
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಯುಗ ವಿಶ್ವಕ್ಕೆ ಮಾದರಿ. ಕನ್ನಡದ ಸಾಂಸ್ಕೃತಿಕ ಚರಿತ್ರೆಯು ಎಷ್ಟೋ ಲಿಪಿ ಮತ್ತು ಲಿಪಿರಹಿತ ಭಾಷೆಗಳ ಪ್ರಭಾವವನ್ನು ಮೀರಿದುದಾಗಿದೆ. ಶೈವ ಮತ್ತು ವೈಷ್ಣವ ಪರಂಪರೆಗಳು ಬೆಳೆಯುತ್ತ ಬಂದಂತೆಲ್ಲಾ ಸ್ಥಾವರವನ್ನು ಪಡೆದು ಶಿಲ್ಪ ಕಲೆ ಸಂಗೀತ ಸಾಹಿತ್ಯದಂತಹ ಏಳು ಲಲಿತ ಕಲೆ ಮತ್ತು ನವರಸಗಳನ್ನು ಮೇಳೈಸಿಕೊಂಡು ಪರಂಪರೆಯಲ್ಲಿ ಸಾಕಾರಗೊಂಡವು.
ಬೀದಿಯ ಕೂಸಾಗಿ ಬೆಳೆದ ಕನ್ನಡ ಇಂದು ವಿಶ್ವ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟು ಇಂಗ್ಲೆಂಡ್ ನಲ್ಲಿ ನಗರದ ಲ್ಯಾಂಬೆತ್ ನದಿಯ ದಂಡೆಯಲ್ಲಿ ವಿಶ್ವ ಪ್ರಥಮ ಸಂಸತ್ತಿನ ರೂವಾರಿಯಾಗಿ ಮೂರ್ತ ಸ್ವರೂಪದಲ್ಲಿ ವಿರಾಜಿಸುತ್ತಿದ್ದಾನೆ. ಕನ್ನಡದ ಹೆಮ್ಮೆಯ ಕನ್ನಡಿಗ. ಇಂದು ವಿಜಯಪುರದ ಮುಸ್ಲಿಂ ವ್ಯಾಪಾರಸ್ಥರು ಸಂಸ್ಕೃತ ಆಡುಭಾಷೆಯಾಗಿ ಮಾತನಾಡುತ್ತಿರುವುದು ಅಭಿಮಾನದ ಸಂಗತಿ. ಭಾಷೆ ಸಶಕ್ತವಾಗಬೇಕಾದರೆ ಮನೆ ಮನಗಳ ಗೆಲ್ಲಬೇಕಿದೆ. ಹಲವಾರು ಭಾಷೆಯಲ್ಲಿ ತಜ್ಞತೆಯನ್ನು ಹೊಂದಿದರೆ ನಮ್ಮ ಜ್ಞಾನ ವಿಜ್ಞಾನವು ಹೆಚ್ಚು ವಿಸ್ತೃತ ರೂಪ ಪಡೆಯುವುದು. ಉಸುಕಿನಲ್ಲಿ ಅಕ್ಷರಗಳನ್ನು ಕಲಿಸಿದಾತ ಉಸಿರಿರುವರೆಗೂ ಉದಾತ್ತ ಗುಣಗಳನ್ನು ಬೆಳೆಸಿದಾತ. ಶರಣರ ಶಕ್ತಿ ಶ್ರಮಿಕರಲ್ಲಿ ಕಾಣಿಸಿದವರು ಹನ್ನೆರಡನೆಯ ಶತಮಾನದ ಶಿವಶರಣರು.
ಮರಳುಸಿದ್ದೇಶ್ವರರಿಗೆ ಲಿಂಗ ದೀಕ್ಷೆಯನ್ನು ನೀಡಿದವರು ರೇವಣಸಿದ್ದೇಶ್ವರ. ರಾಮನಗರದ ಸಮೀಪದಲ್ಲಿ ಇರುವ ರೇವಣಸಿದ್ದೇಶ್ವರ ಬೆಟ್ಟದ ಶಾಸನದಲ್ಲಿ “ಮಗನಂಥ ಶಿಷ್ಯ ನೀನು” ಎಂದು ರೇವಣಸಿದ್ದೇಶ್ವರರು ಹೇಳಿದ್ದು ದಾಖಲಾಗಿದೆ. ಗುರುವಿನಿಂದ ಗುರುತಿಸಲ್ಪಡುವ ಮತ್ತು ಗುರುವನ್ನೂ ಮೀರಿ ಬೆಳೆಯುವ ವ್ಯಕ್ತಿತ್ವಕ್ಕೆ ಸಾಕ್ಷಿಯೇ ಮರಳುಸಿದ್ದೇಶ್ವರ.
ಗುರು-ಶಿಷ್ಯ ಪರಂಪರೆಗೆ ಹೊಸ ಸಂಚಲನವನ್ನು ಮೂಡಿಸಿದವರು ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರು. ನಾನು ಸಂಗ್ರಹಿಸಿದ ಜನಪದ ಕಾವ್ಯದಲ್ಲಿ ಮರಳುಸಿದ್ದೇಶ್ವರ ಲೆಕ್ಕವಿಲ್ಲದ ಅಕ್ಷರ ಬರೆದದ್ದೇನೆ ಎನ್ನುತ್ತಾನೆ. “ನಾಲಿಗೆಯ ಮೇಲೆ ನವನುಡಿಯೇ, ಉತ್ತಮರ ಪಲ್ಲಕ್ಕಿಯಲ್ಲಿ ಬಂದೆ ಕಾವಿಧರಿಸಿ ಕೈಲಾಸ ಕಂಡೆ” ಎನ್ನುತ್ತಲೇ ಅರಿಯರು ನನ್ನ ನರಲೋಕ ಎಂದೂ ನೊಂದುಕೊಳ್ಳುವ ಪರಿಯು ಮತ್ತೆ ನಮ್ಮನ್ನು ಅವರ ಕಾಲಘಟ್ಟಕ್ಕೆ ಮರಳಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.
ಮರಳುಸಿದ್ದೇಶ್ವರ ಮಳೆಯನ್ನು ತರಿಸುವ ಮಳೆಯನ್ನು ಭರಿಸುವ ಮಳೆಮಲ್ಲೇಶನೀತ. ಆದ್ದರಿಂದ ಭಕ್ತರು ಮರಳುಸಿದ್ದೇಶ್ವರನನ್ನು
ಮಳೆರಾಯ
ಸಿದ್ದರಾಯ
ವೈದ್ಯಸಿದ್ದ
ಹಾಲು ಸಿದ್ದೇಶ್ವರ
ಕರಿಸಿದ್ದೇಶ
ಅಮೋಘ ಸಿದ್ಧ
ಕಾಡು ಸಿದ್ಧ
ಹುಟ್ಟಿದ ಊರು ಉಜ್ಜಯಿನಿ ಆದ್ದರಿಂದ ಉಜಿನೇಶ ಮಳೆಸಿದ್ದ
ಸಿದ್ಧಲಿಂಗ
ಸಿದ್ದಲಿಂಗೇಶ
ಸಿದ್ಧಲಿಂಗೇಶ್ವರ
ಸಿದ್ದಲಿಂಗಯ್ಯ
ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವನು. ಮರಳುಸಿದ್ದೇಶ್ವರ ಮಳೆ, ಬೆಳೆ, ಆಹಾರ, ಔಷಧಿ, ರೋಗ ನಿವಾರಣೆಗೆ ಪದ್ದತಿಯು ಮರಳುಸಿದ್ದೇಶ್ವರರಿಂದಲೇ ಮುಖ್ಯವಾಹಿನಿಗೆ ಬಂದಿದೆ.
ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಸಂಚರಿಸಿ ಜಂಗಮತ್ವ ಧೀಮಂತ ಎಂದರೆ ಈ ಮರಳುಸಿದ್ದೇಶ್ವರನೇ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಮರಳುಸಿದ್ದೇಶ್ವರರು ಮಳೆಯನ್ನು ಸಿದ್ದಿಸುವ ಸಂತರು. ಭಕ್ತಿ ಭಾವದ ನೆಲೆಯಲ್ಲಿ ದುಡಿಮೆಯ ಶಕ್ತಿಯನ್ನು ವೃದ್ಧಿಸಿದವರು.
ಅಕ್ಕಮಹಾದೇವಿಗೆ ಚಿಕ್ಕಂದಿನಲ್ಲಿ ಲಿಂಗದೀಕ್ಷೆ ನೀಡಿದ್ದಾರೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ.
- ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿರುವ “ಮೂಡೂರು” ಗ್ರಾಮದಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರ ಗರ್ಭಗುಡಿಯ ಎಡಭಾಗದಲ್ಲಿ ಅಕ್ಕಮಹಾದೇವಿಯ ಗದ್ದಿಗೆ ಇದೆ.
- ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ “ಕಣವಿ” ಗ್ರಾಮದಲ್ಲಿರುವ ಸಿದ್ದೇಶ್ವರ ಗುಡಿಯ ಪಕ್ಕದಲ್ಲಿ ಗುಡಿಯ ಮೇಲೆ ಅಕ್ಕಮಹಾದೇವಿಯ ಗವಿ ಇದೆ. ಅಕ್ಕಮಹಾದೇವಿಯು ಇಲ್ಲಿ ಬಂದು ತಪಗೈದ ಸಂಗತಿಯನ್ನು ಇಲ್ಲಿಯ ಸ್ಥಳೀಯ ಜನರು ಹೇಳವರು. ಉಡುತಡಿಯಿಂದ ಕಲ್ಯಾಣಕ್ಕೆ ಹೋಗುವಾಗ ದಾರಿಯಲ್ಲಿ ಇಲ್ಲಿ ಬಂದು ಉಳಿದುಕೊಂಡು ಶಿಷ್ಯ ಪರಂಪರೆಯ ಭಕ್ತಿಯನ್ನು ಮೆರೆದಿದ್ದಾಳೆ.
- ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ “ಮಂತ್ರೋಡಿ” ಗ್ರಾಮದಲ್ಲಿ ಇರುವ ಹೊಲದ ಮಧ್ಯದಲ್ಲಿ ಸಣ್ಣ ಮಣ್ಣಿನ ತೆವರಿನ ಗುಡ್ಡದಲ್ಲಿ ಮರಳುಸಿದ್ದೇಶ್ವರ ದೇಗುಲವಿದೆ. ರೇವಣಸಿದ್ದೇಶ್ವರ ಮತ್ತು ಸಿದ್ದಪ್ಪನಗುಡ್ಡ ಎಂದೂ ಕರೆಯುತ್ತಾರೆ. ಇಲ್ಲಿಯೂ ಸಹಿತ ಅಕ್ಕಮಹಾದೇವಿಯು ಬಂದು ಕೆಲಕಾಲ ಇದ್ದು ಕಲ್ಯಾಣ ಕಡೆಗೆ ನಡೆದಿದ್ದಾಳೆ. ಏಕೆಂದರೆ ಇಲ್ಲಿ ಪ್ರತಿವರ್ಷ ಸಿದ್ದಪ್ಪನ ತೇರು ನಡೆದ ಮರುದಿನವೇ ಸಣ್ಣ ತೇರನ್ನು ಎಳೆಯುವರು. ಅಕ್ಕ ಮಹಾದೇವಿಯ ಪೋಟೋ ಇಟ್ಟು ಅದೇ ರಥದಲ್ಲಿ ಮಹಿಳೆಯರು ಅಂದರೆ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ರಥವನ್ನು ಎಳೆಯುತ್ತಾರೆ. ಇಲ್ಲಿ ಗಂಡು ಮಕ್ಕಳು ಮರುದಿನ ಯಾರೂ ರಥವನ್ನು ಮುಟ್ಟುವುದಿಲ್ಲ. ಒಂದು ವೇಳೆ ರಥ ನಿಂತರೆ ಆಗ ಗಂಡು ಮಕ್ಕಳು ಗಾಲಿ ಮುನ್ನಡೆಸುವರು. ಈ ರೀತಿಯ ಸಮಾನತೆಯ ಸನ್ನಿವೇಶ ಈ ಆಚರಣೆ ಇಲ್ಲಿ ಅಕ್ಕಮಹಾದೇವಿ ರಥವನ್ನು ಎಳೆಯುವುದರ ಮೂಲಕ ಮಹಿಳೆಯರ ಸಹಭಾಗಿತ್ವವನ್ನು ಕಾಣಬಹುದಾಗಿದೆ.
ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರು ಗುರು ಶಿಷ್ಯ ಪರಂಪರೆಯ ರೂವಾರಿ ಯರು. ಬಸವಣ್ಣವರ ಹಿರಿಯ ಸಮಕಾಲೀನರು ಮತ್ತು ವಚನಕಾರರು. ಏಳನೂರ ಎಪ್ಪತ್ತು ಗಣಂಗಳಲ್ಲಿ ಈ ಗುರು ಶಿಷ್ಯರ ಪಾತ್ರ ಗಣನೀಯ. ಬಸವಣ್ಣ ಬಿಜ್ಜಳನ ರಾಜ್ಯವಾದ ಕಲ್ಯಾಣದಲ್ಲಿ ಸಮಾಜ ಸುಧಾರಕನಾಗಿ ವಿಸ್ಮಯಕಾರಿ ಬೆಳವಣಿಗೆ ಮಾಡಿರುವುದು. ಜಗತ್ತೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾನೆ. ಅದೇ ರೀತಿಯಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರು ತಮಗೆ ಸಾಧ್ಯವಾದಷ್ಟು ಹನ್ನೆರಡನೆಯ ಶತಮಾನದ ಆರಂಭದಲ್ಲಿ ವಚನಗಳನ್ನು ಬರೆದು ಪ್ರಚಾರ ಮಾಡಿ ಜನತೆಗೆ ಅಕ್ಷರ ಜ್ಞಾನದ ಚೈತನ್ಯ ತುಂಬಿದರು. ಭಕ್ತಿ ಪಂಥದ ಮೂಲಕ ಅರಿವು ಜ್ಞಾನದ ಕಡೆಗೆ ಜನತೆಗೆ ಸಮಾನತೆ ಹಾದಿಯನ್ನು ಕಂಡುಕೊಳ್ಳಲು ಹೆದ್ದಾರಿ ಮಾಡಿದರು.
ಮೆರೆಮಿಂಡದೇವ, ಬಾಲಬೊಮ್ಮಣ್ಣ, ಹಾವಿನಾಳ ಕಲ್ಲಯ್ಯ, ಆದಯ್ಯ, ಸಿದ್ದರಾಮರೆಲ್ಲಾ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರನ್ನು ಮನಸಾರೆ ಸ್ತುತಿಸಿದ್ದಾರೆ. ಗುರುವಾಗಿ ಬಂದವರು ರೇವಣಸಿದ್ದೇಶ್ವರ.
ಹಾವಿನಹಾಳ ಕಲ್ಲಯ್ಯನವ ಈ ವಚನದಲ್ಲಿ ಮರುಳಸಿದ್ಧೇಶ್ವರರ ಉಲ್ಲೇಖವಿದೆ:
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು.
ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು.
ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು.
ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು.
ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು.
ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು.
ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು.
ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು.
ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು.
ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು.
ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು.
ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು.
ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು.
ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು.
ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು.
ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು.
ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-472/ವಚನ ಸಂಖ್ಯೆ-1125)
“ಎನ್ನ ನೇತ್ರದಲ್ಲಿ ರೇವಣಸಿದ್ದೇಶ್ವರ ದೇವರು ಸ್ವಾಯತವಾದನಯ್ಯ, ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯ ಮರಳುಸಿದ್ದೇಶ್ವರ ದೇವರು. ನೇತ್ರ ಶ್ರೋತ್ರಗಳು ಶುದ್ಧವಾದವು ಎನ್ನುತ್ತಾರೆ ಶರಣ ಹಾವಿನಹಾಳ ಕಲ್ಲಯ್ಯನವರು.
