ಮನೆಯೊಳಗೆ ಮನೆಯೊಡೆಯನಿದ್ದಾನೋ-ಇಲ್ಲವೋ / ಡಾ. ಪ್ರಕಾಶ ಪರನಾಕರ, ವಿಜಯಪುರ.

ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ [ಮನದೊ] ಮನೆಯೊಡೆಯನಿದ್ದಾನಿ, ಇಲ್ಲವೋ?
ಇಲ್ಲ, ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-29 / ವಚನ ಸಂಖ್ಯೆ-97)

ಅಂತರಂಗ ಶುದ್ಧಿಗೆ ಸಂಬಂಧಿಸಿದ ಈ ವಚನ ರೂಪಕದಿಂದ ಕೂಡಿದೆ. ಬಸವಣ್ಣನವರು ಯಜಮಾನರಿಲ್ಲದ ಪಾಳು ಬಿದ್ದ ಮನೆಯನ್ನು ಉದಾಹರಿಸುತ್ತಾರೆ. ಒಂದು ಮನೆಯಲ್ಲಿ ಮನೆಯೊಡೆಯ ಇದ್ದಾನೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿದರೆ, ಮನೆಯೊಳಗೆ ರಜ (ಕಸ, ಜೇಡರ ಬಲೆ ಇತ್ಯಾದಿ) ತುಂಬಿದರೆ ಅದರ ಅರ್ಥ ಅಲ್ಲಿ ಯಾರು ವಾಸವಿಲ್ಲ, ಯಜಮಾನರಿಲ್ಲ ಎಂದರ್ಥ. ಈ ದೇಹ ಎಂಬ ಮನೆಯಲ್ಲಿ ಯಜಮಾನ ಇದ್ದಾನೆ ಅಥವಾ ಇಲ್ಲ ಎಂದು ಹೇಗೆ ಹೇಳುವುದು? ಯಾರ ದೇಹದಲ್ಲಿ ಹುಸಿ ತುಂಬಿ ಅಂದರೆ ಕಪಟ, ಮೋಸ, ವಂಚನೆ ಮನಸ್ಸಿನೊಳಗೆ ವಿಷಯ ತುಂಬಿ ಅಂದ್ರೆ ಮೋಹಗಳು, ಆಸೆಗಳು, ವಿಕಾರಗಳು ಇರುತ್ತವೆಯೋ ಅಂಥ ಶರೀರದಲ್ಲಿ ಮುನೆಯೊಡೆಯ ಇಲ್ಲ ಎಂಬುದು ಬಸವಣ್ಣನವರ ಅಭಿಪ್ರಾಯ. “ಮನೆಯೊಡೆಯ” ಎಂದರೆ ನಮ್ಮೊಳಗಿನ “ಅರಿವು” ಎಂದು ಅರ್ಥ ಮಾಡಿಕೊಳ್ಳಬಹುದು. ಇದು ಇಲ್ಲದವರ ದೇಹದಲ್ಲಿ ಸಾಮಾನ್ಯವಾಗಿ ಹುಸಿ ಅಸೂಯೆಗಳು ವಿಷಯಗಳು ತುಂಬಿಕೊಳ್ಳುತ್ತವೆ. ಯಜಮಾನ ನಿಲ್ಲದ ಮನೆಯಲ್ಲಿ ರಜ ತುಂಬಿಕೊಳ್ಳುವಂತೆ ಹುಲ್ಲು ಹುಟ್ಟುವಂತೆ ಎಂದರ್ಥ. ಇದು ಬಸವಣ್ಣನವರ ಅಂತರಂಗ ಶುದ್ದಿಗೆ ಕೊಡುವ ಮಹತ್ವ. ಇಲ್ಲಿ ಮನೆಯೊಡೆಯ ಎಂಬ ಪರಿಕಲ್ಪನೆ ಅದ್ಭುತವಾಗಿದೆ ಹುಸಿ ಅಸೂಯೆ ಅಹಂಕಾರಗಳೆಂಬ ಕಸಗಳಿಂದ ತುಂಬಿರುವ ಮನೆಯಲ್ಲಿ ಒಡೆಯನಿಲ್ಲ. ಅರಿವು, ವಿವೇಕ ಇಲ್ಲ. ಇದ್ದಿದ್ದರೆ ಈ ಕಸವನ್ನೆಲ್ಲ ಗುಡಿಸಿ ಸ್ವಚ್ಛ ಮಾಡದೆ ಸುಮ್ಮನಿರುತ್ತಿದ್ದನೆ? ಈ ದೇಹವೆಂಬ ಮನೆಯನ್ನು ಪಾಳು ಬಿಡುತ್ತಿದ್ದನೆ? ಎಂದು ನಾವೆಲ್ಲರೂ ಚಿಂತನೆ ಮಾಡಬೇಕು.

ಡಾ. ಪ್ರಕಾಶ ಪರನಾಕರ,
ನೇತ್ರಾಧಿಕಾರಿಗಳು,
ಪ್ರಾಥಮಿಕ ಆರೋಗ್ಯ ಕೇಂದ್ರ,
ಐಗಳಿ,
ಅಥಣಿ ತಾಲೂಕ, ಬೆಳಗಾವಿ ಜಿಲ್ಲೆ.
ಮೋಬೈಲ್‌ ನಂ. 99724 56082

  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.

Loading

Leave a Reply