ತೆಲುಗು ಸಾಹಿತ್ಯದಲ್ಲಿ ಬಸವಣ್ಣ / ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ.

ಭಾರತದಲ್ಲಿ ಶೈವಧರ್ಮ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ದಕ್ಷಿಣ ಭಾರತದಲ್ಲಿ ಶೈವದ ಪ್ರಸಾರ ಹಲವು ಕಾರಣಗಳಿಂದ ವೈಶಿಷ್ಠ್ಯತೆಯತೆಯನ್ನು ಪಡೆದುಕೊಂಡಿದೆ. ಅದರಲ್ಲಿಯೂ ಆಂಧ್ರಪ್ರದೇಶ ಬಹು ಮುಖ್ಯವಾದುದು. ಆಂಧ್ರವನ್ನು ಶೈವಧರ್ಮದ ನೆಲೆವೀಡು, ತ್ರಿಲಿಂಗದೇಶ ಎನ್ನುತ್ತಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಾಹಸ್ತಿಗಳಲ್ಲಿರುವ ಮೂರು ಲಿಂಗಗಳ ಕಾರಣವಾಗಿ ತ್ರಿಲಿಂಗ ದೇಶವಾಗಿದೆ. ‘ತೆಲುಗು’ ಎಂಬ ಪರಿಭಾಷೆಯೂ ತ್ರಿಲಿಂಗದಿಂದಲೇ ಬಂದಿದೆ. ತ್ರಿಲಿಂಗವೇ ತೆಲುಂಗು, ತೆಲುಗು ಆಗಿದೆ.

ಆಂಧ್ರಪ್ರದೇಶವನ್ನಾಳಿದ ರಾಜರು ಹೆಚ್ಚು ಶೈವರೇ ಆಗಿದ್ದಾರೆ. ಕ್ರಿ.ಶ. ಎರಡನೇ ಶತಮಾನದಿಂದ ೭ನೇ ಶತಮಾನದವರೆಗೆ ಇಕ್ಷ್ವಾಕಃ ಸಾಲಂಕಾಯನ, ವಿಷ್ಣುಕುಂಡಿನ; ಪಲ್ಲವರು ಆಳಿದ್ದಾರೆ. ಇವರ ವಂಶಸ್ಥರಿಗೆ ‘ಪರಮ ಮಹೇಶ್ವರ’ ಎಂಬ ಬಿರುದುಗಳಿವೆ. ಒಂಭತ್ತನೇ ಶತಮಾನದ ಚಾಲುಕ್ಯ ಭೀಮನು ಆಂಧ್ರದಲ್ಲಿ 108 ಶಿವಾಲಯಗಳನ್ನು ಕಟ್ಟಿಸಿದನಂತೆ. ಆಂಧ್ರದ ಪ್ರಸಿದ್ಧರಾಜ ರಾಜನರೇಂದ್ರನಿಗೆ ‘ಈಶ್ವರಾಗಮ’ಗಳಲ್ಲಿ ಇಚ್ಛೆಯಿತ್ತು. ಶೈವಧರ್ಮವು ಅಶ್ರೌತವಾದ, ಕಾಪಾಲಿಕ, ಕಾಳಾಮುಖ, ಮಹಾವ್ರತ ಎಂಬ ಪಂಥಗಳಲ್ಲಿ ತನ್ನ ಬೆಳವಣಿಗೆಯನ್ನು ಕಂಡಿದೆ.

ಶ್ರೀಶೈಲ ಪರಿಸರದಲ್ಲಿ ಮಂಚನ, ಕೇತನ, ಶ್ರೀಪತಿ ಪಂಡಿತ ಮುಂತಾದ ಶೈವಾಚಾರ್ಯರು ಬಾಳಿ ಹೋಗಿದ್ದಾರೆ. ಶ್ರೀಶೈಲ ಪ್ರಾಚೀನ ಶೈವ ಕೇಂದ್ರಗಳಲ್ಲಿ ಪ್ರಮುಖವಾದುದು. ಕ್ರಿ. ಪೂ. ದಿಂದಲೇ ಶೈವಧರ್ಮವು ಇಲ್ಲಿ ನೆಲೆಗೊಂಡಿತ್ತು. ಆಂಧ್ರದ ‘ಭವನಾಶಿ’ ‘ಸಂಗಮೇಶ್ವರ’ ಗ್ರಾಮಗಳಲ್ಲಿ ಶಿವಲಿಂಗಗಳು ದೊರೆತಿವೆ. ಶ್ರೀಶೈಲ ಮುಖ್ಯ ದೇವಾಲಯದಲ್ಲಿ ಆರಂಭದ ಶಿವಲಿಂಗವಿರಲಿಲ್ಲವೆಂದು ತಿಳಿಯುತ್ತದೆ. ಬುಡಕಟ್ಟು ಸಮುದಾಯದ ‘ಚೆಂಚುಮಲ್ಲಯ್ಯ’ನನ್ನು ಪೂಜಿಸುತ್ತಿದ್ದರು. ಅದಕ್ಕೆ ‘ವೃದ್ಧ ಮಲ್ಲಿಕಾರ್ಜುನ’ ಎಂಬ ಹೆಸರೂ ಕರೆದು ಮುಂದೆ ಹಲವು ಕಾಲಾನಂತರ ಶಿವಲಿಂಗ ಸ್ಥಾಪನೆಯಾಗಿರಬೇಕು. ಶ್ರೀಶೈಲದ ಸಾರಂಗಧರ ಮಠದ ಹತ್ತಿರ ಕ್ರಿ.ಶ. 7-8 ನೇ ಶತಮಾನದ ಕಲ್ಲಿನಲ್ಲಿ ‘ಸರಸ ಪರಮಾತ್ಮ’ ಎಂಬ ಬರೆಹವಿದೆ. ಇದು ರಸವಾದಿ ಆಚಾರ‍್ಯನೊಬ್ಬನ ಬಿರುದು. ಕ್ರಿ.ಶ. 7 ನೇ ಶತಮಾನದಲ್ಲಿ ‘ರಸಸಿದ್ಧರು’ ಶ್ರೀಶೈಲದ ‘ಸಿದ್ಧವಟ’ ದೇವಾಲಯವನ್ನು ಸ್ಥಾಪಿಸಿದರು. ಸಿದ್ಧವಟ ಶ್ರೀಶೈಲದ ದಕ್ಷಿಣದ್ವಾರ ಎನಿಸಿದೆ. ಅಲ್ಲದೇ ಕಾಕತೀಯರ ಗಣಪತಿದೇವ ಕ್ರಿ.ಶ. 1199-1262 ರಲ್ಲಿ ಶ್ರೀಶೈಲದಲ್ಲಿ ಮಲ್ಲಿನಾಥದೇವರ ಶಿಷ್ಯರಿಗೆ ‘ಭೃಂಗಿಮಠ’ ನಿರ್ಮಿಸಿದನು.

ಶ್ರೀಶೈಲದಲ್ಲಿ ಮೂಲಶೈವ, ವೀರಶೈವರಿಗೆ ದೊಡ್ಡ ಗಲಾಟೆಯಾಗುತ್ತದೆ. ಕ್ರಿ. ಶ. 1313 ರ ಕಾಕತೀಯ ಪ್ರತಾಪರುದ್ರನ ಶಾಸನದಿಂದ ಇದು ತಿಳಿಯುತ್ತದೆ. ಶ್ರೀಶೈಲ ಮಲ್ಲಿಕಾರ್ಜುನ ದೇವರ ಪೂಜೆ, ಆದಾಯ, ದತ್ತಿ ಗ್ರಾಮಗಳು ಮೊದಲು ಅರಸುಮಠಕ್ಕೆ ಸೇರಿದ ಪಾಶುಪತ ಶೈವಶಾಖೆಯ ಈಶ್ವರ ಶಿವಾಚಾರ್ಯರಿಗೆ ಸೇರಿತ್ತು. ನಂತರ ಪೂಜಾಧಿಕಾರ ವೀರಶೈವ ಅಸಂಖ್ಯಾತ ಗಣದವರಿಗೆ ಹಸ್ತಾಂತರವಾಯಿತು. ವೀರಶೈವರ ಅಣತಿಯಂತೆ ಪೂಜೆ, 70 ಗ್ರಾಮಗಳ ಆದಾಯದ ಹಕ್ಕು ನಡೆಯುತ್ತಿತ್ತು. ಪಾಶುಪತ ಆಚಾರ್ಯರಿಂದ ವೀರಶೈವ ಅಸಂಖ್ಯಾತರಿಗೆ ಈ ಅಧಿಕಾರ ಹಸ್ತಾಂತರ ಮಾಡಿದವನು ಇಂದಲೂರಿ ಆರಾಧ್ಯ ಹೆಗಡೆ, ಇವನು ವೀರಶೈವಧರ್ಮದ ಅನುಯಾಯಿ ಆಗಿದ್ದನು. ಇದೇ ಶಾಖೆಗೆ ಸೇರಿದವನು ಮಲ್ಲಿಕಾರ್ಜುನ ಪಂಡಿತಾರಾಧ್ಯ.

ಪಂಡಿತಾರಾಧ್ಯ ದ್ರಾಕ್ಷಾರಾಮದಲ್ಲಿ 12 ನೇ ಶತಮಾನದಲ್ಲಿ ಜೀವಿಸಿದ್ದನು. ಇವರ ಅನುಯಾಯಿಗಳು ಆರಾಧ್ಯರು ಲಿಂಗಧಾರಿಗಳು. ಪಂಡಿತಾರಾಧ್ಯನ ಶಿಷ್ಯ ಪಾಲ್ಕುರಿಕೆ ಸೋಮನಾಥ. ಇವನು ಅತ್ಯಂತ ಚಾಣಾಕ್ಷ, ಪಾಶುಪತ ಶೈವರಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವರ ಪೂಜಾಧಿಕಾರವನ್ನು ವೀರಶೈವರಿಗೆ ವರ್ಗಾಯಿಸುವಲ್ಲಿ ಸೋಮನಾಥನ ತಂತ್ರಗಾರಿಕೆಯೂ ಇದೆ. ಸೋಮನಾಥ ಕವಿ ಪಂಡಿತನ ಪರಮ ಅನುಯಾಯಿ. ಕಾಕತೀಯ ಪ್ರತಾಪರುದ್ರದೇವನನ್ನು ತನ್ನ ಪ್ರತಿಭಾ ಕೌಶಲದಿಂದ ಓಲೈಸಿದ. ಬಸವಣ್ಣನ ಪರಮ ಆರಾಧಕನಾದ ಪಾಲ್ಕುರಿಕೆ ಸೋಮಣ್ಣ ವೀರಶೈವರ ಏಳಿಗೆಗೆ, ಪೂಜಾಧಿಕಾರಕ್ಕೆ ಸೂಕ್ಷ್ಮ ರಾಜಕಾರಣವನ್ನು ಮಾಡಿ, ಇಂದಲೂರಿ ಅನ್ನಯ್ಯ, ರುದ್ರಯ್ಯ ಎಂಬುವವರನ್ನೂ ಬಳಸಿಕೊಂಡ ಮೇಧಾವಿ. ವೀರಶೈವರಿಗೆ ರಾಜಾಜ್ಞೆಯಿಂದಲೇ ಪೂಜಾಧಿಕಾರ ಬಂದ ತರುವಾಯ ಪಾಶುಪತ ಮಠಗಳಿಗೆ ಸೇರಿದ ಎಲ್ಲ ಶಾಸನಗಳನ್ನು, ಪಾಶುಪತರ ಮಠಗಳನ್ನು ನಾಶಮಾಡಿದರೆಂದು ತಿಳಿಯುತ್ತದೆ. ಶ್ರೀಶೈಲದಲ್ಲಿ ಈ ಪ್ರಕ್ಷುಬ್ಧ ಕಾಲದಲ್ಲಿ ವಾಸವಾಗಿದ್ದ ಪಾಶುಪತರ ಈಶ್ವರ ಶಿವಾಚಾರ್ಯ ಮುಂತಾದವರು ಓಡಿಹೋಗಬೇಕಾಯಿತು. ಈ ಘಟನೆಯ ನಂತರ ಶ್ರೀಶೈಲದ ಪೂರ್ವ ಬಾಗಿಲು ಎಂದು ಹೆಸರಾದ ತ್ರಿಪುರಾಂತಕೇಶ್ವರ ದೇವಾಲಯ, ಉತ್ತರ ಬಾಗಿಲು ಎಂದು ಹೆಸರಾದ ಉಮಾಮಹೇಶ್ವರ ದೇವಾಲಯದ ಪೂಜಾಧಿಕಾರವೂ ವೀರಶೈವರಿಗೆ ಹಸ್ತಾಂತರವಾಯಿತು. ಇದು ಕ್ರಿ. ಶ. 1313 ರಲ್ಲಿ ನಡೆಯಿತು.

ವೀರಶೈವಧರ್ಮವನ್ನು ಪ್ರಚಾರ ಮಾಡಲು ಪಾಲ್ಕುರಿಕೆ ಸೋಮನಾಥ ಕವಿಯು ತಾನು ಬರೆದ ಬಸವಪುರಾಣವನ್ನು ಆಂಧ್ರದ ಓರಂಗಲ್ಲು ಕೋಟೆಯ ಸ್ವಯಂಭೂ ದೇವಾಲಯದಲ್ಲಿ ಓದಿಸಿ, ಅರ್ಥೈಸಿದನೆಂದು ತಿಳಿಯುತ್ತದೆ. ಈ ಬಸವಪುರಾಣ ವಾಚನ, ವ್ಯಾಖ್ಯಾನವನ್ನು ಸ್ವತಃ ಸೋಮನಾಥ ಕವಿ ಮಾಡಿದ. ಅದನ್ನು ರಾಜಾಪ್ರತಾಪ ರುದ್ರದೇವ ಕುಳಿತು ಆಲಿಸಿದನೆಂದು ಪಿಡುಪರ್ತಿ ಸೋಮನ ಎಂಬ ಕವಿಯು ಉಲ್ಲೇಖಿಸಿದ್ದಾನೆ. ಈ ಬಸವತತ್ವ ಆಲಿಸಿದ ಪ್ರತಾಪರುದ್ರದೇವ ವೀರಶೈವರಿಗೆ ಸಕಲ ಅಧಿಕಾರಗಳನ್ನು ನೀಡಿದನು. ಮುಂದೆ ಕನ್ನಡನಾಡಿನ ಕಲಚೂರಿ ಬಿಜ್ಜಳ ಕಾಕತೀಯ ಪ್ರತಾರುದ್ರನನ್ನು ತನ್ನ ಪಕ್ಷಕ್ಕೆ ಆಹ್ವಾನಿಸಿದನೆಂಬುದು ತಿಳಿಯುತ್ತದೆ. ಬಸವಣ್ಣನನ್ನು ಆಂಧ್ರದ ಕವಿಗಳು ತಮ್ಮ ಕಾವ್ಯಗಳಲ್ಲಿ ಹಲವು ಬಗೆಯಲ್ಲಿ ಚಿತ್ರಿಸಿದ್ದಾರೆ.