ಆದಯ್ಯನವರ ಈ ವಚನದಲ್ಲಿ ಮರುಳಸಿದ್ಧೇಶ್ವರ ಉಲ್ಲೇಖವಿದೆ.
ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,
ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,
ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,
ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,
ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,
ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,
ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,
ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,
ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,
ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,
ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,
ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-380 / ವಚನ ಸಂಖ್ಯೆ-1031)
ರೇವಣಸಿದ್ಧಯ್ಯದೇವರೆನ್ನ ನೇತ್ರ, ಮರುಳುಸಿದ್ಧಯ್ಯದೇವರೆನ್ನ ಶ್ರೋತೃ ಎಂದು ಸೌರಾಷ್ಟ್ರ ಸೋಮೇಶ್ವರನ ನಿಜಭಕ್ತ ಆದಯ್ಯ ನುಡಿಯುತ್ತಾನೆ.
ಸಿದ್ಧರಾಮೇಶ್ವರರೂ ಕೂಡ ಮರುಳ ಸಿದ್ಧೇಶ್ವರರು ವಚನಗಳನ್ನ ಬರೆದದದನ್ನು ಈ ವಚನದಲ್ಲಿ ಬರೆದಿದ್ದಾರೆ:
ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ.
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ.
ಎಮ್ಮಯ್ಯಗಳ ವಚನ ವಚನಕ್ಕೊಂದು.
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ.
ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ.
ಎಮ್ಮಕ್ಕ ನಾಗಾಯಿಯ ವಚನ ಮೂರುಲಕ್ಷದ ತೊಂಬತ್ತಾರು ಸಾಸಿರ.
ಮಡಿವಾಳಣ್ಣನ ವಚನ ಮೂರು ಕೋಟಿಮುನ್ನೂರು.
ಹಡಪದಯ್ಯಗಳ ವಚನ ಹನ್ನೊಂದು ಸಾಸಿರ.
ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ.
ಇಂತಪ್ಪ ವಚನದ ರಚನೆಯ ಬಿಟ್ಟು,
ಹುಡಿಮಣ್ಣ ಹೊಯ್ಯದೆ ಮಾಬನೆ,
ಕುತ್ಸಿ ಕಾವ್ಯಾಲಂಕಾರ ನೋಡುವರ ನೋಡಿ,
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-493/ವಚನ ಸಂಖ್ಯೆ-1587)
ಸಿದ್ದರಾಮೇಶ್ವರನು ಮರಳುಸಿದ್ದನ ವಚನ ಅರವತ್ತೆಂಟು ಸಾಸಿರ ರಚನೆ ಆಗಿವೆ ಎಂದು ಅಲ್ಲಮ ಪ್ರಭುರೊಂದಿಗೆ ಹೇಳುವರು.
ಇಂತಹ ಮರಳುಸಿದ್ದೇಶ್ವರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯದೇ ಇರುವುದು. ಆಶ್ಚರ್ಯ ಮತ್ತು ಕುತೂಹಲಕಾರಿ ಸಂಗತಿಯಾಗಿದೆ. ಅಕ್ಕಮಹಾದೇವಿಗೆ ಲಿಂಗ ದೀಕ್ಷೆ ಮರಳುಸಿದ್ದೇಶ್ವರರಿಂದ ಆಗಿದೆ ಎಂದು ಮಹದೇವ ಬಣಕಾರ ಅವರು “ವಿಶ್ವ ಬಂಧು ಮರಳುಸಿದ್ದೇಶ್ವರ” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ “ಕಣವಿ” ಗ್ರಾಮದಲ್ಲಿರುವ ಮರಳುಸಿದ್ದೇಶ್ವರ ದೇಗುಲ ಪಕ್ಕದಲ್ಲಿ ಅಕ್ಕ ಮಹಾದೇವಿ ಗದ್ದಿಗೆ, ಗವಿ, ರಥ, ಜಾತ್ರೆ ನಡೆಯುತ್ತವೆ ಎಂಬ ಅಂಶಗಳನ್ನು ಗಮನಾರ್ಹವಾಗಿವೆ.
ಹಾವೇರಿ ಜಿಲ್ಲೆಯಲ್ಲಿ ಹತ್ತು ಹದಿನೈದು ಕಿಲೋಮೀಟರ್ ಸುಪರ್ದಿಯಲ್ಲಿ ಮರಳುಸಿದ್ದೇಶ್ವರರ ದೇಗುಲಗಳಿವೆ. ಮಳೆ ಭರಿಸುವ ಮಳೆಯನ್ನು ತರಿಸುವ ಆಚರಣೆಯನ್ನು ಪ್ರತೀ ವರ್ಷವೂ ಪರಂಪರಾನುಗತವಾಗಿ ಇಲ್ಲಿಯ ಭಕ್ತರು ಮಳೆ ದೇವರನ್ನು ಕರೆಯುವ ಆಚರಣೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
- ಹಾನಗಲ್ ತಾಲ್ಲೂಕಿನ ಮೂಡೂರಿನಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರ.
- ವರದಾ ನದಿಯ ತಟದಲ್ಲಿ ಹೊಂಕಣ ಊರಿನಲ್ಲಿರುವ ಮರಳುಸಿದ್ದೇಶ್ವರ.
- ಉಜಿನಿಪುರದ ಉಜಿನೇಶ ಮತ್ತು ಈ ತನ ಶಿಷ್ಯ ಜಟ್ಟಿಲಿಂಗೇಶ್ವರ.
- ಹಿರೆಕೆರೂರು ತಾಲ್ಲೂಕಿನ ಸೀತಿಕೊಂಡದಲ್ಲಿ ಮರಳುಸಿದ್ದೇಶ್ವರ ಮತ್ತು ಜಟ್ಟಿಲಿಂಗೇಶ್ವರ.
- ರಟ್ಟಿಹಳ್ಳಿಯ ಕುಮದ್ವತಿ ನದಿಯ ದಡದಲ್ಲಿರುವ ಮಳೆ ಮಲ್ಲೇಶ,
- ರಟ್ಟಿಹಳ್ಳಿ ತಾಲ್ಲೂಕಿನ ಕಣವಿ ಸಿದ್ದಗೇರಿಯಲ್ಲಿ ಮರಳುಸಿದ್ದೇಶ.
- ಪರ್ವತ ಸಿದ್ದಗೇರಿಯಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರ.
- ಚಿಕ್ಕ ಯಡಚಿಯಲ್ಲಿಯ ಮರಳುಸಿದ್ದೇಶ್ವರ, ಇಲ್ಲಿ ವೈಧ್ಯನಾಥ ಎಂದೇ ಹೆಸರಾಗಿದ್ದಾನೆ. ಭಕ್ತಿಯಿಂದ ಮಠದಲ್ಲಿ ಸೇವೆಯನ್ನು ಮಾಡಿದರೆ ಭಕ್ತರಿಗೆ ಏನೇ ರೋಗ ಬಂದರೂ ಗುಣಮುಖರಾಗುವರು ಎಂಬ ನಂಬಿಕೆಯಿಂದ ಜನರು ಕಾಟ್ಲೆ ಸೇವೆ ಕಾಟ್ಲೆಕಟ್ಟುವ ಆಚರಣೆಯನ್ನು ಮಾಡುತ್ತಾರೆ.
- ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹಲಗೇರಿ ಊರಿನಲ್ಲಿ ಹಾಲಸಿದ್ದೇಶ್ವರನೇ ಮರಳುಸಿದ್ದೇಶ್ವರ.
- ರಾಣೆಬೆನ್ನೂರು ನಗರದಲ್ಲಿ ಹುಬ್ಬಳ್ಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ದೊಡ್ಡದಾದ ಸಿದ್ದೇಶ್ವರ ದೇಗುಲ. ಕಲ್ಯಾಣ ಚಾಲುಕ್ಯರ ಕಾಲದಲ್ಲಿಯ ವಿಶಿಷ್ಠವಾದ ಶಿಲ್ಪ ಕಲೆಯಿಂದ ಕೂಡಿದೆ. ದೊಡ್ಡದಾದ ನಂದಿಯು ಗರ್ಭಗುಡಿಯ ಎಡಭಾಗದಲ್ಲಿ ಇದೆ.
ಹಾವೇರಿ ತಾಲ್ಲೂಕಿನ ಕಬ್ಬೂರಿನ ಸಮೀಪದಲ್ಲಿ ಮಣ್ಣಿನ ಗುಡ್ಡವಿದ್ದು ಇಲ್ಲಿ ಮಳೆ ಆಚರಣೆಯನ್ನು ಮಾಡಿ ನಂತರ ಊರಿಗೆ ಬರುವಾಗ ಮೆರವಣಿಗೆ ಮೂಲಕ ಬರುವರು. ಆಗ ಎಲ್ಲರೂ ದೇವರ ದರ್ಶನ ಮಾಡಿಕೊಂಡು ಬರುವಾಗಲೇ ಮಳೆ ಬರುವುದು ಎಂದು ಜನರ ನಂಬಿಕೆಯೂ ಇದೆ. ಹೆಚ್ಚಾಗಿ ಈ ಭಾಗಗಳಲ್ಲಿ ಇಡೀ ಊರಿಗೆ ಊರೇ ಪರು ಅಂತ ಮಾಡಿ ದೇವಾಲಯಕ್ಕೆ ಊರಿನ ಎಲ್ಲರ ಮನೆಯಿಂದ ಅಡುಗೆ ಕಟ್ಟಿಕೊಂಡು ಮನೆಗೆ ಒಬ್ಬರಂತೆ ಪುಟ್ಟಿಯಲ್ಲಿ ಪೂಜೆ ಅಡುಗೆಯನ್ನು ಗುಡ್ಡ ಬೆಟ್ಟಕ್ಕೆ ದೈವದ ಪಲ್ಲಕ್ಕಿ ಸಮೇತ ಹೊರಡುವರು. ನಂತರದಲ್ಲಿ ಪೂಜೆ ಮುಗಿಸಿ ಊಟವನ್ನು ಮಾಡಿ ಗುಡ್ಡ ಬೆಟ್ಟ ಇಳಿಯುವುದರೊಳಗಾಗಿ ಮಳೆಯನ್ನೇ ಮಳೆರಾಯ ಸಿದ್ದರಾಯ ತಂದೇ ತರುವನು ಎಂಬುದು ಜನಪದರ ಬಲವಾದ ನಂಬಿಕೆ. ಬಂಕಾಪುರದಲ್ಲಿ ರೇವಣಸಿದ್ದೇಶ್ವರ ಮರಳುಸಿದ್ದೇಶ್ವರ ದೇಗುಲಗಳು ದೂರ ಇವೆ. ಮರಳುಸಿದ್ದೇಶ್ವರ ದೇವಾಲಯವು ಕಲ್ಯಾಣಿ ಚಾಲುಕ್ಯರ ಕಾಲಘಟ್ಟದಾಗಿದೆ. ವಿಶಿಷ್ಷ ಶಿಲ್ಪ ಕಲೆಗಳಿಂದ ಕೂಡಿದ್ದು ಮರಳುಸಿದ್ದೇಶ್ವರ ಶಿವಲಿಂಗಪೀಠ ದೊಡ್ಡದಾಗಿದೆ. ಗಣೇಶ ಸಪ್ತ ಮಾತೃಕೆಯರು ಮುಖ ಮಂಟಪ ನಾಗ ಶಿಲ್ಪಗಳಿಂದ ಕೂಡಿದೆ. ರೇವಣಸಿದ್ದೇಶ್ವರರ ದೇಗುಲ ಮತ್ತು ಗರ್ಭಗುಡಿಯನ್ನು ಆಧುನೀಕರಣಗೊಳಿಸಿರುವರು. ಶಿಗ್ಗಾವಿ ತಾಲ್ಲೂಕಿನಲ್ಲಿ ಹುಣಸೀಕಟ್ಟಿ ಊರಿನಲ್ಲಿ ಸಿದ್ದರಬೆಟ್ಟನೇ ಸಿದ್ದೇಶ್ವರ ಬೆಟ್ಟ ಇದೆ. ಅಲ್ಲಿ ಗುರು ಶಿಷ್ಯರಾದ ರೇವಣಸಿದ್ದೇಶ್ವರ ಮರಳುಸಿದ್ದೇಶ್ವರರ ಒಂದೇ ಪೀಠದಲ್ಲಿ ದೊಡ್ಡದು ಚಿಕ್ಕದಾದ ಶಿವಲಿಂಗ ಎಲ್ಲಿ ಇರುವವೋ ಅವೆಲ್ಲವೂ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರ ಶಿವಲಿಂಗಗಳೇ. ಬಹುತೇಕ ಎಲ್ಲಾ ಕಡೆ ಮರಳುಸಿದ್ದೇಶ್ವರ ಮತ್ತು ರೇವಣಸಿದ್ದೇಶ್ವರರು ಬೆಟ್ಟದ ಪ್ರದೇಶದಲ್ಲಿ ಗುಡ್ಡಗಾಡಿನ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಅಕ್ಷರ ಕಲಿಕೆ, ಯೋಗ, ಧ್ಯಾನ, ಆಹಾರ, ಆರ್ಯವೇದ, ಔಷಧ, ಮಳೆ ಬೆಳೆ, ಅಸಮಾತೆ, ತಾರತಮ್ಯದ ಬಗ್ಗೆ ಅರಿವು ಮೂಡಿಸುವ ಪ್ರಕ್ರಿಯೆಯಲ್ಲಿ ಸದಾ ನಿರತರಾಗಿದ್ದವರು ಈ ಗುರು ಶಿಷ್ಯರು. ಬಂಕಾಪುರದಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರ ದೇಗುಗಳು ದೂರ ಇವೆ. ಮರಳುಸಿದ್ದೇಶ್ವರ ದೇವಾಲಯವು ತಾಲ್ಲೂಕಿನ ನಾರಾಯಣಪುರದಲ್ಲಿ ಮಳೆಯನ್ನು ತರುವ ಸಿದ್ದರಾಯ ಮತ್ತು ದನಕರುಗಳಿಗೆ ಆರೋಗ್ಯ ವ್ಯತ್ಯಾಸವಾದಾಗ ಈ ದೇವರಿಗೆ ಬೇಡಿಕೊಂಡರೆ ಗುಣಮುಖ ಮಾಡುವ ಸಿದ್ದಪ್ಪಜ್ಜ ಎಂದೇ ನಂಬಿದ್ದಾರೆ. ಈಗಲೂ ಮಳೆಯ ಆಚರಣೆಯನ್ನು ನಾರಾಯಣಪುರ ಗ್ರಾಮದರು ಮಾಡುತ್ತಾರೆ. ನಾರಾಯಣಪುರದಲ್ಲಿಯೇ ಸದಾಶಿವಪೇಟೆ ಊರಿನಲ್ಲಿ ರೇವಣಸಿದ್ದೇಶ್ವರ ಮಠವಿದೆ.
ಶಿಗ್ಗಾವಿ ತಾಲ್ಲೂಕಿನ ಹುಲಗೂರು ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಎಂಬ ದೇವಾಲಯ ಇದೆ. ಇಲ್ಲಿಯೂ ಮಳೆಯನ್ನು ಕರೆಯುವ ಆಚರಣೆಯನ್ನು ಮಾಡುವರು. ಈ ಶಿವಲಿಂಗದ ಮುಂದೆ ಒಬ್ಬ ಮನುಷ್ಯ ಆಕೃತಿಯ ಮೂರ್ತಿ ಇದೆ. ಈ ವಿಗ್ರಹವು ಮರಳುಸಿದ್ದೇಶ್ವರನ ವಿಗ್ರಹವೆಂದೇ ನನ್ನ ಅಭಿಪ್ರಾಯ. ಶಿಗ್ಗಾವಿಯಲ್ಲಿ ಸಿದ್ದರಾಯನ ಗುಡಿ ಇದೆ. ಕರಕುಶಲಗಾರರಾದ ಕುಂಬಾರರ ಓಣಿಯಲ್ಲಿ ಈ ದೇವಾಲಯ ಇದೆ.

ಕನ್ನಡದಲ್ಲಿ ಹೆಸರಾಂತ ಸಂಶೋಧನಕರಾದ ಎಚ್.ತಿಪ್ಪೇರುದ್ರಸ್ವಾಮಿಯವರು “ಕದಳಿ ಕರ್ಪೂರ” ಎಂಬ ಪುಸ್ತಕದಲ್ಲಿ ಅಕ್ಕಮಹಾದೇವಿ ಜನಿಸಿದಾಗಲೇ ಮರಳುಸಿದ್ದೇಶ್ವರ ಅಕ್ಕಮಹಾದೇವಿಗೆ ಮಹಾದೇವಿ ಎಂಬ ಹೆಸರಿನಿಂದ ಕರೆದು ಲಿಂಗ ದೀಕ್ಷೆ ನೀಡಿದ್ದಾರೆ ಎಂದು ತಿಪ್ಪೇರುದ್ರಸ್ವಾಮಿ ಬರೆಯುತ್ತಾರೆ. ಹೀಗೆ ಅಕ್ಕಮಹಾದೇವಿ ಮತ್ತು ಮರಳುಸಿದ್ದೇಶ್ವರ ಇವರ ಗುರುಶಿಷ್ಯ ಸಂಬಂಧ ಮನನೀಯವಾಗಿದೆ. ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರು ಜಗತ್ತನ್ನು ಸುತ್ತಿ ಜ್ಞಾನ ಧಾರೆ ಎರೆದು ಇಡೀ ಸಮಾಜವನ್ನು ಮಾನವೀಯ ನೆಲೆಯಲ್ಲಿ ಬದುಕುವಂತೆ ಪ್ರೇರೇಪಿಸಿದ್ದಾರೆ. ಅವರ ನಿಲುವು ಚಿಂತನೆಯು ಅಂದು ಜಗತ್ತನ್ನೇ ಮಂತ್ರ ಮುಗ್ದರನ್ನಾಗಿಸಿತ್ತು.
ಕರ್ನಾಟಕದ ಮೂಲೆಮೂಲೆಗಳಲ್ಲಿ ಮರಳುಸಿದ್ದೇಶ್ವರ ದೇಗುಲಗಳಿವೆ. ಮಳೆ ಆಚರಣೆ ಆರೋಗ್ಯ ಸಂಬಂಧಿಸಿದಂಥ ಆಚರಣೆ ಗಳು ನಡೆಯುತ್ತವೆ. ಮೈಸೂರು ಭಾಗದಲ್ಲಿ ಬದನವಾಳು ಸಿದ್ದೇಶ್ವರ, ಕಾರ್ಯ ಸಿದ್ದೇಶ್ವರ, ಜೇನುಕಲ್ಲು ಸಿದ್ದೇಶ್ವರ, ಹಿರಿಯೂರು ಸಿದ್ದೇಶ್ವರ, ತುಮಕೂರು ಸಿದ್ದೇಶ್ವರ ಬೆಟ್ಟದಲ್ಲಿ ನೀರು ಮತ್ತು ಔಷಧೀಯ ಸಸ್ಯಗಳು ವಿಶೇಷವಾಗಿವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮತ್ತು ಹಡಗಲಿ ಮಧ್ಯ ಬರುವ ಸೋಗಿ ಬೆಟ್ಟದ ಮಹಾಂತ ಮಲ್ಲಿಕಾರ್ಜುನ ಇದೇ ಸಿದ್ದೇಶ್ವರ. ಹಡಗಲಿ ತಾಲ್ಲೂಕಿನ ಹೊಳಗುಂದಿಯಲ್ಲಿ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರ ಇಬ್ಬರೂ ಗರ್ಭಗುಡಿಯಲ್ಲಿ ವಿರಾಜಮಾನರಾಗಿರುವರು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ದಶಮಾಪುರ ಮತ್ತು ಹೊಸಕೇರಿ ಊರಿನ ಮಧ್ಯ ಬರುವ ಗುಡ್ಡಗಳಲ್ಲಿ ಮಳೆ ಮಲ್ಲೇಶ್ವರ ಇದ್ದು ಇಲ್ಲಿ ಮಳೆ ಬರದೇ ಇರುವಾಗ ಮಳೆ ತರಿಸುವ ಆಚರಣೆಯನ್ನು ಮಾಡುವರು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದಲ್ಲಿ ಮಳೆಯನ್ನು ಭರಿಸುವ ಮಳೆ ಮಲ್ಲಪ್ಪ ಆಚರಣೆ ಮಾಡುವರು. ಮೋರಿಗೇರಿಯವರೇ ಸೋಗಿ ಬೆಟ್ಟಕ್ಕೆ ಹೋಗಿ ಮಳೆ ಕರೆಯುವ ಆಚರಣೆಯನ್ನು ಇಂದೂ ಜನಪದರು ಮಾಡುತ್ತಿದ್ದಾರೆ.
ಕೊಪ್ಪಳದ ಗವಿಸಿದ್ದೇಶ ಈ ಮರಳುಸಿದ್ದೇಶ್ವರನೇ. ಕೊಪ್ಪಳ ಗುಡ್ಡದಲ್ಲಿ ಮಳೆ ಮಲ್ಲೇಶ್ವರ ಇದ್ದಾನೆ. ಇದೇ ತಾಲ್ಲೂಕಿನಲ್ಲಿ ಹಿರೇಸಿಂದೋಗಿಯ ಮತ್ತು ಬಿಸರಹಳ್ಳಿಯಲ್ಲಿ ಮರಳುಸಿದ್ದೇಶ್ವರನೇ ಇದ್ದಾನೆ. ಮಳೆ ಕರೆಯಲು ಇಲ್ಲಿಯ ಜನರು ಉಜ್ಜಯಿನಿಗೆ ಹೋಗಿ ಮಳೆ ಬೀಜವನ್ನು ತರುವ ಆಚರಣೆಯನ್ನು ಮಾಡುತ್ತಾರೆ. ಗದಗಿನ ಕಪ್ಪತ್ತಗುಡ್ಡದ ಕಪ್ಪತ್ತ ಮಲ್ಲೇಶನೇ ಮರಳುಸಿದ್ದೇಶ್ವರ. ಇಲ್ಲಿಯೂ ಮಳೆಯ ಆಚರಣೆಯನ್ನು ಮಾಡಿ ಅಲ್ಲಿರುವ ದೇವಸ್ಥಾನದ ಹೊಲಗಳನ್ನು ರೈತ ಭಕ್ತರು ಬಿತ್ತನೆ ಕಾರ್ಯ ಮಾಡಿ ಬರುವುದು. ಶಿಗ್ಗಾವಿ ಸಮೀಪದಲ್ಲಿ ಇರುವ ಬಸನಾಳ ಗ್ರಾಮದವರು ಕಪ್ಪತ್ತು ಗುಡ್ಡಕ್ಕೆ ಹೋಗಿ ಎಂಟು ದಿನಗಳ ಕಾಲ ಪೂಜೆ, ಪ್ರಸಾದ, ಬಿತ್ತನೆ ಮಾಡಿಕೊಂಡು ಬರುವರು. ಬಸನಾಳದ ಗ್ರಾಮದಲ್ಲಿ ಮನೆಗೊಬ್ಬ ರೈತರು ಹೋಗಿ ಬರುವವರೆಗೂ ಬಸನಾಳ ಗ್ರಾಮದಲ್ಲಿ ಬಸವಣ್ಣ ಗುಡಿಯಲ್ಲಿ ಗಂಟೆಯನ್ನು ಸರದಿ ಪ್ರಕಾರ ಆ ಊರಿನವರು ಬಾರಿಸುತ್ತಾರೆ. ಏಕೆಂದರೆ ಬಸನಾಳಕ್ಕೆ ಬರಗಾಲ ಬರದೇ ಇರಲಿ ಎಂದು ಮರಳುಸಿದ್ದೇಶ್ವರನೋ ಅಥವಾ ರೇವಣಸಿದ್ದೇಶ್ವರನೋ ಈ ಊರಿಗೆ ವರವನ್ನು ನೀಡಿರುವರೆಂದು ಅಲ್ಲಿನ ಭಕ್ತರು ಹೇಳುವರು.
ಒಟ್ಟಾರೆ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರರು ಹನ್ನೆರಡನೆಯ ಶತಮಾನದ ಆರಂಭದಲ್ಲಿ ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ತಮ್ಮ ಪ್ರಭಾವದಿಂದಾಗಿ ಇಡೀ ಸಮಾಜದಲ್ಲಿ ಭಕ್ತಿ ಮೆರೆದಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ಭಾಗದಲ್ಲಿ ಇಂದಿಗೂ ರೇವಣಸಿದ್ದೇಶ್ವರ ಮತ್ತು ಮರಳುಸಿದ್ದೇಶ್ವರ ದೇವಾಲಯಗಳಿವೆ. ವೈಜ್ಞಾನಿಕ ವೈಚಾರಿಕಯಿಂದ ಬದುಕನ್ನು ಸರಳೀಕೃತ ರೂಪದಲ್ಲಿ ಸಾರ್ಥಕ ಬದುಕು ಬದುಕಿರಿ ಎಂದು ಹೇಳಿದ್ದಾರೆ. ಆದರೆ ಇಂದು ನಾವು ಅವರ ಹೆಸರಿನಲ್ಲಿ ಅಂಧಾನುಕರಣೆ, ಮೌಲ್ಯಗಳನ್ನು ಬಿಟ್ಟು ಮೌಢ್ಯತೆಯ ಆಚರಣೆಯನ್ನು ಮುಂದುವರಿಸುತ್ತಿರುವುದು ವಿಪರ್ಯಾಸ.
ಡಾ. ಸುಜಾತಾ ಅಕ್ಕಿ,
ಮೈಸೂರು.
ಮೋಬೈಲ್ ಸಂ. 99012 85196.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in