
ಶರಣೆಂದೆ ಶಿವನಿಗೆ ಶರಣೆಂದೆಗುರುವಿಗೆ
ಶರಣೆಂದೆಜಗದಗುರುವಿಗೆ | ಬಸವಗ
ಶರಣೆಂದುಕೈಯ ಮುಗದೇನ.
ಜನಪದ ಸಾಹಿತ್ಯದ ಜೀವ ಜೀವಾಳವಾಗಿದ್ದಾರೆ ಬಸವಣ್ಣನವರು. ಆ ಜನಪದರಿಗೆ ಅವರು ಎಲ್ಲವೂ ಆಗಿದ್ದಾರೆ. ದೇವರು, ಗುರು, ಮಾರ್ಗದರ್ಶಕ, ಅರಿವು ಕೊಟ್ಟವರು, ಕಾಯಕ ದಾಸೋಹ ಪರಿಕಲ್ಪನೆ ಅಷ್ಟೇ ಅಲ್ಲ ಸುಖಕ್ಕೂ ದುಃಖಕ್ಕೂ ಎಲ್ಲಕ್ಕೂ ಅವರಿಗೆ ಆಧಾರ ಬಸವಣ್ಣನವರು.
ಬಸವ ಎಂಬ ನುಡಿ ಬಾಯಿಗೆ ಬಂದರ
ಸೂಸಾಡ್ಯಾವ ಶಿವನುಡಿ ಮನದಾಗ | ಎಲೆ ಮನವೆ
ಬಸವ ಎಂಬುದು ಬಿಡಬ್ಯಾಡ
ಎಂದು ಹರಿದಾಡುವ ಮನಸ್ಸಿಗೆ ಬೇಡಿಕೊಳ್ಳುತ್ತಾ
ಕಲ್ಲಿಗೆ ಮುಕ್ಹಾಕಿ ಎಲ್ಲ ದೇವರ ನೆನೆದೆ
ಕಲ್ಯಾಣದ ಬಸವಗ ಮೊದಲಿಗೆ | ನೆನೆದರ
ಕಲ್ಲೆಂಬುದು ನಮಗ ಹಗುರಾಗಿ
ಎಂದು ಬಸವಣ್ಣನವರನ್ನು ನೆನೆಯುತ್ತಾರೆ. ಅಲ್ಲದೆ
ಕಾಯಕ ಮಾಡುತ್ತಾ ಯಾರಿಗಿ ನೆನಿಬೇಕು
ಕಾಯಕದೊಳಗ ಕೈಲಾಸ | ಕಂಡಂತ
ಜೀಯ ಬಸವರಿಗೆ ನೆನೆಬೇಕು
ಎಂದು ಭಾವಿಸಿದ ಜನಪದರಗೆ ಬಸವಣ್ಣನವರ ನೆನಹದಿಂದಲೇ ಉದಯ ಅಸ್ತಮಾನ ಎಲ್ಲವು. ಅದಕ್ಕಾಗಿಯೆ ಹೇಳುತ್ತಾರೆ ಎದ್ದಾಗ ಶರಣೆಂದೆ, ಬಿದ್ದಾಗ ಶರಣೆಂದೆ ಎನ್ನುತ್ತಾರೆ. ಬಸವಣ್ಣನವರ ಜನನದ ಉದ್ದೇಶ ತಿಳಿಸುವ ಜನಪದರು ಅವರು ಸಾಮಾನ್ಯ ಕಾರ್ಯಕ್ಕೆ ಬಂದಿಲ್ಲ ಎನ್ನುತ್ತಾರೆ.
ಕಲ್ಯಾಣ ಬಸವಣ್ಣ ಹುಟ್ಯಾರ ಯಾತಕ್ಕ
ಕಲ್ಲಾದ ನಾಡು ಬೆಳಗಾಕ | ಬಸವಣ್ಣ
ಕಲ್ಲಿಗೆ ಜೀವ ಕೊಟ್ಟಾರ
ಕಲ್ಲಿನಂತಹ ನಾಡನ್ನು ಬೆಳಗುವುದಕ್ಕೆ ಹುಟ್ಟಿದ್ದಾರೆ ಬಸವಣ್ಣನವರು. ಭೂಮಿಯಲ್ಲಿ ನೀರಿಲ್ಲ ತಂಪಿಲ್ಲ. ಎಲ್ಲಿ ನೋಡಿದಲ್ಲಿ ಮರುಭೂಮಿ. ಆ ಮರುಭೂಮಿಯನ್ನು ಫಲವತ್ತಗೊಳಿಸಿದವರೆ ಬಸವಣ್ಣನವರು.
ಬಾಯಿತ್ತು ಮಾತಿಲ್ಲ ಕೈಯಿತ್ತು ಕೆಲಸಿಲ್ಲ
ತಲೆಯಿತ್ತು ಜ್ಞಾನ ಒಳಗಿಲ್ಲ | ಬಸವಣ್ಣ
ಮಾನವರು ನಾವು ಪಶುವಾಗಿ
ಪಶುಗಳಂತಹ ಜನರಿಗೆ ಮಾತು ಕಲಿಸಿದವರೆ ಬಸವಣ್ಣನವರು. ಕೇವಲ ಮಾತು ಮಾತ್ರವಲ್ಲ ಅರಿವನ್ನು ಕೊಟ್ಟು ಗುರುವಾದರು. ಹೀಗಾಗಿ ಎಂತೆಂತವರ ಜೀವನ ಅವರಿಂದ ಮಡಿಯಾಯ್ತು. ಅವರುಕೊಟ್ಟ ಲಿಂಗವನ್ನು ಎದೆಯ ಮೇಲೆ ಪ್ರತಿಯೊಬ್ಬರು ಧರಿಸಿ, ಗುರು ಬಸವಣ್ಣನವರ ಅರವಿನ ಮಾರ್ಗ ಹಿಡಿದು ಹೊರಟ ಎಲ್ಲರೂ ಶರಣರಾಗಿ ಅಂಗ ಲಿಂಗ ಸಮರಸಗೊಳಿಸಿಕೊಂಡರು ದೇವರ ಸ್ವರೂಪಿಗಳಾದರು. ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ ಜನಪದರು
ಮಾನವರ ದೇಹವು ಮಡಿಯಾಯ್ತು ನಿನ್ನಿಂದ
ಮಾನವರು ದೇವರು ನಿನ್ನಿಂದ| ಬಸವಣ್ಣ
ನೀ ಕೊಟ್ಟ ಲಿಂಗವ ಪೂಜಿಸುತ್ತ
ಹೀಗೆ ಅವರು ಗೈದ ಕಾರ್ಯಗಳೊಂದಿಗೆ ಅವರ ವೈಯಕ್ತಿಕ ಬಾಳಿನ ವಿವರಣೆ ಹಾಡುತ್ತಾ ಹೋಗುತ್ತಾರೆ.
ಹಡೆದವ್ವ ಮಾದಲೇ ಹಡದಪ್ಪ ಮಾದರಸ
ದೊಡ್ಡಕ್ಕಿ ಅಕ್ಕ ನಾಗಮ್ಮ| ಬಸವಗ
ದೊಡ್ಡವನು ಅಣ್ಣದೇ ವರಸ
ಎನ್ನುವ ಜನಪದರು,
ಹಾರುವರ ಮತದಾಗ ಹುಟ್ಯಾರ ಬಸವಣ್ಣ
ಹರ್ಯಾರ ಆ ಮತ ತಾ ಬಿಟ್ಟು | ಜಗದಾಗ
ಮರೆಸ್ಯಾರ ಲಿಂಗ ಧರ್ಮವ್ರು
ತಾನು ಹುಟ್ಟಿದ ಹಾರುವ ಜಾತಿಯ ಮೌಢ್ಯತೆಗಳನ್ನೆಲ್ಲ ಧಿಕ್ಕರಿಸಿದವರು ಬಸವಣ್ಣನವರು. ಆ ಜನತೆಯ ಅಜ್ಞಾನ ಅವರ ಅಸಮಾನತೆ ಬಾಲಕನಾಗಿದ್ದಾಗಲೇ ಅವರು ಧಿಕ್ಕರಿಸಿದರು ಎನ್ನುತ್ತಾರೆ. ಎಂಟನೇ ವರ್ಷಕ್ಕೆ ಅವರಿಗೆ ಮುಂಜಿವಿ ಮಾಡಲು ಬಂದಾಗ ಅದನ್ನು ಶೂಲದ ಹಗ್ಗದಂತೆ ಕಂಡಿತು ಬಸವಣ್ಣನವರಿಗೆ ಎನ್ನುತ್ತಾರೆ.
ಹಂಗೀನ ಈ ನೂಲು ಫಾಸಿಯು ಹಗ್ಗವು
ಹಂಗ್ಯಾಕ ನನಗ ಇದರದ್ದು | ನನ್ನಪ್ಪ
ಅಂಗದ ಮ್ಯಾಲ ಧರಿಸಲ್ಲ
ಫಾಸಿ, ಹಗ್ಗ, ಹಂಗೀನ ಈ ನೂಲು ಅಂಗದ ಮೇಲೆ ನಾ ಒಲ್ಲೆ ಎಂಬ ಬಸವನ ಮಾತಿಗೆ ತಂದೆ-ತಾಯಿಯಾದಿಯಾಗಿ ಎಲ್ಲರು ಸಿಟ್ಟಿಗೇಳುತ್ತಾರೆ ಆದರೆ ಆ ಬಾಲಶಿವಯೋಗಿ ಅಂಜಲಿಲ್ಲ ಅಳುಕಲಿಲ್ಲ ಮುಂದಿನ ಅನೇಕ ಸವಾಲುಗಳಿಗೆ ಇಲ್ಲಿಯೇ ಬಸವಣ್ಣನವರು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದರು ಅವರ ವಿಚಾರವಾಗಿದೆ.
ಅಂಜಿಲ್ಲ ಬಸವಣ್ಣ ಅಳುಕಿಲ್ಲ ಬಸವಣ್ಣ
ಮುಂಜಿವೆ ದಾರ ಬೆಂಕ್ಯಾಗ| ತಾ ಹಾಕಿ
ಮುಂದಕ್ಕೆ ಹೆಜ್ಜೆಯು ಇಟ್ಟಾರ
ಮುಂದಕ್ಕೆ ಹೆಜ್ಜೆ ತಾ ನಿಟ್ಟ ಬಸವಣ್ಣ ನೇರವಾಗಿ ಹೋದದ್ದು ಸಂಗಮಕ್ಕೆ. ಏಕೆಂದರೆ ಅಲ್ಲಿತನ್ನ ಪ್ರೀತಿಯ ಅಕ್ಕ ನಾಗಮ್ಮ ಇರುತ್ತಿದ್ದರು. ಅಲ್ಲಿಗೆ ಹೋಗಿ ಎಲ್ಲವನ್ನು ತನ್ನ ತಾಯಿಯ ಸ್ವರೂಪದ ಅಕ್ಕನಿಗೆ ಹೇಳುತ್ತಾರೆ. ತಮ್ಮನ ಮಾತುಗಳಿಗೆ ಅಕ್ಕ ಅಧೈರ್ಯಗೊಳ್ಳಲಿಲ್ಲ. ಅವನೊಳಗೆ ದೂರದ ಬೆಳಕೊಂದು ಕಾಣುತ್ತಾಳೆ. ತಮ್ಮನನ್ನು ಸಮಾಧಾನ ಮಾಡುತ್ತಾಳೆ. ತಿರುಗಿ ಅವರಿಗೆ ಬಾಗೇವಾಡಿಗೆ ಕರೆದೊಯ್ಯಲಿಲ್ಲ, ಬದಲಿಗೆ ಪ್ರಶಾಂತವಾದ ಕಪ್ಪಡಿ ಸಂಗಮನಾಥನ ಸಾನಿಧ್ಯಕ್ಕೆ ತರುತ್ತಾಳೆ ಆ ವಾತಾವರಣದಲ್ಲಿ ಹರ ಗುರುಗಳ ಸಾನಿಧ್ಯದಲ್ಲಿ ಬಸವಣ್ಣ ಮುಂದಿನ ಕಾರ್ಯಕ್ಕೆ ಸಜ್ಜಾದರು ಎನ್ನುತ್ತಾರೆ.
