
ಕಲ್ಲದೇವರ ಪೂಜೆಯ ಮಾಡಿ, ಕಲಿಯುಗ[ದ]
ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.
[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-98)
ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಸಾವಿರಾರು ವರ್ಷಗಳಿಂದ ಧರ್ಮ–ದೇವರುಗಳ ಬಗ್ಗೆ ಸಮಾಜದಲ್ಲಿ ಬೇರೊರಿಂದ್ದ ಮೂಢ ನಂಬಿಕೆಗಳನ್ನೆಲ್ಲ ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯನವರು ಹೊಡೆದೊಡಿಸಲು ಪ್ರಯತ್ನ ಮಾಡುತ್ತ ವಿಚಾರ ಪರವಾದ ಮತ್ತು ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮಾಡಿಸಲು ಶ್ರಮಪಟ್ಟರು. ಧರ್ಮ–ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ–ಮೋಕ್ಷ ಕೇವಲ ಬ್ರಾಹ್ಮಣರು ಮತ್ತು ನೇಮವಂತರ ಸ್ವತ್ತಾಗಿದ್ದ ಆ ಕಾಲದಲ್ಲಿ ಭಾಷ್ಯಕಾರರು ಹೇಳಿದ್ದೆ ಸರಿ ಎನ್ನುವ ವ್ಯವಸ್ಥೆಯಲ್ಲಿ ಚೌಡಯ್ಯನವರು ಇವರೆಲ್ಲರನ್ನು ಕಟುವಾಗಿ ಟೀಕಿಸುವ ಮೂಲಕ ಬೇರೆಯದೆ ದಾರಿಯನ್ನು ತೋರಿಸಿದರು. ಚೌಡಯ್ಯನವರ ವಚನಗಳು ತುಂಬಾ ಖಾರವಾಗಿರುವುದು ಮತ್ತು ತೀಕ್ಷ್ಣವಾಗಿರುವುದು ಅವರ ಆತ್ಮಬಲವನ್ನು ಮತ್ತು ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತವೆ.
12 ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ನಡುವೆ ಪ್ರಜ್ವಲವಾಗಿ ಬೆಳಗಿದ ಶರಣರಲ್ಲಿ ಚೌಡಯ್ಯನವರೂ ಒಬ್ಬರು. ಮಾತು ಕಟುವಾದರೂ ನಿಜವನ್ನೆ ನುಡಿದ ನಿಜಶರಣ ಅಂಬಿಗರ ಚೌಡಯ್ಯನವರು ಒಂದು ರೀತಿಯಲ್ಲಿ ಒಬ್ಬ ನಿಷ್ಟೂರ ಕ್ರಾಂತಿಕಾರಿ ಶರಣರು. ಎಲ್ಲ ಶರಣರಂತೆ ಕಾಯಕ ಯೋಗಿ. ಅವರ ಕಾಯಕ ದೋಣಿ ನಡೆಸುವದು. ಈಗ ಇವರ 275 ವಚನಗಳು ನಮಗೆ ಲಭ್ಯವಾಗಿವೆ. “ಅಂಬಿಗರ ಚೌಡಯ್ಯ’ ಎಂಬ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ಚೌಡಯ್ಯನವರ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಚೌಡಯ್ಯನವರು ವಿಚಾರವಂತಹ ಹಿರಿಯರು ಹೇಳಿದ್ದಾರೆಂದು ಯಾವುದೇ ತತ್ವವನ್ನು ಕುರಡಾಗಿ ಅನುಸರಿಸುತ್ತಿರಲಿಲ್ಲ. ದಾಕ್ಷಿಣ್ಯವಿಲ್ಲದೆ ಚರ್ಚೆ ಮಾಡಿ ಮನಸ್ಸು ಒಪ್ಪಿದರೆ ಮಾತ್ರ ಅಂಗೀಕರಿಸುತ್ತಿದ್ದರು.
ಚೌಡಯ್ಯನವರು ಜನಿಸಿದ್ದು ಹಾವೇರಿ ಜಿಲ್ಲೆಯ ಚೌಡದಾನಪುರ (ಶಿವಪುರ) ದಲ್ಲಿ. ತಂದೆ ವಿರೂಪಾಕ್ಷ ಮತ್ತು ತಾಯಿ ಪಂಪಾದೇವಿ. ಚೌಡಯ್ಯನವರು ಏಕದೇವೊಪಾಸಕರು, ಇಷ್ಟಲಿಂಗ ಆರಾಧಕರು, ದೇವಾಲಯ ಗುಡಿ ಗುಂಡಾರಗಳ ವಿರೋಧಿಗಳು. ಇಷ್ಟಲಿಂಗ ಪೂಜೆ ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು. ಇದರಲ್ಲಿ ಯಾವ ಬೇಧ ಬಾವ ಇಲ್ಲ ಎಂದು ದೇಹವನ್ನೆ ದೇವಾಲಯ ಆಗಿಸಿಕೊಳ್ಳಲು ಅದು ಸಾಧನ ಎಂದು ಪ್ರತಿಪಾದಿಸಿದರು.
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-38/ವಚನ ಸಂಖ್ಯೆ-92)
ಇಷ್ಟಲಿಂಗವನ್ನು ಪೂಜಿಸಿದೆ ಬೆಟ್ಟದ ಲಿಂಗ ಅಂದರೆ ಸ್ಥಾವರ ಲಿಂಗವನ್ನು ಪೂಜಿಸುವ ಮೂಢರನ್ನು ಕಂಡ ಚೌಡಯ್ಯನವರು ಈ ರೀತಿ ಹೇಳಿದ್ದಾರೆ. ಅಂಬಿಗರ ಚೌಡಯ್ಯನವರ ವಚನಗಳು ಉಳಿದ ವಚನಕಾರರಂತೆ ಅನುಭವ ಪರವಾದ ವಚನಗಳನ್ನು ರಚಿಸಿದ್ರೂ ಅವುಗಳಲ್ಲಿ ಕಂಡ ಬರುವ ಸಮಕಾಲೀನ ಸಮಾಜ ವಿಡಂಬನೆಯ ತೀಕ್ಷ್ಣತೆ ಬೇರೆ ವಚನಕಾರರಲ್ಲಿ ಕಂಡು ಬರುವದು ವಿರಳ.
ಚೌಡಯ್ಯನವರ ವಚನಗಳ ಭಾಷೆ ವಸ್ತು ಶೈಲಿಯನ್ನು ಗಮನಿಸಿದ್ರೆ ಅವರೊಬ್ಬ ಕೆಚ್ಚೆದೆಯ, ನಿಷ್ಠೂರ, ಗ್ರಾಮ್ಯ ಮನೋಧರ್ಮದ ಒರಟು ವಚನಕಾರರು ಅಂತ ಸ್ಪಷ್ಟವಾಗುತ್ತದೆ. ಅವರು ದಯಾ ದಾಕ್ಷಿಣ್ಯಪರದವರಲ್ಲ, ಯಾರನ್ನೆ ಆಗಲಿ, ಯಾವುದನ್ನೆ ಆಗಲಿ ಟೀಕಿಸಿದೆ ಬಿಡುವುದಿಲ್ಲ. ಮೃದುವಾಗಿ ಮಾತಾಡುವದು ಅಪರೂಪ. ಮಾತಿನ ಬಹುಭಾಗ ಹರಿತವಾದದ್ದೆ.
ನಮಗೊಬ್ಬರೆಂಜಲು ಸೇರದೆಂದು,
ಶುಚಿತನದಲ್ಲಿ ಬದುಕುತ್ತೈ[ದೇ]ನೆ
ಎಂಬ ಬರಿಯ ಮಾತಿನ ರಂಜಕರು
ನೀವು ಕೇಳಿರೋ ಅಣ್ಣಗಳಿರಾ:
ನೀವು ತಂದು ಕುಡಿವ ನೀರು ಜಲಚರದೆಂಜಲು,
ಮೃಗಪಶುಪಕ್ಷಿಯ ಎಂಜಲು.
ಭಾವಿಗೆ ಹೋಗಿ ಕೈಕಾಲು ತೊಳೆದು
ಬಾಯಿ ಮುಕ್ಕಳಿಸುವಲ್ಲಿ ಮಾನವರೆಂಜಲು.
ಇಂತೀ ಹಲವೆಂಜಲ ಬೆರಸಿದ
ಆ ಎಂಜಲ ತಿಂದು ಬೆಳೆದು, ಬೆ[ಳೆ]ಸಿದ
ಆ ಎಂಜಲಿಂದ ಬೆಳೆವ ಪದಾರ್ಥಂಗಳು,
ಆ ಎಂಜಲಿಂದಾದ ಪಾಕವನು,
ನಲಿನಲಿದುಂಡು ಕುಡಿವಲ್ಲಿ
ಎಂಜಲು ಹಿಂಗಿದ ಠಾವ ತೋರಿರಣ್ಣಾ!
ಇದ ಬಲ್ಲ ಭಕ್ತರು ಸರ್ವಪದಾರ್ಥಂಗಳನು
ಶಿವಮಂತ್ರದಲೆ ಹಸ್ತಸ್ಪರ್ಶನವ ಮಾಡಿ,
ವಿಭೂತಿಯಿಂದ ಶುದ್ಧಮಾಡಿ,
ಲಿಂಗಕ್ಕೆ ಕೊಟ್ಟು ಕೊಂಬಲ್ಲಿ ಗುರುಪ್ರಸಾದವಾಯಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ಕೊಂಬಲ್ಲಿ
ಸರ್ವ ಎಂಜಲ ಹೊಲೆಯುವ ನೀಗಿದ.
ಇದನರಿಯದಿರ್ದಡೆ ಮಿಕ್ಕಿನವರೆಲ್ಲರು
ಹಲವರೆಂಜಲ ಹೊಲೆಯೊಳಗೆ ಮುಳುಗಿ ಉಂಡರೆಂದಾತ
ನಮ್ಮ ಅಂಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-167)
ಕೇಳಿರಯ್ಯ ಮಾನವರೆ ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೆ, ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭಂಜಕರು ನೀವು ಕೇಳಿರೊ, ಎಂದು ಆರಂಭವಾಗಿ “ಮೆಟ್ಟಿದ್ದ ಪಾದರಕ್ಷೆಯ ತೆಗೆದುಕೊಂಡು ಲಟಲಟನೆ ಹೊಡೆಯೆಂದ” ಹೀಗೆ ಮುಕ್ತಾಯವಾಗುತ್ತದೆ ಇವರ ವಚನಗಳ ಶೈಲಿ.
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ನಮಗೆ ಕಂಡು ಬರುವ ಸಮಾಜದ ಅವ್ಯವಸ್ಥೆಯ ಚಿತ್ರಣ ಬೇರೆ ಶರಣರ ವಚನಗಳಲ್ಲಿ ಇಷ್ಟರ ಮಟ್ಟಿಗೆ ಕಾಣದು. ಅವರ ವಚನಗಳು ಅನರ್ಥ ಸಾಧಕವಾದ ಕೊಪದಿಂದ ಹೊಮ್ಮಿದ್ದಲ್ಲ. ಸದರ್ಥ ಸಾಧಕವಾದ ಸಾತ್ವಿಕ ಕೋಪದಿಂದ ಬಂದಂತವು. ಕನ್ನಡ ಸಾಹಿತ್ಯದಲ್ಲಿ ಈ ತೆರನಾದ ದಿಟ್ಟತ ವ್ಯಗ್ರತೆ ಕಂಡು ಬಂದಿರುವುದು ಇಬ್ಬರಲ್ಲೆ ಎಂದು ತೋರುತ್ತದೆ. ಒಬ್ಬರು ಸಿಡಿಲು ನುಡಿಯ ಸರ್ವಜ್ಞ. ಇನ್ನೊಬ್ಬರು ಕೆಚ್ಚದೆಯ ವಚನಕಾರ ಅಂಬಿಗರ ಚೌಡಯ್ಯನವರು.
ಅಂಬಿಗರ ಚೌಡಯ್ಯನವರು ಅಂಬಿಗರು ಹೊಳೆ ದಾಟಿಸುವ ಕೆಲಸದ ಜೊತೆಗೆ ಮೀನು ಹಿಡಿಯುವದು ಮತ್ತು ನೀರಿಗೆ ಸಂಭಂದಿಸಿದ ಕೆಲಸಗಳನ್ನು ಮಾಡುತ್ತಿದ್ದರು.
ಅಂಬಿಗ ಅಂಬಿಗ ಎಂದು ಕುಂದ ನುಡಿಯದದಿರಿ,
ನಂಬಿದರೆ ಒಂದೆ ಹುಟ್ಟಿನಲ್ಲಿ ಕಡೆಯ
ಹಾಯಿಸುವವನಂಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-9/ವಚನ ಸಂಖ್ಯೆ-17)
ಎಂಬ ಈ ವಚನದಲ್ಲಿ ಅಂಬಿಗ ಅಂದರೆ ಯಾರು ಅಂತ ವಿವರಿಸ್ತಾರೆ. ತಮ್ಮ ಕುಲವನ್ನು ಕಾಯಕವನ್ನು ಕುರಿತು ಹಗುರವಾಗಿ ಮಾತಾಡುವವರಿಗೆ ಈ ರೀತಿ ಹೇಳುತ್ತಾರೆ.
ಕಲ್ಯಾಣದಲ್ಲಿ ವೃತ್ತಿ ಪರರಾದ ಕಾಯಕ ಜೀವಿಗಳ ಜೊತೆ ಬಸವಣ್ಣನವರ ಪರಿಕಲ್ಪನೆಯ ಹೊಸ ಸಮಾಜದ ನಿರ್ಮಾಣದಲ್ಲಿ ಸೇರಲು ಕಲ್ಯಾಣಕ್ಕೆ ಬರುತ್ತಾರೆ. ಅನುಭವ ಮಂಟಪದ ಚಿಂತನಾ ಗೋಷ್ಠಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ತನ್ನ ಅಂಬಿಗ ವೃತ್ತಿಯನ್ನು ಕಲ್ಯಾಣದ ತ್ರಿಪುರಾಂತಕೇಶ್ವರ ಕೆರೆಯಲ್ಲಿ ನಡೆಸುತ್ತಾರೆ. ಮುಂದೆ ಕಲ್ಯಾಣ ಕ್ರಾಂತಿಯಾದ ನಂತರ ಉಳಿದ ಶರಣರು ಎಲ್ಲ ಕಡೆ ಹಂಚಿ ಹೋಗುತ್ತಾರೆ. ಚೌಡಯ್ಯನವರು ಚನ್ನಬಸವಣ್ಣನವರೊಟ್ಟಿಗೆ ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಉಳವಿಗೆ ಹೋಗಿ ನಂತರ ತನ್ನ ಊರಾದ ಶಿವಪುರಕ್ಕೆ ಬರುತ್ತಾರೆ.
ಚೌಡಯ್ಯನವರ ಪತ್ನಿಯ ಬಗ್ಗೆ ತಿಳಿದು ಬಂದಿಲ್ಲ. ಆದರೆ ಪುರವಂತನೆಂಬುವ ಮಗ ಇರುವುದು ತಿಳಿದು ಬಂದಿದೆ. ಮುಂದೆ ಈತನು ಪುರವಂತ ಎಂಬ ಸಂಘಟನೆ ಹುಟ್ಟು ಹಾಕಿ ಅದರ ಮುಖಾಂತರ ಸುತ್ತ ಮುತ್ತಲಿನ ಊರುಗಳಲ್ಲಿ ಹಬ್ಬ, ಜಾತ್ರೆ ಸಮಯದಲ್ಲಿ ಶರಣರ ಮತ್ತು ತನ್ನ ವಚನಗಳ ಮುಖಾಂತರ ಜನ ಜಾಗೃತಿ ಮೂಡಿಸುತ್ತಿದ್ದರು.
ಅಂಬಿಗರ ಚೌಡಯ್ಯನವರು ಧೀರ್ಗಾಯುಷಿ. 12 ನೆಯ ಶತಮಾನದ ಮಧ್ಯ ಭಾಗದಿಂದ 13 ನೇ ಶತಮಾನದ ಕಾಲದಲ್ಲಿ ಬದುಕಿದ್ದರು. ವಯಸ್ಸು ನೂರರ ಮೇಲೆ ದಾಟಿದಾಗ ಹೊಳೆ ದಾಟಿಸುವ ಕಾಯಕ ಮಾಡಲಾದಾಗ ಚೌಡಯ್ಯನವರು ಸಮಾಧಿಸ್ಥರಾಗುತ್ತಾರೆ. ಅವರ ಸಮಾಧಿ ಶಿವ ಮಠದ ಮುಕ್ತೇಶವಾರ ದೇವಸ್ಥಾನದ ಹಿಂದೆ ತುಂಗಭದ್ರಾ ನದಿ ದಡದಲ್ಲಿ ಇದೆ. ಇದೆ ಶಿವಪುರ ಮುಂದೆ ಚೌಡದಾನಪುರವಾಗಿ ಹೆಸರಾಗುತ್ತದೆ.
ಅಂಬಿಗೇರ ಚೌಡಯ್ಯನವರ ವಿಷೇಶತೆಗಳು:
ನೇರ ನಿಷ್ಠೂರಪರ ವಚನಗಳ ರಚನೆ – ಚೌಡಯ್ಯನವರ ವಚನಗಳು ಸರಳ ಮತ್ತು ನೇರ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಇರುತ್ತವೆ.
ಸಮಾಜ ಸುಧಾರಣೆ – ಅವರು ಜಾತಿವಾದ, ಮೂಢನಂಬಿಕೆ ಮತ್ತು ಅಸಮಾನತೆಯ ವಿರುದ್ಧ ತೀವ್ರವಾಗಿ ಹೋರಾಟ ಮಾಡಿದವರು.
ಕಾಯಕದ ಮಹತ್ವ – ಕಾಯಕವೆ ಕೈಲಾಸ ಎಂಬ ಶರಣರ ತತ್ವವನ್ನು ಅಳವಡಿಸಿಕೊಂಡು ಕಾಯಕದ ಮಹತ್ವವನ್ನು ತಮ್ಮ ವಚನಗಳಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.
ಜಾತಿ ವ್ಯವಸ್ಥೆ – ಜಾತಿ ವ್ಯವಸ್ಥೆ ಕಟ್ಟುವ ಕೆಲಸ ಮಾಡುವವರನ್ನು ತಮ್ಮ ವಚನಗಳಲ್ಲಿ ತರಾಟೆಗೆ ತಗೆದುಕೊಂಡಿದ್ದಾರೆ.
ಧರ್ಮ – ಧರ್ಮದ ಹೆಸರಿನಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ಖಂಡಿಸಿದ್ದಾರೆ. ಸಮಾನತೆ ಮತ್ತು ಕಾಯಕ ಮನುಷ್ಯರೆಲ್ಲರೂ ಸಮಾನರು ಮತ್ತು ಕಾಯಕವೇ ಧರ್ಮ ಎಂಬ ತತ್ವವನ್ನು ತಮ್ಮ ವಚನಗಳು ಬಲವಾಗಿ ಪ್ರತಿಪಾದಿಸಿದ್ದಾರೆ.
ವೇದವನೋದಿದವರು ವಿಧಿಗೊಳಗಾದರಲ್ಲದೆ
ದೇವರಿಹರವಾವನರಿದಿಪ್ಪುದಿಲ್ಲ.
ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ
ಸದ್ಗುರುವನರಿದುದಿಲ್ಲ.
ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ
ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ.
ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ
ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ.
ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ
ಇವರಿಗೆ ಲಿಂಗವು ಕಾಣಿಸದೆಂದಾತ
ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-94/ವಚನ ಸಂಖ್ಯೆ-251)
ವೇದ ಶಾಸ್ತ್ರ ಆಗಮ ಪುರಾಣಗಳನ್ನೆಲ್ಲ ಓದಿದವರಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗದೆ, ದೇವರ ಠಾವ ಪ್ರಾಪ್ತಿಯಾಗದ ಸಂದೇಹಿಗಳಾಗಿ ನಿಂತು ಬಿಡುತ್ತಾರೆ. ಏಕೆಂದರೆ ವೇದ ಶಾಸ್ತ್ರ ಆಗಮ ಪುರಾಣಗಳು ದೇವರನ್ನು ಅಥವಾ ಪರವಸ್ತುವನ್ನು ಕಂಡಿಲ್ಲ. ಹೀಗಾಗಿ ಇವುಗಳ ಅಧ್ಯಯನದಿಂದ ಪರವಸ್ತುವ ಪ್ರಾಪ್ತಿಯ ಅನುಭವ ಸಾಧ್ಯವಿಲ್ಲ ಎಂಬುದು ಚೌಡಯ್ಯನವರು ಸ್ಪಷ್ಟ ಅಭಿಪ್ರಾಯ. ನಾಲ್ಕು ವೇದವ ನೋಡಿದ ನಂತರ ಮನೆಯ ಬೋನವ ಶಿವಭಕ್ತರ ಮನೆಯ ನಾಯಿ ಮೂಸಿ ನೋಡಲಾಗದು ಎಂದು ವೇದಗಳ ಓದಿನ ನಿಷ್ಪಲತೆಯನ್ನು ಕಟುವಾಗಿ ವಿಡಂಬಿಸುತ್ತಾರೆ.
ಬಡತನಕ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕುವ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು,
ಶಿವ ಚಿಂತೆ ಇದ್ದವರನೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-73/ವಚನ ಸಂಖ್ಯೆ-193)
ಚೌಡಯ್ಯನವರ ಅತ್ಯುತ್ತಮ ವಚನಗಳಲ್ಲಿ ಇದೂ ಒಂದು. ಸಮಾಜದಲ್ಲಿ ಮನುಷ್ಯನು ಒಂದಿಲ್ಲೊಂದು ಬಗೆಯಲ್ಲಿ ಚಿಂತೆ ಮಾಡುತ್ತ ಭವಸಾಗರದಲ್ಲೆ ಮುಳುಗಿರುತ್ತಾನೆ. ಶಿವನ ಚಿಂತೆನೆಯಲ್ಲಿ ಕಾಲ ಕಳೆಯುತ್ತಿರುವ ಓರ್ವ ವ್ಯಕ್ತಿಯೂ ಕೂಡ ನನಗೆ ದೊರೆಕಿಲ್ಲವೆಂದು ವಿಷಾದ ವ್ಯಕ್ತ ಪಡಿಸುತ್ತಾರೆ. ಅವರು ತಮ್ಮ ಇನ್ನೊಂದು ವಚನದಲ್ಲಿ ಸಮಾಜದಲ್ಲಿ ಕಪಟಿಗಳು ಯಾರು ಅಂತ ಈ ರೀತಿ ಹೇಳುತ್ತಾರೆ.
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ, ಕೂಳು ಪ್ರಸದವಲ್ಲ,
ಹೌದೆಂಬುವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತಗೆದುಕೊಂಡು
ಮಾಸಿ ಕಡಿಮೆ ಇಲ್ಲದೆ ತೂಗಿ ತೂಗಿ ಟೊಕಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-89)
ಇಂತಹ ನೇರ ನಿಷ್ಟುರ ಮಾತುಗಳಿಗೆ ಹೆಸರಾದ ಅಂಬಿಗರ ಚೌಡಯ್ಯನವರ ಜಯಂತಿ ಇಂದು ಅಂದರೆ ಕಾರ ಹುಣ್ಣಿಮೆಯಂದು ಇದೆ. ಅವರನ್ನು ಮತ್ತು ಅವರ ತತ್ವಗಳನ್ನು ತಿಳಿದುಕೊಳ್ಳುವುದಕ್ಕೆ ಬರೆದ ಪುಟ್ಟ ಲೇಖನ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in