
ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ.
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು
ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.
ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲು
ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ಬಸವಣ್ಣ!
ಕನಲಿದಂಕೆಗೆ ನಿಂದು ನೋಡಲು
ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ
ಅಡಗವೆ ಬಸವಣ್ಣಾ?
ಅದನೆಂತು ಕೊಡಬಹುದು, ಅದನೆಂತು ಕೊಳಬಹುದು?
ನಮ್ಮ ಗುಹೇಶ್ವರಲಿಂಗಕ್ಕೆ
ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.
(ಸಮಗ್ರ ವಚನ ಸಂಪುಟ: ಎರೆಡು-2021/ಪುಟ ಸಂಖ್ಯೆ-231/ವಚನ ಸಂಖ್ಯೆ-735)
ಪ್ರಭುವಿನ ಭಕ್ತಿ ಗುರು-ಶಿಷ್ಯರ ಭಕ್ತಿಯದು. ಬಸವಣ್ಣನವರ ಒಡನಾಟದಲ್ಲಿ ಭಕ್ತಿಯ ತೀವ್ರತೆಯ ಆನಂದವಾಗಿದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು ಜಲ ತತ್ವವನ್ನು ಪವಿತ್ರೀಕರಿಸುವ ಆಶಯ ಒಂದೆಡೆಯಾದರೆ ಇನ್ನೊಂದೆಡೆ ಜಲವನ್ನು ಆಹ್ವಾನಿಸಿ ಶುದ್ಧಗೊಳಿಸುವ ಆಧ್ಯಾತ್ಮಿಕ ಭಾವವಾಗಿದೆ. ಉದಕ ನಮ್ಮ ಸನಾತನ ಧರ್ಮದಲ್ಲಿ ಭಕ್ತಿಯ ಸಾಮರಸ್ಯ ಮತ್ತು ಆಧ್ಯಾತ್ಮದ ಸಮೃದ್ಧತೆಯನ್ನು ಹೆಚ್ಚಿಸುವ ಶಕ್ತಿಯಾಗಿದೆ.
ಜಲ ನಮ್ನ ಬದುಕಿಗೆ ಚೈತನ್ಯದ ಚಿಲುಮೆಯಾಗಿದೆ. ನೀರಿನ ಬರ ತೀವ್ರವಾಗಿ ಕಾಡಿದಾಗ ಪ್ರಕೃತಿಯ ವಿಕೋಪಕ್ಕೆ ಕಾರಣವಾಗುತ್ತದೆ. ಕೃಷಿ ಬದುಕಿನ ಮೇಲೆ ಪರಿಣಾಮ ಬೀರುವುದರ ಜೊತೆಗೆ ಆರ್ಥಿಕತೆಗೆ ಹಾನಿಯಾಗುತ್ತದೆ. ಮಳೆಯ ಪ್ರಮಾಣ ದುರ್ಬಲ ವಾಗಿದ್ದರೂ ಬರ ಕಾಡುತ್ತದೆ. ಈ ಜಲ ಶಕ್ತಿಗಿಂತ ಪ್ರಕೃತಿಯ ಶಕ್ತಿಯಲ್ಲಿ ಬಸವಣ್ಣನಿದ್ದಾನೆ ಎಂಬ ನಿವೇದನೆ ಅಲ್ಲಮ ಪ್ರಭುಗಳದ್ದಾಗಿದೆ. ಹೀಗಾಗಿ ಪ್ರಭು ದೇವರು ಬಸವಣ್ಣನವರನ್ನು ಶಿವನಾಗಿ ಕಂಡಿದ್ದಾರೆ. ಜಲ ತತ್ವದಲ್ಲಿ ಬಸವನೆಂಬ ಶಿವನಿರುವಾಗ “ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ” ಎಂದು ಬಸವಣ್ಣನವರ ಸ್ಥೂಲ ಪಾದಗಳಿಗಿಂತ ಸೂಕ್ಷ್ಮ ಪಾದಗಳನ್ನು ಧರೆಯ ಮೇಲಿಟ್ಟಾಗ ಮಳೆಯೋ ಮಳೆಯಾಗಿದೆ. ಏಕೆಂದರೆ ಬಸವಣ್ಣನವರ ಪಾದಗಳಿಗಿಂತ ಪಾದೋದಕ ಸೇವೆಯನ್ನು ಆತ್ಮೀಕರಿಸುತ್ತಾನೆ. ತನ್ನ ಮನದಲ್ಲಿ ಬಸವನೆಂಬ ಮೂರ್ತಿಯನ್ನು ಗುಹೇಶ್ವರ ಲಿಂಗದಲ್ಲಿ ಕಾಣುತ್ತಾನೆ.
ಶರಣರ ಗುರು ಪಾದೋದಕವನ್ನು ಕ್ರಿಯಾ ಪಾದೋದಕವನ್ನಾಗಿಸಿ ಕೊಂಡಾಗ ಮಾತ್ರ ಶರಣನಾಗಲು ಸಾದ್ಯವಾಗುತ್ತದೆ.
ಭಕ್ತಿಯಲ್ಲಿ ಬಸವಣ್ಣನ ಸಂಗದಲ್ಲಿ ಅಣ್ಣನನ್ನು ತಾಯಿಯಂತೆ ಗುರುವಿನಂತೆ ಗೌರವಿಸಿದ್ದನು. ಮಿತ್ರನಾಗಿ ಸಖ ಭಕ್ತನಾಗಿದ್ದನು. ತನ್ನ ಮಾನಸಿಕ ದೇವರಾದ ಸಂಗನ ಬಸವಣ್ಣನನ್ನು ಪ್ರಾಣಲಿಂಗದಲ್ಲಿರಿಸಿ ಆನಂದವನ್ನು ವ್ಯಕ್ತಪಡಿಸಿದ್ದನ್ನು ಕಾಣಬಹುದು. ಬಸವ ಮತ್ತು ಅಲ್ಲಮರದು ಗುರು ಶಿಷ್ಯರ ಸಂಬ್ರಮದ ಆಕರ್ಷಣೆಯನ್ನು ಕಾಣಬಹುದು. ಬಸವನೆಂಬ ದಿವ್ಯ ಚೇತನ ಪ್ರಭುವೆಂಬ ಭಕ್ತನ ಜ್ಞಾನ ಪ್ರಸಾದವೇ ಪಾದೋದಕವಾಗಿದೆ.
ಧರೆಯ ತಾಗಿದ ಪಾದವ ದಿಗಿಲನೆ ಎತ್ತಲು ಬುಗಿಲನೆ ಉದಕವೆದ್ದು ನಿಮ್ಮ ಉರಸ್ಥಲಕ್ಕೆ ಬಾರದೆ … ಪಂಚಭೂತಗಳಲ್ಲಿ ಒಂದಾದ ಜಲತತ್ವ ಪ್ರಕೃತಿಯ ತತ್ವವಾಗಿದೆ. ಪ್ರಕೃತಿ ತತ್ವದಲ್ಲಿ ಶಿವತತ್ವ ಅಡಗಿದರೂ ಈ ಪಂಚಭೂತಗಳಲ್ಲಿ ಬಸವಣ್ಣನವರನ್ನು ಕಾಣುತ್ತಾನೆ. ಪ್ರಭುವಿಗೆ ಅಣ್ಣನೇ ಪ್ರಕೃತಿಯ ಆತ್ಮ. ಶಿವನ ಸದ್ಯೋಜಾತ ಮುಖದಿಂದ ಭೂಮಿ ಹುಟ್ಟಿತು. ವಾಮ ದೇವನ ಮುಖದಿಂದ ನೀರು ಅಘೋರ ಮುಖದಿಂದ ಅಗ್ನಿ ತತ್ಪುರುಷ ಮುಖದಿಂದ ವಾಯು ಈಶಾನ ಮುಖದಿಂದ ಆಕಾಶವಾಗಿದೆ. ಈ ಶಿವ ತತ್ವದ ಚೌಕಟ್ಟಿನಲ್ಲಿ ತನಗೆ ಬೇಕಾಗುವ ಸ್ವಾತಂತ್ರ್ಯವನ್ನು ಕಾಣುತ್ತಾರೆ ಪ್ರಭು.
ಅಲ್ಲಮ ಪ್ರಭುಗಳಿಗೆ ಬಸವಣ್ಣ ನಿರಾಕಾರ ತತ್ವ. ಪಂಚಭೂತಗಳಲ್ಲಿ ಒಂದಾದ ಶೂನ್ಯತತ್ವ. ಸಪ್ತ ಸಾಗರಗಳೆಲ್ಲವೂ ನಿಮ್ಮ ಕಿರುಬೆರಳಲ್ಲಿ ಅಡಗಿವೆ ಎಂಬ ವಾಸ್ತವತೆ ಆಧ್ಯಾತ್ಮದ ಒಳ ನೋಟಗಳ ಅಭಿಮಾನ, ಅನುಭಾವದ ಮಾತುಗಳಾಗಿವೆ. ಬಸವಣ್ಣನವರ ಸೂಕ್ಷ್ಮ ಪಾದಗಳಲ್ಲಿ ಪರುಷ ಗುಣದ ರಹಸ್ಯವಡಗಿದೆ. ಹೀಗಾಗಿ ಪಾದಗಳ ಪೂಜೆಗಿಂತ ಪಾದೋದಕ ಸೇವೆ ಪ್ರಭುವಿಗೆ ತೃಪ್ತಿ ಮತ್ತು ಆನಂದವದು. ಶಿವಮಯವಾದ ಈ ದೇಹದಲ್ಲಿ ಬಸವನೆಂಬ ದೇವರು ಗುಹೇಶ್ವರ ಲಿಂಗದಲ್ಲಿದ್ದಾನೆ. ಭುವಿಯ ಮೇಲೆ ಉದಕದ ಬರವಾದಾಗ ಪಾದೋದಕ ಪೂಜೆಯ ಸ್ವೀಕಾರ ಭಾವ ಶರಣ ಸಂಸ್ಕೃತಿಯ ಅರಾಧನಾ ಭಾವವಾಗಿದೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in