“ಬಸವಣ್ಣನವರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ”/ಡಾ. ಅಶೋಕ ನರೋಡೆ

ವಚನ ಸಾಹಿತ್ಯವು ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ. 12 ನೇ ಶತಮಾನದಲ್ಲಿ ಜರುಗಿದ ಸಮಾಜೋ-ಧಾರ್ಮಿಕ ಆಂದೋಲನವು ಯುಗದ ಧ್ವನಿ ಆಯಿತು. ಸಮಾಜದ ಸರ್ವಸ್ಥರಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಹೊಸ ಸಮಾಜವನ್ನು ಕಟ್ಟಬಯಸಿದ ಶಿವಶರಣರು, ತಮ್ಮ ಸಾದನೆಗಾಗಿ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚನ ರಚನೆ ಅವರ ಪ್ರಾಥಮಿಕ ಉದ್ದೇಶವಾಗಿರದೆ ಸಮಾಜ ಸುಧಾರಣೆ ಅವರ ಪ್ರಾಶಸ್ತ್ಯವಾಗಿತ್ತು. ವಚನವೆಂಬುದು ಚಳುವಳಿ ಸಾಹಿತ್ಯ ಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗೊಳಿಸಲು ಹೋರಾಡಿದ ಹುತಾತ್ಮರ ಸಾಹಸಗಾಥೆಯಾಗಿದೆ. ರಾಜಶಾಹಿ, ಪರೋಹಿತಶಾಹಿ, ಪುರುಷಶಾಹಿಗಳ ವಿರುದ್ಧ ಹೋರಾಡಿ ಸರ್ವ ಸಮಾನತೆ ಪ್ರತಿಪಾದಿಸುವ ಸಾಹಿತ್ಯ. ಸಮಾಜದ ಎಲ್ಲ ಸ್ಥರದ ಚಳುವಳಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ. ದುಡಿಯುವ ಜನ ಸಮುದಾಯ, ಶ್ರಮಿಕ ಜನಾಂಗ ಮುಖ್ಯಧಾರೆಗೆ ಬಂದು, ತಮ್ಮ ಹಕ್ಕಿಗಾಗಿ ಹೋರಾಡಿದ್ದು ಪ್ರಮುಖವಾಗಿದೆ. ಸಾಮಾನ್ಯರ ಸಾಹಿತ್ಯ ಸಮಾನತಾ ಸಾಹಿತ್ಯವು ವಚನಾಂದೋಲನದಿಂದ ಸೃಷ್ಟಿಯಾಯಿತು. ಎಲ್ಲರೂ ಸಮಾನರೆಂಬ ತತ್ವ ಅನುಷ್ಠಾನಕ್ಕೆ ಬಂದಿತು. ಹೊಸ ಸಮಾಜದ ರಚನೆಗಾಗಿ ಎಲ್ಲರೂ ದುಡಿಯಬೇಕೆಂದು ಹೇಳಿ “ಕಾಯಕ” ಕ್ಕೆ ಪ್ರಾಶಸ್ತ್ಯ ನೀಡಲಾಯಿತು. ಸರ್ವರೂ ಹಂಚಿಕೊಂಡು ಉಣ್ಣಬೇಕೆಂಬ ತತ್ವದಿಂದಾಗಿ ದಾಸೋಹದ ಪರಿಕಲ್ಪನೆ ರೂಪಗೊಂಡಿತು. ಈ ಮುಂಚಿನ ತ್ಯಾಗ ಮತ್ತು ಭೋಗಕ್ಕೆ ಪರ್ಯಾಯವಾಗಿ ಕಾಯಕ ದಾಸೋಹ ಎಂಬ ಮೌಲ್ಯಗಳು ರೂಢಿಗೆ ಬಂದವು. ವೇಳೆವಾಳಿ, ಲೆಂಕವಾಳಿ, ಜೋಳವಾಳಿ ಎಂಬ ಹಳೆಯ ಮೌಲ್ಯಗಳು ಕೊಚ್ಚಿ ಹೋಗಿ ಶರಣ ಸಿದ್ಧಾಂತ ಅಸ್ತಿತ್ವಕ್ಕೆ ಬಂದಿತು. ಬಸವಕಲ್ಯಾಣ ಕರ್ತಾರನ ಕಮ್ಮಟವಾಯಿತು. ಬಸವಣ್ಣನವರು ನೇತೃತ್ವ ವಹಿಸಿದ್ದರು.

