
ಸೃಷ್ಟಿಯ ಪ್ರತಿಯೊಂದು ವಸ್ತು ಮತ್ತು ಜೀವಿಯೂ ‘ಪರಸ್ಪರಾವಲಂಬನ’ ಸಿದ್ಧಾಂತದ ಮೂಲಕವೇ ತಮ್ಮ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತವೆ ಮತ್ತು ಆ ಮೂಲಕವೇ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತವೆ. ಇದು ವೈಜ್ಞಾನಿಕ ಸತ್ಯ. ಹೀಗೆ ಪರಸ್ಪರ ಅವಲಂಬಿತವಾಗುವ ವಸ್ತು ಮತ್ತು ಜೀವಿಗಳ ಸಂಬಂಧದಲ್ಲಿ ಮುಖ್ಯವಾಗಿ ಪ್ರವೃತ್ತವಾಗುವುದು ಅವುಗಳಲ್ಲಿನ ಪೂರಕ (Complimentary) ಗುಣ ಮತ್ತು ಪರಸ್ಪರ ಹೊಂದಿಕೊಳ್ಳುವ (Compatibility) ಸ್ವಭಾವ. ಅಂಥ ಸಂಬಂಧ ಕುದುರಿದಾಗ ಮಾತ್ರ ಅಪೇಕ್ಷಿತ ಮತ್ತು ನಿರೀಕ್ಷಿತ ಪರಿಣಾಮ ದೊರೆಯಲು ಸಾಧ್ಯ. ಪರಸ್ಪರಾವಲಂಬನದ ಈ ಸಂಬಂಧವು ಹೊಸ ಸೃಷ್ಟಿಯ ಮೂಲವೂ ಹೌದು. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ ಐನ್ಸ್ಟಿನ್ನ ‘ಸಾಪೇಕ್ಷ ಸಂಬಂಧ’ (Theory of relativity) ಸಿದ್ಧಾಂತದ ಹಿನ್ನೆಲೆಯಲ್ಲಿ ಕೂಡ ಈ ಸತ್ಯ ಸಾಬೀತಾಗುವಂಥದ್ದು.
ಪರಸ್ಪರಾವಲಂಬನದ ಈ ವೈಜ್ಞಾನಿಕ ಸಿದ್ಧಾಂತವು ಭೌತಜಗತ್ತಿನ ಹಾಗೆಯೇ, ಮಾನಸಿಕ ಮತ್ತು ಆನುಭಾವಿಕ ನೆಲೆಗಳಲ್ಲೂ ಪ್ರವರ್ತಿತವಾಗುತ್ತದೆ. ಇಂಥ ಈ ಸಿದ್ಧಾಂತವನ್ನು ಕನ್ನಡ ವಚನಕಾರರು ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ತಮ್ಮ ಪಾರಂಪರಿಕ ಜ್ಞಾನದ ಆಧಾರದಿಂದ ಅರಿತಿದ್ದರು ಮತ್ತು ಅದನ್ನು ಪ್ರಾಯೋಗಿಕವಾಗಿ ತೋರಿಸಿಯೂ ಕೊಟ್ಟರು. ಶರಣೆ ಮೋಳಿಗೆ ಮಹಾದೇವಿಯವರ ಒಂದು ವಚನ ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಜನರೇ ಹೆಚ್ಚಾಗಿದ್ದ ಆ ಕಾಲಘಟ್ಟದಲ್ಲಿ, ಶರಣರು, ಅದರಲ್ಲೂ ಮೋಳಿಗೆ ಮಹಾದೇವಿಯಂಥ ಮಹಿಳೆ ಈ ವಿಷಯ ಕುರಿತು ಪ್ರಾಯೋಗಿಕ ಸತ್ಯದ ಮಾತುಗಳನ್ನು ಹೇಳಿದ್ದು ಅಚ್ಚರಿ ಹುಟ್ಟಿಸುತ್ತದೆ. ಈ ಕ್ರಮ ಪ್ರಯೋಗಶಾಲೆಯ ಪರಿಣಾಮವಾಗಿರಲಿಕ್ಕಿಲ್ಲ. ಆದರೆ, ಅದಕ್ಕೆ ಅವರ ಖಚಿತ ಅರಿವು ಮತ್ತು ತರ್ಕಸತ್ಯದ ಹಿನ್ನೆಲೆಯಿದೆ. ಇಲ್ಲಿದೆ ಆ ವಚನ-
ನೀರು ನೆಲನಿಲ್ಲದೆ ಇರಬಹುದೆ?
ಬೀಜ ನೆಲೆಯಿಲ್ಲದೆ ಹುಟ್ಟಬಲ್ಲುದೆ?
ಜ್ಞಾನ ಕ್ರೀಯೆಯಿಲ್ಲದೆ ಅರಿಯಬಹುದೆ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ?
ಇಂತೀ ಕ್ರೀ ಜ್ಞಾನ ಸಂಬಂಧಸ್ಥಲಭಾವ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಉಭಯಸ್ಥಳಭೇದ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-423 / ವಚನ ಸಂಖ್ಯೆ-1174)
ನೀರು ಸ್ವತಂತ್ರ ವಸ್ತು ನಿಜ. ಆದರೆ, ಅದರ ಅಸ್ತಿತ್ವಕ್ಕೆ ಒಂದು ಖಚಿತ ನೆಲೆ ಬೇಕೇ ಬೇಕು. ನೆಲ ಅಥವಾ ಆ ಬಗೆಯ ಯಾವುದೋ ಒಂದು ಪಾತಳಿಯ ಮೇಲೆಯೇ ಅದು ತನ್ನ ಇರುವಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ. ಇದು ಭೌತಸತ್ಯ. ಅದೇ ರೀತಿ, ಬೀಜವೊಂದು ಮೊಳಕೆಯೊಡೆದು, ಬೆಳೆಯಲು ಭೂಮಿ ಅಗತ್ಯ. ಭೂಮಿಯಷ್ಟೇ ಅಲ್ಲ; ಅದರ ಜೊತೆಗೆ ನೀರು, ಶಾಖ, ಗೊಬ್ಬರದಂಥ ಇತರ ಪರಿಕರಗಳೂ ಬೇಕು. ಇವೆಲ್ಲವುಗಳಲ್ಲಿ ಪರಸ್ಪರ ಪೂರಕ ಮತ್ತು ಹೊಂದಾಣಿಕೆಯ ಸಂಬಂಧ ಕುದುರಿದಾಗ ಮಾತ್ರ ಅದು ಹುಟ್ಟಿ, ಬೆಳೆಯುತ್ತದೆ. ಪರಸ್ಪರಾವಲಂಬನ ಸಿದ್ಧಾಂತದ ಸೂಕ್ತ ಉದಾಹರಣೆಗಳಿವು.
ಇಂಥ ವೈಜ್ಞಾನಿಕ ಪ್ರಮೇಯವನ್ನೇ ಮನುಷ್ಯನ ಭಾವಲೋಕದ ಜ್ಞಾನ ಮತ್ತು ಅದರ ಪರಿಣಾಮವಾದ ಕ್ರಿಯೆಯ ನೆಲೆಗೂ ವಿಸ್ತರಿಸುವ ಶರಣೆ ಮೋಳಿಗೆ ಮಹಾದೇವಿಯವರು, ಅವೆರಡೂ ಹಾಗೆ ಪೂರಕ ಸಂಬಂಧದಲ್ಲಿ ಕ್ರಿಯೆಗೊಳಗಾದರೆ ಮಾತ್ರ ಅರಿವಿಗೆ ನಿಲುಕಲು ಸಾಧ್ಯವೆಂಬ ಸೂಕ್ಷ್ಮ ವಿಚಾರವನ್ನು ಇಲ್ಲಿ ಪ್ರತಿಪಾದಿಸುತ್ತಾರೆ. ಬರೀ ಜ್ಞಾನವೊಂದೇ ಇದ್ದರೆ ಸಾಲದು, ಅದು ಕ್ರಿಯೆಯ ರೂಪ ಪಡೆದಾಗಲೇ ಅದಕ್ಕೆ ನಿಜವಾದ ನೆಲೆ-ಬೆಲೆ. ಹೀಗೆ ಜ್ಞಾನದ ಅಸ್ತಿತ್ವ ಕ್ರಿಯೆಯಲ್ಲಿಯೂ, ಕ್ರಿಯೆಯ ಅಸ್ತಿತ್ವ ಜ್ಞಾನದಲ್ಲಿಯೂ ಇದ್ದು, ಅವು ಎರಡೂ ಪೂರಕ ನೆಲೆಯಲ್ಲಿ ಹೊಂದಿಕೊಂಡಾಗ ಮಾತ್ರ ನಿರ್ದಿಷ್ಟ ಪರಿಣಾಮ ದೊರಕುತ್ತದೆ. ಈ ಕಾರಣಕ್ಕಾಗಿಯೇ ಶರಣರು ‘ಜ್ಞಾನದಲರಿದಡೇನಯ್ಯಾ, ಕ್ರಿಯೆಯಾಚರಿಸದನ್ನಕ್ಕ’ ಎಂದು ಎರಡಕ್ಕೂ ಸಮಾನ ಮಹತ್ವ ಕೊಟ್ಟರು. ಜ್ಷಾನವು ಕ್ರಿಯೆಯಾಗಿ ಪರಿವರ್ತಿತವಾಗಬೇಕೆಂಬುದೇ ಅವರ ಗಾಢ ಅಪೇಕ್ಷೆ. ಅದನ್ನೇ ಶರಣೆ ಮೋಳಿಗೆ ಮಹಾದೇವಿಯವರು ‘ಜ್ಞಾನ ಕ್ರೀಯೆಯಿಲ್ಲದೆ ಅರಿಯಬಹುದೆ?’ ಎಂಬ ಪ್ರಶ್ನೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಸಿದ್ಧಾಂತವನ್ನು ಮನೋವೈಜ್ಞಾನಿಕ ಕ್ಷೇತ್ರಕ್ಕೂ ಒಯ್ಯುವ ಅವರು ‘ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ?’ ಎನ್ನುತ್ತ, ಮನಸ್ಸಿನ ವಿವಿಧ ಪದರುಗಳು ಒಂದಕ್ಕೊಂದು ಪೂರಕ ಸಂಬಂಧದಲ್ಲಿ ಕೂಡಿದಾಗಲೇ ವಸ್ತುವಿನ ಗ್ರಹಿಕೆ ಸಾಧ್ಯವಾಗುತ್ತದೆಯೆಂದು ಪ್ರತಿಪಾದಿಸುತ್ತಾರೆ. ಚಿತ್ತ, ಅಂದರೆ ಮನಸ್ಸು, ಚಿತ್ತುವಿಲ್ಲದೆ, ಅಂದರೆ ಮೂಲ ಮನಸ್ಸಿನಲ್ಲಿ ನೆಲೆಗೊಳ್ಳದೆ ಎದುರಿಗಿನ ವಸ್ತುವನ್ನು ಗುರುತಿಸಲಾರದು. ಅವೆರಡೂ ಒಂದಾಗುವುದೇ ಇಲ್ಲಿನ ಸಾಪೇಕ್ಷ ಸಂಬಂಧ.
ಈ ಮೂರೂ ಉದಾಹರಣೆಗಳನ್ನು ಕೊಟ್ಟು ನಂತರ ಅವರು, ‘ಇಂತೀ ಕ್ರೀ ಜ್ಞಾನ ಸಂಬಂಧಸ್ಥಲಭಾವ’ ಎಂಬ ಮಾತಿನ ಮೂಲಕ ಇವೆಲ್ಲವೂ ‘ಸಂಬಂಧಸ್ಥಲಭಾವ’ ದಿಂದಲೇ ಪರಿಣಾಮ ಕೊಡುತ್ತವೆ ಎಂಬ ನಿರ್ಣಯಕ್ಕೆ ಬರುತ್ತಾರೆ. ಇಲ್ಲಿ ವಿಶೇಷವೆಂದರೆ, ಯಾವುದೇ ಸಂಬಂಧದ ಕುದುರುವಿಕೆಗೂ ಅರಿವು ಮತ್ತು ಆ ಅರಿವನ್ನಾಧರಿಸಿದ ಕ್ರಿಯೆ ಅಗತ್ಯ ಎಂಬುದು. ಅಂದರೆ, ಸಂಬಂಧ ಹೊಂದುವ ವಸ್ತು-ಜೀವಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಗುಣ ಇರಲೇಬೇಕೆಂಬುದು ಇದರ ಅರ್ಥ. ಅದು ಇಲ್ಲದೇ ಹೋದರೆ ಆ ಸಂಬಂಧ ಕುದುರುವುದೂ ಇಲ್ಲ, ಹಾಗೂ ಅದರ ಫಲ-ಪರಿಣಾಮಗಳೂ ನಿರೀಕ್ಷಿತ ಮಟ್ಟದಲ್ಲಿ ದೊರೆಯುವುದೂ ಇಲ್ಲ. ಆಧುನಿಕ ವಿಜ್ಞಾನಕ್ಷೇತ್ರದ ‘ಸಾಪೇಕ್ಷ ಸಂಬಂಧ’ ದ ಮೂಲ ಆಶಯವೂ ಇದೆ.
ವಿಭಿನ್ನ ವಸ್ತು, ಜೀವಿ ಮತ್ತು ಸಂವೇದನೆಗಳ ಅಸ್ತಿತ್ವವು ಪರಸ್ಪರಾವಲಂಬನದಲ್ಲಿಯೇ ಇರುತ್ತದೆ ಎಂಬ ಜ್ಞಾನವು ನಮ್ಮ ಅರಿವಿಗೆ ಬರುವುದು ಅದು ಕ್ರಿಯೆಯ ರೂಪ ಪಡೆದಾಗಲೆ. ಜ್ಞಾನಕ್ಕೆ ಕ್ರಿಯೆ ಮತ್ತು ಕ್ರಿಯೆಗೆ ಜ್ಞಾನ ಪರಸ್ಪರ ಅಸ್ತಿತ್ವದ ಮೂಲ ನೆಲೆಯಾಗಿವೆ ಎಂಬುದೇ ಇಲ್ಲಿರುವ ಸತ್ಯ. ಇದನ್ನೇ ‘ಕ್ರೀಜ್ಞಾನ ಸಂಬಂಧಸ್ಥಲಭಾವ’ ಎಂದು ಹೇಳುತ್ತ, ವಚನದ ಕೊನೆಯ ಪಂಕ್ತಿಯಲ್ಲಿ ‘ಉಭಯಸ್ಥಲಭೇದ’ ಎಂಬ ವಿಶಿಷ್ಟ ಶಬ್ದದ ಮೂಲಕ ಧ್ವನಿಸುತ್ತಾರೆ ಶರಣೆ ಮೋಳಿಗೆ ಮಹಾದೇವಿಯವರು.
ಇಲ್ಲಿಂದ ಮುಂದೆ ಬರುವುದೇ ಅನುಭಾವದ ಲೋಕದಲ್ಲಿ ಈ ಸಿದ್ಧಾಂತವು ಕ್ರಿಯಾಶೀಲವಾಗುವ ಬಗೆಗಿನ ವಿಚಾರ. ಉಭಯಸ್ಥಳಭೇದದ ಈ ಸಂಬಂಧವು ನಿಃಕಳಂಕ ಮಲ್ಲಿಕಾರ್ಜುನ ಮತ್ತು ಭಕ್ತನಿಗೂ ಅನ್ವಯಿಸುವಂಥದಾಗಿದ್ದು, ಆ ಮೂಲಕವೇ ಅವರಲ್ಲಿ ‘ಸಂಬಂಧಸ್ಥಲಭಾವ’ ವು ಏರ್ಪಡುತ್ತದೆಯೆಂಬುದು ಮೋಳಿಗೆ ಮಹಾದೇವಿಯ ಅಭಿಮತ. ‘ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಉಭಯಸ್ಥಳಭೇದ’ ಎಂಬ ಮಾತಿನ ಮೂಲಕ ಅದನ್ನು ಸ್ಪಷ್ಟಪಡಿಸಿ, ಆ ಮೂಲಕವೇ ಅನುಭಾವದ ಸಾಧನೆ ಸಾಗುತ್ತದೆ ಎಂಬುದನ್ನು ಧ್ವನಿಸುತ್ತಾರೆ ಶರಣೆ ಮೋಳಿಗೆ ಮಹಾದೇವಿಯವರು. ಅದೇ ‘ಕ್ರೀಜ್ಞಾನ ಸಂಬಂಧಸ್ಥಲಭಾವ’. ಇಂಥ ಕ್ರೀಜ್ಞಾನ ಸಂಬಂಧದ ಮೂಲಕವೇ ನಡೆಯುವ ಅನುಭಾವದ ಸಾಧನೆಯು, ಆ ಮೂಲಕವೇ ಅಪೇಕ್ಷಿತ ಪರಿಣಾಮವನ್ನೂ ಕೊಡುತ್ತದೆ ಎಂಬುದೇ ಈ ವಚನದ ಅಂತಃಸ್ಸಾರ.
ಸಾಪೇಕ್ಷ ಸಂಬಂಧದ ಒಂದು ಪ್ರಾಯೋಗಿಕ ಪ್ರತಿಪಾದನೆಯಾಗಿರುವ ಪ್ರಸ್ತುತ ವಚನವು ‘ಪರಸ್ಪರಾವಲಂಬನ’ ಸಿದ್ಧಾಂತವನ್ನು (ಸಾಪೇಕ್ಷ ಸಂಬಂಧವನ್ನು) ಸಮರ್ಥ ಉದಾಹರಣೆಳೊಂದಿಗೆ ಕಟ್ಟಿಕೊಡುತ್ತದೆ. ಒಟ್ಟಿನಲ್ಲಿ ಶರಣೆ ಮೋಳಿಗೆ ಮಹಾದೇವಿಯವರ ಮತ್ತು ಶರಣರ ವೈಜ್ಞಾನಿಕ ಮನೋಭಾವಕ್ಕೆ ಮಹತ್ವದ ಸಾಕ್ಷಿಯಾಗುತ್ತದೆ ಈ ವಚನ.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
#303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in