
ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ ಬಸವಣ್ಣ.
ಬಸವಣ್ಣ ಹನ್ನೆರಡನೆಯ ಶತಮಾನದ ಯುಗ ಪ್ರವರ್ತಕ ವ್ಯಕ್ತಿಯಷ್ಟೇ ಅಲ್ಲ; ಶಕ್ತಿಯೂ ಹೌದು. ಬಸವಣ್ಣ ಹೆಸರಷ್ಟೇ ಅಲ್ಲ; ಒಂದು ಸಿದ್ಧಾಂತ, ಒಂದು ಚಳುವಳಿ ಎಂದೇ ಅರ್ಥೈಸಬಹುದು. ಬಸವಣ್ಣನವರು ಈ ಯುಗದ ಕೇಂದ್ರ ಬಿಂದುವಾದರು; ಯುಗಪ್ರರ್ವತಕ ಶಕ್ತಿಯಾದರು. ಕಳಚರ್ಯ ಬಿಜ್ಜಳನ ಆಳ್ವಿಕೆಯಲ್ಲಿ ದಂಡನಾಯಕರಾಗಿದ್ದು, ರಾಜಕೀಯದಲ್ಲಿ ಆ ಮಹತ್ತರ ಹೊಣೆಯನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಸಾಮ್ರಾಜ್ಯದ ಚಕ್ರವರ್ತಿಯಾದರು. ಭಕ್ತಿಭಂಡಾರಿ ಎನಿಸಿದರು. ಮುಕ್ತಿ ಮಹಾಮನೆಗೆ ಕಳಶ ಪ್ರಾಯರಾದರು. ಬಸವಣ್ಣನವರಲ್ಲಿ ನಾವು ಕಾಣುವುದು ಅಪಾರವಾದ ಅನುಕಂಪ; ಜಗತ್ತನ್ನೆಲ್ಲಾ ದುಃಖದಿಂದ ಮುಕ್ತಗೊಳಿಸಬೇಕೆಂಬ ಬಯಕೆ; ಹೀನರನ್ನೂ ದೀನರನ್ನೂ ದಲಿತರನ್ನೂ ದುಃಖಿಗಳನ್ನೂ ತನ್ನವರೆಂದು ಅಪ್ಪಿಕೊಳ್ಳುವ ಆತ್ಮೀಯತೆ; ಸ್ವತಂತ್ರ ವಿಚಾರ ವಿಮರ್ಶೆಯೊಡನೆ ವಿಶ್ವವ್ಯಾಪಕವಾದ ಲೋಕಕಾರುಣ್ಯ; ಸಮಾಜದ ಹುಳುಕನ್ನು ತಿದ್ದುವ ದಿಟ್ಟತನದೊಡನೆ, ಸತ್ಯ ಸ್ವರೂಪದ ಸಾಕ್ಷಾತ್ಕಾರವನ್ನು ಪಡೆಯುವ ಅಂತರ್ ದೃಷ್ಟಿ; ಕವಿ ಹೃದಯದ ಭಾವನೆಯ ಆವೇಗ, ಅದನ್ನು ಅಭಿವ್ಯಕ್ತಗೊಳಿಸುವ ಕಾವ್ಯ ಶಕ್ತಿ – ಈ ಬಹುಮುಖವಾದ ಪ್ರತಿಭೆಯಿಂದ ಸಮನ್ವಿತವಾದುದು ಅವರ ವ್ಯಕ್ತಿತ್ವ. ಆದುದರಿಂದಲೇ ಅದು ಇಡೀ ಭಾರತದ ವಿವಿಧ ಭಾಗಗಳಿಂದ ಸಾಧಕರನ್ನು ಆಕರ್ಷಿಸಲು ಸಮರ್ಥವಾಯಿತು. ಅವರ ನೇತೃತ್ವದಲ್ಲಿ ಕರ್ಣಾಟಕ ಉದಾತ್ತ ಸಂಸ್ಕೃತಿಯ ಚಿತ್ರಗಳನ್ನು ಬಿತ್ತರಿಸಲು ತೋರುವ ರಂಗಸ್ಥಲವಾಗಿ ಪರಿಣಮಿಸಿತು”೧ ಎಂದು ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ಹೇಳಿರುವ ಮಾತುಗಳು ಔಚಿತ್ಯ ಪೂರ್ಣವಾಗಿವೆ.
ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ;
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರಿ.
