ನಾ ಬರಿ ಭ್ರೂಣವಲ್ಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-608)

12 ನೇ ಶತಮಾನದಲ್ಲಿಯೇ ಶಿವಯೋಗಿ ಸಿದ್ಧರಾಮೇಶ್ವರರು ಮಹಿಳಾ ಶಕ್ತಿಯನ್ನು ಗುರುತಿಸಿ ಗೌರವಿಸಿದ ನಿಜ ಶರಣರು. ಹೆಣ್ಣು ಈ ಸೃಷ್ಠಿಯ ಒಂದು ಭಾಗ. ಮಾನವರು ಎಂಬ ಜನಾಂಗದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು. ಪುರುಷನ ಕೊಡುಗೆಯಷ್ಟೇ ಮಹಿಳೆಯ ಕೊಡುಗೆಯೂ ಕೂಡ ಮನುಕುಲದ ಬೆಳವಣಿಗೆಗೆ ಶ್ರೇಷ್ಠವಾಗಿದೆ.

  • ತಲೆಯನೇರಿದ ಹೆಣ್ಣು – ಗಂಗೆ” ಜೀವಜಲ, ಜೀವಜಲದಂತೆ ಹೆಣ್ಣು ಸಕಲರಿಗೂ ಬೇಕಾದವಳು.
  • ತೊಡೆಯನೇರಿದ ಹೆಣ್ಣು ಪಾರ್ವತಿ”. ಪಾರ್ವತಿ ಶಕ್ತಿಯ ಸಂಕೇತ, ಸರ್ವರಲ್ಲೂ ಇರುವ ಶಕ್ತಿಯ ಸ್ವರೂಪವೇ ಶಕ್ತಿ ದೇವತೆ ಪಾರ್ವತಿ. ಇವಳೂ ಹೆಣ್ಣು.
  • ಬ್ರಹ್ಮನ ನಾಲಿಗೆಯನೇರಿದ ಹೆಣ್ಣು ಸರಸ್ವತಿ. ಸರಸ್ವತಿ, ವಿದ್ಯೆಯ ಆಧಿದೇವತೆ. ಅಂದರೆ ಎಲ್ಲರಲ್ಲಿರುವ ಜ್ಞಾನ ಸರಸ್ವತಿಯ ಕೃಪೆ. ಜ್ಞಾನದೇವತೆಯೂ ಹೆಣ್ಣು.
  • ನಾರಾಯಣನ ಎದೆಯನೇರಿದ ಹೆಣ್ಣು ಲಕ್ಷ್ಮಿ. ಹಣ, ಧನ, ಕನಕ, ಸಂಪತ್ತು ವ್ಯವಹಾರದ ಮೂಲಗಳು. ಇದನ್ನೇ ಲಕ್ಷ್ಮಿ ಎನ್ನುತ್ತೇವೆ. ಇವಳಿಲ್ಲದೇ ಲೋಕ ವ್ಯವಹಾರವೇ ನಡೆಯದು.

ಜೀವಜಲ, ಶಕ್ತಿ, ಜ್ಞಾನ, ಸಂಪತ್ತು ಇವೆಲ್ಲವುಗಳ ಪ್ರತಿರೂಪ ಅಧಿದೈವ ಮೂಲವಾಗಿ ಹೆಣ್ಣು ಗಂಗೆಯಾಗಿ, ಶಕ್ತಿಯಾಗಿ, ಜ್ಞಾನವಾಹಿನಿಯಾಗಿ, ಸಂಪತ್ತಿನ ದೇವತೆಯಾಗಿ, ಗಂಗೆ, ಪಾರ್ವತಿ, ಸರಸ್ವತಿ, ಲಕ್ಷ್ಮಿಯಾಗಿ ನಿಂತಿರುವ ಹೆಣ್ಣುಗಳೆಲ್ಲಾ ದೇವತೆಗಳು ಅದಕ್ಕಾಗಿ ಪರಶಿವ ಗಂಗೆಯನ್ನು ತಲೆಯ ಮೇಲೆ, ಪಾರ್ವತಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡರೆ, ಬ್ರಹ್ಮನು ಸರಸ್ವತಿಯನ್ನು ತನ್ನ ನಾಲಿಗೆಯ ಮೇಲೆ, ನಾರಾಯಣನು ಲಕ್ಷ್ಮಿಯನ್ನು ತನ್ನ ಹೃದಯ (ಎದೆ) ದಲ್ಲಿ ಇರಿಸಿಕೊಂಡರು. ಹೀಗಿರುವಾಗ ಅವಳು ಹೆಣ್ಣಾಗಿ ಉಳಿಯದೇ ತನ್ನ ವ್ಯಕ್ತಿತ್ವ ವಿಕಸಿತಗೊಳ್ಳುತ್ತಾ ಬಹುಮುಖಿಯಾಗಿ ಅಂದರೆ ತಾಯಿ, ಮಗಳು, ಮಡದಿ, ಸಹೋದರಿ, ಸೊಸೆಯಾಗಿ ಅವಿನಾಭಾವ ಸಂಬಂಧವನ್ನು ಪುರುಷನೊಂದಿಗೆ ಹೊಂದಿದ್ದಾಳೆ. ಅವಳನ್ನು ರಾಕ್ಷಸಿಯಾಗಿ ಬಿಂಬಿಸಿದ ಮನುಶಾಸ್ತ್ರವನ್ನು ಶಿವಯೋಗಿ ಸಿದ್ಧರಾಮೇಶ್ವರು 12 ನೇ ಶತನಮಾನದಲ್ಲಿಯೇ ಖಂಡಿಸಿದ್ದಾರೆ. ಹೆಣ್ಣನ್ನು ರಾಕ್ಷಸಿ ಎಂಬ ನೀಚಸ್ಥಾನದಿಂದ ಕೆಳಗಿಳಿಸಿ, “ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನಾ” ಎಂಬ ಉನ್ನತ ಸ್ಥಾನಕ್ಕೆ ಪದೋನ್ನತಿ ಮಾಡಿದ್ದಾರೆ. ಹೀಗಿರುವಾಗ ಮಹಿಳೆ ಯಾಕೆ ನಿಕೃಷ್ಟಳಾದಳು? ಯಾಕೆ ಕಡೆಗಣಿಸಲ್ಪಟ್ಟಳು? ಎಂಬುದೇ ದೊಡ್ಡ ಪ್ರಶ್ನೆ.

ಹಾಗಾದರೆ 21 ನೇ ಶತಮಾನದ ಪ್ರಜ್ಞಾವಂತ, ನಾಗರೀಕ ಸಮಾಜ ಏನು ಮಾಡುತ್ತಿದೆ? ಹೆಣ್ಣನ್ನು ಭ್ರೂಣಾವಸ್ಥೆಯಲ್ಲಿಯೇ ಕೊಂದು ಹಾಕುತ್ತಿದೆ. ಇಂದಿನ ಈ ಪರಿಸ್ಥಿತಿಗೆ ಕಾರಣಗಳಾದರೂ ಏನು? ಮಾನವರ ಮನಸ್ಥಿತಿ ದಾರಿ ತಪ್ಪುತ್ತಿರುವ ಪರಿಸ್ಥಿತಿಗಳಾದರೂ ಎಂತಹವು? ಎಂಬುದರ ಕುರಿತಾದ ಚರ್ಚೆ, ಜಿಜ್ಞಾಸೆಯೇ ಈ ಲೇಖನದ ಉದ್ದೇಶವಾಗಿದೆ.

ಶಿವಯೋಗಿ ಸಿದ್ಧರಾಮೇಶ್ವರ ವಚನಕ್ಕೆ ಪೂರಕವಾಗಿ ಎನ್ನುವಂತೆ ಹಿರಿಯ ಕವಿ ಚಂಪಾರವರು ತಮ್ಮ “ಹೂವು-ಹೆಣ್ಣುತಾರೆ” ಎಂಬ ಕವಿತೆಯಲ್ಲಿ ಹೆಣ್ಣಿನ ಮಹತ್ವ ಕುರಿತು ಉಲ್ಲೇಖಿಸುತ್ತಾರೆ. ಹೀಗಾಗಿ ನನಗೆ ಚಂಪಾ ನೆನಪಾದರು.

ಜೀವನದಿಯಾಗಿ ಹರಿದವಳು ಹೆಣ್ಣು
ಅಡಿಯಲ್ಲೋ ಮುಡಿಯಲ್ಲೊ
ಮೆರೆದು ಮಣ್ಣಿಗೆ ಉದುರಿ ಮಣ್ಣಾದರೂ
ನೂರು ಹೂವಿಗೆ ಬೀಜವಾದವಳು ಹೆಣ್ಣು
ನಮ್ಮ ಹಾಡಿಗೆ ಮೂಡಿಸುವಳು ಕಣ್ಣು
ಅದಕ್ಕೆ ಗೆಳೆಯ ನಾವು ಹೆಣ್ಣಿನ ಬಗ್ಗೆ
ಹಾಡುವುದು ಬೇಡ ಅಂತ ಹೇಳುವುದು ಬೇಡಾ
(ಚಂಪಾ: ಹೂವು-ಹೆಣ್ಣು–ತಾರೆ)

“ಜೀವನದಿಯಾಗಿ, ನೂರು ಹೂವಿಗೆ ಬೀಜವಾಗಿ ಬಾಳಿನ ಕಣ್ಣಾಗಿ” ಅವಳ ಇರುವಿಕೆಯಿಂದ ಪರಿಸರದ ಚಲುವನ್ನು ಇಮ್ಮಡಿಗೊಳಿಸುವ ಹೆಣ್ಣನ್ನು ಸದಾ ಪ್ರೀತಿಸಬೇಕಾಗುತ್ತದೆ. ಗೌರವಿಸಬೇಕಾಗುತ್ತದೆ. ಅವಳ ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವ ಹೊಣೆ ಮನು ಕುಲಕ್ಕಿದೆ. ಆದರೆ ಭೂಮಿಗೆ ಅವಳು ಬಾರದಂತೆ ಭ್ರೂಣದಲ್ಲೇ ಅವಳ ಮೇಲೆ ಆಗುತ್ತಿರುವ ಹತ್ಯೆ ಹಲ್ಲೆಗಳ ಕಥೆ ಮನ ಕಲಕುವಂತಿದೆ. ಇದು ಕೇವಲ “ಹೆಣ್ಣು ಭ್ರೂಣ ಹತ್ಯೆ” ಯಾಗಿ ನಿಲ್ಲದೇ, ಇಡೀ ಸಾಂಸ್ಕೃತಿಕ ಭ್ರೂಣ ಹತ್ಯೆಯಾಗುವ ದುರಂತಕ್ಕೆ ನಾಂದಿ ಹಾಡುತ್ತದೆ.

ಭೂಮಿಗೆ ಬರಲು ತವಕಿಸುತ್ತಿರುವ ಒಂದು ಹೆಣ್ಣು ಭ್ರೂಣದ ಭಾವ, ಸಂವೇದನೆ, ಕನಸು, ಪುಳಕಗಳನ್ನೊಳಗೊಂಡ “ನಾ ಬರಿ ಭ್ರೂಣವಲ್ಲ” ಎಂಬ ಸಾಲು ಹೆಣ್ಣು ಭ್ರೂಣ ಹತ್ಯೆಯ ದಾರುಣತೆಯನ್ನೇ ತೆರೆದಿಡುತ್ತದೆ. ಈ ಲೇಖನ “ನಾ ಬರಿ ಭ್ರೂಣವಲ್ಲ” ಎಂಬ ಸಾಲಿನ ಸುತ್ತವೇ ಹೆಣೆಯಲ್ಪಟ್ಟಿದೆ.

ಮುಖ್ಯವಾಗಿ ನಾ ಬರಿ ಭ್ರೂಣವಲ್ಲ ಎಂಬ ಈ ಸಾಲು ಧಾರವಾಡದ ಹಿರಿಯ ಕವಿಯಿತ್ರಿ, ಪ್ರಗತಿಪರ ಬರಹಗಾರ್ತಿ, ಚಿಂತನಕಾರ್ತಿ ಡಾ. ಮಾಲತಿ ಪಟ್ಟಣಶೆಟ್ಟಿಯವರ ಕವನದ ಶೀರ್ಷಿಕೆಯಾಗಿದೆ. ಇದೇ ಒಂದು ಸಾಲನ್ನು ಬಳಸಿಕೊಂಡು ಸ್ತ್ರೀ ಸಂವೇದನೆಗಳ ಸುತ್ತ ನನ್ನ ಚಿಂತನಗಳಿವೆ. ಡಾ. ಮಾಲತಿ ಪಟ್ಟಣಶೆಟ್ಟಿಯವರು ರಚಿಸಿದ ಕವನ ಹೀಗಿದೆ;

ನಾ ಬರಿ ಭ್ರೂಣವಲ್ಲ

ಅವ್ವಾ ನಾ ನಿನ್ನ ಮಗಳು
ದೇಹದ ಮುಗುಳು
ನಿನ್ನ ಕನಸಿನ ಆರಳವ್ವಾ

ನಾ ಬರಿ ಭ್ರೂಣವಲ್ಲ

ನನ್ನ ಹಡೆದವ್ವ
ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ
ನಾ ಸತ್ತೆನವ್ವಾ
ಚೆಲ್ಲಬೇಕೆ ಉಡಿಯ ಮುತ್ತು!

ನಾ ಬರಿ ಭ್ರೂಣವಲ್ಲ

ಕೇಳವ್ವ ಕಂಡಿಲ್ಲ ನಾನಿನ್ನೂ
ಬದುಕಿನಾಗಸದ ನೀಲ
ಪಚ್ಛೆಯಂಥ ನೆಲ
ಗಾಳಿಯ ಮೃದು ಸ್ಪರ್ಶ

ನಾ ಬರಿ ಭ್ರೂಣವಲ್ಲ.

ಇಲ್ಲಿ ಚಿಂತನೆ ಪ್ರಾರಂಭವಾಗುವುದೇ “ಬದುಕು ಮತ್ತು ಹೋರಾಟ” ದ ಎರಡು ಮುಖ್ಯ ನೆಲೆಯ ಮೂಲಕ. ಭೂಮಿಯ ಮೇಲೆ ಹುಟ್ಟಿ ಬರುವ ಪ್ರತಿ ಜೀವಿಯೂ ತನ್ನ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದರೆ ಇಲ್ಲಿ ಎದುರಾಗುವ ಬಹುಮುಖ್ಯ ಪ್ರಶ್ನೆ ಎಂದರೆ ಹುಟ್ಟಿ ಬಂದ ಮೇಲೆ ಹೇಗಾದರೂ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಹುಟ್ಟುವಿಕೆಗೆ ಅಡೆತಡೆಗಳಾದರೆ ಬದುಕನ್ನು ಕಟ್ಟಿಕೊಳ್ಳುವ ಪ್ರಶ್ನೆಯಾದರೂ ಎಲ್ಲಿಯದು? ಹೆಣ್ಣಿನ ಹುಟ್ಟುವಿಕೆಗೂ ಮತ್ತು ಅವಳು ಕಟ್ಟಿಕೊಳ್ಳಬೇಕಿರುವ ಬದುಕಿಗೂ ನೇರವಾಗಿಯೇ ಇದು ಅನ್ವಯಿಸುವ ವಿಚಾರವಾಗಿದೆ. “ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ” ಎಂಬ ಸಾಲು “ಹೆಣ್ಣು ಭ್ರೂಣ ಹತ್ಯೆ” ಯ ನೋವನ್ನು ಸ್ಪಷ್ಟಪಡಿಸುತ್ತದೆ.

ಭ್ರೂಣವಾಗಿರುವ ಹಂತದಲ್ಲೆ ಗರ್ಭದಲ್ಲೇ ಹೆಣ್ಣಿನ ಕೊಲೆ ನಡೆಯುತ್ತಿರುವಾಗ ಬದುಕು ಕಟ್ಟಿಕೊಳ್ಳುವುದಿರಲಿ, ಹೆಣ್ಣು ಹುಟ್ಟುವುದೇ ದುಸ್ತರವಾಗುತ್ತಿದೆ. ಸಂಗಾತಿಯಾಗಿ ಹೆಣ್ಣು ಬೇಕು. ಆದರೆ ಮಗಳಾಗಿ ಏಕೆ ಬೇಡ? ಎಂಬ ಪ್ರಶ್ನೆಗಳು ಸಾಲು ಸಾಲಾಗಿ ನಿಲ್ಲುತ್ತವೆ. ಈ ಎಲ್ಲ ಸವಾಲುಗಳು ಇರುವುದರಿಂದಲೇ ಇಂದು “ಸ್ತ್ರೀ ವಿಮೋಚನೆ” ಕುರಿತು ಮಾತನಾಡುವ ಮೊದಲು “ಸ್ತ್ರೀ ಸಂತಾನದ ಉಳುವಿನ” ಕುರಿತು ಮಾತನಾಡಬೇಕಿದೆ. ಪ್ರಬುದ್ಧರು ಎನಿಸಿಕೊಂಡವರೆಲ್ಲರೂ ಮೇಲಿಂದ ಮೇಲೆ ಮಹಿಳಾ ಅಸ್ತಿತ್ವ ಮತ್ತು ಮಹಿಳಾ ಆಸ್ಮಿತೆ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಈಗ ಈ ಪದಗಳು ಕೇವಲ ಭಾಷಣದಲ್ಲಿ ಬಳಸುವ ಅಲಂಕಾರಿಕ ಪದಗಳಂತೆ, ಗ್ರಂಥಗಳಲ್ಲಿ ಬಳಸುವ ಗ್ರಾಂಥಿಕ ಪದಗಳಂತೆ ಔಪಚಾರಿಕವಾಗಿ ಬಳಸಲ್ಪಡುತ್ತಿವೆಯೇ ವಿನಃ ಈ ಪದಗಳ ಕುರಿತಾದ ನೈಜವಾದ ಚಿಂತನೆಗಳು ಇನ್ನೂ ಸಾಕಷ್ಟು ಗಂಭೀರವಾಗಿ ನಡೆಯಬೇಕಿದೆ.

“ಲಿಂಗಭೇದ” ಹಾಗೂ “ಲಿಂಗ ತಾರತಮ್ಯ” ಈ ಎರಡೂ ಪದಗಳನ್ನು ನಾವಿಂದು ಬಹುತೇಕವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ. ಲಿಂಗಭೇದ ಎಂದರೆ ಪುರುಷ ಮತ್ತು ಮಹಿಳೆಯರಲ್ಲಿ ಜೈವಿಕವಾಗಿ ರಚಿಸಲ್ಪಟ್ಟ ಜನನಾಂಗಗಳಲ್ಲಿ ಭೇದ ಅಷ್ಟೆ, ಸೃಷ್ಟಿಯಲ್ಲಿ ಸಂತಾನೋತ್ಪತ್ತಿಗಾಗಿ ಪುರುಷ ಮತ್ತು ಮಹಿಳೆಯರಲ್ಲಿ ಜನನಾಂಗದಲ್ಲಿ ವ್ಯತ್ಯಾಸ ಇದೆ (ಭೇದ ಇದೆ). ಇದನ್ನು ಹೊರತುಪಡಿಸಿ ಉಳಿದ ಅವಯವಗಳಲ್ಲಿ ಸಮಾನತೆಯ ಅಂಶಗಳಿರುವುದು ಗಮನಾರ್ಹ. ಹಾಗಾದರೆ ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ಇಬ್ಬರೂ ಸಮಾನ ಪಾಲ್ಗೊಳ್ಳುವಿಕೆ ಇರುವಾಗ ಇಲ್ಲಿ ಶ್ರೇಷ್ಠತೆ – ಕನಿಷ್ಠತೆಯ ಪ್ರಶ್ನೆಯೇ ಬರುವುದಿಲ್ಲ. ದೇಹ ರಚನೆಯ ವ್ಯವಸ್ಥೆಯಲ್ಲಿ ವೈಜ್ಞಾನಿಕವಾದ ಸತ್ಯವಿರುವಾಗ, ಮಹಿಳೆಯ ಋತುಸ್ರಾವ ಮುಂದಿಟ್ಟುಕೊಂಡು ಮಾಡುವ ಲಿಂಗ ತಾರತಮ್ಯ, ಲಿಂಗ ಅಸಮಾನತೆ ಅವೈಜ್ಞಾನಿಕವಾದುದು. ಇಬ್ಬರಲ್ಲಿರುವ ಪ್ರತಿಭೆಗೆ ಇಂತಹ ತಾರತಮ್ಯ ಅಂಟಿಕೊಳ್ಳುವುದಿಲ್ಲ. ಅಂಟಿಕೊಳ್ಳಲೂ ಬಾರದು. ಜೇಡರ ದಾಸಿಮಯ್ಯನವರಂತಹ ವೈಜ್ಞಾನಿಕ ಮನೋಭಾವದ ಶರಣರು ತಮ್ಮ ಕಾಲಘಟ್ಟದಲ್ಲಿಯೇ ತಾರ್ಕಿಕವಾಗಿ ಇಂತಹ ತಾರತಮ್ಯವನ್ನು ಅಲ್ಲಗಳೆದಿದ್ದರು.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-846)

ಎಂಬಲ್ಲಿ ಹೆಣ್ಣು ಗಂಡಿನ (ಸ್ತ್ರೀ – ಪುರುಷ) ಸಮಾನತೆಯನ್ನು ಗುರುತಿಸಿದರು.

ಸಂಸ್ಕೃತಿ ಮತ್ತು ಧರ್ಮ ಎಂಬ ಎರಡು ಪರದೆಗಳು ಭಾರತೀಯ ಮಹಿಳೆಯನ್ನು ಅನಾದಿ ಕಾಲದಿಂದಲೂ ರಕ್ಷಿಸುತ್ತಾ ಬಂದಿವೆ ಎಂಬ ಮಾತು ಎಷ್ಟು ಸತ್ಯವಾದುದು? ಆತ್ಮ ಸಾಕ್ಷಿಯನ್ನು ಮುಂದಿಟ್ಟುಕೊಂಡು ಈ ಪ್ರಶ್ನೆಯನ್ನು ಒರೆಗೆ ಹಚ್ಚಬೇಕಾಗುತ್ತದೆ. ಹೆಣ್ಣಿನ ಋತುಚಕ್ರ ಅಥವಾ ಮುಟ್ಟು ಅದೇ ಅವಳ ಮೈಲಿಗೆಗೆ ಕಾರಣ ಎಂದು ಧರ್ಮ ಅವಳನ್ನು ದೂರವಿರಿಸಿತು. ಮಲೀನೆ, ಕುಲೀನೆ, ಅಪವಿತ್ರಳು, ಅಮಂಗಲೆ ಎಂದೆಲ್ಲಾ ಹೀಯಾಳಿಸಿ ಅವಳಿಂದ ಪೂಜೆಗೊಳ್ಳುವಲ್ಲಿ ದೇವರುಗಳೂ ಹೆದರಿದವು. ಮುಟ್ಟಾದಾಗ ಅವಳನ್ನು ಪ್ರತ್ಯೇಕ ಕೋಣೆಯಲ್ಲಿಡುವ ಮೂಲಕ ಮಾನಸಿಕ ಕಿರುಕುಳ, ಮುಜುಗರಕ್ಕೆ ದೂಡಲು ಸಂಸ್ಕೃತಿ ಮುಂದಾಯಿತು. ಮುಟ್ಟಾದವಳ ಕೈಯಿಂದ ಅಡುಗೆ ಮಾಡಿಸಿ ಉಣ್ಣುವುದು ಮಹಾಪಾಪ ಎಂದು ಪರಿಗಣಿಸಲ್ಪಟ್ಟಿತು. ಹೆಣ್ಣು ಮಕ್ಕಳಿಂದ ತಯಾರಿಸಲ್ಪಟ್ಟ ಆಹಾರವನ್ನು ಋಷಿಮುನಿಗಳು, ತಪಸ್ವಿಗಳು, ಮಠಾಧಿಪತಿಗಳು ಭುಂಜಿಸಲಿಲ್ಲ. ಹೀಗೆ ಹೆಣ್ಣಿನ ಮುಟ್ಟಿನ ಕಾರಣ ಅವಳನ್ನು ಮೈಲಿಗೆಯೆಂದು ಪರಿಗಣಿಸಿ ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ಅವಳ ದೇಹವನ್ನು ಅವಮಾನಿಸಲಾಯಿತು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಅವಳಿಗೆ ತನ್ನ ದೇಹದ ಮೇಲೆ ಅಸಹ್ಯ ಭಾವನೆ, ಜಿಗುಪ್ಸೆ ಉಂಟಾಗುವಷ್ಟರ ಮಟ್ಟಿಗೆ. ಆದರೆ ಇದೇ ಮುಟ್ಟಿನಿಂದ ಅಲ್ಲವೇ ಜನಾಂಗದ ಸೃಷ್ಟಿ? ಈ ಸತ್ಯದ ಅರಿವಿದ್ದರೂ ಯಾಕೆ ಹೆಣ್ಣನ್ನು ಅವಮಾನಿಸಲಾಯಿತು? ಯಾಕೆ ನಿಕೃಷ್ಟವಾಗಿ ನೋಡಲಾಯಿತು?

12 ನೇ ಶತಮಾನದಲ್ಲಿ ಶಿವಶರಣರು ಮಹಿಳೆಯ ಕೈಯಲ್ಲಿ ತಯಾರಿಸಿದ ಪಾಕ ಪವಿತ್ರಪಾಕ ಎಂದು ಪರಿಭಾವಿಸಿದ್ದರು. ಅದನ್ನು ಅವರು ಸ್ವೀಕರಿಸಿದರು. ಲಿಂಗ ಧರಿಸಿದ ಮಹಿಳೆ ಅಪವಿತ್ರಳಲ್ಲ. ಅವಳು ಪೂಜೆ ಮಾಡಬಹುದು. ಗುರು-ಹಿರಿಯರಿಗೆ ಆಹಾರ ತಯಾರಿಸಿ ನೀಡಬಹುದು. ಅವಳಿಗೆ ಯಾವ ಮೈಲಿಗೆಯೂ ಇಲ್ಲ. “ಮುಟ್ಟು” ಎಂಬುದು ನೈಸರ್ಗಿಕವಾದದ್ದು ಎಂದು ಪರಿಭಾವಿಸಿದ್ದರು. ಅದಕ್ಕೆ ಅವಿರಳಜ್ಞಾನಿ ಚನ್ನಬಸವಣ್ಣನವರ ಈ ವಚನವೇ ಸಾಕ್ಷಿ;

ಭವಿಯ ಮನೆಯಲ್ಲಿ ಭವಿಪಾಕವಲ್ಲದೆ
ಭಕ್ತನ ಮನೆಯಲ್ಲಿ ಭವಿಪಾಕವಿಲ್ಲ.
ಆ ಭಕ್ತನೂ ಆ ಭಕ್ತನ ಸ್ತ್ರೀಯೂ ಲಿಂಗ ಮುಂತಾಗಿ
ಗುರುಲಿಂಗ ಜಂಗಮಕ್ಕೆ ಬೇಕೆಂದು
ಭಕ್ತಿರತಿಯಿಂದ ಲಿಂಗಹಸ್ತದಲ್ಲಿ ಮಾಡಿದ
ಸರ್ವದ್ರವ್ಯಂಗಳು ಸಕಲಪದಾರ್ಥಂಗಳೆಲ್ಲವೂ
ಶುದ್ಧಪಾಕ, ಅತ್ಯಂತ ಪವಿತ್ರಪಾಕ, ಲಿಂಗಕ್ಕೆ ಸಲುವುದು.
ಅದನತಿಗಳೆದಡೆ ದ್ರೋಹ, ಲಿಂಗಕ್ಕೆ ಕೊಟ್ಟುಕೊಳಬೇಕು
ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-726/ವಚನ ಸಂಖ್ಯೆ-1477)

12 ನೇ ಶತಮಾನದಲ್ಲಿ ಸ್ಪೋಟಗೊಂಡ ಇಂತಹ ವೈಚಾರಿಕತೆ 20-21 ನೇ ಶತಮಾನದಲ್ಲಿ ಏಕೆ ತಣ್ಣಗಾಯಿತು? ಅದರಲ್ಲೂ ಮಹಿಳೆ ಎಂಬುದು ಕೇವಲ ಭಾಷಣದ ಬರಹದ ವಸ್ತುವಾಯಿತೇ ವಿನಃ ಪರಿಹಾರ ಸೂತ್ರಗಳು ಕಾಣದಾದವು.

ಹುಟ್ಟಿಗೆ ಕಾರಣವಾದ ಮುಟ್ಟಿನ ಕುರಿತು ಇಂತಹ ರಾಜಕಾರಣ ನಡೆದರೆ, ಮುಂದುವರೆದು ಹೆಣ್ಣಿನ ಗರ್ಭದ ಮೇಲೆ ರಾಜಕಾರಣ ಶುರುವಾಯಿತು. ಸಂತಾನೋತ್ಪತ್ತಿಗೆ ಹೆಣ್ಣಿನ ದೇಹ ಬೇಕಾಯಿತು. ಸಂತಾನ ಅಂಕುರವಾಗಲು, ಬೆಳೆಯಲು, ಅವಳ ಗರ್ಭ ಬೇಕಾಯಿತು. ದೇಹದಲ್ಲಿ ಅಂಕುರವಾದ ಭ್ರೂಣದ ಬೆಳವಣಿಗೆಗೆ ಮತ್ತು ಒಂಭತ್ತು ತಿಂಗಳು ಗರ್ಭದಲ್ಲಿ ಮೂಡಿದ ಸಂತಾನದ ಆರೋಗ್ಯ ಮತ್ತು ಕಾಳಜಿ ನಿರ್ವಹಣೆ ಮಾಡುವಲ್ಲಿ ಅವಳು ಹೆಜ್ಜೆ ಹೆಜ್ಜೆಗೂ ಜಾಗೃತವಾಗಿರಬೇಕಾಯಿತು. ಇಷ್ಟಾದರೂ ಅವಳು ತನಗೆ ಬೇಕಾದ ಸಂತಾನ ಪಡೆಯುವಲ್ಲಿ ಸ್ವತಂತ್ರಳಲ್ಲ. ಈ ಸಂದರ್ಭದಲ್ಲಿ ಕುಟುಂಬ ರಾಜಕಾರಣ ಪ್ರವೇಶಿಸುತ್ತದೆ. ಅವಳು ಹೆಣ್ಣು ಸಂತಾನಕ್ಕಿಂತ ಗಂಡು ಸಂತಾನಕ್ಕೆ ಭಾಜನಳಾದಾಗ ಮಾತ್ರ ಕುಟುಂಬ ವಲಯದಲ್ಲಿ ಸಂತೋಷದ ಜೊತೆಗೆ ಗೌರವದ ಸ್ಥಾನಮಾನಕ್ಕೆ ಅವಳು ಅರ್ಹಳಾಗುತ್ತಾಳೆ.

ಈ ರಾಜಕಾರಣ ಎಷ್ಟರ ಮಟ್ಟಿಗೆ ದಟ್ಟವಾಗಿರುತ್ತದೆ ಎಂದರೆ ಸ್ವತಃ ಜನ್ಮ ನೀಡುವ ತಾಯಿಯೇ ತಾನು ಹೆಣ್ಣಾಗಿದ್ದರೂ ಹೆಣ್ಣು ಹುಟ್ಟಿದರೆ ದುಃಖಿಸುವ, ನೋವು ಪಡುವ, ಒಮ್ಮೊಮ್ಮೆ ತಾನು ಹೆತ್ತ ಆ ಹೆಣ್ಣು ಮಗುವನ್ನೇ ದ್ವೇಷಿಸುವಷ್ಟರ ಮಟ್ಟಿಗೆ ತೀವ್ರವಾಗಿರುತ್ತದೆ. ಅಷ್ಟರ ಮಟ್ಟಿಗೆ ಆ ತಾಯಿಯ Brain Wash ಮಾಡಲಾಗಿರುತ್ತದೆ. ಇದರ ಮುಂದುವರಿಕೆಯಾಗಿ ಈಗ ಪ್ರಾರಂಭದಲ್ಲೇ ಲಿಂಗ ಪತ್ತೆ ಮಾಡಿ ಹೆಣ್ಣು ಮಗುವಿದ್ದರೆ ಆ ತಾಯಿಯ ಗರ್ಭದ ಹಲ್ಲೆ ಆಗುತ್ತದೆ. ಭ್ರೂಣದ ಹಂತದಲ್ಲೆ Abortion ಹೆಸರಿನಲ್ಲಿ ಹೆಣ್ಣು ಮಗುವಿನ ಕೊಲೆಯಾಗುತ್ತದೆ. ಇಂತಹ ಕೊಲೆಗೆ ಹೆಚ್ಚಾಗಿ ಸಾಕ್ಷಿಗಳಿರುವುದಿಲ್ಲ. ಸಾಕ್ಷಿಗಳಿದ್ದರೂ ಅವುಗಳನ್ನು ನಾಶ ಮಾಡಲಾಗುತ್ತದೆ. ಇಲ್ಲವೇ ಹತ್ತಿಕ್ಕಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ “ಹೆಣ್ಣು ಭ್ರೂಣ ಹತ್ಯೆ” ನಿಷೇಧ ಕುರಿತು ಎಷ್ಟೇ ಕಾನೂನುಗಳಿದ್ದಾಗಲೂ ನಿರಂತರವಾಗಿ ಹೆಣ್ಣುಭ್ರೂಣ ಹತ್ಯೆ ತೆರೆಮರೆಯ ಹಿಂದೆ ನಡೆಯುತ್ತಲೇ ಇದೆ. ಅದಕ್ಕಾಗಿಯೇ ಅನೇಕ ಕಥೆ, ಕಾವ್ಯ, ಸಾಹಿತ್ಯ, ನಾಟಕ, ಚಲನಚಿತ್ರಗಳು ಈ ಹಿಂಸೆ, ಕೊಲೆಯ ಕಣ್ಣಾಮುಚ್ಚಾಲೆಯನ್ನು ಬಹಿರಂಗಗೊಳಿಸಲು ಸಜ್ಜಾದವು.

“ಅವ್ವಾ ನಾ ನಿನ್ನ ಮಗಳು
ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ
ನಾ ಬರಿ ಭ್ರೂಣವಲ್ಲ”

ಎನ್ನುವ ತಾಯಿ ಮತ್ತು ಮಗುವಿನ ಆತ್ಮೀಯ ಸಂವಾದದ ಮೂಲಕ ಭೂಮಿಗೆ ಹೊರ ಬರಲು ತವಕಿಸುವ “ಹೆಣ್ಣು ಭ್ರೂಣದ” ಅಸಹಾಯಕ ಸ್ಥಿತಿಯನ್ನು ಡಾ. ಮಾಲತಿ ಪಟ್ಟಣಶೆಟ್ಟಿಯವರು ತಮ್ಮ ಕವಿತೆಯ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಸುತ್ತಾರೆ. ಭ್ರೂಣದೊಳಗೆ ಭವಿಷ್ಯತ್ ಅಡಗಿದೆ. ಕನಸು, ಮನಸು, ಇದೆ. (ಬೀಜದೊಳಗೆ ವೃಕ್ಷ ಅಡಗಿದಂತೆ)

ಇದಕ್ಕೆ ಪೂರಕವಾಗಿ ಎನ್ನುವಂತೆ ವಿಜಯಪುರದ ಶ್ರೀಮತಿ. ಸರಸ್ವತಿ ಚಿಮ್ಮಲಗಿಯವರು ಬರೆಯುತ್ತಾರೆ.

ಕನಸ ಕಂಡದ್ದೇ ಕಂಡದ್ದು ನೂರಲ್ಲ, ಸಾವಿರಾರು
ನಾನೂ ಕಲ್ಪನಾ ಚಾವ್ಲಾ, ಸುನೀತಾ ಆಗಿ ಆಕಾಶಕ್ಕ ಹಾರಬೇಕು
ಇಂದಿರಾಗಾಂಧಿ ಹಂಗ ಅಖಂಡ ಭಾರತ ಆಳಬೇಕು
ಕಿತ್ತೂರ ಚೆನ್ನಮ್ಮನಂಗ ಕತ್ತಿ ಬೀಸಬೇಕು,
ಇನ್ನೂ ಏನೆಲ್ಲ ಆಗಬೇಕೂ ಅಂತ

ಇದ್ದಕ್ಕಿದ್ದಂಗ ಅವ್ವ ದೊಡ್ಡ ಡಾಕ್ಟರ್ ಕಡೆ ಹ್ವಾದಳು
ಅದೇನೋ ಸ್ಯಾನಿಂಗ್ ಅಂತ, ಫಿಮೇಲು ಅಂತ
ಕುಸುಪುಸು ಮಾತಾಡಿದ್ರು
ಅಜ್ಜಿ! ಹೆಣ್, ಹೆಣ್ಣ ಇದ್ದರೆ ಇಂದೇ ತೆಗೆದಬಿಡ್ರಿ ಅಂದಾಗ
ನನ್ನ ಎದಿ ಒಡದು “ಅವ್ವಾ” ಅಂತ ಚೀರಿ ಅತ್ತ ಬಿಟ್ಟೆ

ಓ! ದೇವರೇ! ನಾನೇನು ಅಂಥಾ ತಪ್ಪು ಮಾಡಿದ್ದೆ
ನಿರಪರಾಧಿಯಾದ ನನ್ನ ಹತ್ಯಾ ಮಾಡಾಕ
ನಾ ಭೂಮಿಗಿ ಕಾಲ ಇಡೋ ಮೊದಲ
ನನ್ನ ಕೊಲೆ ಮಾಡಾಕ
ಅವ್ವಾ ನೀನಾದ್ರೂ ಮನಸ್ಸ ಮಾಡವ್ವ
ನನಗ ಬಾಳ ಕೊಡವ್ವ (ಬಾಳು ಕೊಡವ್ವ)

ಕುಟುಂಬ ರಾಜಕಾರಣ “ಹೆಣ್ಣು ಭ್ರೂಣ ಹತ್ಯೆ” ಯಲ್ಲಿ ಪಾಲ್ಗೊಳ್ಳುವ ಸ್ಪಷ್ಟ ಚಿತ್ರಣ ಈ ಕವಿತೆಯಲ್ಲಿದೆ. ಬಡತನ, ಅಸಹಾಯಕತೆ, ಶಿಕ್ಷಣದ ಕೊರತೆ ಅದರಲ್ಲೂ ಮುಖ್ಯವಾಗಿ ಅರಿವಿನ ಕೊರತೆಯಿಂದ ಮಹಿಳೆ ತನ್ನ ಹೆಣ್ಣು ಸಂತಾನವನ್ನು ಸಂರಕ್ಷಿಸಿಕೊಳ್ಳುವಲ್ಲಿ ವಿಫಲ ಆಗುತ್ತಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡುಮಗ ಮಾತ್ರ ಮನೆತನ ನಿಭಾಯಿಸುವವನು, ತಂದೆತಾಯಿ ನೋಡಿಕೊಳ್ಳುವವನು ಎಂಬ ಭಾವನೆ ಬಲವಾಗಿ ಬೇರೊರಿದೆ.

ಅದಕ್ಕಾಗಿಯೇ “ಮಗ ಉಂಡರೆ ಕೇಡಿಲ್ಲ ಮಳಿ ಬಂದ್ರ ಕೇಡಿಲ್ಲ” ಎಂಬ ಗಾದೆಗಳು ಹುಟ್ಟಿಕೊಂಡಿವೆ. ಇದಕ್ಕೆ ತದ್ವಿರುದ್ಧವಾಗಿ “ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ” ಎನ್ನುವ ಲೋಕೊಕ್ತಿಗಳು ಹೆಣ್ಣಿನ ಹುಟ್ಟಿನ ಮೂಲವನ್ನೇ ಪ್ರಶ್ನಿಸುತ್ತವೆ. ಹೆಣ್ಣು ಮಗುವನ್ನು ಜೋಪಾನ ಮಾಡುವುದು, ರಕ್ಷಿಸುವುದು ಒಂದು ದೊಡ್ಡ ಹೊರೆ ಎನ್ನುವ ಭಾವ ಸಾಮಾಜಿಕರಲ್ಲಿ ಒಂದೆಡೆ ಇದ್ದರೆ, ಮತ್ತೊಂದೆಡೆ “ವರದಕ್ಷಿಣೆ” ಎಂಬ ಪೆಡಂಭೂತ. ಇವೆರಡೂ ಹೆಣ್ಣು ಮಗುವಿನ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ.

ಅಪ್ಪ ನೀ ಫೀಜ ಕಟ್ಟಿ ಡಾಕ್ಟರ್
ಇಂಜನೀಯರ್ ಮಾಡ್ಸದೆ ಇದ್ರು ಬಿಡು
ಅಜ್ಜಿ ನನಗೆ ಕತಿ ಹೇಳಿ ಕೈ ಹಿಡಿದು
ನಡಿಸದೇ ಇದ್ರೂ ಬಿಡು
ಅಜ್ಜ! ನಾ ಇಲ್ಲದೆ ಈ ಗಂಡಸಾದ್ರೂ
ಏನ ಸಾಧನೆ ಮಾಡ್ಯಾನ ಹೇಳು?
ಬಾಳು ಕೊಡವ್ವ – ಸರಸ್ವತಿ ಚಿಮ್ಮಲಗಿ.

ಎನ್ನುವ ಪ್ರಶ್ನೆಗಳು ಚೀರಿ ಚೀರಿ ಕೇಳಿದಂತೆ ಇಂದು ಭಾಸವಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ದತಿ ಎಂದು ಸುಪ್ರಿಂ ಕೋರ್ಟ್ ಕಠೋರವಾಗಿ ಪ್ರತಿಕ್ರಿಯಿಸಿದೆ. ನಾವೆಣಿಸಿದಂತೆ ಪುರುಷರಿಂದಲೇ ಈ ಶೋಷಣೆ ಆಗುತ್ತಿದೆ ಎಂದರೆ ತಪ್ಪಾಗುತ್ತದೆ. ಮಹಿಳೆಯ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಸಂದರ್ಭದಲ್ಲಿ ಪುರುಷರ ಪಾತ್ರ ಗಣನೀಯವಾಗಿರಬಹುದು, ಆದರೆ ಹೆಣ್ಣು ಭ್ರೂಣ ಹತ್ಯೆಯಂತಹ ವಿಷಯದಲ್ಲಿ ಮಹಿಳೆಯ ಪಾತ್ರವೂ ಇದೆ. ಹೆಣ್ಣಿಗೆ ಹೆಣ್ಣೆ ಶತ್ರುವಾಗುವ ಸಂದರ್ಭವೂ ಹೌದು.

ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಸಂತತಿ ಗಣನೀಯವಾಗಿ ಇಳಿಕೆಯಾಗಿತ್ತಿದೆ. 0-6 ವರ್ಷದ ಹೆಣ್ಣು ಮಕ್ಕಳು 2011 ರಲ್ಲಿ, ಪ್ರತಿ 1000 ಪುರುಷರಿಗೆ 914 ಕ್ಕೆ ಇಳಿದಿದೆ. ಕರ್ನಾಟಕದಲ್ಲಿ 943 ಕ್ಕೆ ಇಳಿದಿದೆ. ಒಂದು ಸಮೀಕ್ಷೆಯ ಅಂದಾಜಿನಂತೆ ಪ್ರತಿ ವರ್ಷ 6 ಲಕ್ಷದಿಂದ 10 ಲಕ್ಷ ಹೆಣ್ಣು ಜೀವಗಳು ಭ್ರೂಣದಲ್ಲೇ ಹತ್ಯೆಗೊಳಗಾಗುತ್ತಿವೆ. ಈಗಾಗಲೇ ನಮ್ಮೆಲ್ಲರ ಗಮನಕ್ಕೆ ಬಂದಂತೆ ಗಂಡು ಮಕ್ಕಳಿಗೆ ಕನ್ಯೆಗಳು ಸಿಗುತ್ತಿಲ್ಲ. ರಾಜಸ್ಥಾನ, ಹರಿಯಾಣ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕನ್ಯೆ (ವದು) ಯನ್ನು ಹೊರ ರಾಜ್ಯದಿಂದ ಆಯ್ಕೆ ಮಾಡಲಾಗಿ ತರಲಾಗುತ್ತದೆ. ಕರ್ನಾಟಕದಲ್ಲೂ ಸದ್ಯ ಅದೇ ಪರಿಸ್ಥಿತಿ ಇದೆ.

ಲಿಂಗ ಆಯ್ಕೆ ನಿಷೇಧ ಅಧಿನಿಯಮ 1994 ಕಾಯ್ದೆ ಇದ್ದರೂ ಅಕ್ರಮ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ. 1800 ಗಿಂತ ಹೆಚ್ಚು ಕೇಸು ದಾಖಲಾಗಿದ್ದರೂ 143 ಜನರಿಗೆ ಮಾತ್ರ ಶಿಕ್ಷೆ ಆಗಿದೆ. Ultra Sound Scanning Machine ಗಳು ಮಗುವಿನ ಆರೋಗ್ಯ ಸ್ಥಿತಿಗತಿಯ ಕುರಿತು ಹೇಳುವುದನ್ನು ಬಿಟ್ಟು ಭ್ರೂಣ ಪತ್ತೆಗೆ ನಿಂತಿರುವುದು ದುರಂತ. ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡಿದ (ವೈದ್ಯ/ನರ್ಸ) ಅಪರಾಧಕ್ಕೆ 3 ವರ್ಷ ಜೈಲು, 10,000 ರೂಪಾಯಿಗಳ ದಂಡವಿದೆ. ಇದಕ್ಕೆ ಸಹಾಯ ಮಾಡಿದವರಿಗೆ 3 ವರ್ಷ ಜೈಲು, 50,000 ರೂಪಾಯಿಗಳ ದಂಡವಿದೆ. ಆದರೆ ಇಂತಹ ನಿಯಮಕ್ಕೆ ಒಳಪಟ್ಟು ಶಿಕ್ಷೆ ಅನುಭವಿಸಿದವರು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಸುಪ್ರಿಂ ಕೋರ್ಟ್ ಭ್ರೂಣ ಹತ್ಯೆ ಮಾಡುವ ವಿವಿಧ ರೀತಿಯ ಕ್ಲಿನಿಕ್‌ಗಳು ಮತ್ತು Ultra Sound Scanning Center ಗಳ ಮೇಲೆ ನಿಗಾ ಇಡಬೇಕು ಎಂದು ಕಾಯ್ದೆ ಜಾರಿಗೆ ಮಾಡಿದೆ. ಎರಡು/ಮೂರು ವರ್ಷಗಳಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ “ಸಾಂಸ್ಕೃತಿಕ ಅತ್ಯಾಚಾರ” ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ವಿಫಲವಾಗಿವೆ.

ಒಟ್ಟಿನಲ್ಲಿ ಮಹಿಳೆ ಘನತೆಯಿಂದ ಬದುಕುವುದು ದೂರ ಉಳಿಯಿತು. ಅವಳು ನಿರ್ವಿಘ್ನವಾಗಿ ಹುಟ್ಟುವ ಹಕ್ಕನ್ನೇ ಕಳೆದುಕೊಳ್ಳುತ್ತಿರುವಾಗ ದೇಶದ ಸಮಗ್ರ ಅಭಿವೃದ್ಧಿ ಎಂಬುದು ಕನಸಿನ ಮಾತೆ ಅಲ್ಲವೇ?

ಸ್ತ್ರೀಯ ಮಹತ್ವ:

ನಾ ಬರಿ ಭ್ರೂಣವಲ್ಲ. ಹೌದು ಸ್ತ್ರೀ ಬರಿ ಭ್ರೂಣವಲ್ಲ. ಅವಳಿಗೊಂದು ಅಸ್ತಿತ್ವ ಇದೆ. ಅವಳಿಗೊಂದು ಬೆಲೆ ಇದೆ. ಸಾಮಾಜಿಕ ರಚನೆಯಲ್ಲಿ ಮಹಿಳೆಯ ಪಾಲು ಗಣನೀಯವಾಗಿದೆ. ಅವಳಿಲ್ಲದ ಸಮಾಜವನ್ನು ಊಹಿಸುವುದೂ ಕೂಡಾ ಕಷ್ಟ. ಸಮಾಜದ ಅರ್ಧ ಭಾಗವೇ ಅವಳಾಗಿರುವ ಅವಳನ್ನು ಅಪಮೌ‌ಲ್ಯೀಕರಣಕ್ಕೆ ಒಳಪಡಿಸಿ ವಿನಾಶದ ಅಂಚಿಗೆ ತಳ್ಳಲ್ಪಟ್ಟರೆ ಸಮಾಜ ಪಾರ್ಶ್ಚವಾಯುವಿನಂತಹ ಕಾಯಿಲೆಯಿಂದ ನರಳಬೇಕಾಗುತ್ತದೆ. ಹೌದು, ಮನುಷ್ಯ ದೇಹದ ಒಂದು ಭಾಗ ಊನ ಆಯಿತು ಎಂದರೆ ಅದು ಅನಾರೋಗ್ಯಕರ ಲಕ್ಷಣ. ಹಾಗೆಯೇ ಸಮಾಜದ ಒಂದು ಭಾಗವಾದ ಮಹಿಳೆಯ ಕುರಿತಾದ ನಿರ್ಲಕ್ಷ ಸಮಾಜದ ಅನಾರೋಗ್ಯದ ದ್ಯೋತಕ. ಭಾರತೀಯರಲ್ಲಿರುವ ಅರ್ಧನಾರೀಶ್ವರ ಪರಿಕಲ್ಪನೆಯನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ. ಅಂದರೆ ಶಿವನ ಅರ್ಧಭಾಗ ಶಿವೇ ಆಗಿರುವಾಗ ಪುರುಷನಷ್ಟು ಮಹಿಳೆಯೂ ಕೂಡ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತಾಳೆ. ಇದೇ ಲಿಂಗ ಸಮಾನತೆ.

ಮುತ್ತು, ರತ್ನ, ಹವಳ, ವಜ್ರ, ವೈಡೂರ‍್ಯ, ಬಂಗಾರ, ಬೆಳ್ಳಿ ಮುಂತಾದವುಗಳಿಗೆ ಬೆಲೆ ಹೆಚ್ಚು ಯಾಕೆಂದರೆ? ಇವುಗಳ ಲಭ್ಯತೆಯ ಕೊರತೆಯಿಂದಾಗಿ ಹಾಗಾದರೆ ಸ್ತ್ರೀಗೆ ಯಾಕೆ ಬೆಲೆಯಿಲ್ಲ. ಅವಳು ನೀರಿನಂತೆ ಸದಾ ಲಭ್ಯವಾಗುತ್ತಾಳೆ ಎನ್ನುವ ಕಾರಣಕ್ಕಾಗಿಯೇ ಇರಬಹುದು. ಈಗೇನೋ ನೀರಿಗೆ ಬೆಲೆ ಕೊಟ್ಟ ತೆಗೆದುಕೊಳ್ಳುತ್ತೇವೆ ನಿಜ. ಹಿಂದೊಮ್ಮೆ ನೀರು ಸಲೀಸಾಗಿ ಸಿಗುತ್ತಿತ್ತು. ಹಾಗೆಯೇ ಮಹಿಳೆಯೂ ಕೂಡ ಸಿಗುತ್ತಿದ್ದಳು. ಹಾಗಾದರೆ, ಒಂದಲ್ಲಾ ಒಂದು ಕಾಲ ಹೀಗೂ ಬರಬಹುದೆಲ್ಲಾ? ಒಂದೇ ಒಂದು ದಿನ ಹನಿ ನೀರೂ ಸಿಗದಂತಾದರೆ, ಆಗ ಯಾವ ಶ್ರೀಮಂತ ಇರಲಿ ರಾಜ ಮಹಾರಾಜ ಇರಲಿ ತನ್ನ ಎಲ್ಲಾ ಮುತ್ತು ಮಾಣಿಕ್ಯ ಕೊಡಲು ಸಿದ್ಧನಾಗಿ ಬಿಡುತ್ತಾನೆ. ಈ ಮಾತು ಮಹಿಳೆಗೂ ಸಹ ಅನ್ವಯಿಸುತ್ತದೆ. ಒಂದು ಸಲ ಮಹಿಳೆ ಇಲ್ಲದೆ ಬದುಕನ್ನು ಕಲ್ಪನೆ ಮಾಡಿ ನೋಡಿ. ಒಂದಿಲ್ಲಾ ಒಂದು ಹಂತಕ್ಕೆ ಅವಳು ಬೇಕೇ ಬೇಕು.

ಹಾಗಾದರೆ ಪುರುಷನಿಗೆ ಮಹಿಳೆಯು ಯಾವಾಗ? ಯಾವ ಸ್ಥಿತಿಯಲ್ಲಿ? ಹೇಗೆ ಬೇಕಾಗುತ್ತಾಳೆ? ಎಂಥಾ ಸಂಬಂಧದಲ್ಲಿ ಬೇಕಾಗುತ್ತಾಳೆ? ಇವೆಲ್ಲಾ ಪ್ರಶ್ನೆಗಳು ಪುರುಷರಿಗೆ ಬಿಟ್ಟ ಪ್ರಶ್ನೆಗಳು. ಇವುಗಳ ಉತ್ತರಗಳನ್ನು ತುಂಬಾ ಗಂಭೀರವಾಗಿ ಹುಡುಕಬೇಕಾಗುತ್ತದೆ. ಉದಾಹರಣೆಗೆ ಪತ್ನಿ ಮತ್ತು ವಿಧವೆಯಾದ ಸಹೋದರಿ ಮನೆಯಲ್ಲಿ ಇದ್ದಾಗ, ಪುರುಷನಿಗೆ ಪತ್ನಿಯೇ ಬೇಕಾಗುತ್ತಾಳೆ. ಅದೇ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋದಾಗ ಅವನ ಊಟೋಪಚಾರ, ಮಕ್ಕಳ ಲಾಲನೆ-ಪಾಲನೆ ಮುಂತಾದವುಗಳಿಗೆ ಸಹೋದರಿ ಬೇಕಾಗುತ್ತಾಳೆ. ಸಹೋದರಿಯಾಗಿ ಅವಳ ಸಹಾಯ-ಸಹಕಾರ ಪುರುಷನಿಗೆ ಬೇಕಾಗುತ್ತದೆ. ಹೀಗೆ ಮಗಳು, ಸೊಸೆ ಮುಂತಾದ ಸಂಬಂದದಲ್ಲಿ ಪುರುಷನಿಗೆ ಮಹಿಳೆಯು ಒಂದಿಲ್ಲಾ ಒಂದು ಹಂತದಲ್ಲಿ ಪೂರಕವಾಗಿ ನಿಲ್ಲುತ್ತಾಳೆ.

ಎರಡನೆಯದಾಗಿ ಮಹಿಳೆಯ ಕಾರಣದಿಂದಾಗಿ ರಾಮಾಯಣ, ಮಹಾಭಾರತಗಳು ನಡೆದವು, ರಾಜ್ಯ – ಸಾಮ್ರಾಜ್ಯಗಳು ಉರುಳಿದವು. ಇಂಥ ಕಾರಣಗಳಿಗಾಗಿ ಮಹಿಳೆಯನ್ನು ಹೀಯಾಳಿಸಬಹುದು. ಆದರೆ ಇದಕ್ಕೂ ಭಿನ್ನ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ. ಎರಡು ಹಂತದಲ್ಲಿ ನಾವಿದನ್ನು ಗುರುತಿಸಿಕೊಳ್ಳಬಹುದು.

  • ಮೊದಲ ಹಂತದಲ್ಲಿ ಮಹಿಳೆಗಾಗಿ ಪುರುಷನು ತನ್ನ ರಾಜ್ಯ, ಸಾಮ್ರಾಜ್ಯಕ್ಕೆ, ಸಂಪತ್ತಿಗೆ ಮಹತ್ವ ನೀಡಲಿಲ್ಲ. ಮಹಿಳೆಗಿಂತ ಇವೆಲ್ಲಾ ನಗಣ್ಯವಾದವು, ಮಹಿಳೆಯ ಬೆಲೆ ಅಷ್ಟು ಮಹತ್ವದ್ದಾಯಿತು.
  • ಎರಡನೆಯ ಹಂತದಲ್ಲಿ ಮಹಿಳೆ ಪುರುಷನಿಗೆ ದೊರೆಯದಿದ್ದಾಗ ಸಂಯಮ ರಹಿತನಾಗುತ್ತಾನೆ, ನೀಚ ಪ್ರವೃತ್ತಿಗೆ ಇಳಿಯುತ್ತಾನೆ, ತನ್ನೊಳಗಿನ ಪಶುತ್ವವನ್ನು ಹೊರ ಹಾಕುತ್ತಾನೆ ಎಂಬುದಾಗಿದೆ.

ಸ್ತ್ರೀಯ ಮಹತ್ವ ಎಷ್ಟು? ಎಂಬ ಪ್ರಶ್ನೆಗೆ ಬಂಗಾಲಿ ಭಾಷೆಯ ಸುಪ್ರಸಿದ್ಧ ಸಾಹಿತಿ ಶರತ್ ಚಂದ್ರ ಚಟ್ಟೋಪಾಧ್ಯಾಯರು ಹೀಗೆ ಉತ್ತರಿಸುತ್ತಾರೆ;

ಅವಳು ಎಷ್ಟರ ಮಟ್ಟಿಗೆ ಸೇವಾ ಪಾರಾಯಣಳು? ಎಷ್ಟರ ಮಟ್ಟಿಗೆ ಸ್ನೇಹಶೀಲಳು? ಎಷ್ಟರ ಮಟ್ಟಿಗೆ ಸತಿತ್ವದ ಭಾವನೆಯುಳ್ಳವಳು? ದುಃಖ ದುಮ್ಮಾನಗಳು ಬಂದಾಗ ಎಷ್ಟು ಮೌನವಾಗಿ ಸಹಿಸಬಲ್ಲಳು? ಅವಳಿಂದ ಪುರುಷನಿಗೆ ದೊರಕುವ ಸುಖ, ಲಾಲನೆ, ಕಾಮ ಭಾವನೆಯನ್ನು ಅವಳು ಹೀಗೆ ಸಂಯಮಿಸಿಕೊಳ್ಳುವಳು? ಹೇಗೆ ತೃಪ್ತಗೊಳಿಸಬಲ್ಲಳು? ಮುಂತಾದ ಪ್ರಶ್ನೆಗಳಿಗೆ ಜಗತ್ತಿನ ಇತಿಹಾಸವನ್ನು ತೆರೆದು, ಉತ್ತರಗಳನ್ನು ಹುಡುಕಿ, ಸ್ತ್ರೀಯ ಮಹತ್ವವನ್ನು ಅರಿಯಬೇಕಾಗುತ್ತದೆ ಎಂಬುದು ನಿರ್ವಿವಾದ.

ಎನ್ನುತ್ತಾರೆ. ಹೀಗಿರುವಾಗ ಅವಳು ಕೇವಲ ಭ್ರೂಣವಲ್ಲ. ಅವಳ ಅಸ್ತಿತ್ವದಿಂದ ಈ ಬದುಕು ಸುಂದರವಾಗುತ್ತದೆ.

ಅದಕ್ಕಾಗಿಯೇ ರಾಷ್ಟ್ರಕವಿ ಕುವೆಂಪು ತಮ್ಮನ್ನು “ಹೇಮಿಗಂಡ” ಎಂದು ಕರೆದುಕೊಂಡರು.

ಇನ್ನೊಬ್ಬ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು

ಮನೆ ಮನೆಯಲ್ಲಿ ದೀಪ ಮುಡಿಸಿ,
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೇ?

ಎಂದು ಪ್ರಶ್ನಿಸಿದರು.

ಮೈಸೂರು ಮಲ್ಲಿಗೆಯ ಕವಿ ಶ್ರೀ. ಕೆ. ಎಸ್. ನರಸಿಂಹಸ್ವಾಮಿಯವರಂತೂ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೇ ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನು ಒಬ್ಬ ಸಿಪಾಯಿ

ಎಂದು ಶರಣಾಗತಾರೇ.

ವರಕವಿ ಬೇಂದ್ರೆಯವರೂ ಈ ಎಲ್ಲಾ ಮಾತುಗಳನ್ನು ಒಪ್ಪಿ ಅನುಮೋದಿಸುವಂತೆ

ಗಂಡು ದರ್ಪವ ಹರಿದು;
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವಾಗಿ ಬಂದೆ
ಗೊಂಬೆಯಾಡಿಸಿದಂತೆ ಆಡಸೆಂದೆ;
ನಿನ್ನ ತಾಯ್ತನದ ಸೈರಣೆಯ
ವಿತರಣೆಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು

ಎಂದು ಹೇಳುತ್ತಲೇ ಮಹಿಳೆಯ ತಾಯ್ತನದ, ತಾಳ್ಮೆಯ, ಕರುಣೆಯ ದೀಪಗಳನ್ನೆ ಬೆಳಗಿಸಿ ಬಿಡುತ್ತಾರೆ.

ಅದಕ್ಕೆಂದೇ ಇರಬಹುದು ರಾಮಕೃಷ್ಣ ಪರಮಹಂಸರಂತಹ ದಿವ್ಯ ಜ್ಞಾನಿಯೇ ಶಾರದಾಮಾತೆಯನ್ನು ಸ್ವತಃ ಪೂಜಿಸುತ್ತಿದ್ದರು.

ಯುರೋಪಿಯನ್‌ರು ಭಾರತೀಯರನ್ನು ಪ್ರಶ್ನಿಸಿದರಂತೆ “ನಿಮಗೆ ಸ್ತ್ರೀಯರ ಮಹತ್ವ ಏನು ಎಂಬುದೇ ಗೊತ್ತಿಲ್ಲ. ನೀವು ಅವರನ್ನು ಗೌರವಿಸುವುದಿಲ್ಲ. ಆಮೋದ-ಪ್ರಮೋದಗಳಲ್ಲಿಯೂ ಅವರಿಗೆ ಸರಿ ಸಮಾನವಾದ ಅವಕಾಶ ಕೊಡುವುದಿಲ್ಲ. ಅವರನ್ನು ಸದಾ ಮನೆಯ ಕೋಣೆಗಳಲ್ಲಿಯೇ ಬಂಧಿಸಿ ಮುಚ್ಚಿ ಇಟ್ಟಿರುತ್ತಿರಿ; ಅದಕ್ಕಾಗಿ ನಿಮ್ಮನ್ನು ಅನಾಗರೀಕರು ಎಂದು ಕರೆಯುವುದು ಸೂಕ್ತವೇ? ಎಂದರಂತೆ. ಆದರೆ ಭಾರತೀಯರು ಇದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮನ್ನು ತಾವೇ ಸಮರ್ಥಿಸಿಕೊಂಡರು. ಮನುಸ್ಪೃತಿಯ ಪೂಜಾರ್ಹ ವಾಕ್ಯವನ್ನೇ ಜಪಿಸಿದರು. ನಾವು ಮಹಿಳೆಯರಿಗೆ ದೇವತೆ ಎಂಬ ಅತ್ಯುನ್ನತ ಸ್ಥಾನ ನೀಡಿದ್ದೇವೆ. “ಯತ್ರನಾರ್ಯಸ್ತು ಪೂಜ್ಯಂತೇ ತತ್ರ ರಮಂತೆ ದೇವತಾಃ” ಎಂದು ನಾವು ಮಹಿಳೆಯರನ್ನು ಪೂಜಿಸಿದ್ದೇವೆ, ಗೌರವಿಸಿದ್ದೇವೆ ಎಂದರು. ಹೌದು ಮಹಿಳೆಯರನ್ನು ಪೂಜಿಸಿದರು. ಹೇಗೆ ಪೂಜಿಸಿದರು? ಎಷ್ಟು ಪೂಜಿಸಿದರು? ಯಾಕೆ ಪೂಜಿಸಿದರು? ಎಂಬ ಪ್ರಶ್ನೆಗಳ ಜೊತೆ ಜೊತೆಗೆ ಅನೇಕ ರಹಸ್ಯಗಳು ಹೊರ ಬರುತ್ತವೆ.

ಭಾರತೀಯರಲ್ಲಿ ಸ್ತ್ರೀಯರಿಗೆ ಸತಿತ್ವ ಉಂಟು, ಪತಿವ್ರತಾ ಪಟ್ಟವೂ ಉಂಟು. ಆದರೆ ಪುರುಷರಿಗೆ ಅಂಥದ್ದೇನೂ ಇಲ್ಲ. ಪತಿತ್ವ ಎಂದಾಗಲೂ ಕೂಡ ಸತಿವ್ರತಾ ಎಂಬುದೂ ಇಲ್ಲಾ. ಈ ಕಾರಣದಿಂದ ನಮ್ಮ ದೇಶದಲ್ಲಿ ಸತಿ ಸಹಗಮನ ಇತ್ತೆ ವಿನಃ ಪತಿ ಸಹಗಮನ ಇದ್ದಿಲ್ಲ. ಪತಿ ತೀರಿಕೊಂಡರೆ ಅವನ ಚಿತೆಯಲ್ಲಿ ಸತಿಯನ್ನೂ ಸುಡಲಾಗುತ್ತಿತ್ತು. ನಂತರ ಸತಿ ಹೋದವಳನ್ನು ದೇವತೆ ಎಂದು ಪೂಜಿಸಲಾಯಿತು. ಇದು ಪೂಜೆಯೇ? ಭಾರತದಲ್ಲಿ ರಾಜ ತೀರಿಕೊಂಡರೆ ಅವನ ರಾಣಿಯರು ಸಹಗಮನ, ಅನುಗಮನ ಮಾಡಿದ ಅನೇಕ ಉದಾಹರಣೆಗಳಿವೆ.

ವಿಧವಾ ವಿವಾಹವನ್ನು ಜಗತ್ತಿನ ಯಾವ ದೇಶವೂ ಗೌರವದಿಂದ ಕಂಡಿಲ್ಲ. ಭಾರತದಲ್ಲಂತೂ ವಿಧವೆಯ ಬದುಕು ತುಂಬಾ ದುರಂತವಾದುದು. ಅವಳು ವಿಧವೆ ಆದರೆ ಬದುಕಿದ್ದಾಗಲೇ ನರಕ ಅನುಭವಿಸುತ್ತಾಳೆ. ಬದುಕಿದಾಗಲೇ ಸತ್ತಂತೆ ಆಗಿ ಬಿಡುತ್ತಾಳೆ. ಎಂ.ಕೆ. ಇಂದಿರಾ ಅವರ “ಫಣಿಯಮ್ಮ” ಕಾದಂಬರಿ, ಡಾ. ದ. ರಾ. ಬೇಂದ್ರೆ “ಪುಟ್ಟವಿಧವೆ” ಕವಿತೆಗಲೂ ವಿಧವೆಯರ ಬದುಕಿನ ದಾರುಣತೆಯನ್ನು ತೋರಿಸಿವೆ. ಹೀಗೆ ವಿಧವೆ ಆಗಿ ಬದುಕಿದಾಗಲೇ ಸಾಯುವುದಕ್ಕಿಂತ ಬದಲು ಪತಿಯ ಜೊತೆಗೆ ಚಿತೆಯೇರೋದೆ ಸೂಕ್ತ ಎಂದು ಸ್ವತಃ ಸತಿಯರೇ ಸತಿ ಹೋಗಲು ನಿರ್ಧರಿಸಿದರು. ಹೀಗೆ ಬದುಕಿದ್ದಾಗಲೇ ಚಿತೆ ಏರಿ ಸುಟ್ಟುಕೊಳ್ಳುವುದು ಒಂದು ಪೂಜೆಯೇ?!     ‌

ಮತ್ತೊಂದು ಸ್ತ್ರೀಯ ಮಾತೃತ್ವ. ಒಬ್ಬ ಸ್ತ್ರೀ ಅಥವಾ ಮಹಿಳೆ ಮಾತೃತ್ವ ಕಾರಣದಿಂದ ಪೂಜನೀಯಳಾಗುತ್ತಾಳೆ. ಬಂಜೆಯಾದವಳಿಗೆ ಈ ಸಮಾಜದಲ್ಲಿ ಬೆಲೆ ಇಲ್ಲ. ಅವಳು ತಾಯಿಯಾಗದೆ ಇದ್ದಾಗ ಆಕಸ್ಮಾತ್ ಗಂಡ ತೀರಿ ಹೋದರೆ ಅವಳಿಗೆ ಮಾತೃತ್ವ ಭಾಗ್ಯ ತಪ್ಪಿ ಹೋಗುತ್ತದೆ. ಈ ಭಾಗ್ಯವೇ ಹೋದ ಮೇಲೆ ಅವಳು ಯಾಕೆ ಬದುಕಬೇಕು? ಮಕ್ಕಳಾಗದೇ ಅವಳ ಬಾಳು ನರಕವಾಗುತ್ತದೆ ಎಂದು ಅವಳ ಪತಿಯೊಂದಿಗೆ ಅವಳನ್ನು ಚಿತೆಗೇರಿಸಿ ಸುಡಲಾಯಿತು ಇದು ಸ್ತ್ರೀಗೆ ಮಾಡಿದ ಪೂಜೆಯೇ?

ಮಹಿಳಯನ್ನು ಚಿತೆಗೇರಿಸುವ ಸಂದರ್ಭಗಳು ಎಷ್ಟು ಭಯಾನಕ ಆಗಿರುತ್ತಿದ್ದವು ಎಂದರೆ ಅದನ್ನು ನೋಡಿದವರ ಎದೆ ನಡುಗಿಸುವಂತೆ ಇರುತ್ತಿದ್ದೆವು. ಪತಿ ಮರಣ ಹೊಂದಿದಾಗ ಸತಿಯನ್ನು ಚಿತೆಗೇರಿಸುವಾಗ ಅವಳಿಗೆ ಬಟ್ಟಲು ತುಂಬ ಗಾಂಜಾ ಮತ್ತು ತುತ್ತೆಯ ಮಿಶ್ರಣ ಕುಡಿಸಿ ನಶೆ ಬರಿಸಲಾಗುತ್ತಿತ್ತು. ಬಾಹ್ಯ ಲೋಕದ ಪ್ರಜ್ಞೆಯೇ ಇಲ್ಲದಂತೆ ಮಾಡಲಾಗುತ್ತಿತ್ತು. ನಂತರ ಹಸಿ ಬಿದಿರುಗಳಿಂದ ಅವಳನ್ನು ಚೆನ್ನಾಗಿ ಬಿಗಿದು, ಹೆಣೆದು ಹತ್ತಿಕ್ಕಿ ಅವಳನ್ನು ಕಟ್ಟುತ್ತಿದ್ದರು. ಏಕೆಂದರೆ ಸತಿಯು ಚಿತೆ ಏರಿದಾಗ ಆ ಬೆಂಕಿಯ ಶಾಖಕ್ಕೆ ಅವಳು ಎದ್ದು ಹೊರ ಬರಬಾರದು ಎಂದು. ಅಲ್ಲದೇ ಅವಳ ವೇದನೆ ಕಂಡು ಯಾರೂ ಹೆದರಬಾರದೆಂದು ಚಿತೆಯ ಮೇಲೆ ಸಾಕಷ್ಟು ರಾಳೆ, ತುಪ್ಪ ಮುಂತಾದವುಗಳನ್ನು ಹಾಕಿ ಹೊಗೆ ಎಬ್ಬಿಸಲಾಗುತ್ತಿತ್ತು ಮತ್ತು ಅವಳು ಪ್ರಾಣ ರಕ್ಷಣೆಗಾಗಿ ಕೂಗುವ ಕೂಗು, ಆರ್ತನಾದ, ನರಳಾಟ ಇದ್ಯಾವವೂ ಅಲ್ಲಿದ್ದವರಿಗೆ ಕೇಳಬಾರದು ಎಂದು. ಹಾಗಾಗಿ ಲಭ್ಯವಿರುವ ಡೋಲು, ಡಪ್ಪು, ತಾಳ, ಶಂಖ ಮುಂತಾದವುಗಳನ್ನು ಜೋರಾಗಿ ಬಾರಿಸುತ್ತಿದ್ದರು. ಇದು ಮಹಿಳೆಗೆ ಪೂಜೆಯೇ?

ಬಂಗಾಲದಲ್ಲಿ ಚೌಹಾರ ಎಂಬ ಇಂತಹ ವ್ರತ ಪದ್ಧತಿ ಇದೆ. ಪತಿ ಮರಣ ಹೊಂದಿದಾಗ ಸ್ವತಃ ಸತಿ ಹರಳೆಣ್ಣೆ ಸುರಿದುಕೊಂಡು ಚಿತೆ ಹೋಗುತ್ತಾಳೆ. ಇವತ್ತು ಕೂಡಾ ಅತ್ತೆ ಕಾಟ ತಾಳಲಾರದೆ, ವರದಕ್ಷಿಣೆ ಕಾಟಕ್ಕಾಗಿ, ಸಂಶಯ ಪೀಡಿತ ಗಂಡ, ಮಾವ, ಮೈದುನ, ನಾದಿನಿ ಮುಂತಾದವರ ಕಾಟ ತಾಳದೆ ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಷ್ಟೊ ಘಟನೆಗಳು ನಮ್ಮ ಕಣ್ಮುಂದೆ ಇವೆ. ಇಂತಹ ಕೌರ್ಯಗಳ ಮಧ್ಯೆ ಎದುರಿಸುತ್ತಿರುವ ಇನ್ನೊಂದು ಜ್ವಲಂತ ಸಮಸ್ಯೆ “ಹೆಣ್ಣು ಭ್ರೂಣ ಹತ್ಯೆ” ಎನ್ನುವ ಪಿಡುಗು.

ಇದುವರೆಗಿನ ಒಟ್ಟು ಗ್ರಹಿಕೆಯಲ್ಲಿ ನಮಗೆ ಅನಿಸುವುದಿಷ್ಟೇ “ಮಹಿಳೆಯ ಶೋಷಣೆ ಪುರುಷನಿಂದ ಆಗುತ್ತಿದೆ” ಎಂದು ಎಂದು ಸಾಮಾನ್ಯವಾದ ತೀರ್ಪು. ಆದರೆ ಇದು ಪೂರ್ಣ ಸತ್ಯವಲ್ಲ. ಏಕೆಂದರೆ ಪುರುಷ ಪ್ರಧಾನತೆ ಒಪ್ಪಿಕೊಂಡ ಸಮಾಜದಲ್ಲಿ ಮಹಿಳೆಯೂ ಇದ್ದಾಳೆ. ಹೀಗಾಗಿ ಈ ಶೋಷಣೆಯಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನವಾಗಿಯೇ ಪಾಲ್ಗೊಂಡಿದ್ದಾರೆ. ಸತಿ ಪದ್ಧತಿ ಒಪ್ಪಿಕೊಂಡ ಸಮಾಜದಲ್ಲಿ ಪತಿಯೊಂದಿಗೆ ಚಿತೆಗೆ ಏರುವಂತೆ ಮಾಡಲು ಇಡೀ ಸಮಾಜವೇ ಮಾನಸಿಕವಾಗಿ ಸಿದ್ಧವಾಗಿರುತ್ತದೆ. ಅದನ್ನು ವಿಭೃಂಭಿಸುವಂತೆ, ವೈಭಿವೀಕರಿಸುವಂತೆ, ಪ್ರಚೋದಿಸುವಂತೆ ಸತಿ ಸಹಗಮನಕ್ಕೆ ತಯಾರಾಗುವಂತೆ ಮಹಿಳೆಯನ್ನು ಒಪ್ಪಿಸುವಲ್ಲಿ, ಒತ್ತಾಯಿಸುವಲ್ಲಿ, ಆಗ್ರಹಿಸುವಲ್ಲಿ ಅದನ್ನು ಮನೆಯಲ್ಲಿರುವ ಪುರುಷರು ಮಾತ್ರ ಮಾಡಿರುತ್ತಾರೆಂದೆನೂ ಇಲ್ಲಾ. ಮನೆಯ ಮಹಿಳೆಯರ ಪಾಲುದಾರಿಕೆಯೂ ಇರುತ್ತದೆ. ಹೆಣ್ಣು ಭ್ರೂಣ ಹತ್ಯೆಗೂ ಈ ಮಾತು ಅನ್ವಯಿಸುತ್ತದೆ. ಇದರಿಂದ ಶೋಷಣೆ ಕೇವಲ ಮಹಿಳೆಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜವೇ ಈ ಶೋಷಣೆಗೆ ಬಲಿಯಾಗುತ್ತದೆ. ಏಕೆಂದರೆ ಸಾವು ಒಂದು ಮಹಿಳೆಯದ್ದಾದರೂ, ಒಂದು ಹೆಣ್ಣು ಭ್ರೂಣದ್ದಾದರೂ ಅದರ ದುಃಖ ಅಲ್ಲಿ ಸಂಬಂಧಿಸಿದ ಬಂಧು, ಬಳಗ ಎಲ್ಲರಿಗೂ ಹರಿದು ಬರುತ್ತದೆ. ಅದಕ್ಕೆ ಇದು “ಸಾಂಸ್ಕೃತಿಕ ಭ್ರೂಣ ಹತ್ಯೆ” ಎನಿಸಿಕೊಳ್ಳುತ್ತದೆ. ಸತಿ ಸಹಗಮನ ಪದ್ಧತಿಯಲ್ಲಿ ಒಂದು ವಿಕಾಸವಾಗಬೇಕಾದ ಬದುಕು ನಾಶವಾದರೆ, ಹೆಣ್ಣು ಭ್ರೂಣ ಹತ್ಯೆಯಲ್ಲಿ ಅರಳಬೇಕಾದ ಭ್ರೂಣ ಗರ್ಭದಲ್ಲೇ ಕಮರಿ ನಾಶವಾಗುತ್ತದೆ.

ಒಟ್ಟಿನಲ್ಲಿ ಮೌಲ್ಯದ ಹೆಸರಿನಲ್ಲಿ, ಸಂಪ್ರದಾಯ, ಧರ್ಮ, ದೇವರು ಎಂಬ ಹೆಸರಿನಲ್ಲಿ ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರನ್ನು ಹೊಸಕಿ ಹಾಕುವುದರ ಮೂಲಕ “ಸಾಂಸ್ಕೃತಿಕ ಭ್ರೂಣಹತ್ಯೆ” ಮಾಡಲಾಗುತ್ತಿದೆ.

ಇವೆಲ್ಲ ಕಾರಣಗಳಿಂದಾಗಿ ಮಹಿಳೆಗೆ ಕಲೆ, ಸಾಹಿತ್ಯ, ಸಂಗೀತ, ರಾಜಕೀಯ, ವ್ಯಾಪಾರ, ವ್ಯವಹಾರ ಮುಂತಾದ ಕ್ಷೇತ್ರಗಳಲ್ಲಿ ಪುರುಷನಷ್ಟು ಉತ್ತುಂಗಕ್ಕೆರಲು ಸಾಧ್ಯವಾಗುತ್ತಿಲ್ಲ. ಮಹಿಳೆ ಎಲ್ಲವನ್ನೂ ಮೀರಿ ಸಾಧನೆಗೆ ಹೊರಟಾಗ ಅವಳ ದೇಹ ಮತ್ತು ಶೀಲ ಎರಡೂ ಸಂಶಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಹಾಗಾದರೆ ಎಲ್ಲಾ ವಲಯಗಳು ಪುರುಷನ ಆಧೀನವೇ? ಮಹಿಳೆಗೆ ಸಿಕ್ಕಿರುವ ಅಥವಾ ಸಿಗುತ್ತಿರುವ ಅವಕಾಶಗಳು ಅವನು ಹಾಕಿದ ಭಿಕ್ಷೆಯೇ? ಅವಳಿಗೆ ಅರ್ಹತೆಯೇ ಇಲ್ಲವೇ? ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ಅನುಕಂಪ, ಕರುಣೆ, ದಯಾ ಭಿಕ್ಷೆಗಿಂತ ಮಹಿಳೆಯ ಸಾಮರ್ಥ್ಯ, ಅರ್ಹತೆ, ವ್ಯಕ್ತಿತ್ವದ ಆಧಾರದ ಮೇಲೆ ಅವಳನ್ನು ಗೌರವಿಸಿ ಅವಳ ಆಸ್ಮಿತೆ ಕಾಪಾಡುವ ಸಹೃದಯತೆಯ ಅವಶ್ಯಕತೆ ಇಂದು ಬೇಕಾಗಿದೆ.

ಏಕೆಂದರೆ ಮನುಕುಲದ ಉಳುವಿಗೆ ಹಾಗೂ ಬೆಳೆವಣಿಗೆಗೆ ಮಹಿಳೆಯ ಕೊಡುಗೆಯೂ ಗಣನೀಯವಾಗಿದೆ. ಸಂಸಾರ ನಿರ್ವಹಣೆ ಕಾಲಕಾಲಕ್ಕೆ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಆಹಾರ ತಯಾರಿಕೆ, ಮಕ್ಕಳ ಪಾಲನೆ, ಪೋಷಣೆ, ಕೃಷಿ, ಕುಶಲ ಕೈಗಾರಿಕೆ, ಸಣ್ಣ ಕೈಗಾರಿಕೆ ಪಶುಪಾಲನೆ ಮುಂತಾದವುಗಳ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಸಾಕಷ್ಟು ಗಂಭೀರವಾಗಿಯೇ ಇದೆ.

ಅಡುಗೆ ಮನೆಯಲ್ಲಿರುವವಳು, ಮೊಳಕಾಲ ಕೆಳಗಿನ ಬುದ್ಧಿಯವಳು ಎಂಬ ಅಪಾದನೆಯಿಂದ ಎದ್ದು ಬಂದವಳು ಮಹಿಳೆ. ಅಡುಗೆ ಮನೆಯಲ್ಲೂ ಅವಳ ಪ್ರತಿಭೆ ಮಿಂಚಿದೆ. ಪ್ರಾದೇಶಿಕ ವೈವಿಧ್ಯಮಯ ಆಹಾರ ತಯಾರಿಸುವುದರಲ್ಲಿ, ರುಚಿಕಟ್ಟಾದ ಸಾಂಪ್ರದಾಯಿಕ ಅಡುಗೆಯನ್ನು ನಿರಂತರವಾಗಿ ಮಹಿಳೆ ಮಾಡುತ್ತಾ ಬಂದ ಪ್ರಯೋಗದಿಂದ ವರ್ಷಕಾಲ ಕೆಡದಂತೆ ಶೇಖರಿಸಿ ಇಡಬಹುದಾದಂತಹ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಶಾವಿಗೆ, ಬಳಕದ ಮೆಣಸಿನಕಾಯಿ, ಖಡಕ್ ರೊಟ್ಟಿ ಮುಂತಾದವುಗಳು ಸಾಕ್ಷಿಯಾಗಿವೆ.  ಜಗತ್ತಿನ ಮೊದಲು ವೈದ್ಯೆ ತಾಯಿ, ಮೊದಲ ಸರ್ಜನ್ ಸೂಲಗಿತ್ತಿ, ಕೃಷಿ ಕಂಡು ಹಿಡಿದದ್ದು ಮಹಿಳೆ, ರಂಗೋಲಿಯಿಂದ ಗಣಿತ, ಎರಡು ಕಾಲಿನ ಮೇಲೆ ನಡೆಯುವುದನ್ನು ಕಲಿಸಿದವಳು ಮಹಿಳೆ.

ಕೊನೇಯದಾಗಿ ಒಂದು ಭ್ರೂಣದಲ್ಲಿರುವ ಹೆಣ್ಣು ಮಗು ತುಂಬಾ ಸುರಕ್ಷಿತವಾಗಿ ಹೊರಬರಬೇಕು. ಅದು ವಿಕಸಿತ ಮಹಿಳೆಯಾಗಿ ಸಮಾಜದಲ್ಲಿ ಅರಳಬೇಕಾದ ಪರಿಸರ ನಿರ್ಮಾಣವಾಗಬೇಕು. ಒಂದು ಪ್ರಜ್ಞಾವಲಯವು ಜಾಗೃತವಾಗಿ ಕೆಲಸ ಮಾಡಬೇಕು. ವಿಚಾರ ಸಂಕಿರಣಗಳು ಮಹಿಳೆಯ ಅಸ್ತಿತ್ವ ಮತ್ತು ಅಸ್ಮಿತತೆಗೆ ಪೂರಕವಾಗಿ ನಿಲ್ಲಬೇಕು. ಇದು ಕುಟುಂಬ ವಲಯದಿಂದ ಪ್ರಾರಂಭವಾಗಬೇಕು. ಕೌಟುಂಬಿಕ ದೌರ್ಜನ್ಯ ನಿಲ್ಲಬೇಕು. ಅತ್ತೆ ಸೊಸೆಗೆ ತಾಯಿಯಾಗಬೇಕು. ಹಾಗೆನೇ ಸೊಸೆ ಅತ್ತೆಗೆ ಮಗಳಾಗಬೇಕು. ಒಂದು ಕುಟುಂಬದ ಯಜಮಾನಿ ಪ್ರಬುದ್ಧಳಾಗಬೇಕು. ಅಂದಾಗ ಮಾತ್ರ ಇದು ಸಾಧ್ಯ. ಯಾಕೆಂದರೆ ಸಮಾಜದ ದೊಡ್ಡ ಘಟಕ ಕುಟುಂಬ. ಕುಟುಂಬ ವೈಚಾರಿಕವಾಗಿ ಬೆಳೆಯ ಬೇಕೆಂದರೆ ಮಹಿಳೆಯರಿಗೆ ಕೆಲವು ಅಂಶಗಳ ಅಗತ್ಯವಿದೆ.

  1. ಮಹಿಳೆಗೆ ತನ್ನ ಸ್ವಸಾಮರ್ಥ್ಯದ ಬಗೆಗೆ ಅರಿವು ಮೂಡಬೇಕು.
  2. ತಮ್ಮ ಆಯ್ಕೆಗಳ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವತಂತ್ರತೆ ಮತ್ತು ಮುಕ್ತ ಅವಕಾಶಗಳು ಬೇಕು.
  3. ಸಮಾನ ಅವಕಾಶ ಮತ್ತು ಸಂಪನ್ಮೂಲ ಹೊಂದುವ ಹಕ್ಕು.
  4. ಕುಟುಂಬ ಮತ್ತು ಸಮಾಜ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ.
  5. ಜೊತೆಗೆ ಆರ್ಥಿಕ ಸ್ವಾಲಂಬನೆ.

ಕೊನೆಯದಾಗಿ ಅಲ್ಲಮ ಪ್ರಭುಗಳ ಒಂದು ವಚನ

ಹೊನ್ನು ಮಾಯೆ ಎಂಬರು,
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು,
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು,
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ
ಕಾಣಾ ಗುಹೇಶ್ವರ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-72)

ಈ ಲೇಖನದ Youtube Link:

ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

ಪರಾಮರ್ಶನ ಗ್ರಂಥಗಳು:

  • ಹೆಣ್ಣಿನ ಸ್ಥಾನ ಮಾನ: ಶರತ್‌ಚಂದ್ರ ಚಟ್ಟೋಪಾದ್ಯಾಯ.
  • ಮಹಿಳಗೆ ಹಕ್ಕುಗಳೇನೋ ಇಡಿ: ಡಾ. ರೂಪ ಹಾಸನ.
  • ಆಯ್ದ ವೈಚಾರಿಕ ಲೇಖನಗಳ ಸಂಗ್ರಹ: ಸಂ. ಡಾ. ಈಶ್ವರಯ್ಯಮಠ.
  • ಮಹಿಳಾ ಮೀಸಲಾತಿ ಮತ್ತು ಲಿಂಗ ರಾಜಕಾರಣ: ಡಾ. ಎನ್. ಗಾಯತ್ರಿ.
  • ಭಾರತೀಯ ಮಹಿಳಾ ವಿಮೋಸಚನೆಯ ಆಂದೋಲನ: ಶ್ರೀ. ಕನಕ್ ಮುಖರ್ಜಿ.
  • ಆಧುನಿಕ ಕಾವ್ಯ ಸಂಗ್ರಹ: ಸಂ. ಡಾ. ಮಲ್ಲಿಕಾರ್ಜುನ ಮೇತ್ರಿ.
  • ಬಸವಯುಗದ ವಚನ ಮಹಾಸಂಪುಟ: ಸಂ. ಡಾ. ಎಂ. ಎಂ. ಕಲುಬುರ್ಗಿ.
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply