ತತ್ವಪದಕಾರರು ಏಕಾಂಗಿ ಹೋರಾಟಗಾರರು | ಡಾ. ಸರ್ವಮಂಗಳ ಸಕ್ರಿ | ರಾಯಚೂರು.

ತತ್ವಪದಕಾರರು ಏಕಾಂಗಿ ಹೋರಾಟಗಾರರು. ಸಮಾಜದಲ್ಲಿ ಏಕ ವ್ಯಕ್ತಿಗಳಾಗಿ ಅನುಭಾವಿಕ ಬದುಕನ್ನು ಸ್ವೀಕರಿಸಿದವರು. ಸಮಾಜದಲ್ಲಿದ್ದ ಭ್ರಷ್ಟಾಚಾರ ಅಪ್ರಮಾಣಿಕತೆ ಜಾತೀಯತೆಯಂತ ಕರ್ಮಕಾಂಡಗಳಿಗೆ ಕಾರಣವಾಗುವ ಜನರಿಗೆ ತಮ್ಮ ಸನ್ನಡತೆಯ ಮೂಲಕ ನಡೆ ನುಡಿಯಲ್ಲೊಂದಾದ ಬದುಕನ್ನು ತೋರಿಸಿ ಕೊಟ್ಟರು. ತತ್ವ ವಿಚಾರಳಿಂದ ಸಮಾಜದ ಕಳಕಳಿ ಸಾದ್ಯ ಎಂಬುದು.. ದಿನ ನಿತ್ಯದ ಮೌಡ್ಯ ಆಚರಣೆಗಳಿಗೆ ವಿಡಂಬನೆಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಗಳಲ್ಲಿನ ಸಮಸ್ಯೆಗಳನ್ನು ಅರಿಯುವತ್ತ ಬಗೆಹರಿಸುವ ಪ್ರಯತ್ನ ಮಾಡಿದರು, ಪ್ರೇರೇಪಿಸಿದರು. ಇಂಥಹ ಜ್ವಲಂತ ಸಮಸ್ಯೆಗಳನ್ನು ಆರ್ಭಟವಿಲ್ಲದೆ, ಆಡಂಬರವಿಲ್ಲದೆ, ಅಹಂಕಾರ ಮುಕ್ತತೆಯಿಂದ ಸಹ ಚಿಂತನೆಗಳಿಂದ ಪ್ರಾಮಾಣಿಕವಾಗಿ ಬಿಡಿಸಿ ತೋರಿಸಿದರು. ಅನುಭಾವಿ ಬದುಕಿನ ಧಾರ್ಮಿಕ ಸಂಸ್ಕ್ರತಿಯ ಬೆಳವಣಿಗೆಗೆ ಕಾರಣರಾದರು.

