕಂಕಣಬದ್ಧರಾಗಿ ಅಣು ಅಣುವು ತಮ್ಮನ್ನು ತೊಡಗಿಸಿಕೊಂಡು, ಒಂದು ನಿಮಿಷವು ವ್ಯರ್ಥ ಕಳೆಯದೆ ನಿರಂತರ ಸೇವೆಗೈಯುತ್ತ ಸಾರ್ಥಕ ಬದುಕು ನಡೆಸಿದ ಕೀರ್ತಿ ಈ ಶರಣ ದಂಪತಿಗಳದು.
ಇಂತಹ ಅಪರೂಪದ ಜೋಡಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಇವರ “ಸಿದ್ಧ ಕಲ್ಯಾಣ” ಎಂಬ ಹೆಸರಿನಿಂದ “ಅಭಿನಂದನಾ ಗ್ರಂಥ” ತಂದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ನಿಜವಾಗಿಯೂ ಇವರ ಬದುಕು “ಸಿದ್ಧ ಕಲ್ಯಾಣ, ಪರಿಶುದ್ಧ ಕಲ್ಯಾಣ” . ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಇವರಿಬ್ಬರೂ ನೂರಾರು ಕಾಲ ಬಸವಾದಿ ಶರಣರ ಆಶೀರ್ವಾದದಿಂದ ಸುಖವಾಗಿ, ನೆಮ್ಮದಿಯಿಂದ ಬಾಳಲಿ. ಇವರ ಸಂತತಿ ಸುಖಸಮೃದ್ಧಿಯಿಂದ ಬಾಳುವಂತಾಗಲಿ. ಇವರು ಬದುಕು ಜಗಕೆ ಮಾದರಿಯಾಗಲಿ ಎಂದು ಆಶಿಸುತ್ತೆನೆ.
ಶ್ರೀಮತಿ. ಸವಿತಾ ಮಾಟೂರ
ಇಳಕಲ್ಲ
ಫೋನ್ ನಂ:+91 78927 10782