ಪಂಡಿತನ ‘ಶಿವತತ್ವಸಾರ’ದಲ್ಲಿ ಬಸವಣ್ಣನ ಕುರಿತು ಒಂದು ಮುಖ್ಯ ಉಲ್ಲೇಖವಿದೆ. “ಬಂಡಾರುವು ಬಸವಡು ವಿಸಮೆತ್ತಿ ತ್ರಾವಿ ಬ್ರತುಕುಡೆ ರುದ್ರಾ” ಎಂದರೆ ಭಂಡಾರದ ಬಸವಣ್ಣ ವಿಷವನೆತ್ತಿ ಕುಡಿದು ಬದುಕಿದ. ಈ ಬಗೆಯ ಕಥೆಯು ಕನ್ನಡ ಸಾಹಿತ್ಯದಲ್ಲಿ ಬಸವಣ್ಣನ ಕುರಿತು ಎಲ್ಲಿಯೂ ದೊರೆಯುವುದಿಲ್ಲ. ಬಸವಣ್ಣನು ವಿಷವ ಕುಡಿದು ಪವಾಡ ಮಾಡಿದ ಪ್ರಸಂಗ ವಿಶೇಷವಾಗಿದೆ. ಮಲ್ಲಿಕಾರ್ಜುನ ಪಂಡಿತರಾಧ್ಯನಿಗೆ ಬಸವಣ್ಣ ವಿಷ ಕುಡಿದು ಬದುಕಿದನೆಂಬ ಸುದ್ದಿಯನ್ನು ಅಂದು ಕರ್ನಾಟಕದಿಂದ ಬಂದ ಯಾರೋ ವ್ಯಕ್ತಿ ಹೇಳಿದನಂತೆ. ಹಾಗಾಗಿ ಈ ಸಂಗತಿ ದಾಖಲಿಸಿದ್ದಾನೆ. ನಿರ್ಮಾಲ್ಯದ (ನಿರ್ಮಾಲ್ಯವೆಂದರೆ ಶಿವಲಿಂಗದ ಮೇಲಿನ ಹೂ, ಪತ್ರೆ ಇತ್ಯಾದಿ ಪ್ರಸಾದ) ವಿಷಯದಲ್ಲಿ ಬಸವ ಭಕ್ತರಿಗೆ ಮತ್ತು ಬೋಯಿಗಳಿಗೆ ಕಲಹ ಉಂಟಾಯಿತು. ಶೈವಾಗಮಗಳ ಪ್ರಕಾರ ಶಿವನಿರ್ಮಾಲ್ಯ ಚಂಡೀಶ್ವರನದು. ಚಂಡೀಶ್ವರ ತನ್ನ ತಂದೆಯ ತಲೆಯನ್ನು ಹೊಡೆದು ಶಿವಭಕ್ತಿಯನ್ನು ಮೆರೆದ. ಶಿವ ತನ್ನ ಎಂಜಲು ಚಂಡೀಶ್ವರನಿಗಿತ್ತನು. ಆ ಎಂಜಲೇ ನಿರ್ಮಾಲ್ಯ, ಶ್ರೀಶೈಲಾದಿ ಜೋತಿರ್ಲಿಂಗಗಳ ಶಿವನಿರ್ಮಾಲ್ಯವು ಚಂಡೀಶ್ವರನ ವಂಶಜರಾದ ಬೋಯಿಗಳಿಗೆ ಸಲ್ಲುತ್ತದೆ. ಈ ಬೋಯಿಗಳು ಲಿಂಗಧಾರಿಗಳಲ್ಲ. ನಿರ್ಮಾಲ್ಯವೆಂಬುದು ಪ್ರಸಾದದ ಮತ್ತೊಂದು ರೂಪ. ಚಂಡೀಶ್ವರ ತನ್ನ ತಂದೆಯ ತಲೆಯನ್ನು ಹೊಡೆದು ಭಕ್ತಿ ಮೆರೆದವನಾದ್ದರಿಂದ ನಿರ್ಮಾಲ್ಯವು ನೈವೇದ್ಯವಲ್ಲ. ಆದರೆ ಶಿವಕಾರುಣ್ಯದಿಂದ ಪದಾರ್ಥದ ಮೇಲಿನ ಮಲಿನ ನಶಿಸಿ ಅದು ನಿರ್ಮಾಲ್ಯ ನೈವೇದ್ಯವಾಯಿತು. ಬೋಯಿಗಳು ಶಿವಲಿಂಗದ ನಿರ್ಮಾಲ್ಯಕ್ಕೆ ಅರ್ಹರಾಗಿದ್ದರು. ಆದರೆ ಲಿಂಗಧಾರಿಗಳಲ್ಲದವರಿಗೆ ಶಿವನಿರ್ಮಾಲ್ಯ ಸಲ್ಲದು ಎಂದು ಬಸವಣ್ಣ ಅವರೊಂದಿಗೆ ವಾದಕ್ಕಿಳಿದ. ಅಲ್ಲದೇ ಲಿಂಗಧಾರಿಗಳಲ್ಲದವರು ನಿರ್ಮಾಲ್ಯ ಸ್ವೀಕರಿಸಿದರೆ ಅದು ವಿಷಕ್ಕೆ ಸಮಾನವೆಂದು ನುಡಿದು, ಲಿಂಗಕ್ಕೆ ಅರ್ಪಿತವಾದದ್ದೆಲ್ಲ ನಿರ್ಮಾಲ್ಯವೇ, ಅದನ್ನು ಬೋಯಿಗಳು ಸ್ವೀಕರಿಸಬೇಕೆಂದು ಸವಾಲು ಹಾಕಿದ. ವಿಷದ ಬಟ್ಟಲು ತರಿಸಿ ಶಿವಲಿಂಗದ ಮುಂದಿಟ್ಟು, ಬೋಯಿಗಳಿಗೆ ಕುಡಿಯಲು ಹೇಳಿದ. ಲಿಂಗಧಾರಿಗಳಲ್ಲದ ಬೋಯಿಗಳು ಹೆದರಿದರು.

ಲಿಂಗಧಾರಿಯಾದ ಬಸವಣ್ಣ ಶಿವಲಿಂಗಕ್ಕೆ ಅರ್ಪಿತವಾದ ವಿಷದ ಬಟ್ಟಲನೆತ್ತಿ ಕುಡಿದು ಬದುಕಿದ. ಪವಾಡವನ್ನು ಮೆರೆದ. ಇದರಿಂದ ದಿಗ್ಭ್ರಮೆಗೊಳಗಾದ ಚಂಡೀಶ್ವರನ ವಂಶಜರಾದ ಬೋಯಿಗಳು ಶಿವನಿರ್ಮಾಲ್ಯವನ್ನು ಲಿಂಗಧಾರಿಗಳು ಮಾತ್ರ ಸ್ವೀಕರಿಸಬೇಕೆಂಬುದನ್ನು ಒಪ್ಪಿಕೊಂಡು ಶಿವಲಿಂಗಧಾರಿಗಳಾದರಂತೆ. ಪಂಡಿತಾರಾಧ್ಯರ ಕಾಲಕ್ಕೆ ನಿರ್ಮಾಲ್ಯವು ಚಂಡೀಶ್ವರನ ವಾರಸುದಾರರಿಗೆ ದೊರೆಯುತ್ತಿತ್ತು. ಬೋಯಿಗಳಿಗೆ ಭಕ್ತಿಗಿಂತ ಭುಕ್ತಿಯ ಮೇಲೆ ಹೆಚ್ಚು ಆಸಕ್ತಿಯಿತ್ತು. ‘ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದೆಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ’ ಎಂಬ ಕಠೋರ ನಿಯಮ ಬಸವಣ್ಣನಿಗಿದ್ದುದರಿಂದಲೇ ಬೋಯಿಗಳನ್ನು ಎದುರಿಸಿದ, ಪ್ರತಿಭಟಿಸಿದ, ವಿಷವನ್ನು ಕುಡಿದು ಬದುಕಿದ. ಅಲ್ಲದೇ ವೀರಶೈವ ಧರ್ಮವನ್ನು ಉಳಿಸಿದ. ಬಸವಪೂರ್ವಯುಗದ ಶಿವಾಲಯಗಳಲ್ಲಿದ್ದ ಪೂಜಾರಿಗಳು ಲಿಂಗಧಾರಿಗಳಲ್ಲ. ಅವರು ದೇವಕುಲದವರು, ಅಂದರೆ ಶಿವನನ್ನು ಪೂಜಿಸುವವರು. ಈ ಪೂಜಾರಿಗಳಿಗೆ ಶಿವನಿರ್ಮಾಲ್ಯ ದೊರೆಯುತ್ತಿತ್ತು. ದೇವಕುಲದವರಿಗೆ ಆಗಮಗಳಲ್ಲಿಯೂ ಮನ್ನಣೆಯಿರಲಿಲ್ಲ. ಬಸವಣ್ಣ ನಿರ್ಮಾಲ್ಯದೊಳಗಿನ ಭಕ್ತಿಯನ್ನು ಗ್ರಹಿಸಿ ಕೂಳಿಗಾಗಿ ಬಿದ್ದಿದ್ದ ದೇವಕುಲದವರನ್ನೂ ಬದಲಾಯಿಸಿದನು. ಅವರನ್ನು ಭಕ್ತರನ್ನಾಗಿಸಿ, ಲಿಂಗಧಾರಣೆ ಮಾಡಿಸಿದ. ಇದರಿಂದ ಅವರಿಗೆ ನಿರ್ಮಾಲ್ಯವು ಪ್ರಸಾದವಾಯಿತು. ಸಂಗಮೇಶ್ವರನಿಗೆ ನೈವೇದ್ಯ ಮಾಡಿದ ವಿಷದ ಬಟ್ಟಲನ್ನು ಕುಡಿಯಿರಿ ಎಂದಾಗ ಬೋಯಿಗಳು, ಬಸವಣ್ಣ ನಮ್ಮನ್ನು ಕೊಲ್ಲುವ ಹುನ್ನಾರ ಮಾಡಿದ್ದಾನೆಂಬ ಆರೋಪವನ್ನು ಮಾಡುತ್ತಾರೆ. ಆದ್ದರಿಂದ ಬಸವನೇ ವಿಷವನ್ನು ಕುಡಿದು ಪವಾಡ ಮಾಡಿದ. ವಿಷಪಾನ ಘಟ್ಟದಿಂದ ಶಿವಭಕ್ತನಾದ ಬಸವನ ಭಕ್ತಿ, ಆತನಲ್ಲುಂಟಾದ ಅಸಾಧಾರಣ ಶಕ್ತಿ, ಕಲ್ಯಾಣದ ಮಹಾತ್ಮನನ್ನಾಗಿ ಸಮಾಜೋದ್ಧಾರಕನನ್ನಾಗಿ, ವಿನೂತನ ಮತದ ಸ್ಥಾಪಕನನ್ನಾಗಿ ಕವಿ ಪಂಡಿತಾರಾಧ್ಯ ಚಿತ್ರಿಸಿದ.