ತತ್ವಪದಕಾರರು ತಾವು ಕಂಡ ಅನುಭಾವಿ ಬದುಕನ್ನು ಮುನ್ನಡೆಸುವ ಮೂಲಕ ಹೊಸ ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾದರು. ವ್ಯಕ್ತಿ ಮೂಲವಾದ ನಿರ್ದಿಷ್ಠ ಧರ್ಮ ಸಿದ್ಧಾಂತಗಳಿಂದ ದೂರ ಸರಿದು ಬಹುವಿಧವಾದ ಸಾಂಸ್ಕೃತಿಕ ಸಂವೆದನೆಗಳ ಸಶಕ್ತೀಕರನಕ್ಕೆ ಪ್ರೇರಣೆ ಒದಗಿಸಿದರು. ಭೌತ ಮತ್ತು ಮಾನವ ಪ್ರಪಂಚಗಳ ವೈವಿಧ್ಯತೆ ಹಾಗೂ ವೈರುಧ್ಯತೆಗಳನ್ನು ಖಂಡವಾಗಿ ಗ್ರಹಿಸದೇ ಅಖಂಡವಾಗಿ ಗ್ರಹಿಸಿದರು. ತಮ್ಮ ಹಾಡುಗಳಲ್ಲಿ ರೈತರ, ಸ್ತ್ರೀಯರ, ಸಮಾಜದಲ್ಲಿ ಅವಮಾನಿತರಾದವರ, ಆಧುನೀಕರಣದ ಭರಾಟೆಯಲ್ಲಿ ಅವಿವೇಕಿಗಳಾಗುತ್ತಿರುವ ವ್ಯಂಗ್ಯವನ್ನು ಗುರುತಿಸಿದರು. ಅವರ ಹಾಡುಗಳಲ್ಲಿ ಇಂಥ ವಿಸ್ತೃತ ನೆಲೆಗಳನ್ನು ಗುರುತಿಸಬಹುದು. ಇಂತಹ ವರ್ಗ ಜಾತಿಯ ಸಮಸ್ಯೆಗಳನ್ನು ಜನ ಸಾಮಾನ್ಯರ ಬದುಕಿನ ಮಿಡಿತಗಳನ್ನು ತತ್ವಪದಕಾರರಿಗಿಂತ ಮೊದಲೇ ಸರ್ವಜ್ಞ-ವೇಮನರಂಥ ಸಂತರು ತೆರೆದಿಡಲು ಪ್ರಯತ್ನಿಸಿದ್ದನ್ನು ಕಾಣಬಹುದು.

ಕುಲಕರ್ಣಿ ಗೌಡರು ಊರ ಮುಂದಿನ ಹೊಲ
ಪಾಲಿಗೆ ಕೊಟ್ಟರೆ ಮಾಡಬಾರದು ಮಾಡಿದ್ಯಾಕ
ಮಾಡವಲ್ಲಿ ಮತ್ತೊಂದು ಹೇಳತೀನಿ ಕಲಕಲ
ಬಾಯಿ ಮಾಡಬಾರದು ಛಾವಡಿ ಏರಬಾದು

ಸ್ವಭಾವತಃ ಕಾಯಪಲ್ಲೆ ವ್ಯಾಪಾರಿಯಾದ ಕೂಡ್ಲೂರು ಬಸವಲಿಂಗಪ್ಪನವರ ಈ ಪದ ಸಹಜವಾಗಿ ರೈತನ ಸಮಸ್ಯೆಗಳು, ವ್ಯವಹಾರಿಕ ಸಂಬಂಧಗಳು, ಅವನ ಶೋಷಣೆ ಇವೆಲ್ಲ ಮೇಲ್ನೋಟಕ್ಕೆ ಭೌತಿಕ ವಿವರಗಳೆನಿಸುತ್ತವೆ. ಹೊಲ ಮಾಡುವ ರೈತ ವ್ಯಕ್ತಿಯಾದರೂ ಆತ ಕೃಷಿಗೈಯುವ ಹೊಲ ಊರನಾಳುವ ಪ್ರಭಾವಿ ವ್ಯಕ್ತಿಗಳದ್ದು. ಹಾಗಿದ್ದಾಗ ಆತನಿಗೆ ಸಹನೆ ಮತ್ತು ಸದ್ಭುದ್ಧಿಯಿದ್ದರೆ ಮಾತ್ರ ಕೃಷಿ ಫಲಗಳನ್ನು ಉಣ್ಣಬಲ್ಲ, ಇಲ್ಲವಾದರೆ ನಿಷ್ಫಲ. ಈ ಕಾಯವೆಂಬ ಊರಿನಲ್ಲಿ ಅಜ್ಞಾನ ಮತ್ತು ಅಹಂಕಾರ ಗುಣವುಳ್ಳ ಗೌಡ ಮತ್ತು ಕುಲಕರ್ಣಿಯರು ವಾಸವಾಗಿದ್ದಾರೆ. ಜೀವ ಸಂಭೋದನಸ್ಥಲವೆಂಬ ಈ ಹೊಲದ ಒಡೆಯರು ಅವರಾಗಿದ್ದರಿಂದ ಅವರ ಜೊತೆಗೆ ತಂಟೆಗೆ ಹೋಗದೆ ವಿನಯದಿಂದ ನಿನ್ನ ಕೆಲಸ ಮಾಡು. ಊರ ಮುಂದಿನ ಹೊಲದ ಪ್ರಧಾನರು ಅವರಾದ್ದರಿಂದ ತಂಟೆಕೋರರು ದಾಳಿ ಮಾಡಿ ನಿನ್ನನ್ನು ಅಪರಾಧಿಯನ್ನಾಗಿ ಮಾಡುವರು.

ದೇವರ ಪುಣ್ಯದಿಂದ ಎಂಟ್ಹೆತ್ತು ಕಟ್ಟಿದರೆ
ಹೆಚ್ಚಿನ ಕೋಣ ಕಟ್ಟಬಾರದು
ಅಷ್ಟಮದ ತುಂಬಿದ ಈ ದೇಹದಲ್ಲಿ
ಅಜ್ಞಾನಿ ಭಾವದ ಕೋಣವನ್ನು ಕಟ್ಟಿದರೆ
ನಿನ್ನ ಮನವೇ ದಿಕ್ಕು ತಪ್ಪುವುದು.

ತತ್ವಪದಕಾರರು ಇಂತಹ ಸಹಜ ನುಡಿಯಲ್ಲಿ ಯಾವ ಆಕ್ರೋಷಗಳಿಲ್ಲದೆ ಮನಕ್ಕೆ ತಗಲುವಂತೆ ತತ್ವವನ್ನು ನಿರೂಪಿಸಿದ್ದಾರಷ್ಟೆ. ಆದರೂ ಅನೇಕ ಸಂದರ್ಭದಲ್ಲಿ ಆಕ್ರೋಷವನ್ನು ತೋರಿಸಿ ಅಷ್ಟೇ ನಿರ್ಭೀತಿಯಿಂದ ಯಾವ ಮುಜುಗರವಿಲ್ಲದೇ ಪದಗಳನ್ನು ಬಳಸಿ ಬಯ್ಯುತ್ತಲೇ ತಿಳಿ ಹೇಳಿದ್ದಾರೆ. ಹೀಗೆ ವ್ಯಕ್ತಪಡಿಸಲು ಅವರಿಗೆ ಅವರ ಅನುಭಾವ ಶಕ್ತಿಯೇ ಅಧಿಕಾರವನ್ನು ನೀಡಿದೆ. ಆನುಭಾವಿಗಳ ಸಾಧನೆಗೆ ಅವರ ಅನುಭಾವಕ್ಕೆ ಸಮಾಜ ತಲೆಬಾಗುತ್ತದೆ. ನಡೆ-ನುಡಿ ಒಂದಾದ ಅವರ ವ್ಯಕ್ತಿತ್ವಕ್ಕೆ ದೈವ ಸ್ವರೂಪ ಬಂದಿರುತ್ತದೆ. ಈ ಗುಣದಿಂದಾಗಿ ಯಜಮಾನ್ಯತೆ ಅವರಿಗೆ ಪ್ರಾಪ್ತವಾಗಿ ಲೋಕದ ಯಜಮಾನನಂತಿರುತ್ತಾರೆ.

ಸೊಕ್ಕು ಬಿಡು ಮುಕ್ಕಣ್ಣ ನೆನಿ ಮುಕಳಿ ತುಂಬಿತೋ
ಎಲೋ ಠಕ್ಕು ಮಾಡೆ ಯಮ ಡಕ್ಕೆ ಮುರಿವನಾಳೆ
ದಿಕ್ಕಿಲ್ಲರಾರೇಲೋ ಯೋಗಿ ಜನಕೆ ತಲೆಬಾಗಿ
ನಡೆಯದಿರೆ ಗೂಗಿ ಜನ್ಮ ಕೇಳಲೋ ಎಲೋ