(ಬ.ಷ.ವ, ವಚನ-238, ಪುಟ-60)
ಈ ವಚನ ಬಸವಣ್ಣನವರ ಸಂಸ್ಕಾರದ ಸಪ್ತಾಕ್ಷರ ಮಂತ್ರವೆಂದೇ ಹೇಳಬಹುದು. ಇದರಲ್ಲಿ ಏಳು ತತ್ತ್ವಗಳಿವೆ. ಮನುಷ್ಯ ಜೀವನದ ಅವಶ್ಯಕ ನೈತಿಕ ತತ್ತ್ವಗಳನ್ನು ಸೂತ್ರಪ್ರಾಯವಾಗಿ ತಿಳಿಸಿದ್ದಾರೆ. ಕಳ್ಳತನ ಮಾಡದಿರುವುದು, ಕೊಲೆಮಾಡದಿರುವುದು, ಕೋಪಗೊಳ್ಳದಿರುವುದು, ಬೇರೆಯವರ ಬಗ್ಗೆ ಅಸಹ್ಯಪಡದೆ ಇರುವುದು, ಬರೀ ತಮ್ಮನ್ನೇ ತಾವು ಹೊಗಳಿಕೊಳ್ಳದಿರುವುದು, ಇನ್ನೊಬ್ಬರ ಕುರಿತು ಜರಿಯದೇ ಇರುವುದು ಇವು ಆಂತರಿಕ ಮತ್ತು ಬಾಹ್ಯ ಶುದ್ಧಿ ಎಂಬುದನ್ನು ತಿಳಿಸುತ್ತಾರೆ. ಸಮಕಾಲೀನ ಸಂಕೀರ್ಣ ಬದುಕಿನಲ್ಲಿರುವ ನಾವು ಈ ವಚನದ ಪಚನ ಮಾಡಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ತೋರಿಸುವ ಜೊತೆಗೆ ಅಂತರಂಗದ ಪರಿಶುದ್ಧತೆಯೇ ಸಕಲ ಸಾಧನೆಗಳ ಮೂಲ ಎಂಬುದನ್ನು ತಿಳಿಸುತ್ತದೆ. ಆದರೆ ಜಾಗತೀಕರಣದ ಈ ಸಂದರ್ಭದಲ್ಲಿ ಬದುಕಿನ ನೈತಿಕ ಅಂಶಗಳೆ ಗಾಳಿತೂರಿರುವುದು ವ್ಯವಸ್ಥೆಯ ವ್ಯಂಗ್ಯವನ್ನು ಧ್ವನಿಸುತ್ತದೆ.
ಬಸವಣ್ಣನವರ ನಡೆ-ನುಡಿಯಲ್ಲಿ ಸಮನ್ವಯ ಸಾಮರಸ್ಯದ ಸಂಸ್ಕೃತಿಯ ವಿಚಾರ ಅನೇಕ ವಚನಗಳಲ್ಲಿ ವ್ಯಕ್ತವಾಗಿದೆ.
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೊರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ;
ಒಂದು ಜವೆ ಕೊಱತೆಯಾದರೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
(ಬ.ಷ.ವ, ವಚನ-443, ಪುಟ-112)
ನುಡಿ ನಡೆಯು ಭಾವಶುದ್ಧವಾದ ಶುಭಾಶಯದಷ್ಟೇ ಮಹತ್ವವಾದುದು. ನುಡಿದಂತೆ ನಡೆದು ತೋರಿಸಿದರು ಬಸವಣ್ಣನವರು. ನಡೆ-ನುಡಿಯಲ್ಲಿ ಜವೆಯಷ್ಟು ಕೊರತೆÀಯುಂಟಾಗದು ಎಂದು ದೈವ ಸಾಕ್ಷಿಯಾಗಿ ಪ್ರಮಾಣ ಮಾಡಿದರು. ಅವರು ಹೆಜ್ಜೆ ಹೆಜ್ಜೆಗೂ ಜೀವನ ಪರ್ಯಂತ ಚಾಚು ತಪ್ಪದೆ ಪಾಲಿಸಿದರು. ಅವರ ದೃಷ್ಟಿಯಲ್ಲಿ ನಡೆ ನುಡಿಯೆಂಬುದು ಬೇರೆ ಬೇರೆ ಅಲ್ಲ, ನಡೆಯೇ ನುಡಿ, ನುಡಿಯೇ ನಡೆಯ ರೂಪಕದಂತೆ ಬಾಳಿ ಬದುಕಿದರು. ಬದುಕಲು ತಿಳಿಸಿದರು. ನುಡಿದ ನುಡಿ ನಡೆಯಲ್ಲಿ ತಪ್ಪಿದರೆ ಅಂಗೈಯಲ್ಲಿರುವ ಲಿಂಗವೇ ಘಟಸರ್ಪ ಎಂಬ ಎಚ್ಚರಿಕೆಯು ಬಸವಣ್ಣನವರದಾಗಿದೆ.
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ
ಹಿಡಿದಿರ್ದ ಲಿಂಗವು ಘಟಸರ್ಪನಂತೆ
ನುಡಿಯಲು ಬಾರದು, ನಡೆಯಲು ಬಾರದು,
ಲಿಂಗದೇವನೆ ದಿಬ್ಯವೊ, ಅಯ್ಯಾ
ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ
ಕಡೆದಾಂಟದು ಕಾಣಾ, ಕೂಡಲ ಸಂಗಮದೇವಾ.
(ಬ.ಷ.ವ, ವಚನ-648, ಪುಟ-170)
ಇನ್ನೂಂದು ಕಡೆ, ಬಸವಣ್ಣನವರು ನುಡಿದ ನುಡಿಯು ತೂಕ ಬದ್ಧವಾಗಿ ಸ್ಫಟಿಕದ ಸಲಾಕೆಯಂತೆ, ಮಾಣಿಕ್ಯದ ದೀಪ್ತಿಯಂತೆ ಅಲ್ಲದೆ, ಮನಃಸಾಕ್ಷಿಯೆಂಬುದು ಒಪ್ಪುವ ರೀತಿಯಲ್ಲಿರಬೇಕೆಂದು ಹೇಳಿರುವರು. ನಡೆ ನುಡಿಗಳೆರಡು ಚೆನ್ನಾಗಿದ್ದಾಗ ಶ್ರೇಷ್ಠತೆ ಪಡೆದುಕೊಳ್ಳುತ್ತದೆ, ಅಲ್ಲದೆ ನಡೆ ನುಡಿಗಳೆರಡು ಬೇರೆಯವರ ಮನವನ್ನು ನೋಯಿಸದಂತಿರಬೇಕೆಂದು ಹೇಳುವ ಅವರ ಮತ್ತೊಂದು ವಚನ.
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು?
ಅವರ ಸುಖವೆನ್ನ ಸುಖ; ಅವರ ದುಃಖವೆನ್ನ ದುಃಖ!
ಕೂಡಲ ಸಂಗನ ಶರಣ ಮನ ನೊಂದರೆ
ಆನು ಬೆಂದೆನಯ್ಯಾ!
(ಬ.ಷ.ವ, ವಚನ-411, ಪುಟ-103)
ಅಲ್ಲದೆ, ನಡೆಯ ಕಂಡಾ ನಂಬಿ ; ನುಡಿಯೆಲ್ಲಾ ಉಪಚಾರ, ನಡೆವರಯ್ಯಾ ಒಡೆಯರು ತನು ಮನ ಧನದ ಮೇಲೆ ಎಂಬ ವಚನಗಳಲ್ಲಿಯೂ ನಡೆ-ನುಡಿ ಸಂಸ್ಕೃತಿಯು ಅನಾವರಣಗೊಂಡಿದೆ.
ಬಸವಣ್ಣನವರು ಮನುಷ್ಯರಲ್ಲಿ ಅಷ್ಟೇ ಅಲ್ಲ; ಸಕಲ ಜೀವಾತ್ಮ ಲೇಸುನ್ನು ಬಯಸಿದರು. ಅಣುರೇಣುವಿನಲ್ಲಿ ಜೀವಸ್ಪಂದನವನ್ನು ಅವರು ಗುರುತಿಸಿದರು. ಸಕಲದ ಒಳ್ಳಿತಲ್ಲಿ ಸಮಾಜದ ಒಳ್ಳಿತಿದೆ ಎಂಬುದು ಅವರ ನಿಲುವಾಗಿತ್ತು. ದಯೆ, ಅನುಕಂಪ, ಮಾನವೀಯತೆಗಳು ಒಂದು ಸಂಸ್ಕೃತಿಯ ಅವಿಭಾಜ್ಯ ಅಂಗಗಳೇ ಆಗಿದ್ದು, ಇವುಗಳಿಲ್ಲದ ಧರ್ಮವನ್ನು ಊಹಿಸಲು ಸಾಧ್ಯವಿಲ್ಲ ಎಂಬುದು ಅವರ ನಿಲುವು.
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯು
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ
(ವಚನ ಸಾವಿರ, ವಚನ-592, ಪುಟ-176)
ಈ ವಚನ ‘ಸಕಲರು ಸಕಲರೊಂದಿಗೆ ಬೆರೆತು ಸಕಲವು ಲೇಸಾಗಲಿ’ ಎಂಬ ಎಂಬ ಧ್ಯೇಯ ಹೊಂದಿದೆ. ಧರ್ಮದ ಮೂಲ ಉದ್ದೇಶವೇ ಎಲ್ಲರಲೂ ದಯೆ ಕಾಣುವುದು. ಪ್ರತಿಯೊಂದು ಧರ್ಮದಲ್ಲಿ ‘ದಯೆ’ ಎಂಬುವದು ಸ್ಥಾಯಿಭಾವವಾಗಿರುತ್ತದೆ. ಯಾವುದೇ ಧರ್ಮದಲ್ಲಿ ದಯೆಗೆ ಸ್ಥಾನವಿಲ್ಲ ಎಂದರೇ ಅದು ಧರ್ಮ ಎಂದೆನಿಸದು. ದೇವರ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವಂತಹ ವಾತಾವರಣ ಇರುವ ಈ ಸಂದರ್ಭದಲ್ಲಿ ವಚನದ ಪ್ರಸ್ತುತತೆ ಇದೆ. ಎಲ್ಲರೂ ಅಳವಡಿಸಿಕೊಳ್ಳಬೇಕಾದ ಮಾನವ ಧರ್ಮವನ್ನು ಅವರು ಎತ್ತಿ ಹಿಡಿದಿದ್ದಾರೆ.
