
ಬಸವಣ್ಣನವರು ವಿಶ್ವದ ಮಹಾನ್ ಚಿಂತಕರ ಗುಣ ವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ. ಆರ್ಥರ್ ಮೈಲ್ಸ್ ಹೇಳುವಂತೆ:
ಅವರು ‘ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ’. ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಾಮಾಜಿಕ ಚಿಂತನೆ, ಮಾರ್ಕ್ಸ್ ನ ಆರ್ಥಿಕ ನೀತಿ – ಈ ಎಲ್ಲವನ್ನೂ ಏಕೀಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ ‘ಸಮಾಜ ಪರಿವರ್ತಕರು ‘ ಅನ್ನುವುದು ಸೂಕ್ತ.
ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂತಹ ವಸ್ತುವಿನ ಕುರಿತು ತಿಳಿಸುವಂಥದು. ಅವರ ಪ್ರಕಾರ ವಿನಾಶ ವಸ್ತುವಿನಲ್ಲಿ ಚೈತನ್ಯವೂ ಇದೆ; ಚೈತನ್ಯ ವಸ್ತು ನಾಶವಾದಾಗ, ಚೈತನ್ಯ ರೂಪ ತಾಳಿ ಮೂಲ ಚೈತನ್ಯದಲ್ಲಿ ಲೀನವಾಗುತ್ತದೆ.
ಕನ್ನಡಿಯ ನೋಡುವ ಅಣ್ಣಗಳಿರಾ,
ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ,
‘ಸ್ಥಾವರ ಜಂಗಮ ಒಂದೇ’ ಎಂದುದು ಕೂಡಲಸಂಗನ ವಚನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-187)
ಬಸವಣ್ಣನವರ ಈ ವಚನವನ್ನು ನೋಡಿದಾಗ ‘ವಸ್ತು ಮತ್ತು ಚೈತನ್ಯಗಳು’ ಅಂತಿಮ ಸತ್ಯದ ಕ್ಷಣದಲ್ಲಿ ಒಂದಾಗುವ ‘ಸ್ಥಾವರ ಜಂಗಮ ಒಂದೇ’ ಎಂಬುದರ ಅರಿವಾಗುವುದು.
ಈ ತತ್ವಜ್ಞಾನದ ಮೂಲಕ ಶರಣರು ಜೀವ ಜಗತ್ತಿಗೆ ನ್ಯಾಯ ಒದಗಿಸುವ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದು ಮಾನವ ಇತಿಹಾಸದಲ್ಲಿಯೇ ಅನುಪಮವಾಗಿದೆ. ಶರಣರ ದೇವರು ದೇಗುಲಗಳಲ್ಲಿ ಇಲ್ಲ; ಅವರ ದೇವರು ಚೈತನ್ಯದ ಪ್ರತೀಕವಾದ “ಅರಿವು” ಎನ್ನುವ ಜಂಗಮರೂಪಿ ದೇವರು.
ಹಾಗಾದರೆ ಜಂಗಮ’ ಎಂದರೇನು ಏನ್ನುವದನ್ನು ತಿಳಿಯೋಣ.
• ಅನಂತವಾದ ನಿರಂತರವಾದ ಚೈತನ್ಯ.
• ಚೈತನ್ಯರೂಪಿ ದೇವರು.
• ಚೈತನ್ಯ ರೂಪಿ ಅರಿವು.
• ಚೈತನ್ಯ ಒಳಗೊಂಡ ಇಡೀ ವಿಶ್ವ.
• ಜೀವ ಜಗತ್ತು.
• ಮಾನವ ಕುಲ.
ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣ ಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾ ಭಾವದಿಂದ ಸಾರುತ್ತ ಸಾಗುವ ಶರಣ ಸಕಲ ಜೀವರಾಶಿಗಳೂ ಕೂಡ ಆನಂದಮಯವಾಗಿ ಇರಬೇಕು ಎಂಬುದು ಬಸವಣ್ಣನವರ ಆಶಯ. ಅದಕ್ಕೆ ದಯೆಯೇ ಶರಣ ಧರ್ಮದ ಜೀವಾಳ. “ದಯವಿಲ್ಲದ ಧರ್ಮ ಅದ್ಯಾವುದಯ್ಯ” ಎಂದು ಕೇಳುತ್ತಾರೆ. ದೇವರು ಯಾರು ಎಂಬುದಕ್ಕೆ ಅವರು ತಮ್ಮ ವಚನದಲ್ಲಿ ಹೇಳುತ್ತಾರೆ.
ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-283/ವಚನ ಸಂಖ್ಯೆ-978)
ಜಂಗಮವೆಂಬ ಸಮಾಜರೂಪಿಯಾದ ದೇವರು ನಮ್ಮ ಮುಂದೆ ಇದ್ದಾನೆ ಎನ್ನುತ್ತಾರೆ ಬಸವಣ್ಣನವರು. ಅರಿವಿಲ್ಲದ ಲಿಂಗದ ಪೂಜೆ ಸಲ್ಲದು ಎಂಬ ಅರ್ಥ.
ಇನ್ನೊಂದು ವಚನದಲ್ಲಿ:
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-229/ವಚನ ಸಂಖ್ಯೆ-821)
ಅಂದರೆ ಮಾನವರೆಲ್ಲ ನಡೆದಾಡುವ ದೇವಾಲಯಗಳು. ಒಳಗಿನ ಆತ್ಮಸಾಕ್ಷಿ ಎಂಬ ಅರಿವು ಗುರುವಾಗುತ್ತದೆ, ದೇವರಾಗುತ್ತದೆ. ಇದು ಬಸವ ಧರ್ಮ, ಶರಣ ಧರ್ಮ. ಪ್ರತಿಯೊಬ್ಬರಲ್ಲಿ ದೇವರು ಇರುವಾಗ ಯಾರೂ ದೊಡ್ಡವರು ಅಥವ ಸಣ್ಣವರಲ್ಲ. ಸರ್ವ ಸಮತ್ವ ತತ್ವ ಇಲ್ಲಿ ಮುಖ್ಯವಾದುದು.
ಶ್ರೀಮತಿ. ಹಮೀದಾ ಬೇಗಂ ದೇಸಾಯಿ,
ಸಾಹಿತಿಗಳು,
W/o ಶ್ರೀ. ಬಿ. ಎಚ್, ಹುಣಚಾಳಕರ,
ಅಡ್ವೋಕೇಟ್,
ಅಂಕಲಿ ರಸ್ತೆ, ಐಡಿಯಾ ಮೋಬೈಲ್ ಟವರ್ ಹತ್ತಿರ,
ಸಂಕೇಶ್ವರ – 591 313.
ಮೋ. ಸಂ. +91 9449442051.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.