ಬಸವಣ್ಣನವರ ವಚನ ವಿಶ್ಲೇಷಣೆ: ಮೊರನ ಗೋಟಿಲಿ ಬಪ್ಪ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಮೊರನ ಗೋಟಿಲಿ ಬಪ್ಪ ಕಿರುಕುಳ ದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ?
ಕುರಿ ಬೇಡ, ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-52 / ವಚನ ಸಂಖ್ಯೆ-560)

ವಚನ ಸಾಹಿತ್ಯಕ್ಕೆ ಅದರದೇ ಆದ ತಾತ್ವಿಕತೆ ಇದೆ. ವಚನ ಸಾಹಿತ್ಯದ ಬಹು ಮುಖ್ಯವಾದ ಎರಡು ನೆಲೆಗಳು ಎಂದರೆ ಒಂದು “ಸಾಮಾಜಿಕ ಜವಾಬ್ದಾರಿ” ಮತ್ತೊಂದು “ಅಭಿವ್ಯಕ್ತಿ ಸ್ವಾತಂತ್ರ”. ಶರಣರ ತಾತ್ವಿಕ ಸಿದ್ದಾಂತಗಳಿಗೆ ಇವೆರಡು ಮೂಲ ತಳಹದಿಯಾಗಿವೆ. ಶರಣರ ಅನುಭವ ಅನುಭಾವವಾಗಿ ಬದುಕಿನ ಸತ್ಯದ ಅನಾವರಣಕ್ಕೆ ನಾಂದಿಯಾಗಿತ್ತು. ಕಾರಣ ಇಷ್ಟೇ ಶರಣರು ತಮ್ಮ ಬದುಕಿನುದ್ದಕ್ಕೂ ಸತ್ಯದ ಕಡೆಗೆ ಮುಖ ಮಾಡಿದ್ದರು. ಅವರು ಬದುಕನ್ನು ಬದುಕಿದವರು. ಅದಕ್ಕೆ ಅವರ ಬರಹದಲ್ಲಿ ಬದುಕಿನ ಸತ್ಯದ ದರ್ಶನವಿದೆ. ಅವರು ಬದುಕದೇ ಬರೆದಿದ್ದರೆ ಶರಣರ ಸಾಹಿತ್ಯ ಕೇವಲ ಅಕ್ಷರದ ಗೂಡಾಗುತ್ತಿತ್ತು.

ಬಸವಣ್ಣನವರ ಪ್ರಸ್ತುತ ವಚನ ಬದುಕಿನ ಸತ್ಯಕ್ಕೆ ಅತ್ಯಂತ ಸಮೀಪವಾಗಿದೆ. ಬಸವಣ್ಣನವರು ಬದುಕಿದ ಕಾಲಾವಧಿಯಲ್ಲಿ ಅನೇಕ ಮೂಢನಂಬಿಕೆಗಳು ಮನೆ ಮಾಡಿದ್ದವು. ಸಾಮಾನ್ಯ ಜನರು ಅವುಗಳನ್ನೇ ನಿಜವಾದ ಆಚಾರಗಳೆಂದು ಬಲವಾಗಿ ನಂಬಿದ್ದರು. ಪುರೋಹಿತಶಾಹಿ ವ್ಯವಸ್ಥೆ ಅಂದು ಭಯವನ್ನೇ ಭಕ್ತಿಯ ಮೂಲವಾಗಿಸಿ, ಮುಗ್ಧ, ಅಸಹಾಯಕ ಜನರ ಭಾವನೆಗಳ ಜೊತೆಗೆ ಆಟವಾಡುತ್ತಿದ್ದರು. ಈ ವ್ಯವಸ್ಥೆಯನ್ನು ಒಡೆಯುವ ಮಹತ್ತರವಾದ ಕಾರ್ಯವನ್ನು ಬಸವಾದಿ ಶರಣರು ಮಾಡಿದರು.

ಮುಖ್ಯವಾಗಿ ಬಸವಣ್ಣನವರು ಭಯದಿಂದ ಆಚರಿಸಲ್ಪಡುತ್ತಿದ್ದ ಅವೈಜ್ಞಾನಿಕ ಹಾಗೂ ಹಿಂಸಾತ್ಮಕ ಮೌಢ್ಯ ಆಚರಣೆಗಳಿಂದ ಜನರನ್ನು ಹೊರಗೆ ತರುವ ಕೆಲಸ ಮಾಡಿದರು. ಭಕ್ತಿಗೆ ಭಯ ಮೂಲವಾಗಬಾರದು. ಆಚರಣೆಯ ಹಿಂದೆ ವಿಚಾರ ಇರಬೇಕು ಎಂಬ ಸತ್ಯವನ್ನು ಸಾರಿ ಹೇಳಿದರು. ಮೇಲಿನ ವಚನ ವಿಚಾರವಿಲ್ಲದ ಮೌಢ್ಯ ಆಚರಣೆಗಳ ಉಚ್ಚಾಟನೆಯ ಜೊತೆಗೆ ನಿಜವಾದ ಆಚಾರ ವಿಚಾರಗಳ ಅರಿವನ್ನು ಜನಸಮುದಾಯಕ್ಕೆ ತಲುಪಿಸುವ ಉದ್ದೇಶದಿಂದ ಕೂಡಿದೆ.

ಅಂದು ಪುರೋಹಿತಶಾಹಿ ವ್ಯವಸ್ಥೆಯಲ್ಲಿ ದೇವರಲ್ಲೂ ಎರಡು ವಿಧಗಳಿದ್ದವು. ಒಂದು ಮೇಲು ಜಾತಿಯ ದೇವರುಗಳು. ಮತ್ತೊಂದು ಕೆಳಜಾತಿಯ ದೇವರುಗಳು. ಮೇಲು ಜಾತಿಯ ದೇವರುಗಳಿಗೆ ಹಾಲು, ತುಪ್ಪ, ಹೋಳಿಗೆ, ಪಾಯಸ, ಕಡಬು ಹೀಗೆ ನಾನಾ ವಿಧಧ ಮೃಷ್ಟಾನ್ನ ಭೋಜನಗಳ ನೈವೇದ್ಯ. ಅದೇ ಕೆಳಜಾತಿಯ ದೇವರುಗಳಿಗೆ ಮಾಂಸದ ಅಡುಗೆಯ ನೈವೇದ್ಯ. ಅಲ್ಲದೆ ಕೆಳಜಾತಿಯ ದೇವರುಗಳ ಮುಖವೂ ಸಹ ಕಪ್ಪಾಗಿ ಬಿಂಬಿಸಿ ಭಯಂಕರವಾಗಿ ರೂಪಿಸಲಾಗಿತ್ತು. ದ್ಯಾಮವ್ವ, ದುರುಗವ್ವ, ಕಾಳಿ, ಮಾಂಕಾಳಿ, ಧೂಳಿ ಮಾಕಾಳಿ, ಮಾರಿ, ಮಸಣಿ, ಕೆಂಚವ್ವ, ಕರಿಯವ್ವ, ಮಾರಪ್ಪ, ಬೀರಪ್ಪ, ಭೂತಪ್ಪ ಹೀಗೆ ಹೆಸರುಗಳೂ ಸಹ ಇವೆಲ್ಲಾ ಕೆಳಜಾತಿಯ ದೇವರುಗಳೆಂದು ಸಾರಿ ಸಾರಿ ಹೇಳುತ್ತಿದ್ದವು. ಅದರಲ್ಲೂ ಹೆಣ್ಣು ದೇವತೆಗಳು ಉಗ್ರ ದೇವತೆಗಳೆಂದು ಪರಿಗಣಿಸಲ್ಪಟ್ಟಿದ್ದು, ಈ ದೇವತೆಗಳಿಗೆ ಪ್ರಾಣಿ ಬಲಿ ಕೊಟ್ಟು ಸಂತೃಪ್ತಿ ಮಾಡದಿದ್ದರೆ ಊರಿಗೆ ಪಿಡುಗು, ಬರಗಾಲ, ರೋಗ-ರುಜಿನ, ಸಾವು ನೋವು ಸಂಭವಿಸುತ್ತವೆ, ಕೆಡುಗಾಲ ಬರುತ್ತದೆ ಎಂಬ ಭಯ ಜನರಲ್ಲಿ ಬೇರೂರಿತ್ತು. ಈ ಭಯದಿಂದ ಅವರು ಕುರಿ, ಕೋಳಿ, ಕೋಣ ಬಲಿ ಕೊಡಲು ಪ್ರಾರಂಭಿಸಿದರು. ಈ ರೀತಿಯ ಹಿಂಸಾತ್ಮಕ ಆಚರಣೆಗಳು ವ್ಯಾಪಕವಾಗಿದ್ದವು.

ಇಂತಹ ಮೌಡ್ಯಾಚಾರಣೆಗಳನ್ನು ಬಸವಣ್ಣನವರ ಮೇಲಿನ ವಚನ ಖಂಡಿಸುತ್ತದೆ. “ಮೊರನ ಗೋಟಿಲಿ ಬಪ್ಪ ಕಿರುಕುಳ ದೈವ” ಅಂದರೆ ದುರಗ-ಮುರುಗಿ ಅಂತಾ ಒಂದು ಸಮುದಾಯದವರು ಮೊರದಲ್ಲಿ (ಮೊರ ಅಂದರೆ ಧಾನ್ಯಗಳನ್ನು ಹಸನು ಮಾಡುವ ಬಿದಿರಿನ ಒಂದು ಸಾಧನ) ಒಂದು ದೇವತೆಯ ಮೂರ್ತಿ ಇಟ್ಟುಕೊಂಡು ಬರುತ್ತಿದ್ದರು. ಆ ದೇವತೆಯ ಒಂದು ಕೈಯಲ್ಲಿ ಖಡ್ಗ ಇದ್ದು, ಅದರ ತುಂಬಾ ಹಸಿರು ಗಾಜಿನ ಬಳೆ ಹಾಕಿರಲಾಗುತ್ತಿತ್ತು. ದೇವತೆಯ ನಾಲಿಗೆ ಹೊರಗೆ ಚಾಚಿಕೊಂಡಿದ್ದು, ನಾಲಿಗೆಯ ತುಂಬಾ ಕುಂಕುಮದ ಲೇಪನ ಮಾಡಲಾಗಿರುತ್ತಿತ್ತು. ಬೇವಿನಸೊಪ್ಪು, ನಿಂಬೆಹಣ್ಣು ಮುಂತಾದವುಗಳಿಂದ ದೇವತೆಯನ್ನು ಅಲಂಕರಿಸಿ ತರಲಾಗುತ್ತಿತ್ತು. ಇದನ್ನು ದುರ್ಗಮುರಗ್ಯಾರ್ ದೇವರು ಎಂದೇ ಕರೆಯಲಾಗುತ್ತಿತ್ತು. ಮನೆ ಮನೆ ಬಾಗಿಲ ಮುಂದೆ ಇಂತಹ ಮೊರದ ಗೋಟಿಲಿ ಬರುವ ಕಿರುಕುಳ ದೈವಗಳಿಗೆ ಜನರು ಭಯ ಮಿಶ್ರಿತ ಭಕ್ತಿಯಿಂದ ಅಡ್ಡ ನೀರು ಹಾಕಿ, ಮೊರದಲ್ಲಿ ಉಪ್ಪು ಮೆಣಸಿನಕಾಯಿ ಕೊಡಬೇಕಿತ್ತು. ಇಲ್ಲದಿದ್ದರೆ ಆ ದೇವಿ ಸಿಡುಬು, ಗೊಬ್ಬರ, ಅಮ್ಮ ಮುಂತಾದ ರೂಪದಲ್ಲಿ ಮಕ್ಕಳನ್ನು ಕಾಡಿ ಕಿರಿಕಿರಿ ಮಾಡುತ್ತಾಳೆ ಎಂಬ ಭಯ ಇತ್ತು. ಇದೆ ಮುಂದೆ ಕುರಿ, ಕೋಳಿ, ಕೋಣ ಬಲಿ ಕೊಡುವವರೆಗೂ ವಿಸ್ತರಿಸಿತು.

ಇಂತಹ ಮೌಢ್ಯ ಆಚರಣೆ ದೂರ ಮಾಡಲು ಬಸವಣ್ಣವರು ಇಷ್ಟಲಿಂಗವನ್ನು ಪರಿಚಯಿಸಿದರು. ಮಾರಿ ಮಸಣಿಗಳನ್ನು ಪೂಜಿಸುತ್ತ ಹಿಂಸಾತ್ಮಕ ಆಚರಣೆಗಳಲ್ಲಿ ಮಗ್ನರಾದ ಹಾಗೂ ಅಂಧಕಾರದಲ್ಲಿ ಮತ್ತರಾದ ಜನರನ್ನು ಎಚ್ಚರಿಸಿ ಅವರ ಕೈಯಲ್ಲಿ ಇಷ್ಟಲಿಂಗ ಕೊಟ್ಟು ಅದರ ಸರಳ ಪೂಜೆಯ ವಿವರ ಹೇಳುತ್ತಾರೆ.

ಮೊರನ ಗೋಟಿಲಿ ಬರುವ ಇಂತಹ ಕಿರುಕುಳ (ಸಾಮಾನ್ಯ ದೇವರು-ಹಿಂಸಾತ್ಮಕ ದೇವರು) ದೈವಗಳಿಗೆ ಅಮಾಯಕ ಕುರಿಯನ್ನು ಬಲಿ ನೀಡಿ ನಲಿದು ಖುಷಿ ಪಡುವುದು ಸರಿಯೇ? ಶಿವನು ಹಿಂಸೆಯನ್ನು ಬಯಸದವನು. ಸಕಲ ಜೀವಿಗಳನ್ನೂ ಸಲಹುವವನು. ಹೀಗಿರುವಾಗ ಶಿವನಿಗೆ ಕುರಿ ಬಲಿ ಕೊಟ್ಟವರ ಮೇಲೆ ಕೋಪ ಬಾರದೇ ಇರುವುದೇ? ಸತ್ತ ಕುರಿ ಕೋಪಗೊಂಡ ಹರನನ್ನು ಸಮಾಧಾನ ಮಾಡುವುದೇ? ಬಲಿ ಕೊಟ್ಟವರನ್ನು ಅದು ಕಾಯುವುದೇ? ಇದೆಲ್ಲಾ ವಿಪರ್ಯಾಸ. ಇಂತಹ ಹಿಂಸಾತ್ಮಕ ಆಚರಣೆಯಿಂದ ಮುಕ್ತಾರಾಗಿರಿ. ಸರಳವಾದ ಇಷ್ಟಲಿಂಗ ಪೂಜೆಯಿಂದ ಮುಕ್ತಿ ಹೊಂದಿರಿ. ಇಷ್ಟಲಿಂಗ ಪೂಜೆ ಎಷ್ಟೊಂದು ಸರಳವಾಗಿದೆ ಎಂದರೆ, ಆ ಪೂಜೆಗೆ ಕುರಿ ಬೇಡ, ಮರಿ ಬೇಡ ಬರಿ ಬಿಲ್ವಪತ್ರೆ ತಂದು ಪೂಜಿಸಿದರೆ ಸಾಕು ಅದೇ ಮುಕ್ತಿ ಪಥಕೆ ಸೋಪಾನ. ಇದೆ ನಿಜವಾದ ಸದಾಶಿವನ ಒಲುಮೆಗೆ ಕಾರಣ ಎಂದು ಬಸವಣ್ಣನವರು ನಿಜವಾದ ಆಚಾರ, ವಿಚಾರಗಳ ಕುರಿತು ಹೇಳುತ್ತಾರೆ. ಹೀಗೆ ಇಷ್ಟಲಿಂಗ ಪೂಜೆಯ ಮಹತ್ವ ಮತ್ತು ಮೌಢ್ಯ ಆಚರಣೆಯನ್ನು ಖಂಡಿಸುವ ಬಸವಣ್ಣನವರ ಸರಳ ಸುಂದರ ಅರ್ಥಗರ್ಭಿತವಾದ ವಚನದ ತಿರುಳಿದು.

ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply