
ಬಸವಣ್ಣನವರು ಪುರಾಣ ಪುರುಷನಲ್ಲ, ಪವಾಡ ಪುರುಷನಲ್ಲ, ಉದ್ಭವ ಮೂರ್ತಿಯಲ್ಲ. ಅವರು ಮೌಲ್ಯಗಳ ಮೊತ್ತ, ತತ್ತ್ವಗಳ ತೇಜ, ಆದರ್ಶಗಳ ಆಗರ, ಅರಿವಿನ ಓಗರ, ಆಚಾರದ ಅರಸ, ಅನುಭಾವದ ಶಿಖರವಾಗಿದ್ದಾರೆ. ಬಸವಣ್ಣನವರು ದಕ್ಷ ಆಡಳಿತಗಾರ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ನೈತಿಕತಜ್ಞ, ಸಂಘಟನಕಾರ, ಸಮಾನತೆಯ ಹರಿಕಾರ, ಸಮನ್ವಯತೆಯ ಸಾಧಕ, ಭಕ್ತಿ ಭಾಂಡಾರಿ, ಕಾಯಕಯೋಗಿ, ಮಹಾದಾಸೋಹಿ, ಅನುಭವ ಮಂಟಪವೆಂಬ ಧಾರ್ಮಿಕ ಸಂಸತ್ಶಿಲ್ಪಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಸಮಾಜ ಶಿಲ್ಪಿ, ದೈವತ್ವದೆಡೆಗಿನ ಶಬ್ದಸೋಪಾನ ಕಟ್ಟಿದ ವಚನಶಿಲ್ಪಿ, ಸತ್ಯಶೋಧಕ, ಶ್ರೇಷ್ಠ ತತ್ತ್ವಜ್ಞಾನಿ, ಮಹಾದಾರ್ಶನಿಕ, ಸಕಾರಾತ್ಮಕ ವಿಚಾರವಾದಿ, ವೈಜ್ಞಾನಿಕ ಮನೋಭಾವಿ ಮತ್ತು ವೈಚಾರಿಕ ಚಿಂತಕರಾಗಿದ್ದಾರೆ. ನಿರಂಜನ, ನಿಜಶರಣ, ನಿಜೈಕ್ಯ, ಕಿಂಕರತ್ವದ ಪ್ರತಿಪಾದಕ, ಶಂಕರತ್ವದ ಪ್ರತೀಕವಾದ ಮಹಾಮಹಿಮ ಬಸವಣ್ಣನವರದು ಉಪಮೆ, ಕಲ್ಪನೆ, ಪದಗಳಿಗೆ ನಿಲುಕದ ನಿಲುವಾಗಿದೆ.
ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಬದುಕುವ ಎಲ್ಲ ಅವಕಾಶಗಳು ಅವರಿಗಿದ್ದರೂ ಅವರು ಸಮಾನತೆಯ ಹೋರಾಟದ ಹಾದಿಯನ್ನು ಆರಿಸಿಕೊಂಡರು. ಅಬಲರನ್ನು ಮೇಲಕ್ಕೆತ್ತಲು ಮಂತ್ರಿ ಪದವಿಯಿಂದ ಕೆಳಗಿಳಿದು ಬಂದ ಮಹಾಂತ. ಪರಹಿತಕ್ಕೆ ಸ್ವಹಿತವನ್ನು ತೊರೆದ ಸಂತ, ಪ್ರಜೆಗಳಿಗಾಗಿ ಪ್ರಭುತ್ವವನ್ನು ಎದುರು ಹಾಕಿಕೊಂಡ ಧೀಮಂತರಾಗಿದ್ದಾರೆ.
ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ ‘ಅನುಭವ ಮಂಟಪ’ದಲ್ಲಿ ಎಲ್ಲರಿಗೂ ಮುಕ್ತ ಅವಕಾಶ, ಮುಕ್ತ ಪ್ರವೇಶವಿತ್ತು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯಯವಿತ್ತು. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಅನುಭವ ಮಂಟಪಕ್ಕೆ ಬಂದಿದ್ದರು. ಕಸಗೂಡಿಸುವ ಕಾಯಕದ ಸತ್ಯಕ್ಕ ವಚನ ರಚನೆಯ ಮಟ್ಟಕ್ಕೇರಿದಳು. ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯ ತಂದುಕೊಟ್ಟ ಮಹಾಕಾರಣಿಕ. ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣು, ಅಧಿಕಾರಕ್ಕಾಗಿ ರಕ್ತ ಕ್ರಾಂತಿಗಳೇ ನಡೆದಿವೆ. ಆದರೆ, ಶರಣರದು ಸಮಾನತೆಗಾಗಿ ನಡೆದ ವೈಚಾರಿಕ ಕ್ರಾಂತಿಯಾಗಿದೆ. ಒಂದೇ ಕುಟುಂಬದ ಬಸವಣ್ಣ, ನೀಲಾಂಬಿಕೆ, ಗಂಗಾಬಿಕೆ, ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣನವರು ವಚನ ಚಳವಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಸವಣ್ಣನವರು ಜಾತಿ ನಾಶಕ್ಕೆ ಪಣ ತೊಟ್ಟರು. ಮಾದಾರ ಚೆನ್ನಯ್ಯ ನನ್ನ ಅಪ್ಪ, ಡೋಹರ ಕಕ್ಕಯ್ಯ ನನ್ನ ಚಿಕ್ಕಪ್ಪ ಎಂದು ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡ ಮಹಾತ್ಮರಾಗಿದ್ದಾರೆ. ಅವರು ಪ್ರತಿಪಾದಿಸಿದ ಕಾಯಕ, ದಾಸೋಹ ಪರಿಕಲ್ಪನೆಗಳು ವ್ಯಕ್ತಿಗತ ಶುದ್ಧಿಯೊಂದಿಗೆ ಸಾಮಾಜಿಕ ಪ್ರಗತಿಗೂ ಕಾರಣವಾಗಿವೆ. ಕಾರ್ಲ್ ಮಾರ್ಕ್ಸ್ ಅವರದು ಆರ್ಥಿಕ ಮೂಲ ಸಿದ್ಧಾಂತವಾದರೆ, ಬಸವಣ್ಣನವರದು ಆತ್ಮ ಮೂಲ ಸಿದ್ಧಾಂತವಾಗಿದೆ.
ಬಸವಣ್ಣನವರು ವೇದಕ್ಕೆ ಒರೆ ಹಚ್ಚಿದರು. ಜಿಡ್ಡುಗಟ್ಟಿದ ಸಮಾಜೋ-ಧಾರ್ಮಿಕ ವ್ಯವಸ್ಥೆಯನ್ನು ಪ್ರಶ್ನಿಸಿ, ಪರೀಕ್ಷಿಸಿ, ವಿಶ್ಲೇಷಿಸಿ ವೈಚಾರಿಕ ಸ್ಪರ್ಶ ನೀಡಿ ವಚನಗಳ ಮೂಲಕ ವಿಶ್ವ ಸತ್ಯವನ್ನು ಬೋಧಿಸಿದರು. ಪುರೋಹಿತರು ಜನಸಾಮಾನ್ಯರಿಗೆ ದೇವಾಲಯ ಪ್ರವೇಶವನ್ನು ಬಹಿಷ್ಕರಿಸಿದರೆ ಬಸವಣ್ಣನವರು ದೇಹವೇ ದೇವಾಲಯವೆಂದು ದೇವಾಲಯ ಸಂಪ್ರದಾಯವನ್ನೇ ನಿರಾಕರಿಸಿದರು. ‘ಪಶುಪತಿ ನೀನು ಜಗಕ್ಕೇಕೋದೇವ’ ಎಂದು ಹಲವು ದೇವರುಗಳ ಹಾವಳಿ ತಪ್ಪಿಸಿದರು. ಇಷ್ಟಲಿಂಗದ ಮೂಲಕ ಅನಂತತೆಯನ್ನು ಅಂಗೈಗೆ ತಂದುಕೊಟ್ಟು ದೇವ ಮತ್ತು ಭಕ್ತರ ನಡುವಿನ ದಲ್ಲಾಳಿಗಳನ್ನು ದೂರೀಕರಿಸಿದರು. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಸಾಂಪ್ರದಾಯಿಕ ಸ್ವರ್ಗ, ನರಕಗಳನ್ನು ಅತಿಗಳೆದು ವೈಚಾರಿಕ ನೆಲೆಗಟ್ಟಿನ ಸ್ವರ್ಗ, ನರಕಗಳನ್ನು ಪ್ರತಿಪಾದಿಸಿದರು. ದಯವೇ ಧರ್ಮದ ಮೂಲವೆಂದು ಧರ್ಮವನ್ನು ದಯಾಪರಗೊಳಿಸಿದರು..
