ಭಾಗ-01: ಮುಖಪುಟ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ

ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಹಣೆಯಲ್ಲಿ ವಿಭೂತಿ ಬಿಟ್ಟು ಕುಂಕುಮ ಶೋಭಿತರು So Called ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ವಿರುದ್ಧವಾಗಿ ಬಸವ ದ್ರೋಹಿ ಕೆಲಸ ಮಾಡುತ್ತಿರುವುದು ಜನ ಜನಿತವಾದ ವಿಷಯ. ಈ ವಿಷಯ ಯಾಕೆ ಬಂತು ಅಂದರೆ ಕಳೆದೆರಡು ತಿಂಗಳಿಂದ “ವಚನ ದರ್ಶನ” ಎನ್ನುವ ಪುಸ್ತಕವನ್ನು ನೂರಾರು ಕಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಡುಗಡೆ ಮಾಡಿದ್ದಾರೆ ಮತ್ತು ಮುಂದೂ ಮಾಡುವವರಿದ್ದಾರೆ. ಸಂಘ ಪರಿವಾರದ ಹೆಸರು ಯಾಕೆ ಇಲ್ಲಿ ಪ್ರಸ್ತಾಪವಾಯ್ತು ಅಂದರೆ R.S.S ನ ಕಟ್ಟಾ ಅನುಯಾಯಿ ಹಾಗೂ ಕರ್ನಾಟಕದಲ್ಲಿ R.S.S ನ ಪ್ರಮುಖ ನಾಯಕರಲ್ಲಿ ಒಬ್ಬರಾದ ಶ್ರೀಮಾನ್‌ ಬಿ. ಎಲ್.‌ ಸಂತೋಷ್‌ ಅವರು ಈ ಪುಸ್ತಕದ ಬಿಡುಗಡೆ ಮತ್ತು ಪ್ರಚಾರದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಈ ವೈದಿಕರ ನೇತೃತ್ವದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳ ಮತ್ತು ವಚನ ಸಾಹಿತ್ಯದ ವೈದಿಕೀಕರಣ ನಡೆಯುತ್ತಿದೆ. ವೈಷ್ಣವ ದೇವರುಗಳ ವಚನಾಂಕಿತಗಳಿರುವ ಶರಣ-ಶರಣೆಯರ ವಚನಗಳನ್ನೇ ಗುರಿ ಮಾಡಿ ಮತ್ತು ವೈದಿಕ ಶಬ್ದಗಳನ್ನು ಒಳಗೊಂಡಿರುವ ವಚನಗಳನ್ನೇ ಹುಡುಕಿ ಹುಡಿಕಿ ಹೆಕ್ಕಿ ತೆಗೆದು ಅವುಗಳನ್ನು ವೈದಿಕೀಕರಣ ಮತ್ತು ವೈಷ್ಣವೀಕರಣ ಶೈವೀಕರಣ ಮಾಡುವ ಹುನ್ನಾರ ನಡೆಸುತ್ತಿರುವುದು ನಮಗೆಲ್ಲಾ ತಿಳಿದು ಬರುವ ಸಂಗತಿ.

ಮಹಾರಾಷ್ಟ್ರದ ಕೊಲ್ಲಾಪುರದ ಸಮೀಪವಿರುವ ಕನೇರಿ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ವಚನಗಳನ್ನು ಹೀಯಾಳಿಸುತ್ತಾ “ಕೇವಲ ಬೆರಳೆಣಿಕೆಯಷ್ಟಿರುವ ವಚನಗಳಿಂದ ಸಿದ್ಧಾಂತವನ್ನು ಕಟ್ಟಲು ಸಾಧ್ಯವಿಲ್ಲ” ಎಂದಿದ್ದಾರೆ. ಕೇವಲ 800 ಶ್ಲೋಕಗಳಿರುವ ಭಗವದ್ಗೀತೆ ಇಡೀ ಪ್ರಪಂಚಕ್ಕೆ ಮಾದರಿಯಾಗುವುದಾದರೆ ಈಗ ಲಭ್ಯವಿರುವ ಸುಮಾರು 35,000 ಕ್ಕೂ ಹೆಚ್ಚು ಇರುವ ವಚನಗಳು ಒಂದು ಸಿದ್ಧಾಂತವನ್ನು ಒಂದು ಧರ್ಮವನ್ನು ಕಟ್ಟಲು ಸಾಧ್ಯವಿಲ್ಲಾ ಎನ್ನುವುದು ಹಾಸ್ಯಾಸ್ಪದ ಮತ್ತು ಸ್ವಾಮೀಜಿಯವರ ಮೂರ್ಖತನ ಎನ್ನಬಹುದಲ್ಲವೇ? ಹಾಗೂ ಸ್ವಾಮಿಗಳ ಅಂಕಗಳನ್ನು ಎಣಿಸುವ Measuring Scale ಆದರೂ ಏನು ಅನ್ನೋದು ಗೊತ್ತಾಗತಿಲ್ಲಾ.

ಈ ಶ್ರೀ ಸಿದ್ಧಗಿರಿ ಸಂಸ್ಥಾನ ಮಠ 7 ನೇ ಶತಮಾನದಿಂದ ಅಸ್ತಿತ್ವದಲ್ಲಿ ಇದೆಯೆಂದು ಅವರ Website https://www.siddhagirimatham.org/ ನಲ್ಲಿ ಬರೆದಿದ್ದಾರೆ. ಶ್ರೀ ಸಿದ್ಧಗಿರಿ ಸಂಸ್ಥಾನ ಮಠದ ಪರಂಪರೆಯಲ್ಲಿ ವಚನಗಳನ್ನು ರಚನೆ ಮಾಡಲಾಗಿದ್ದು ಈಗಿನ ಪೀಠಾಧಿಪತಿಗಳು ವಚನಗಳನ್ನೇ ಹೀಯಾಳಿಸುವ ಮಟ್ಟಿಗೆ ಅಥವಾ ತೀರ ತೀರ ಯಾಕೆ ಕನಿಷ್ಠ ಮಟ್ಟಕ್ಕೆ ಅಥವಾ ತಳಸ್ಥರಕ್ಕೆ ಇಳಿದರು ಎನ್ನುವುದು Million-Dollar Question. ಹೀಗೆ ಬಸವಣ್ಣನವರಿಗೆ ಮತ್ತು ವಚನಗಳಿಗೆ ಹೀಯಾಳಿಸುವ ಹೀನ ಮನಸ್ಸು ಇವರಿಗೆ ಯಾಕೆ ಬಂತು ಗೊತ್ತಿಲ್ಲ. ಅಥವಾ ಯಾರಾದರೂ ಇವರಿಗೆ ಹಣದ ಆಮಿಷ ತೋರಿಸಿದ್ದಾರೆಯೆ??? ಹಣದ ಆಮಿಷಕ್ಕೆ ಒಳಗಾಗುವ ಸ್ವಾಮಿಗಳಂತೂ ಖಂಡಿತ ಅಲ್ಲ ಎನ್ನುತ್ತದೆ ನನ್ನ ಮನಸ್ಸು. ಅವರು ಕೃಷಿ ಕ್ಷೇತ್ರದಲ್ಲಿ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ. ಸಾವಯವ ಕೃಷಿ ಮತ್ತು ಮಣ್ಣಿನ ಸವಕಳಿಯ ಬಗ್ಗೆ ಅವರಿಗಿರುವ ಜ್ಞಾನದ ಅಗಾಧತೆಯ ಪರಿಚಯವಾಯಿತು.    

ಇನ್ನು ಗದಗ ಶ್ರೀ ಶಿವಾನಂದ ಸ್ವಾಮೀಜಿ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿಯವರ ಕಥೆ ರೋಚಕವಾದದ್ದು. ಮೈಸೂರಿನಲ್ಲಿದ್ದವರು ಏಕಾ ಏಕಿ ಮೈಸೂರಿನಿಂದ ಹೊರ ಬಿದ್ದರು. ನಂತರ ಬಂದು ಸೇರಿದ್ದು ವಿಜಯಪುರದ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಜ್ಞಾನ ಯೋಗಾಶ್ರಮಕ್ಕೆ. ಅಲ್ಲಿ ಏನು ಆಯಿತೋ ಗೊತ್ತಿಲ್ಲ, ಗದಗ ಶ್ರೀ ಶಿವಾನಂದ ಸ್ವಾಮೀಜಿ ಮಠಕ್ಕೆ ಕಿರಿಯ ಸ್ವಾಮಿಗಳಾಗಿ ನಿಯುಕ್ತಿಗೊಂಡರು. ಶಿವಾನಂದ ಮಠದ ಈಗಿನ ಹಿರಿಯ ಸ್ವಾಮೀಜಿಯವರಿಗೂ ಮತ್ತು ಇವರ ನಡುವೆ ಯಾವಾಗಲೂ ಬೀದಿ ಜಗಳವಾಗುವುದು ನಿರಂತರ ನಡೀತಾನೇ ಇರುತ್ತದೆ.  

ವಿಭೂತಿ ಬಿಟ್ಟು ಕುಂಕುಮಧಾರಿಯಾಗಿ ಕಂಗೊಳಿಸುತ್ತಾ ಮಠದ ಪರಂಪರೆ ಮತ್ತು ಸಂಸ್ಕೃತಿಯನ್ನು ಗಾಳಿಗೆ ತೂರಿ ವೈದಿಕರು ಹೇಳಿದ ಹಾಗೆ ಕುಣಿಯುತ್ತಿರುವುದು ಬಸವಾದಿ ಶರಣರಿಗೆ ಮತ್ತು ಆ ಮಠದ ಪರಂಪರೆಗೆ ದ್ರೋಹ ಮಾಡಿದಂತೆ. ವಚನ ದರ್ಶನ ಎನ್ನುವ ಅಧ್ವಾನ ಪುಸ್ತಕಕ್ಕೆ ಶ್ರೀ ಸದಾಶಿವಾನಂದ ಅವರೇ ಗೌರವ ಸಂಪಾದಕರಾಗಿ ವಚನಗಳನ್ನು ಶರಣ ಸಿದ್ಧಾಂತಗಳನ್ನು ಹೀಯಾಳಿಸುವ ಕೀಳು ಮಟ್ಟಕ್ಕೆ ಇಳದಿದ್ದು ಲಿಂಗಾಯತರಿಗೆ ಹಾಗೂ ಬಸವಾದಿ ಶರಣರನ್ನು ಆರಾಧಿಸುವವರಿಗೆ ಬಹಳ ನೋವಾಗಿದೆ.

ಶತ ಶತಮಾನಗಳಿಂದ ವೈದಿಕ ಸಂಸ್ಕೃತಿ ಮತ್ತು ಪರಂಪರೆಗಳನ್ನು ಅಪ್ಪಿಕೊಂಡು ಮತ್ತು ಆಚರಿಸಿಕೊಂಡು ಬಂದ ಪಂಚಮಸಾಲಿ ಲಿಂಗಾಯತರು ಮತ್ತು ವೀರಶೈವರು ಬಸವಣ್ಣನವರನ್ನು ಗುರು ಎಂದು ಒಪ್ಪಿಕೊಂಡ ಘಟನೆಗಳು ಇಲ್ಲವೇ ಇಲ್ಲ. ಆದರೆ ಯಾವಾಗ ಅವರಿಗೆ ಹಣಕಾಸಿನ ಜರೂರತ್ತು ಬೀಳುತ್ತೋ ಆವಾಗ ಈ ಪಂಚಮಸಾಲಿ ಮತ್ತು ವೀರಶೈವರಿಗೆ ಬಸವಣ್ಣನವರ ಆರಾಧಕರಾದ ಲಿಂಗಾಯತರೇ ನೆನಪಾಗುತ್ತಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಯಾವಾಗ ವಚನಾನಂದ ಸ್ವಾಮಿಗಳು ವಿರಾಜಮಾನವಾದರೋ ಅವರಿಗೆ ಎರಡು ಕೋಡು ಬಂದಂತೆ ವ್ಯವಹರಿಸುತ್ತಿದ್ದಾರೆ. ವಚನ ಸಾಹಿತ್ಯ, ಬಸವ ತತ್ವ ಹಾಗೂ ಶರಣ ಸಿದ್ಧಾಂತದ ಗಂಧ ಗಾಳಿಯೂ ಅವರಿಗೆ ಗೊತ್ತಿಲ್ಲ ಎನ್ನುವುದಕ್ಕೆ ಅವರು ತೀರ ತೀರ ಬಾಲಿಷ ಹೇಳಿಕೆ ನೀಡುತ್ತಿರುವುದರಲ್ಲಿಯೇ ಎಂಥ ಧಡ್ಡನಿಗೂ ಅರ್ಥವಾಗುತ್ತದೆ. ಮಾಜಿ ಸಚಿವರಾದ ಶ್ರೀಮಾನ್‌ ಮುರುಗೇಶ ನಿರಾಣಿಯವರು ಹೇಗೆ ಇವರನ್ನು ಪೀಠಕ್ಕೆ ಆಯ್ಕೆ ಮಾಡಿದರು ಎನ್ನುವುದೇ ಸೋಜಿಗದ ಸಂಗತಿ. ಈಗ ಅವರಿಗೆ ವಚನ ದರ್ಶನ ಎನ್ನುವ ಅಧ್ವಾನ ಪುಸ್ತಕ ಕೈಗೆ ಸಿಕ್ಕಿರುವುದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ. ಆ ಪುಸ್ತಕವನ್ನೂ ಸಹ ವಚನಾನಂದ ಸ್ವಾಮಿಗಳು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ.‌ ಶ್ರೀಮಾನ್‌ ಮುರುಗೇಶ ನಿರಾಣಿ ಸಾಹೇಬರು ಅವರಿಗೆ ಓದಲು ಹೇಳಿದರೆ ಉತ್ತಮ.

ಇದಿಷ್ಟು ಈ ಮೂರು ಸ್ವಾಮಿಗಳು ವಚನ ದರ್ಶನ ಎನ್ನುವ ಎಡಬಿಡಂಗಿ ಪುಸ್ತಕವನ್ನು ಅಪ್ಪಿಕೊಂಡು, ಒಪ್ಪಿಕೊಂಡು ಬಸವಣ್ಣನವರನ್ನು ವಿಷ್ಣುವಿನ ಹನ್ನೊಂದನೇ ಅವತಾರವೆನ್ನುವಂತೆ ಬಿಂಬಿಸಲು ತಮ್ಮೆಲ್ಲ ತನು-ಮನ-ಧನವನ್ನು ವ್ಯಯ ಮಾಡುತ್ತಿದ್ದಾರೆ. ಧನ ಯಾರದೋ ಗೊತ್ತಿಲ್ಲ, ಆದರೆ ತನು-ಮನವನ್ನು ನೀಡುತ್ತಿರುವುದಂತೂ ಸೂರ್ಯ-ಚಂದ್ರರಷ್ಟೇ ಸತ್ಯ. ಇನ್ನು ಈ ಪುಸ್ತಕದ ಸಂಪಾದಕರಾದ ಶ್ರೀಮಾನ್‌ ಜನಮೇಜಯ ಉಮರ್ಜಿ, ಡಾ. ನಿರಂಜನ ಪೂಜಾರ, ಶ್ರೀಮಾನ್. ಚಂದ್ರಪ್ಪ ಬಾರಂಗಿ ಮತ್ತು ಡಾ. ಸಂತೋಷಕುಮಾರ ಪಿ. ಕೆ ಎನ್ನುವ ಚತುರಾಚಾರ್ಯರನ್ನು ಪರಿಚಯಿಸುವುದಕ್ಕೆ ಮುನ್ನ ಈ ಪುಸ್ತಕದ ಮುಖಪುಟದಲ್ಲಿ ಮುದ್ರಿಸಿರುವ ಶ್ರೀ ರಾಮನ ಛಾಯಾಚಿತ್ರವನ್ನು ಗ್ರಹಿಸುವ ಪ್ರಯತ್ನವನ್ನು ಮಾಡೋಣ.

ಕಳೆದ ಮೂವತೈದು ವರ್ಷಗಳ ವಚನ ಸಾಹಿತ್ಯ ಅಧ್ಯಯನದಲ್ಲಿ ನಾನು ಕಂಡ ಹಾಗೇ ಬಸವಣ್ಣನವರ ಋಷಿ ಮುನಿಗಳ ಹಾಗೆ ಧ್ಯಾನಸ್ಥ ಸ್ಥಿತಿಯಲ್ಲಿರುವ ಮತ್ತು ಮೀಸೆಯಿಲ್ಲದ ಛಾಯಾ ಚಿತ್ರವನ್ನಾಗಲಿ ಅಥವಾ ಚಿತ್ರ ಪಟವನ್ನಾಗಲೀ ಅಥವಾ ಕಲಾ ಕೃತಿಯನ್ನಾಗಲೀ ನಾನು ಕಂಡಿಲ್ಲ ಮತ್ತು ಕೇಳಿಲ್ಲ. ಸಂಘ ಪರಿವಾರ ಮತ್ತು ವೈದಿಕ ಮನಸ್ಸುಗಳು ಬಸವಣ್ಣನವರ ಧ್ಯಾನಸ್ಥ ಸ್ಥಿತಿ ಮತ್ತು ಮೀಸೆ ಇರುವ ಚಿತ್ರಪಟ ಅಥವಾ ಕಲಾಕೃತಿಯನ್ನು ಹುಡುಕಿ ಕೊಟ್ಟರೆ ಅವರಿಗೆ ಆಭಾರಿಯಾಗಿರುತ್ತೇವೆ.‌ ಈ ಮುಖಪುಟವನ್ನು ಗಮನಿಸಿದರೆ ವಚನಕ್ಕೂ ಹಾಗೂ ದರ್ಶನಕ್ಕೂ ಮತ್ತು ದರ್ಶನಕ್ಕೂ ಹಾಗೂ ಇಲ್ಲಿ ಮೂಡಿಸಿರುವ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಛಾಯಾಚಿತ್ರವನ್ನು ನೋಡಿದ ತಕ್ಷಣ ಥಟ್ಟನೇ ನಮಗೆ ಹೊಳೆಯುವುದು ಇದು ಪಕ್ಕಾ ಶ್ರೀ ರಾಮನ ಅವತಾರವೆಂಬಂತೆ ಚಿತ್ರಿಸಿದ್ದಾರೆ.

ಅಂದರೆ ಇಂಥ ಒಂದು ತಿರುಚಿ ತಿದ್ದಿ ಮಾಡಿದ ಈ ಚಿತ್ರ ಬಸವಣ್ಣನವರದಲ್ಲಾ. ಇದು ಶ್ರೀ ರಾಮನ ಚಿತ್ರ ಅನ್ನೋದು ಪಕ್ಕಾ ಸತ್ಯ. ಮುಖಪುಟದಲ್ಲಿನ ಚಿತ್ರದ ಮೈ ಬಣ್ಣ ನೀಲಿ ಬಣ್ಣದ್ದು. ನಮಗೆಲ್ಲಾ ಗೊತ್ತಿದೆ ಇದು ವಿಷ್ಣುವಿನ ಅವತಾರ ಶ್ರೀ ಕೃಷ್ಣ ಮತ್ತು ಶ್ರೀ ರಾಮನ ಮೈ ಬಣ್ಣ. ಹಾಗಾದರೆ ಇದು ಬಸವಣ್ಣನವರ ಮೈ ಬಣ್ಣಕ್ಕೆ ಹೋಲುತ್ತದೆಯಾ? ನನಗೂ ಗೊತ್ತಿಲ್ಲ ಮತ್ತು ಈ ಚಿತ್ರ ಪಟವನ್ನು ಚಿತ್ರಿಸಿದ ಕಲಾಕಾರನಿಗೂ ಗೊತ್ತಿರುವ ಸಾಧ್ಯತೆಗಳು ಇಲ್ಲ. ಯಾಕಂದರ 12 ನೇ ಶತಮಾನದಲ್ಲಿ ಬದುಕಿದ್ದ ಬಸವಣ್ಣನವರನ್ನ ಖುದ್ದು ನೋಡಲಿಕ್ಕೆ ನಮಗೆಲ್ಲಾ ಸಾಧ್ಯವೇ ಇಲ್ಲ. ಆದರೆ ಕಳೆದ 900 ವರ್ಷಗಳಿಂದ ಯಾರಾದರೂ ಬಸವಣ್ಣವರ ಮೈ ಬಣ್ಣ ನೀಲಿ ಅಂತಾ ತೋರಿಸಿದ್ದಾರೆಯೇ? ಊಹೂಂ No Chance. ನಿಮಗೆ ಖಂಡಿತ ಬಸವಣ್ಣನವರ ಮೈ ಬಣ್ಣ ನೀಲಿ ಇರುವ ಯಾವುದೇ ಕಲಾಕೃತಿ ನಿಮಗೆ ಲಭ್ಯವಾಗುವುದಿಲ್ಲ. ಹಾಗಾದರೆ ಈ ಸಂಘ ಪರಿವಾರ ಮತ್ತು ವೈದಿಕರ ಪಟಾಲಂ ಈಗೇಕೆ ಬಸವಣ್ಣನವರನ್ನು ನೀಲಿ ಮಾಡಿ ತೋರಿಸುತ್ತಿದ್ದಾರೆ??? ಉತ್ತರ ಬಹಳ ಸ್ಪಷ್ಟ. ನಾವು ಈವತ್ತು ಈ ಹುನ್ನಾರವನ್ನು ಹುಟ್ಟು ಹಾಕಿದರೆ ಇನ್ನು ಇಪ್ಪತ್ತು ವರ್ಷಗಳಲ್ಲಿ ಬಸವಣ್ಣನವರನ್ನು ವಿಷ್ಣುವಿನ 11 ನೇ ಅವತಾರವನ್ನಾಗಿ ಖಂಡಿತ ಪ್ರಪಂಚಕ್ಕೆ ತೋರಿಸಬಹುದು ಎನ್ನುವ ಹುಂಬತನ ಮತ್ತು ಮೂರ್ಖತನ.

ಇಂಥಾ ಎಷ್ಟೆಷ್ಟೋ ಹುನ್ನಾರಗಳನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿ ಅಂದೂ ಅನುಭವಿಸಿದ್ದರು. 14/15 ನೇ ಶತಮಾನದಲ್ಲಿಯೂ ಕೂಡ ಬಸವಣ್ಣನವರ ಆರಾಧಕರೂ ಅನುಭವಿಸಿದ್ದರು. ಮತ್ತೇ ಈಗ ನಾವುಗಳು ಅನುಭವಿಸುತ್ತಿದ್ದೇವೆ. ಆದರೆ ಬಸವಣ್ಣನವರ ಚಿಂತನೆಗಳಿಗೆ ಒಂದು ಕೂದಲಷ್ಟೂ ಕೂಡ ಕೊಂಕಾಗಿಲ್ಲ ಎನ್ನುವುದನ್ನು ಈ ಸಂಘ ಪರಿವಾರ ಪ್ರಣೀತ ನಾಟಕ ಮಂಡಳಿ ಮತ್ತು ಅವರನ್ನು ಅನುಸರಿಸುತ್ತಿರುವ ಸ್ವಾಮಿಗಳೂ ಕೂಡ ಅರ್ಥ ಮಾಡಿಕೊಳ್ಳಬೇಕು. ನೀವೇನೆ ವಚನ ಸಾಹಿತ್ಯದ ಕುರಿತು ಈಗ ಸಮಝಾಯಿಸಿ ಕೊಡಬಹುದು. ಆದರೆ ನಿಮ್ಮ ಅಂತರಂಗವನ್ನು ಒಮ್ಮೆ ಕೇಳಿ ನೋಡಿ ನೀವೆ ಅತಹತ್ಯೆ ಮಾಡಿಕೊಳ್ಳುವಷ್ಟು ಖಿನ್ನತೆ ನಿಮ್ಮ ಮೇಲೆ ನಿಮಗೇ ಆಗುತ್ತದೆ ಅನ್ನೋದಂತೂ ಸತ್ಯ.

ಮುಖಪುಟದಲ್ಲಿರುವ ಚಿತ್ರವನ್ನು ಬಹಳ ಸೂಕ್ಷ್ಮವಾಗಿ ಒಂದು ಸಲ ಅವಲೋಕಿಸಿದರೆ ಹಿಂಭಾಗದಲ್ಲಿ‌ ಶ್ರೀ ಚಕ್ರದ ಪರಿಕಲ್ಪನೆ, ವಚನ ಕಟ್ಟುಗಳ ಬದಲಿಗೆ ವೇದ-ವೇದಾಂತ ಗ್ರಂಥ ಮತ್ತು ಶ್ರೀ ರಾಮಚಂದ್ರನವರ ಅವತಾರದ ಬಿಲ್ಲು ಬಾಣದ ಚಿಹ್ನೆಗಳು ಗೋಚರಿಸುತ್ತವೆ.

ಇಂಥ ವೈದಿಕ ಸಂಸ್ಕೃತಿಯನ್ನು ಮುಖಪುಟದಲ್ಲಿ ಅತ್ಯಂತ ಸೂಕ್ಷ್ಮವಾಗಿ ಅಳವಡಿಸಿ ಶರಣರ ಸಿದ್ಧಾಂತಗಳನ್ನು ಮತ್ತು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ದಿಕ್ಕು ತಪ್ಪಿಸುವ ಅತ್ಯಂತ ಹೇಯ ಮತ್ತು ಹೀನ ಕೃತ್ಯವನ್ನು ಮಾಡಲಾಗಿದೆ. ಶಿವ-ಶಕ್ತಿಯವರ ಸ್ವರೂಪವಾದ ಶ್ರೀ ಚಕ್ರ ಮತ್ತು ಶ್ರೀ ರಾಮನ ಅವತಾರದ ಬಾಣದ ಚಿಹ್ನೆಯನ್ನು ಈ ಪುಸ್ತಕದ ಮುಖಪುಟದಲ್ಲಿ ಚಿತ್ರಿಸಿರುವುದು ಎಷ್ಟು ಸಮಂಜಸ ಎನ್ನುವುದನ್ನು ಸಂಘ ಪರಿವಾರ ಮತ್ತು ಅವರ ಪಟಾಲಂ ತಿಳಿಸಬೇಕು. ಇನ್ನು ಬಸವಣ್ಣನವರ ಕಾಲಘಟ್ಟದಲ್ಲಿ ಕೇವಲ ತಾಳೆಗರಿಯಲ್ಲಿ ಮಾತ್ರ ವಚನಗಳನ್ನು ಬರೆದದ್ದನ್ನು ಕಾಣಬಹುದು. ಇದನ್ನು ಬಿಟ್ಟು ವೇದ-ವೇದಾಂತ ಪುಸ್ತಕದ ರೂಪವನ್ನು ಬಸವಣ್ಣನವರ ಮುಂದೆ ವಿರಾಜಮಾಣವಾಗಿದ್ದು ವೈದಿಕ ಪಟಾಲಂನ ದುಷ್ಟಬುದ್ಧಿಯ ಸಂಕೇತ ಅಲ್ಲದೇ ಮತ್ತಿನ್ನೇನು? ಇದಕ್ಕೆ ಅವರು ಉತ್ತರ ನೀಡಬೇಕು. ಇದು ಅವರ ಗುರುತರ ಜವಾಬ್ದಾರಿಯೂ ಕೂಡ. ಯಾಕೆ ಇಂಥ ಎಡಬಿಡಂಗಿ ಕೆಲಸಗಳನ್ನು ಅಥವಾ ಹುನ್ನಾರವನ್ನು ಹುಟ್ಟು ಹಾಕತಾ ಇದೀರಿ ಅನ್ನೋದು ಬಸವಾದಿ ಶರಣರ ಆರಾಧಕರಾದ ನಮಗೆ ಸ್ಪಷ್ಟವಾಗಿ ತಿಳಿದಿದೆ.

ತೀರ ಇತ್ತೀಚೆಗೆ Facebook Page ನ Rashtram Mysore ಎನ್ನುವ ಒಬ್ಬ ದುರಹಂಕಾರಿ ವೈದಿಕನಿಗೆ ಇದೇ ಪ್ರಶ್ನೆಯನ್ನು ಕೇಳಿದಾಗ ಅವನು ಕೊಟ್ಟ ಉತ್ತರ ಎಷ್ಟು ಕೆಟ್ಟದಾಗಿದೆ ಅನ್ನೋದನ್ನ ಈ Message ಗಳನ್ನು ನೋಡಿದರೆ ಅರ್ಥವಾಗುತ್ತೆ ಈ ಸಂಘ ಪರಿವಾರ‌ ಮತ್ತು ಅವರ ಪಟಾಲಂನ ಹುಚ್ಚಾಟ ಮತ್ತು ಅರಚಾಟ. ಶರಣ ಶ್ರೀ ಶಂಕರಗೌಡ ಬಿರಾದಾರ ಅವರಿಗೇನೆ ಪ್ರಶ್ನೆ ಕೇಳುವಷ್ಟು ದುಷ್ಟತನ ಇವನಿಗೆ ಎಲ್ಲಿಂದ ಬಂತು ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಅವನ Facebook profile name “Rashtram Mysore” ನೋಡಿದ ಕೂಡಲೇ ಅರ್ಥ ಆಗುತ್ತೆ ಇವನ ಹಿಂದಿನ ದುಷ್ಟ ಶಕ್ತಿಗಳು ಯಾರೆಂದು. ಅಂದರೆ ಈ ಪುಸ್ತಕವನ್ನು ಸಮರ್ಥಿಸಿಕೊಳ್ಳಲು ಎಲ್ಲ ಕಡೆಗೂ ತಮ್ಮ ವೈದಿಕ ವಿಚಾರವಾದಿಗಳನ್ನು ಪ್ರತಿಷ್ಠಾಪಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಲಿಂಗಾಯತರಾದ ನಮಗೆ ಈ ತಂತ್ರಗಾರಿಕೆ ಗೊತ್ತಾಗೋದಿಲ್ಲ ಅಂತ ನೀವು ಅಂದುಕೊಂಡರೆ ಅದು ನಿಮ್ಮ ಮೂರ್ಖತನ.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ,
ಸುಭಾಷ್‌ ನಗರ, ಕ್ಯಾತ್ಸಂದ್ರ,
ತುಮಕೂರು – 572 104.
ಮೋಬೈಲ್. ನಂ     : +91 9741 357 132.
ಈ-ಮೇಲ್‌        : vijikammar@gmail.com

Loading

This Post Has One Comment

  1. H M Somashekarappa

    ವಿವರವಾದ ತುಂಬಾ ಅದ್ಭುತವಾದ ಲೇಖನ. ಧನ್ಯವಾದಗಳು.

Leave a Reply