ಬಸವಣ್ಣನವರು:ಮಹಾಮಾನವತಾವಾದಿ, ವಿಶ್ವಗುರು, ವಿಶ್ವಚಂದಿತ, ಜಗಜ್ಯೋತಿ, ಕ್ರಾಂತಿಯೋಗಿ, ದಲಿತಬಂದು, ಹೊಸ ಸಮಾಜದ ಹರಿಕಾರ, ಸಮಾನತೆ ಪ್ರತಿಪಾದಕ, ಭಕ್ತಿಭಂಡಾರಿ, ಯುಗದ ಉತ್ಸಾಹ, ಜಾಗತಿಕ ನಾಯಕ, ಮಹಾನ್ ಸುಧಾರಣಾವಾದಿ, ಸ್ತ್ರೀ ವಿಮೋಚಕ, ಸಮಗ್ರ ಯುಗಪುರುಷ, ವಿಶ್ವದ ಪ್ರಪಥಮ ಸಮಾಜವಾದಿ ಚಿಂತಕ ಮುಂತಾದ ಹೆಸರಿನಿಂದ ಕರೆದು ಗೌರವಿಸಲಾಗಿದೆ. ಇದೀಗ ಹೊಸ ಸೇರ್ಪಡೆಯಾಗಿದ್ದು “ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಕರ್ನಾಟಕದ ಘೋಷಣೆ. “ಬಸವ ಪೀಠವು ಎದ್ದು ವಸೆದು ನಾಣ್ಯವು ಹುಟ್ಡಿ, ಬಸವಣ್ಣನ ಮುದ್ರೆ ಮೆರೆದಾವು, ಧರೆಯವಗೆ ವಶವಾಗದಿಹುದೆ ಸರ್ವಜ್ಞ” ಸತ್ಯ ಕಥನವಾಗಿದೆ.

ವ್ಯಕ್ತಿತ್ವ ವಿಕಾಸ:

“ವ್ಯಕ್ತಿತ್ವ” ಎಂಬ ಪದವನ್ನು ಆಂಗ್ಲ ಭಾಷೆಯ Personality ಎಂಬುದಕ್ಕೆ ಸಂವಾದಿಯಾಗಿ ಬದುತ್ತಿದ್ದೇವೆ. Personality ಶಬ್ದವು ಮೂಲತಃ ಲ್ಯಾಟಿನ್ ಭಾಷೆಯ “Persone” ಎಂಬ ಪದದಿಂದ ನಿಷ್ಪತ್ತಿಯಾಗಿದೆ. ಅದರ ಅರ್ಥ “ಮುಖವಾಡ” ಎಂಬುದಾಗಿದೆ. ಪುರಾತನ ಗ್ರೀಕ್ ನಾಟಕ ಥೇಟರಗಳಲ್ಲಿ ನಟರು ಅಭಿನಯಿಸುವಾಗ, ಮುಖವಾಡಗಳನ್ನು ಧರಿಸುತ್ತಿದ್ದರು. ಮುಖವಾಡ ಧರಿಸುವ ಮೂಲಕ ಪಾತ್ರಧಾರಿಗಳು ಜನರ ಮೇಲೆ ಬೀರುತ್ತಿದ್ದ ಪ್ರಭಾವವನ್ನು ವ್ಯಕ್ತಿತ್ವ ಎಂದು ಕರೆಯುತ್ತಿದ್ದರು. ಈಗ ಮುಖವಾಡದ ಅರ್ಥ ವಿಸ್ತಾರವಾಗಿದೆ. ವಿಶಾಲವಾದ ವ್ಯಾಪ್ತಿ ಪಡೆದಿದೆ. ನಿಜ ಸ್ವರೂಪವನ್ನು ಮರೆಮಾಚಿದ ಬಾಹ್ಯ ಆಕಾರಕ್ಕೆ ಮಾತ್ರ ಸಿಮೀತವಾಗಿಲ್ಲ. ವ್ಯಕ್ತಿ ತನ್ನ ನಡೆ ನುಡಿ ಹಾಗೂ ಕ್ರಿಯೆಗಳ ಮೂಲಕ ವ್ಯಕ್ತ ಪಡಿಸುವ ಸಂಪೂರ್ಣ ವರ್ತನೆಯ ಒಟ್ಟು ಮೊತ್ತವನ್ನು “ವ್ಯಕ್ತಿತ್ವ” ಎನ್ನುವರು. ವಿವಿಧ ಮನೋವಿಜ್ಞಾನಿಗಳು ವ್ಯಕ್ತಿತ್ವ ಕುರಿತಾಗಿ ವ್ಯಾಖ್ಯಾನಿಸಿದ್ದಾರೆ.

ಬಸವಣ್ಣನವರು ಸಾಮಾಜಿಕ ಸಮತೋಲನಕ್ಕಾಗಿ ಹೋರಾಡಿದ ಧೀರೊದಾತ್ತ ವ್ಯಕ್ತಿ. ಬಸವಣ್ಣನವರು ಜನಿಸಿದ್ದು ಬಾಗೇವಾಡಿಯಲ್ಲಿ. ಅಧ್ಯಯನಿಸಿದ್ದು ಕಪ್ಪಡಿ ಸಂಗಮ (ಇಂದಿನ ಕೂಡಲಸಂಗಮ) ದಲ್ಲಿ. ಸಂಗಮವು ಹಲವು ಸಂಗಮಗಳಿಗೆ ಕಾರಣವಾಗಿ ಪರಿಣಮಿಸಿತು. ವ್ಯಯಕ್ತಿಕ ರಂಗ, ಸಾಮಾಜಿಕ ರಂಗಗಳಲ್ಲಿ ಪ್ರವಹಿಸಲು ಪ್ರೇರಣೆ ನೀಡಿತು. ಒಟ್ಟಿಗೆ ಮೂರು ನದಿಗಳ ಪ್ರವಾಹ ಪ್ರದೇಶ ಬದುಕಿಗೆ ಪಾಠವಾಗಿ ಪ್ರವಹಿಸಿತು. ಬಸವಣ್ಣನವರ ಬದುಕಿನಲ್ಲಿ ತಿರುವು ತಂದ ಕಾಲಘಟ್ಟವಾಗಿದೆ. ಕೂಡಲಸಂಗಮದಿಂದ ಮಂಗಳವೇಡೆಗೆ ಬಂದದ್ದು, ಮಾಂಡಲೀಕ ಬಿಜ್ಜಳನಲ್ಲಿ ಕರಣಿಕ ಗಣಕಾಧಿಕಾರಿಯಾಗಿದ್ದು ಮತ್ತೊಂದು ಪರಿವರ್ತನೆಯ ಘಟ್ಟ.

