
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಈ ಅನುಭಾವದ ಮಾತನ್ನೇ ಇನ್ನೂ ಸ್ವಲ್ಪ ಮುಂದೆ ತೆಗೆದುಕೊಂಡು ಹೋದರೆ ಇವತ್ತಿನ ನಮ್ಮ ವಿಶೇಷ ಅತಿಥಿಯ ಅದ್ಭುತ ಪರಿಚಯ ನಮಗಾಗುತ್ತದೆ. ಒಂದು M. Phil ಪ್ರಭಂಧ, ಒಂದು Ph.D ಪ್ರಭಂಧ, ಒಂದು ಪ್ರಸಾರಾಂಗ ಮಾಲಿಕೆಯ ಗ್ರಂಥ. Ph.D ಪಡೆದ ಬೀಳಗಿ ತಾಲ್ಲೂಕಿನ ಪ್ರಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗೆ ಕಲಿಯುವುದರ ಜೊತೆಗೆ ವಿಶ್ವ ವಿದ್ಯಾಲಯವನ್ನೇ ತಮ್ಮೊಂದಿಗೆ ಸಮ್ಮಿಳಿತಗೊಳಿಸಿ ಸಂಶೋಧನೆಗೆ ಒಂದು ಮೌಲ್ವಿಕ ಅರ್ಥ ತಂದುಕೊಟ್ಟ ಇಂದಿನ ವಿಶೇಷ ಅತಿಥಿ ನಮ್ಮ “ಅಕ್ಕನ ಅರಿವು” ಬಳಗದ ಸದಸ್ಯೆ ಡಾ. ರಾಜೇಶ್ವರಿ. ವೀ. ಶೀಲವಂತರವರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ 19.09.1980 ರಲ್ಲಿ ಜನಿಸಿದ ಡಾ. ರಾಜೇಶ್ವರಿ ಶೀಲವಂತರವರಿಗೆ ಅಜ್ಜಿ ಶ್ರೀಮತಿ ಗೋದಮ್ಮ ಸಿದ್ದಪ್ಪ ಶೀಲವಂತ ಅವರಿಂದ ಬಳುವಳಿಯಾಗಿ ಬಂದದ್ದು ಜಾನಪದ ಲೋಕವೆಂಬ ಸುಸಂಸ್ಕೃತ ಜ್ಞಾನ ಮತ್ತು ಅತ್ಯಂತ ಪ್ರಭುದ್ಧ ಬಸವಾದಿ ಶರಣ ಸಂಸ್ಕೃತಿ. ಬಹುಶಃ ಅಜ್ಜಿ ಶ್ರೀಮತಿ ಗೋದಮ್ಮನವರಿಂದ ಅಕ್ಷರಗಳನ್ನು ತಿದ್ದುವುದನ್ನು ಕಲಿತವರು ಡಾ. ರಾಜೇಶ್ವರಿ ಶೀಲವಂತ. ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು ಆದ ಶ್ರೀ ವೀರೇಂದ್ರ ಸಿದ್ದಪ್ಪ ಶೀಲವಂತ ಅವರು ಡಾ. ರಾಜೇಶ್ವರಿ ಶೀಲವಂತ ಅವರ ತಂದೆ ಮತ್ತು ತಾಯಿ ಸೌ. ಶಾಂತಾ ವೀರೇಂದ್ರ ಶೀಲವಂತ ಗೃಹಿಣಿ. ಒಬ್ಬನೇ ಸಹೋದರ ಶ್ರೀ ವಿದ್ಯಾಧರ ಶೀಲವಂತ ಅವರು ಆರೋಗ್ಯ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿದ್ದಾರೆ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಹಲಗಲಿ ಮತ್ತು ಬೀಳಗಿಯಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಪೂರೈಸಿದರು. ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಬೀಳಗಿಯಲ್ಲಿ ಕಾಲೇಜು ಶಿಕ್ಷಣ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀಳಗಿಯಲ್ಲಿ ಪದವಿಯನ್ನು ಪೂರೈಸಿದರು. ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆಯ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.
“ಚಂದ್ರಶೇಖರ ಕಂಬಾರರ ಕಾದಂಬರಿಗಳಲ್ಲಿ ತಾಯಿ ಸಂಸ್ಕೃತಿಯ ಪ್ರಾತಿನಿಧ್ಯ” ಎಂಬ ಪ್ರಭಂದವನ್ನು ಮಂಡಿಸಿ M. Phil ಪದವಿ ಗಳಿಸಿದರು. ಇವರ ಸಾಹಿತ್ಯಿಕ ಒಲವು ಮತ್ತು ಇನ್ನೂ ಸಂಶೋಧನೆ ಮಾಡಬೇಕೆಂಬ ಉತ್ಕಟ ಇಚ್ಛೆಯಿಂದ “ಕನ್ನಡ ಸಾಹಿತ್ಯದಲ್ಲಿ ಕೊರವಂಜಿ ಸಂಕಥನ” ಎಂಬ ಮಹಾಪ್ರಭಂದವನ್ನು ಮಂಡಿಸಿ Ph. D ಯನ್ನೂ ಸಹ ಗಳಿಸಿದರು. ಕನ್ನಡ ಹಂಪಿ ವಿಶ್ವ ವಿದ್ಯಾಲಯದ ಪ್ರಸಾರಾಂಗ ವಿಭಾಗದವರು ಇವರ ಕೃತಿ “ಕಪ್ಪರ ಪಡಿಯವ್ವ” ಗ್ರಂಥವನ್ನು ಪ್ರಕಟಿಸುವ ಮೂಲಕ ಇವರ ಸಾಹಿತ್ಯಾಸಕ್ತಿಗೆ ನೀರೆರೆದು ಪೋಷಿಸಿದ್ದಾರೆ.
ಇವರ ಸಾಹಿತ್ಯಸಕ್ತಿಯನ್ನು ಕಂಡು ಬೀಳಗಿಯ ಸನಾದಿ ಅಪ್ಪಣ್ಣ ಕಲಾಕಾರರ ಸಂಘದವರು “ರಾಜ್ಯ ಮಟ್ಟದ ಸರಸ್ವತಿ ಶ್ರೀ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಚನ ಸಾಹಿತ್ಯದಲ್ಲಿ ಮಹಿಳೆ, ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಹೋರಾಟಗಾರ ಸಿಂಧೂರ ಲಕ್ಷ್ಮಣ, ಮಹಿಳೆ ಕಲಾ ಬದುಕಿನ ಇಕ್ಕಟ್ಟುಗಳು, ಬೀಳಗಿ ತಾಲ್ಲೂಕಿನ ಸಾಹಿತ್ಯ ಪರಂಪರೆ, ಬೀಳಗಿ ತಾಲ್ಲೂಕಿನ ಸಮುದಾಯಗಳು, ಕೊರವಂಜಿ, ಬೀಳಗಿ ತಾಲ್ಲೂಕಿನ ಸಂಪ್ರದಾಯ ಆಚರಣೆ ನಂಬಿಕೆಗಳು, ಹೆಣ್ಣು ಜ್ಞಾನದ ಕ್ರಿಯಾತ್ಮಕ ಶಕ್ತಿಯಾಗಿ ಕೊರವಂಜಿ, ಮುಂತಾದ 20 ಕ್ಕೂ ಹೆಚ್ಚು ಲೇಖನಗಳು ಸಂಪಾದನಾ ಕೃತಿಗಳು, ಮಾಸಿಕ, ಪಾಕ್ಷಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ಬೀಳಗಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀಳಗಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉನ್ನತ ವ್ಯಾಸಂಗದ ಅಭಿರುಚಿ, ಸಂಶೋಧನಾತ್ಮಕ ಪ್ರಭಂಧಗಳು, ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಅಪಾರ ಅಭಿರುಚಿಯುಳ್ಳ ಡಾ. ರಾಜೇಶ್ವರಿ ಶೀಲವಂತ ಅವರು “ವಚನ ಮಂದಾರ” ವೇದಿಕೆಯ ಗೌರವಾನ್ವಿತ ಸದಸ್ಯೆ. ಅತ್ಯಮೂಲ್ಯ ವಚನ ಸಾಹಿತ್ಯದ ಸಿಂಚನವನ್ನು ನಮಗೆ ಈಗಾಗಲೇ ಅವರ ಪ್ರಭುದ್ಧ ಲೇಖನಗಳ ಮೂಲಕ ಪರಿಚಯಿಸಿದ್ದಾರೆ. ಇಂಥ ಸಾಧಕಿ ಡಾ. ರಾಜೇಶ್ವರಿ ಶೀಲವಂತ ಅವರು ನಮ್ಮ ಜೊತೆ ಇದ್ದಾರೆ ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯ.
ವಿಜಯಕುಮಾರ ಕಮ್ಮಾರ,
“ವಚನ ಮಂದಾರ” ವೇದಿಕೆ.