ಇವರ ಕೀರ್ತಿ ಆಗಲೇ ಎಲ್ಲೆಡೆ ಹಬ್ಬತೊಡಗಿತು. ಕಲ್ಯಾಣದ ಕಳಚುರಿ ಬಿಜ್ಜಳನ ಮಂತ್ರಿಯಾಗಿದ್ದ ಬಲದೇವರಸರ ಕಿವಿಗೆ ಬೀಳುತ್ತದೆ. ಸೋದರಳಿಯನಾಗಿದ್ದ ಬಸವಣ್ಣನವರ ಮಹಿಮೆ ಕೇಳಿದ ಮಾವ ತಡಮಾಡಲಿಲ್ಲ. ಕಪ್ಪಡಿಗೆ ಬಂದೇ ಬಿಟ್ಟರು. ಅಕ್ಕನಾಗಮ್ಮಳೊಡಗೂಡಿ ಬಸವಣ್ಣನವರನ್ನು ಕಾಣುತ್ತಾರೆ ಬಲದೆವರಸರು. ಆ ಮುಖದ ಮೇಲಿರುವ ದಿವ್ಯ ತೇಜಸ್ಸು, ಕಣ್ಣಿನೊಳಗಿರುವ ಬೆಳಕು ಕಂಡ ಬಲದೇವರು ಮಗಳು ಗಂಗಾಬಿಕೆಯನ್ನು ಕೂಡಲು ನಿರ್ಧರಿಸಿಯೇ ಬಿಡುತ್ತಾರೆ. ಅಕ್ಕನಾಗಮ್ಮಳಿಗೆ ತಿಳಿಸಿದಾಗ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ತಮ್ಮನಿಗೆ ತಿಳಿಸಿಯೇ ಬಿಡುತ್ತಾಳೆ. ಅಕ್ಕಳ ಮಾತು ಮೀರುವದೆಂತು? ಮನಸ್ಸಿನಲ್ಲಿ ಬೇಡವಾಗಿದ್ದರು ಹೊರಡುತ್ತಾಳೆ ಅಕ್ಕನಾಗಮ್ಮವರ ಗೂಡ ಕಲ್ಯಾಣಕ್ಕೆ! ಅಲ್ಲಿಯೇ ಅವರ ಮದುವೆಯಾಗುತ್ತದೆ.
ಸಂಗಯ್ಯನ ಮ್ಯಾಲರ ಭಾರವು ತಾ ಹಾಕಿ
ನುಂಗುತ್ತಾ ತನ್ನ ಒಳ ದುಃಖ | ಜಗಕ್ಕಾಗಿ
ಜಂಗಮ ನಡೆದ ಕಲ್ಯಾಣಕ.
ಗಂಗಾಬೆಯ ಕೈ ಹಿಡಿದು ಸಂಗಮನ ಶಿಶುವಿರಲು
ಸಂಗ ಶರಣರದು ಕಟ್ಟುತ್ತಾ | ತಾಕಂಡ
ಲಿಂಗದೊಳು ಅಂಗ ತಾನಿಡುತಾ
ಬಿಜ್ಜಳನಿಗೆ ಬಸವಣ್ಣನಂದರೆ ಬಲು ಪ್ರೀತಿ ಏಕೆಂದರೆ ಅದಕ್ಕೆ ಕಾರಣ ಕೊಡುತ್ತಾರೆ
“ಬಿಜ್ಜಳನು ಕೊಟ್ಟಂತ ಶಿವಲಿಪಿ ತಾ ಓದಿ
ಸಜ್ಜಾಗಿ ಹೊನ್ನ ತಾ ಅಗೆಸಿ | ಬಸವಣ್ಣ
ಬಿಜ್ಜಳಗ ಖಾಸ ಆಗ್ಯಾರ
ಮುಂದೆ ಬಲ ದೇವರಸರು ಲಿಂಗೈಕ್ಯರಾಗಲು ಆ ಸ್ಥಾನವನ್ನೆ ಬಿಜ್ಜಳ ಬಸವಣ್ಣನವರಿಗೆ ಕೊಡುತ್ತಾನೆ. ಇಂತಹ ಕಾರ್ಯಕೈಗೊಂಡ ಬಿಜ್ಜಳ ಬಹಳ ಪುಣ್ಯವಂತ!
ಕಳಚುರಿ ಬಿಜ್ಜಳ ಅವನಂತೆ ಪುಣ್ಯವಂತ
ಬಸವಣ್ಣ ನಂತಹ ಪ್ರಧಾನಿ |ತಾಪಡೆದು
ಕಲ್ಯಾಣ ನಾಡು ಆಳ್ಯಾನ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084.