
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯವು ಬಂದಡೆ ಆ ಅರ್ಥವನುಂಬುವರಿಲ್ಲಾ.
ನೆಲನನಗೆದು ಮಡುಗದಿರಾ, ನೆಲ ನುಂಗಿದೊಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!
ನಿನ್ನ ಮಡದಿಗಿರಲೆಂದಡೆ, ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕೆದೆ ಮಾಣ್ಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-26 / ವಚನ ಸಂಖ್ಯೆ-201)
ನನಗೆ ಸಾಕಷ್ಟು ಆಯುಷ್ಯವಿದೆ, ಜಗತ್ತಿನ ಪ್ರಳಯವೆಂಬುದು ಸುಳ್ಳು ಎಂದು ಭಾವಿಸಿ, ಸಂಪತ್ತನ್ನು ಬಚ್ಚಿಡುವಿರಿ. ಆದರೆ ನಿಮ್ಮ ಆಯುಷ್ಯ ಮುಗಿದು ತೀರಿದ ಮೇಲೆ ಪ್ರಳಯವಾದರೆ ನೀವು ಮುಚ್ಚಿಟ್ಟ ಆ ಸಂಪತ್ತನ್ನು ಅನುಭೋಗಿಸುವವರೇ ಇಲ್ಲವಾಗುತ್ತದೆ. ಕಾರಣ ನೆಲವನ್ನು ಅಗೆದು ಸಂಪತ್ತನ್ನು ಮುಚ್ಚಿಡಬೇಡಿರಿ. ಒಂದು ವೇಳೆ ಆ ನೆಲವೇ ಅದನ್ನು ನುಂಗಿಬಿಟ್ಟರೆ ಗತಿ ಏನು? ಅದೇನು ಎಂದಾದರೂ ತನ್ನೊಡಲಲ್ಲಿದ್ದುದನ್ನು ಉಗುಳಿ ಹೊರಹಾಕೀತೆ? ಸಂಪತ್ತನ್ನು ಕಣ್ತುಂಬ ನೋಡುತ್ತಾ ಸಂತಸಪಡುತ್ತಾ, ಹೊಟ್ಟೆ ತುಂಬಾ ತಿನ್ನದೇ ಉಣ್ಣದೇ ಅದನ್ನು ನೆಲದಲ್ಲಿ ಹೂಳಿ ಹೋಗಬೇಡಿರಿ. ನಂಬಿದ ನಿಮ್ಮ ಮಡದಿಗೆ ಆ ಸಂಪತ್ತು ಇರಲೆಂದು ನೀವು ಭಾವಿಸಿದರೆ, ತಪ್ಪಾದೀತು? ನಿಮ್ಮ ಸಾವಿನ ನಂತರ ಆಕೆಯ ರೀತಿ ಮತ್ತು ವರ್ತನೆಗಳು ಬದಲಾಗಿ ಬೇರೊಬ್ಬರ ಆಶ್ರಯಕ್ಕೆ ಹೋಗದೆ ಇರಲಾರಳು. ಪರರಿಗೆ ಕೊಟ್ಟು ಧನ್ಯನಾಗಬೇಕು. ಶರಣರ ಬಳಗಕ್ಕೆ ಎಲ್ಲವನ್ನೂ ಸಲ್ಲಿಸಬೇಕು ಎಂದು ಬಸವಣ್ಣನವರು ಹೇಳುತ್ತಾರೆ.
ಆಯುಷ್ಯ ಮತ್ತು ಪ್ರಳಯಗಳು ಆಗಾಗ ತಮ್ಮ ಅಸ್ತಿತ್ವವನ್ನು ತಮ್ಮದೇ ಆದ ಕೆಲವು ಸಂಕೇತಗಳ ಮೂಲಕ ಸೂಚಿಸುತ್ತಿರುತ್ತವೆ. ಆಯುಷ್ಯವೆಂಬುದು ಭೂಮಿಯ ಮೇಲಿರುವ ಎಲ್ಲ ಸಚರಾಚರ ಜೀವಿಗಳಿಗೂ ಅನ್ವಯಿಸುತ್ತದೆ. ಕೆಲವು ಹೆಚ್ಚು, ಇನ್ನು ಹಲವು ಕಡಿಮೆ. ಆದರೆ ಸಾವು ಎಂಬುದು ಖಚಿತ, ಅದೇ ಅಂತಿಮ ಸತ್ಯ. ಪ್ರಯತ್ನಿಸಿದರೆ ಅದನ್ನು ಸ್ವಲ್ಪ ಹೊತ್ತು ಮುಂದೂಡಬಹುದಷ್ಟೇ. ತಪ್ಪಿಸಿಕೊಳ್ಳಲಂತೂ ಸಾಧ್ಯವೇ ಇಲ್ಲ.
ಉದಯಾಸ್ತ ಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ! ಶಿವನ ನೆನೆಯಿರೆ! ಈ ಜನ್ಮ ಬಳಿಕಿಲ್ಲ.
ಚನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-795 / ವಚನ ಸಂಖ್ಯೆ-80)
ಎಂಬ ಅಕ್ಕಮಹಾದೇವಿಯ ನುಡಿ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು.
ತನ್ನ ಬುದ್ಧಿ ಬಲದಿಂದ ಸಕಲ ಜೀವಿಯರಾಶಿಗಳಲ್ಲಿಯೇ ಶ್ರೇಷ್ಠನೆನಿಸಿದ ಮಾನವ, ಭಯಕ್ಕೋ ಏನೋ, ಆಯುಷ್ಯವೊಂದನ್ನು ಮಾತ್ರ ಉಪೇಕ್ಷೆ ಮಾಡುತ್ತಲೇ ಬಂದಿದ್ದಾನೆ. ತನ್ನ ಬದುಕು ಅಸ್ಥಿರ, ಕ್ಷಣಿಕವೆಂಬುದನ್ನರಿಯದೆ ಹೋಗಿದ್ದಾನೆ. ತಾನು ಶಾಶ್ವತನೆಂಬ ಭಾವನೆ ಬಂದುದರಿಂದಲೋ ಏನೋ ಹಗಲಿರುಳೆನ್ನದೆ ಸಂಪತ್ತಿನ ಸಂಗ್ರಹಕ್ಕೆ ತೊಡಗಿ ಬಿಟ್ಟಿದ್ದಾನೆ. ನನಗೂ ಬೇಕು, ನನ್ನ ಹೆಂಡತಿ ಮಕ್ಕಳಿಗೂ ಬೇಕು, ಎಂದು ಹತ್ತು ಹಲವು ವಾಮ ಮಾರ್ಗಗಳಿಂದ ಧನ ಸಂಗ್ರಹಿಸಿ ಭೂಮಿಯಲ್ಲಿ ಹೂತಿಡುತ್ತಿದ್ದಾನೆ. ಬರೀ ಕೂಡಿಡುವುದೇ ಆಯಿತು, ಅದನ್ನು ಬಳಸಿ ಅನುಭವಿಸುವುದು ಯಾವಾಗ? ಒಂದು ವೇಳೆ ಆಕಸ್ಮಿಕವಾಗಿ ಮರಣ ಹೊಂದಿದರೆ, ಜಗತ್ತು ಪ್ರಳಯವಾದರೆ ಕೂಡಿಟ್ಟ ಸಂಪತ್ತಿನ ಗತಿ ಏನು? ಎಂದು ಬಸವಣ್ಣವರು ಕೇಳುತ್ತಾರೆ.
ನಿನ್ನ ಹೆಂಡತಿಗೆಂದು ಕೂಡಿಟ್ಟದ್ದು ನೀನು ತೀರಿದ ಮರುದಿನವೇ ಆಕೆ ಮತ್ತೊಬ್ಬರ (ಮಗ, ಅಣ್ಣ, ತಮ್ಮ ಇತ್ಯಾದಿ) ಆಶ್ರಯಕ್ಕೆ ಹೋಗುತ್ತಾಳೆ. ನೆಲದಲ್ಲಿ ಹೂತಿಟ್ಟ ಸಂಪತ್ತು ಯಾರಿಗೆ ಲಾಭವಾಯಿತು? ಇನ್ನಾರಿಗಾಗಿಯೋ ದುಡಿದು ಗಳಿಸಿ, ತಿನ್ನದೇ, ಉಣ್ಣದೇ, ಬಳಸದೆ ಸಂಗ್ರಹಿಸಿಟ್ಟು ಮೂರ್ಖನಾಗಬೇಡ. ಅದನ್ನು ಸದುಪಯೋಗಕ್ಕೆ ಬಳಸು. ನೀನು ದುಡಿದದ್ದರಲ್ಲಿ ಬಂದ ಪ್ರತಿಫಲವನ್ನು ನಿನಗೆ ನಿನ್ನ ಕುಟುಂಬದ ಪೋಷಣೆಗೆ ಬಳಸು. ಮಿಕ್ಕಿದ್ದನ್ನು ದಾಸೋಹ ಮಾಡು, ವೃದ್ಧರಿಗೆ ರೋಗಿಗಳಿಗೆ, ದುಡಿಯಲಾರದ ಅಂಗವಿಕಲರಿಗೆ, ಸಮಾಜೋ ಧಾರ್ಮಿಕ ಕಾಯಕನಿರತರಿಗೆ ಸಂಪತ್ತನ್ನು ನೀಡು. ಅನ್ನದಾನ, ವಸ್ತ್ರದಾನ, ವಿದ್ಯಾದಾನ ಇತ್ಯಾದಿಗಳಿಂದ ಸಮಾಜಕ್ಕೆ ಹಿತವಾಗುವ ಉಪಯೋಗವಾಗುವಂತಹ ಕಾರ್ಯಗಳಿಗೆ ಧನವನ್ನು ವಿನಿಯೋಗಿಸಿ ಕೃತಕೃತ್ಯನಾಗು. ನಿನ್ನ ದಾಸೋಹದ ಫಲ ಉಂಡವರು ಮನದುಂಬಿ ಹರಸಿದರೆ ಅದರಂತಹ ಸಾರ್ಥಕತೆ ಮತ್ತೊಂದಿಲ್ಲ.
ಪ್ರೊ. ಜಿ. ಎ, ತಿಗಡಿ.
ಧಾರವಾಡ.
ಫೋನ್ ನಂ:9902671015
ಉತ್ತಮ ವಚನ ವಿವರಣೆ.
ಬಹಳ ಉತ್ತಮ ವಚನ ವಿಶ್ಲೇಷಣೆ.
ಶರಣು 🙏
Adbhut vachan mattu explanation……sharanu