
ಜಗತ್ತಿನಲ್ಲಿ ಹಲವಾರು ಧರ್ಮಗಳು ಅಸ್ತಿತ್ವದಲ್ಲಿವೆ. ಪ್ರತಿಯೊಂದು ಧರ್ಮದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಭಿನ್ನವಾಗಿವೆ. ನಮ್ಮ ಸುತ್ತಲಿನ ಎಲ್ಲಾ ಧರ್ಮಗಳೂ ಕೂಡ ದೇವರು ಮತ್ತು ಜೀವಾತ್ಮನ ಕುರಿತಾಗಿ ಭಿನ್ನ ನಿಲುವುಗಳನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಕೆಲವು ಧರ್ಮಗಳು ದೇವರ ಅಸ್ತಿತ್ವವನ್ನು ಸ್ಥಿರೀಕರಿಸಿದರೆ ಮತ್ತೆ ಕೆಲವು ಧರ್ಮಗಳು ದೇವರ ಅಸ್ಥಿತ್ವವನ್ನು ನಿರಾಕರಿಸುತ್ತವೆ.ಅವುಗಳಿಗೆ ಕ್ರಮವಾಗಿ ಸೇಶ್ವರವಾದಿ ಮತ್ತು ನಿರೀಶ್ವರವಾದಿ ಧರ್ಮಗಳೆಂದು ಹೇಳುವರು. ಕೆಲವು ಧರ್ಮಗಳು ಪುನರ್ಜನ್ಮ ಸಿದ್ಧಾಂತವನ್ನು ಒಪ್ಪಿದರೆ ಮತ್ತೆ ಕೆಲವು ಧರ್ಮಗಳು ಅದನ್ನು ನಿರಾಕರಿಸುತ್ತವೆ, ಕೆಲವು ಧರ್ಮಗಳು ಸ್ವರ್ಗ-ನರಕಗಳನ್ನು ಅಲ್ಲಗಳೆದರೆ ಮತ್ತೆ ಕೆಲವು ಅದನ್ನು ಒಪ್ಪುತ್ತವೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕನ್ನಡದ ಮಣ್ಣಿನ ಸೊಗಡನ್ನು ಹೊದ್ದು ಜನಸಾಮಾನ್ಯರ ಅನುಭವದೊಂದಿಗೆ ಮೈದಾಳಿದ ಲಿಂಗಾಯತ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳು ಇತರೆ ಧರ್ಮಗಳ ನಂಬಿಕೆ ಮತ್ತು ಆಚರಣೆಗಳಿಗಿಂತ ಸಂಪೂರ್ಣ ಭಿನ್ನವಾಗಿ ತೋರುತ್ತವೆ. ಹಾಗೂ ಇದರಲ್ಲಿನ ನಂಬಿಕೆ ಮತ್ತು ಆಚರಣೆಗಳು ಜಗತ್ತಿನ ಎಲ್ಲ ಮಾನವರಿಗೂ ಅನುಸರಣಾಯೋಗ್ಯವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ಧರ್ಮದ ಸಿದ್ಧಾಂತಗಳು ಏಕ ವ್ಯಕ್ತಿಯಿಂದ ನಾಲ್ಕು ಗೋಡೆಗಳ ಮಧ್ಯೆ ರೂಪುಗೊಂಡವಲ್ಲ, ಬದಲಿಗೆ ಪ್ರತೀ ವಿಚಾರವೂ ಅನುಭವ ಮಂಟಪವೆಂಬ ಪಾಕಶಾಲೆಯಲ್ಲಿ ಬಸವಣ್ಣನೆಂಬ ಮಹಾ ಬಾಣಸಿಗನ ನೇತೃತ್ವದಲ್ಲಿ 770 ಅಮರಗಣಂಗಳ ಅನುಭವದ ಮೂಸೆಯಿಂದ ಪಕ್ವವಾದ ಪಾಕವಾಗಿ ಹದಗೊಂಡು ಆಚರಣಾಯೋಗ್ಯ ಸಿದ್ಧಾಂತಗಳಾಗಿ, ಆ ಸಿದ್ಧಾಂತಗಳು ಜಗತ್ತಿನ ಪ್ರತಿ ಮಾನವನನ್ನೂ ಕಾಡುತ್ತಿರುವ ಮೌಢ್ಯ, ಅಂಧಕಾರ, ಅಂಧಾನುಕರಣೆ, ಅಜ್ಞಾನಗಳಿಂದ ಬಿಡುಗಡೆಗೊಳಿಸಿ ಸರ್ವ ಜನಾಂಗವನ್ನು ಸುಜ್ಞಾನ ಸಂಪನ್ನಗೊಳಿಸುವ ಮೂಲಕ ಅನುಭಾವದ ತುತ್ತ ತುದಿಗೇರುವಂತೆ ಮಾಡಬಲ್ಲವು. ಆ ಸಿದ್ಧಾಂತಗಳೇ ಇಂದು ನಮ್ಮ ಮುಂದಿರುವ ಅಪ್ಪಟ ಕನ್ನಡದಲ್ಲಿ ರಚಿತವಾಗಿರುವ ವಚನಗಳು.
ಧರ್ಮವೆಂದರೆ ಅದೊಂದು ಜೀವನ ಕ್ರಮ.ಜಗತ್ತಿನ ಅನೇಕ ಮಹನೀಯರು ಈ ಇಳೆಯಲ್ಲಿ ಜನರ ಬದುಕನ್ನು ಸುಧಾರಿಸಲು ತಮ್ಮದೇ ಆದ ಒಂದೊಂದು ಜೀವನ ಕ್ರಮವನ್ನು ಕೊಟ್ಟು ಅದರಂತೆ ತಾವು ನಡೆದು ತೋರಿಸಿ ಮಾನವ ಜೀವನ ವಿಧಾನವನ್ನು ಮೇಲ್ಮಟ್ಟಕ್ಕೇರಿಸಿರುವುದನ್ನು ನಾವು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರು ನಮಗೆ ತುಂಬಾ ಹತ್ತಿರ ಹಾಗೂ ಮುಖ್ಯವಾಗುತ್ತಾರೆ. ಅನೇಕ ಧರ್ಮಗಳ ಒಳಹೊಕ್ಕು ನೋಡಿದಾಗ ಅಲ್ಲಿ ಪ್ರಮುಖವಾಗಿ ಕಾಣಬರುವುದು ದೇವರು ಮತ್ತು ಜೀವಾತ್ಮ (ಭಕ್ತ). ಇವರಿಬ್ಬರ ಸಂಬಂಧ ಸಾಮಾನ್ಯವಾಗಿ ಕೊಡು-ಕೊಳ್ಳುವ ವ್ಯಾಪಾರೀ ಮನೋಭಾವದಿಂದ ಕೂಡಿರುವುದನ್ನು ಕಾಣುತ್ತೇವೆ. ಇದಕ್ಕೆ ಸಂಪೂರ್ಣ ವಿಭಿನ್ನವಾದ ನೆಲೆಯಲ್ಲಿ ನಮ್ಮ ಶರಣರು, ಬೇಡುವುದು ಭಕ್ತನ ರೀತಿಯಲ್ಲ ಭಕ್ತನು ಬೇಡಬಾರದು, ನೀಡುವಿಕೆಯೇ ಪ್ರತಿಯೊಬ್ಬ ಮಾನವನ ಗುಣವಾಗಬೇಕು. ಆಗ ಮಾತ್ರ ಸಮಾಜ ಸಮೃದ್ಧವಾಗುವುದು. ನೀಡಬೇಕಾದರೆ ಮೊದಲು ದುಡಿಯಬೇಕು. ಹೀಗೆ ಸಂಪಾದನೆ ಮತ್ತು ವಿತರಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದು ಶರಣರ ಸ್ಪಷ್ಟ ಹಾಗೂ ನೇರ ನುಡಿ. ನಗೆಯ ಮಾರಿತಂದೆ ಎಂಬ ಬಸವ ಸಮಕಾಲೀನ ಶರಣರು ಹೇಳುತ್ತಾರೆ:
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ.
ಹೊತ್ತು ಹೋರಿ ಭೂಮಿಯ ಅಗೆವಲ್ಲಿ
ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ
ಮಾಡುವ ಮಾಟ ನಷ್ಟ.
ಇದನರಿತು ವಿರಕ್ತರಾಗಿ ಹೋದಲ್ಲಿ,
ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ.
ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ,
ಆತುರವೈರಿ ಮಾರೇಶ್ವರಾ”.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1328 / ವಚನ ಸಂಖ್ಯೆ-1236)
ಭಕ್ತನಾಗಲಿ, ವಿರಕ್ತನಾಗಲಿ ಮತ್ತೊಬ್ಬರ ಬೇಡುವುದು ಸಲ್ಲದು, ನಗುಮುಖದ ಕಾಯಕವೇ ಸರ್ವಶ್ರೇಷ್ಠ ಎಂದು ಶರಣರು ತಿಳಿಸುತ್ತಾರೆ.
ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಈ ಲೋಕದ ವ್ಯವಹಾರಿಕ ಭಕ್ತರನ್ನು ಕಂಡು ಆಶ್ಚರ್ಯ ಚಕಿತರಾಗಿ ಕೇಳುತ್ತಾರೆ:
ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ?
ಸೈದಾನವನರ್ಪಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-148 / ವಚನ ಸಂಖ್ಯೆ-119)
ನಾವು ನಿತ್ಯ ಪೂಜಿಸಿ, ಹಲವಾರು ನಿಸರ್ಗ ನಿರ್ಮಿತ ಪದಾರ್ಥ, ದ್ರವ್ಯಗಳನ್ನು ದೇವರಿಗೆ ಅರ್ಪಿಸಿ ನಮಗೆ ಬೇಕಾದ ಫಲಗಳನ್ನು ಬೇಡುತ್ತೇವೆ. ಪದಾರ್ಥಗಳೆಲ್ಲವೂ ಕೂಡ ಸೃಷ್ಟಿ ಮುಖದಿಂದ ದೊರೆತಿದ್ದು, ನಾವು ಅವುಗಳನ್ನು ದೇವರಿಗೆ ಕೊಟ್ಟು ಅದಕ್ಕೆ ಪ್ರತಿಫಲವನ್ನು ಬೇಡುತ್ತೇವೆ. ಎಂಥಾ ಮೂರ್ಖತನ ಅಲ್ಲವೇ? ನಾವು ದೇವರಿಗೆ ಸಮರ್ಪಿಸಬೇಕಾದದ್ದು ಭಾವಪೂರ್ಣ ಭಕ್ತಿಯನ್ನೇ ಹೊರತು ಹೊರಗಣ ವಸ್ತುಗಳನ್ನಲ್ಲ. ನಾವು ತ್ಯಜಿಸಬೇಕಾದ್ದು ನಮ್ಮಲ್ಲಿ ಮನೆಮಾಡಿರುವ ದುರ್ಗುಣಗಳನ್ನೇ ಹೊರತು ತಲೆಯಮೇಲಿನ ಕೂದಲನ್ನಾಗಲೀ, ಹಳೆಯ ವಸ್ತ್ರಗಳನ್ನಾಗಲೀ ಅಲ್ಲ.
ಹಾಗಾದರೆ ಬಸವೇಶ್ವರರು ಪ್ರತಿಪಾದಿಸಿದ ಭಕ್ತಿಯ ಪಥ ಯಾವುದು? ದೇವಪೂಜೆ ಮಾಡುವುದಾರೆ ಯಾವುದನ್ನು ಪೂಜಿಸಬೇಕು? ಅದಕ್ಕೆ ಏನನ್ನು ಅರ್ಪಿಸಬೇಕು? ಬೇಡುವುದಾದರೆ ಏನನು ಬೇಡಬೇಕು? ಮುಂತಾದ ಹಲವಾರು ಪ್ರಶ್ನೆಗಳಿಗೆ ಅವರ ವಚನಗಳ ಮೂಲಕವೇ ಉತ್ತರ ಹುಡುಕಬೇಕು. ಲಿಂಗಾಯತನಾಗುವುದೆಂದರೆ ಕೇವಲ ದೇಹದಮೇಲೆ ಸದಾ ಲಿಂಗಧರಿಸುವುದಲ್ಲ, ಅದು ಸ್ವಯಂ ದೈವತ್ವಕ್ಕೇರುವ ಒಂದು ಪ್ರಕ್ರಿಯೆ. ಹಾಗಾದರೆ ಮಾನವನೊಬ್ಬ ದೇವನಾಗಬಲ್ಲನೇ ಎಂಬ ಪ್ರಶ್ನೆ ಸಹಜವಾಗಿ ಎದುರಾಗುವುದು. ಅದಕ್ಕೆ ಬಸವಣ್ಣನವರು ಕೇಳುತ್ತಾರೆ:
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-83 / ವಚನ ಸಂಖ್ಯೆ-930)
ಲಿಂಗವ ಧರಿಸುವುದು, ಲಿಂಗವ ತ್ರಿಕಾಲ ಪೂಜಿಸುವುದು, ಇವು ನಿತ್ಯ ನಡೆದೇ ಇರುತ್ತವೆ. ಆದರೆ ಪೂಜಿಸುವಾತನ ನಡೆ ನುಡಿಯಲ್ಲಿ ಯಾವುದೇ ಉತ್ತಮಿಕೆ ಕಾಣದಿದ್ದರೆ ಆತನು ಮಾಡಿದ ಪೂಜೆ ಆಚಾರಗಳಿಂದ ಏನು ತಾನೇ ಉಪಯೋಗ? ಪ್ರತಿಯೊಂದು ಕಾರ್ಯಕ್ಕೂ/ ಕಾಯಕಕ್ಕೂ ಪ್ರತಿಫಲವಿರಬೇಕಲ್ಲವೇ? ಹಾಗೇ ಪೂಜಿಸಿದ ಕಾರ್ಯಕ್ಕೆ ದೊರೆತ ಫಲಿತವಾದರೂ ಏನು? ಯಾತಕ್ಕಾಗಿ ಲಿಂಗದ ನೆನೆಹು, ನಿರೀಕ್ಷಣೆ, ಧ್ಯಾನಾದಿಗಳನ್ನು ನಾವು ಮಾಡಬೇಕು? ಅದಕ್ಕೆ ಬಸವಣ್ಣನವರು “ನದಿಯೊಳಗೆ ನದಿ ಬೆರೆಸಿದಂತಾಗಬೇಕು” ಅಂತ ಹೇಳತಾರೆ. ಅಂದರೆ ಪೂಜಿಸುವ ವಸ್ತುವಿನ ಸ್ವರೂಪವೇ ತಾನಾಗಬೇಕೆಂಬುದು ಬಸವ ಪ್ರಣೀತ ಲಿಂಗ ಧರ್ಮದ ಆಶಯ. ಅಂತಲ್ಲದೆ ಮಾಡುವ ಸಕಲ ಪೂಜಾಚರಣೆಗಳೂ ಕೇವಲ ವ್ಯರ್ಥ.
ಸಕಳೇಶ ಮಾದರಸ ಶರಣರು ಇಂಥಾ ಲಿಂಗಾಯತರನ್ನು ತಿವಿದು ಎಚ್ಚರಿಸುತ್ತಿದ್ದಾರೆ.
ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಆ ಮೆಳೆ ಭಕ್ತನಾಗಬಲ್ಲುದೆ?
ಮೇಹನಿಕ್ಕಿ ಮೆಯ್ಯನೊರಸಿದಡೆ, ಪಶುಗಳೆಲ್ಲ ಮೆಚ್ಚುವವು.
ಅನ್ನವನಿಕ್ಕೆ ಹಿರಣ್ಯವ ಕೊಟ್ಟಡೆ, ಜಗವೆಲ್ಲ ಹೊಗಳುವುದು.
ಒಳಗನರಿದು, ಹೊರಗೆ ಮರೆದವರ ಎನಗೆ ತೋರಿಸಾ,
ಸಕಳೇಶ್ವರದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1672 / ವಚನ ಸಂಖ್ಯೆ-468)
ಅದಕ್ಕೆ ಪೂರಕವಾಗಿ ಅಲ್ಲಮಪ್ರಭುದೇವರೂ ಹೇಳುತ್ತಾರೆ:
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗಸ್ವಾಯತವಾದಡೇನು? ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-152 / ವಚನ ಸಂಖ್ಯೆ-179)
ನಮಗೆ ಹಸಿವಾದರೆ ಹೊಟ್ಟೆತುಂಬಾ ತೃಪ್ತಿಯಾಗುವಂತೆ ಊಟ ಮಾಡಬೇಕು ಅದು ಬಿಟ್ಟು ಹೊಟ್ಟೆಯ ಮೇಲೆ ರುಚಿಯಾದ ಸ್ವಾದಿಷ್ಟಕರವಾದ ಬುತ್ತಿಯ ಗಂಟನ್ನು ಕಟ್ಟಿಕೊಡರೆ ಏನು ಪ್ರಯೋಜನ ಅಲ್ಲವೇ? ಹಾಗೇ ಜೀವಾತ್ಮನಿಗೆ ಪರಮಾತ್ಮನನ್ನರಿಯಬೇಕೆಂಬ ಬಯಕೆಯುಂಟಾದರೆ ಕೇವಲ ಅಂಗದ ಮೇಲೆ ಲಿಂಗವ ಧರಿಸಿದರೆ ಸಾಕೇ? ಕೇವಲ ಬಾಹ್ಯವಾದ ಅಲಂಕಾರಿಕ ಪೂಜೆಯಿಂದ ಪ್ರಯೋಜನವಾದರೂ ಏನು? ಅದನ್ನು ಅರಿತು ಅನುಭವಿಸಬೇಡವೇ? ಅಂಗದ ಮೇಲೆ ಕಟ್ಟಿದ (ಆಯತವಾದ) ಲಿಂಗವು ಸನ್ನಿಹಿತವಾಗಿ ನಮ್ಮ ಇಡೀ ಕಾಯವೇ ಲಿಂಗಸ್ವರೂಪವಾಗಬೇಕು. ಇಲ್ಲದಿದ್ದರೆ ಕಟ್ಟಿಕೊಂಡ ಲಿಂಗವದು ಮೆಳೆಯ ಮೇಲೆ ಇಟ್ಟ ಕಲ್ಲಿಗೆ ಸಮ. ಆ ಲಿಂಗಕ್ಕೂ ಈ ಕಾಯಕ್ಕೂ ಯಾವುದೇ ರೀತಿಯ ಸಂಬಂಧ ಏರ್ಪಡದು. ಹಾಗಾಗಿ ಲಿಂಗವನ್ನು ಕೊಟ್ಟಾತ ಗುರುವಾಗಲಿಲ್ಲ, ಕಟ್ಟಿಕೊಂಡಾತ ಭಕ್ತನಾಗಲಿಲ್ಲ. ಇಡೀ ಪ್ರಸಂಗವು ಕೇವಲ ಬೂಟಾಟಿಕೆಯ ನಾಟಕದಂತಾಗುವುದು.
ಹಾಗಾದರೆ ಜೀವಾತ್ಮನು ಲಿಂಗ ಸ್ವರೂಪವಾಗುವುದೆಂತು? ಜೇಡರ ದಾಸಿಮಯ್ಯ ಶರಣರು “ಜೀವ” “ಶಿವ”ನಾಗುವ (ಲಿಂಗವಾಗುವ) ಪರಿಯನ್ನು ಅರುಹಿರುವ ಮಾರ್ಗ ಅತ್ಯದ್ಬುತ!
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ.
ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ.
ಅನುಭಾವ ಉಳ್ಳವರ ಕಂಡು
ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ
ನರಕದಲ್ಲಿಕ್ಕಯ್ಯಾ! ರಾಮನಾಥ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1275 / ವಚನ ಸಂಖ್ಯೆ-723)
ಯಾಂತ್ರಿಕವಾದ ಭಕ್ತಿ ನಿರುಪಯುಕ್ತ. ಮಾಡುವ ಭಕ್ತಿಯಿಂದ ನಮ್ಮೊಳಗೆ ಯಾವುದೇ ರೀತಿಯ ದೈವೀ ಸಂವೇದನೆಗಳುಂಟಾಗದಿದ್ದರೆ ಅಂಥಾ ಭಕ್ತಿ, ಪೂಜೆ ಕೇವಲ ವ್ಯರ್ಥ. ಅಂಥಾ ಪೂಜೆಯೆಂಬ ಕ್ರಿಯೆಯೂ ಕೂಡ ನರಕವೇ ಸರಿ ಎಂಬುದು ದಾಸಿಮಯ್ಯ ಶರಣರ ಅಭಿಮತ.
ಷಣ್ಮುಖಸ್ವಾಮಿ ಶರಣರು ನುಡಿಯುತ್ತಾರೆ:
ಲಿಂಗದ ನಡೆ, ಲಿಂಗದ ನುಡಿ,
ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ,
ಲಿಂಗದಲ್ಲಿ ಮನವಡಗಿರ್ದ, ಲಿಂಗಾನುಭಾವಿಗಳ
ಸಂಗದಲ್ಲಿರಿಸಿ ಸಲಹಯ್ಯಾ ಎನ್ನ ಅಖಂಡೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1077 / ವಚನ ಸಂಖ್ಯೆ-577)
ನಮ್ಮ ನಡೆ, ನುಡಿ, ನೋಟ, ಬೇಟ, ಕೂಟ, ಮನಗಳು ಲಿಂಗ ಸ್ವರೂಪವಾಗಬೇಕು. ಅಂದರೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲವೂ ಲಿಂಗ ತತ್ವದ ಮೂಲಕವೇ ನಡೆಯಬೇಕು, ತನ್ಮೂಲಕ ಹೊಂದುವ ದೈಹಿಕ ಅನುಭವವೆಲ್ಲವೂ ಮಾನಸಿಕ ಅನುಭಾವವಾದಾಗ ಜೀವನು ಶಿವನಾಗುವನು. ಇದೇ ಶರಣರು ಸಾಧಿಸಿದ ಮುಕ್ತಿಮಾರ್ಗ.
ಶರಣ ಉರಿಲಿಂಗಪೆದ್ದಿಗಳು ಬಸವಣ್ಣನವರ ಸಮಕಾಲೀನ ಶರಣರು:
ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು,
ಕ್ರೋಧಕ್ಕೆ ಕ್ರೋಧಿಸುವ ಮಹಾಕ್ರೋಧಿಯೆ ಲಿಂಗನಿಷ್ಠಾಪರನು,
ನಿರ್ಲೋಭಕ್ಕೆ ಲೋಭಿಸುವ ಮಹಾಲೋಭಿಯೆ ಲಿಂಗಾವಧಾನಿ.
ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯೆ ಲಿಂಗಾನುಭಾವಿ.
ಅಷ್ಟಮದಂಗಳೊಡನೆ ಮದೋಹಂ ಎಂಬ
ನಿರ್ಮದಗ್ರಾಹಿಯೆ ಲಿಂಗಾನಂದ ಸೌಖ್ಯನು.
ಮತ್ಸರಕ್ಕೆ ಮತ್ಸರಿಸುವ ಮಹಾಮತ್ಸರಗ್ರಾಹಕನೆ
ಲಿಂಗಸಮರಸ ಸಂಬಂಧವೇದ್ಯನು.
ಇಂತೀ ಷಡ್ವರ್ಗಂಗಳಿಗೆ ವೈರಿಯಾಗಿರ್ಪ ಶಿವಭಕ್ತನೆ ಸದ್ಭಕ್ತನು.
ಆ ಭಕ್ತದೇಹಿಕದೇವ
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1110 / ವಚನ ಸಂಖ್ಯೆ-1416)
ಎಂದು ಹೇಳುವ ಮೂಲಕ ಸಾಮಾನ್ಯನೊಬ್ಬ ಲಿಂಗತತ್ವವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಲಿಂಗತತ್ವ ಸಾಧಕನು ನಿರಾಶೆಯನ್ನು ಹೊಂದುವ ಮಹಾಬಯಕೆಯನ್ನು ಹೊಂದಬೇಕಂತೆ, ಕ್ರೋಧರಹಿತನಾಗುವ ಹೆಬ್ಬಯಕೆಯನ್ನು, ನಿರ್ಲೋಭವನ್ನು ಬಯಸುವ ಮಹಾಲೋಭಿಯಾಗುವ ಮಹದಾಸೆ, ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯಾಗಬೇಕು, ಅಷ್ಟಮದಂಗಳ ಮೆಟ್ಟಿನಿಲ್ಲುವ ನಿರ್ಮದನಾಗಬೇಕು, ಮತ್ಸರವನ್ನು ಮತ್ಸರಿಸುವ ಮಹಾ ಮತ್ಸರಿಯಾಗಬೇಕು, ಹೀಗೆ ಸಾಧಕನು ತನ್ನಲ್ಲಡಗಿದ ಅರಿಷಡ್ವರ್ಗಗಳ ಮೆಟ್ಟಿನಿಂತು, ಅವುಗಳ ಸ್ವಭಾವ ಪಲ್ಲಟಮಾಡಿ ಲೌಕಿಕದಲ್ಲಿ ಜೀವನಾಗಿ ಕಂಡರೂ ಅಲೌಕಿಕ ಸಿದ್ಧನಾಗಿ (ಶಿವಸ್ವರೂಪಿಯಾಗಿ) ತನ್ನ ಗುರಿಯನ್ನು ಮುಟ್ಟುವನು. ಇದು ಶರಣರು ಈ ಲೋಕಕ್ಕೆ ಕೊಟ್ಟ ಹೊಸ ಪರಿಯ ಭಕ್ತಿಮಾರ್ಗ. ಇಲ್ಲಿ ಅಂಗವೇ ಲಿಂಗವಾಗುವುದು, ಜೀವನೇ ಶಿವನಾಗುವುದು, ಅದೇ ಶಿವ-ಜೀವರೈಕ್ಯ, ಲಿಂಗಾಂಗ ಸಾಮರಸ್ಯ.
ಹೀಗೆ ಲಿಂಗಾಂಗ ಸಾಮರಸ್ಯ ಸಾಧಿಸಿದ ಸಿದ್ಧನ ಕಾಯ ಶುದ್ಧ, ಮನ ಸಿದ್ಧ, ಭಾವ ಪ್ರಸಿದ್ಧವಾದ ಲಿಂಗಾನುಭಾವಿಯ ಸರ್ವಾಂಗವೂ ಮಹಾಪ್ರಸಿದ್ಧವೆನಿಸುವುದು. ಅಂದರೆ ಭಾವಲಿಂಗೈಕ್ಯ ಸಾಧಿಸಿದ ಮಹಿಮನ ಕಾಯವು ಶುದ್ದಪ್ರಸಾದವೆಂದೂ, ಆತನ ಮನವು ಸಿದ್ಧಪ್ರಸಾದವೆಂತಲೂ ಹಾಗೂ ನಿರ್ಭಾವಹೊಂದಿದ ಭಾವವು ಪ್ರಸಿದ್ಧಪ್ರಸಾದವೆಂದೂ ಕರೆಯಲ್ಪಡುವುದು. ಅಂದರೆ ಸಿದ್ಧಪುರುಷನ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ತನುಗಳು ಕ್ರಮವಾಗಿ ಶುದ್ಧ ಸಿದ್ಧ ಮತ್ತು ಪ್ರಸಿದ್ಧ ಪ್ರಸಾದವಾಗಿ ಆತನ ಸರ್ವಾಂಗವೂ ಮಹಾಪ್ರಸಾದ ಕಾಯವೆನಿಸಿವುದು. ಇದು ಪ್ರತಿಯೊಬ್ಬ ಮಾನವನೂ ಸಾಧಿಸಬೇಕಾದ ಸಿದ್ಧಿ. ಇಂಥಾ ಸಾಧನೆಯನ್ನು ಸಾಧಿಸಿದ ಸಿದ್ಧಪುರುಷನು ಹುಟ್ಟಿನಿಂದ ಯಾವುದೇ ಜಾತಿ ಧರ್ಮದವನಾಗಿದ್ದರೂ ಅವನೇ ಶರಣ. ಈ ಶರಣತ್ವದ ಸಂಪಾದನೆಯೇ ಲಿಂಗತತ್ವದ ಸಂಪಾದನೆ (ಪರಮಾತ್ಮನ ಸಂಪಾದನೆ). ಅದೇ ಪರಿಪೂರ್ಣತ್ವದ ನೆಲೆ. ಆ ಪರಿಪೂರ್ಣವೇ ಶೂನ್ಯ. ಆ ಮಹಾ ಶೂನ್ಯದ ಸಂಪಾದನೆಯೇ ಮಾನವ ಜೀವನದ ಗುರಿ ಎಂದು ಬಸವಾದಿ ಶರಣರು ಈ ಲೋಕಕ್ಕೆ ದಿಕ್ಸೂಚಿಯನ್ನು ಕೊಟ್ಟು ಹೋಗಿದ್ದಾರೆ. ಆ ಗುರಿಯೆಡೆಗೆ ಕ್ರಮಿಸಲು ಸೂಚನಾ ಫಲಕಗಳಾಗಿ ವಚನ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟು ಹೋಗಿದ್ದಾರೆ. ಆ ಪಥವಿಡಿದು ಸಾಗಿ ಶೂನ್ಯವನ್ನು ಹೊಂದಬೇಕಾದ್ದು ನಮ್ಮೆಲ್ಲರ ಆತ್ಯಂತಿಕ ಗುರಿಯಾಗಬೇಕು. ಅದೇ ನಾವು ಬಸವಾದಿ ಶರಣರಿಗೆ ಸಲ್ಲಿಸುವ ನಮನ, ಪೂಜೆ, ಅರ್ಚನೆ ಸಕಲವೂ. ಹೀಗಲ್ಲದೆ ಬರೀ ಬಾಹ್ಯದಲ್ಲಿ ಶರಣರ ಭಾವಚಿತ್ರಗಳಿಗೆ ಮಾಡುವ ಪೂಜೆ, ಅರ್ಚನೆ, ಪ್ರಾರ್ಥನೆಗಳು ಬರೀ ಡಾಂಭಿಕ ಸೋಗಲಾಡಿತನ. ಅರಿವು ಆಚಾರದಲ್ಲಿ ಪ್ರಕಟವಾಗಬೇಕು ಮತ್ತು ಆಚಾರವು ಅನುಭಾವದಲ್ಲಿ ನಿರ್ವಾಣ ಹೊಂದಬೇಕು.
ಡಾ. ಪಂಚಾಕ್ಷರಿ ಹಳೇಬೀಡು,
ಬೆಂಗಳೂರು.
ಮೋಬೈಲ್. ನಂ. 86608 07775