ಬಸವಣ್ಣನವರು ಸತ್ಯವನ್ನು ತಾವು ನುಡಿದರು, ನುಡಿವಂತಹ ಪರಿಸರವನ್ನು ನಿರ್ಮಿಸಿದರು. ಅವರು ಸತ್ಯ ನುಡಿಯುವುದು ದೇವಲೋಕ ಎಂದು ಭಾವಿಸಿದರು.
ದೇವಲೋಕ ಮರ್ತ್ಯಲೋಕವೆಂಬುದು ಬೇಱಿಲ್ಲ, ಕಾಣಿಭೋ
ಸತ್ಯವ ನುಡಿಯುವುದೆ ದೇವಲೋಕ;
ಮಿಥ್ಯವ ನುಡಿಯುವುದೆ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ-
ಕೂಡಲ ಸಂಗಮದೇವಾ, ನೀವೇ ಪ್ರಮಾಣು.
(ಬ.ಷ.ವ, ವಚನ-242, ಪುಟ-61)
ಅಲ್ಲದೇ,
ಜಂಬೂ ದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ
ಎರಡಾಳಿನ ಭಾಷೆಯ-
ಕೊಲುವೆನೆಂಬ ಭಾಷೆ ದೇವನದು;
ಗೆಲುವೆನೆಂಬ ಭಾಷೆ ಭಕ್ತನದು!
ಸತ್ಯವೆಂಬ ಕೊರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು, ಕಾಣಾ, ಕೂಡಲ ಸಂಗಮದೇವಾ!
(ಬ.ಷ.ವ, ವಚನ-680, ಪುಟ-179)
ಸತ್ಯ ಸಾಕ್ಷಾತ್ಕಾರದ ಸೋಪಾನ ಮಾಡಿ, ಸತ್ಯವನ್ನು ಶರಣರು ಆಯುಧವಾಗಿ ಬಳಸಿದರು. ದೈವದ ಸತ್ವಪರೀಕ್ಷೆಗಳಲ್ಲಿ ಗೆದ್ದು, ಸತ್ಯಸಂಧತೆ ಸಾರುವ ಸದ್ಭಕ್ತನಾಗಬೇಕು. “ಸತ್ಯವಿಲ್ಲದೆ ಭಕ್ತಿ ಸಾವಿರ ವರುಷ ಮಾಡಿದರೂ ವ್ಯರ್ಥ. ಸತ್ಯ ಸಾಧನೆಗಿಂತ ಮಿಗಿಲಾದ ಶೀಲವಿಲ್ಲ, ಸತ್ಯಕ್ಕಿಂತ ಮಿಗಿಲಾದ ತೀರ್ಥವಿಲ್ಲ, ಸತ್ಯವೇ ನಿಜವಾದ ಸೊತ್ತು”2 ಎಂಬ ಮಾತುಗಳು ಅರ್ಥಪೂರ್ಣವಾಗಿವೆ.
ಬಸವಣ್ಣರಾದಿ ಶರಣರು ಸಾರಿದ ಪ್ರಮುಖ ತತ್ತ್ವಗಳು ಕಾಯಕ ಮತ್ತು ದಾಸೋಹ ಸ್ವತಃ ಕಾಯಕವನ್ನು ಮಾಡಬೇಕು, ದುಡಿದು ಉಣ್ಣಬೇಕು. ದುಡಿತಕ್ಕೆ ತಕ್ಕ ಪ್ರತಿಫಲವನ್ನಷ್ಟೇ ಬಯಸಬೇಕು. ಕಾಯಕ ನಿರತನಾದವನು ಗುರು, ಲಿಂಗ, ಜಂಗಮ ಹಂಗನ್ನು ಹರಿಯಬೇಕು. ಕಾಯಕದಲ್ಲಿ ಯಾವದು ಕೂಡ ಶ್ರೇಷ್ಠ- ಕನಿಷ್ಠವೆಂಬುದಿಲ್ಲ. ಪ್ರತಿಯೊಬ್ಬರು ತಮ್ಮ ಕಾಯಕದಲ್ಲಿ ಶಿವಸಾಕ್ಷಾತ್ಕಾರ ಕಾಣಬಯಸಿದರು. ‘ಕಾಯಕವೇ ಕೈಲಾಸ’ ಎಂಬ ಸಂದೇಶ ಸಾರಿದರು.
“ಕಾಯಕ ಎಂಬ ಮಾತು ಮತ್ತು ಅದರ ಅರ್ಥಕಲ್ಪನೆ, ಶರಣರು ವಿಚಾರ ಪ್ರಪಂಚಕ್ಕೆ ಮತ್ತು ಜನಜೀವನದ ಸಂಸ್ಕೃತಿಗೆ ಕೊಟ್ಟ ಕಾಣಿಕೆ. ಈ ಮಾತಿನಲ್ಲಿ ಅವರು ಕಂಡಿರುವ ಆದರ್ಶ ಮತ್ತು ಅರ್ಥವ್ಯಾಪ್ತಿ ಇಡೀ ವಿಶ್ವವನ್ನೇ ಒಳಗೊಳ್ಳಬಲ್ಲಂತಹವು. ಪ್ರತಿಯೊಬ್ಬನೂ ಕೆಲಸ ಮಾಡಿಯೇ ತೀರಬೇಕು. ಕೆಲಸನ್ನು ಮಾಡದೇ ಇನ್ನೊಬ್ಬರ ದುಡಿಮೆಯನ್ನು ಕುಳಿತು ತಿನ್ನುವ ಅಧಿಕಾರ ಯಾರಿಗೂ ಇಲ್ಲ”3 ಎಂಬ ಮಾತುಗಳು ಮನನೀಯವಾಗಿವೆ.
ಕಾಯಕವನ್ನು ಆಸೆಯಿಂದ ಮಾಡದೇ, ಅವಶ್ಯಕತೆಯನ್ನರಿತು ಮಾಡಬೇಕೆಂದು ಸಾರಿದರು. ಕಾಯಕದಿಂದ ಗಳಿಸಿದನ್ನು ದಾಸೋಹಕ್ಕಾಗಿ ಬಳಸಿಬೇಕೆಂದರು. ದಾಸೋಹವಿಲ್ಲದುದು ಕಾಯಕವಾಗದು ಎಂದು ತಿಳಿಸಿದರು. ಕಾಯಕದಿಂದ ಗಳಿಸಿದನ್ನು ಕೂಡಿಟ್ಟರೆ ಅದು ಆರ್ಥಿಕ ಅಸಮತೋಲನೆ ಉಂಟುಮಾಡುತ್ತದೆ. ದಾಸೋಹದಿಂದ ಹಂಚಿ ಆರ್ಥಿಕ ಸಮತೋಲನೆ ಜೊತೆಗೆ ಸಾಮಾಜಿಕ ಸಮಾನತೆ ತರಲು ಸಾಧ್ಯವೆಂದು ಸಾರಿದರು.
ಭಕ್ತಿವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು;
ಹಾಸಿ ದುಡಿದರೆ ತನಗುಂಟು, ತನ್ನ ಪ್ರಮಥರಿಗುಂಟು,
ಮಾರತಂದೆಗಳಂತೆ ಎನಗೇಕಹುದಯ್ಯಾ ?
ರತ್ನದ ಸಂಕಲೆಯನಿಕ್ಕಿ ಕಾಡಿಹೆ,
ಕೂಡಲ ಸಂಗಮದೇವಾ, ಶಿವಧೋ ! ಶಿವಧೋ !!
(ಬ.ಷ.ವ, ವಚನ-327, ಪುಟ-92)
ಅತಿಯಾಸೆಪಟ್ಟು ಸಾಕಷ್ಟು ಕೊಡಿಟ್ಟು ಸಂಗ್ರಹಿಸಿ ಗರ್ವಪಡುವವರನ್ನು ಕಂಡಾಗ, ನಿಸರ್ಗದಿಂದಲೇ ಹಂಚಿಕೊಂಡು ತಿನ್ನುವ, ಕೂಡಿಬಾಳುವ, ತನಗೆ ದೊರೆತದರಲ್ಲಿಯೇ ಎಲ್ಲರೊಂದಿಗೆ ಖುಷಿಪಡುವ ಗುಣವನ್ನು ಕಲಿಯಬೇಕಾಗಿದೆ. ಇಲ್ಲದೆ ಇದ್ದರೆ ಕಾಗೆ-ಕೋಳಿಗಳಿಗಿಂತ ಕನಿಷ್ಠರಾಗುತ್ತಾರೆ, ಎನ್ನುವುದು ಬಸವಣ್ಣನವರ ವಿಚಾರ.
ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು?
ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆ ಕೋಳಿಯಿಂದ ಕರಕಷ್ಟ!
ಕೂಡಲ ಸಂಗಮದೇವಾ.
(ಬ.ಷ.ವ, ವಚನ-440, ಪುಟ-112)
ಶರಣನಾದವನು ಪರರ ಧನವನ್ನು ಆಸೆ ಪಡರು. ಬೇರೆಯವರ ಧನದಾಸೆಗೆ ಕೈಯೊಡುವ ಈಗಿನ ಅನೇಕರು ತಮ್ಮ ತನವನ್ನು ಮಾರಿಕೊಂಡಂತೆ ಅಲ್ಲವೆ ? ಪರ ಧನವ ಒಲ್ಲೆನೆಂಬ ಛಲದ ಜೊತೆಗೆ ಪರಸತಿಯನ್ನು ಒಲ್ಲೆನೆಂದು, ಪರಸತಿ ಪಾರ್ವತಿ ಎಂದೇಕೆ? ಬಾವಿಸಬಾರದು. ಈ ಛಲಗಳಿಲ್ಲದಿದ್ದರೆ ಆತ್ಮ ಸಾಕ್ಷಿಗನುಗುಣವಾಗಿರದು ಎಂದು ‘ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ………’ ವಚನದಲ್ಲಿ ತಿಳಿಸಿದ್ದಾರೆ. ಸಿರಿ ಗರ ದರ್ಪವೆರಿದವರಿಗೆ ಅದು ಸರ್ಪಗಿಂತ ವಿಷಕಾರಿ, ಭಯಂಕರ ಭೂತದಂತೆ ಎಂದು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ.
ಬಸವಣ್ಣನವರು ಧನಸಂಪನ್ನತೆಯನ್ನು ಎಂದು ಮೆಚ್ಚಿದವರಲ್ಲ, ಅವರು ಮನ ಸಂಪನ್ನತೆಯನ್ನು ಸಾರಿದವರು.
ಮನೆ ನೋಡಾ, ಬಡವರು ; ಮನ ನೋಡಾ, ಘನ;
ಸೋಂಕಿನಲ್ಲಿ ಸುಖಿ ; ಸರ್ವಾಂಗ ಕಲಿಗಳು ;
ಪಸಾರಕ್ಕನುವಿಲ್ಲ ; ಬಂದ ತತ್ಕಾಲಕ್ಕುಂಟು ;
ಕೂಡಲ ಸಂಗಮ ಶರಣರು ಸ್ವತಂತ್ರಧೀರರು.
(ಬ.ಷ.ವ, ವಚನ-328, ಪುಟ-83)
ನಮ್ಮ ಬದುಕಿನಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ, ಅದಕ್ಕೆ ಬೆಲೆ ಇಲ್ಲ ; ಬಾಳು ಬಂಗಾರವನ್ನಾಗಿ, ಬದುಕು ಶೃಂಗಾರವನ್ನಾಗಿಸುವ ಮನ ಹೊಂದಿರುವದು ಸೂಕ್ತ. ‘ಬಡವರ ಮನ, ಸಿರಿವಂತರ ಮನೆ’ ನೋಡಲು ಚಂದ. ಮನೆ ದೊಡ್ಡದಾಗಿದ್ದರೆ ಸಾಲದು ಮನಗಳು ದೊಡ್ಡದಾದರೆ, ಅದಕ್ಕೆ ಸಿರಿವಂತಿಕೆ ಬರುತ್ತದೆ ಎನ್ನುತ್ತದೆ ವಚನ ಸಂಸ್ಕೃತಿ.
ಅತಿಯಾಸೆಪಟ್ಟು ಸಾಕಷ್ಟು ಕೊಡಿಟ್ಟು ಸಂಗ್ರಹಿಸಿ ಗರ್ವಪಡುವವರನ್ನು ಕಂಡಾಗ, ನಿಸರ್ಗದಿಂದಲೇ ಹಂಚಿಕೊಂಡು ತಿನ್ನುವ, ಕೂಡಿಬಾಳುವ, ತನಗೆ ದೊರೆತದರಲ್ಲಿಯೇ ಎಲ್ಲರೊಂದಿಗೆ ಖುಷಿಪಡುವ ಗುಣವನ್ನು ಕಲಿಯಬೇಕಾಗಿದೆ. ಇಲ್ಲದೆ ಇದ್ದರೆ ಕಾಗೆ-ಕೋಳಿಗಳಿಗಿಂತ ಕನಿಷ್ಠರಾಗುತ್ತಾರೆ,
ಏನಿ ಬಂದಿರಿ, ಹದುಳವಿದ್ದಿರೆ ? ಎಂದರೆ
ನಿಮ್ಮ ಮೈಸಿರಿ ಹಾಱಿಹೋಹುದೆ ?
ಕುಳ್ಳಿರೆಂದರೆ ನೆಲ ಕುಳಿಹೋಹುದೆ ?
ಒಡನೆ ನುಡಿದರೆ ಶಿರ ಹೊಟ್ಟೆಯೊಡೆವುದೆ ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದುರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವನು ?
(ಬ.ಷ.ವ, ವಚನ-244, ಪುಟ-62)
ಮನೆ ಬಾಗಿಲಿಗೆ ಬಂದವರನ್ನು ಆದರಪೂರ್ವಕ ಸತ್ಕರಿಸುವ ಸೌಜನ್ಯದ ಗುಣವನ್ನು ಕಾಣುತ್ತೇವೆ. ಮುಂದುವರೆದು, ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ ………’ ಎನ್ನುವ ವಚನದಲ್ಲಿ, ಜಾತಿ-ಮತ-ಪಂಥವೆಣಿಸದೆ ಎಲ್ಲವರನ್ನು ನಮ್ಮವರೆನ್ನುವ ವಿಶ್ವ ಬಂಧುತ್ವವನ್ನು ಕಾಣುತ್ತೇವೆ.
ಬಸವಣ್ಣನವರು ತಾನು ಕಿರಿಯ, ಶರಣರು ಹಿರಿಯರು, ತಾನು ಕಿರಿಯ ಎನ್ನುವ ವಿನಯವೇ ಸಾಧನೆಯ ರಹದಾರಿ ಎಂಬುವದನ್ನು ಸಾರಿ ಹೇಳಿದ್ದಾರೆ. ಅವರು ಬರೀ ವಚನದ ಮೂಲಕ ಹೇಳಿಕೆಯಷ್ಟೇ ನೀಡದೇ, ಮನಸಾಕ್ಷಿಯಾಗಿ, ದೈವದ ಪಾದಸಾಕ್ಷಿಯಾಗಿ ಎನ್ನುವಂತೆ ಬಾಳಿದರು.
ಎನ್ನಿಂದ ಕಿಱಿಯರಿಲ್ಲ : ಶಿವಭಕ್ತರಿಂದ ಹಿರಿಯರಿಲ್ಲಾ-
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ!
ಕೂಡಲ ಸಂಗಮದೇವಾ, ಎನಗಿದೇ ದಿಬ್ಯ!
(ಬ.ಷ.ವ, ವಚನ-337, ಪುಟ-85)
ಜಾತಿಭೇದ, ವರ್ಗಭೇದ, ಲಿಂಗಭೇದ ರಹಿತವಾದ ವಿಚಾರ ಬಸವಣ್ಣನವರದಾಗಿತ್ತು. ಹುಟ್ಟಿನಿಂದ ಯಾರು ಶ್ರೇಷ್ಠರಲ್ಲ; ಯಾರು ಕನಿಷ್ಠರಲ್ಲ, ಯಾವುದು ಮೇಲ್ಲಲ್ಲ; ಯಾವುದು ಕೀಳಲ್ಲ, ಎಲ್ಲರೂ ಸಮಾನರು. ಒಳ್ಳೆಯ ನಡೆ-ನುಡಿ-ಆಚಾರ-ವಿಚಾರ ಆದರ್ಶಪ್ರಾಯ ಬದುಕನ್ನು ಇಲ್ಲದಿರುವುದನ್ನು ಕನಿಷ್ಠ ಎಂದರು.
ಸಿರಿವಂತ ಬಡವ ಎನ್ನುವ ವರ್ಗಗಳು ಲೌಕಿಕವಾದ ಸಂಪತ್ತನ್ನು ಅವಲಂಬಿಸದೆ, ಆತ್ಮ ಸಿರಿವಂತಿಕೆ ನಿಜವಾದ ಸಿರಿವಂತಿಕೆಯಾಗಿದೆ. ಹೆಣ್ಣು-ಗಂಡು ಭೇದಸಲ್ಲ. ಹೆಣ್ಣು ಅಬಲೆ ಎಂದು ವೇದಕಾಲದಿಂದಲೂ ಬಳಕೆಯಲ್ಲಿದ್ದ ರೂಢಿಯನ್ನು ಮುರಿದರು. ಹೆಣ್ಣು ಸಾಕ್ಷಾತ ಎಂದರು.
ಬಸವಣ್ಣನವರು ಒಳಗು-ಹೊರಗು ಒಂದಾದ, ಸತ್ಯ ಶುದ್ಧ ಬದುಕನ್ನು ಬಾಳಿದರು. ತನ್ನನ್ನು ತಾನು ಪರಿಶೋಧಿಸಿ, ಶೋಧದಿಂದ ಸಿಕ್ಕಗಟ್ಟಿ ಹರಳನ್ನೇ ವಚನವಾಗಿ ಇತರರಿಗೆ ಮಾರ್ಗದರ್ಶನವನ್ನು ಮಾಡಿದರು. ತನ್ನ ಮನಸ್ಸು ವಿಚಾರ ಒಂದಾದ ಬದುಕು ಅವರದು.
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ;
ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ!
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ
ನೀವಿರಿಸಿದಿರಿ, ಕೂಡಲ ಸಂಗಮದೇವಾ.
(ಬ.ಷ.ವ, ವಚನ-29, ಪುಟ-9)
ಮನುಷ್ಯ ಅತ್ತಿ ಹೆಚ್ಚು ಭಯಪಡುವುದು ಸಾವಿಗೆ. ಅದನ್ನು ಬಸವಣ್ಣನವರು ಸ್ವಾಗತವನ್ನು ಕೋರಿದರು. ಮರಣವೇ ಮಹಾನವಮೀ ಎಂದು, ನಾಳೆ ಬರುವುದು ಇಂದೇ ಬರಲೇಂದು ಬಿಚ್ಚು ಮನಸ್ಸಿನಿಂದ ಒಪ್ಪಿದರು. ಹುಟ್ಟಿದ ಪ್ರತಿಯೊಂದಕ್ಕೆ ಸಾವು ತಪ್ಪಿದಲ್ಲ; ಸಾಧನೆ ಮುಖ್ಯ ಎಂದು ತಿಳಿಸಿದರು.
ನಾಳೆ ಬಪ್ಪುದು ನಮಗಿಂದೆ ಬರಲಿ;
ಇಂದು ಬಪ್ಪುದು ನಮಗೀಗಲೆ ಬರಲಿ;
ಇದಕಾರಂಜುವರು, ಇದಕಾರಳುಕುವರು?
“ಜಾತಸ್ಯ ಮರಣಂ ಧ್ರುವಂ” ಎಂಬುದಾಗಿ
ನಮ್ಮ ಕೂಡಲ ಸಂಗಮದೇವರು ಬರೆದ ಬರೆಹವ ತಪ್ಪಿಸುವರೆ
ಹರಿಬ್ರಹ್ಮಾದಿಗಳಿಗಳವಲ್ಲಾ!
(ಬ.ಷ.ವ, ವಚನ-699, ಪುಟ-185)
ದೇಹವೇ ದೇಗುಲ ಎನ್ನುವುದು ಬಸವಣ್ಣನವರ ವಿಚಾರ. ಗುಡಿ ಗುಂಡಾರಕ್ಕೆ ಹೋಗಿ ಕಲ್ಲ-ಮಣ್ಣ ದೇವರ ಪೂಜಿಸದೇ ದೇಹವೇ ಒಂದು ದೇವಾಲಯ, ಎಮ್ಮ ಮನಸಾಕ್ಷಿಯೇ ದೈವ ಎಂದು ತಿಳಿಸಿದರು. ಇಷ್ಟೇ ಅಲ್ಲದೆ ಸದಾಚಾರ, ಸಮತೆ, ಸ್ತ್ರೀ ಗೌರವ, ಬಾಗಿದ ತಲೆ, ಮುಗಿದ ಕೈಯ, ನ್ಯಾಯ ನಿಷ್ಠುರತೆ, ಪ್ರೇಮ ಮೊದಲಾದ ಭಾವಗಳು ವ್ಯಕ್ತವಾಗಿವೆ. ಅವರ ವಚನಗಳಲ್ಲಿ ಹೆಜ್ಜೆ-ಹೆಜ್ಜೆಗೂ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಬಹುದು. ಆದುದರಿಂದ ಇವರನ್ನು ಕನ್ನಡ ನಾಡಿನ ಸಂಸ್ಕೃತಿಯನ್ನು ವಿಶ್ವದ ಎಲ್ಲಡೆ ಸಾರಿದ ‘ಸಾಂಸ್ಕೃತಿಕ ರಾಯಭಾರಿ’ ಎಂದೇ ಕರೆಯಬಹುದು.
ಡಾ. ಲಕ್ಷ್ಮೀಕಾಂತ ಪಂಚಾಳ
ಕನ್ನಡ ಸಹಾಯಕ ಪ್ರಾಧ್ಯಾಪಕರು
ರಾಂಪೂರ, ತಾ & ಜಿ. ಬಾಗಲಕೋಟೆ.
ಫೋನ್ ನಂ:+91 9611937416
ಅಡಿಟಿಪ್ಪಣಿಗಳು :
- ಕಣಾಟಕ ಸಂಸ್ಕೃತಿ ಸಮೀಕ್ಷೆ – ಡಾ. ಎಚ್. ತಿಪ್ಪೇರುದ್ರಸ್ವಾಮಿ, ಡಿ.ವಿ.ಕೆ. ಮೂರ್ತಿ ಪ್ರಕಾಶಕರು,ಮೈಸೂರು, 2007, ಪುಟ-337.
- ವಚನ ಸಂಸ್ಕೃತಿ – ಗಂಗಾಬಿಕ ಕೆ. ಪಾಟೀಲ, ಪ್ರಸಾರಾಂಗ ಗು. ವಿ. ಗುಲಬರ್ಗಾ, 1998, ಪುಟ-13.
- ಕಣಾಟಕ ಸಂಸ್ಕೃತಿ ಸಮೀಕ್ಷೆ – ಡಾ. ಎಚ್. ತಿಪ್ಪೇರುದ್ರಸ್ವಾಮಿ, ಡಿ.ವಿ.ಕೆ. ಮೂರ್ತಿ ಪ್ರಕಾಶಕರು,ಮೈಸೂರು, 2007, ಪುಟ-342.