ಭಕ್ತ ಸ್ಥಲ / ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ಷಟ್ ಸ್ಥಲಗಳಲ್ಲಿ ಪ್ರಾರಂಂಭಿಕ ನಿವೇದನೆ ಭಕ್ತ ಸ್ಥಲವಾಗಿದೆ. ದೇವರೊಂದಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ತಾತ್ವಿಕ ಅನುಸಂಧಾನದ ಸಮರ್ಪಣೆ ಇದು. ಶರಣರ ಆನಂದದ ಭಾವವೇ ಭಕ್ತಿ ಭಾವವಾಗಿದೆ. ಇದೊಂದು ತೆರೆನಾಗಿ ದೇವರೊಂದಿಗೆ ಒಂದಾಗುವ ಭಾವುಕ ಪ್ರಜ್ಞೆ. ತಾಯಿ ಭಾವದ ಮಮತೆಯದು. ಭಕ್ತನಾಗುವುದೆಂದರೆ ಮನ ಆರ್ದ್ರವಾಗುವುದು, ನೀರಾಗುವುದು. ಇನ್ನೊಂದರ ಜೊತೆಗೆ ಸಂಯೋಗವಾಗುವ ಪರಿಯದು. ಹೀಗಾಗಿ ಇಲ್ಲಿ ಅದ್ವೈತದ ಆತ್ಮತೃಪ್ತಿ ಅಡಗಿರುತ್ತದೆ. ಈ ಮನದಲ್ಲಿ ಲೌಕಿಕ ವ್ಯವಹಾರಗಳು ನಡೆಯುತ್ತಿರುವುದು ಭಕ್ತಿ ಎಂಬ ಮಂತ್ರ ಸ್ವರೂಪಗಳಿಂದ. ಬಸವಣ್ಣನವರಿಗೆ ಸಂಗಮನಾಥನೊಂದಿಗೆ ಉಂಟಾಗುವ ಭಕ್ತಿ ಭಾವ, ಅಲ್ಲಮಪ್ರಭುಗಳಿಗೆ ಗುಹೇಶ್ವರನೊಂದಿಗೆ ಏಕವಾಗುವ, ಅಕ್ಕಮಹಾದೇವಿಗೆ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ದೈವಿಕ ಆತ್ಮೀಯತೆ ಇವೆಲ್ಲವೂ ಭಕ್ತಿಯಿಂದಲೇ ಆನಂದದ ಅರಿವನ್ನು ಕಾಣಲು ಸಾಧ್ಯ. ಇದೊಂದು ತೆರೆನಾಗಿ ಭಕ್ತಿಯ ಅಮೂರ್ತ ತತ್ವಗಳಾಗಿವೆ.

ಭಕ್ತಸ್ಥಲದಲ್ಲಿ ಭಕ್ತಿಯ ಔನ್ಯತ್ಯದಲ್ಲಿ ಶರಣನಾಗಲು ಸಾಧ್ಯ. ಶಿವನಾಗಲು ಸಾಧ್ಯ ಇದೆಲ್ಲಾ ನಿಗೂಢ ವೈಯಕ್ತಿಕ ಭಕ್ತಿಯ ಶಿವಾನುಸಂಧಾನವಾಗುವ ಪರಿಯದು. ಅಲ್ಲಮ ಪ್ರಭುಗಳ ಈ ವಚನ:

ನೆಲದ ಮರೆಯಲಿ ಅಡಗಿದ ನಿಧಾನದಂತೆ
ಮುಗಿಲ ಮರೆಯಲಡಗಿದ ಮಿಂಚಿನಂತೆ
ಬಯಲ ಮರೆಯಲ್ಲಡಗಿದ ಮಿಂಚಿನಂತೆ
ಕಂಗಳ ಮರೆಯಲಡಗಿದ ಬೆಳಗಿನಂತೆ
ಗುಹೇಶ್ವರ ನಿಮ್ಮ ನಿಲುವು

ಭಕ್ತಿಯ ತೀವ್ರತೆಯನ್ನು ನಿರ್ಧಿಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ನೆಲದ ಮರೆಯಲ್ಲಿ ಅಡಗಿದ ಪವಿತ್ರವಾದ ಭಕ್ತಿಯ ಸಂಪತ್ತದು. ಆಕಾಶದಲ್ಲಿ ಅಡಗಿದ ಮಿಂಚಿನ ಬೆಳಗಲ್ಲಿ ಭಕ್ತನ ಚೈತನ್ಯವಡಗಿದೆ. ಭಕ್ತಸ್ಥಲದಲ್ಲಿ ಶಿವನನ್ನು ಕಾಣುವ ಆಧ್ಯಾತ್ಮಿಕ ಸುಖವಡಗಿರುತ್ತದೆ. ಬೀಜದಲ್ಲಿ ಬೀಜ ಅಡಗಿರುವಂತೆ ಅಗೋಚರ ಶಕ್ತಿಯದು‌. ಕಂಗಳ ಕತ್ತಲಲ್ಲಿ ವಿಸ್ಮಯದ ಭಕ್ತನ ನಿವೇದನೆ ಅಡಗಿರುತ್ತದೆ. ಪಂಚಭೂತಗಳಲ್ಲಿ ಪ್ರಕೃತಿಯ ಚೈತನ್ಯ ಮನೋವಿಜ್ಞಾನವಾಗಿ ಕಂಡಾಗ ಭಕ್ತಸ್ಥಲ ಮುಕ್ತವಾಗಿ ಬಿಚ್ಚಿ ಕೊಳ್ಳುತ್ತದೆ. ಆಗ ಭಕ್ತಿಯ ಸಮೃದ್ಧತೆ ಆತ್ಮ ವಿದ್ಯೆಯಾಗುತ್ತದೆ.

ಶರಣ ಧರ್ಮದಲ್ಲಿ ಅರಿವು ಆಚಾರಕ್ಕೆ ವಿಶಿಷ್ಟ ಮನ್ನಣೆಯನ್ನು ಕಾಣಬಹುದು. ಅರಿವೆಂದರೆ ಜ್ಞಾನ. ಆಚಾರವೆಂದರೆ ಒಳ್ಳೆಯ ನಡತೆ. ಭಕ್ತಸ್ಥಲದಲಿ ಅರಿವು ವರ್ಣನಾತೀತವಾದ ಹೊಳಹು.

ತನ್ನೊಳಗಣ ಅರಿವು ತನ್ನಲ್ಲಿಯೇ
ತೋರಿದಲ್ಲದೆ ಅನ್ಯರಲಿ ತೋರಬಲ್ಲುದೆ
ತನ್ನಲಿ ತಾನೇ ಇದ್ದಿತು ಅನ್ನ ತಾನೇ ಪಕ್ವಕ್ಕೆ
ಬಂದು ತನ್ನಲ್ಲಿ ಹುಟ್ಟಿದ ನೆನಹಿನ
ಬಿನ್ನಾಣ ವೇನೆಂಬೆನಯ್ಯಾ ರಾಮನಾಥ

ಅರಿವೇ ಗುರು ಶರಣರ ನಿಗೂಢತೆಯನ್ನು ಬಿಂಬಿಸುತ್ತದೆ. ಈ ಸೃಷ್ಟಿಯಲ್ಲಿ ಜೀವವೂ ರಹಸ್ಯವಾದದ್ದು ತನ್ನೊಳಗಿನ ಅರಿವು ನಿಗೂಢತೆಯ ಒಂದಂಶ ನಾವೇ ಆಗಿರುವಾಗ ಅದನ್ನು ಕಾಣುವ ಕೌಶಲ್ಯ ನಮ್ಮಲ್ಲಿರುತದೆ.
ತನ್ನೊಳಗಣ ಅರಿವು ತನ್ನಲ್ಲಿಯೆ ತೋರಿದಲ್ಲದೆ ಅನ್ನ್ಯರಲ್ಲಿ ತೋರಬಲ್ಲುದೇ? ಅರಿವಿನ ಮಾರ್ಗ ಸ್ಪಷ್ಟವಾಗಿರಬೇಕು. ನಮಗೆ ಕಾಣದ ಶಕ್ತಿಯೊಂದರಲ್ಲಿ ಆಂತರಿಕ ಶ್ರದ್ದೆ ಮತ್ತು ನಿಷ್ಠೆಗಳು ಅವಶ್ಯವಾಗಿರಬೇಕು. ಅನ್ಯರ ಮನದಲ್ಲಿ ಶೋಧನೆ ಮಾಡಲು ಸಾದ್ಯವಿಲ್ಲ. ಅರಿವು ಪಕ್ವವಾದಾಗ ಮತ್ತೊಬ್ಬ ವ್ಯಕ್ತಿಯ ಮಾನಸಿಕ ಶೋಧನೆ ಮೂಡಲು ಸಾಧ್ಯವಾಗುತ್ತದೆ. ಭಕ್ತಸ್ಥಲದಲ್ಲಿ ಅರಿವಿನ ಮಾರ್ಗ ಹುಡುಕಬೇಕಾದರೆ ನಮ್ಮ ಅರಿವಿನ ಪ್ರಜ್ಞೆ ಜಾಗೃತವಾಗಿರಬೇಕು.

ಅರಿವು ಸತ್ಯದ ಮಾರ್ಗದಲ್ಲಿ ಮುನ್ನಡೆಸುವ ಗುರು ಪಕ್ವತೆಯ ಸಂಕೇತ, ಆತ್ಮವಿಶ್ವಾಸದ ಹಾದಿ. ಶರಣರ ಪ್ರಕಾರ ಆಧ್ಯಾತ್ಮದ ಭಕ್ತಸ್ಥಲವು ಸಹಜ‌ ಬದುಕಿನ ಅನುಭವಕ್ಕೆ ದಕ್ಕಿಸಿಕೊಂಡ ಹಂತವಾಗಿದೆ. ತನ್ನೊಳಗಣ ಅರಿವು ತನ್ನನ್ನು ಎಚ್ಚರಿಸಬೇಕೆಂದು ಜೇಡರ ದಾಸಿಮಯ್ಯನವರು ಪ್ರಶ್ನಿಸುತ್ತಾರೆ. “ಅರಿದೆವೆಂಬಿರಿ ಅರಿದ ಪರಿಯೆಂತು ಹೇಳಿರಿ”
ಎನ್ನುವ ಮನದಾಳದ ಮಾತಾಗಿದೆ.

ಶರಣರು ಜ್ಞಾನ ಮತ್ತು ಕ್ರಿಯೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಬದುಕು ಸಂಸಾರದಲ್ಲಿ ಮುಳುಗಿದೆ. ಪಂಚೇಂದ್ರಿಯಗಳು ಸಂಸಾರಕ್ಕೆ ವಶವಾಗಿವೆ. ಅರಿಷಡ್ ವರ್ಗಗಳ ಸಂಗ ಸುಖವು‌ ಕ್ಷಣಿಕವಾದದ್ದು. ಆದರೆ ಸಂಸಾರ ವಿಸ್ಮಯವೆಂದು ಹೇಳಿದ ಪರಿ ಹೀಗಿದೆ:

ಪಂಚೇಂದ್ರಿಯಗಳೆಂಬ ಪಂಚವಿಷಯವೆಂಬ
ವಿಷಯದೊಳಗೆ ಅಳುತ್ತಾ ಏಳುತ್ತಾ ಬೀಳುತ್ತ
ಲಿದ್ದೇನೆ. ಓಂ ನಮಃ ಶಿವಾಯ ಓಂ ನಮಃ
ಶಿವಾಯನೆಂಬುತಿರ್ದೇನೆ ಕೂಡಲಸಂಗಮ
ದೇವಾ ಪರಿಹರಿಸುವವರ ಕಾಣೆ


ಈ ಪ್ರಕೃತಿ ಪಂಚ ವಿಷಯಗಳಿಂದ ಆವೃತವಾಗಿದೆ. ಇದನ್ನು ಸಂಸಾರವೆಂದು ಪ್ರಪಂಚವೆಂದು ತಿಳಿದಿದ್ದೇವೆ. ನಮ್ಮ ಭೌತಿಕ ವ್ಯವಹಾರಗಳು ಸರಿಯಾಗಿದ್ದರೆ ಸಂಸಾರ ಸುಖಮಯವಾಗಿರುತ್ತದೆ. ನಮ್ಮ ಆಗು ಹೋಗುಗಳ ವ್ಯವಹಾರ ಸಮರ್ಪಕವಾಗಿದೆ ಎಂದು ನಂಬುತ್ತೇವೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಪಂಚ ವಿಷಯದೊಳಗೆ ಪಂಚೇಂದ್ರಿಯಗಳ ವ್ಯಾಮೋಹಕ್ಕೆ ಒಳಗಾಗಿರುತ್ತದೆ. ನಮ್ಮ ಮಾನಸಿಕ ಬೌದ್ಧಿಕ ದ್ವಂದ್ವದಲ್ಲಿ ಶಾಂತಿ ನೆಮ್ಮದಿಯನ್ನು ಅರಸುತ್ತೇವೆ. ಪಂಚ ವಿಷಯಗಳು ಮನದ ಆಸೆಗಳನ್ನು ಉದ್ದೀಪನಗೊಳಿಸುತ್ತವೆ

ಪಂಚ ವಿಷಯಗಳು ಆಶ್ರಯ ನೀಡಿರುವ ಈ ಪೃಥ್ವಿಯಲ್ಲಿ ಆಸೆಯ ಅಗ್ನಿ ಎಂದೂ ಶಮನವಾಗುವುದಿಲ್ಲ. ಈ ಆಸೆ ಎನ್ನುವುದು ಬೆಂಕಿಯಂತೆ ದಹಿಸುತ್ತಿರುತ್ತದೆ. ಮನ ನಿರ್ಮಲವಾಗಿ ದೈವತ್ವವನ್ನು ಪಡೆಯಬೇಕಾದರೆ ಶಿವನ ಸಾಮಿಪ್ಯದಲ್ಲಿ ಪ್ರಣವ ಮಂತ್ರದ ಮೂಲಕ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. “ಓಂ – ಅ-ಉ-ಮ” ಕಾರಗಳು ನಮಃ ಶಿವಾಯವೆಂಬ ಪ್ರಣವವು ಭಕ್ತಿಯ ಚೈತನ್ಯವನ್ನು ಬಿಂಬಿಸುತ್ತದೆ. ಓಂಕಾರವನ್ನು ಶಿವನೆಂದೇ ಉಪಾಸನೆ ಮಾಡಬೇಕು.

ಓಂ ಅನಂತವಾದದ್ದು. ಪೃಥ್ವಿಯ ಒಡೆಯ ಶಿವಮಯವಾದುದು. ಸಂಸಾರಿಕ ಬಂಧನದಲ್ಲಿ ಬಿಡುಗಡೆ ಹೊಂದಬೇಕಾದರೆ ಓಂಕಾರದ ಉದ್ಗೀತದಿಂದ ಭಕ್ತಿ, ಜ್ಞಾನ, ಕ್ರಿಯೆ ಉಂಟಾಗುತ್ತದೆ. ಓಂ ನಮಃ ಶಿವಾಯ ಪೃಥ್ವಿಯ ಮೂಲಕ ಎಲ್ಲವನ್ನು ಕೇಳಿಸಿಕೊಳ್ಳುವ ಸ್ವತಂತ್ರತೆ ಶಿವ ಭಕ್ತನಿಗೆ ಮಾತ್ರವಿರುತ್ತದೆ. ಸಂಸಾರದಲ್ಲಿ ಅನುರಕ್ತರಾದವರು ಕಿವುಡರು, ಶ್ರವಣ ಸಂವೇದನೆಯ ಸೂಕ್ಷ್ಮತೆ ಅರಿಯರು. ಹೀಗಾಗಿ ಶಿವ ಚೈತನ್ಯವನ್ನು ಪಡೆದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಈ ಲೋಕದಲ್ಲಿ ಪಂಚ ವಿಷಯಗಳಿಗಾಗಿಯೇ ಬಡಿದಾಡುವವರನ್ನು ಎಚ್ಚರಿಸುವ ಭಕ್ತನ ಮನೋವೇದನೆ ಭಕ್ತಸ್ಥಲದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ.

ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್‌ ಸಂ. 94499 46839.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply