ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ತನ್ನನಳಿದು ನಿಜವುಳಿದ
ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು
ಬದುಕಿದೆನು ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50)
ಶರಣ ಕಿನ್ನರಿ ಬ್ರಹ್ಮಯ್ಯನವರ ಈ ವಚನ ಶರಣ ಮರುಳಶಂಕರದೇವರ ಘನವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲಶೃತಿಯಿಂದ ಹಲವಾರು ಶರಣರು ವಿವಿಧ ಸ್ಥಳಗಳಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ ಶರಣರಲ್ಲಿ ಅಫಘಾನಿಸ್ತಾನದಿಂದ ಬಂದ ಮರುಳಶಂಕರದೇವರು ಪ್ರಮುಖರು. ಕಲ್ಯಾಣದ ಮಹಾಮನೆಯಲ್ಲಿ ಅಜ್ಞಾತವಾಗಿ ಬದುಕಿದ್ದ ಶರಣ ಮರುಳಶಂಕರದೇವರನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ಗುರುತಿಸುತ್ತಾರೆ.
ಅಲ್ಲಮ ಪ್ರಭುಗಳ ಒಂದು ವಿಶೇಷತೆ ಅಂದರೆ ಅವರ ಲೋಕ ಸಂಚಾರ. ಹೀಗೆ ಲೋಕ ಸಂಚಾರ ಮಾಡುತ್ತಾ ಮಾಡುತ್ತಾ ಮಾರ್ಗ ಮಧ್ಯದಲ್ಲಿ ಸಿಗುವ ಅನೇಕ ಶರಣರನ್ನು ಪರಿಚಯಿಸಿ ಅವರೆಲ್ಲರನ್ನು ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾರೆ. ಹಾಗೆಯೇ ನಿಜೈಕ್ಯ ಶರಣ ಅಜಗಣ್ಣನ ವಿಯೋಗದಿಂದ ಕಂಗೆಟ್ಟಿದ್ದ ಶರಣೆ ಮುಕ್ತಾಯಕ್ಕನವರ ಅಂತರಂಗದಲ್ಲಿದ್ದ ಅರಿವಿನ ದೀಪವನ್ನು ಪುನಃ ಪ್ರಜ್ಜಲಿಸುವಂತೆ ಮಾಡುತ್ತಾರೆ. ತದ ನಂತರ ಸೊನ್ನಲಿಗೆಗೆ ತೆರಳುತ್ತಾರೆ. ಅಲ್ಲಿ ಕರ್ಮಯೋಗಿಯಾಗಿದ್ದ ಸಿದ್ಧರಾಮರ ಸಾಮರ್ಥ್ಯ ಸರಿಯಾದ ಮಾರ್ಗದರ್ಶನವಿಲ್ಲದೆ ಸೋರಿ ಹೋಗುತ್ತಿದ್ದದ್ದನ್ನು ಕಂಡು ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆತಂದು ಅವರನ್ನು ಶಿವಯೋಗಿಯನ್ನಾಗಿಸುವಲ್ಲಿ ಅಲ್ಲಮ ಪ್ರಭುಗಳ ಪಾತ್ರ ಹಿರಿದು. ಕಲ್ಯಾಣದಲ್ಲಿ ಬಸವಣ್ಣನವರ ಮಹಾಮನೆಯನ್ನು ಪ್ರವೇಶಿಸಿದಾಗ ಅಲ್ಲಿ ಸುತ್ತಮುತ್ತಲಿನ ಜಗತ್ತಿಗೆ ಸಂಬಂಧವೆ ಇಲ್ಲವೆನೊ ಎನ್ನುವಂತೆ ತಮ್ಮಷ್ಟಕ್ಕೆ ತಾವೇ ನಗುತ್ತ ಕೈ ಬೆರಳುಗಳಿಂದ ಏನೆನೊ ಲೆಕ್ಕ ಹಾಕುತ್ತ ಅರೆ ಮರುಳನಂತೆ ಕಾಣುತ್ತಿದ್ದ ಮರುಳಶಂಕರದೇವರನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಅಲ್ಲಿದ್ದ ಮರುಳಶಂಕರದೇವರಿಗೆ ಯಾರು ಬಂದರು, ನಿಂತರು, ಯಾರು ಹೋದರು ಅಂತ ಗಮನಿಸದೆ ಮುಗ್ಧ ಮಗುವಿನಂತೆ ತಮ್ಮದೇ ಆದ ಕಾಯಕದಲ್ಲಿ ತಲ್ಲೀನರಾಗಿರುತ್ತಿದ್ದರು. ಅವರ ದಿವ್ಯ ದೃಷ್ಟಿಯಿಂದ ಗಮನಿಸಿದ ಅಲ್ಲಮ ಪ್ರಭುಗಳಿಗೆ ಮರುಳಶಂಕರದೇವರು ಒಬ್ಬ ಮಹಾಜ್ಞಾನಿಯಾಗಿ ಗೋಚರಿಸುತ್ತಾರೆ. ಆಶ್ಚರ್ಯಚಕಿತರಾದ ಅಲ್ಲಮ ಪ್ರಭುಗಳು ಬಸವಣ್ಣನವರಿಗೆ ಈ ರೀತಿ ಹೇಳುತ್ತಾರೆ.
ಅಂಗ[ಳ]ದ ಬಾಗಿಲ ನೆಲೆಯಲ್ಲಿ ನಿಂದಿದ್ದ
ಲಿಂಗವನರಿದುದಿಲ್ಲವೆ ಬಸವಣ್ಣಾ?
ಸುಸಂಗಿ ನಿರಂಗಿ ನಿಷ್ಕಲ ಪರಬ್ರಹ್ಮ ಮರುಳಶಂಕರಲಿಂಗ!
ಪ್ರಸಾದದ ಕುಳಿಯಲ್ಲಿದ್ದ
ನಿಜನಿವಾಸದ ಅಂಗವ ನೋಡು,
ಗುಹೇಶ್ವರಲಿಂಗದಲ್ಲಿ ಸಂಗನ ಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-226/ವಚನ ಸಂಖ್ಯೆ-722)
ಈತ ಸಾಮಾನ್ಯ ಶರಣನಲ್ಲ. “ಸುಸಂಗಿ ನಿರಂಗಿ ನಿಷ್ಕಲ ಪರಬ್ರಹ್ಮ ಮರುಳಶಂಕರಲಿಂಗ”. ಇವರು ಉಳಿದವರಂತಲ್ಲ ಮೇಲಾಗಿ ಮಹಿಮಾನ್ವಿತ ಶರಣರಾದ ಮರುಳಶಂಕರದೇವರು. ಈ ವಿಷಯ ತಿಳಿದ ಬಸವಣ್ಣನವರು:
ಮುಗಿಲ ಮರೆಯ ಮಿಂಚಿನಂತೆ,
ಒಡಲ ಮರೆಯ ಆತ್ಮನಂತೆ,
ನೆಲದ ಮರೆಯ ನಿಧಾನದಂತೆ ಇಪ್ಪ,
ನಿಮ್ಮ ನಿಲವನಾರು ಬಲ್ಲರು ದೇವಾ?
ನಿಮ್ಮ ನಿಲವ ಹಲಕಾಲದಿಂದ ಕಂಡು ಕಂಡು
ಕಡೆಗಣಿಸಿ, ಮರೆದು ಮತಿಗೆಟ್ಟು ಮರುಳಾದೆನು.
ಎನ್ನ ತಪ್ಪಿಂಗೆ ಕಡೆಯಿಲ್ಲ ಕಾಣಾ
ತ್ರಾಹಿ ತ್ರಾಹಿ ಕಾಯಯ್ಯಾ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-394/ವಚನ ಸಂಖ್ಯೆ-1318)
ಅಂತ ಭಿನ್ನವಿಸಿಕೊಳ್ಳುತ್ತಾರೆ. ಹೀಗೆ ಸುಮಾರು 12 ವರ್ಷಗಳಿಂದ ಗುಪ್ತವಾಗಿ ಮಹಾಮನೆಯ ದಾಸೋಹ ಮಂಟಪದಲ್ಲಿ ಶರಣರ ಶೇಷ ಪ್ರಸಾದವನ್ನು ಸೇವಿಸಿ ಬದುಕುತ್ತಿದ್ದ ಗುಪ್ತ ಶರಣ ಮರುಳಶಂಕರದೇವರು ಅಲ್ಲಮರ ಮೂಲಕ ಬೆಳಕಿಗೆ ಬಂದರು.
ಶರಣ ಮರುಳಶಂಕರದೇವರು 12 ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರು. ಕಲ್ಯಾಣದ ಅನುಭವ ಮಂಟಪದ 770 ಅಮರ ಗಣಂಗಳ ಪೈಕಿ ಒಬ್ಬ ವಚನಕಾರರು. ಕಲ್ಯಾಣದ ಬಸವಾದಿ ಶರಣರ ಕೀರ್ತಿ ವಾರ್ತೆ ಕೇಳಿ ದೂರದ ಅಪಘಾನಿಸ್ಥಾನ ದೇಶದಿಂದ ಕಲ್ಯಾಣಕ್ಕೆ ಆಗಮಿಸಿದ ಶಿವ ಶರಣರು. “ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ” ಎಂಬ ವಚನಾಂಕಿತದೊಂದಿಗೆ ಅವರು ಬರೆದು ಸುಮಾರು 34 ವಚನಗಳು ನಮಗೆ ಇಲ್ಲಿಯವರೆಗೆ ಲಭ್ಯವಾಗಿವೆ. ಷಟಸ್ಥಲದಲ್ಲಿನ ಪ್ರಸಾದಿ ಸ್ಥಲವನ್ನು ತಲುಪಿದ್ದ ಮರುಳಶಂಕರದೇವರು ತಮ್ಮ ವಚನಗಳಲ್ಲಿ ಪ್ರಸಾದ ತತ್ವದ ಪರಿಪಾಲನೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಜೊತೆಗೆ ಬಸವಾದಿ ಶರಣರ ಸ್ತುತಿ, ಲಿಂಗವಂತರ ನಿಜ ನಿಲುವು ಮಹಾಲಿಂಗದ ಸ್ವರೂಪ, ಶೀಲ ಚಾರಿತ್ರ್ಯಗಳ ಬೋಧೆ ಮುಂತಾದವುಗಳು ಮರುಳಶಂಕರದೇವರ ವಚನಗಳಲ್ಲಿನ ಪ್ರಮುಖ ಅಂಶಗಳು. ಇವರ ಬಹುತೇಕ ವಚನಗಳು ಧೀರ್ಘವಾಗಿವೆ. ಅವರ ವಚನಗಳಲ್ಲಿ ರೂಪಕ ಗುಣ ಇರುವುದು ಅತ್ಯಂತ ವಿಶೇಷವಾಗಿದೆ. ಶರಣ ಮರುಳಶಂಕರದೇವರು ಕಲ್ಯಾಣದಲ್ಲಿ ಒಬ್ಬ ಮಹಾ ಪ್ರಸಾದಿಯಾಗಿ ಮಿಂಚಿನಂತೆ ಬೆಳಗುತ್ತಾರೆ. ಪ್ರಸಾದಿ ಸ್ಥಲದಲ್ಲಿ ನಿಂತ ಶರಣ ಮರುಳಶಂಕರದೇವರ ಈ ವಚನ ಪ್ರಸಾದಿಸ್ಥಲವನ್ನು ಅತ್ಯಂತ ಸಮರ್ಥವಾಗಿ ನಿರೂಪಣೆ ಮಾಡುತ್ತದೆ.
ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ,
ಹೃದಯದ ಮನದ ಕೊನೆಯ ಮೊನೆಯ ಮೇಲೆ,
ಮಹಾಲಿಂಗಕ್ಕೆ ಸಮರ್ಪಿಸಬೇಕು.
ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ,
ಅವಧಾನದ ಶ್ರೋತ್ರದ ಕೊನೆಯ ಮೊನೆಯ ಮೇಲೆ,
ಪ್ರಸಾದಲಿಂಗಕ್ಕೆ ಅರ್ಪಿಸಬೇಕು.
ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣ ಸುರೂಪಿನ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಶಿವಲಿಂಗಕ್ಕೆ ಸಮರ್ಪಿಸಬೇಕು.
ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಆಚಾರಲಿಂಗಕ್ಕೆ ಅರ್ಪಿಸಬೇಕು.
ಜಿಹ್ವೆಯ ಕೊನೆಯಲ್ಲಿ ಬಂದ ಸುಸ್ವಾದುವಿನ ಪ್ರಸಾದದ ರುಚಿಯ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಗುರುಲಿಂಗಕ್ಕೆ ಸಮರ್ಪಿಸಬೇಕು.
ತ್ವಕ್ಕಿನ ಕೊನೆಯಲ್ಲಿ ಬಂದ ಸ್ಪರ್ಶನದ ಸುಖದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಜಂಗಮಲಿಂಗಕ್ಕೆ ಸಮರ್ಪಿಸಬೇಕು.
ಮನದಲ್ಲಿ ತಟ್ಟುವ ಮುಟ್ಟುವ ತಾಗುನಿರೋಧವೆಲ್ಲವನೂ
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಮಹಾಘನಲಿಂಗಕ್ಕೆ ಸಮರ್ಪಿಸಬೇಕು.
ಈ ಕ್ರಮವನರಿದು ಸರ್ವಾವಧಾನಿಯಾಗಿ,
ಗುರುಲಿಂಗಜಂಗಮಮುಖದಲ್ಲಿ ತನುಮನಧನವನರ್ಪಿಸಿ,
ಆ ಶುದ್ಧಸಿದ್ಧಪ್ರಸಿದ್ಧಪ್ರಸಾದದ ರೂಪುರುಚಿತೃಪ್ತಿಯ
ಆದಿಮಧ್ಯಾಂತವನರಿದು, ಸಾವಧಾನಭಕ್ತಿಯಿಂ
ಇಷ್ಟಪ್ರಾಣಭಾವಲಿಂಗಕ್ಕರ್ಪಿಸಿ, ಮಹಾಪ್ರಸಾದಿಯಾಗಿಪ್ಪಾತ,
ನಮ್ಮ ಚನ್ನಬಸವಣ್ಣ ಕಾಣಿರಯ್ಯಗಳಿರಾ.
ಈ ಪ್ರಕಾರದ ಅವಧಾನ ಮನದ ಕೊನೆಯ ಮೊನೆಯ ಮೇಲೆ,
ಸರ್ವಾರ್ಪಿತಕ್ರಮವನರಿದು ಪ್ರಸಾದಭೋಗಿಯಾಗಿಪ್ಪಾತನು,
ನಮ್ಮ ಸಂಗನಬಸವಣ್ಣನು ಕೇಳಿರಣ್ಣಗಳಿರಾ.
ಈ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ಮತ್ತೀ ಕ್ರಮವನರಿದು, ಅರ್ಪಿತಮುಖವನರಿದು ಅರ್ಪಿಸಿ,
ತೃಪ್ತಿಯನೈದಬಲ್ಲ ಶರಣರ ಮಹಾತ್ಮೆಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-428/ವಚನ ಸಂಖ್ಯೆ-1120)
“ಇಷ್ಟಲಿಂಗಕ್ಕೆ ಅಂಗದ ಅರ್ಪಿತ ಮಾಡಬೇಕು. ಪ್ರಾಣಲಿಂಗಕ್ಕೆ ಮನವ ಸಮರ್ಪಿಸಬೇಕು. ಭಾವಲಿಂಗಕ್ಕೆ ತೃಪ್ತಿಯನು ಅರ್ಪಿತ ಮಾಡಬೇಕು” ಎಂದು ಹೇಳುತ್ತಾ ಅವರ ವಚನಾಂಕಿತ “ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ” ಹೇಳುವ ಹಾಗೆ ಅವರು ಸರ್ವ ವಿಧದ ಪ್ರಸಾದವನ್ನು ಸಾಧಿಸಿ ಶಿವ ಪ್ರಸನ್ನತೆಯನ್ನು ಪಡೆದಿದ್ದರೆಂದು ತೋರುತ್ತದೆ.
ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು.
ಪ್ರಾಣಲಿಂಗಕ್ಕೆ ಮನವನರ್ಪಿತವ ಮಾಡಬೇಕು.
ಭಾವಲಿಂಗಕ್ಕೆ ತೃಪ್ತಿಯನರ್ಪಿತವ ಮಾಡಬೇಕು.
ಈ ವರ್ಮವನರಿತು ಅರ್ಪಿತವ ಮಾಡಬಲ್ಲಡೆ ಪ್ರಸಾದಿಯೆಂಬೆ.
ಅದೆಂತೆಂದಡೆ:
ಇಷ್ಟಲಿಂಗಾರ್ಪಿತಂ ತ್ವಂಗಂ ಪ್ರಾಣಲಿಂಗಾರ್ಪಿತಂ ಮನಃ
ಭಾವಲಿಂಗಾರ್ಪಿತಾ ತೃಪ್ತಿ ರಿತಿಭೇದಂ ವರಾನನೇ ||
ಎಂದುದಾಗಿ, ಲಿಂಗಕ್ಕೆಯೂ ತನಗೆಯೂ ಎಡೆದೆರಹಿಲ್ಲ.
ಇದು ಕಾರಣ, ಲಿಂಗ ಸಹಿತವಾಗಿಯೆ ಕೇಳುವ,
ಲಿಂಗಸಹಿತವಾಗಿಯೆ ಘ್ರಾಣಿಸುವ, ಲಿಂಗಸಹಿತವಾಗಿಯೆ ರುಚಿಸುವ,
ಲಿಂಗಸಹಿತವಾಗಿಯೇ ನೋಡುವ, ಲಿಂಗಸಹಿತವಾಗಿಯೆ ಸಂಗ ಮಾಡುವ,
ಲಿಂಗಸಹಿತವಾಗಿಯೆ ತೊಳಗುವ,
ಇಂತಪ್ಪ ಮಹಾಮಹಿಮ ಸದ್ಭಕ್ತನ
ಅಂಗವೆಲ್ಲವೂ ಲಿಂಗ, ಸಂಗಮವೆಲ್ಲವೂ ಲಿಂಗ,
ಅಂಗ ಸಂಗಮವೆಲ್ಲವೂ ಲಿಂಗಸಂಗಗಳಾದ ಕಾರಣ,
ಅಂಗಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳಾದ ಕಾರಣ,
ಅಂಗಭೋಗವೆಲ್ಲವೂ ಲಿಂಗಭೋಗವಾದ ಕಾರಣ,
ಇಂತಪ್ಪ ಮಹಾಮಹಿಮ ಸದ್ಭಕ್ತನ ಶ್ರೀಚರಣಕ್ಕೆ
ಎನ್ನ ಶಿರವನಿರಿಸಿ ಪೂಜಿಸುವೆ ಕಾಣಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-412/ವಚನ ಸಂಖ್ಯೆ-1091)
ಈ ವಚನದಲ್ಲಿ ಬಳಸಿರುವ ಭಾಷೆಯನ್ನು ಗಮನಿಸಿದರೆ ಶರಣ ಮರುಳಶಂಕರದೇವರು ಒಬ್ಬ ಶ್ರೇಷ್ಠ ವಚನಕಾರರರೆಂದು ತಿಳಿದು ಬರುತ್ತದೆ. ದೂರದ ಅಪಘಾನಿಸ್ತಾನದಿಂದ ಬಂದು ಕನ್ನಡವನ್ನು ಕಲಿತು ಇಂತಹ ಸುಂದರ ವಚನಗಳನ್ನು ರಚಿಸಿದ್ದು ಶರಣ ಮರುಳಶಂಕರದೇವರ ಹೆಗ್ಗಳಿಕೆ. ಶರಣ ಮರುಳಶಂಕರದೇವರ ತಂದೆ-ತಾಯಿಯವರ ಬಗ್ಗೆ ಹಾಗೂ ಅವರ ವೈಯಕ್ತಿಕ ವಿಚಾರಗಳನ್ನು ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲಿಯವರೆಗೆ ಸಿಕ್ಕಿಲ್ಲ. ಅವರ ಈ ವಚನವನ್ನು ಗಮನಿಸಿದರೆ ತಂದೆ ತಾಯಿಗಳು ಅಂದರೆ ಮರುಳಶಂಕರದೇವರಿಗೆ ಶರಣಪತಿ – ಲಿಂಗಸತಿ ಎನ್ನುವು ಭಾವನೆ ಎನ್ನುವುದು:
ಮಹಾ ಶ್ರೀ ಗುರುವೆ ತಂದೆ, ಮಹಾಜಂಗಮವೇ ತಾಯಿ,
ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯ.
ಸರ್ವಾಂಗ ಸಾಹಿತ್ಯ ನಾನು ಹುಟ್ಟಿದ ಬಳಿಕ,
ತಂದೆ ತಾಯಿಗಳಿಬ್ಬರೂ ಲಿಂಗವೆಂಬ ಹೆಣ್ಣು ತಂದು,
ಎನ್ನ ಕೊರಳಲ್ಲಿ ಕಟ್ಟೆ ಮದುವೆಯ ಮಾಡಿದರಯ್ಯ
ಆ ಹೆಣ್ಣಿನ ಕೈ ಹಿಡಿದು ನಾನು ಬದುಕಿದೆನು.
ಆ ಹೆಣ್ಣಿನ ಸಂಗ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದೆನಯ್ಯ.
ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು.
ಲಿಂಗವೆಂಬ ಹೆಂಡತಿ ಮುಂಡೆಯಾದಳು.
ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗೆ ಅಡಗಿ ಹೋದರು.
ಇನ್ನು ಮುಂದಿನ ಪರಿ ಎಂತುಟವಲ್ಲವಾಗಿ ನಾನು ಬದುಕಿದೆ ಕಾಣಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತಮಲ್ಲಿಕಾರ್ಜುನವಯ್ಯಾ.
ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-422/ವಚನ ಸಂಖ್ಯೆ-1110)
ಈ ವಚನದಲ್ಲಿ ಕಂಡು ಬಂದಿರುವ ಶರಣರ ತತ್ವ ಸಿದ್ಧಾಂತವಾದ ಶರಣಸತಿ-ಲಿಂಗಪತಿ ಭಾವಕ್ಕೆ ವಿಲೋಮವಾಗಿ ಮರುಳಶಂಕರದೇವರ ಶರಣಪತಿ-ಲಿಂಗಸತಿ ಭಾವ ವಿಶೇಷವಾಗಿವೆ. ಈ ವಿಶೇಷತೆ ಜೀವಪತಿ-ದೇವಸತಿ ಎನ್ನುವ ಭಾವ ಸೂಫಿ ಸಂಪ್ರದಾಯದಲ್ಲಿ ಕಾಣುವ ತತ್ವ. ಹಾಗಾಗಿ ಅಫಘಾನಿಸ್ತಾನದಿಂದ ಬಂದಿರಬಹುದು ಎನ್ನುವದಕ್ಕೆ ಪುಷ್ಟಿಯನ್ನು ನೀಡುತ್ತದೆ.
ಮರುಳಶಂಕರದೇವರ ಕಾಯಕದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತವೆ. ಎಲ್ಲ ಕಾಯಕಗಳೂ ಶ್ರೇಷ್ಠ ಎನ್ನುವದು ಶರಣರ ಸಿದ್ಧಾಂತ. ಹಾಗಾಗಿ ಅವರು ಆರಿಸಿಕೊಂಡದ್ದು ಮಹಾಮನೆಯ ಪ್ರಸಾದಕುಂಡದಲ್ಲಿ ಶರಣರು ಪ್ರಸಾದವನ್ನು ಸ್ವೀಕರಿಸಿದ ನಂತರ ಆ ಪಾತ್ರೆಗಳನ್ನು ತೊಳೆಯುವ ಕಾಯಕ. ಇದರ ಜೊತೆಗೆ ನಾವು ಗಮನಿಸಬೇಕಾದ ಅಂಶ ಎಂದರೆ ಶೇಷ ಪ್ರಸಾದವನ್ನು ಸೇವಿಸಿ ಜೀವಿಸಿದ ಮಹಾತ್ಮರು. ಇದನ್ನು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ಚಿತ್ರಣ ಮಾಡಿದ್ದಾನೆ.
ಶರಣರ ದೃಷ್ಟಿಯಲ್ಲಿ ಮರುಳ ಶಂಕರ ದೇವರು:
ಕಲ್ಯಾಣದ ಮಹಾಮನೆಯಲ್ಲಿ ಪ್ರಥಮ ಬಾರಿಗೆ ಮರುಳಶಂಕರದೇವರನ್ನು ಅಲ್ಲಮ ಪ್ರಭುದೇವರು ಕಂಡಾಗ:
ಬೀದಿಯಲ್ಲಿ ಬಿದ್ದ ಮಾಣಿಕ್ಯವು, ಹೂಳಿದ್ದ ನಿಧಾನವು,
ಆರಿಗೂ ಕಾಣಬಾರದು ನೋಡಾ!
ಮರಣ ಉಳ್ಳವರಿಗೆ ಮರುಜವಣಿ ಸಿಕ್ಕುವುದೆ?
ಪಾಪಿಯ ಕಣ್ಣಿಂಗೆ ಪರುಷ
ಕಲ್ಲಾಗಿಪ್ಪಂತೆ ಅಡಗಿ ಇಪ್ಪರಯ್ಯಾ ಶಿವಶರಣರು.
ನಮ್ಮ ಗುಹೇಶ್ವರನ ಶರಣ ಮರುಳಶಂಕರದೇವರ
ನಿಲವ ನೋಡಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-522/ವಚನ ಸಂಖ್ಯೆ-1379)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಮರುಜವಣಿ: ಸಂಜೀವಿನಿ.
ಬಸವಣ್ಣಾ ನೀನು ಕಟ್ಟಿದ ಮಹಾಮನೆಯನ್ನು ಆಶ್ರಯಿಸಬೇಕೆಂದು ಬಂದ ಮಹಾತ್ಮರು ಸಾವಿರಾರು. ಅವರಲ್ಲಿ ಮರುಳಶಂಕರದೇವರಂಥ ಮಾಹಾನುಭಾವರು ಇದ್ದದ್ದು ಭಾಗ್ಯವೇ ಸರಿ. ನೀನು ಕೃತಾರ್ಥನು ಎಂದು ಅಲ್ಲಮ ಪ್ರಭುಗಳು ಉದ್ಗಾರ ತೆಗೆಯುತ್ತಾರೆ. ಹನ್ನೆರಡು ವರ್ಷ ಈ ಮಹಾತ್ಮರು ನಮ್ಮ ಮನೆಯ ಅಂಗಳದಲ್ಲಿಯೇ ಇದ್ದರೂ ನನಗೆ ಅರಿವಾಗಲಿಲ್ಲವಲ್ಲ ಅಂತ ಬಸವಣ್ಣನವರು ಒಂದು ವಚನದ ಮೂಲಕ ತಮ್ಮ ವ್ಯಥೆಯನ್ನು ವ್ಯಕ್ತಪಡಿಸುತ್ತಾರೆ.
ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ,
ಮನದೊಳಗೆ ಅಹಂಕಾರವಿಲ್ಲ.
ದೇಹವೆಂದರಿಯೆ, ನಿರ್ದೇಹವೆಂದರಿಯೆ,
ಜಂತ್ರದ ಸೂತ್ರದಂತೆ ಇಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ!
ಲಿಂಗಜಂಗಮದ ಒಕ್ಕುಮಿಕ್ಕ ಪ್ರಸಾದವ ಕೊಂಡು,
ಮಿಕ್ಕು ಮೀರಿ ನಿಂದ ಮಹಾಪ್ರಸಾದಿಯ ನೋಡಾ!
ತನ್ನನರಿದಹರೆಂದು ಜಗದ ಕಣ್ಣಿಂಗೆ ಮಾಯದ ಮಂಜು ಕವಿಸಿ,
ನಿಜಪದದಲ್ಲಿ ತದುಗತನಾದನು.
ಕೂಡಲಸಂಗಮದೇವರಲ್ಲಿ ಮರುಳುಶಂಕರದೇವರ
ನಿಲವ ನೋಡಾ, ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-329/ವಚನ ಸಂಖ್ಯೆ-1123)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಜಂತ್ರ: ಯಂತ್ರ.
ತದುಗತ: ಅದರೊಳಗೆ ಸೇರಿದ್ದು, ಕೂಡಿಕೊಂಡ, ತಲ್ಲೀನ.
ಎಂದು ಬಸವಣ್ಣನವರು ಮಹಾ ಪ್ರಸಾದಿ ಮರುಳುಶಂಕರದೇವರ ಮಹೊನ್ನತಿಯನ್ನ ಬಣ್ಣಿಸುತ್ತಾರೆ.
ಆವಿರಳಜ್ಞಾನಿ ಚೆನ್ನಬಸವಣ್ಣನವರು
ತುದಿ ಮೊದಲಿಲ್ಲದ ಘನವ ನೋಡಾ,
ಒಳಹೊರಗಿಲ್ಲದಿಪ್ಪ ಅನುವ ನೋಡಾ,
ಗುರುಲಿಂಗಜಂಗಮ ತಾನೆಯಾಗಿ,
ಮತ್ತೆ ತಾನೆಂಬುದೇನೂ
ಇಲ್ಲದ ಪರಿಯ ನೋಡಾ!
ತನ್ನ ತಾನಿರ್ದೆಸೆಯ ಮಾಡಿಕೊಂಡು
ನಿಜಪದವನೆಯ್ದಿಪ್ಪ ಪರಿಯ ನೋಡಾ.
ಕೂಡಲಚೆನ್ನಸಂಗಮದೇವರಲ್ಲಿ
ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-615/ವಚನ ಸಂಖ್ಯೆ-1301)
ಅಂತ ಕೊಂಡಾಡುತ್ತಾರೆ.
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ,
ಅಂಗವಿದ್ದು ಅಂಗವಿಲ್ಲದ ಸಂಗ ಘನಪದದಲ್ಲಿ ವೇದ್ಯವಾದ
ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ
ಕಂಡು ಬದುಕಿದೆನು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-432/ವಚನ ಸಂಖ್ಯೆ-1382)
ಅಂತ ಸಿದ್ಧರಾಮರು ಮರುಳಶಂಕರದೇವರ ಕೀರ್ತಿಯನ್ನು ಹಾಡುತ್ತಾರೆ.
ಮರುಳಶಂಕರದೇವರ ಕುರಿತು ಸಮಗ್ರವಾದ ಮಾಹಿತಿ ನಮಗೆ ಸಿಗುವುದಿಲ್ಲ. ಅವರ ಬದುಕನ್ನು ಅವರ ವಚನಗಳಿಂದಲೇ ಕಟ್ಟಿಕೊಳ್ಳುವ ಅನಿವಾರ್ಯತೆ ಇದೆ. ಶಾಂತಲಿಂಗ ದೇಶಿಕರ ಭೈರವೇಶ್ವರ ಕಾವ್ಯದ “ಕಥಾಮಣಿ ಸೂತ್ರ ರತ್ನಾಕರ” ದಲ್ಲಿ, ಹರಿಹರನ ಪ್ರಭುಲಿಂಗ ಲೀಲೆಯಲ್ಲಿ, ಬಸವ ಪುರಾಣಗಳಲ್ಲಿ ಮತ್ತು ನಮಗೆ ಸಿಕ್ಕಿರುವ 4 ಶೂನ್ಯ ಸಂಪಾದನೆಗಳಲ್ಲಿ ಶರಣ ಮರುಳಶಂಕರದೇವರ ಸಾಧನೆ ಮತ್ತು ಅನುಭಾವಿಕ ನೆಲೆಗಳ ಕುರಿತಂತೆ ಬಹಳ ಸಂಕ್ಷಿಪ್ತವಾದ ಉಲ್ಲೇಖ ಇದೆ ಅಥವಾ ಕೇವಲ ಹೆಸರನ್ನು ಮಾತ್ರ ಉಲ್ಲೇಖ ಮಾಡಲಾಗಿದೆ.
ಶರಣ ಮರುಳಶಂಕರದೇವರ ವ್ಯಕ್ತಿತ್ವ:
ನಮಗೆ ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿಯನ್ನು ಗಮನಿಸಿದರೆ ಮರುಳಶಂಕರದೇವರ ಬದುಕಿನ ಚಿತ್ರಣ ಅಸಾಧಾರಣವಾಗಿದೆ. ಶರಣ ಮರುಳಶಂಕರದೇವರು ಮಹಾಮೌನಿಗಳು. ಅತ್ಯಂತ ಮೌನವಾಗಿಯೇ ಅವರು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. ಮರುಳಶಂಕರದೇವರ ಮೌನವು “ಮಾತು ಬೆಳ್ಳಿ ಮೌನ ಬಂಗಾರ” ಎನ್ನುವ ಹಾಗೆ ಎಲ್ಲವನ್ನೂ ಬಲ್ಲಾತ ಶರಣರು ಎನ್ನುವದನ್ನು ಸಾರಿ ಸಾರಿ ಹೇಳುವಂತಿದೆ.
ಮರುಳಶಂಕರದೇವರ ವ್ಯಕ್ತಿತ್ವದ ಇನ್ನೊಂದು ವೈಶಿಷ್ಟ್ಯತೆ ಎಂದರೆ ಅವರ ಜೀವನ ಶುದ್ಧ, ಸಿದ್ಧ, ಪ್ರಸಿದ್ಧ ಪ್ರಸನ್ನತೆಯಿಂದ ಕೂಡಿರುವುದು. ಅಲ್ಲಮ ಪ್ರಭುಗಳು ಮೊದಲ ನೋಟದಲ್ಲಿಯೇ ಶರಣ ಮರುಳಶಂಕರದೇವರ ಮಹಿಮೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕಾಯಕದಲ್ಲಿ ನಿರತನಾದರೆ ಗುರು ದರ್ಶನವಾದರೂ ಮರೆಯಬೇಕು ಎಂಬ ವಚನಕ್ಕಿಂತಲೂ ಒಂದು ಹೆಜ್ಜೆ ಮುಂದಿದ್ದರು ಮರುಳಶಂಕರದೇವರು ಎನ್ನುವುದನ್ನು ಗಮನಿಸುತ್ತಾರೆ. ಅವರ ಒಂದು ವಚನ ಶರಣ ಮರುಳಶಂಕರದೇವರ ಮಹಿಮೆಯನ್ನು ನಿರೂಪಣೆ ಮಾಡುತ್ತದೆ.
ಅಂಗವಿಡಿದಂಗಿಯನೇನೆಂಬೆ?
ಆರನೊಳಕೊಂಡ ಅನುಪಮನು ನೋಡಾ!
ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ!
ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-224/ವಚನ ಸಂಖ್ಯೆ-716)
“ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮಪ್ರಸಾದಿ ಮರುಳಶಂಕರದೇವರ ನಿಲವ” ಎನ್ನುವ ಅಲ್ಲ ಪ್ರಭುಗಳು ಶರಣ ಮರುಳಶಂಕರದೇವರ ವ್ಯಕ್ತಿತ್ವವನ್ನು ಬಹಳ ಮೆಚ್ಚಿಕೊಂಡಿದ್ದರೆಂದು ತಿಳಿದು ಬರುತ್ತದೆ.
ಶರಣ ಮರುಳಶಂಕರದೇವರಿಗೆ ಗುರು-ಲಿಂಗ–ಜಂಗಮ-ಪ್ರಸಾದ ಎಲ್ಲವೂ ಕಾಯಕವಾಗಿತ್ತು. ಜೀವನದ ಗುರಿ–ಅರಿವು-ಆಚಾರ ಎಲ್ಲವೂ ಒಂದಾದ ಘನತೆ ಮರುಳಶಂಕರದೇವರದು. ಈ ತತ್ವ ಅವರ ಕಾಯಕದಲ್ಲಿ ಕಂಡು ಬರುತ್ತದೆ. ಅವರ ಕಾಯಕ ಸೂರ್ಯೋದಯ ಹಾಗೂ ಹೂ ಅರಳಿದಷ್ಟು ಮತ್ತು ಉಸಿರಾಟದಷ್ಟೆ ಸಹಜವಾಗಿತ್ತು. ಕಾಯಕವೇ ಕೈಲಾಸ ಎಂದು ಬಸವಣ್ಣನವರ ನಿಲುವಾಗಿದ್ದರೆ ಕೈಲಾಸಕ್ಕಿಂತ ಕಾಯಕ ಶೇಷ್ಠ ಎಂದು ಬಾಳಿದ ಮರುಳಶಂಕರದೇವರು ತಾವೇ ಮಹಾಕಾಯವಾಗಿದ್ದರು. ಮರುಳಶಂಕರದೇವರ ಗುಪ್ತ ಭಕ್ತಿ ಆಗಾಧವಾದದ್ದು ಹಾಗೂ ಅಭೇದ್ಯವಾದದ್ದು. ಬಸವಣ್ಣನವರಿಗೂ ಕೂಡ ಮರುಳಶಂಕರದೇವರನ್ನು ಗುರುತಿಸಲಾಗಲಿಲ್ಲ ಎನ್ನುವುದನ್ನು ಗಮನಿಸಿದರೆ ಅವರ ಗುಪ್ತಭಕ್ತಿಯ ಅನಾವರಣ ಆಗುತ್ತದೆ.
ಪ್ರಸಾದಿಯಾದವನಿಗೆ ಅಂತರಂಗದ ಆಚರಣೆಯಷ್ಟೆ ಬಹಿರಂಗದ ಆಚರಣೆಯೂ ಮುಖ್ಯ. ಅಂತರಂಗ ಮತ್ತು ಬಹಿರಂಗದ ಆಚರಣೆಯಲ್ಲಿ ಸಾಮರಸ್ಯ ಉಂಟಾದಾಗ ಮಾತ್ರ ಆತ ನಿಜವಾದ ಪ್ರಸಾದಿ ಏನಿಸಿಕೊಳ್ಳುತ್ತಾನೆ. ಈ ಸಾಮರಸ್ಯದಿಂದಲೆ ಮರುಳಶಂಕರದೇವರು ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯಾದರು. ಕಲ್ಯಾಣದ ಮಹಾಮನೆಯಲ್ಲಿ ಮರುಳಶಂಕರದೇವರು ಉರಿಕೊಂಡ ಕರ್ಪೂರದ ಹಾಗೆ ಬದುಕಿದ್ದರು. ಕರ್ಪೂರಕ್ಕೆ ಹತ್ತಿದ ಬೆಂಕಿಯು ತನ್ನನ್ನು ತಾನು ಸುಟ್ಟುಕೊಂಡು ಬೆಳಕನ್ನು ನೀಡಿ ಅಸ್ತಿತ್ವವಿಲ್ಲದಂತೆ ಉರಿದು ಹೋಗುತ್ತದೆ. ಅವರ ಈ ವಚನ ಈ ತತ್ವವನ್ನು ನಿರೂಪಣೆ ಮಾಡುತ್ತದೆ.
ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ,
ಅರಿವೆಂಬ ಗೊಬ್ಬರನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ,
ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೆ.
ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು.
ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು.
ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು.
ಖಂಡಿತವೆಂಬ ಮುಗುಳಾಯಿತ್ತು, ಅಖಂಡಿತವೆಂಬ ಕಾಯಿ ಬಲಿಯಿತ್ತು.
ಪರಮಜ್ಞಾನವೆಂಬ ಹಣ್ಣಾಯಿತ್ತು.
ಆ ಹಣ್ಣು ಬಲಿದು ತೊಟ್ಟುಬಿಟ್ಟು, ಬಟ್ಟಬಯಲಲ್ಲಿ ಬಿದ್ದಿತ್ತು.
ಆ ಹಣ್ಣು ಕಂಡು ನಾನು ಇದೆಲ್ಲಿಯದೆಂದು ವಿಚಾರವ ಮಾಡಲ್ಕೆ,
ಬಿತ್ತಿದವರಾರೆಂದು ಹೇಳುವರಿಲ್ಲ.
ಬಿತ್ತಿದವನ ಸೊಮ್ಮ ನಾವು ಕೇಳಬಾರದೆಂದು ಆ ಹಣ್ಣು ಕೊಂಡು,
ನಾನು ಬಿತ್ತಿದಾತನನರಸಿಕೊಂಡು ಹೋಗಲ್ಕೆ,
ನಾನೆತ್ತ ಹೋದೆನೆಂದರಿಯೆನಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಬಿತ್ತಿದಾತನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1113)
ಇಂದು ಮಹಾಮಹಿಮ, ಮಹದ ಬೆಳಗು ತಾನಾಗಿ ನಿಂತ ಶರಣ ಮರುಳಶಂಕರದೇವರ ಜಯಂತಿ. ಶರಣರ ಮಹಿಮೆಯನ್ನು ವ್ಯಕ್ತಿತ್ವವನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವುದು ಅಸಾಧ್ಯ. ಇದು ಅವರ ಬಗ್ಗೆ ತಿಳಿಯುವ ಮತ್ತು ತಿಳಿಸುವ ಒಂದು ಪುಟ್ಟ ಪ್ರಯತ್ನ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in