ಬಸವಣ್ಣನವರ ವಚನಗಳಲ್ಲಿ “ಗಣಾಚಾರ”/ಶ್ರೀಮತಿ ಸುನಿತಾ ಮೂರಶಿಳ್ಳಿ

ವಿಶ್ವದ ಎಲ್ಲ ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಅಂಶಗಳು ಆಯಾ ಕಾಲದ ಕಟ್ಟಳೆಗೆ, ಆಚರಣೆಗೆ, ವ್ಯವಸ್ಥೆಗೆ ಸೀಮಿತವಾಗಿರುತ್ತವೆ. ಆ ಕಟ್ಟೆಳೆಗಳಿಂದ ವ್ಯವಸ್ಥೆಯಲ್ಲಿರುವ ದೋಷಗಳಿಂದ ಸಿಡಿದೇಳುವುದೂ ಕೂಡಾ ಕಾಲ ಕಾಲಕ್ಕೂ ನಡೆದು ಬಂದಿರುವ ಐತಿಹಾಸಿಕ ಸತ್ಯ. ಹಾಗೆಯೇ 12 ನೇಯ ಶತಮಾನದ ಶರಣರ ಗಣಾಚಾರ ಕೂಡಾ ಇಂತಹ ಒಂದು ಪ್ರತಿಕ್ರಿಯೆ ಎನ್ನಬಹುದು. ಪಂಚ ಆಚಾರಗಳಲ್ಲಿ ಮೊದಲನೆಯ ಮೂರು ಲಿಂಗಾಚಾರ, ಸದಾಚಾರ ಮತ್ತು ಶಿವಾಚಾರಗಳು ವ್ಯಕ್ತಿ ಪರಿವರ್ತನೆಗೆ  ಸಂಬಂಧಿಸಿದ್ದು ಅವುಗಳ ವಿಕಾಸವು ಸಮಷ್ಟಿಯೊಂದಿಗೆ ಬೆಸೆದದ್ದು ಆಗಿದೆ. ನಂತರ ಬರುವ ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರತಿಫಲನ ರೂಪವಾಗಿ ಬಂದ ಶರಣರ  ಪ್ರಕ್ರಿಯೆಗಳಾಗಿವೆ. ಶರಣರೊಂದಿಗೆ, ಭಕ್ತರೊಂದಿಗೆ ವ್ಯವಹರಿಸುವಾಗ ಕಿಂಕರರಲ್ಲಿ ಕಿಂಕರವಾಗಿ ವಿನಯದ ಶಿಖರವೇರಿ ಅಹಂ ನಿರಸನಗೊಳ್ಳುವುದು ಭೃತ್ಯಾಚಾರವಾದರೆ, ಗಣಾಚಾರವೆಂಬುದು ಭಕ್ತರಲ್ಲದವರು, ಒಡೆಯರು, ಪ್ರಭುತ್ವವಾದಿಗಳು ಹಾಗು ಸನಾತನಿಗಳ ದಬ್ಬಾಳಿಕೆಗೆ ಶೋಷಣೆಯ ಅನ್ಯಾಯದ ವಿರುದ್ಧವಾಗಿ ಎತ್ತುವ ನ್ಯಾಯದ ಧ್ವನಿಯಾಗಿದೆ, ಸಮಷ್ಟಿಯ ಒಳಿತಿಗಾಗಿ ಎತ್ತುವ ಕೂಗಾಗಿದೆ, ವ್ಯಕ್ತಿಯ ವಿಕಾಸಕ್ಕೆ ಕೈಗೊಳ್ಳುವ ಸಂಕಲ್ಪ ಆಗಿದೆ, ತನ್ನ ಆದರ್ಶಗಳನ್ನು ಎಂತಹ ಸಂದರ್ಭದಲ್ಲೂ ಬಲಿ ಕೊಡಲಾಗದೆ ಅದಕ್ಕಾಗಿ ನಡೆಸುವ ಹೋರಾಟವಾಗಿದೆ.

