ಡಾ. ಬಸವರಾಜ ಅನಗವಾಡಿಯವರು ನಿರ್ಮಿಸಿದ “ಬಸವ ಶರಣ ಕಲಾ ಸಂಗ್ರಹಾಲಯ” | ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಮುಖ್ಯರಸ್ತೆಯಲ್ಲಿ “ಬಸವ ಶರಣ ಕಲಾ ಸಂಗ್ರಹಾಲಯ” ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದರೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳನ್ನು ಕಾಣಬಹುದು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ಅಲ್ಲಿನ ಬೆಳಕಿನ ವ್ಯವಸ್ಥೆ ಚಿತ್ರ-ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ Design ಮಾಡಲಾಗಿದೆ. ಇದು ನಮ್ಮನ್ನು 12 ನೇ ಶತಮಾನಕ್ಕೆ ಕರೆದೊಯ್ಯುವ ಬಗೆಯೂ ಅನಿಸುತ್ತದೆ. ಆ ಹೊತ್ತು ಬಾಲಕ ಬಸವಣ್ಣ ಜನಿವಾರ ಧಾರಣೆಗೆ ನಿರಾಕರಿಸಿದ್ದು, ವಿದ್ಯಾಭ್ಯಾಸಕ್ಕೆಂದು ಸಂಗಮಕ್ಕೆ ಬಂದಿದ್ದು, ಮುಂದೆ ಬಿಜ್ಜಳನ ಆಸ್ಥಾನ ಸೇರಿದ್ದು … ಹೀಗೆ ಒಂದೊಂದೇ ಸನ್ನಿವೇಶಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ.

ನಾವು ವಚನಗಳನ್ನು ಓದಿ ತಿಳಿದುದಕ್ಕೂ, ಈ ಚಿತ್ರ-ಶಿಲ್ಪಗಳಿಗೂ ತಾಳೆ ಹಾಕತೊಡಗುವುದು ಸಹಜ. ಈ ಶಿಲ್ಪಗಳನ್ನು ನೋಡುತ್ತಿದ್ದ ಮಹಿಳೆಯೊಬ್ಬರು ಉಬ್ಬುಶಿಲ್ಪದಲ್ಲಿಯ ಗಿಳಿ. ಬೆಕ್ಕು, ಪಂಜರ ನೋಡಿ ‘ಇದೇನು’ ಅನ್ನುತ್ತಿದ್ದರು. ಅದೇ ಗುಂಪಿನಲ್ಲಿದ್ದ ಬಾಲಕ ‘ಗಿಳಿಯೋದಿ ಫಲವೇನು? ಬೆಕ್ಕು ಬಹುದ ಹೇಳಲರಿಯದು …?’ ಚಿತ್ರ ಚೌಕಟ್ಟಿನ ಕೆಳಗೆ ಪುಟ್ಟ ಫಲಕದಲ್ಲಿ ಬರೆದಿದ್ದ ವಚನವನ್ನು, ಅದರ ಭಾವಾರ್ಥವನ್ನೂ ಓದಿ ಹೇಳುತ್ತಿದ್ದ.

ವಚನ ಶಿಲ್ಪಗಳ ವಿಭಾಗ ನೋಡಿ ಮುಂದೆ ನಡೆದರೆ ಅನುಭವ ಮಂಟಪದ ದರ್ಶನವಾಗುತ್ತದೆ. ಅಲ್ಲಿ ಸಾಕ್ಷಾತ್ ಅನುಭವ ಮಂಟಪದ ಸನ್ನಿವೇಶವೇ ಮರುಜೀವ ಪಡೆದಿದೆ. ಅಲ್ಲಮ ಪ್ರಭುಗಳು ಷಟಸ್ಥಲ ಪೀಠದಲ್ಲಿ ಆಸೀನರಾಗಿದ್ದಾರೆ. ಅವರಿಗೆದುರಾಗಿ ನಿಂತಿರುವ ಮಹಾದೇವಿಯಕ್ಕ, ಬಸವಣ್ಣ, ಅಲ್ಲಮ ಇವರೆಲ್ಲರೂ ಸಂವಾದ ನಡೆಸುತ್ತಿದ್ದಾರೆ. “ನಿನ್ನ ಗಂಡನ ಹೆಸರು ಹೇಳಿದರೆ ಮಾತ್ರ ನಿನಗಿಲ್ಲಿ ಸ್ಥಾನವಿದೆ” ಅಲ್ಲಮರ ಮಾತಿಗೆ “ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಮಿಕ್ಕಿನ ಲೋಕದವರನೆಗೆ ಸಂಬಂಧವಿಲ್ಲವಯ್ಯಾ ಪ್ರಭುವೇ” ಎಂದುತ್ತರ ನೀಡುತ್ತಿರುವಂತೆ ನನಗೆ ಭಾಸವಾಗುತ್ತದೆ. ನಾವೂ ಈ ಸಭೆಯಲ್ಲಿ ಭಾಗವಹಿಸಿದ್ದೇವೆ ಅನ್ನಿಸಲು ಮುಖ್ಯ ಕಾರಣ, ಈ ಶಿಲ್ಪಗಳೆಲ್ಲವೂ ಆಳೆತ್ತರದಾಗಿವೆ. ಅಲ್ಲಮ, ಬಸವಣ್ಣ, ಮಹಾದೇವಿಯರಲ್ಲದೇ ಮುಂದಿನ ಸಾಲಿನಲ್ಲಿರುವ ಶರಣರ ಶಿಲ್ಪಗಳು ಪೂರ್ಣಶಿಲ್ಪಗಳಾಗಿವೆ. ಉಳಿದವು ಉಬ್ಬುಶಿಲ್ಪಗಳಾಗಿವೆ. 50 x 12 ಅಡಿಗಳ ವಿಸ್ತಾರದಲ್ಲಿ ಅನುಭವ ಮಂಟಪವನ್ನು ಸೃಜಿಸಲಾಗಿದೆ. ಇಲ್ಲಿ ಒಟ್ಟು 270 ಶರಣರ ಪ್ರತಿಕೃತಿಗಳನ್ನು ಕಾಣಬಹುದು. Very Interesting ಅಂದರೆ ಒಂದು ಶಿಲ್ಪದ ಮುಖಭಾವ ಇನ್ನೊಂದು ಶಿಲ್ಪದ ಮುಖಭಾವಕ್ಕಿಂತ ವಿಭಿನ್ವಾಗಿದೆ. ಕಲಾವಿದನ ಪ್ರಬುದ್ಧತೆಯನ್ನು ಇದು ತಿಳಿಸುತ್ತದೆ.

ಮುಂದಿನ ವಿಭಾಗದಲ್ಲಿ ಬಸವಣ್ಣನವರನ್ನು ಕುರಿತು ವಿವಿಧ ಕಲಾವಿದರು ಚಿತ್ರಿಸಿದ ಪೇಂಟಿಂಗ್‌ಗಳ, ಸರಣಿ ಚಿತ್ರಗಳ, ಅಮರ ಚಿತ್ರಕಥಾ ಮಾಲಿಕೆಯ ಛಾಯಾಚಿತ್ರಗಳಿವೆ. ಇದೊಂದು ಅಪರೂಪದ ಸಂಗ್ರಹವೇ ಸರಿ. ಯಾಕೆಂದರೆ, ಈ ಸಂಗ್ರಹಾಲಯದ ರೂವಾರಿಗಳಾದ ಡಾ. ಬಸವರಾಜ ಅನಗವಾಡಿಯವರು “ಬಸವಣ್ಣನ ಕುರಿತು ರಚಿಸಿದ ವರ್ಣಚಿತ್ರಗಳ ಒಂದು ಅಧ್ಯಯನ” ಎಂಬ ಸಂಶೋಧನ ಪ್ರಬಂಧ ಮಂಡಿಸಿದವರು. ಹೊರಗಿನ ಆವರಣದಲ್ಲಿ ಬಸವಪೂರ್ವ ಯುಗದ ಸಮಾಜವನ್ನು ತೆರೆದಿಡುವಂತಹ ಸಿಮೆಂಟ್ ಶಿಲ್ಪಗಳಿವೆ. ಆ ದಿನಗಳಲ್ಲಿದ್ದ ಅಸಮಾನತೆಗಳು, ಅಸ್ಪೃಶ್ಯತೆ, ದಲಿತರಿಗೆ ಶಿಕ್ಷಣದ ವಂಚನೆ, ನೀರಿನ ನಿರಾಕರಣೆ, ಅವರು ಊರು ಪ್ರವೇಶಿಸುವ ಮುನ್ನ ಸಂಬಳಿಗೋಲು ಹಿಡಿದು ಪ್ರವೇಶಿಸುವ ದೃಶ್ಯ, ಪೊರಕೆ ಹಿಡಿದು ಬರುವ ದೃಶ್ಯಗಳಿವೆ.

ಫೈಬರ್‌ನಲ್ಲಿ ನಿರ್ಮಿಸಿರುವ ಉಬ್ಬುಶಿಲ್ಪಗಳು 18 x 8, 10 x 6 ಅಡಿಗಳ ಗಾತ್ರದಲ್ಲಿವೆ. ಶಿಲ್ಪಗಳನ್ನು ಸಿಮೆಂಟ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ತಯಾರಿಸಲಾಗಿದೆ. ಈಗ ಅಕ್ಕಮಹಾದೇವಿಯ ಸರಣಿಯ ಶಿಲ್ಪಗಳ ನಿರ್ಮಾಣ ಕಾರ್ಯ ನಡೆದಿದೆ. ಈ ಸಂಗ್ರಹಾಲಯ ನಿರ್ಮಾಣಕ್ಕಾಗಿ ಡಾ. ಬಸವರಾಜ ಅನಗವಾಡಿಯವರು ಸುಮಾರು 6 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ರಾಜ್ಯ ಸರ್ಕಾರ ಈ ತನಕ 2.50 ಕೋಟಿ ರೂಪಾಯಿ ಅನುದಾನ ನೀಡಿದೆ.

ಅನಕ್ಷರಸ್ಥರಿಗೂ ಶರಣರ ಜೀವನ, ಅವರ ವಚನಗಳನ್ನು ತಲುಪಿಸಬೇಕೆಂಬುದು ತಮ್ಮ ಧೈಯವೆಂದು ಹೇಳುವ ಡಾ. ಬಸವರಾಜ ಅನಗವಾಡಿಯವರು, ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿ ವಚನದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೂಲ ಪಠ್ಯ ಮತ್ತು ಅದರ ಭಾವಾರ್ಥಗಳ ಫಲಕಗಳು ಎಲ್ಲ ವಚನಶಿಲ್ಪಗಳ ಅಡಿಯಲ್ಲಿವೆ. ಅಕ್ಷರ ರೂಪದ ವಚನಗಳನ್ನು ದೃಶ್ಯರೂಪಕ್ಕೆ ತಂದಿರುವುದಲ್ಲದೆ ಅದನ್ನು “ಕೇಳುವ” ಪಠ್ಯವಾಗಿಯೂ ರೂಪಿಸಿದ್ದಾರೆ. ಶಿಲ್ಪಗಳ ಬಳಿ ಇರುವ QR Code Scan ಮಾಡಿದರೆ, ನಾವು ವಚನ ಮತ್ತದರ ವಿವರಣೆಯನ್ನು ಕೇಳಬಹುದು. ವಚನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಮಾನ್ಯರಿಗೆ ತಲುಪಿಸಬೇಕೆಂಬ ಡಾ. ಬಸವರಾಜ ಅನಗವಾಡಿಯವರ ಹಂಬಲ ಗಮನಾರ್ಹವಾದುದು.

ದಿನಾಂಕ 08.06.2024 ರಂದು ಡಾ. ಬಸವರಾಜ ಅನಗವಾಡಿಯವರು ನಮ್ಮ ವಚನಸಾಹಿತ್ಯ ಮಂದಾರ ಫೌಂಡೇಶನ್” ದ ಅಂತರಾಷ್ಟ್ರೀಯ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ “ಬಸವ ಕಲಾ ಸಂಗ್ರಹಾಲಯ” ದ ಕುರಿತು ನೀಡಿದ ಉಪನ್ಯಾಸ ಮಾಲಿಕೆಯ ವಿಡೀಯೋ ಲಿಂಕ್:

ಬಸವ ಕಲಾ ಸಂಗ್ರಹಾಲಯದ ರೂವಾರಿ ಡಾ. ಬಸವರಾಜ ಅನಗವಾಡಿಯವರ ಸಂಕ್ಷಿಪ್ತ ಪರಿಚಯ:

ಹೆಸರು: ಡಾ. ಬಸವರಾಜ ಶಿವಪುತ್ರಪ್ಪ ಅನಗವಾಡಿ
ಜನ್ಮ ದಿನ: 05.07.1972.
ವಿದ್ಯಾರ್ಹತೆ :

  1. 1995: ಎ. ಎಂ ಪದವಿ, ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ವಿಜಯಪುರ.
  2. 2005: ಬಿ. ಎಪ್. ಎ ಪದವಿ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ, ಧಾರವಾಡ.
  3. 2010: ಎಂ. ವಿ. ಎ ಪದವಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  4. 2017: ಪಿ. ಎಚ್. ಡಿ ಪದವಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಉದ್ಯಾನ ವನಗಳು:

  1. 2002: ಜಾನಪದ ಸಂಗ್ರಹಾಲಯ, ಬಾಗಲಕೋಟ.
  2. 2005: ಆಲಮಟ್ಟಿ ಉದ್ಯಾನವನ, ಆಲಮಟ್ಟಿ.
  3. 2008: ಮಾನವ ವಿಕಾಸ ಪಾರ್ಕ್, ಬದಾಮಿ.
  4. 2010: ಬುಡಕಟ್ಟು ಕಲೆ, ಸಾಂಗಲಿ (ಮಹಾರಾಷ್ಟ್ರ).
  5. 2011: ಬಸವ ಶರಣ ಕಲಾ ಸಂಗ್ರಹಾಲಯ, ಕೂಡಲಸಂಗಮ.
  6. 2012: ವಿಜ್ಞಾನ ಕೇಂದ್ರ, ಬಳ್ಳಾರಿ.

ಪ್ರದರ್ಶನಗಳು :

  1. ಮುಳಗಡೆಯ ಕುರಿತು ಚಿತ್ರಗಳ ಪ್ರದರ್ಶನಗಳು, ಬಾಗಲಕೋಟ.
  2. ಕಲಬುರ್ಗಿ, ಧಾರವಾಡ, ಬಳ್ಳಾರಿ, ಬೆಂಗಳೂರು, ದೆಹಲಿಗಳಲ್ಲಿ ಬಸವ ಶರಣರ ಉಬ್ಬು ಶಿಲ್ಪಗಳ ಕುರಿತು ಪ್ರದರ್ಶನಗಳು,

ಸೇವೆಗಳು:

  1. ಗ್ರಂಥ ಸಹಾಯಕ: ಕೂಡಲಸಂಗಮ ಅಭಿವೃದ್ದಿ ಮಂಡಳಿ, ಕೂಡಲಸಂಗಮ.
  2. ಉಪನ್ಯಾಸಕರು: ಪ್ರಭುರಾಜೇಂದ್ರ ಚಿತ್ರಕಲಾ ಮಹಾವಿದ್ಯಾಲಯ.
  3. ಉಪನ್ಯಾಸಕರು: ಚಿತ್ರಕಲಾ ಮಹಾವಿದ್ಯಾಲಯ, ಬಾಗಲಕೋಟ

ವಿಳಾಸ:
ಡಾ. ಬಸವರಾಜ ಎಸ್. ಅನಗವಾಡಿ.
ಗುಂಡನಪಲ್ಲೆ ಪುನರ್ವಸತಿ ಕೇಂದ್ರ.
ತಾಲೂಕ ಮತ್ತು ಜಿಲ್ಲೆ: ಬಾಗಲಕೋಟ.

ಪಿ. ಎಚ್. ಡಿ ಪದವಿ ಪ್ರದಾನ:

ಕನ್ನಡ ವಿಶ್ವವಿದ್ಯಾಲಯಕ್ಕೆ ಪಿ. ಎಚ್. ಡಿ ಪದವಿಗಾಗಿ ಸಾದರ ಪಡಿಸಿದ “ಬಸವಣ್ಣನವರ ಕುರಿತ ವರ್ಣಚಿತ್ರಕಲೆ: ವಿಶ್ಲೇಷಣಾಧ್ಯಯನ” ಮಹಾಪ್ರಬಂಧಕ್ಕೆ ಉನ್ನತ ಶಿಕ್ಷಣ ಸಚಿವರಾದ ಶ್ರೀ. ಬಸವರಾಜ ರಾಯರೆಡ್ಡಿ ಅವರಿಂದ ಪದವಿ ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಡಾ. ಮಲ್ಲಿಕಾ ಘಂಟಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಉಪಸ್ಥಿತರಿದ್ದರು.

2005 ರ ಸುಮಾರಿಗೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಚಿತ್ರ-ಶಿಲ್ಪಗಳ ತಯಾರಿ ಕಾರ್ಯ ಆರಂಭಿಸಿದರು. “ಕೂಡಲ ಸಂಗಮ ಅಭಿವೃದ್ಧಿ ಮಂಡಳಿ” ನೀಡಿದ ಒಂದು ಎಕರೆ ಜಾಗದಲ್ಲಿ 2011 ರಿಂದ ಈ ಸಂಗ್ರಹಾಲಯದ ಕೆಲಸ ಶುರುವಾಯಿತು. ಆಗ ಬಸವಣ್ಣನ ಕುರಿತಾದ 49 ಉಬ್ಬುಶಿಲ್ಪಗಳಿದ್ದವು. ಈ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಸದ್ಯ 100 ಉಬ್ಬುಶಿಲ್ಪಗಳು, 125 ಸಿಮೆಂಟ್ ಶಿಲ್ಪಗಳು, 100 ಕ್ಯಾನ್ಸಾಸ್ ಪೇಂಟಿಂಗ್‌ಗಳಿವೆ.

ಡಾ. ಬಸವರಾಜ ಅನಗವಾಡಿ,
ಅಧ್ಯಕ್ಷರು,
ಬಸವ ಶರಣ ಕಲಾಸಂಗ್ರಹಾಲಯ,
ಕೂಡಲ ಸಂಗಮ.
ಹುನಗುಂದ ತಾಲೂಕ,
ಬಾಗಲಕೋಟೆ ಜಿಲ್ಲೆ.
ಮೋಬೈಲ್‌ ಸಂ. 99720 95772

Loading

Leave a Reply