
(ಪೂಜ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ)
ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ
ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-606)
“ಬೆಳಕು” ತುಳುಕಾಡುವುದು ಎಂದರೆ ಇದೆ ಇರಬಹುದು ಎಂದು ನನಗೆ ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತುಗಳನ್ನು ಕೇಳಿದಾಗಲೆಲ್ಲ ಅನಿಸುವುದು. “ತನ್ಮಯತೆ” ಎಂಬುದಕ್ಕೆ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಲಿಲ್ಲ. ಶ್ರೀಗಳ ಮೃದುವಾದ ಪದಗಳಲ್ಲಿ ಕಂಡೆ ಅವರ ನುಡಿ ಕೇಳಿದಾಗಲೆಲ್ಲಾ ಕಳೆದು ಹೋಗುವುದು ಭಾವ ಪರವಶತೆಗೆ ಒಳಗಾಗುವ ಸ್ಥಿತಿಗೆ ತಲುಪಿದಾಗಲೆಲ್ಲಾ “ತನ್ನಯತೆ” ಎಂಬುದು ಇದೇ ಎಂಬುದನ್ನು ಅನುಭವಿಸಿದೆ. ಇದು ಕೇವಲ ನನ್ನ ಒಬ್ಬಳ ಭಾವಸ್ಥಿತಿಯಲ್ಲ, ಪೂಜ್ಯರ ವ್ಯಕ್ತಿತ್ವದ ನಿಜ ದರ್ಶನವನ್ನು ಕಂಡುಂಡವರೆದೆಲ್ಲಾ ಇದೇ ಸ್ಥಿತಿಯೇ ಎಂದರೆ ತಪ್ಪಾಗಲಿಕ್ಕೆಲ್ಲ. ಒಂದು ಮಾಗಿದ ಅಪ್ಪಗಳನ್ನು ಕಾಣಬೇಕು. ಇಂದಿನ ಕಲುಷಿತ ಪ್ರಪಂಚದಲ್ಲಿ ಎಲ್ಲೂ ಕಪಟವೇ ಇಲ್ಲದ ನಿಷ್ಕಲ್ಮಶವಾದ ಶುದ್ಧ ಹೃದಯ ನಮಗೆ ಕಾಣುತ್ತದೆ ಎಂದರೆ ಅದು ಸಿದ್ಧೇಶ್ವರ ಅಪ್ಪಗಳವರದು. ಇಲ್ಲಿ ಒಂದು ಮಗುವಿಗೆ ವಯಸ್ಸಾಗಿದೆ ಎಂದರೆ ಎಲ್ಲರಿಗೂ ನಗು ಬರಬಹುದು. ನಿಜ ಒಂದು ಮಗುವಿನ ಮನೋಸ್ಥಿತಿಯನ್ನು ಮುಪ್ಪುನವರೆಗೂ ಒಪ್ಪವಾಗಿ ಕಾಪಾಡಿಕೊಳ್ಳುವುದಿದೆಯಲ್ಲಾ ಇದಕ್ಕಿಂತ ತಪಸ್ಸು ಮತ್ತೊಂದು ಬೇಕಿಲ್ಲ ಎನಿಸುತ್ತದೆ. ಆ ಮಗುತನದಲ್ಲಿ ಅದೆಂಥಾ ದಿವ್ಯತೆ, ಪ್ರಶಾಂತತೆ, ಪ್ರಬುದ್ಧತೆ, ವಿನಯವಂತಿಕೆ, ಜ್ಞಾನವಂತಿಕೆ?! ಇಷ್ಟೆಲ್ಲವೂ ಆ ಪುಟ್ಟ ದೇಹದಲ್ಲಿ ಅಡಗಿಕೊಂಡಿರುವುದೇ ಚೋದ್ಯವಾದದ್ದು.
ಸಂತನೆಂದರೆ ಯಾರು?
ದಿವ್ಯತೆಯ ಅರಿತವನು ಸರಳತೆಯ ಸೂತ್ರದಲಿ
ಸುಖವ ಕಂಡವನು ಮಮತೆ ಬಂಧನವ ಕಳಚಿ
ಬಲು ದೂರ ನಿಂತವನು ಎಲ್ಲರಲಿ ಅವನೊಬ್ಬ ಮುದ್ದುರಾಮ
ಸಿದ್ಧನೆಂದರೆ ಯಾರು?
ಮನವ ನೋಯಿಸದಾತ ನೂರು ನೋವನು ಸಹಿಸಿ
ನಗುತಲಿರುವಾತ ಒಂದಾದ ನಡೆ – ನುಡಿಗೆ
ದಿಕ್ಕು ದೆಸೆ ತರ್ವಾತ ಪರಮ ಗುರು ಆ ಸಾಧು ಮುದ್ದುರಾಮ
ಬೇಕು – ಬೇಡಗಳಿಲ್ಲ, ಕೋಪ – ತಾಪಗಳಿಲ್ಲ
ನೂರು ನೋವನು ಸಹಿಸಿ ಹುಸಿ ಮಾತು ಬಿರುನುಡಿಗಳೊಂದಿಲ್ಲ
ತನ್ನವಿರುವುದನೆಲ್ಲ ಮರೆತು ನಿಂತವನಾತ
ಸಂತನೆಂದರೆ ಯೋಗಿ ಮುದ್ದುರಾಮ
ನಾ ಕಿರಿದು ನೀ ಹಿರಿದು
ಎಂದವರೆ ನಿಜಯೋಗಿ ಜಾತಿ ಮತ ಪಂಥದಿಂದ
ದೂರ ಅವನಾತ್ಮ ಸೇವಕನ ಭಾವದಲಿ
ನಿಂತರದು ದಿಗ್ವಿಜಯ ಶರಣ ಶಿವರೆಂಕರನು ಮುದ್ದುರಾಮ
ಅನುಭವದ ನೆಲೆಯಿಂದ
ನಿಜವರಿತ ಸಿದ್ಧನಿಗೆ ಉಪ್ಪರಿಗೆಯ ಹಂಗೇನು?
ಬರಿ ಗುಡಿಸಲೇನು ಕಲ್ಲು – ಮಾಣಿಕವೆಲ್ಲ ಒಂದೆ ಬಗೆ
ನೋಟದಲಿ ಒಂದೆ ಬಗೆ ಅವನಾತ್ಮ ನಿರ್ಮಲವೊ ಮುದ್ದುರಾಮ
– ಶ್ರೀ. ಕೆ. ಸಿ. ಶಿವಪ್ಪನವರ ರಚನೆ.
ಶರಣ ಭಾವದ ಕವಿ ಕೆ. ಸಿ. ಶಿವಪ್ಪನವರ ಈ ಚೌಪದಿಯ ಪ್ರತಿ ಸಾಲುಗಳಲ್ಲಿ ಸಿದ್ಧೇಶ್ವರ ಶ್ರೀಗಳು ಜೀವಿಸಿದ್ದಾರೆ. ಪ್ರಶ್ನೆಯ ಮೂಲಕ ಪ್ರಾರಂಭವಾಗುವ ಚೌಪದಿಯು ಉತ್ತರ ರೂಪದಲ್ಲಿ ಒಬ್ಬ ಸಂತನನ್ನು, ಒಬ್ಬ ಸಿದ್ಧನನ್ನು, ಒಬ್ಬ ಯೋಗಿಯನ್ನು, ಒಬ್ಬ ಮಹಾ ಗುರುವನ್ನು ಹುಡುಕಿ ಕೊಡುತ್ತದೆ. ಸಿದ್ಧೇಶ್ವರ ಶ್ರೀಗಳ ಕುರಿತಾಗಿಯೇ ನಾನು ಈ ಚೌಪದಿಯನ್ನು ಬರೆದದ್ದು ಎಂದು ಕವಿ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.
ಸಂತನೆಂದರೆ ದಿವ್ಯತೆಯನ್ನು ಅರಿತವನು. ಸರಳತೆಯ ಜೀವನದಲ್ಲಿ ಸುಖವನ್ನು ಕಂಡವನು. ಎಲ್ಲಿ ಬಂಧನ ಕಳಚಿಕೊಂಡವನು. ಎಲ್ಲರೊಳಗೊಂದಾಗಿ ಬೆರತಿರುವನು. ಯಾರ ಮನವನ್ನು ನೋಯಿಸದೇ, ತನ್ನ ನೋವುಗಳನ್ನು ನೀಗಿ ನಗುನಗುತಿರುವನು. ನಡೆ – ನುಡಿಗಳಿಗೆ ಏಕತೆಯನ್ನು ದಿಕ್ಕು – ದಿಸೆಯನ್ನು ತೋರಿಸಿದವನು. ಅವನೇ ಪರಮಗುರು ಎನಿಸಿಕೊಳ್ಳುತ್ತಾನೆ. ಬಹಳ ಮುಖ್ಯವಾಗಿ ಸಿದ್ಧನೆಂದರೆ ಎಲ್ಲದಕ್ಕೂ ಸಿದ್ಧನಾದವನು. ಬೇಕು – ಬೇಡಗಳಿಂದ ದೂರವಾದನು. ಕೋಪ – ತಾಪಗಳಿಂದ ಮುಕ್ತನಾದವನು. ಹುಸಿ – ಕೋಪ – ಬಿರುನುಡಿ (ಬಿರುಸುಮಾತು) ಗಳಿಂದ ಬಿಡುಗಡೆಗೊಂಡವನು. ಅದಕ್ಕಾಗಿಯೇ ಸಂತನೆಂದರೇ ಒಬ್ಬ ಯೋಗಿ “ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ” ಎಂಬ ಬಸವ ವಾಣಿಯನ್ನು ಅನುಸರಿಸುವನೆ ನಿಜಯೋಗಿ. ಅಂಥವನ ಆತ್ಮ ಜಾತಿ ಮತಗಳಾಚೆ ಅದನ್ನು ದಾಟಿ ನಿಲ್ಲುವಂತಹ ವಿಸ್ತರಿಸಿದ ಆತ್ಮ ಅದೇ “ಆತ್ಮ ವಿಕಾಸವಾದ”. ಅದನ್ನೇ ದಿಕ್ಸೂಚಿಯಾಗಿಸಿಕೊಂಡು ಶರಣ್ಯ ಭಾವದಲ್ಲಿ ನಿಲ್ಲುವ ಶಿವ ಕಿಂಕರನೇ ಆ ಸಂತನು. ತನ್ನ ಅನುಭವದ ನೆಲೆಯಿಂದ ನಿಜವರಿತ ಇಂತಹ ಸಿದ್ಧನಿಗೆ ಗುಡಿಸಲಾದರೇನು? ಅರಮನೆಯಾದರೇನು? ಎಲ್ಲವೂ ಒಂದೇ, ಕಲ್ಲು – ಮಾಣಿಕ್ಯಗಳಲ್ಲೂ ವ್ಯತ್ಯಾಸ ಕಾಣದ ನಿರ್ಮಲಾತ್ಮನೇ ಸಂತ. ಅವರೇ ಸಿದ್ಧ, ಅವರೇ ಯೋಗಿ, ಅವರೇ ಪರಮ ಗುರು. ಅವರು ನಮ್ಮ ಮಧ್ಯ ಬದುಕಿ ಸದ್ದಿಲ್ಲದೇ ಎದ್ದು ಹೋದ ನಮ್ಮ ಪೂಜ್ಯ ಸಿದ್ಧೇಶ್ವರ ಅಪ್ಪಗಳವರು.
ನನ್ನ ದೃಷ್ಟಿಯಲ್ಲಿ ಶ್ರೀಗಳು ಬಯಲ ಯೋಗಿ. “ಬಯಲುʼ ಎಂದರೆ “ಪರಿಪೂರ್ಣ”, ಬಯಲನ್ನು ಅಪ್ಪಿಕೊಂಡು ಪ್ರಕೃತಿಯನ್ನು ಪ್ರೀತಿಸುತ್ತಾ ಸಂಚರಿಸಿದ ಬಯಲ ಯೋಗಿಗಳು ಸಿದ್ಧೇಶ್ವರ ಶ್ರೀಗಳು ಪ್ರಕೃತಿಯು ಪರಮಾತ್ಮನ ಸ್ವರೂಪ. ಆದಿಕವಿ ಪಂಪನಿಂದ ಆಧುನಿಕ ಕವಿ ಕುವೆಂಪುವರೆಗೂ, ಅದರಾಚೆಗೂ ಪ್ರಕೃತಿಯ ವಿಸ್ಮಯತೆಗೆ ಬೆರಗಾದ ಮನಸ್ಸುಗಳು ಇಲ್ಲದೇ ಇಲ್ಲ. ಪಾಶ್ಚಿಮಾತ್ಯರೂ ಇದಕ್ಕೆ ಹೊರತಾಗಿಲ್ಲ. “ಪ್ರಕೃತಿಯ ಆರಾಧನೆಯೇ ಪರಮಾತ್ಮನ ಆರಾಧನೆ” ಎನ್ನುವ ಕುವೆಂಪು, “Nature is Teacher” ಎನ್ನುವ William Wordsworth ಇಬ್ಬರಲ್ಲೂ ಪ್ರಕೃತಿಯ ಬಗೆಗಿನ ಒಲವು – ಪ್ರೇಮ – ಗೌರವ – ಭಕ್ತಿ ಇರುವುದು ಗಮನಾರ್ಹ. ಇದಕ್ಕೂ ಮೀರಿ ಶ್ರೀಗಳು ಪ್ರಕೃತಿಯಿಂದ ದರ್ಶಿಸಿದ್ದು ನಿಗರ್ವಿತನವನ್ನು ಪ್ರಕೃತಿಯು ಅತ್ಯಂತ ಶಕ್ತಿಶಾಲಿ, ಹಗಲು – ಇರುಳು, ಗಾಳಿಯ ಸುಳಿದಾಟ, ನದಿಯ ಚಲನೇ ನೀರು ಎಲ್ಲವೂ ಮಾನವರಿಗೆ ಬೆಲೆ ನೀಡದೇನೆ ಸಿಗುತ್ತವೆ. ಆ ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು ಇವುಗಳಿಗೆ, ಮರ – ಗಿಡ – ಹೂ ಬಳ್ಳಿ ಇವುಗಳಿಗೆ ನಾವು ನೀಡುತ್ತಿದ್ದೇವೆ ಎಂಬ ಭಾವ ಇಲ್ಲ ಹಾಗೂ ನೀಡುವುದು ನಮ್ಮ ಧರ್ಮ ಎಂಬ ಪ್ರಕೃತಿಯ ಈ ನಿಗರ್ವಿತನವನ್ನು ಶ್ರೀಗಳು ತಮ್ಮದಾಗಿಸಿಕೊಂಡರು. ಶರಣ ಪಥದಲ್ಲಿ ಸಂಚರಿಸಿದ ಶ್ರೀಗಳು ಶರಣೆ ಅಕ್ಕಮಹಾದೇಯವರ ಈ ಪ್ರಕೃತಿ ತತ್ವವನ್ನು ತಮ್ಮದಾಗಿಸಿಕೊಂಡವರು. ಪ್ರಕೃತಿಯಲ್ಲಿ ಚನ್ನಮಲ್ಲಿಕಾರ್ಜುನನ್ನು ಅರಸುವ ಅಕ್ಕಮಹಾದೇವಿಯವರು “ಮಾನವರು ಬೇಡುವ ಭವಿಗಳಾದರೆ, ಪ್ರಕೃತಿ ಎಲ್ಲರಿಗೂ ನೀಡಿ ನೀಡಿ ಭಕ್ತನಾಯಿತು” ಎನ್ನುತ್ತಾರೆ.
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾದಡೆ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-120)
ಎಂಬ ವೈರಾಗ್ಯನಿಧಿ ಅಕ್ಕಮಹಾದೇವಿಯವರ ನುಡಿಗಳೆಂತೆ ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಪ್ರಕೃತಿಯನ್ನು ಗೌರವಿಸಿ, ಆರಾಧಿಸಿ, ಆ ಪ್ರಕೃತಿಯ ಸೊಬಗಿಗೆ ಮುಗ್ಧರಾಗಿ ತಮ್ಮ ವ್ಯಕ್ತಿತ್ವವನ್ನು ವಿರಚಿಸಿಕೊಂಡವರು. ಅದಕ್ಕಾಗಿ ಅವರ ಜೀವನದಲ್ಲಿ ಎಲ್ಲವೂ ಹಿತಮಿತವಾದ ಬಳಕೆ ಇದ್ದದ್ದನ್ನು ಗಮನಿಸಬಹುದು.
ಪೂಜ್ಯ ಸಿದ್ಧೇಶ್ವರ ಶ್ರೀಗಳು ಸಾತ್ವಿಕತೆಯ ಮೂರ್ತಿ, ಶಾಂತ ಪ್ರಸನ್ನ ಚಿತ್ತ ಈ ಯುಗದಲ್ಲಿ ಪೂಜ್ಯರ ಜನನ ಭೂದೇವಿ ಮಾಡಿ ಪುಣ್ಯದ ಫಲದಂತಿದೆ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ವ್ಯಕ್ತಿ ಜ್ಞಾನಯೋಗಿಯಾಗುವ ಪಯಣ ಬೀಜ ಮೊಳಕೆಯಾಗಿ, ಸಸಿಯಾಗಿ, ಫಲ ತುಂಬಿ ನಿಂತ ಮರವಾಗುವ ಕ್ರಿಯೆಯಂತೆ ಅತ್ಯಂತ ಮೌನವಾಗಿಯೇ ಸಾಗಿತು. ಬುದ್ಧನಿಗೆ ಆಶ್ವತ್ಥ ವೃಕ್ಷ ಜ್ಞಾನೋದಯದ ಭೋಧಿ ವೃಕ್ಷವಾದಂತೆ ಸಿದ್ಧಗೊಂಡಪ್ಪ ಸಿದ್ಧಯೋಗಿಯಾದದ್ದು, ಜ್ಞಾನಯೋಗಿಯಾದದ್ದು ವಿಜಯಪುರದ “ಜ್ಞಾನಯೋಗಾಶ್ರಮ” ದಲ್ಲಿ. ಸಿದ್ಧಗೊಂಡಪ್ಪ ಸಿದ್ಧೇಶ್ವರನಾದ ಬೋಧಿವೃಕ್ಷ ಸಿದ್ಧೇಶ್ವರ ಶ್ರೀಗಳಂತೆ ಪುಣ್ಯಾತ್ಮರ ಜನನ – ಮರಣಗಳು ಉಪಯೋಗವಾಗಿರುತ್ತದೆ.
ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಗರು, ನೋಡಯ್ಯ.
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ
ಉಪಮಿಸಬಾರದು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-464/ವಚನ ಸಂಖ್ಯೆ-1255)
ಎಂಬ ಶರಣ ಉರಿಲಿಂಗದೇವರ ವಚನದ ಸಾಲುಗಳು ನೇರವಾಗಿ ಪೂಜ್ಯರಿಗೂ ಕೂಡ ಅನ್ವಯಿಸುತ್ತವೆ. ಪೂಜ್ಯರ ಜನನ, ಅವರ ಇರುವಿಕೆ, ಅವರ ಅಗಲುವಿಕೆ ಲೋಕದ ಜನರಂತೆ ಇದ್ದರೂ, ಇವರು ಬಂದದ್ದು ಪುಣ್ಯದಂತೆ, ಇವರು ಇದ್ದದ್ದು ಜ್ಞಾನದಂತೆ ಇವರು ಜೀವಿತಾವಧಿಯಲ್ಲಿಯೇ ಎಲ್ಲದರಿಂದಲೂ ಮುಕ್ತರಾಗಿ ಮುಕ್ತಾತ್ಮರಾದರು. ಈ ಎಲ್ಲಾ ಕಾರಣಗಳಿಂದಲೇ ಸಿದ್ಧೇಶ್ವರ ಅಪ್ಪಗಳು ಉಪಮಾತೀತರಾದವರು ಉಪಮಿಸಲು ಬಾರದವರು.
ಸ್ವಾತಂತ್ರ್ಯಪೂರ್ವದಲ್ಲಿ ಪೂಜ್ಯರು 24.10.1941 ರಂದು ವಿಜಯಪುರ ಜಿಲ್ಲೆಯ ಬಿಜ್ಜರಗಿ ಎಂಬ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಇವರು ಜನಿಸುತ್ತಾರೆ. ಇವರ ಬಾಲ್ಯದ ಹೆಸರು “ಸಿದ್ಧಗೊಂಡಪ್ಪ” ಇವರ ತಂದೆಯ ಹೆಸರು ಓಗೆಪ್ಪ ಬಿರಾದಾರ, ತಾಯಿಯ ಹೆಸರು ಸಂಗಮ್ಮ ಬಿರಾದಾರ. ಪೂಜ್ಯರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಿನಲ್ಲಿಯೇ ಆಗುತ್ತದೆ. ಇವರ ಬಾಲ್ಯದ ದಿನಗಳು ಕಷ್ಟಕರವಾಗಿದ್ದವು. ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಸಿದ್ಧಗೊಂಡಪ್ಪ ವಿಜಯಪುರ ಜ್ಞಾನಯೋಗಾಶ್ರಮದ ಆಗಿನ ಅಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆಶ್ರಯಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಪೂಜ್ಯ ಮಲ್ಲಿಕಾರ್ಜುನ ಶ್ರೀಗಳ ಕುರಿತು ತಿಳಿದುಕೊಳ್ಳಲೇಬೇಕು.
ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತೃ ಹೃದಯಿಗಳು ಅಷ್ಟೇ ಅಲ್ಲಾ ಅನ್ನ ಮತ್ತ ಜ್ಞಾನ ದಾಸೋಹಿಗಳು. ಅವರು ತಮ್ಮ ಕಾಲಾವಧಿಯಲ್ಲಿ ಗ್ರಾಮೀಣ ಮಕ್ಕಳ ಓದಿಗೆ ಅನುಕೂಲವಾಗಲು ವಿದ್ಯಾಸಂಸ್ಥೆಗಳನ್ನು ತೆರೆದಿದ್ದರು. ಇದರಿಂದಾಗಿ ಸಾವಿರಾರು ಗ್ರಾಮೀಣ ಮಕ್ಕಳು ಜ್ಞಾನವಂತರಾದರು. ಅಂತಹವರಲ್ಲಿ ಸಿದ್ಧಗೊಂಡಪ್ಪನೂ ಒಬ್ಬನು, ಪೂಜ್ಯ ಮಲ್ಲಿಕಾರ್ಜುನ ಶ್ರೀಗಳು ಪ್ರವಚನ ಪ್ರವೀಣರು ತಮ್ಮ ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿದವರು. ಇಂತಹ ಪವಿತ್ರಾತ್ಮಕ ಸಾನಿಧ್ಯಕ್ಕೆ ಬಂದದ್ದು ಸಿದ್ಧಗೊಂಡಪ್ಪನ ಸುಕೃತ ಪುಣ್ಯವೇ ಇರಬಹುದು. ಪರಮಹಂಸರಿಗೆ – ನರೇಂದ್ರ ದೊರೆತಂತೆ, ಪ್ಲೇಟೊಗೆ – ಅರಿಸ್ಟಾಟಲ್ ದೊರೆತಂತೆ, ಪೂಜ್ಯ ಮಲ್ಲಿಕಾರ್ಜುನ ಶ್ರೀಗಳಿಗೆ ಸಿದ್ಧಗೊಂಡಪ್ಪ ದೊರೆತನು. ಇಲ್ಲಿಯೂ ಅಪರೂಪದ ಗುರು – ಶಿಷ್ಯ ಪರಂಪರೆ ದೂರೆಯುತ್ತದೆ.
ಯೋಗ್ಯ ಶಿಷ್ಯ ಯೋಗ್ಯ ಗುರುವಿನ ಮಡಿಲಿಗೆ ಹೋಗುವುದು ಯೋಗಾಯೋಗ ಎಂಬಂತಾಯಿತು ಈ ಗುರು – ಶಿಷ್ಯರ ಮಿಲನ ಮಲ್ಲಿಕಾರ್ಜುನ ಶ್ರೀಗಳ ಬಳಿಗೆ ಶಿಷ್ಯನಾಗಿ ಹೋದಾಗ ಸಿದ್ಧೇಶ್ವರ ಶ್ರೀಗಳಿಗೆ ಹದಿನಾಲ್ಕು ವರ್ಷ ವಯಸ್ಸು. ಆಗಲೇ ಅವರು ಆಧ್ಯಾತ್ಮದ ಕಡೆಗೆ ವಾಲಿದರು. ಅವರಲ್ಲಿದ್ದುಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸ ಕೈಗೊಂಡರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ B. A ಪದವಿ ಪಡೆಯುತ್ತಾರೆ. ಕೊಲ್ಹಾಪುರ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ M. A ಪದವಿ ಪಡೆದುಕೊಳ್ಳುತ್ತಾರೆ. ತತ್ವಶಾಸ್ತ್ರವೆಂದರೆ ಶ್ರೇಷ್ಠವಾದ ವಿಷಯ ತರ್ಕ ಮತ್ತು ವಿವೇಚನಗಳ ಮೂಲಕ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ ಮುಂತಾದ ಆಳವಾದ ವಿಚಾರಗಳಿಗೆ ಯೋಗ್ಯ ಉತ್ತರ ಹುಡುಕುವ ಯತ್ನ. ಇಂತಹ ವಿಷಯದ ಮೇಲೆ ಪ್ರಭುತ್ವ ಸಾಧಿಸಿ Top Rank ನಲ್ಲಿ ಉತ್ತೀರ್ಣರಾದರು. ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಮೊದಲಿನಿಂದಲೂ ತಮ್ಮ ಗುರುಗಳೊಂದಿಗೆ ಲೋಕ ಪರ್ಯಟನೆ ಮಾಡುವ ರೂಢಿ ಇತ್ತು. ಮಲ್ಲಿಕಾರ್ಜುನ ಶ್ರೀಗಳು ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೆಲ್ಲಾ ಸಂಚರಿಸಿ ಪ್ರವಚನ ನೀಡುತ್ತಿದ್ದರು. ತಾವು ಹೋದ ಸ್ಥಳಗಳಿಗೆಲ್ಲಾ ಸಿದ್ಧೇಶ್ವರ ಶ್ರೀಗಳನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಹೀಗಾಗಿ ಶ್ರೀಗಳಿಗೆ ತಮ್ಮ ಗುರುಗಳಿಂದ ಪ್ರವಚನ ಕಲೆ ಸಿದ್ಧಿಸಿತ್ತು.
ಇವರು M. A ಓದುತ್ತಿರುವಾಗಲೇ ತಮ್ಮ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳ ಪ್ರವಚನಗಳನ್ನೆಲ್ಲಾ ಒಂದುಗೂಡಿಸಿ “ಸಿದ್ಧಾಂತ ಶಿಖಾಮಣಿ” ಎಂಬ ಕೃತಿ ರಚಿಸಿದರು. ಸಿದ್ಧೇಶ್ವರರನ್ನು ಕಂಡರೆ ಮಲ್ಲಿಕಾರ್ಜುನ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ. ಸಿದ್ಧೇಶ್ವರರಲ್ಲಿ ಅಪಾರವಾದ ಜ್ಞಾನ ಭಂಡಾರವೆ ತುಂಬಿತ್ತು. ಇವರಿಗೆ ಆಧ್ಯಾತ್ಮಿಕತೆಯ ಜೊತೆಗೆ ಲೌಕಿಕ ವಿಷಯದಲ್ಲೂ ಅಪಾರ ಜ್ಞಾನವಿತ್ತು. ಇದನ್ನು ಗುರುತಿಸಿದ ಮಲ್ಲಿಕಾರ್ಜುನ ಶ್ರೀಗಳು ಸಿದ್ಧೇಶ್ವರರನ್ನು ಕುರಿತು “ಇವನು ಮುಂದೆ ಬಹುದೊಡ್ಡ ವ್ಯಕ್ತಿಯಾಗುತ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಂತೆ. ಪ್ಲೇಟೊ ಸಹ ತನ್ನ ಶಿಷ್ಯ ಅರಿಸ್ಟಾಟಲ್ನನ್ನು ಹೀಗೆಯೇ ಪರಿಚಯಿಸುತ್ತಿದ್ದನು. “ನನ್ನ ಅಕಾಡೆಮಿಯ ದೇಹ ಉಳಿದ ಶಿಷ್ಯರಾದರೆ ಮೆದಳು ಅರಿಸ್ಟಾಟಲ್” ಎನ್ನುವಂತಿದೆ ಮಲ್ಲಿಕಾರ್ಜುನ ಶ್ರೀಗಳ ಮತ್ತು ಸಿದ್ಧೇಶ್ವರರ ಗುರುಶಿಷ್ಯ ಬಾಂಧವ್ಯ. ಹೀಗೆ ಗುರುಗಳಿಗೆ ಪ್ರೀತಿ ಪಾತ್ರರಾಗಿ ಜ್ಞಾನದ ಜ್ಯೋತಿಯಾಗಿ ಬೆಳೆಯುತ್ತಾರೆ ಸಿದ್ಧೇಶ್ವರ ಶ್ರೀಗಳು. ಮಲ್ಲಿಕಾರ್ಜುನ ಶ್ರೀಗಳು ಇವರಿಗೆ ಭಗವದ್ಗೀತೆ, ಉಪನಿಷತ್ತುಗಳ ಜ್ಞಾನವನ್ನೂ ಧಾರೆ ಎರೆಯುತ್ತಾರೆ. ಹೀಗೆ ಸಿದ್ಧೇಶ್ವರರು ಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಜ್ಞಾನಯೋಗಿಯಾಗಿ ಸಿದ್ಧರಾಗುತ್ತಾರೆ. ಮಲ್ಲಿಕಾರ್ಜುನ ಗುರುಗಳ ನಂತರ ಆ ಜ್ಞಾನ ಯೋಗಾಶ್ರಮದ ಅಧಿಕಾರ ವಹಿಸಿಕೊಂಡು ಅದರ ಅಧ್ಯಕ್ಷರಾಗುತ್ತಾರೆ.
ಸರಳತೆ ಸೂತ್ರದಲಿ ಸುಖವ ಕಂಡ ಸಿದ್ಧಯೋಗಿ:
ಸಿದ್ಧೇಶ್ವರ ಶ್ರೀಗಳೆಂದರೆ ಸರಳತೆಯ ಸಾಕಾರ ಮೂರ್ತಿ. ಶುಭ್ರಶ್ವೇತ ವಸ್ತ್ರಧಾರಿಗಳು. ಒಂದು ಶ್ವೇತ ನಿಲುವಂಗಿ ಹಾಗೂ ಒಂದು ಶ್ವೇತ ಪಂಚೆ ಇವುಗಳು ಶ್ರೀಗಳು ತಮ್ಮ ಜೀವಿತಾವಧಿಯವರೆಗೂ ಧರಿಸಿದ ಸರಳ ಉಡುಗೆಗಳು. ಹಳೆಯ ಬಟ್ಟೆಗಳು ಶುಭ್ರತೆಯಿಂದ ಸುಂದರವಾಗಿ ಕಾಣುತ್ತವೆ ಎಂಬ ಮಾತು ಇವರ ಪಾಲಿಗೆ ಸತ್ಯವಾದದ್ದು. ಏಕೆಂದರೆ ಇವರ ಹತ್ತಿರ ಎರಡು ಜೊತೆ ನಿಲುವಂಗಿ, ಪಂಚೆ ಬಿಟ್ಟರೆ ಹೆಚ್ಚು ಬಟ್ಟೆಗಳ ಸಂಗ್ರಹವಿರಲಿಲ್ಲ. ಉಡುವ – ತೊಡುವ ವಿಚಾರದಲ್ಲೂ ಶ್ರೀಗಳದು ಮಿತವಾದ ಬಳಕೆ.
ಅವರ ನಿಲುವಂಗಿಗೆ ಕಿಸೆಯೇ ಇರಲಿಲ್ಲ. ಯಾವತ್ತೂ ಹಣದ ವ್ಯವಹಾರವನ್ನೇ ಮಾಡದೆ ಶ್ತ್ರೀಗಳು ತಮ್ಮ ಕೈಗಳಿಂದ ಎಂದೂ ಹಣವನ್ನು ಮುಟ್ಟಿದವರಲ್ಲ. ಅಥಣಿಯ ಶಿವಯೋಗಿಗಳು, ರಾಮಕೃಷ್ಣ ಪರಮಹಂಸರ ನೆನಪು ಈ ವಿಚಾರವಾಗಿ ಥಟ್ಟನೆ ನೆನಪಾಗುತ್ತದೆ. ಜ್ಞಾನಯೋಗಾಶ್ರಮಕ್ಕೆ ಸರಕಾರಗಳು ಕೋಟಿ ಕೋಟಿ ಹಣ ನೀಡಲು ಬಂದಾಗಲೂ ಶ್ರೀಗಳು ನಯವಾಗಿ ತಿರಸ್ಕರಿಸಿದವರು. “ಮಠಗಳು ಭಕ್ತರ ದಾನದಿಂದ ನಡೆಯಬೇಕೆ ವಿನಃ ಸರಕಾರದ ಅನುದಾನದಿಂದಲ್ಲ” ಎಂಬುದು ಶ್ರೀಗಳ ವಿಚಾರವಾಗಿತ್ತು.
ಅವರು ತಮ್ಮ ಆಶ್ರಮದಲ್ಲೇ ಇರಲಿ ಅಥವಾ ಪ್ರವಚನ ನೀಡಲು ನಾಡು, ದೇಶಗಳಾಚೆ ಇರಲಿ ತಮ್ಮ ಸರಳ, ಸಜ್ಜನಿಕೆಯಲ್ಲೇ ಇದ್ದವರು, ಪ್ರವಚನವನ್ನು ಮೈಗೂಡಿಸಿಕೊಂಡವರು. ಶ್ರೀಗಳ ನಿತ್ಯ ದಿನಚರಿ ಕೊನೆಯವರೆಗೂ ಏಕ ಪ್ರಕಾರವಾಗಿತ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಏಳುವ ಪೂಜ್ಯರು ಅಧ್ಯಯನ, ಧ್ಯಾನ, ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ನಂತರ ಸ್ನಾನ, ಪೂಜೆ ಮುಗಿದ ನಂತರ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಪ್ರವಚನಕ್ಕೆ ಬರುತ್ತಿದ್ದರು. ಆಶ್ರಮದ ಅಂಗಳದ ಪ್ರಶಾಂತೆತಯಲ್ಲಿ ಭಕ್ತರ ಪ್ರಾರ್ಥನೆ ಮುಗಿದ ನಂತರ ತಮ್ಮ ಪ್ರವಚನ ನೀಡುತ್ತಿದ್ದರು. ಸರಿಯಾಗಿ 45 ನಿಮಿಷ ಪ್ರವಚನ ನೀಡುತ್ತಿದ್ದರು. ಒಂದು ನಿಮಿಷವೂ ಹೆಚ್ಚು – ಕಡಿಮೆ ಆಗುತ್ತಿರಲಿಲ್ಲ. ಇಲ್ಲೂ ಸಹ ಅವರ ಸಮಯಪಾಲನೆ, ಶಿಸ್ತು ನೋಡಬಹುದು ಮತ್ತು ಮಾತಿನ ಮಿತಿಗೆ ಅವರು ಕೊಡುವ ಪ್ರಾಶಸ್ತ್ಯವನ್ನು ಗಮನಿಸಬಹುದು. ಶ್ರೀಗಳ ಮೃದು – ಮಧುರ – ಕಾವ್ಯ ಬಂಧುರ ಮಾತುಗಳು ಎಂತಹವರನ್ನೂ ಆಕರ್ಷಿಸುತ್ತಿದ್ದವು. ಸುಮಾರು 6-7 ದಶಕಗಳ ಕಾಲ ಇವರು ಪ್ರವಚನ ನೀಡಿದ್ದಾರೆ. ಇತ್ತೀಚಗೆ YouTube ಬಂದ ನಂತರ ಇವರ ಪ್ರವಚನಗಳು ದಾಖಲಾಗಿವೆ ಅಷ್ಟೆ ಆದರೆ ದಾಖಲಾಗದ ಸಾವಿರಾರು ಪ್ರವಚನಗಳನ್ನು ಶ್ರೀಗಳು ನೀಡುತ್ತಲೇ ಬಂದಿದ್ದಾರೆ. ಅವೆಲ್ಲವೂ ಜನಸಾಮಾನ್ಯರಿಗೆ ಆತ್ಮತೃಪ್ತಿ ನೀಡಿದ ಪ್ರವಚನಗಳೇ ಆಗಿವೆ. ಕಠಿಣ ವಿಷಯಗಳನ್ನೂ ಅತ್ಯಂತ ಸರಳವಾಗಿ ಹೇಳುವಲ್ಲಿ, ಜನರಿಗೆ ಆ ಕಠಿಣ ವಿಷಯವೂ ಜ್ಞಾತವಾಗಿಸುವಂತಹ ಮಾತಿನ ಕಲೆಗಾರಿಕೆ ಪೂಜ್ಯರಿಗೆ ಸಿದ್ಧಿಸಿತ್ತು. ಇದು ಅವರ ತಪಸ್ಸಿನ ಒಂದು ಭಾಗವೂ ಹೌದು.
ಪೂಜ್ಯರು ಕೇವಲ ಮಾತುಗಾರರಲ್ಲ, ನುಡಿದಂತೆ ನಡೆದ ಮಹಾಂತರು. ಇವರು ಪ್ರವಚನ ಮುಗಿದ ನಂತರ ಸುಮಾರು 5-6 ಕಿಲೋಮೀಟರ್ ವಾಯು ವಿಹಾರ ಮಾಡುತ್ತಿದ್ದರು. ತಮ್ಮ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ನಂತರ ಎಲ್ಲ ಜನರ ಜೊತೆ ಬೆರೆಯುತ್ತಿದ್ದರು. ಆಗ ಇವರು ಮಾತನಾಡುತ್ತಿರಲಿಲ್ಲ. ಜನರನ್ನು ಮಾತನಾಡಿಸುತ್ತಿದ್ದರು. ಅವರಿಂದ ಎಲ್ಲಾ ರಂಗಗಳ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು.
ಹೀಗಾಗಿ ಸಿದ್ಧೇಶ್ವರ ಶ್ರೀಗಳೆಂದರೆ ಅವರ ನಡೆ – ನುಡಿ – ಆಚಾರಗಳಿಂದ “ನಡೆದಾಡುವ ದೇವರು” “ಜೀವಂತ ದೇವರು” ಎಂದೇ ಕರ್ನಾಟಕದಲ್ಲಿ ಹೆಸರುವಾಸಿಯಾದರು. ಕಾಯಕವನ್ನು ಪ್ರೀತಿಸುವ ಇವರನ್ನು “ಕಾಯಕ ಯೋಗಿ” ಗಳು ಎಂದೇ ಜನರು ಗೌರವಿಸಿ ಆದರಿಸಿದರು. ಎರಡನೇಯ ಸ್ವಾಮಿ ವಿವೇಕಾನಂದ ಎಂದು ಕೊಂಡಾಡಿದರು.
ಇವರ ಊಟೋಪಚಾರಗಳಂತೂ ಅತ್ಯಂತ ಹಿತಮಿತವಾದದ್ದು. ಒಂದು ರೊಟ್ಟಿಯಲ್ಲಿ ನಾಲ್ಕು ಭಾಗ ಮಾಡಿ ಅದರ ಒಂದು ಭಾಗವನ್ನು ಮಾತ್ರ ಸೇವಿಸುತ್ತಿದ್ದರು. ಆಹಾರದ ಮಿತ ಬಳಕೆಯಿಂದಲೇ ಇರಬಹುದು ಶ್ರೀಗಳ ಹತ್ತಿರ ಯಾವ ರೋಗಗಳೂ ಸುಳಿಯಲಿಲ್ಲ. ನಾನು ಮೊದಲೆ ಹೇಳಿದಂತೆ ಪೂಜ್ಯರು ಅಕ್ಕಮಹಾದೇವಿಯವರ ತತ್ವಗಳನ್ನು ರೂಢಿಸಿಕೊಂಡವರಾಗಿದ್ದರು. ಮಿತಾಹಾರದಿಂದ ರೋಗ ಅಷ್ಟೇ ಅಲ್ಲಾ ಯಾವ ವಿಷಯ ವಾಸನೆಗಳೂ ಹತ್ತಿರ ಸುಳಿಯುವುದಿಲ್ಲ. ಇದು ಆಧ್ಯಾತ್ಮ ಸಾಧನೆಗೂ ದಾರಿ ಎಂಬುದನ್ನು ಅವರು ಅರಿತಿದ್ದರು. ಅಕ್ಕಮಹಾದೇವಿಯವರ ಒಂದು ವಚನ ಇದನ್ನೇ ಒತ್ತಿ ಹೇಳಿದೆ.
ಆಹಾರವ ಕಿರಿದು ಮಾಡಿರಣ್ಣಾ,
ಆಹಾರವ ಕಿರಿದು ಮಾಡಿ.
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ,
ಅಜ್ಞಾನ, ಮೈಮರಹು,
ಅಜ್ಞಾನದಿಂ ಕಾಮವಿಕಾರ ಹೆಚ್ಚಿ,
ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ,
ಭಾವವಿಕಾರ, ವಾಯುವಿಕಾರವನುಂಟುಮಾಡಿ,
ಸೃಷ್ಟಿಗೆ ತಹುದಾದ ಕಾರಣ
ಕಾಯದ ಅತಿಪೋಷಣ ಬೇಡ.
ಅತಿ ಪೋಷಣೆ ಮೃತ್ಯುವೆಂದುದು.
ಜಪ ತಪ ಧ್ಯಾನ ಧಾರಣ ಪೂಜೆಗೆ
ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು.
ತನು ಪೋಷಣೆಯಿಂದ ತಾಮಸ ಹೆಚ್ಚಿ,
ಅಜ್ಞಾನದಿಂ ವಿರಕ್ತಿ ಹಾನಿ,
ಅರಿವು ನಷ್ಟ, ಪರವು ದೂರ,
ನಿರಕೆ ನಿಲವಿಲ್ಲದ ಕಾರಣ.
ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-68)
ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದರಿಂದ ದೇಹ ಮತ್ತು ಆತ್ಮಕ್ಕೆ ಒದಗುವ ಹಾನಿಗಳ ಪಟ್ಟಿಯನ್ನೇ ಅಕ್ಕಮಹಾದೇವಿಯವರು ತಮ್ಮ ಈ ವಚನದಲ್ಲಿ ನೀಡಿದ್ದಾರೆ. ಈ ವಚನದ ಪ್ರತಿಸಾಲನ್ನೂ ಪರಿಪಾಲಿಸಿದವರಂತೆ ಬದುಕಿದವರೇ ನಮ್ಮ ಸಿದ್ಧೇಶ್ವರ ಶ್ರೀಗಳು. ಅವರಿಗೆ ತಿಳುವಳಿಕೆ ಬಂದಾಗಿನಿಂದ ಹಿಡಿದು ಅವರ ದೇಹತ್ಯಾಗ ಮಾಡುವವರೆಗೂ ಮಿತಾಹಾರದ ಅಭ್ಯಾಸವನ್ನು ಗಂಧವ್ರತದಂತೆ ಪರಿಪಾಲಿಸಿದ ಪೂಜ್ಯರು ನಿಜಕ್ಕೂ ಈ ಲೋಕ ಕಂಡ ವಿಸ್ಮಯ.
ಪೂಜ್ಯರು ಮಾತೃ ಹೃದಯಿಗಳು. ಶರಣರ ತತ್ವ ಸಿದ್ಧಾಂತಗಳ ಅನುಯಾಯಿಗಳು. ಅದಕ್ಕಾಗಿ ಅವರು ಸ್ಥಾವರವಾಗಲಿಲ್ಲ. ಜಂಗಮವಾದರು ಒಂದೆಡೆ ನೆಲೆ ನಿಲ್ಲಲಿಲ್ಲ. ಒಂದು ಪ್ರದೇಶಕ್ಕೆ ಅಂಟಿಕೊಳ್ಳಲಿಲ್ಲ. ಹಳ್ಳಿ, ನಗರ, ಪಟ್ಟ, ರಾಜ್ಯ, ದೇಶ, ವಿದೇಶಗಳುದ್ದಕ್ಕೂ ದಣಿವರಿಯದಂತೆ ಸಂಚರಿಸಿ ಪ್ರವಚನ ನೀಡಿದರು. ಶ್ರೀಗಳು ಎಂದೂ ಸ್ಥಾವರವಾಗಲಿಲ್ಲ, ತಮ್ಮ ಆಶ್ರಮವನ್ನೂ ಸ್ಥಾರವದಂತಾಗಲು ಬಿಡಲಿಲ್ಲ. ಜ್ಞಾನಯೋಗಾಶ್ರಮದ ಸುತ್ತಲೂ ಹಣ್ಣಿನ ತೋಟಗಳನ್ನು ಮಾಡಿ ಶುದ್ಧ ಗಾಳಿ ಬರುವಂತೆ, ಪಕ್ಷಿಗಳು, ಸಂತೋಷವಾಗಿರಲು ಸಹಕಾರಿಯಾಗುವ ಪರಿಸರ ನಿರ್ಮಿಸಿದರು. ಜ್ಞಾನಯೋಗಾಶ್ರಮವನ್ನು ಪರಿಸರ ಸ್ನೇಹಿ ಆಶ್ರಮವಾಗಿ ಪರಿವರ್ತಿಸಿದರೆ ವಿನಃ ಮತ್ಯಾವ ಕಟ್ಟಡಗಳನ್ನು ಕಟ್ಟಲು ಒಪ್ಪಲಿಲ್ಲ. ಅಸಂಖ್ಯಾತ ಶ್ರೀಮಂತ ಭಕ್ತರು ಅಲ್ಲಿ ಕಟ್ಟಡ ನಿರ್ಮಿಸಲು ಹಾತೊರೆದು ಬಂದಿದ್ದರು. ಆದರೆ ಪೂಜ್ಯರು ಇದಕ್ಕೆ ಅಸ್ವದವನ್ನೇ ನೀಡಲಿಲ್ಲ. ಹಕ್ಕಿ – ಪಕ್ಕಿಗಳಿಗಾಗಿ ತೋಟದಲ್ಲಿ ಸಣ್ಣ ಮಡಕೆಗಳಲ್ಲಿ ಕುಡಿಯಲು ನೀರನ್ನು ಇಡುವ ವ್ಯವಸ್ಥೆ ಮಾಡಿದರು. ಇದು ಕಲಬುರಗಿಯ ಶರಣ ಬಸವೇಶ್ವರರ ಕಾಯಕತತ್ವವನ್ನು ನೆನಪಿಸುತ್ತದೆ. ಅಲ್ಲದೇ ಅವರೆಂದೂ ಹೂ-ಗಿಡಗಳಿಂದ ಬಳ್ಳಿಗಳಿಂದ ಹೂಗಳನ್ನು ಕೊಯ್ಯಲಿಲ್ಲ. ಅವೆಲ್ಲವನ್ನು ಗಿಡ – ಬಳ್ಳಿಗಳಲ್ಲೇ ಇರಲು ಬಿಡುತ್ತಿದ್ದರು. ಒಂದೇ ಒಂದು ಹೂವನ್ನು ಮಾತ್ರ ಎತ್ತಿ ಲಿಂಗಕ್ಕೆ ಅರ್ಪಿಸುತ್ತಿದ್ದರು. ಇದು ನಮ್ಮ ದಯೆಗೆ ಅರಸನಾದ ಅಯ್ಯ ದಸರಯ್ಯ ಶರಣರ “ದಯಾಪರತೆ” ಯನ್ನು ನೆನಪಿಸುತ್ತದೆ. ಹೀಗೆ ಪ್ರಕೃತಿಯನ್ನು ಪ್ರೀತಿಸುತ್ತಾ, ಗೌರವಿಸುತ್ತಾ ಬದುಕಿದ್ದರು ಸಿದ್ಧೇಶ್ವರ ಶ್ರೀಗಳು.
ಪೂಜ್ಯರು ಎಷ್ಟೊಂದು ಸರಳತೆಯ ಬದುಕನ್ನು ಬದುಕಿದರೆಂದರೆ ತಾವು ತಂಗುತ್ತಿದ್ದ ಕೊಠಡಿಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದರು. ಕಿಟಕಿಯಿಂದ ಗಾಳಿ – ಬೆಳಕು ಸಾಕಷ್ಟು ಬರುವಂತೆ ಸಜ್ಜುಗೊಳಿಸಿಕೊಂಡಿದ್ದರೇ ವಿನಃ ಯಾವುದೇ Air Condition ದಂತಹ Hi-Tech ಸೌಲಭ್ಯಗಳನ್ನು ಅವರು ಒಪ್ಪಲೇ ಇಲ್ಲ. ಅವರು ತಮ್ಮ ಕೊಠಡಿಯನ್ನು ಮೆಟ್ಟಿಲು ಹತ್ತಿಕೊಂಡೇ ಹೋಗುತ್ತಿದ್ದರೆ ವಿನಃ Lift ನ್ನು ಬಳಸಲಿಲ್ಲ. ಅವರ ಕೊನೆಯ ದಿನಗಳಲ್ಲಿ ತೀರಾ ನಡೆಯುವುದು ಅವರಿಗೆ ಆಗದಿದ್ದಾಗ ಭಕ್ತರ ಬಲವಂತಕ್ಕೆ Lift ನ್ನು ಬಳಸಿದರು. ಅದೂ ಕೂಡ ಕೇವಲ ಒಂದು ವಾರ ಮಾತ್ರ. ಹೀಗೆ ನಿಸರ್ಗ ಸಹಜವಾಗಿ ಬದುಕಲು ಶ್ರೀಗಳು ಬಯಸಿದ್ದು ಅವರ ಹಿರಿಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಪೂಜ್ಯರು ಪ್ರವಾಸ ಪ್ರಿಯರಾಗಿದ್ದರು. ಸುಂದರ ತಾಣಗಳನ್ನು ನೋಡಲು ಬಯಸುತ್ತಿದ್ದರು. ಪ್ರಕೃತಿಯ ಸುಂದರವಾದ ಹೊಸ – ಹೊಸ ಪ್ರದೇಶಗಳಿಗೆ ಇವರು ಹೋಗುತ್ತಿದ್ದರು. ಅಲ್ಲಿಯ ಪ್ರಕೃತಿ, ಗಿಡ – ಮರ – ಹೂ – ಪಕ್ಷಿ – ಪ್ರಾಣಿ ಎಲ್ಲವನ್ನೂ ಕಂಡು ಮುಗ್ಧ ಮಗುವಿನಂತೆ ಹರ್ಷಿತರಾಗುತ್ತಿದ್ದರು. ತಾವು ಭೇಟಿ ನೀಡಿದ ವಿದೇಶಗಳಲ್ಲಿ ಇರುವ ಭಾರತೀಯರನ್ನು ಕಂಡು ಮಾತನಾಡಿಸಿ ಬರುತ್ತಿದ್ದರು. ಯಾವುದೇ ಜಾತಿ – ಮತಕ್ಕೆ ಅಂಟಿಕೊಳ್ಳದ ಇವರು ಕುವೆಂಪು ಅವರ ವಿಶ್ವಮಾನವ ತತ್ವದ ಅನಿಕೇತನ ತತ್ವಕ್ಕೆ ಸಾಕ್ಷೀ ನುಡಿಯುವಂತೆ ಇದ್ದರು. ಅವರು ಬಹು ವರ್ಷಗಳವರೆಗೆ ಜಪಾನ ದೇಶವನ್ನು ಸಂದರ್ಶಿಸಲು ಸಮಯ ಒದಗಿ ಬಂದಿರಲಿಲ್ಲ. ಆದರೆ ಶ್ರೀಗಳಿಗೆ ಆದೇಶ ನೋಡಲು ಅಪಾರ ಹಂಬಲ ಇತ್ತು. ಏಕೆಂದರೆ ಜಪಾನಿಗರು ಶ್ರಮಜೀವಿಗಳು, ಕುಶಲಕರ್ಮಿಗಳು, ಮಿತಭಾಷಿಗಳು, ತಮ್ಮ ಪರಿಶ್ರಮದಿಂದ ಛಿದ್ರವಾದ ತಮ್ಮ ದೇಶವನ್ನು ಅಲ್ಪ ಕಾಲಾವಧಿಯಲ್ಲೇ ಕಟ್ಟಿಕೊಂಡವರು ಎಂಬ ಅಭಿಮಾನ ಇವರಿಗಿತ್ತು. ಕೊನೆಗೂ ಆ ದೇಶವನ್ನು ಹೋಗಿ ಕಂಡು ಬಂದರು.
ಇವರೊಮ್ಮೆ ಅಮೇರಿಕಾ ದೇಶಕ್ಕೆ ಹೋಗುವ ಪ್ರಸಂಗ ಬಂತು. ಆದರೆ ಅವರ Passport ನವೀಕರಣಗೊಳ್ಳಬೇಕಿತ್ತು. 10 ವರ್ಷಗಳಿಗೊಮ್ಮೆ Passport ನವೀಕರಣ ಆಗಬೇಕಾದದ್ದು ನಿಯಮ. ಹಿಂದಿನ Passport ಹೇಗೆ ಇವರಿಗೆ ದೊರೆತಿತ್ತೊ ಮಾಹಿತಿ ಇಲ್ಲ. ಆದರೆ ನವೀಕರಣಗೊಳ್ಳುವ Passport ನಿಯಮಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಹಾಗೆ ಈ ನವೀಕರಣಕ್ಕೆ ಆಧಾರಕಾರ್ಡ್, ರೇಷನ್ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಕಡ್ಡಾಯವಾಗಿ ಬೇಕಿತ್ತು. ಆದರೆ ಸಿದ್ಧೇಶ್ವರ ಶ್ರೀಗಳ ಬಳಿ ಇವ್ಯಾವೂ ಇರಲಿಲ್ಲ. ಕೊನೆಗೆ ಸುತ್ತೂರು ಶ್ರೀಗಳು ವಿಜಯಪುರದ SP ಅವರಿಗೆ ಫೋನ್ ಮಾಡಿ ಸಿದ್ಧೇಶ್ವರ ಶ್ರೀಗಳು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇರುವ ಸಂತರು ಎಂದು ಅರ್ಜಿ ಬರೆಯಿಸಿ ಬೆಂಗಳೂರು Passport Office ಗೆ ಕಳಿಸುವ ವ್ಯವಸ್ಥೆ ಮಾಡಿಸಿದರು. Passport ತಯಾರಾಯಿತು. ಶ್ರೀಗಳು ಅದನ್ನು ತೆಗೆದುಕೊಳ್ಳಲು ಪಾಸ್ – Passport Office ಗೆ ಹೋದಾಗ ಸ್ವತಃ Passport Officer ಇವರನ್ನು ಕರೆದೊಯ್ಯಲು ಬಾಗಿಲ ಬಳಿ ಬಂದರಂತೆ ಜನ ಸಾಮಾನ್ಯರಿಂದ ಮೊದಲುಗೊಂಡು ಪ್ರಧಾನಿಯವರೆಗೂ Passport ನಿಯಮಗಳು ಒಂದೇ ಇರುತ್ತವೆ. ಆದರೆ ಪೂಜ್ಯರಿಗೆ ಇದು ಸುಲಭವಾಯಿತು ಎಂದರೆ ಅವರ ವ್ಯಕ್ತಿತ್ವದ ಹಿರಿಮೆ ಎಷ್ಟು ಎತ್ತರ ಎಂಬುದನ್ನು ನಾವು ಊಹಿಸಿಕೊಳ್ಳಬಹುದು.
ಪೂಜ್ಯರ ವ್ಯಕ್ತಿತ್ವದ ಹಿರಿಮೆ ಎಷ್ಟು ದೊಡ್ಡದು ಎಂದರೆ ತಮ್ಮ ಮರಣವನ್ನು ಮಹಾನವಮಿಯಂತೆ ಸಂಭ್ರಮಿಸಿ, ಮರಣಾನಂತರವೂ ತಾವು ಬಯಲ ಯೋಗಿಗಳಾಗಿಯೇ ಉಳಿಯಲು ಇಚ್ಛಿಸಿದರು. 2014 ರಲ್ಲಿ ಶ್ರೀಗಳು ಒಂದು Will (ಉಯಿಲು) ಬರೆಸುತ್ತಾರೆ. ಅಲ್ಲಮ ಪ್ರಭುಗಳನ್ನು ಅತ್ಯಂತ ಪ್ರೀತಿಸಿದ ಜೀವ ಇವರು. ಹೀಗಾಗಿ ತಮ್ಮ ಉಯಿಲಿನ ಪ್ರಾರಂಭದಲ್ಲಿ ಪ್ರಭುಗಳ ವಚನವನ್ನೇ ಅವರು ಬರೆದು ಮುಂದೆ ಬರೆಸುತ್ತಾರೆ.
ಮರಣಾನಂತರ ನನ್ನ ದೇಹವನ್ನು ಅಗ್ನಿ ಚಿತೆಗೆ ಅರ್ಪಿಸಿರಿ, ನಂತರ ನನ್ನ ಬೂದಿಯನ್ನು ನದಿಯಲ್ಲಿ ಹಾಕಿಬಿಡಿ, ನನಗಾಗಿ ಯಾವ ಸ್ಮಾರಕವನ್ನೂ ಕಟ್ಟಬಾರದು. ಬಯಲಿನಿಂದ ಬಂದ ದೇಹ ಬಯಲಾಗಬೇಕು. ಶೂನ್ಯದಿಂದ ಬಂದ ನಾನು ಶೂನ್ಯವಾಗಬೇಕು ಎಂದು ಉಯಿಲು ಬರೆಯಿಸಿ ನ್ಯಾಯಾಧೀಶರಿಂದ ಸಹಿ ಮಾಡಿಸಿ, ಕನ್ಹೇರಿ ಶ್ರೀಗಳಿಂದ ಸಹಿ ಮಾಡಿದಿ Seal ಮಾಡಿಸುತ್ತಾರೆ. ಶ್ರೀಗಳು ಕೊಟ್ಟ ತಾತ್ವರ್ಯ ಇಷ್ಟೇ ಈ ಜೀವನ ಪ್ರತಿಕ್ಷಣದಲ್ಲಿ ವಿಸ್ಮಯ ಈ ಬದುಕನ್ನು ಬರದಂತೆ ಸ್ವೀಕರಿಸಬೇಕು. ನಾವಿಲ್ಲಿ ಅತಿಥಿಗಳಷ್ಟೇ. ಇಲ್ಲೇ ಇರಲು ಬಂದವರಲ್ಲಾ ನಾವೆಲ್ಲರೂ ಸಮಾನರು ಕರೆ ಬಂದಾಗ ಹೊರಟು ಬಿಡಬೇಕು ಎಂಬುದೇ ಶ್ರೀಗಳ ಸಂದೇಶವಾಗಿತ್ತು.
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-197/ವಚನ ಸಂಖ್ಯೆ-639)
ಎಂಬ ಪ್ರಭುಗಳ ವಾಣಿಯಂತೆ ಬಯಲು ಬಯಲಾಗಿ ಉಯಲಾದವರು ಪೂಜ್ಯ ಸಿದ್ಧೇಶ್ವರ ಶ್ರೀಗಳು. ಪೂಜ್ಯರು ಪಂಚಭಾಷಾ ಪ್ರವೀಣರು. ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಮರಾಠಿ ಭಾಷೆ ಬಲ್ಲವರು. ಇವರು ಪುಸ್ತಕ ಪ್ರೇಮಿಗಳು. ಅಲ್ಲಮಪ್ರಭುಗಳ ವಚನಗಳನ್ನು ಕನ್ನಡ ಭಾಷೆಯಲ್ಲೇ ಓದಿ ಅರ್ಥೈಸಿಕೊಳ್ಳುವುದು ಕಷ್ಟ. ಅಂತಹದರಲ್ಲಿ ಪೂಜ್ಯರು ಅವುಗಳನ್ನು ಇಂಗ್ಲೀಷ್ ಭಾಷಾಂತರ ಮಾಡಲು ಶ್ರಮಿಸಿದರು.
ಅವರಿಗೆ ತಮ್ಮ ದೇಹದ ಪ್ರತಿ ಅಂಗಗಳ ಕುರಿತು ಜ್ಞಾನ ಇತ್ತು. ತಮ್ಮೊಳಗೆ ನಡೆಯುತ್ತಿರುವ ತೊಂದರೆಗಳು ಸಂಪೂರ್ಣ ಅರಿವು ಇತ್ತು. ಹೀಗಾಗಿ ಶ್ರೀಗಳು ತಮ್ಮ ದೇಹತ್ಯಾಗ ಮಾಡಲು ನಿರ್ಧರಿಸಿರಬಹುದು. ಇದೇ ಇಚ್ಛಾ ಮರಣ. ಅವರು ಮೊದಲೇ ಮಿತಾಹಾರಿಗಳು, ತಮ್ಮ ಕೊನೆಯ ಮೂವತ್ತು ದಿನಗಳಲ್ಲಿ ಘನ ಪದಾರ್ಥ ಸೇವನೆ ತ್ಯಜಿಸಿ, ದ್ರವ ಪದಾರ್ಥವನ್ನು ಮಾತ್ರ ಸೇವಿಸಲಾರಂಭಿಸಿದರು. ಜೈನ ಧರ್ಮದ ಸಲ್ಲೇಖನ ವೃತದಂತೆ ದಿನ – ದಿನವೂ ಆಹಾರವನ್ನು ಕಡಿಮೆ ಮಾಡುತ್ತ ಬಂದರು. ಅವರು ಕೊನೆಯ ಎರಡು ದಿನ ಪೂರ್ತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ತಮ್ಮ ಮರಣದ ಕೊನೆಯ ದಿನ ಸಂಜೆ ಅವರಿಗೆ ಆರು ಗಂಟೆಗೆ ಎಚ್ಚರವಾಗುತ್ತದೆ. ಆಗ ಅದು ಅವರಿಗೆ ಬೆಳಗಿನ ಜಾವ ಎಂದು ಭಾಸವಾಗುತ್ತದೆ. ಆಗ ಅವರು ನಾನು ಸ್ನಾನ ಮಾಡಬೇಕು, ಪೂಜೆ ಮಾಡಬೇಕು ಎಂದು ಸ್ನಾನ, ಪೂಜೆ ಮುಗಿಸಿ, ಇಡೀ ರಾತ್ರಿ ಪುಸ್ತುಕ ಓದಲು ಕುಳಿತರಂತೆ. ಹೀಗೆ ಅಧ್ಯಯನ, ಧ್ಯಾನ ಮಾಡುತ್ತಲೆ ಸೋಮವಾರ ದಿನಾಂಕ: 02.01.2023 ರಂದು ಸಂಜೆ 06:30 ಕ್ಕೆ ಇಹಲೋಕ ತ್ಯಜಿಸುತ್ತಾರೆ. ಪಂಚಭೂತಗಳಲ್ಲಿ ಆನಂದದಿಂದ ಒಂದಾಗುತ್ತಾರೆ.
ಪೂಜ್ಯರು ಅತ್ಯಂತ ಸರಳ ಸಾತ್ವಿಕ ಅರ್ಥಪೂರ್ಣ ಬದುಕನ್ನು ಬದುಕಿ ಯಾರಿಗೂ ಭಾರವಾಗದೆ ತಮ್ಮ ಪಯಣ ಮುಗಿಸಿದ ಮಹಂತರು ಪೂಜ್ಯರು ಹಲವಾರು ಗ್ರಂಥಗನ್ನು ರಚಿಸಿದ್ದಾರೆ. ತತ್ವ ಶಿರೋಮಣಿ, (19 ನೇ ವಯಸ್ಸಿನಲ್ಲಿ), ಮಾಂಡಕ್ಯೋಪನಿಷತ್ತು, ಈಶಾವಾಸ್ಯೋಪನಿಷತ್ತು, ಅಲ್ಲಮಪ್ರಭುಗಳ ವಚನ – ನಿರ್ವಚನ ಹೀಗೆ ಅನೇಕ ಕೃತಿ ರಚನೆ ಇವರದಾಗಿದೆ.
ಪೂಜ್ಯರನ್ನು ಅರಸಿ ಪ್ರಶಸ್ತಿಗಳು ಬಂದವು. ಪದ್ಮಶ್ರೀ ಪ್ರಶಸ್ತಿಯು ಕೇಂದ್ರ ಸರ್ಕಾರದಿಂದ ಬರುತ್ತದೆ. ಅದನ್ನು ನಿರಾಕರಣೆ ಮಾಡುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಬರುತ್ತದೆ ಇದನ್ನು ನಿರಾಕರಿಸುತ್ತಾರೆ. ನಾನೊಬ್ಬ ವಿರಾಗಿ ನನಗೇಕೆ ಪ್ರಶಸ್ತಿ, ಸನ್ಮಾನಗಳು ಎಂಬ ವಿನಯವೇ ಹೊರತು, ಪ್ರಶಸ್ತಿಗಳನ್ನು ತಿರಸ್ಕರಿಸುವಲ್ಲಿಯೂ ಶ್ರೀಗಳಿಗೆ ಅಹಂಕಾರ ಸುಳಿಯಲಿಲ್ಲ.
ಈ ವಿಶ್ವ ಸಿರಿಯತ್ತ ನೋಡಿದಾಗ
ಯಾರೂ ಬಡವರಲ್ಲ, ಸಿರಿವಂತರಲ್ಲ,
ನಾವೆಲ್ಲರೂ ಸಮಾನರು ಸಂತೋಷಿಗಳು
ಎಂಬುದೇ ಸಿದ್ಧೇಶ್ವರ ಶ್ರೀಗಳ ಮಾಗಿದ ಮಗುತನಕ್ಕೆ ಸಾಕ್ಷಿಯಾದ ಲಿಂಗ ನುಡಿಗಳು. ಈ ನೆಲದ ನಡೆದಾಡುವ ದೇವರಾಗಿ, ನಿಗರ್ವಿಗಳಾಗಿ, ಜ್ಞಾನ ಪಡೆಯವಾಗಲೂ ಭಾಗಿ, ಜ್ಞಾನ ಕೊಡವಾಗಲೂ ಬಾಗಿ, ಜಲ ತುಂಬಿ ಹಣಿಸುವ ಕೊಡದಂತೆ ಬಾಗುತ್ತಲೆ ನಡೆದು ಬಯಲಾದ ಪೂಜ್ಯರು ಅಲ್ಲಮಪ್ರಭುಗಳ ಈ ವಚನದಂತೆ ಸ್ಮಾರಕವಿಲ್ಲದ ಸ್ಮಾರಕವಾದರು.
ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ.
ಇಂದ್ರಿಯಂಗಳು ಲಿಂಗವಾದವರ್ಗೆ ವಿಷಯಸೂತಕವಿಲ್ಲ.
ಕರಣಂಗಳು ಲಿಂಗವಾದವರ್ಗೆ
ಹಿಂದು ಮುಂದೆಂಬ ಸಂದೇಹವಿಲ್ಲ.
ಲಿಂಗಾಲಯವು ಮನವಾದವರ್ಗೆ
ಇಹಪರವೆಂಬ ಸಂಶಯವಿಲ್ಲ.
ಲೋಕದಂತೆ ನಡೆವರು ಲೋಕದಂತೆ ನುಡಿವರು,
ಮನವು ಮಹಾಲಿಂಗದಲ್ಲಿ ಪರಿಣಾಮಿಗಳು!
ಅಂತಪ್ಪ ಮಹಾನುಭಾವಿಗಳ ಲೋಕದ ಪ್ರಪಂಚಿಗಳೆಂದಡೆ
ಮನೋಮಧ್ಯದಲ್ಲಿಪ್ಪ ಜ್ಯೋತಿರ್ಲಿಂಗವು
ನಗದಿಪ್ಪನೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-314/ವಚನ ಸಂಖ್ಯೆ-873)
ಮನವು ಮಹಾಲಿಂಗವಾದ ಸಿದ್ಧೇಶ್ವರ ಶ್ರೀಗಳ ಬದುಕೇ ಜಗತ್ತಿನ ಬಹುದೊಡ್ಡ ಸ್ಮಾರಕ.
ಶರಣು ಶರಣಾರ್ಥಿಗಳು
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in