ಬಸವಣ್ಣನವರ ವಚನಗಳ ಮೂಲಕ ಗಣಾಚಾರವನ್ನು ನೋಡುವ ಒಂದು ಪುಟ್ಟ ಪ್ರಯತ್ನ ಈ ಲೇಖನದ್ದಾಗಿದೆ. ಒಮ್ಮೆ ಬಸವಣ್ಣನವರ ಮನೆಗೆ ಕಳ್ಳನು ಬಂದಾಗ

ಅವಶ್ಯಕತೆಗಿಂತ ಹೆಚ್ಚಾಗಿ ಸಂಗ್ರಹಿಸಿದ ಕಾರಣ ತಾನೇ ಕಳ್ಳ, ಆತ ತನ್ನನ್ನು ಎಚ್ಚರಿಸಲು ಬಂದ ಸಾಕ್ಷಾತ್ ಕೂಡಲಸಂಗಮ ಎಂದು   ತನ್ನನ್ನು ತಾನು ಹಳಿದುಕೊಳ್ಳುವರು ಬಸವಣ್ಣನವರು. ಮತ್ತೊಮ್ಮೆ ಕೊಟ್ಟಿಗೆಯಲ್ಲಿನ ಆಕಳುಗಳು ಕಳುವಾದಾಗ

ಅವರನ್ನು ಆಕಳು ಕಳ್ಳರು ಎನ್ನದಿರಿ, ಆ ಕರುಗಳು ತಾಯಿಯಿಂದ ಅಗಲಿವೆ  ಕರುಗಳನ್ನೂ ಅವರಿಗೆ ಒಯ್ದು ಕೊಡಿ, ಅವರಿಗೆ ಅದರ ಅವಶ್ಯಕತೆ ಇದೆ ಎನ್ನುತ್ತಾ, ಅಲ್ಲಿ ಉಂಬರೆ ಸಂಗ ಇಲ್ಲಿ ಉಂಬರೆ ಸಂಗ ಎಂದು ಸಾಕ್ಷಾತ್ ಕೂಡಲಸಂಗಮನಿಗೆ ಎಲ್ಲಿದ್ದರೂ ಆಗುವ ಪ್ರಸಾದ ಎನ್ನುವ ಘಟನೆಯು  ಸರ್ವ ಜೀವ ದಯಾಪರಿಯಾದ ಬಸವಣ್ಣನವರ ಸಹೃದಯಕ್ಕೆ ಕನ್ನಡಿ ಹಿಡಿವದು.

ನಾಗ ಎಂಬ ಅಸ್ಪೃಶ್ಯ ವೇದಗಳ ಘೋಷಣೆಯನ್ನು ಕಿವಿಯಿಂದ ಕೇಳಿದ ಎಂದು ಕಲ್ಲುಗಳ ಪೆಟ್ಟುತಿಂದು ರಕ್ತದ ಮಡುವಿನಲ್ಲಿ ಬಿದ್ದಿರುವಾಗ ಬಾಹುಗಳ ಆಸರೆ ಕೊಟ್ಟು ಎತ್ತಿದಾಗ ಬಸವ ನೀನು ಬಂದೆಯಾ ತಂದೆ ಎಂದು ಅರೆ ಪ್ರಜ್ಞಾವಸ್ಥೆಯಲ್ಲಿ ಆತ ಬಡ ಬಡಿಸುತ್ತಿರುವಾಗ ಹೇಗೆ ಗೊತ್ತಾಯ್ತು ನಾನೆಂದು ಬಸವ ಪ್ರಶ್ನಿಸಲು ಬಿದ್ದವರನ್ನು ಎತ್ತುವ ಈ ಬಾಹುಗಳು ಕರುಣಾಮಯಿ ಬಸವನವಲ್ಲದೆ ಮತ್ತಾರದಿರಲು ಸಾಧ್ಯ ಎಂದು ನಾಗ ಹೇಳುವ ಹೃದಯ ಸ್ಪರ್ಶಿ ಮಾತು ಮಾತೃ ಹೃದಯಿ ಬಸವಣ್ಣನ ಎಣೆಯಿಲ್ಲದ ಕರುಣೆಗೆ ನಿದರ್ಶನವಾಗುವದು.