‘ಮಹಾಮಹಿಮ ಸಂಗನಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಕಕ್ಕೆಲ್ಲ ಗುರು ಕಾಣಾ ಗುಹೇಶ್ವರಾ’ ಎಂಬ ಅಲ್ಲಮರ ವಚನ ಅಕ್ಷರಶಃ ಸತ್ಯವಾಗಿದೆ. ‘ಬಸವಣ್ಣನಿಂದ ಬದುಕಿತೀಲೋಕ’ ಎಂಬ ಬಹರೂಪಿ ಚೌಡಯ್ಯನವರ ವಾಣಿಯಂತೆ ಬಸವಣ್ಣನವರ ವಿಚಾರಧಾರೆಗಳು ಇಂದು ಕಡಲಾಚೆಗೂ ಮನ್ನಣೆ ಪಡೆದಿವೆ. ಬಸವಣ್ಣ ಯುಗಯುಗದ ಉತ್ಸಾಹ. ಬಸವ ಸಾಹಿತ್ಯ ಬತ್ತದ ನಿತ್ಯ ನವೋಲ್ಲಾಸವನ್ನು ನೀಡುವ ಜ್ಞಾನಸಾಗರವಾಗಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಬಸವಣ್ಣನವರ ಕುರಿತು ನನ್ನ ಸ್ವರಚಿತ ವಚನ:
ಮಾದರಸ-ಮಾದಲಾಂಬಿಕೆಯರ
‘ಮುದ್ದಿನ ಕುವರ’ ಬಸವಣ್ಣ
ಬಾಗೇವಾಡಿ ಅಗ್ರಹಾರದ
‘ಜ್ಞಾನ ಸಾಗರ’ ಬಸವಣ್ಣ
ಅಕ್ಕನಿಗಿಲ್ಲದ ಜನಿವಾರ ನನಗೇಕೆ?
ಎಂದ ‘ಧೀರ’ ಬಸವಣ್ಣ.
ಜಾತಿಭೇದಕ್ಕೆ ಮನನೊಂದ
‘ಮಹಾನ್ ಸಂತ’ ಬಸವಣ್ಣ
ಪರಹಿತಕ್ಕೆ ಸ್ವಕುಲವನ್ನೆ ಧಿಕ್ಕರಿಸಿದ
‘ಧೀಮಂತ’ ಬಸವಣ್ಣ
ಅಬಲರಲ್ಲಿ ಆತ್ಮವಿಶ್ವಾಸ ತುಂಬಿದ
‘ಮಹಾಂತ’ ಬಸವಣ್ಣ.
ಅಧಿಕಾರದಲ್ಲಿದ್ದರೂ ವಿಚಲಿತನಾಗದ
‘ದಕ್ಷ ಆಡಳಿತಗಾರ’ ಬಸವಣ್ಣ
ಸಮತೆಗಾಗಿ ಶ್ರಮಿಸಿದ
‘ಸಮಾನತೆಯ ಹರಿಕಾರ’ ಬಸವಣ್ಣ
ಶರಣ ಪಡೆಯ ಶ್ರೇಷ್ಠ
‘ಸಂಘಟನಕಾರ’ ಬಸವಣ್ಣ.
ಅನುಭವ ಮಂಟಪವೆಂಬ ಧಾರ್ಮಿಕ
‘ಸಂಸತ್ಶಿಲ್ಪಿ’ ಬಸವಣ್ಣ
ತಾತ್ವಿಕ ತಳಹದಿಯ ಸಾತ್ವಿಕ ಸಮಾಜ ಕಟ್ಟಿದ
‘ಸಮಾಜಶಿಲ್ಪಿ’ ಬಸವಣ್ಣ
ದೇವಲೋಕಕ್ಕೆ ಶಬ್ದ ಸೋಪಾನ ಕಟ್ಟಿದ
‘ವಚನಶಿಲ್ಪಿ’ ಬಸವಣ್ಣ.
ವೇದಾಗಮಗಳಿಗೆ ಒರೆ ಹಚ್ಚಿದ
‘ಸತ್ಯಶೋಧಕ’ ಬಸವಣ್ಣ
ಪುರಾಣಗಳ ಪ್ರಶ್ನಿಸಿದ
‘ವೈಜ್ಞಾನಿಕ ಚಿಂತಕ’ ಬಸವಣ್ಣ
ಸಂಪ್ರದಾಯಗಳನ್ನು ಪರಿಷ್ಕರಿಸಿದ
‘ಮನಃಪರಿವರ್ತಕ’ ಬಸವಣ್ಣ.
ಭಕ್ತಿಯ ಸೆಲೆಯಾದ
‘ಭಕ್ತಿ ಭಂಡಾರಿ’ ಬಸವಣ್ಣ
ಭವಬಂಧನಗಳ ಬಿಡಿಸಿದ
‘ಭವರೋಗ ಪರಿಹಾರಿ’ ಬಸವಣ್ಣ
ಮೂಢನಂಬಿಕೆಗಳ ಮೆಟ್ಟಿನಿಂತ
‘ವೈಚಾರಿಕ ಕ್ರಾಂತಿಕಾರಿ’ ಬಸವಣ್ಣ.
‘ರಾಜಸ್ವ’ ಪ್ರಜೆಗಳ ಸೊತ್ತು ಎಂದ
‘ರಾಜನೀತಿಜ್ಞ’ ಬಸವಣ್ಣ
ಕಾಯಕ-ದಾಸೋಹ ಪ್ರತಿಪಾದಿಸಿದ
‘ಆರ್ಥಿಕತಜ್ಞ’ ಬಸವಣ್ಣ
ಲೋಕಾನುಭವ-ಶಿವಾನುಭವ ಸಮೀಕರಿಸಿದ
‘ನೈತಿಕತಜ್ಞ’ ಬಸವಣ್ಣ.
ಹಲವು ದೇವರ ಹಾವಳಿ ತಪ್ಪಿಸಿದ
‘ಏಕದೇವೋಪಾಸಕ’ ಬಸವಣ್ಣ
ಅನಂತತೆಯನ್ನು ಅಂಗೈಗೆ ಕೊಟ್ಟ
‘ಇಷ್ಟಲಿಂಗ ಜನಕ’ ಬಸವಣ್ಣ
ದೇಹವನ್ನು ದೇವಾಲಯವಾಗಿಸಿಕೊಂಡ
‘ದೇವತಾಂತ್ರಿಕ’ ಬಸವಣ್ಣ.
ದೈವತ್ವದೆಡೆಗಿನ ಶಿವಪಥವತೋರಿದ
‘ಶಿವಯೋಗಿ’ ಬಸವಣ್ಣ
ಜಂಗಮವೇ ಲಿಂಗವೆಂದರಿತ
‘ಜಂಗಮಯೋಗಿ’ ಬಸವಣ್ಣ
ಪ್ರಾಪಂಚಿಕದಲ್ಲಿ ಪಾರಮಾರ್ಥ ಕಂಡ
‘ಪರಮಯೋಗಿ’ ಬಸವಣ್ಣ.
ದೇವನೊಲುಮೆಗೆ ಸಪ್ತಸೂತ್ರಗಳನ್ನಿತ್ತ
‘ತತ್ತ್ವ್ವಜ್ಞಾನಿ’ ಬಸವಣ್ಣ
ಕಳ್ಳನಲ್ಲಿ ಕೂಡಲಸಂಗನ ಕಂಡ
‘ಮಹಾದಾರ್ಶನಿಕ’ ಬಸವಣ್ಣ
ಆದರ್ಶಗಳಿಗೆ ನಿದರ್ಶನವಾದ
‘ನಿದರ್ಶನಮೂರ್ತಿ’ ಬಸವಣ್ಣ.
ಸರ್ವಾಂಗ ಲಿಂಗಮಯವಾಗಿಸಿದ
‘ಲಿಂಗಾಚಾರಿ’ ಬಸವಣ್ಣ
ನಡೆ-ನುಡಿ ಸಮನ್ವಯಗೊಳಿಸಿದ
‘ಸದಾಚಾರಿ’ ಬಸವಣ್ಣ
ಸಕಲ ಜೀವಿಗಳಲ್ಲಿ ಶಿವನ ಕಂಡ
‘ಶಿವಾಚಾರಿ’ ಬಸವಣ್ಣ.
ಸಂಸಾರದೊಳಿದ್ದು ಭವಗೆದ್ದ
‘ಬ್ರಹ್ಮಚಾರಿ’ ಬಸವಣ್ಣ
ಹಮ್ಮುಬಿಮ್ಮಗಳಳಿದ
‘ಭೃತ್ಯಾಚಾರಿ’ ಬಸವಣ್ಣ
ನಿಷ್ಠೆಯನ್ನು ಗಟ್ಟಿಗೊಳಿಸಿದ
‘ಸಮಯಾಚಾರಿ’ ಬಸವಣ್ಣ.
ಅರಿಷಡ್ವರ್ಗಗಳಿಗಳುಕದ
‘ಸರ್ವಾಂಗಕಲಿ’ ಬಸವಣ್ಣ
ಬೈದವರೆನ್ನ ಬಂಧುಗಳೆಂದ
‘ಧನಾತ್ಮಕ ವಿಚಾರವಾದಿ’ ಬಸವಣ್ಣ
ಮರಣವೇ ಮಹಾನವಮಿ ಎಂದ
‘ಸ್ಥಿತಪ್ರಜ್ಞ’ ಬಸವಣ್ಣ.
ಜಲದೊಳಗಣ ತಾವರೆಯಂತಿದ್ದ
‘ನಿರಂಜನ’ ಬಸವಣ್ಣ
ಜಲದಿಂದಾದ ಮೌಕ್ತಿಕದಂತಿದ್ದ
‘ನಿಜಶರಣ’ ಬಸವಣ್ಣ
ತ್ರಿವಿಧ ವಿಕಾರಗಳನ್ನಳಿದ
‘ನಿಜೈಕ್ಯ’ ಬಸವಣ್ಣ.
ಕಲ್ಯಾಣವೆಂಬ ಪ್ರಣತೆಯ
‘ಪರಂಜ್ಯೋತಿ’ ಬಸವಣ್ಣ
ವಿಶ್ವಸತ್ಯ ಸಾರಿದ
‘ಜಗಜ್ಯೋತಿ’ ಬಸವಣ್ಣ
ಮಾನವಧರ್ಮ ಪ್ರತಿಪಾದಿಸಿದ
‘ವಿಶ್ವಗುರು’ ಬಸವಣ್ಣ, ಶ್ರೀಗುರುಬಸವ.
ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,
ಜಮಖಂಡಿ.
ಮೋಬೈಲ್ ಸಂ. 94497 13204
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in