
ಸತ್ತವರ ಕಥೆಯಲ್ಲ ಜನನದ |
ಕುತ್ತದಲಿ ಕುದಿಕುದಿದು ಕರ್ಮದ |
ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ ||
ಹೊತ್ತು ಹೋಗದ ಪುಂಡರಾಲಿಪ |
ಮತ್ತಮತಿಗಳ ಗೋಷ್ಠಿಯಲ್ಲಿದು |
ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || 13 ||
(ಪ್ರಭುಲಿಂಗಲೀಲೆ-ಡಾ. ಬಿ. ವ್ಹಿ. ಮಲ್ಲಾಪೂರ / 2011 / ಕನ್ನಡ ಮತ್ತು ಸಂಸ್ಕೃತಿ ಇಲಾಖೆ / ಪುಟ ಸಂಖ್ಯೆ-5 / ವಚನ ಸಂಖ್ಯೆ-13)
ಬಸವಣ್ಣ ಹೇಳಿದ್ದು ವೇದಗಳ ಸಾರವನ್ನೇ ಎನ್ನುವಂಥ ಎಡಬಿಡಂಗಿ ಹೇಳಿಕೆಯ youtube link ನಿಮಗಾಗಿ.

ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ಬೆಂಗಳೂರು ವಿಶ್ರಾಂತ ಉಪಕುಲಪತಿಗಳಾಗಿ ಗೌರವಾನ್ವಿತರೆನಿಸಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ಅವರ ಬರಹಗಳು, ಉಪನ್ಯಾಸಗಳು ಮತ್ತು ವಿದ್ವತ್ಪೂರ್ಣ ಚಿಂತನೆಗಳು ಮಾಧ್ಯಮಗಳಲ್ಲಿ, ಕೃತಿರೂಪಗಳಲ್ಲಿ ನಿರಂತರವಾಗಿ ಹರಿದು ಬರುತ್ತಿವೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ವೇದ ಉಪನಿಷತ್ತುಗಳನ್ನು ಆಧುನಿಕ ರೀತಿಯಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಪ್ರಮುಖರೆನಿಸಿದ್ದಾರೆ. ಇಂಥ ಸಂಸ್ಕೃತದ ಪ್ರಕಾಂಡ ಪಂಡಿತರೂ ಮತ್ತು ವಿದ್ವಾಂಸರು ವಚನ ದರ್ಶನ ಎನ್ನುವ ವಚನ ಸಾಹಿತ್ಯವನ್ನು ದಿಕ್ಕು ತಪ್ಪಿಸುವ ಪುಸ್ತಕಕ್ಕೆ ಮುನ್ನುಡಿ ಬರೆದು ತಾವೂ ದಿಕ್ಕು ತಪ್ಪಿದ್ದಾರೆ.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು 05.06.1952 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರ (ಕಸಬ) ಗ್ರಾಮದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಅವರು ಸಿದ್ಧಗಂಗೆಯ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತವನ್ನು ಕಲಿತರು. ಮಹಾನ್ ವಿದ್ವಾಂಸರಾದ ವಿದ್ವಾನ್ ವಿಶ್ವನಾಥ ಶರ್ಮ ಅವರಲ್ಲಿ ಕಾವ್ಯವನ್ನು ಅಧ್ಯಯನ ಮಾಡಿ ಸಂಸ್ಕೃತ ಅಲಂಕಾರ ವಿದ್ವತ್ ಉತ್ತೀರ್ಣತೆ ಸಾಧಿಸಿದರು. ಎಂ. ಎ. ಸಂಸ್ಕೃತ, ಎಂ. ಎ. ಕನ್ನಡ, ಕನ್ನಡ ಪಂಡಿತ್, ಗಮಕ ವಿದ್ವಾನ್ ಮತ್ತು ತುಮಕೂರು ವಿಶ್ವವಿದ್ಯಾಲಯದ ಡಿ. ಲಿಟ್ ಪದವಿಗಳನ್ನು ಗಳಿಸಿದರು.
1992–97: ರೀಡರ್, ಹಂಪಿ ಕನ್ನಡ ವಿಶ್ವವಿದ್ಯಾಲಯ.
1996-97: ನಿರ್ದೇಶಕರು, ಕನ್ನಡ ಅಧ್ಯಯನ ಕೇಂದ್ರ-ಹಂಪಿ ಕನ್ನಡ ವಿಶ್ವವಿದ್ಯಾಲಯ.
1997-98: ನಿರ್ದೇಶಕರು, ದ್ರಾವಿಡಿಯನ್ ಅಧ್ಯಯನ-ಹಂಪಿ ಕನ್ನಡ ವಿಶ್ವವಿದ್ಯಾಲಯ.
1998-01: ರಜಿಸ್ಟ್ರಾರ್, ಹಂಪಿ ವಿಶ್ವವಿದ್ಯಾಲಯ.
2001-04: ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
2005-08: ಡೀನ್, ಭಾಷಾ ವಿಜ್ಞಾನ ವಿಭಾಗ. ಹಂಪಿ ಕನ್ನಡ ವಿಶ್ವವಿದ್ಯಾಲಯ.
2008-10: ವಿಶೇಷ ಅಧಿಕಾರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ- ಬೆಂಗಳೂರು.
2010-14: ಉಪ-ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ಬೆಂಗಳೂರು.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ನಿರಂತರವಾಗಿ ಶಂ. ಭಾ. ಜೋಷಿ, ಎಂ. ಎಂ. ಕಲಬುರ್ಗಿ, ಎಂ. ಚಿದಾನಂದ ಮೂರ್ತಿ, ವಿ. ಸೀತಾರಾಮಯ್ಯ, ಪು. ತಿ. ನರಸಿಂಹಾಚಾರ್, ಬೆಳಗೆರೆ ಕೃಷ್ಣಶಾಸ್ತ್ರಿ, ಎಸ್. ಕೆ. ರಾಮಚಂದ್ರರಾವ್, ಕಮಲಾ ಹಂಪನಾ ಮುಂತಾದ ಮಹಾನ್ ವಿದ್ವಾಂಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಕುವೆಂಪು ಶತಮಾನೋತ್ಸವ ವರ್ಷದಲ್ಲಿ ಇವರ ಸಂಪಾದನೆಯಲ್ಲಿ ಮೂಡಿಬಂದ 110 ಪುಸ್ತಕಗಳನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಬಿಡುಗಡೆ ಮಾಡಿದರು.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಕೃತಿಗಳು ಬಹುತೇಕ ವೈದಿಕ ಹಾಗೂ ಸಂಸ್ಕೃತ ಭೂಯಿಷ್ಟ ಕೃತಿಗಳು.
- ಶಂಬಾ ಅಧ್ಯಯನ
- ಕಾಣುತಿರುವ ಕೃತಿ ನೋಟ,
- ಸ್ವಯಂಭುವ ಮನು ಮತ್ತು ವೈವಸ್ವತ ಮನು
- ಪರಿಸರ ಸಮಸ್ಯೆ,
- ಸುಂದರ ರಾಮಾಯಣ,
- ಶಂಬಾ ಕೃತಿ ಸಮೀಕ್ಷೆ,
- ಸ್ಫೋಟ ವೇದ, ಸಾಹಿತ್ಯ ಮತ್ತು ಪುರಾಣ
- ಸಂಸ್ಕೃತಿ ಮತ್ತು ಶಂಬಾ
- ಮಹಲಿಂಗರಂಗ
- ಕೆಳದಿ ಬಸವರಾಜ ಭೂಪಾಲ ವಿರಚಿತ ಶಿವ ತತ್ವ ರತ್ನಾಕರ
- ಧವಳಶ್ರೀ
- ಶಂಕರ ವೇದಾಂತ
- ಶ್ರೀ ಶಿವತತ್ವ ರತ್ನಾಕರ
- ಶಾಸ್ತ್ರಜೀವಿತ
- ಪರಮಹಂಸ ಶ್ರೀ ಆಂಜನೇಯಸ್ವಾಮಿ ವಿರಚಿತ ತತ್ವಯೋಗ ರಹಸ್ಯ
- ಧ್ಯಾನಸೂತ್ರ
- ಮನಸೋಲ್ಲಾಸ
ಮೇಲೆ ತಿಳಿಸಿದ ಅವರ ಇಡೀ Profile ಅಭ್ಯಾಸ ಮಾಡಿದರೆ ಅವರು ಸಂಸ್ಕೃತ ಭಾಷೆಯ ಅದ್ಭುತ ಚಿಂತಕರು ಎನ್ನುವುದು ಅತ್ಯಂತ ಸ್ಪಷ್ಟ. ಆದರೆ ವಚನ ಸಾಹಿತ್ಯದಲ್ಲಿ ಪ್ರಭುಲಿಂಗಲೀಲೆ ಬಿಟ್ಟು ಸಮಗ್ರ ವಚನ ಸಾಹಿತ್ಯ ಅಧ್ಯಯನದ ವ್ಯಾಪ್ತಿ ಎಷ್ಟಿದೆ ಅನ್ನೋದನ್ನ ಗುರುತಿಸಬೇಕಾಗಿದೆ. ನಾನು ಕಂಡಂತೆ, ಕೆಲವು ಪತ್ರಿಕೆಗಳಲ್ಲಿ ಚಾಮರಸನ ಪ್ರಭುಲಿಂಗಲೀಲೆ ಕುರಿತು ದ್ವೈತ ಸಿದ್ಧಾಂತದ ಪ್ರತಿಪಾದನೆ ಮಾಡಿದ್ದೇ ಸಾಧನೆ. ಅಲ್ಲಮಪ್ರಭುಗಳನ್ನು ಹಾಗೂ ಕಾಮಲತೆಯನ್ನು ಶಿವ ಮತ್ತು ಪಾರ್ವತಿಯರ ಅವತಾರವೆಂಬಂತೆ ಬರೆದಿದ್ದು ಹೆಚ್ಚು ಕಡಿಮೆ ಅವರ ಹೆಗ್ಗಳಿಕೆ.ಸಂಸ್ಕೃತ ಭಾಷೆಯಲ್ಲಿ ಪ್ರಭುತ್ವ ಪಡೆದಿರುವ ಮತ್ತು ಪ್ರಬುದ್ಧ ವೈದಿಕ ಚಿಂತಕರಾದ ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಹಜವಾಗಿಯೇ ತಮಗೆ ಅನ್ನವನ್ನು ನೀಡಿದ ಋಣಕ್ಕಾಗಿ ಸಂಸ್ಕೃತವನ್ನು ಉಳಿಸಿ ಬೆಳೆಸುವ ದಾರಿಯಲ್ಲಿಯೇ “ವಚನ ದರ್ಶನ” ಎನ್ನುವ ರಾಮನ ಅವತಾರವೆಂಬಂತೆ ಬಸವಣ್ಣನವರನ್ನು ಬಿಂಬಿಸುವ ಪುಸ್ತಕಕ್ಕೆ ಮುನ್ನುಡಿ ಬರೆದು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಯಾವ Angle ನಲ್ಲಿ ನೋಡಿದರೂ No Doubt ಇವರ ಮುನ್ನುಡಿ ವಚನ ಸಾಹಿತ್ಯವನ್ನು ಶ್ರೇಷ್ಠ ಸಾಹಿತ್ಯ ಎನ್ನುವುದನ್ನು ಬಿಂಬಿಸಲು ವಿಫಲವಾಗಿದೆ.

ಮುನ್ನುಡಿಯ ಮೊದಲನೇ ಪ್ಯಾರಾದಲ್ಲಿ ಕೇವಲ ದ್ವೈತ ಸಿದ್ಧಾಂತದ promoters ಅಥವಾ ವೀರಶೈವ ಅಥವಾ ಆರಾಧ್ಯ ಶೈವ ಬ್ರಾಹ್ಮಣ ಲೇಖಕರನ್ನೇ ಉಲ್ಲೇಖ ಮಾಡಿದ್ದಾರೆ. Strategy is very simple, ವಚನ ದರ್ಶನ ಕೃತಿಯ ವೈದಿಕ ಹಿನ್ನೆಲೆಗೆ Suit ಆಗುವಂತೆ ವಚನ ಸಾಹಿತ್ಯವನ್ನು ಹೊಂದಿಸುವ ಹುನ್ನಾರಕ್ಕಾಗಿ. ಇದರ ಹೊರತು ಏ. ಕೆ. ರಾಮಾನುಜನ್, ಮಾಸ್ತಿ ವೆಂಕಟೇಶ ಅಯ್ಯಂಗಾರ, ಟಿ ಎಸ್ ವೆಂಕಣ್ಣಯ್ಯ (ಕುವೆಂಪು ಅವರ ಗುರುಗಳು), ವೇಲಚೇರು ನಾರಾಯಣ ರಾವ್ ಮುಂತಾದ ವಚನ ಸಾಹಿತ್ಯದಲ್ಲಿ ಅದ್ವೈತ ಸಿದ್ಧಾಂತವನ್ನು ಗುರುತಿಸಿದ ಅನೇಕ ಲೇಖಕರನ್ನು ಉಲ್ಲೇಖಿಸಿಲ್ಲ. ಇದು ಅತ್ಯಂತ ಶ್ರೇಷ್ಠ ಚಿಂತಕರು ಎಂದು ಹೊಗಳಿಸಿಕೊಳ್ಳುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದು ವಚನ ಸಾಹಿತ್ಯಕ್ಕೆ ಅವಮಾನ ಮಾಡಿದ್ದಾರೆ. ಈ ಪ್ಯಾರಾದಲ್ಲಿ ಡಾ. ಎಮ್ ಎಮ್ ಕಲಬುರ್ಗಿ, ಎಸ್ ವಿದ್ಯಾಶಂಕರ, ಡಾ. ಬಂಜಗೆರೆ ಜಯಪ್ರಕಾಶ, ಡಾ. ಬಸವರಾಜ ಕಲ್ಗುಡಿ, ಡಾ. ಬಸವರಾಜ ಸಬರದ ಅವರನ್ನು ಉಲ್ಲೇಖಿಸಿ ಅತ್ಯಂತ ಸೂಕ್ಷ್ಮವಾಗಿ ಹೀಯಾಳಿಸುವಂತೆ ಅವರನ್ನು ಚಳುವಳಿ ಮತ್ತು ವರ್ಗ-ವರ್ಣಗಳ ಹಿನ್ನೆಲೆಯಲ್ಲಿ ವಚನ ಅಧ್ಯಯನ ಮಾಡಿದ್ದಾರೆ ಎಂದು ಬರೆದಿದ್ದು ಅಕ್ಷಮ್ಯ ಅಪರಾಧ. ಡಾ. ಎಮ್ ಎಮ್ ಕಲಬುರ್ಗಿಯವರು ಬದುಕಿದ್ದೇ ಬಸವಣ್ಣ ಹಾಗೂ ವಚನ ಸಾಹಿತ್ಯಕ್ಕಾಗಿ ಎನ್ನುವುದು ಜನ ಜನಿತವಾದ ಸಂಗತಿ. ಇಂಥ ವಚನ ಸಾಹಿತ್ಯದ ಮೇರು ಶಿಖರಕ್ಕೆ ಮಸಿ ಬಳಿಯುವ ಪ್ರಯತ್ನ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಶೋಭೆ ತರುವಂಥದ್ದಲ್ಲ.

“ವಚನಗಳನ್ನು ಕಾಲದ ಸಾಂಸ್ಕೃತಿಕ ಚೌಕಟ್ಟಿನಲ್ಲಿಟ್ಟು ಅವುಗಳ ತಾತ್ವಿಕ ವಿಶ್ಲೇಷಣೆ ಆಗಬೇಕಾಗಿತ್ತು” ಎಂದು ಮುನ್ನುಡಿಯ ಎರಡನೇ ಪ್ಯಾರಾದಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಬರೀತಾರೆ. ಯಾರೂ ಆ ಕೆಲಸ ಮಾಡಿಲ್ಲಾ ಅಂತಲ್ಲಾ. ಬಹಳಷ್ಟು ಜನ ಮಾಡಿದ್ದಾರೆ. ಮೇಲೆ ತಿಳಿಸಿದ ಹಾಗೆ ನೀವೇ ಉಲ್ಲೇಖಿಸಿದ ಲೇಖಕರಾದ ಡಾ. ಎಮ್ ಎಮ್ ಕಲಬುರ್ಗಿ, ಎಸ್ ವಿದ್ಯಾಶಂಕರ, ಡಾ. ಬಂಜಗೆರೆ ಜಯಪ್ರಕಾಶ, ಡಾ. ಬಸವರಾಜ ಕಲ್ಗುಡಿ, ಡಾ. ಬಸವರಾಜ ಸಬರದ ಅವರೆಲ್ಲಾ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ವಚನ ಸಾಹಿತ್ಯದ ವಿಶ್ಲೇಷಣೆ ಮಾಡಿದ್ದಾರೆ. ಪಾಪ, ನೀವು ಅವರ ಕೃತಿಗಳನ್ನಾಗಲೀ ಅವರ ಲೇಖನಗಳನ್ನಾಗಲೀ ಓದಿಲ್ಲಾ ಅನಿಸುತ್ತೆ. ಹೋಗಲೀ ನೀವೇ ಯಾಕೆ ಬರೆಯಲಿಲ್ಲಾ? ಬೇರೆಯವರ ಮೇಲೆ ಗೂಬೆ ಕೂರಿಸುವ ಕೀಳು ಮಟ್ಟಕ್ಕೆ ಯಾಕೆ ಇಳಿದಿದ್ದೀರಿ? ನಿಮ್ಮನ್ನು ಯಾರಾದರೂ ತಡೆದಿದ್ದರಾ ಅಥವಾ ವೈದಿಕ ಪರಂಪರೆಯನ್ನು ಎತ್ತಿ ಹಿಡಿಯುವ ಭರದಲ್ಲಿ ಇದಕ್ಕೆಲ್ಲಾ ಸಮಯ ಸಿಕ್ಕಿರಲಿಕ್ಕಿಲ್ಲವೇ? ಯಾವ ಭ್ರಮೆಯಲ್ಲಿ ನೀವಿದ್ದೀರೀ ಎನ್ನುವುದೆ ಸೋಜಿಗ. ಮುಂದುವರೆದು ನೀವೆ ಹೇಳತೀರಿ. “ಈ ಕೃತಿಯಲ್ಲಿ ಉಪನಿಷತ್ತು, ದರ್ಶನಗಳು, ಸ್ಮೃತಿಗ್ರಂಥಗಳು ಮತ್ತು ಯೋಗಗ್ರಂಥಗಳ ಹಿನ್ನೆಲೆಯನ್ನಿಟ್ಟುಕೊಂಡು ಪ್ರಧಾನವಾಗಿ ಇಟ್ಟುಕೊಂಡು ಅವರು ವಚನಗಳ ಆಂತರಿಕ ಮರ್ಮವನ್ನು ಎತ್ತಿ ಹೇಳಿದ್ದರು”. ಬಸವಾ ಬಸವಾ ವೇದ ಉಪನಿಷತ್ತುಗಳನ್ನು ಖಂಡಿಸಿದ ಬಸವಾದಿ ಶರಣರು ಆಂತರ್ಯದಲ್ಲಿ ಮನುವಾದಿಗಳು ಎಂದು ಬಿಂಬಿಸುವ ನಿಮ್ಮ ಬುದ್ಧಿಶಕ್ತಿಗೆ ಒಂದು ಸಲಾಮ್ ಹೇಳಲೇಬೇಕು. ಅಲ್ಲಮಪ್ರಭುಗಳ ಮತ್ತು ಬಸವಣ್ಣನವರ ಈ ವಚನಗಳು ನಿಮ್ಮ ತಲೆಯಲ್ಲಿರುವ ವೈದಿಕತೆಯ ಗುಲಾಮಿತನವನ್ನು ಹೋಗಲಾಡಿಸಬಹುದು.

ವೇದವೆಂಬುದು ಓದಿನ ಮಾತು;
ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ,
ಆಗಮವೆಂಬುದು ಅನ್ನತದ ನುಡಿ,
ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-147 / ವಚನ ಸಂಖ್ಯೆ-465)
ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ
ಇಂತಿವನರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ
ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-574 / ವಚನ ಸಂಖ್ಯೆ-1506)

ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-154 / ವಚನ ಸಂಖ್ಯೆ-571)
ಗೀತವ ಹಾಡಿದಡೇನು?
ಶಾಸ್ತ್ರ-ಪುರಾಣವ ಕೇಳಿದಡೇನು?
ವೇದವೇದಾಂತವನೋದಿದಡೇನು?
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು
ಎಲ್ಲರಲ್ಲಿ [ಪ್ರಾ]ಜ್ಞರಾದಡೇನು?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-52 / ವಚನ ಸಂಖ್ಯೆ-188)
I hope you have understood what I am trying to convince you sir. ಇಂಥದ್ದೇ ವೈದಿಕತೆಯನ್ನು ಚಿತ್ರಿಸಿರುವ ಹಲವಾರು ಶೈವ ಹಾಗೂ ವೀರಶೈವ ಬ್ರಾಹ್ಮಣ ಸಾಹಿತಿಗಳ ಹೆಸರುಗಳನ್ನು ಈ ಪ್ಯಾರಾದಲ್ಲಿ ಉಲ್ಲೇಖ ಮಾಡಿದ್ದೀರಿ. Again, the simple and same concept of glorifying the Veerashaiva Philosophy.
ಇನ್ನು ಮೂರನೇಯ ಪ್ಯಾರಾದಲ್ಲಿ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕುರಿತು ಆಪಾದನೆಯ ರೂಪದಲ್ಲಿ ನಿರೂಪಣೆ ಮಾಡಿದ್ದೀರಿ. “ಪ. ಪೂ. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಸನಾತನ ಧರ್ಮದ ನೂತನಾಣ್ವೇಷಣವನ್ನು ನಡೆಸಿರುವುದಂತೂ ಸುಸ್ಪಷ್ಟ” ಅಂತ ಬರೆದು ಅವರ ಹೆಸರಿಗೂ ಕಪ್ಪು ಬಳಿಯುವ ನಿಮ್ಮ ಪ್ರಯತ್ನ ಹೇಸಿಗೆ ತರುವಂತಿದೆ. ಪ. ಪೂ. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಎಲ್ಲ ಧರ್ಮವನ್ನೂ ಸಮಾನವಾಗಿ ಕಂಡಂಥವರು ಮತ್ತು ಯಾವುದೇ ಧರ್ಮ ಸಿದ್ಧಾಂತಗಳಲ್ಲಿ ಒಳ್ಳೆಯದನ್ನೇ ಹುಡುಕಿ ಹೆಕ್ಕಿ ತೆಗೆದಂಥವರು. ಅವರ ಬಗ್ಗೆ ಕರ್ನಾಟಕದ ಎಲ್ಲ ಹಿರಿ ಕಿರಿಯರಿಗೂ ಒಂದು ಪೂಜ್ಯ ಭಾವನೆ ಇದೆ. ನಿಮ್ಮಂಥ So called ವಿದ್ವಾಂಸರೆಂಬ ಹಣೆಪಟ್ಟಿ ಕಟ್ಟಕೊಂಡಂಥವರು ಇವರಲ್ಲಿಯೂ ವೈದಿಕತೆಯ ಹುಳುಕನ್ನು ಹುಡುಕಿದರೆ ನಿಮ್ಮ ಗೌರವ ಘನತೆಯ ಬಗ್ಗೆ ನಮಗೆ ಅನುಮಾನ ಬರುವುದಂತೂ ಖಂಡಿತ. Most probably ಯಾವ ಮಟ್ಟದಲ್ಲಿ ಈ ಸನಾತನಿಗಳು ನಿಮ್ಮನ್ನು ಖರೀದಿ ಮಾಡಿರಬಹುದೆಂಬ ಅನುಮಾನ ಕಾಡುವಂಥ ಸಂಗತಿಯನ್ನು ಪ್ರಸ್ತಾಪಿಸಿದ್ದೀರಿ. ಇನ್ನು “ಪರಂಪರೆಯ ದೃಷ್ಟಿಯಿಂದ ಇದು ದುರ್ದೈವದ ಸಂಗತಿ” ಎಂದು ಹೇಳುವ ಮೂಲಕ you are completely sold out ಎನ್ನುವ ತರ್ಕಕ್ಕೆ ಬಂದು ನಿಂತಿದ್ದೇವೆ. ಯಾವ ಉಪಕಾರಕ್ಕಾಗಿ ಮತ್ತು ಯಾವ ಮುಲಾಜಿಗೆ ಒಳಗಾಗಿ ಈ ರೀತಿ ಬರೀತೀರಿ ಅನ್ನೋದೆ ಖೇದಕರ ಸಂಗತಿ.
ಇನ್ನು ನಾಲ್ಕನೇ ಪ್ಯಾರಾದಲ್ಲಿ ಸಮಾಜವಾದ ಮತ್ತು ಮಾರ್ಕ್ಷವಾದವನ್ನು ಕೆಣಕಿದ್ದೀರಿ. ಬಸವಾದಿ ಶರಣರ ಸಮ ಸಮಾಜದ ಪರಿಕಲ್ಪನೆಯಲ್ಲಿ 12 ನೇ ಶತಮಾನದ ಚಳುವಳಿ ಮಹತ್ವದ ತಿರುವನ್ನು ಪಡೀತದೆ. ಸಮ ಸಮಾಜದ ಪರಿಕಲ್ಪನೆ ಜ್ಞಾನ-ಭಕ್ತಿ-ಕರ್ಮ ಮೀಮಾಂಸೆ-ಅನುಭಾವವನ್ನೂ ಮೀರಿದ ಒಂದು ಕಾಲಘಟ್ಟ. ಇಂಥ simple Theory ನಿಮಗ ಅರ್ಥ ಆಗಲಿಲ್ಲಾ ಅಂದರ ಇಂಥ ಅಸಂಬದ್ಧ ಮುನ್ನುಡಿಯನ್ನು ಯಾಕೆ ಬರೆದಿದ್ದೀರಿ. ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗುರುಗಳೇ ಯಾವ ಬಸವಾದಿ ಶರಣರು ಕರ್ಮ ಮೀಮಾಂಸೆ ಅಥವಾ ಕರ್ಮ ಸಿದ್ಧಾಂತವನ್ನು ಅಪ್ಪಿಕೊಂಡಿದ್ದರು ಅಥವಾ ಒಪ್ಪಿಕೊಂಡಿದ್ದರು ಅನ್ನೋದನ್ನಾದರೂ ತಿಳಿಸಬೇಕು ನೀವು. ಬಸವಣ್ಣನವರ ಎರಡು ವಚನಗಳು ಅವರ ಸಾಮಾಜಿಕ ಸಮಾನತೆಯ ಮತ್ತು ಕಾಯಕದ ಸಮಾನತೆಯನ್ನು ಬಿಂಬಿಸುತ್ತದೆ.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-118 / ವಚನ ಸಂಖ್ಯೆ-453)
ಹರಗಣಪಂಕ್ತಿಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾಯಿತೇಜವ ಹೊತ್ತುಕೊಂಡು,
ಮಡದಿಯೆನ್ನಗಲೊಳಗೆ ಸಕಲದೇವಾನ್ನವ
ಒಡೆಯರಿಂದವೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚನ್ನಬಸವಣ್ಣಾ, ಮರೆದು ಕೊಂಡೆನಾದಡೆ,
ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-115 / ವಚನ ಸಂಖ್ಯೆ-440)
ಮುಂದುವರೆದು ಬರೀತೀರಿ “ಈ ಆಯ್ಕೆಯ ಹಿಂದೆ ಉಪನಿಷತ್ತು, ಭಗವದ್ಗೀತೆಯ ವಿಚಾರಗಳು ಮೈವೆತ್ತಿಕೊಂಡಿರುವ ಬಗೆಯನ್ನು ಗ್ರಂಥದ ಲೇಖಕರು ವಿಷದೀಕರಿಸಿದ್ದಾರೆ”. ಹಾಗಾಗಿ No doubt from your lines ಈ ಪುಸ್ತಕ ಬಸವಣ್ಣನವರನ್ನು ವಿಷ್ಣುವಿನ ಅವತಾರವೆಂಬಂತೆ ಬಿಂಬಿಸುತ್ತಿರುವುದು ಸೂರ್ಯ-ಚಂದ್ರರಷ್ಟೇ ಸತ್ಯ. ಮುಖಪುಟದಲ್ಲಿರುವ ಶ್ರೀ ರಾಮನ ಅವತಾರವಿರುವ ಬಸವಣ್ಣನವರ ಫೋಟೋ ಸಾಕ್ಷೀಭೂತವಾಗಿದೆ. ಇದಕ್ಕೆ ಶರಣ ಆದಯ್ಯನವರ ಒಂದು ವಚನ ನಿಮ್ಮ ಕಣ್ಣು ತೆರೆಸಬಹುದು.
ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ,
ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ
ಪಂಚಾಕ್ಷರದ ಸ್ವರೂಪವನರಿಯದೆ ನಿಂದವು.
ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ
ಸುರತಿಗೆ ಅಣಿಮಾದಿಯ ಕೊಟ್ಟು, ಶರಣರಿಗೆ ತ್ರಿಣಯನ ಕೊಟ್ಟುದು
ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ
ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-358 / ವಚನ ಸಂಖ್ಯೆ-986)
ಐದನೇ ಪ್ಯಾರಾದಲ್ಲಿ ತಾವು ಈ ಪುಸ್ತಕದ ಲೇಖಕರನ್ನು ಪರಿಚಯಿಸಿದ್ದೀರಿ. ಎಲ್ಲರೂ ವೀರಶೈವ ಸಾಹಿತ್ಯದ ಸಂಸ್ಕೃತದಲ್ಲಿ ಬರೆದ ಸಿದ್ಧಾಂತ ಶಿಖಾಮಣಿಯೆಂಬ ಪುಸ್ತಕವನ್ನು ಅಧ್ಯಯನ ಮಾಡಿದಂಥವರೇ. ವಚನ ಸಾಹಿತ್ಯವನ್ನು ಹೀಯಾಳಿಸುವಂಥವರೇ ಆಗಿದ್ದಾರೆ. ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗುರುಗಳೆ ಇದಕ್ಕೆ ಒಂದು ಸಣ್ಣ clarification ಕೊಟ್ಟು ಮುಂದೆ ಹೋಗುತ್ತೇನೆ

Pre-Classic ಯುಗದಿಂದಲೂ ಅಂದರೆ 3/4/5 ನೇ ಶತಮಾನದಿಂದಲೂ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಸಂಸ್ಕೃತವನ್ನೇ ಅಪ್ಪಿಕೊಳ್ಳಲಾಗಿತ್ತು ಮತ್ತು ಬಳಸಿಕೊಂಡು ರೂಢಿಸಿಕೊಂಡು ಬರಲಾಗಿತ್ತು. ಕನ್ನಡ ಭಾಷೆ ಮತ್ತು ಭಾಷಿಕರೂ ಕೂಡ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದಂಥ ಕಾಲಘಟ್ಟವದು. ಈ ಅವಲಂಬನೆಯನ್ನು ಹಾಗೂ ಹುನ್ನಾರಗಳನ್ನು ಛಿದ್ರಗೊಳಿಸಿದ್ದು 12 ನೇ ಶತಮಾನದ ವಚನ ಚಳುವಳಿ. ನಿರಾಕಾರ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಲು ಮಾತೃ ಭಾಷೆಯಲ್ಲಿಯೇ ಸಾಧ್ಯವಿದೆ ಅನ್ನುವುದನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟವರು ಬಸವಾದಿ ಶರಣ ವಚನಕಾರರು. ಆ ಕಾಲಘಟ್ಟದಲ್ಲಿನ ಸಂಘರ್ಷಮಯ ಶ್ರೇಣೀಕೃತ ಸಮಾಜದಲ್ಲಿ ಇಂಥ ಚಳುವಳಿ ಸಣ್ಣ ವಿಷಯವೇನಲ್ಲಾ. “ದೇವರಿಗೇ ಕನ್ನಡ ಕಲಿಸಿದವರು ವಚನಕಾರರು”. ನಂಬಿ ಕರೆದರೆ ಓ ಎಂಬನೇ ಶಿವನು” ಅಂತಾ ಕನ್ನಡದಲ್ಲಿಯೇ ಹೇಳತಾರೆ. ಹಾಗಾಗಿ ಎಲ್ಲ ವಚನಕಾರರ ದೇವರಿಗೆ (ಇಲ್ಲಿ ದೇವರು ಅಂದರೆ ವೈದಿಕರು ಅನುಸರಿಸುವ ಮೂರ್ತಿಕರಣ ಅಲ್ಲಾ) ಕನ್ನಡ ಬರುತ್ತಿತ್ತು. ಇದು ನಮಗೆ ಇವತ್ತಿಗೂ ಮಾದರಿ. ಆದರೆ ಇಂದು ನಮ್ಮ ಮಕ್ಕಳಿಗೇನೆ ಕನ್ನಡ ಕಲಿಸಲಾಗುತ್ತಿಲ್ಲ ಇದು ದುರಂತ.
ಕನ್ನಡದಲ್ಲಿಯೇ ಚಿಂತನೆ ಮಾಡಿ ಬದುಕನ್ನು ಹಸನು ಮಾಡಿಕೊಂಡವರು ವಚನಕಾರರು. ಇದು ಸಂಸ್ಕೃತ ಭಾಷೆಯ ಹಿಡಿತದಿಂದ ಕನ್ನಡವು ಹೊರಬರುವ ಮತ್ತು ಪಾರಾಗುವ ಪ್ರಕ್ರಿಯೆಯ ಮೊದಲ ಘಟ್ಟ. ಪ್ರಾದೇಶಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳ ಸನ್ನಿವೇಶವನ್ನು ಬದಲಿಸಿ ಒಟ್ಟುಗೂಡಿಸಿದ್ದು ವಚನ ಚಳುವಳಿ. ವಚನಕಾರರು 12 ನೇ ಶತಮಾನದಲ್ಲಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದೇ ಹೋಗಿದ್ದರೆ ಬಹುಶಃ ಕನ್ನಡ ನಶಿಸಿ ಹೋಗುತ್ತಿತ್ತೋ ಏನೋ. ನಿಮ್ಮಂಥ ಸಂಸ್ಕೃತ ವಿದ್ವಾಂಸರು ವಚನ ಸಾಹಿತ್ಯದಲ್ಲಿನ ಸಂಸ್ಕೃತವನ್ನು ನಮ್ಮ ಬಾಯಲ್ಲಿ ಬಲವಂತವಾಗಿ ತುರುಕಿ ಹಾದಿ ತಪ್ಪಿಸುತ್ತಿದ್ದೀರಿ. ಹಾಗಾಗಿ ಈಗ ನಾವು ಕನ್ನಡಕ್ಕಾಗಿ ಮಾಡುತ್ತಿರುವ ಹೋರಾಟ ಮತ್ತು ಹಾರಾಟಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಾಡಬೇಕಾಗಿತ್ತು.
ಕಳೆದ ಮೂರೂವರೆ ದಶಕಗಳ ನನ್ನ ವಚನ ಸಾಹಿತ್ಯದ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ ಅಂದರೆ ವಚನ ಬೇರೆ ಅಲ್ಲ ವಾಸ್ತವತೆ ಬೇರೆ ಅಲ್ಲ. ವಚನಕ್ಕೆ ಸರಿಯಾಗಿ ನಿರ್ವಚನ ಆಗಿ ಅದು ಕಾಲ ಕಾಲಕ್ಕೆ ಪಚನಗೊಳ್ಳತಾನೆ ಇದೆ.
- ಓದಿದಷ್ಟೂ ಓದಿಸಿಕೊಳ್ಳುವ.
- ಬರೆದಷ್ಟೂ ಬರೆಸಿಕೊಳ್ಳುವ.
- ಚಿಂತಿಸಿದಷ್ಟೂ ಚಿಂತನೆಗೆ ಹಚ್ಚಿಕೊಳ್ಳುವ.
- ವಿವರಿಸಿದಷ್ಟೂ ವಿಹಂಗಮ ನೋಟಕ್ಕೆ ಎಡೆ ಮಾಡಿಕೊಳ್ಳುವ.
ಯೋಗ ಮತ್ತು ಯೋಗ್ಯತೆ ವಚನ ಸಾಹಿತ್ಯಕ್ಕೆ ಇದೆ ಅಂತ ನಾನು ಅಂದುಕೊಂಡಿದ್ದೇನೆ. ನಿಮ್ಮಂಥ ಸಂಸ್ಕೃತ ವಿದ್ವಾಂಸರಿಗೆ ಇದು ಅರ್ಥಾ ಅಗೋದಿಲ್ಲಾ ಅಂತ ನನ್ನ ಭಾವನೆ.
ಹೊಸನಗರದ ಪ್ರಾಧ್ಯಾಪಕರಾದ ಡಾ. ಶ್ರೀಪತಿ ಹಳಗುಂದ ಸರ್ ನಮ್ಮ ವಚನ ಮಂದಾರ ವೇದಿಕೆಯ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಹೇಳಿದ್ದು:
- ಕಾಲವಾಗಿ 12 ನೇ ಶತಮಾನ.
- ಪುಣ್ಯಕ್ಷೇತ್ರವಾಗಿ ಕಲ್ಯಾಣ.
- ರಾಜನಾಗಿ ಬಿಜ್ಜಳ.
- ವ್ಯಕ್ತಿಯಾಗಿ ಬಸವಣ್ಣ.
- ಭಾಷೆಯಾಗಿ ಕನ್ನಡ.
- ವಿದ್ಯಮಾನವಾಗಿ ವಚನ ಚಳುವಳಿ.
- ಶಕ್ತಿಯಾಗಿ ವಚನಗಳು.
- ಭಾವನೆಯಾಗಿ ಅನುಭವ.
- ಅಭಿವ್ಯಕ್ತಿಯಾಗಿ ಅನುಭಾವ.
ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜಾತಿ-ಜನಾಂಗವನ್ನೂ ಮೀರಿದ ಒಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಅದಕ್ಕಾಗಿಯೇ ಸರಿ ಸುಮಾರು 900 ವರ್ಷಗಳದರೂ ಇಂದಿಗೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮತ್ತು ಗೌರವದಿಂದ ವಚನ ಸಾಹಿತ್ಯವನ್ನು ನಾವು ಆರಾಧಿಸುತ್ತೇವೆ. ಗೋಪಾಲ ಕೃಷ್ಣ ಅಡಿಗರು ಹೇಳುವ ಹಾಗೆ:
ಹೊಸ ನೆತ್ತರು ಉಕ್ಕಿ ಉಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
ಹೀಗೆ ವಚನಕಾರರು ತಮ್ಮ ರಕ್ತ ಆರಿ ಹೋಗುವ ಮುನ್ನ ಹೊಸ ನಾಡನ್ನು ಕಟ್ಟಿದ್ದಾರೆ. ಈ ಕನ್ನಡ ನಾಡಿನಲ್ಲಿ ಅವರ ರಕ್ತ ಇನ್ನೂ ಆರಿ ಹೋಗಿಲ್ಲ ಎನ್ನುವುದಕ್ಕೆ ಇಡೀ ಲಿಂಗಾಯತ ಸಮುದಾಯವೇ ನಿಮ್ಮ ಹಾಗೂ ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ ಪುಸ್ತಕದ ವಿರುದ್ಧ ತಿರುಗಿ ಬಿದ್ದದ್ದೇ ಸಾಕ್ಷೀಭೂತವಾಗಿವೆ.
“ಹಡಪದ ಅಪ್ಪಣ್ಣನವರು ಬಸವಣ್ಣನವರ ಮಗ” ಅಂತಾ ಅನೇಕ ವೇದಿಕೆಗಳಲ್ಲಿ ಹೇಳುವ ಮೂಲಕ ಬಸವಣ್ಣನವರ ಶೀಲದ ಮೇಲೆ ಆಪಾದನೆಯನ್ನು ಮಾಡುವ ಅಪ್ರಬುದ್ಧ ಮನಸ್ಸಿನ ವೀಣಾ ಬನ್ನಂಜೆಯವರನ್ನು ವಚನ ಸಾಹಿತ್ಯವನ್ನು ಆರಾಧಿಸುವ ಯಾರೂ ಕೂಡ ಕ್ಷಮಿಸಲಾರರು. ಇನ್ನು ಬಸವಣ್ಣನವರನ್ನು ಎತ್ತು ಎಂದು ಬರೆಯುವ ಎಡಬಿಡಂಗಿ ಸವದತ್ತಿಮಠ ನನಗೆ ಯಾವ Angle ನಿಂದಲೂ ಒಬ್ಬ ವಿದ್ವಾಂಸ ಅನಿಸುವುದೇ ಇಲ್ಲ. ರಂಭಾಪುರಿ ಮಠದಿಂದ ಕಾಣಿಕೆ ಪಡೆದು ವೀರಶೈವ ವೈದಿಕ ಪರಂಪರೆಯನ್ನು ಬಿತ್ತರಿಸುವ ಒಬ್ಬ ಸಮಯ ಸಾಧಕನೆಂದು ಎಲ್ಲರಿಗೂ ತಿಳಿದಿರುವ ವಿಚಾರ. ಅದನ್ನೇನು ಬಿಡಿಸಿ ಹೇಳುವ ಅಗತ್ಯವಿಲ್ಲ. ಈ ಹಿಂದೆ ವಿಜಯ ಕರ್ನಾಟಕದಲ್ಲಿ ಐದು ಕಂತುಗಳಲ್ಲಿ ಬಸವಣ್ಣನವರನ್ನು ನಂದಿಯ ಅವತಾರ ಮತ್ತು ಎತ್ತು ಎಂದು ಬರೆದಿದ್ದಕ್ಕೆ ಹಿಗ್ಗಾ ಮುಗ್ಗಾ ಒದೆ ತಿಂದದ್ದು ಸುದ್ದಿ ಆಗಲೇ ಇಲ್ಲ. ಅದನ್ನು ಸೂಕ್ಷ್ಮವಾಗಿ ಮುಚ್ಚಿ ಹಾಕಿದ್ದಾನೆ. ಮುಂದೆ ಇವನು ಬಾಲ ಬಿಚ್ಚಿದ್ದು RSS promoted ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಆಗಲೂ ಒದೆ ಬೀಳುವುದನ್ನು ಹೇಗೋ ತಪ್ಪಿಸಿಕೊಂಡು ಓಡಿ ಹೋದ. ಇರಲಿ ಇವನ ರಾದ್ಧಾಂತವು ಇದ್ದದ್ದೆ. ಇಂಥ ಅಪ್ರಾಮಾಣಿಕ ಮತ್ತು ಅಸಂಬದ್ಧ ಲೇಖಕರಿಂದ ಬರೆಸಿರುವ ಪುಸ್ತಕಕ್ಕೆ ನಿಮ್ಮ ಮುನ್ನುಡಿ ಸೀದೊಗಿರುವ ಮಸಾಲೆ ದೋಸೆಯಂತಿದೆ.

ಇನ್ನು ಪರಮ ಪೂಜ್ಯ ಶ್ರೀ ಶ್ರೀ ಸಿದ್ಧಲಿಂಗಸ್ವಾಮೀಜಿಯವರು ಬರೆದ ಆಶೀರ್ವಚನವನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಪರಮ ಪೂಜ್ಯರ ಈ ಆಶೀರ್ವಚನವನ್ನು ಸಂಸ್ಕೃತದಲ್ಲಿ “ಶುಭಾಂಶಸನಂ” ಎಂದು ಬರೆದು ವಿಕೃತಿಯನ್ನು ಮೆರೆದಿದ್ದಾರೆ. ಯಾವುದೇ ವಿರಕ್ತ ಮಠದ ಪೂಜ್ಯ ಮಹಾಸ್ವಾಮಿಗಳು ಈ ರೀತಿ ಸಂಸ್ಕೃತ ಪದಗಳನ್ನು ಬಳಸಿದ ಉದಾಹರಣೆಗಳಿಲ್ಲ. ಇದನ್ನು ಅರಿತೂ ಕೂಡ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಪುಸ್ತಕದ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿದ್ಧಗಂಗಾ ಮಠದಲ್ಲಿಯೇ ಇದ್ದುಕೊಂಡು, ಇಲ್ಲಿಯೇ ವಿದ್ಯಾಭ್ಯಾಸ ಮಾಡಿ, ಸಿದ್ಧಗಂಗೆಯ ಅನ್ನದ ಋಣವನ್ನು ತೀರಿಸುವದಕ್ಕಾದರೂ ಒಂದು ಪ್ರತಿಕ್ರಿಯೆ ನೀಡಬಹುದಿತು. ಈ ಮುನ್ನುಡಿಯನ್ನು ಬರೆದು ತಪ್ಪು ಮಾಡಿದೆ ಎನ್ನುವ ವಿಷಾದದ ಛಾಯೆಯೂ ನಿಮ್ಮಲ್ಲಿ ಕಾಣತಾ ಇಲ್ಲಾ. ಇಂಥ ಯಾವ ನಿರೀಕ್ಷೆಗಳೂ ಲಿಂಗಾಯತರಿಗಿಲ್ಲ ಬಿಡಿ.
ಇನ್ನಾದರೂ ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗುರುಗಳೆ ವಚನ ಸಾಹಿತ್ಯ ಮತ್ತು ಬಸವಾದಿ ಶರಣರನ್ನು ಕುರಿತು ಅಭಿಪ್ರಾಯ ಮಂಡಿಸುವಾಗ ಅಂತರಂಗ ಹಾಗೂ ಬಹಿರಂಗದಲ್ಲಿ ಎಚ್ಚರ ಮತ್ತು ಪ್ರಜ್ಞೆ ಇರಲಿ. ಈ ಪುಸ್ತಕವನ್ನು ಸಮರ್ಥಿಸಿಕೊಳ್ಳಲು ಎಲ್ಲ ಕಡೆಗೂ ತಮ್ಮ ವೈದಿಕ ವಿಚಾರವಾದಿಗಳನ್ನು ಪ್ರತಿಷ್ಠಾಪಿಸಿ ವೈದಿಕರು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಲಿಂಗಾಯತರಾದ ನಮಗೆ ಈ ತಂತ್ರಗಾರಿಕೆ ಗೊತ್ತಾಗೋದಿಲ್ಲ ಅಂತ ನೀವು ಅಂದುಕೊಂಡರೆ ಅದು ನಿಮ್ಮ ಮೂರ್ಖತನ.

ಈ ಲೇಖನಕ್ಕೆ ನಿಮ್ಮ ಪಟಾಲಂನ ಪ್ರತಿಕ್ರಿಯೆ ತೀಕ್ಷ್ಣ, ಪ್ರಚೋದನಾತ್ಮಕ ಮತ್ತು ಘೋರವಾಗಿರುತ್ತದೆ ಎನ್ನುವ ವಿಷಯದ ಗಂಭೀರತೆ ನನಗಿದೆ. ನಿಮ್ಮ ಸಂಘ ಪರಿವಾರದ ಮತ್ತು ವೀರಶೈವರ ದಬ್ಬಾಳಿಕೆ ಮತ್ತು ಬೆದರಿಕೆಗಳನ್ನು ಈಗಾಗಲೇ ಸಹೋದರಿ ನಿವೇದಿತಾ ಅವರು ಅನುಭವಿಸುತ್ತಿರುವುದು ವಿಷಾದನೀಯ ಮತ್ತು ಖಂಡನೀಯ.
You have the Muscle Power, Political Power, Legal Power, Media Power, Government Support and Money Power. Do whatever you feel like doing. I am not scared. ಲಿಂಗಾಯತ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಲಿಂಗಾಯತ ಧ್ವಜವನ್ನು ಹಿಡಿದುಕೊಂಡು ರೊಕ್ಕದ ದಂಧೆಯಲ್ಲಿ ತೊಡಗಿಸಿಕೊಂಡಿರುವವರಿಂದ ಸಹಾಯವನ್ನು ನಿರೀಕ್ಷೆ ಮಾಡುವಷ್ಟು ಮೂರ್ಖತನವೂ ನನಗಿಲ್ಲ. ಆನೆ ನಡೆದಿದ್ದೆ ದಾರಿ. ನನಗೆ ನನ್ನದೇ ದಾರಿ. ಇನ್ನೂ ಹೇಳೊದಕ್ಕೆ ಬಹಳ ಇದೆ. ಇವತ್ತು ಇಷ್ಟು ಸಾಕು.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ,
ಸುಭಾಷ್ ನಗರ, ಕ್ಯಾತ್ಸಂದ್ರ,
ತುಮಕೂರು – 572 104
ಮೋಬೈಲ್. ನಂ: +91 9741 357 132.
ಈ-ಮೇಲ್: vijikammar@gmail.com
ತುಂಬಾ ಅದ್ಭುತವಾದ ಲೇಖನ.
ವಿಜಯಕುಮಾರ್ ಸರ್, ನಿಜವಾಗಿ ನಾನು ವಚನ ದರ್ಶನ ಪುಸ್ತಕವನ್ನು ತರಿಸಿ ಓದುವ ವಿಚಾರದಲ್ಲೇ ಇದ್ದೆ.ಅಷ್ಟರಲ್ಲಿ ಈ ಪ್ರತಿಕ್ರಿಯೆಗಳನ್ನು ಮತ್ತು ನಿಮ್ಮ ಈ ಲೇಖನವನ್ನು ಓದಿದೆ. ನಿಮ್ಮ ಈ ಲೇಖನ ವನ್ನು ಓದಿದ ಮೇಲೆ ಈ ಪುಸ್ತಕವನ್ನ ತರಿಸಲಾ ಹೇಗೆ ವಿಚಾರ ಮಾಡುತ್ತಿದ್ದೇನೆ. ಈ ನಿಮ್ಮ ಲೇಖನ ಅದ್ಭುತವಾಗಿದೆ ಮತ್ತು ನಮ್ಮಂಥ ಸಾಮಾನ್ಯರಿಗೆ ಅರ್ಥವಾಗುವ ಹಾಗಿದೆ. ತುಂಬಾ ಧನ್ಯವಾದಗಳು ಸರ್.
ಸ್ಥಾನಮಾನಕ್ಕೋಸ್ಕರ ಜ್ಞಾನ ಬದಲಿಸಿಕೊಂಡ ಅವಕಾಶವಾದಿಯ ಮುನ್ನುಡಿಗೆ ಮುಟ್ಟಿನೋಡಿಕೊಳ್ಳುವ ಎದಿರೇಟು