ಶಿವಕವಿನಾಥ ಸೋಮನಾಥ ಕವಿ:
ಆಂಧ್ರ-ಕರ್ನಾಟಕ, ಸಂಸ್ಕೃತ ಸಾಹಿತ್ಯದಲ್ಲಿ ಬಸವಣ್ಣನವರನ್ನು ಕುರಿತು ಪ್ರಾಮಾಣಿಕ ರಚನೆ ನೀಡಿದವನು. ಪಾಲ್ಕುರಿಕೆ ಸೋಮನಾಥ. ಈತನ ಬಸವಪುರಾಣವೇ ಕನ್ನಡಿಗರಿಗೆ ಅಧಿಕೃತ ಗ್ರಂಥ. ಸೋಮನಾಥ 13 ನೇ ಶತಮಾನದ ಉತ್ತರಾರ್ಧದಲ್ಲಿದ್ದವನು. ಅಪ್ರತಿಮ ಶಿವಭಕ್ತ, ಶಿವಭಕ್ತಿಗೆ ಚಿದ್ರೂಪಿಯಾಗಿ ಸದಾಚಾರ ಮಾರ್ಗದಲ್ಲಿ ನಡೆದ ಬಸವಣ್ಣ ಸೋಮನಾಥನಿಗೆ ಆರಾಧ್ಯ ಪುರುಷನಾದನು. ಸೋಮನಾಥನ ‘ಅನುಭವಸಾರ’ ಕೃತಿಯಲ್ಲಿ ಬಸವಣ್ಣನ ಹೆಸರೇ ಇಲ್ಲ. ಆತನ ಮಹಿಮೆಗಳನ್ನು ಮಾತ್ರ ಕರ್ನಾಟಕದಿಂದ ಕೇಳಿ ತಿಳಿದಿದ್ದ. ಈ ಗಾಳಿ ಕಥೆಗಳಿಗಿಂತ ತನ್ನ ಗುರುವಾದ ಪಂಡಿತಾರಾಧ್ಯನ ಮಾತುಗಳೇ ಇವನಿಗೆ ಪ್ರಮಾಣಗಳಾಗಿದ್ದು. ಪಂಡಿತಾರಾಧ್ಯ ಬರೆದ ಬಸವಣ್ಣನ ಕುರಿತ ಮೂರು ಕಂದ ಪದ್ಯಗಳನ್ನು ಓದಿ, ಬಸವಚರಿತ್ರೆ ತಿಳಿಯಲು ಪಾಲ್ಕುರಿಕೆಯಿಂದ ಶ್ರೀಶೈಲಕ್ಕೆ ಬಂದು ನೆಲೆಸಿದ. ಪಾಲ್ಕುರಿಕೆಯಿಂದ ಶ್ರೀಶೈಲಕ್ಕೆ ಕಾಲ್ನಡಿಗೆ ಮಾಡಿದ. ಅಲ್ಲದೇ ಶ್ರೀಶೈಲದ ಪರ್ವತದ ಉತ್ತರ ಭಾಗದಲ್ಲಿ ‘ಬಸವಪುರ’ ಎಂಬ ಗ್ರಾಮ ನಿರ್ಮಿಸಿಕೊಂಡ. ಆ ಕಾಲದಲ್ಲಿ ಕೆಂಟಾಲ ಮಲ್ಲಿನಾಥ, ದೋಚಮಾಂಬ, ಗೋಡಗಿ ಸೋಮನಾಥಯ್ಯ ಎಂಬುವವರು ಶ್ರೀಶೈಲದಲ್ಲಿ ವಾಸಿಸುತ್ತಿದ್ದರು. ಈ ಜಂಗಮ ಶ್ರೇಷ್ಠರಿಗೆ ಸೋಮನಾಥ ಬಸವ ಚರಿತ್ರೆಯನ್ನು ವಿವರಿಸಲಾಗಿ, ಅವರು ಬಸವಪುರಾಣವನ್ನು ಬರೆಯೆಂದರು. ಸೋಮನಾಥ ಕವಿ ಬಸವಣ್ಣನ ಚರಿತ್ರೆಯನ್ನು ಭಕ್ತರೊಂದಿಗೆ ಹೂವಿನೊಳಗಣ ದಾರದಂತೆ ಹೆಣೆದನು. ಕನ್ನಡದಲ್ಲಿ ಹರಿಹರ ಮುಂತಾದವರು ಚಿತ್ರಿಸಿದ ಬಸವಣ್ಣನ ಕಥೆಗಳು ಈಗಾಗಲೇ ಪರಿಚಯವಿದೆ. ಸೋಮನಾಥ ಕವಿ ತನ್ನ ಕೃತಿಯ ಏಳು ಆಶ್ವಾಸಗಳಲ್ಲಿ ದ್ವಿಪದಿ ಛಂದಸ್ಸಿನಲ್ಲಿ ಹೇಳಿದ ಕಥೆಯನ್ನು ಹೇಳದೇ ವಿಶೇಷ ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗುತ್ತದೆ.

ತೆಲುಗು ಬಸವಪುರಾಣದ ಆರನೇ ಆಶ್ವಾಸದಲ್ಲಿ ಏಕಾಂತರಾಮಯ್ಯನ ಕಥೆ ಬರುತ್ತದೆ. ಏಕಾಂತರಾಮಯ್ಯನ ಪ್ರಸಂಗ ಕನ್ನಡದ ಹರಿಹರ ಕವಿ ಹಾಗೂ ಶಾಸನಗಳಿಂದಲೂ ತಿಳಿಯುತ್ತದೆ. ಆದರೆ ಸೋಮನಾಥ ವಿಶೇಷವಾದ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದಾನೆ. ಏಕಾಂತರಾಮಯ್ಯ ಮತ್ತು ಬಸವಣ್ಣ ಇಬ್ಬರೂ ಪರಸ್ಪರ ಭೇಟಿಯಾದರಂತೆ. ಏಕಾಂತರಾಮಯ್ಯ ಅತ್ಯುಗ್ರ ಭಕ್ತ. ಈತನದು ಸಂಪ್ರದಾಯಬದ್ಧ ಭಕ್ತಿ. ಬಸವಣ್ಣನದು ಸಾತ್ವಿಕ ಭಕ್ತಿ. ಏಕಾಂತರಾಮಯ್ಯನನ್ನು ಬಸವಣ್ಣ ಎಲ್ಲಿಯೂ ತನ್ನ ವಚನಗಳಲ್ಲಿ ಪ್ರಸ್ತಾಪಿಸುವುದಿಲ್ಲ. ತೆಲುಗು ಬಸವಪುರಾಣದಲ್ಲಿ ರಾಮಯ್ಯ ತನ್ನ ತಲೆಯನ್ನು ಕತ್ತರಿಸಿಕೊಂಡಾಗ ಬಸವಣ್ಣ ನೋಡಿದನೆಂಬುದು ವಿಶೇಷವಾದುದು.

ಸೋಮನಾಥ ಬಸವಣ್ಣನನ್ನು ನಂದೀಶ್ವರನ ಅವತಾರ, ದ್ವಿತೀಯ ಶಂಭು ಎಂದು ಕರೆದಿದ್ದಾನೆ. ಹರಿಹರದೇವನಲ್ಲಿ ಬಸವಣ್ಣ ಪ್ರಸಾದ ಲೋಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ದೋಷವಿಲ್ಲದವನು ಭೂಮಿಯಲ್ಲಿ ಜನಿಸಲಾರನೆಂಬ ಅಭಿಪ್ರಾಯ ಹರಿಹರನದು. ಸೋಮನಾಥನ ಅಭಿಪ್ರಾಯದಲ್ಲಿ ನಂದೀಶ್ವರ ಮರ್ತ್ಯವನ್ನು ಸಂಸ್ಕರಿಸಲು ಬಂದನೇ ಹೊರತು, ತಾನು ಸಂಸ್ಕಾರಗೊಳ್ಳಲು ಬಂದವನಲ್ಲ. ಬಸವಣ್ಣ ಕಾರಣಜನ್ಮನು ಎಂದು ಸೋಮನಾಥ ವಿವರಿಸಿದ. ಹರಿಹರ ಹೇಳಿದ ಗೋವುಗಳ ಜೊತೆಗೆ ಕರುಗಳನ್ನು ಬಿಡಿರಿ ಎಂಬ ಬಸವಣ್ಣನ ಕಥೆ ಸೋಮನಾಥ ಹೇಳಲಿಲ್ಲ. ಬದಲಾಗಿ ಜೋಳವನ್ನು ಮುತ್ತುಗಳಾಗಿ ಮಾಡಿದ ಪ್ರಸಂಗ ಬಂದಿದೆ. ಜಂಗಮರಿಗೆ ಬೇಡಿದ್ದನ್ನು ಕೊಡುವ ಬಸವಣ್ಣನನ್ನು ಹಲವು ಕಥೆಗಳ ಮೂಲಕ ಸೋಮನಾಥ ಪರೀಕ್ಷೆಗೊಳ್ಳುವಂತೆ ಕಥಾಹಂದರ ಹಾಕಿದ್ದಾನೆ.

ಪರಮಶಿವನು ಬಸವಣ್ಣನಲ್ಲಿಗೆ ಬಂದು ಮೂರನೇ ಕಣ್ಣನ್ನು ಪ್ರಸಾದಿಸು ಎಂದು ಕೇಳುತ್ತಾನೆ. ಈಶ್ವರನಿಗಿರುವ ಮೂರನೇ ಕಣ್ಣು ತನಗಿಲ್ಲ, ಕೇಳಿದ್ದು ಕೊಡದಿದ್ದರೆ ಪ್ರತಿಜ್ಞೆ ತಪ್ಪುತ್ತದೆ. ಸಂಗಯ್ಯನ ಮಾಯೆಯನ್ನು ಬಸವಣ್ಣ ಯುಕ್ತಿಯಿಂದ ತಪ್ಪಿಸಿಕೊಳ್ಳುತ್ತಾನೆ. ಬಸವ ಅಜ್ಞಾನಿಯಲ್ಲ, ಗರ್ವಿಯಲ್ಲ, ಸರ್ವವೂ ಶಿವಮಯವೆಂದು ತಿಳಿದವ. ಹಾಗಾಗಿ ಜಂಗಮರೂಪಿಯಾದ ಶಿವನಿಗೆ ಕನ್ನಡಿ ಹಿಡಿದು, ಆ ಶಿವನ ಮೂರನೇ ಕಣ್ಣಿನ ಪ್ರತಿಬಿಂಬ ಅವನಿಗೇ ತೋರಿಸಿದ. ಇಲ್ಲಿ ಭಕ್ತಿಯು ಜ್ಞಾನವನ್ನು ಮೀರಿ ಮುಂದೆ ಹೋಗಿದೆ. ಜ್ಞಾನ ದೃಷ್ಟಿಯ ಬಲದಿಂದ ಸಾಧಕನು ಆತ್ಮ ಸಾಕ್ಷಾತ್ಕಾರ ಹೊಂದುತ್ತಾನೆ. ಬಸವಣ್ಣ ಅನಿಮಿಷ ದೃಷ್ಟಿಯಿಂದ ಲೌಕಿಕನಾಗಬಾರದೆಂದು ಶಿವನೇ ಬಂದನು. ಶಿವಜೀವಿಗಳು ಬಿಂಬಪ್ರತಿಬಿಂಬಗಳು. ಶಕ್ತಿವಿ ಶಿಷ್ಟಾದ್ವೈತ ಭಾವಗಳನ್ನು ಸೋಮನಾಥ ಸೂಚಿಸಿದ್ದಾನೆ.

ಸೋಮನಾಥ ಮೂರನೇ ಆಶ್ವಾಸದಲ್ಲಿ ವಿವರಿಸುವ ಮಿಂಡ ಜಂಗಮರ ಮತ್ತು ವೇಶ್ಯಾವಾಟಿಕೆಯಲ್ಲಿದ್ದ ತರುಣಿಯ ವರ್ಣನೆ ಅಮೋಘವಾಗಿದೆ. ಸಾಕ್ಷಾತ್ ರುದ್ರಗಣಿಕೆಯಲ್ಲಿದ್ದ ತರುಣಿಯ ಮನೆಗೆ ಮುಗ್ಧ ಸಂಗಯ್ಯ ಹೋಗುತ್ತಾನೆ. ಆ ಲಲನೆಯ ಸರ್ವಾಂಗಗಳಲ್ಲಿ ಅರಿಷಿಣ, ವಿಭೂತಿ, ರುದ್ರಾಕ್ಷಿಗಳಿದ್ದವಂತೆ. ಮೂಗಿಗೆ ಇಟ್ಟ ಮೂಗುತಿ ವೇದಾತೀತವಂತೆ. ಪ್ರಸಾದ, ಪುಷ್ಪಗಳಿಗೆ ತಕ್ಕಂತೆ ಆಕೆಯ ಜಡೆ ಹೆಣೆದುಕೊಂಡಿದ್ದಳಂತೆ ಸರ್ವಾಂಗವನ್ನು ಲಿಂಗವಂತರಲ್ಲದೆ ಬೇರೆಯವರು ನೋಡಬಾರದೆಂದು ಪರದೆಯನ್ನು ಕಟ್ಟಿದ್ದಳಂತೆ.

ನಾಲ್ಕನೇ ಆಶ್ವಾಸದಲ್ಲಿ ಮಡಿವಾಳ ಮಾಚಯ್ಯನ ಕಥೆಯಿದೆ. ಇಲ್ಲಿ ಆತ ನಾಯಕಮಣಿಯಾಗಿ ಕಂಡುಬರುತ್ತಾನೆ. ಅಹಂಕಾರ ತುಂಬಾ ಸೂಕ್ಷ್ಮವಾದದ್ದು. ಭಕ್ತರಲ್ಲಿಯೂ ಆಗಾಗ ಕಂಡಬರುತ್ತದೆ. ಭಕ್ತರ ಸೂಕ್ಷ್ಮಾತಿಸೂಕ್ಷ್ಮ ಅಹಂಕಾರವನ್ನು ಹೋಗಲಾಡಿಸುವುದೇ ಈ ಆಶ್ವಾಸದ ಕಥೆಗಳ ಗುರಿ. ಮಡಿ ಮಾಡಿದ ಬಟ್ಟೆಯನ್ನು ವ್ಯಕ್ತಿಯೊಬ್ಬ ಮುಟ್ಟಲಾಗಿ ಮಾಚಯ್ಯ ಅವನನ್ನು ಕೊಂದನು. ಪ್ರಜೆಗಳು ಬಿಜ್ಜಳನಲ್ಲಿ ದೂರು ನೀಡಿದರು. ಮಾಚಯ್ಯನನ್ನು ಕೊಲ್ಲಲು ಬಿಜ್ಜಳ. ಅವನ ಶಕ್ತಿಗೆ ಮಣಿದ. ನಂತರ ಮಾಚಯ್ಯ ಮದಗಜ, ಸತ್ತ ವ್ಯಕ್ತಿಯನ್ನು ಬದುಕಿಸಿದ.

ಬಸವಣ್ಣ ಒಂದು ಸಾರಿ ದನಿಯೆತ್ತಿ ಒಂದು ಗೀತೆಯನ್ನು ಹಾಡಿದನಂತೆ. ನಾನೇ ಹಾಡುಗಾರ ಎಂಬಂತೆ ಭಕ್ತರ ಮುಂದೆ ಪದೇ ಪದೇ ಹಾಡುವುದು ತರವಲ್ಲ, ಇದು ಅಹಂಕಾರದ ಲಕ್ಷಣವೆಂದು ಮಾಚಯ್ಯ ಕೋಪಿಸಿಕೊಂಡನು. ಬಸವಣ್ಣ ಮಾಚಯ್ಯನಿಗೆ ನಮಸ್ಕರಿಸಿ ಸಂಗಮದೇವನೆಂದೇ ಗ್ರಹಿಸಿದನು. ಬಸವಣ್ಣ ಜಂಗಮರಿಗೆ ಮಾಡಿದ ದಾನಧರ್ಮವೆಲ್ಲ ಡಾಂಭಿಕವೆಂದು ಜರಿಯುತ್ತಾ ಮಾಚಯ್ಯ ನೀರನ್ನು ಚೆಲ್ಲಿದ. ಚೆಲ್ಲಿದ ನೀರಿನಲ್ಲಿ ಮಾಣಿಕ್ಯ, ನೀಲಮಣಿ, ವಜ್ರವೈಢರ‍್ಯಗಳು ರಾಶಿರಾಶಿಯಾಗಿದ್ದವು. ತನ್ನ ಮೇಲೆ ಹರಿಹಾಯ್ದ ಮಾಚಯ್ಯನ ಪಾದಕ್ಕೆರಗಿ ಬಸವಣ್ಣ ಪ್ರಾರ್ಥಿಸಿದ. ಅಹಂಕಾರ ಭಂಜನೆಯ ಇಂತಹ ಕಥೆಗಳು ಸೋಮನಾಥನಲ್ಲಿ ಬಂದಿವೆ.

ಸೋಮನಾಥ ಕವಿ ಶಿವನಾಗಮಯ್ಯನ ಕಥೆಯೊಂದನ್ನು ಹೇಳಿದ್ದಾನೆ. ಬಸವಣ್ಣನ ವಚನಗಳಲ್ಲಿ ಶಿವನಾಗಮಯ್ಯನ ಪ್ರಸ್ತಾಪ ಬರುವುದಿಲ್ಲ. ಶಿವನಾಗಮಯ್ಯನು ಒಂದು ಸೋಮವಾರದಂದು ಶಿವಲಿಂಗಕ್ಕೆ ತನ್ನ ಕಣ್ಣನ್ನು ಅರ್ಪಿಸಿದನೆಂದು ಪಂಡಿತಾರಾಧ್ಯನು ಹೇಳಿದ್ದನು. ಹರಿಹರ ನಾಗಿದೇವನನ್ನು ಉಲ್ಲೇಖಿಸಿದ್ದಾನೆ. ಶಿವನಾಗಮಯ್ಯ-ನಾಗಿದೇವ ಇಬ್ಬರೂ ಒಂದೇ. ಶಿವನಾಗಮಯ್ಯನ ಬೆರಳಿನಿಂದ ಬಸವಣ್ಣ ಹಾಲು ಕರೆದನೆಂದು ಹರಿಹರ ಹೇಳಿದರೆ, ಸೋಮಣ್ಣ ಶಿವನಾಗಮಯ್ಯನನ್ನು ಅಂದಣವೇರಿಸಿ ಬಸವಣ್ಣ ರಾಜಬೀದಿಯಲ್ಲಿ ಸೇವೆ ಮಾಡುತ್ತಾ ಬಂದನೆಂದಿದ್ದಾನೆ.

ಸೋಮನಾಥ ಹೇಳುವ ಮಾಚಲದೇವಿ ಕಥೆಯೂ ಕುತೂಹಲಕಾರಿಯಾಗಿದೆ. ಶಿವನಾಗಮಯ್ಯನನ್ನು ರಾಜಬೀದಿಯಲ್ಲಿ ಅಂದಣದಲ್ಲಿ ತರುವುದನ್ನು ಕಂಡು ಬ್ರಾಹ್ಮಣರು ಬಿಜ್ಜಳನಿಗೆ ದೂರು ನೀಡುತ್ತಾರೆ. ಬಿಜ್ಜಳ ಆಕ್ರೋಶಗೊಂಡು ಬಸವಣ್ಣನನ್ನು ಕರೆಸಲಾಗಿ ಬಸವಣ್ಣ ಬಿಜ್ಜಳನಿಗೆ ವಿವರಿಸಿದ ಸಂಗತಿಯೇ ಮಾಚಲದೇವಿ ಕಥೆ. ದ್ರವ್ಯದ ಆಸೆಯಿಂದ ಮಾಚಲದೇವಿಯನ್ನು ಬ್ರಾಹ್ಮಣರು ಕರೆತಂದು, ನಿನ್ನ ಅಸ್ಪೃಶ್ಯತನವನ್ನು ಹೋಗಲಾಡಿಸುತ್ತೇವೆ. ನೀನು ಬಂಗಾರದ ಗೋವನ್ನು ಮಾಡಿಸಿಕೊಡಬೇಕೆನ್ನುತ್ತಾರೆ. ಮಾಚಲದೇವಿ ಬಂಗಾರದ ಗೋವನ್ನು ಮಾಡಿಸಿ ಬ್ರಾಹ್ಮಣರಿಗೆ ನೀಡುತ್ತಾಳೆ. ಲೋಹದ ಗೋವಿಗೆ ಕ್ಷೀರಾಭಿಷೇಕ ಮಾಡಿಸಿ, ಆಕೆಗಿದ್ದ ಪೂರ್ವಾಶ್ರಮ ಹೋಯಿತೆಂದು ಹೇಳುವುದಲ್ಲದೇ, ಆ ಗ್ರಾಮಾಂತ್ಯಜಳಿಂದ ಎಂಜಲಾದ ಹಾಲನ್ನು ನಿಮ್ಮ ಬ್ರಾಹ್ಮಣರು ಕುಡಿಯಲಿಲ್ಲವೇ, ಆ ಬಂಗಾರದ ಗೋವನ್ನು ತುಂಡು-ತುಂಡು ಮಾಡಿ ಒಬ್ಬೊಬ್ಬರೇ ಹಂಚಿಕೊಂಡರಲ್ಲಾ, ಈ ಬ್ರಾಹ್ಮಣರು ಗೋಹತ್ಯೆ ಮಾಡಿದ ಊರ ಹೊಲೆಯರು ತ್ರಾಟಿ ಹೊಲೆಯರು, ಹಸಿ ಹೊಲೆಯರು, ನಾಯಿ ಹೊಲೆಯರು ಎಂದು ಬಸವಣ್ಣ ಅವರನ್ನು ನಿಂದಿಸುತ್ತಾನೆ. ಮೊನ್ನೆ ಹುಟ್ಟಿದ ಕುಲಗಳ ಮಾತೇಕೆಂದು ಲೇವಡಿ ಮಾಡಿದ್ದಾನೆ.

ಬಸವಪುರಾಣದಲ್ಲಿ ಕಾಣ ಸಿಗದ ಕೆಲವು ಭಕ್ತರ ಚರಿತ್ರೆಗಳು, ಪುರಾಣದಲ್ಲಿ ಹೇಳಲಾಗದ ಬಸವಣ್ಣನ ಜೀವನದ ಘಟನೆಗಳು ಪಂಡಿತಾರಾಧ್ಯ ಚರಿತ್ರೆ, ವೃಷಾಧಿಪ ಶತಕಗಳಲ್ಲಿ ಸೋಮನಾಥಕವಿ ನಿರೂಪಿಸಿದ್ದಾನೆ. ಸೋಮನಾಥ ಕವಿ ಬಸವಣ್ಣನ ವಚನಗಳನ್ನು ತನ್ನ ರಚನೆಯಲ್ಲಿ ಅಳವಡಿಸಿಕೊಂಡಿದ್ದಾನೆ. ಅನೇಕ ವಚನಗಳು ಯಥಾವತ್ ತೆಲುಗೀಕರಣಗೊಂಡದ್ದೊಂದು ವಿಶೇಷ. ಸೋಮನಾಥ ಕವಿಯೂ ಬಸವಣ್ಣ ವಿಷ ಕುಡಿದು ಬದುಕಿದ ಕಥೆಯನ್ನು ಹೇಳಿದ್ದಾನೆ.

ಪಿಡುಪರ್ತಿ ಸೋಮನ:
ಪದ್ಯ ಬಸವಪುರಾಣ, ಪ್ರಭುಲಿಂಗಲೀಲೆ ಈತನ ಕೃತಿಗಳು. ಪದ್ಯ ಬಸವಪುರಾಣದಲ್ಲಿ ಬಸವಣ್ಣನ ಪಾತ್ರದಲ್ಲಿ ಬದಲಾವಣೆಯಿಲ್ಲ. ಆದರೆ ಪ್ರಭುಲಿಂಗಲೀಲೆಯಲ್ಲಿ ಕಂಡುಬರುವ ಬಸವನ ಚಿತ್ರಣವೇ ಭಿನ್ನವಾಗಿದೆ. ಲಿಂಗಾಯತರಿಗೆ ಆತ್ಮ ಷಟ್‌ಸ್ಥಲ, ಅಂಗಗಳು ಅಷ್ಟಾವರಣ, ಪ್ರಾಣವೇ ಪಂಚಾಚಾರವೆಂಬ ಹೇಳಿಕೆಯಿದೆ. ಪಿಡುಪರ್ತಿ ಸೋಮನ ಪಂಚಾಚಾರಗಳಿಂದ ಕೂಡಿದ ಅಷ್ಟಾವರಣಗಳನ್ನು ಅನುಸರಿಸುವವನೆಂದು ಬಸವಣ್ಣನನ್ನು ಚಿತ್ರಿಸಿದ್ದಾನೆ. ಬಸವ ವೃಷಭಾವತಾರಿ, ಬಸವಣ್ಣ ಅಲ್ಲಮಪ್ರಭುವಿನ ಹತ್ತಿರ ಉಪನೀತನಾದಂತೆ ಆರಾಧ್ಯ ಸಂಪ್ರದಾಯದ ಪ್ರಕಾರ ಹೇಳುತ್ತಾನೆ. ಯಜ್ಞೋಪವೀತ, ಲಿಂಗಧಾರಣೆ ಎರಡೂ ಒಂದೇ ಬಾರಿ ನಡೆದವಂತೆ. ಆಂಧ್ರದಲ್ಲಿ ಇಂದಿಗೂ ಈ ಸಂಪ್ರದಾಯ ರೂಢಿಯಲ್ಲಿದೆ. ಮನೆಗೆ ಬಂದ ಪ್ರಭುದೇವರನ್ನು, ಲಿಂಗಪೂಜೆಯಲ್ಲಿ ನಿರತನಾದ ಬಸವಣ್ಣ ಮರೆಯಲಾಗಿ ಪ್ರಭು, ಲಿಂಗವನ್ನು ಒಡೆದು ಹಾಕಿದ. ಇದರಿಂದ ಬಸವಣ್ಣ ಪ್ರಭುವಿನ ಕಾಲಿಗೆರಗಿ ಕ್ಷಮೆ ಯಾಚಿಸಿದ ಕಥೆಯೂ ಇದೆ. ಪಿಡುಪರ್ತಿ ಸೋಮನಾಥಕವಿ ಚಾಮರಸನನ್ನು ತೆಲುಗೀಕರಿಸಿದಂತೆ ತೋರುತ್ತದೆ. ಈ ಕವಿಯ ರಚನೆಯು ಸೈದ್ಧಾಂತಿಕವಾಗಿರುವುದರಿಂದ ಬಹು ಜನಪ್ರಿಯವಾಗಲಿಲ್ಲ.

ಮಹಾದೇವ ಕವಿ:
ಪಾಲ್ಕುರಿಕೆ ಸೋಮನಾಥನ ಬಸವಪುರಾಣವನ್ನು ಪದ್ಯಕಾವ್ಯವಾಗಿ ಬದಲಾಯಿಸಿದ. ಈತನ ಪದ್ಯಕಾವ್ಯ ಅಪ್ರಕಟಿತ ಕಾಗದ ಪ್ರತಿ. ಇದು ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿದೆ. ಏಳು ಆಶ್ವಾಸಗಳಿವೆ. ನಾರದ ಕೈಲಾಸಕ್ಕೆ ಹೋಗುವುದರೊಂದಿಗೆ ಕಥೆ ಆರಂಭವಾಗುತ್ತದೆ. ಮಿಕ್ಕಂತೆ ಕಥೆ ಪಾಲ್ಕುರಿಕೆ ಕವಿಯಂತೆಯೇ ಇದೆ. 6 ನೇ ಆಶ್ವಾಸದಲ್ಲಿ ಘಂಟಾಕರ್ಣನ ಕಥೆ ವಿಶೇಷವಾಗಿ ಬಂದಿದೆ.

ನಲ್ಲನಗಂಡ್ಲ ನಾಗನಾರಾಧ್ಯ:
ಇವನು ‘ಬಸವವಿಜಯ’ ಎಂಬ ಮೂರು ಆಶ್ವಾಸಗಳ ದ್ವಿಪದಿ ಕಾವ್ಯ ಬರೆದಿದ್ದಾನೆ. ಇದು ಅಪ್ರಕಟಿತ ಕಾವ್ಯ. ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನೆಯಲ್ಲಿದೆ. ಇದರ ಕಾಲ 1443, 1623 ಎಂಬ ಅಭಿಪ್ರಾಯಗಳಿವೆ.

ತುಮ್ಮಲಪಲ್ಲಿ ನಾಗಭೂಷಣ ಕವಿ:
‘ಬಸವ ವಿಜಯ’ ಮೂರು ಆಶ್ವಾಸಗಳ ಪದ್ಯಕಾವ್ಯ. ಸೋಮನಾಥನನ್ನು ಸ್ಮರಿಸಿದ್ದಾನೆ. ಆದರೆ ಆತನ ಮಾರ್ಗವನ್ನು ಅನುಸರಿಸಿಲ್ಲ. ಪಾಲ್ಕುರಿಕೆ ಸೋಮನಾಥ ದಾರ್ಶನಿಕ ದೃಷ್ಟಿ, ಕವಿತಾ ಸಾಮರ್ಥ್ಯ ಇವನಲ್ಲಿಲ್ಲ. ಬಸವ ಪುರಾಣದಲ್ಲಿರುವಂತೆಯೇ ಶಿಲಾದನ ಕಥೆ, ನಂದಿಕೇಶ್ವರನ ಜನನ ಇಲ್ಲಿಯೂ ಬರುತ್ತದೆ. ಆದರೆ ಇದರಲ್ಲಿ ಅನಿಮಿಷಯ್ಯನ ಕಥೆಯೊಂದು ಬಂದಿದೆ. ಬಿಜ್ಜಳನ ಆಸ್ಥಾನದಲ್ಲಿ ರಾಗಿಯ ತಗಡು ಬಿದ್ದು, ಅದರಲ್ಲಿನ ಲಿಪಿ ಓದುವ ಕಥೆಯಿದೆ. ಪ್ರಥಮಾಶ್ವಾಸದಲ್ಲಿ ಬಸವಣ್ಣ ಕಾಲಜ್ಞಾನದ ಮೂಲಕ ಕಲ್ಯಾಣದಲ್ಲಿ ಮುಂದೆ ನಡೆಯುವ ಬಿಜ್ಜಳನ ಕೊಲೆ, ಸಮಾಜದ ಅರಾಜಕತೆ, ಕಂಚಿಯಲ್ಲಿ ಗುಡಿಗೋಪುರ ಉರುಳವ ಬಗ್ಗೆ ಭವಿಷ್ಯ ನುಡಿಯುತ್ತಾನೆ.

ಕಲ್ಯಾಣದಲ್ಲಿ ವಿಚಿತ್ರ ರೋಗಗಳು ಬಂದಾಗ ಬಸವಣ್ಣ ದೂರ ಮಾಡಿದ. ತನ್ನ ಕಾಂತೆಯನ್ನು ರಮಿಸಿದ ಮಿಂಡ ಜಂಗಮನನ್ನು ಬಿಜ್ಜಳ ಕೊಲೆ ಮಾಡಿಸಿದ. ಆ ಶವವನ್ನು ಬಸವಣ್ಣ ಬದುಕಿಸಿದ. ವೀರಶಂಕರ ದಾಸಿಮಯ್ಯನ ದೃಷ್ಟಿಯಿಂದ ಬಿಜ್ಜಳನ ರಾಜ್ಯ ಭಸ್ಮವಾಗುತ್ತಿರಲು ಬಸವ ಉಪಶಮನಗೊಳಿಸಿದ.

ಮೂರನೇ ಆಶ್ವಾಸದಲ್ಲಿ ಚೋಳರಾಜ ಬಸವಣ್ಣನನ್ನು ದರ್ಶಿಸಿ ಕೈಲಾಸಕ್ಕೆ ಹೋದನು. ಬಸವಣ್ಣ ತನ್ನ ಉಂಗುರವನ್ನು ತೆಗೆದು ಬಿಜ್ಜಳನ ಗದ್ದಿಗೆಗೆ ಮುಟ್ಟಿದ ತಕ್ಷಣ ಅದು ಭಸ್ಮವಾಯಿತು. ಬಸವಣ್ಣ ಎರಡನೇ ರುದ್ರನೆಂಬಂತೆ ಚಿತ್ರಿಸಲಾಗಿದೆ.

ವೀರಸಂಗಯ್ಯ: ಈತ ‘ಬಸವಪುರಾಣಸಾರ’ ಎಂಬ ಮೂರು ಆಶ್ವಾಸದ ಪದ್ಯಕಾವ್ಯ ರಚಿಸಿದ್ದಾನೆ. ಅಪ್ರಕಟಿತ ಕಾವ್ಯ. ತಾಳೆಗರಿ ಪ್ರತಿಯ 254 ಪುಟಗಳ ಈ ಕಾವ್ಯ ಮೆಹಬೂಬ್‌ನಗರದ ಶ್ರೀ ನಾಗಲಿಂಗ ಶಿವಯೋಗಿಗಳಲ್ಲಿದೆ. ಪಾಲ್ಕುರಿಕೆ ಕವಿಯಂತೆಯೇ ಕಥಾಸಾರವಿದೆ.

ವೇಲಾಲ ವೀರಭದ್ರ ಕವಿ:
ಬಸವಪುರಾಣವನ್ನು ಬರೆದಿದ್ದಾನೆ. ಅಪ್ರಕಟಿತ ಕಾವ್ಯ. 91 ತಾಳೆಗರಿಗಳಿವೆ. ಶ್ರೀ ನಾಗಲಿಂಗ ಶಿವಯೋಗಿಗಳಲ್ಲಿದೆ. ಸೀಸ ಪದ್ಯದಲ್ಲಿ ರಚನೆಯಾಗಿದೆ. ಅಜ್ಞಾತ ಕವಿಯೊಬ್ಬ ಬಸವಲಿಂಗ ಶತಕವನ್ನು 65 ಸೀಸ ಪದ್ಯಗಳಲ್ಲಿ ರಚಿಸಿದ್ದಾನೆ. ಇದು ಅಪ್ರಕಟಿತ ಕಾಗದ ಪ್ರತಿ. ತಿರುಪತಿ ವಿಶ್ವವಿದ್ಯಾಲಯದಲ್ಲಿದೆ. “ಕಲಿತ ಸಜ್ಜನ ಕಾರಣಾಂಗ ಪಟುದಯಾಸಾಂಧ್ರ ಶ್ರೀಗುರುಬಸವಲಿಂಗ” ಎಂಬ ಪುಷ್ಪಿಕೆಯಿದೆ.

ಚೆನ್ನಾಪ್ರಗ್ಗಡ:
‘ಶೈವಸಿದ್ಧಾಂತ ಶಿಖಾಮಣಿ’ ಬರೆದಿದ್ದಾನೆ. ಇದರಲ್ಲಿಯೂ ಬಸವಣ್ಣನ ಪ್ರಶಂಸೆಯಿದೆ. ಮಹಾಕವಿ ಪೋತನ, ಶ್ರೀನಾಥರು ಬಸವೇಶ್ವರನನ್ನು ತಮ್ಮ ಗ್ರಂಥಗಳಲ್ಲಿ ಸ್ತುತಿಸಿದ್ದಾರೆ. ಪೋತನ ಬಸವಣ್ಣನ ವಚನಗಳನ್ನು ನೋಡಿರಬೇಕು. ಯಥಾವತ್ ತೆಲುಗೀಕರಿಸಿರುವುದು ಅಲ್ಲಲ್ಲಿ ಕಂಡುಬರುತ್ತದೆ. ಪೋತನ ‘ಬಸವರಾಜು’ ಎಂದು ಬಸವಣ್ಣನನ್ನು ಕರೆದಿದ್ದಾನೆ. ಶ್ರೀನಾಥಕವಿ ‘ಶಿವಭಕ್ತಾಗ್ರೇಸ’ನೆಂದು ಕರೆದಿದ್ದಾನೆ. ಹೀಗೆ ಆಂಧ್ರವಾಙ್ಮಯದಲ್ಲಿ ಬಸವಣ್ಣ ಮಹಾಭಕ್ತನಾಗಿ, ಆದರ್ಶವ್ಯಕ್ತಿಯಾಗಿ, ಅನುಭಾವಿಯಾಗಿ ಚಿತ್ರಸಲ್ಪಟ್ಟಿದ್ದಾನೆ.

ಡಾ. ಜಾಜಿ ದೇವೇಂದ್ರಪ್ಪ,
ಗಂಗಾವತಿ.
ಫೋನ್ ನಂ:+91 94816 62738

ಅಭ್ಯಾಸ ಗ್ರಂಥಗಳು:
ಆಂಧ್ರರು ಚಿತ್ರಿಸಿದ ಬಸವಣ್ಣ – ಶ್ರೀ ಬಾಡಾಲುರಾಮಯ್ಯ,
ಅನುವಾದ: ಡಾ.ಜಾಜಿ ದೇವೇಂದ್ರಪ್ಪ.

ಶ್ರೀಶೈಲ ಶಾಸನ ಸಮೀಕ್ಷೆ – ಶ್ರೀ ಪರಭ್ರಹ್ಮಶಾಸ್ತ್ರಿ,
ಅನುವಾದ: ಜಾಜಿ ದೇವೇಂದ್ರಪ್ಪ.

ಬಸವಪುರಾಣ ಪೀಠಿಕೆ – ಆಂಧ್ರಗ್ರಂಥ ಮಾಲ, ಹೈದರಾಬಾದ್.

Loading

Leave a Reply