ಮಹಾತ್ವಾಕಾಂಕ್ಷಿ ಬಿಜ್ಜಳ ಚಕ್ರವರ್ತಿಯಾಗಿ, ಕಲ್ಯಾಣವನ್ನು ರಾಜಧಾನಿಯಾಗಿ ಪರಿವರ್ತಿಸಿದರು. ಆತನೊಂದಿಗೆ ಕಲ್ಯಾಣಕ್ಕೆ ಪ್ರಯಾಣ ಮಾಡಿದ್ದಾಯಿತು. ಪಟ್ಟಣ ಬದುಕಿನ ಕೇಂದ್ರವಾಯಿತು. ನಗರದ ಸಂಕೀರ್ಣ ಬದುಕನ್ನು ನಡುವೆ ನಿಭಾಯಿಸುವ ಜವಾಬ್ದಾರಿ ಹೆಗಲಿಗೆ ಬಿತ್ತು. ದಣ್ಣಾಯಕ ವ್ಯಕ್ತಿಯೊಂದಿಗೆ ಶರಣ ಸಮುದಾಯದ ಸಂಘಟನೆ, ಅನುಭವ ಮಂಟಪ ಹುಟ್ಟುಹಾಕಿ, ಶೂನ್ಯಸಿಂಹಾಸನದ ಸ್ಥಾಪನೆ, ತತ್ವ ಸಿದ್ಧಾಂತಗಳ ಚರ್ಚೆ, ಪ್ರಸಾರ, ಜನಸಾಮಾನ್ಯರ ಮಾತುಗಳು ವಚನಗಳಾಗಿ ಸೃಷ್ಟಿಯಾದ ವಿನೂತನ ಪ್ರಯೋಗ. ಕೂಡಲಸಂಗಮದಲ್ಲಿ ಅತ್ಮಕಲ್ಯಾಣ, ಬಸವಕಲ್ಯಾಣದಲ್ಲಿ ಆತ್ಮಕಲ್ಯಾಣದ ಜೊತೆ ಜೊತೆಗೆ ಸಮಾಜ ಕಲ್ಯಾಣ, ಸಮುದಾಯದ ಕಲ್ಯಾಣಕ್ಕೆ ವಿಸ್ತಾರಗೊಂಡಿತು. ಡಾ. ಎಂ.ಎಂ. ಕಲಬುರ್ಗಿಯವರು ವ್ಯಾಖ್ಯಾನಿಸಿದಂತೆ “ಬಾಗೇವಾಡಿಯಲ್ಲಿ ಕರ್ಮದಿಂದ ಧರ್ಮಕ್ಕೆ, ಕೂಡಲಸಂಗಮದಲ್ಲಿ ಅಂಗದಿಂದ ಲಿಂಗಕ್ಕೆ, ಕಲ್ಯಾಣದಲ್ಲಿ ಲಿಂಗದಿಂದ ಜಂಗಮಕ್ಕೆ ಸಾಗಿ ಬಂದಿದ್ದಾನೆ” ಜಂಗಮಸೇವೆ ಎಂದರೆ ಸಮಾಜಸೇವೆಯ ಅಂಗವಾಗಿ ವರ್ಗಭೇದ, ಲಿಂಗಭೇದಗಳ ನಿರಾಕರಣೆಯ ತೀವ್ರ ಕ್ರಮಗಳನ್ನು ಕೈಗೆತ್ತಿಕೊಂಡರು.

ಸಮಾಜದ ಸುಧಾರಣೆಯಾಗಬೇಕೆಂದರೆ, ಸಮಾಜದದಲ್ಲಿ ಮೊದಲು ಸಮಾನತೆ ನೆಲೆಸಬೇಕು. ಸಾಮಾಜಿಕ ಸಮಾನತೆಗೆ ಮೂಲವಾದದ್ದು ಆರ್ಥಿಕ ಸಮಾನತೆ. ಬಸವಣ್ಣನವರು ಭಂಡಾರಿಯಾಗಿದ್ದರು. ಅವರು ರಾಜನಲ್ಲ, ರಾಜಕಾರಣಿಯಲ್ಲ, ಆದರೆ ಆರ್ಥಿಕ ತಜ್ಞರು. ನಮ್ಮ ಮನಮೋಹನಸಿಂಗರು ರಾಜಕಾರಣಿಯಾಗಿರಲಿಲ್ಲ; ಅರ್ಥಮಂತ್ರಿಗಳಾದರು, ಪ್ರಧಾನಿಯಾದರು. ದೇಶದಲ್ಲಿ ಹೊಸ ಯುಗದ ನಿರ್ಮಾಣವಾಯಿತು. ರಾಜ್ಯದ ಬೊಕ್ಕಸ ಅರಸನ ಸೊತ್ತಲ್ಲ, ಅದು ಸಮಾಜಕ್ಕೆ ಸಲ್ಲಬೇಕು, ಪ್ರಜೆಗಳಿಗೆ ವಿನಿಯೋಗವಾಗಬೇಕೆಂದು ಅರ್ಥಮಂತ್ರಿಯಾದ ಬಸವಣ್ಣನವರು ಪ್ರತಿಪಾದಿಸಿದರು. ಬಸವಣ್ಣನವರು ವ್ಯಯಕ್ತಿಕ ಶುದ್ಧತೆಗೆ ಹೆಚ್ಚು ಒತ್ತು ನೀಡಿದರು.

ಬಸವಣ್ಣನವರ ಆರ್ಥಿಕ ವಿಚಾರಧಾರೆಗೆ ಕಾಯಕ ಮತ್ತು ದಾಸೋಹ ಎಂಬ ಎರಡು ಮಗ್ಗಲುಗಳಿದ್ದವು. ಕಾಯಕ ಅಂದರೆ ಪರಿಶ್ರಮದಿಂದ ಸಂಪಾದಿಸಬೇಕು. ದಾಸೋಹದ ಮೂಲಕ ವಿತರಿಸಬೇಕು. ಆರ್ಥಿಕ ಉದಾರೀಕರಣ, ಸಮಾಜ ಸುಧಾರಣೆಯ ಮೂಲಮಂತ್ರ. ಕಾಯಕ ಮತ್ತು ದಾಸೋಹವೆಂಬ ಮಹಾಮೌಲ್ಯಗಳನ್ನು ಹುಟ್ಟುಹಾಕಿ ಆ ಮೂಲಕ ವ್ಯಕ್ತಿಯ ಕಲ್ಯಾಣ, ವ್ಯಕ್ತಿ ವಿಕಾಸದ ಜೊತೆಗೆ ಸಮಾಜಕಲ್ಯಾಣ (ಸಮಾಜವಿಕಾಸ) ಆ ಮೂಲಕ ಸುಖಿ ರಾಜ್ಯ ಕಲ್ಯಾಣ ರಾಜ್ಯ ರೂಪಿಸುವುದು ಬಸವಣ್ಣನವರ ಪರಮೋದ್ದೇಶವಾಗಿದ್ದಿತು. ಅದಕ್ಕಾಗಿ ಸಮಸ್ತ ಶರಣ ಸಂಕುಲ ಕೈಜೋಡಿಸಿತು. ಬಸವ ಕಲ್ಯಾಣವು ಇಹದ ಕಲ್ಯಾಣ, ಪರದ ಕಲ್ಯಾಣ, ಶಿವನ ಕಲ್ಯಾಣವಾಗುವಂತೆ ಸಮಸ್ತ ಶರಣ ಸಂಕುಲವು ಪರಿಶ್ರಮಿಸಿತು. ಹೋಯಿದರೆನ್ನ ಹೊರೆದವರೆಂಬೆ, ಬೈದವರೆನ್ನ ಬಂಧುಗಳೆಂಬೆ ಇಹವನ್ನು ಬಿಟ್ಟು ಪರಕ್ಕಾಗಿ ಹಾತೊರೆಯದೆ, ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ (105) ಎಂಬುದು ಬಸವಣ್ಣನವರು ಇಹಕ್ಕೆ ಕೊಟ್ಟ ಪ್ರಾಶಸ್ತ್ಯದ ದ್ಯೋತಕವಾಗಿದೆ. ಹೊಯಿದರೆನ್ನೆ ಹೊರೆದವರೆಂಬೆ, ಬೈದವರೆನ್ಮ ಬಂಧುಗಳೆಂಬೆ ಇಂತಲ್ಲಿ ವ್ಯಕ್ತಿತ್ವ ವಿಕಾಸದ ಪರಾಕಾಷ್ಟತೆ ಇದೆ. ಎನಗಿಂತ ಕಿರಿಯರಿಲ್ಲ ಎಂಬ ಮಾತು ಬಸವಣ್ಣನವರಿಂದ ಮಾತ್ರ ಬರಲು ಸಾಧ್ಯ. ಅದು ಅವರ ವ್ಯಕ್ತಿತ್ವದ ಅನಾವರಣವಾಗಿದೆ.

ಡಾ. ಅಶೋಕ ನರೋಡೆ
ಕೆ.ಎಲ್.ಇ ಪದವಿ ಮಹಾವಿದ್ಯಾಲಯ
ಮಹಾಲಿಂಗಪೂರ.
ಮೋಬೈಲ್‌ ನಂ. 8277039735.

Loading

Leave a Reply