ಈ ಮೇಲಿನ ಮೂರೂ ಉದಾಹರಣೆಗಳು ಬಸವ ಎಂಬ ಅಸದೃಶ, ಅಪ್ರತಿಮ  ಹೃದಯ ವೈಶಾಲ್ಯತೆ, ಹಾಗೂ ನೊಂದವರ ನೋವಿಗೆ ಮಿಡಿವ ಮಾತೃ ಸ್ವರೂಪಿಯ, ಕರುಣಾಮಯಿಯ ವಿಶ್ವ ದರ್ಶನವಾಗುವದು.

ತಾನೆ ಎಲ್ಲರಿಗಿಂತ ಕಿರಿಯ ಶಿವಭಕ್ತರೇ ಹಿರಿಯರು ಎಂದು, ಬಾಗಿದ ತಲೆ ಮುಗಿದ ಕೈ ಆಗಿದ್ದ ಭೃತ್ಯಾಚಾರಿ ಬಸವ ಕಿಂಕರರಲ್ಲಿ ಕಿಂಕರವಾದ ಬಸವ  ಗಣಾಚಾರದ ಕಠೋರ, ನಿಷ್ಟುರ ಭಾಷೆಯನ್ನೂ ನುಡಿಯಬೇಕಾದರೆ ಬಸವ ಅನುಭವಿಸಿದ, ಎದುರಿಸಿದ ಸಂಘರ್ಷ ಎಂತಹುದು?

ಪ್ರತಿ ವಸ್ತುವಿಗೂ ವಿಷಯಕ್ಕೂ ಎರಡು ಮುಖ ಇರುವಂತೆ ಭೃತ್ಯಾಚಾರ ಹಾಗೂ ಗಣಾಚಾರಗಳು ಕೂಡಾ ಶರಣ ಬದುಕಿನ ಎರಡು ಅಭಿನ್ನ ಮುಖಗಳು.

ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎನ್ನುವ ಬಸವ ಎಲವೋ ಎಂದು ನುಡಿಯುವ ಪ್ರಸಂಗ ಬಂದದ್ದು ಏಕೆಈ ಗಣಾಚಾರ ಪ್ರದರ್ಶಿಸಲು ಇರುವ ಬಲವಾದ ಕಾರಣ ಏನುಒಂದು ಅವಲೋಕನ……

 ಭಕ್ತನಾದ ಮೇಲೆ ದೃಢವಾದ ನಿಷ್ಠೆಯಿರಬೇಕು, ನಿಶ್ಚಯ ಇರಬೇಕು ಯಾವುದಕ್ಕೂ ಅಂಜದ ಎದೆಗಾರಿಕೆ ಇದು ಗಣಾಚಾರದ ಒಂದು ಬಹುಮುಖ್ಯ ಆಶಯ.

ಇವು ಭಕ್ತ ತನ್ನ ವಿಕಾಸಕ್ಕಾಗಿ ಮನಸ್ಸಿಗೆ ಹಾಕಿಕೊಳ್ಳುವ ಬೇಲಿಗಳು.  ಪರಧನ,ಪರಸತಿ,ಪರದೈವಗಳನ್ನು ಮುಟ್ಟಲಾರೆ ಎಂಬ ಛಲದೊಂದಿಗೆ, ಲಿಂಗದ ಬಾಯಿ ಜಂಗಮ ಆದ್ದರಿಂದ ಎರಡೂ ಒಂದೇ ಎಂಬ ವಿಶಾಲತೆಯಿಂದ ಎಲ್ಲವನ್ನೂ ಪ್ರಸಾದಮಯವಾಗಿ ಸ್ವೀಕರಿಸುವ ಶರಣಾಗತ ಭಾವದ ಮನೋ ಭೂಮಿಕೆ ಕೂಡಾ  ಗಣಾಚಾರದ ಮೊದಲ ಮೆಟ್ಟಿಲು.

ಎಂದು ಬಂದದ್ದನ್ನು  ಸ್ವೀಕರಿಸುವುದು. ಅದರಲ್ಲಿ ವಂಚನೆ ಮಾಡದಿರುವುದು, ನುಡಿದಂತೆ ನಡೆಯುವುದು, ಎಲ್ಲವೂ ಶರಣರದೇ ಎಂದು ಅವರ ಒಡವೆಯನ್ನು ಅವರಿಗೇ ಸಮರ್ಪಿಸುವುದು ಇವು ನಿಜವಾದ ಬದುಕಿನ ವ್ರತ, ನೇಮಗಳು  ಎನ್ನುವರು ಬಸವಣ್ಣನವರು.

ಇನ್ನು ನಡೆ, ನುಡಿ ತಪ್ಪಿದಾಗ ನೈತಿಕತೆ ಮೀರಿದಾಗ ಆಡುವ ಗಣಾಚಾರದ ನುಡಿ ಎಷ್ಟು ಮೊನಚು….

ಇಂಥ ನಡೆನುಡಿ ವ್ಯತ್ಯಾಸ ಗಳನ್ನು ಕಠೋರವಾಗಿ ಖಂಡಿಸುವ ಬಸವಣ್ಣನವರು  ಅಂಥವರು ಪೂಜಿಸುವ ಲಿಂಗ ಕೂಡಾ ಘಟಸರ್ಪದಂತೆ ಎಂದು ಎಚ್ಚರಿಸುವರು.  ವಿಷಕಾರಿಯಾದ ಹಾವಿನ ವಿಷ ತನ್ನ ಒಡಲನಾವರಿಸಿದಂತೆ ಅಪಾಯಕಾರಿ ಎಂದು ಅದರ ಗಂಭೀರತೆಯನ್ನು ಈ ಉದಾಹರಣೆ ಮೂಲಕ ಎಚ್ಚರಿಸುವರು.

ಸತ್ಯದಿಂದ ನಡೆಯುವವರ ಒಡಲಲ್ಲಿ ನೆಲೆಗೊಳ್ಳುವ ಕೂಡಲಸಂಗ, ಅಸತ್ಯವ ನುಡಿವವರ ಒಡಲನ್ನು ಬೆಂಕಿಯಾಗಿ ಸುಡುವ.  ಲಿಂಗವನ್ನು ಪೂಜಿಸಿ ಅನ್ಯಾಯವನ್ನು ಮಾಡುವವರ ಹಲ್ಲನ್ನು ಮುರಿವ.  ಇದು ಅಂದಿನ ವ್ಯವಸ್ಥೆಯಲ್ಲಿ ಇರಲೇಬೇಕಾಗಿದ್ದ ಕಾಠಿಣ್ಯತೆ. ನ್ಯಾಯಯುತವಾಗಿ ಮಾಡುವ ಲಿಂಗಪೂಜೆ ಮಾತ್ರ ಆತನಿಗೆ ಸಲ್ಲುವದು.

ಅಹಂಕಾರದ ಮದದಿಂದ ಸುಭಾಷೆಯ ಮರೆತು ಕುಭಾಶೆಯಿಂದ ಅಮಾನವೀಯವಾಗಿ ವರ್ತಿಸುವ ಮನಸ್ಸುಗಳಿಗೆ ಎಚ್ಚರಿಸುವ ಬಸವಣ್ಣನವರು ಏನು ಕೊಡದೆ ಹೋದರೂ ನಡೆದೀತು ಹೇಗಿದೀರಿ, ಕುಳಿತುಕೊಳ್ಳಿ ಎಂಬ ಸಜ್ಜನಿಕೆಯ ಒಂದೆರಡು ಒಳ್ಳೆಯ ಮಾತಾದರೂ ಬೇಡವೇ, ಹಾಗೆ ಕೇಳುವುದರಿಂದ  ನಿಮ್ಮ ಬಾಯಿ ಸವೆಯುವದೆ, ನೆಲ ಸವೆಯುವದೆ ಎಂದು ಕೇಳುತ್ತಾ , ಅಂಥವರ ಹಲ್ಲು ಉದುರಿಸು ಎಂದು ಸಾತ್ವಿಕವಾದ ಸಿಟ್ಟನ್ನೂ ಪ್ರದರ್ಶಿಸುವರು.

ಹಣವುಳ್ಳವರು ಬಂದರೆ ಅವರಿಗೆ ರಾಜಮರ್ಯಾದೆ ನೀಡಿ ಬಡವರು ಬಂದರೆ ಆಚೆ  ಸರಿ ಎನ್ನುವವರನ್ನು ಕೆಳಗೆ ಹಾಕಿ ಮೂಗು ಕೊಯ್ಯದೆ ಬಿಡನು ಕೂಡಲಸಂಗಮದೇವಾ ಎಂದು ಸ್ವಾರ್ಥಕ್ಕಾಗಿ ಹಣವಂತರ ಒಡೆಯರ ಹಿಂದೆ ಸುತ್ತಾಡುವವರಿಗೆ ಮಣೆಹಾಕುವ ಸ್ವಾರ್ಥಪರ ಮುಖವಾಡದ ಸಾಮಾಜಿಕ ಆಚರಣೆಗಳನ್ನು ಪ್ರಬಲವಾಗಿ ಖಂಡಿಸುವರು.

ಬಂದುದನ್ನು ತತ್ಕಾಲಕ್ಕೆ ಬಳಸಬೇಕಾದದ್ದಲ್ಲದೆ ಇಂದಿಗೆ ನಾಳೆಗೆ ಬೇಕೆಂದು ಎಂದು ಕೂಡಿಟ್ಟೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎನ್ನುತ್ತಾ ಅದೆಲ್ಲವೂ ಶರಣರಿಗೆ ಸಲ್ಲಬೇಕಾದದ್ದು ಎಂದು ಸಾಮಾಜಿಕರಣಗೊಳಿಸತ್ತಾ ಗಣಾಚಾರವನ್ನು ಪ್ರದರ್ಶಿಸುವ ಬಸವಣ್ಣನವರ ಆದರ್ಶ ಜಗಕೆ ಮಾದರಿಯಾದ ನಡೆ ಆಗಿದೆ.

ಈ ಜಗಕೆ ಒಬ್ಬನೇ ಒಡೆಯ. ಹೆಸರುಗಳು ಹಲವಾದರೂ ಒಬ್ಬನೇ ದೇವರು.   ಆ ಜಗತ್ ಸ್ವರೂಪಿ ಲಿಂಗವೇ ಪತಿ, ಶರಣನೇ ಸತಿ ಎಂಬ ತತ್ವದಡಿಯಲ್ಲಿ ಲಿಂಗದ ಹೊರತು ಹಲವಾರು ದೈವಗಳಿಗೆರಗುವವರಿಗೆ ಅತ್ಯಂತ ಕಠೋರವಾಗಿ ಪ್ರಶ್ನಿಸುವರು.  ಪತಿವ್ರತೆಯಾದವಳಿಗೆ ಗಂಡ ಒಬ್ಬನೇ ಅಲ್ಲವೆ ಎಂದು. ಇದು ಆ ಕಾಲಘಟ್ಟದಲ್ಲಿ ಇರಲೇ ಬೇಕಾದ ನಿಷ್ಠುರತನ. ಹಲವು ದೈವದ ಹೆಸರಿನಲ್ಲಿ ಆಗುತ್ತಿದ್ದ ಶೋಷಣೆಯಿಂದ ದೀನರನ್ನು ರಕ್ಷಿಸಲು ಈ ಕಠಿಣವಾದ ನಿಷ್ಟುರ ನುಡಿಗಳನ್ನು ಬಸವಣ್ಣನವರು ಆಡುವರು. ತನ್ಮೂಲಕ ಸಮಾಜದ ಕರಾಳ ವಾಸ್ತವವನ್ನು ಎತ್ತಿ ಹಿಡಿವರು.

ಬೇಕೆಂದರೆ ಏರಿಸಿ ಬೇಡವೆಂದಾಗ ನೆಲಕ್ಕೆ ಒಗೆವ, ಬೇಕೆಂದಾಗ ದೊಡ್ಡವರ ಮಾಡಿ ಬೇಡವೆಂದಾಗ ಸಣ್ಣವರನ್ನು ಮಾಡುವ, ಜಂಗಮರನ್ನು ಹೋಗಲುಬಿಟ್ಟು ಅವರ ಹಿಂದೆ ಅವರನ್ನು ಜರಿಯುವ ಮನಸ್ಸಿನ ಗುಣವನ್ನು ಬಸವಣ್ಣನವರು ಜರಿಯುವರು ಇದು ಕ್ಷಮಾರ್ಹವಲ್ಲ. ಅದಕ್ಕೆ ಸಲ್ಲಬೇಕಾದ ಶಿಕ್ಷೆಯೂ ಘೋರವೇ. ಕಾಲಿನಿಂದ ಮೆಟ್ಟಿ ಬಾಯಲ್ಲಿ ಮಣ್ಣು ಹಾಕು ಎಂದು ವ್ಯಗ್ರವಾಗಿ ಸಮಾಜದ ಹೀನ ಮುಖವನ್ನು ಖಂಡಿಸುವರು.

ವರ್ಣಾಶ್ರಮದ ನೆಲೆಯಲ್ಲಿ, ಬ್ರಾಹ್ಮಣ್ಯದ ಅಡಿಯಲ್ಲಿ ಹೀನವಾಗಿ ಕಾಣುತ್ತಿದ್ದ ಸಾಮಾಜಿಕವಾಗಿ ಅವಹೇಳನಕ್ಕೆ ಗುರಿ ಮಾಡುತ್ತಿದ್ದ ಶೋಷಿತ ವರ್ಗಕ್ಕೆ ಧೈರ್ಯದ ನುಡಿಗಳನ್ನು ಹೇಳುವರು. ಗೋತ್ರದ ಹೆಸರು ಕೇಳಿದರೆ ತಲೆ ಕೆಳಗೆ ಹಾಕಿ ಏಕೆ ಸುಮ್ಮನೆ ನಿಂತಿದ್ದೀರಿ, ನಿಮ್ಮ ಗೋತ್ರದ ಹೆಸರು ಹೇಳಿ. ಮಾದಾರ ಚೆನ್ನಯ್ಯನ ಗೋತ್ರ ಎಂದು, ಡೋಹರ ಕಕ್ಕಯ್ಯನ ಗೋತ್ರ ಎಂದು ತಲೆಯೆತ್ತಿ ಹೇಳಿ ಎಂದು ಜಾತಿವಾದದ ತುಳಿತಕ್ಕೆ ಒಳಗಾದವರಿಗೆ  ಅಸದೃಶವಾದ ಅನೂಹ್ಯ ವಾದ ಬಲವನ್ನು ನೀಡುವರು.

ಹಣಕ್ಕಾಗಿ ಸಂಪತ್ತಿಗಾಗಿ ದುಡಿಯಲು ಬಂದಿಲ್ಲ, ಮೌಲ್ಯಾದರ್ಶಗಳಿಗಾಗಿ ಬಂದಿರುವೆ. ಪ್ರತಿಫಲ ಬಯಸದೆ ಮೌಲಿಕ ಬದುಕಿಗಾಗಿ ಬದುಕುವೆ ಅದಕ್ಕಾಗಿ ನಾನು ಹೆದರುವವನಲ್ಲ ಮರಣ ಎಂದಾದರೂ ಬರುವುದೇ ಅದನ್ನೇ ಹರುಷದಿಂದ ಅಪ್ಪಿಕೊಳ್ಳುವೆ, ಸಂಭ್ರಮಿಸುವೆ ಎನ್ನುವ ನುಡಿ ಅವರ ಗಣಾಚಾರಕ್ಕೆ ಪ್ರಮುಖ ನಿದರ್ಶನವಾಗಿದೆ.

ಸೈನಿಕ  ಯುದ್ಧ ಭೂಮಿಯಿಂದ ಓಡಿದರೆ ಆತನ ಒಡೆಯನಿಗೆ ಮುಖಭಂಗ ಆದ್ದರಿಂದ ಈ ಭವ ಎಂಬ ಯುದ್ಧಭೂಮಿಯಿಂದ ಓಡಿದೆನಾದರೆ ನಿನಗೇ ಅಗೌರವ ಆದ್ದರಿಂದ  ನಾನು ಓಡಲಾರದೆ  ಇಲ್ಲಿಯೇ ಇದ್ದು ಇದನ್ನು ಗೆಲ್ಲುವಂತೆ ಮಾಡು.  ಎನ್ನ ತನುಮನದಲ್ಲಿ ವಂಚನೆ ಇಲ್ಲದಂತೆ ಮಾಡು ನನ್ನನ್ನು ಗೆಲ್ಲಿಸು ಎನ್ನುತ್ತಾ ಮುಂದೆ ಹೇಳುವರು. ಕೊಲುವೆನೆಂಬ ಭಾಷೆ ದೇವನದು ಆದರೆ ಗೆಲುವೆನೆಂಬ ಭಾಷೆ ಭಕ್ತನದು ಸತ್ಯವೆಂಬ ಕೂರಲಗನೆ ಹಿಡಿದು ಸದ್ಭಕ್ತರು ಗೆದ್ದರು ಕಾಣಾ ಎಂದು ಆ ದೇವನಿಗೆ ಸವಾಲೆಸೆಯುವ ದಿಟ್ಟತನ. ಅದೂ ಸತ್ಯವೆಂಬ ಆಯುಧ ಹಿಡಿದು. ಇದು ಗಣಾಚಾರದ ಶಿಖರ.

ಹಾಲಿನ ಹಳ್ಳವೆ ಹರಿಯುತಿರುವಾಗ ಬರಡಾದ ಆಕಳಿಗೇಕೆ ಬೆಂಬತ್ತುವೆ, ಕಾಯಕ ಜೀವಿಗಳಿಂದ ಸಂಪತ್ಭರಿತವಾದ ಈ ಕಲ್ಯಾಣದಲ್ಲಿ ಬಿಜ್ಜಳನ ಬಂಡಾರವನ್ನೇಕೆ ಬಯಸುವೆ ಅದರ ಅವಶ್ಯಕತೆಯೇನಿದೆ ಎಂದು ರಾಜತ್ವಕ್ಕೆ ಸವಾಲೆಸೆಯುವರು. ಎಂತಹ ಅಗಾಧವಾದ ಧೈರ್ಯ, ಮನೋಸ್ಥೈರ್ಯ.

ನಾಳೆ ಬರುವದು ನಮಗಿಂದೇ ಬರಲಿ, ಇಂದು ಬರುವುದು ಈಗಲೇ ಬರಲಿ, ಇದಕಾರಂಜುವರು ಇದಕಾರಳುಕುವರು ಎಂದು ಬಂದದ್ದೆಲ್ಲವನ್ನೂ ಬರಮಾಡಿಕೊಂಡು ಏನಾದರೂ ಆಗಲಿ ನಾ ಧೃತಿಗೆಡಲಾರೆ ಕೂಡಲಸಂಗನಿಗೆ ಮಾತ್ರ ಶರಣಾಗುವೆ ಕಾಯದ ಕಳವಳಕ್ಕಂಜಿ ಕಾಯಯ್ಯಾ ಎನ್ನಲಾರೆ, ಜೀವನೋಪಾಯಕ್ಕೆ ಬೇಡಲಾರೆ ಎಂದು ಬಂದದ್ದೆಲ್ಲವನ್ನೂ ಪ್ರಸಾದವಾಗಿ ಸ್ವೀಕರಿಸುತ್ತಾ ಏನನ್ನಾದರೂ ಕೇಳಿದರೆ ನಿಮ್ಮಾಣೆ ಎಂಬ ಅಸಾಧಾರಣ ಮನೋಬಲ ಜಗಕ್ಕೆ ಆದರ್ಶಪ್ರಾಯವಾಗಿ ನಿಲ್ಲುವದು.

ಲಿಂಗ ವಂಶದಿಂದ ಬಂದ ನಡೆಗಳು ಲಿಂಗ ವಂಶದಿಂದ ಬಂದ ನುಡಿಗಳು ಲಿಂಗವಂತರು ತಾವು ಅಂಜಲದೇಕೆ ಎಂದು ನಡೆಸುವವ ಲಿಂಗಯ್ಯ, ನುಡಿಸುವವ ಲಿಂಗಯ್ಯ ಎಲ್ಲವೂ ನಿನ್ನದಾಗಿರುವಾಗ  ಅಂಜಿಕೆಯೇಕೆ ಎಂದು ಕೇಳುವ ಅಪೂರ್ವ ಶರಣಾಗತ ಭಾವದಲ್ಲಿರುವ ಮನೋಬಲ ಇಲ್ಲಿ ಗಟ್ಟಿತನಕೆ ಆಧಾರವಾಗಿ ನಿಲ್ಲುವದು.

ಆಯುಷ್ಯ ತೀರಿದಾಗಲ್ಲದೆ ಮರಣ ಬರುವದಿಲ್ಲ.  ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ ಈ ಜಗದ ಆಗುಹೋಗುಗಳಿಗೆ ಏಕೆ ಅಂಜಬೇಕು ನಿಮ್ಮ ಆಳಾಗಿ. ಅಂಜಿದರೂ, ಅಳುಕಿದರೂ, ವಜ್ರಪಂಜರದೊಳಗಿದ್ದರೂ ಬರುವುದು ತಪ್ಪುವುದಿಲ್ಲ. ಆಯುಷ್ಯ ತೀರಿದಾಗ ಮರಣ ಬರುವುದು ಸಹಜ. ಭಾಷೆ ತಪ್ಪಿದರೆ ಅದುವೆ ನಿಜವಾದ ದಾರಿದ್ರ್ಯ. ಲೋಕದ ರೀತಿಗೆ ಅಂಜಲಾರೆ ನಿಮ್ಮ ದಾಸನಾಗಿ ಇರುವೆ ಎಂದು ಕೂಡಲಸಂಗಂಗೆ ಮಾತ್ರ ಶರಣಾಗುವ ಒಂದು ಅನನ್ಯ ಭಾವ.

ನ್ಯಾಯಕ್ಕಾಗಿ ನಿಷ್ಠುರಿಯಾಗುವೆ, ಯಾರ ದಾಕ್ಷಿಣ್ಯಕ್ಕಾಗಿ ಕಾಯುವವ ನಲ್ಲ ಲೋಕವಿರೋಧಿ ಎನಿಸುವ  ಶರಣ ಆರಿಗಂಜುವನಲ್ಲ ಕೂಡಲಸಂಗಮದೇವರ ದಿವ್ಯ ಪ್ರಭೆಯಲ್ಲಿರುವವ ಎಂದು ಲೋಕದ ಒಳಿತಿಗಾಗಿ ಲೋಕವನ್ನು ಎದುರಿಸುವ ದಿಟ್ಟತನಕ್ಕೆ ದಿಕ್ಸೂಚಿಯಾಗಿ ನಿಲ್ಲುವರು ಅಪ್ಪ ಬಸವಣ್ಣನವರು.  ಹೀಗೆ ತನಗಾಗಿ ಭೃತ್ಯಾಚಾರಿ ಆಗುವ ಬಸವ ಬದುಕು, ಲೋಕಕ್ಕಾಗಿ ಗಣಾಚಾರಿ ಆಗುವದು. ಈ ಮೌಲಿಕ ಅನನ್ಯ ಶರಣ ಬದುಕು ಯುಗಪ್ರವರ್ತಕ, ಯುಗದ ಚೇತನವಾಗಿ ಬೆಳಕಿನ ಸೂರ್ಯನೆ ಆಗಿ ಜಗವ ಬೆಳಗುವದು ಅಂದೂ, ಇಂದೂ, ಎಂದೆಂದೂ.

ಶ್ರೀಮತಿ ಸುನಿತಾ ಮೂರಶಿಳ್ಳಿ
ಧಾರವಾಡ
ಫೋನ್ ನಂ:+91 9986 437 474

Loading

Leave a Reply