“ಸೊಕ್ಕು ಬಿಡು ಮುಕ್ಕಣ್ಣ ನೆನಿ” ಎಂಬ ಸಲುಗೆಯಲ್ಲಿ ಕುಲಮದ, ಧನಮದ, ಯೌವನ ಮದವುಳ್ಳವನು ಈ ಜಗತ್ತನ್ನು ಅಹಂಕಾರದಿಂದಲೇ ಅಳಿಯುವನು. ಮರ್ಕಟ ತುಂಬಿದ ಅಂಥವನ ಮನಕ್ಕೆ ಸೂಕ್ಷ್ಮ ಚಿಕಿತ್ಸೆ ನೀಡಿದ್ದು ಇಲ್ಲಿ ಕಂಡು ಬರುತ್ತದೆ. ಯೋಗಿ ಜನರಿಗೆ ಮರ್ಯಾದೆ ಕೊಡದಿದ್ದರೆ ಗೂಗಿ ಜನ್ಮವು ನಿನ್ನ ಬೆನ್ನ ಹತ್ತುವುದು. ಗೂಗಿ, ಸ್ಮಶಾನ, ಸಾವು, ಕತ್ತಲು ಇವೆಲ್ಲ ಅವರ ನೀತಿ ಬೋಧನೆಯ ಸಲಕರಣೆಗಳು. ನೀನು ಕಣ್ಣಿದ್ದೂ ಕುರುಡನಾಗುವ ಕತ್ತಲ ಶಾಪದಿಂದ ನರಳುವ ಎಂಬ ಸಂಗತಿಗಳು ಮನುಷ್ಯನ ಅಜ್ಞಾನದ ಅತಿರೇಕಗಳಾಗಿವೆ. ತನ್ನಲ್ಲಿ ಎಲ್ಲ ಸಾಮರ್ಥ್ಯಗಳಿದ್ದೂ ಅವನ್ನು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಿಕೊಳ್ಳದೇ ಬದುಕನ್ನು ಹಾಳು ಮಾಡಿಕೊಳ್ಳುವ ಕ್ಷುಲ್ಲಕ ಜನರಿಗೆ ಹೇಳುತ್ತಾರೆ.

ತತ್ವಪದಕಾರ ಇದನ್ನು ಸಹಜವಾಗಿ ಹೇಳಿದರೂ ಆಧ್ಯಾತ್ಮಿಕ ನೆಲೆಯ ತಾತ್ವಿಕ ಗುಣಗಳು ಈ ಹಾಡಿಗಿವೆ. ಆದರೆ ಇವರ ಭಾಷೆಗೆ ದೃಷ್ಟಿಕೋನಕ್ಕೆ ಗ್ರಹಿಸುವ ಶಕ್ತಿಗೆ ಇರುವ ವೈಶಾಲ್ಯತೆ ವಿಕೇಂದ್ರೀಕರಣದ ಉತ್ಕಟ ತುಡಿತವಾಗಿದೆ. ನಿಂತಲ್ಲಿ ನಿಲ್ಲದ ನಿರ್ದಿಷ್ಟ ಕೋನವೊಂದರಿಂದ ಬದುಕನ್ನು ಗ್ರಹಿಸಿದ ಇವರ ಕ್ರಿಯಾಶೀಲ ನೆಲೆಯ ಒಳಗಡೆಯೇ ಸಾಮುದಾಯಿಕವಾದ ಬಹುಜನ ಉಪಯೋಗಿಯಾದ ಅಂತಃಸತ್ವಗಳಿವೆ. ಇಂತಹ ವಿಕೇಂದ್ರೀಕೃತ ಮನಸ್ಸಿನ ಪ್ರಗತಿಪರ ಧೋರಣೆಗಳನ್ನು ತತ್ವಪದಕಾರರಲ್ಲಿ ದಟ್ಟವಾಗಿ ಕಾಣುತ್ತೇವೆ. ಸಮಾಜದ ಆರೋಗ್ಯದ ಜೊತೆಗೆ ಮನದ ಆರೋಗ್ಯ ಮತ್ತು ದೇಹದ ಆರೋಗ್ಯಕ್ಕೂ ಇಲ್ಲಿ ಪರಬ್ರಹ್ಮ ಮತ್ತು ವಕೀಲನನ್ನು ಸಾಮಾಜಿಕ ಸಂದರ್ಭ ತಾತ್ವಿಕ ರೂಪಕವಾಗಿ ಗುರುತಿಸಲಾಗಿದೆ.

ತತ್ವಪದಕಾರರು ವಕೀಲಿ ಎನ್ನುವುದು ಯಾರೇ ಒಬ್ಬರ ಪರವಾಗಿ ವಾದಿಸುವ ಪಾರ್ಶಿಕ ರೂಪದ್ದು. ಅದಕ್ಕೆ ಸುಳ್ಳು-ಸತ್ಯ, ನ್ಯಾಯ-ನ್ಯಾಯಗಳ ಗೋಜಿಗಿಂತ ತಾನು ಹಿಡಿದ ದಾರಿ ಗೆಲ್ಲಬೇಕೆನ್ನುವ ಏಕೀಕೃತ ಉದ್ದೇಶ ಮಾತ್ರ ಇರುತ್ತದೆ. ಅದಕ್ಕೆ ಸಾರ್ವತ್ರಿಕ ಗುಣ ಇರದು.

ವಕೀಲ ಬಂದನೆ ನೋಡು ಪರಬ್ರಹ್ಮ ವಕೀಲ ಬಂದನೆ
ನೋಡು ಅಖಿಲ ಬ್ರಹ್ಮಾಂಡ ಕಾಯ ಕಿವ ತ್ತೀಸ ಕೀಲ
ಮಾಹಿತಿ ಮಾಡಿದ ಕೊಡೋ ಧೀರೋಕೀಲ ಬಂದನೆ ನೋಡು
ಲೋಭ ಮೋಹವ ಮತ್ಸರದ ಖಟ್ಲೆ ಬಗೆಹರಿಸುವವ

ಆಧುನಿಕ ವ್ಯವಸ್ಥೆಯ ವಕೀಲನನ್ನು ವಿರೋಧಿಸುತ್ತಾನೆ. ಲೌಕಿಕ ಜ್ಞಾನಕ್ಕೆ ಸೀಮಿತನಾದ ವಕೀಲನಿಗೂ ಪಾರಮಾರ್ಥ ಪಥ ರೂಪಿಸಿದ ಬ್ರಹ್ಮನಿಗೂ ವ್ಯತ್ಯಾಸ ಒಡೆದು ತೋರುತ್ತದೆ. ಪರಬ್ರಹ್ಮ ವಕೀಲನೆಂದು ಹೇಳುವ ರೂಪಕವು ಏಕಮನದಿಂದ ಹುಟ್ಟುವ ಪ್ರಕ್ರಿಯೆಯಾಗಿದೆ. ಬ್ರಹ್ಮ ಸರ್ವಾಂತರ್ಯಾಮಿ. ಆತನ ರೂಪವೇ ಬಹುಮುಖಿಯಾದದ್ದು. ಸಾರ್ವತ್ರಿಕ ಸ್ವರೂಪದ್ದು. ಬ್ರಹ್ಮಗಂಟೆ ವಿಶಾಲ ಧೋರಣೆಯ ತರ್ಕ ಮನುಷ್ಯನಿಗೂ ಬೇಕು ಎಂದು ಹೇಳುತ್ತಾರೆ. ಆದರೆ ಬದ್ಧ ಜೀವಿಗೆ ನಿರ್ವಿಕಲ್ಪ ಸಮಾಧಿಯು ಅಸಂಭವ ಎಂಬುದನ್ನು ತಮ್ಮ ತತ್ವಪದಗಳಲ್ಲಿ ಒಡೆದು ತೋರಿಸುತ್ತಾರೆ. 

ಆಧುನಿಕರಲ್ಲದ ಆಧುನಿಕ ಕಾಲಘಟ್ಟದಲ್ಲಿ ಬದುಕಿ ಬಾಳಿದ ವಡಿಕೆ ತಾತಪ್ಪಯ್ಯನಂಥವರ ತತ್ವಪದಕಾರರ ಹಾಡುಗಳಲ್ಲಿ ಇಂಥ ಹಲವು ರೀತಿಯ ವಿಕೇಂದ್ರೀಕೃತ ಸಂವೇದನೆಗಳಿವೆ. ಬ್ರಿಟೀಷರ ಆಳ್ವಿಕೆಯಿಂದಾಗಿ ಸಮಾಜದಲ್ಲಿ ಹೋಟೇಲ್, ಕೋರ್ಟ್, ವಕೀಲ ಮುಂತಾದ ಹೊಸ ವ್ಯವಸ್ಥೆಗಳು ಕಾಣಿಸಿದ್ದು ತಿಳಿದು ಬರುತ್ತದೆ. ಜೊತೆಗೆ ನಿಜಾಂ ಆಳ್ವಿಕೆಯಿಂದ ಮೊಘಲಾಯಿ ವ್ಯವಸ್ಥೆಯಲ್ಲಿ ಮುಲಜುಮ್, ಮುನ್ಸೀಫ್, ಶಿರಸ್ತೇದಾರ, ನಾಜುಮ್ ಇಂಥ ಅಧಿಕಾರ ಸ್ಥಾನಗಳು ಈಗಲೂ ರಾಯಚೂರು ಪರಿಸರದಲ್ಲಿ ಬಳಕೆಯಲ್ಲಿರುವುದನ್ನು ಕಾಣಬಹುದು. ಇವು ಸಾಂಪ್ರದಾಯಿಕ ಸಮಾಜದಲ್ಲಿ ಹುಟ್ಟು ಹಾಕುವ ಅನೇಕ ಸಮಸ್ಯೆಗಳನ್ನು ಅವುಗಳಿಂದಾಗುವ ಪರಿಣಾಮಗಳನ್ನು ಗಮನಿಸುತ್ತಲೇ ತತ್ವಪದಕಾರರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೂ ಇದನ್ನು ಇವರೆಲ್ಲ ತಮ್ಮ ಅನುಭಾವಿಕ ನೆಲೆಯಲ್ಲಿ ಗ್ರಹಿಸಿರುವುದೇ ಹೆಚ್ಚು.

ವಚನಕಾರರ ಕಾಲದಲ್ಲಿದ್ದಂತಹ ಸಂಘಟನಾಯುಕ್ತ ವ್ಯವಸ್ಥೆಯನ್ನು ನಿರಾಕರಿಸಿ ವ್ಯಕ್ತಿಗತ ಹೋರಾಟದ ಹಾದಿ ಹಿಡಿದವರು ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಪ್ರಾಚೀನ ಧರ್ಮಗಳ ಆಧ್ಯಾತ್ಮದ ಹಂಗನ್ನು ನಿರಾಕರಿಸಿ ಜೀವನಾನುಭವವೇ ಪ್ರಧಾನವೆಂಬ ಸ್ಪಷ್ಟತೆ ಇವರಿಗಿತ್ತು. ಮನುಷ್ಯ ಧರ್ಮವೆನ್ನುವುದು ಪುರುಷಾರ್ಥ ಸಾಧನೆಯಾಗಬೇಕಾಗಿದೆ. ನಮ್ಮ ಪ್ರಜ್ಞೆಗೆ ಗೋಚರವಾಗುವ ಸೂಕ್ಷ್ಮ ಧರ್ಮವನ್ನುವುದು ಜಿಜ್ಞಾಸೆಯಿಂದ ವಿಕಾಸಗೊಳಿಸಬೇಕಾಗಿದೆ. ವಚನಕಾರರನ್ನು ಭಕ್ತಿ ಮತ್ತು ಜ್ಞಾನದಿಂದ ಗ್ರಹಿಸಬಹುದು. ಆದರೆ ತತ್ವಪದಕಾರರು ಹಾಗಲ್ಲ. ಭಕ್ತಿಯ ಕಲ್ಪನೆಯನ್ನು ಕೊಡುತ್ತಾರೆ. ಆಧ್ಯಾತ್ಮ, ತತ್ವ, ನೀತಿ, ಲೋಕಜ್ಞಾನ, ಮನುಷ್ಯನ ಅವಸ್ಥೆಗಳ ನಿಷ್ಠೆ ಗಟ್ಟಿತನವನ್ನೂ ಬೇರೆ ಬೇರೆ ನೆಲೆಗಳಲ್ಲಿ ಹೇಳಲು ಪ್ರಾರಂಭಿಸುತ್ತಾರೆ. ಇಂತಹ ಭಿನ್ನ ನೆಲೆಯ ತತ್ವಪದಕಾರರು ಸಂಘಟನಾತ್ಮಕವಾಗಿ ಶ್ರಮಿಸಿದವರಲ್ಲ. ಅವರದು ಏನಿದ್ದರೂ ಪ್ರಾಶಸ್ತ್ಯ ನೀಡಿ ಆಯುರಾರೋಗ್ಯ ಸಿದ್ಧಿಗಾಗಿ ಶರ್ಮಿಸಿದರು. ಒಂದು ವಿಸ್ತಾರವಾಧ ಸ್ವಚ್ಛಂದ ಬದುಕಿನ ರೂಪಿಕೆಗೆ ಹಂಬಲಿಸಿದರು.

ಆಕಳು ಗಿಣ್ಣು ಬಲು ಸವಿಯಣ್ಣಾ ಉಣ್ಣೋ ಬಸವಣ್ಣಾ
ಆ ಆ ಉಣ್ಣೋ ಬಸವಣ್ಣಾ ಕಾಸಿದ ಹಾಲು ಬೋನ
ಮೀಸಲು ಉಣ್ಣೊ ಬಸವಣ್ಣಾ ಕಲಸನ್ನಾ ಸಾರು
ಮೇಲೆ ಮೊಸರು ಮಜ್ಜಿಗೆ ನುಚ್ಚು ಎಲ್ಲಕ್ಕೂ ಹೆಚ್ಚು
ಉಣ್ಣೋ ಬಸವಣ್ಣಾ ಆ ಆ S S S

ಮಂದಕಲ್ಲ ಭೀಮಲಿಂಗಪ್ಪನು ವೃತ್ತಿಯಲ್ಲಿ ರೈತ. ಕೃಷಿ ಬದುಕಿನ ಜೊತೆಗೆ ದನ, ಕರುಗಳನ್ನು ಪೋಷಿಸುತ್ತಿದ್ದನು. ಆಕಳು, ಗಿಣ್ಣ, ಹಾಲು, ಮೊಸರು, ಅನ್ನ, ಮಜ್ಜಿಗೆ ಇವು ಎಲ್ಲವೂ ಉತ್ಪಾದನಾಶೀಲ ಸಂಸ್ಕೃತಿಯ ಪ್ರತೀಕಗಳಾಗಿವೆ. ಉತ್ಪಾದನೆ-ಉಪಭೋಗ ಹಾಗೆ ರೂಪ-ನಿರೂಪ-ಸ್ವರೂಪ ಹಾಗೆ ವ್ಯಕ್ತಿ-ಉತ್ಪಾದನೆ-ಸಮಾಜ ಹೀಗೆ ಒಂದು ನಿರಂತರ ಸೃಷ್ಟಿಶೀಲ ವಿಕಾಸ ಕ್ರಮವನ್ನು ತತ್ವಪದಕಾರರಲ್ಲಿ ಕಾಣುತ್ತೇವೆ. ವಸ್ತು ಫಲಿತಗೊಂಡು ಸಮಷ್ಟಿಗೆ ಉಪಯೋಗಾಗುವ ಉಪಯೋಗ ಉತ್ಪಾದನೆಗೆ, ಸಾಧನೆಗೆ ದಾರಿಯಾಗುವ ಆ ಸಾಧನೆ ಸಾಮಾಜಿಕ ಕಳಕಳಿಗೆ ಭೋಜನವಾಗುವ ಒಂದು ಬಹೂಪಯೋಗಿ ನೆಲೆಯನ್ನಿಲ್ಲಿ ಕಾಣಬಹುದು.

ಸಹಜವಾಗಿ ತತ್ವಪದಕಾರರು ಸಮಾಜವನ್ನು ಪ್ರೀತಿಸಿದವರು. ಸಾಂಪ್ರದಾಯಿಕ ಮಡಿವಂತರ ವ್ಯವಸ್ಥೆಯನ್ನು ಸಮೀಪದಿಂದ ಕಂಡವರು. ಅಂಥ ವ್ಯವಸ್ಥೆಯನ್ನು ಸ್ವಾರ್ಥಪರವಾದ ಮನೋಧರ್ಮವನ್ನು ನಿರ್ಭಯವಾಗಿ ಖಂಡಿಸಿದರು. ಪರೋಪಕಾರ ಹಾಗೂ ಸಮ ಸಂಸ್ಕೃತಿಯ ನೆಲೆಗಳನ್ನು ಹುರಿಗೊಳಿಸಲೆತ್ನಿಸಿದರು. ಬೇರು ಸಮೇತವಾಗಿ ಒಣಗಿದ ವ್ಯವಸ್ಥೆಗೆ ಹಸಿರ ಉಣಬಡಿಸಿದರು. ಮೈ-ಮನಸ್ಸನ್ನು ನಡೆ-ನುಡಿಗಳನ್ನು ಜಾಗೃತಗೊಳಿಸಿದರು. “ಆತ್ಮದ ಅನುಭವ ತಾವು ತಿಳಿದಿಲ್ಲ. ನುಡಿದಂತೆ ತಾವು ಒಮ್ಮೆಯಯಾದರೂ ನಡೆಯಲೇ ಇಲ್ಲ” ಒಂದೆಡೆ ತತ್ವವಿದೆ ಇನ್ನೊಂದರಲ್ಲಿ ನೀತಿಯಿದೆ. ಇಂತಹ ಹಲವು ಮೌಲಿಕವಾದ ಮಾತುಗಳಿಂದ ತತ್ವಪದಕಾರರು ಪರಂಪರೆಯನ್ನು ಮುರಿದು ಕಟ್ಟುತ್ತಾ ಬಂದದ್ದನ್ನು ಗುರುತಿಸಬಹುದು.

ತತ್ವಪದಕಾರರ ಗುರು, ಲಿಂಗ, ಜಂಗಮ ಕಲ್ಪನೆಗಳಾಗಲೀ ಬದುಕಿನ ಕ್ರಮಗಳಾಗಲೀ ಏಕಮುಖೀ ಹಾಗೂ ಒಂಟಿತನವನ್ನು ತೋರಿಸಿದರೂ ಅದು ಬದುಕಿನ ಬಹುವಿಧ ಸಂವೇದನೆಗಳೊಂದಿಗೆ ಒಂಟಿತನವನ್ನೂ ಮೀರಿದ ವಿಶ್ವಾಸಾತ್ಮಕ ಸ್ವಭಾವದ್ದಾಗಿತ್ತು. ತತ್ವಪದಕಾರರ ಜಾತಿಯ ಎಲ್ಲೆ ಮೀರಿ ಕಾಲದ ಕಟ್ಟು ಪಾಡುಗಳನ್ನು ಮುರಿದ ಸಂಚಲನ ಸ್ವಭಾವವೇ ಹರಿವ ನೀರಿನಂತೆ ಉರಿವ ಬೆಂಕಿಯಂತೆ ಬಹುಕೇಂದೀಕೃತ ಸ್ವರೂಪದ್ದಾಗಿತ್ತು ಎನ್ನುವುದು ಬಹಳ ವಿಶೇಷ.

ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್‌ ಸಂ. 94499 46839.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply