ವಚನಗಳಲ್ಲಿ ಮಹಿಳೆಯರ ಸಬಲೀಕರಣ / ಶ್ರೀಮತಿ ನಾಗರತ್ನ ಜಿ ಕೆ, ಮೈಸೂರು.

ಪ್ರಥಮನಾಮಕ್ಕೀಗ ಬಸವಾಕ್ಷರವೆ ಬೀಜ.
ಗುರುನಾಮ ಮೂಲಕ್ಕೆ ಅಕ್ಷರಾಂಕ.
ಬಸವಣ್ಣ ಬಸವಣ್ಣ ಬಸವಣ್ಣ ಎಂದೀಗ
ದೆಸೆಗೆಟ್ಟೆನೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021 / ಪುಟ ಸಂಖ್ಯೆ-405 / ವಚನ ಸಂಖ್ಯೆ-1293)

12 ನೇ ಶತಮಾನದಲ್ಲಿನ ವಚನಕಾರ್ತಿಯರಿಗೆ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣ ದೊರೆತದ್ದೇ ಬಸವಣ್ಣರಿಂದ ಎಂದು ಮಮಗೆ ತಿಳಿದ ವಿಷಯ. ಪುರುಷ ಪ್ರಧಾನವಾಗಿದ್ದ 12 ನೇ ಶತಮಾನದಲ್ಲಿ ಹೆಣ್ಣು ಮೈಲಿಗೆ, ಹೆಣ್ಣು ಅಬಲೆ, ಹೆಣ್ಣು ಅಶಕ್ತಳು, ಹೆಣ್ಣು ಕನಿಷ್ಠಳು ಎಂದೆಲ್ಲಾ ತಿಳಿದಿದ್ದ ಆ ಕಾಲ ಘಟ್ಟದಲ್ಲಿ ಹೆಣ್ಣು ಜೀವಾತ್ಮಳು, ಹೆಣ್ಣು ಸಶಕ್ತೆ, ಹೆಣ್ಣು ಸಬಲೆ, ಎಂದು ತೋರಿಸಿಕೊಟ್ಟದ್ದು ಬಸವಣ್ಣನವರು.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!
(ಸಮಗ್ರ ವಚನ ಸಂಪುಟ: ನಾಲ್ಕು-2021 / ಪುಟ ಸಂಖ್ಯೆ-188 / ವಚನ ಸಂಖ್ಯೆ-608)

ಎಂದು ಶಿವಯೋಗಿ ಸಿದ್ಧರಾಮೇಶ್ವರರು ಬರೆದಿದ್ದಾರೆ.
12 ನೇ ಶತಮಾನದ ವಚನಕಾರ್ತಿಯರಿಗೆ ಅದೆಷ್ಟರಮಟ್ಟಿಗಿನ ಸ್ವಾತಂತ್ರ್ಯ, ಸಬಲತೆ ಇತ್ತು ಎಂದರೆ ತಮ್ಮೊಳಗಿನ ತುಡಿತವನ್ನು, ತಮ್ಮ ಅನುಭವದ ಅನುಭಾವವನ್ನು ಯಾವ ಮುಚ್ಚುಮರೆ ಇಲ್ಲದೆ ಬಿಚ್ಚು ಮನಸ್ಸಿನಿಂದ ತಮ್ಮ ಭಾವನೆಗಳನ್ನು, ತುಡಿತವನ್ನು ನಿರ್ಭಿಡೆಯಿಂದ ವಚನರೂಪದಲ್ಲಿ ರಚಿಸುತ್ತಿದ್ದರು ಎನ್ನುವುದಕ್ಕೆ ಅವರುಗಳು ರಚಿಸಿರುವ ವಚನಗಳೇ ಸಾಕ್ಷಿ. ಇದಕ್ಕೆಲ್ಲ ಕಾರಣ ಬಸವಣ್ಣರಾದರೆ ಅವರ ಹಿಂದಿರುವ ಪ್ರೇರಕ ಶಕ್ತಿಯೇ ಬಸವಣ್ಣನವರ ಅಕ್ಕ ಅಕ್ಕನಾಗಮ್ಮನವರು.

ಇನ್ನು ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯವರು

ವೃತ ಭ್ರಷ್ಠನ, ಲಿಂಗ ಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಭೀಮೇಶ್ವರಾ
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-448 / ವಚನ ಸಂಖ್ಯೆ-1231)

ಎಂದಿದ್ದಾರೆ. ಈ ವಚನದಲ್ಲಿ ನಮಗೆ ಕಾಣ ಸಿಗುವುದು ಎಚ್ಚರಿಕೆಯ ಘಂಟೆಯೇ ಹೊರತು ಆಪಾದನೆಯಲ್ಲ. ನುಡಿದಂತೆ ನಡೆಯದವರೊಂದಿಗೆ, ನಿಷ್ಟೆಯಿಂದ ಇಲ್ಲದವರೊಂದಿಗೆ, ಲಿಂಗಧಾರಿಗಳಲ್ಲದವರೊಂದಿಗೆ ಒಡನಾಟ ಮಾಡಬಾರದು, ಲಿಂಗವಿಲ್ಲದವರ, ವೃತ ಭ್ರಷ್ಠರ ಸಂಗವ ಮಾಡಿದರೆ ಸತ್ತ ನಾಯಿಯನ್ನು ಕಾಗೆ ಹೇಗೆ ಬಗೆದು ಬಗೆದು ತಿನ್ನುತ್ತೋ ಹಾಗೆ ನಮ್ಮ ಬದುಕು ಆಗುತ್ತದೆ ಎಂದು ತಿಳಿಸುತ್ತಾರೆ. (ಇಲ್ಲಿ ಲಿಂಗ ಎನ್ನುವುದು ಪುರುಷ ಅಥವಾ ಸ್ತ್ರೀ ಸೂಚಕವಲ್ಲ. ಲಿಂಗ ಎಂದರೆ ಇಷ್ಟಲಿಂಗ)

ಇವತ್ತಿಗೂ ನನ್ನಂತಹ ಅನೇಕ ಹೆಣ್ಣು ಮಕ್ಕಳಿಗೆ ತಮ್ಮ ಗಂಡ ತರುವ ಆದಾಯವು ನ್ಯಾಯಯುತವಾದದ್ದೇ ಅಥವಾ ಅನ್ಯಾಯದ್ದೆ, ಯಾವ ಮಾರ್ಗದಿಂದ ಬಂದಿದೆ, ಇದು ಧರ್ಮ ಸಂಮತವಾದದ್ದೇ ಇಲ್ಲವೇ ಎನ್ನುವ ಒಂದು ಸಣ್ಣ ಯೋಚನೆಯೂ ಸಹ ಇಲ್ಲ. ಅಧರ್ಮದ್ದಾದರೆ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಂದರೆ ಇಷ್ಟೊಂದರ ಅವಶ್ಯಕತೆ ನಮಗಿದೆಯಾ ಎನ್ನುವ ಒಂದು ಸಣ್ಣ ಪ್ರಶ್ನೆಯನ್ನು ಸಹ ನಮ್ಮ ಸಂಗಾತಿಗೆ ಕೇಳುವುದಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿದ್ದವರು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ದಂಪತಿಗಳು. ಕಾಯಕ ನಿಷ್ಠೆಗೆ ಮತ್ತೊಂದು ಹೆಸರೇ ಆಗಿದ್ದವರು ಇವರುಗಳು. ಆಯ್ದಕ್ಕಿ ಲಕ್ಕಮ್ಮನವರು ಒಂದು ವಚನದಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗೆ ಉಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ,
ಇದು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-268 / ವಚನ ಸಂಖ್ಯೆ-708)

ಎಂದು. ಅಂದರೆ ಕಾಯಕ ನಿಷ್ಠೆಯನ್ನು ತಪ್ಪಿ ಮಾಡಿದ ಕೆಲಸದ ಕೂಲಿಗಿಂತ ಹೆಚ್ಚು ಅಕ್ಕಿಯನ್ನು ತಂದಿದ್ದಕ್ಕಾಗಿ ತನ್ನ ಪತಿ ಮಾರಯ್ಯನವರನ್ನು ಪ್ರಶ್ನಿಸಿ ಹೆಚ್ಚಾಗಿ ತಂದ ಅಕ್ಕಿಯನ್ನು ವಾಪಸ್ಸು ಅಲ್ಲಿಯೇ ಹಾಕಿ ಬರಲು ಹೇಳುವಷ್ಠು ಪ್ರಭುದ್ಧತೆ, ದಿಟ್ಟತನ, ಧೈರ್ಯವನ್ನು ಆಯ್ದಕ್ಕಿ ಲಕ್ಕಮ್ಮನವರು ತೋರುತ್ತಾರೆ. ಪ್ರತಿಯೊಬ್ಬರಲ್ಲೂ ಬೇಕಾಗಿರುವುದೇ ಈ ಕಾಯಕ ನಿಷ್ಟೆ. ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕಾಯಕದಲ್ಲಿ ನಿಷ್ಟೆ, ಪ್ರಾಮಾಣಿಕತೆಯನ್ನು ತೋರಿದ್ದೇ ಆದರೆ ಲಂಚ ಮುಕ್ತ, ದೋಷ ಮುಕ್ತ ರಾಷ್ಟ್ರದ ನಿರ್ಮಾಣ ಆಗುವುದರಲ್ಲಿ ಯಾವ ಸಂದೇಹವು ಇಲ್ಲ.

ಇನ್ನು ಗಂಡಿನ ಭೋಗ, ತೃಷೆ, ಲಾಲಸೆಗೆ ಒಳಗಾದ ತಾಯಿ ಸೂಳೆ ಸಂಕವ್ವೆಯವರು. ಬಹುಶ: ಈ ಸೂಳೆ ಅನ್ನುವ ಪದ ಬಾಯಿಂದ ಉಚ್ಛರಿಸಲು ಮತ್ತು ಮನಸ್ಸಿಗೆ ಕಷ್ಠಕೊಡುವಂತದ್ದು. ಇವತ್ತಿನ ದಿನಗಳಲ್ಲಿಯೂ ಸೂಳೆ ಎಂದು ಸಂಭೋದಿಸಿಕೊಳ್ಳುವ ಹೆಣ್ಣನ್ನು ಮೈಲಿಗೆ ಎನ್ನುವಂತೆ ನೋಡುತ್ತೇವೆ. ಅಂದ ಮೇಲೆ ಇನ್ನು 12 ನೇ ಶತಮಾನದಲ್ಲಿ ಹೇಗಿರಬೇಡ. ಆ ಕಾಲಘಟ್ಟದ ಸೂಳೆ ಸಂಕವ್ವೆಯವರನ್ನು ಒಬ್ಬ ಶರಣೆಯನ್ನಾಗಿ ಮಾಡಿ ಆಕೆಯಿಂದಲೂ ನಿರ್ಭಿಡೆಯಿಂದ ವಚನ ರಚಿಸುವಂತೆ ಮಾಡಿದವರು ಬಸವಣ್ಣನವರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಬಸವಣ್ಣನವರು ಅವಲೋಕಿಸದ, ಗ್ರಹಿಸದ, ದೃಷ್ಟೀಕರಿಸದ ಕ್ಷೇತ್ರವೇ ಇಲ್ಲ ಎಂದು ಹೇಳಬಹುದು. ಶರಣೆ ಸೂಳೆ ಸಂಕವ್ವೆಯವರ ದೊರೆತಿರುವ ಇವರ ಒಂದೇ ಒಂದು ವಚನ ಹೀಗಿದೆ:

ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ,
ಹಿಡಿದೆಡೆ ಬತ್ತಲೆ ನಿಲ್ಲಿಸಿ ಕೊಲ್ಲುವರಯ್ಯ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-449 / ವಚನ ಸಂಖ್ಯೆ-1232)

ಎಂದು. ಆ ಪರಮಾತ್ಮನನ್ನೇ ನಾನು ಮುಟ್ಟಿರುವಾಗ, ಅವನನ್ನೇ ಉಂಡೊದ್ದು ಮಲಗಿರುವಾಗ ಅನ್ಯ ಪುರುಷನ ಹಂಗೇಕೆ, ಭಗವಂತನನ್ನು ಮುಟ್ಟಿದ ಕೈಗಳಿಂದ ಪರ-ಪುರುಷರನ್ನು ಮುಟ್ಟಿದರೇ! ನನ್ನನ್ನು ಬತ್ತಲೆ ನಿಲ್ಲಿಸಿ ಕೊಲ್ಲುತ್ತಾರೆ. ತನ್ನ ಸತಿಗೆ ನಿಷ್ಟೆಯಿಂದ ಇಲ್ಲದ ಪರಪುರುಷನೊಂದಿಗೆ ಭೋಗ ಲಾಲಸ್ಯದಿಂದ ಕೂಡಿದರೆ ಕಾದ ಕತ್ತಿಯಲ್ಲಿ ಕೈ-ಕಿವಿ-ಮೂಗನ್ನು ಕೊಲ್ಲುತ್ತಾರೆ. (ಕತ್ತಿ ಎಂದರೆನೆ ಚೂಪು ಅಥವಾ ಮೊನಚಾದದ್ದು ಅಂತಹ ಕತ್ತಿಯಿಂದ ಕೊಯ್ದರೆನೆ ನೋವಾಗುತ್ತೆ ಇನ್ನು ಕಾಯಿಸಿ ಕೊಯ್ದರೆ ಕೊಯ್ಯುವುದು ಅಷ್ಟೇ ಅಲ್ಲ ಸುಟ್ಟು ಬಿಡುತ್ತೇ) ಹಾಗಾಗಿ ಇನ್ನು ಮುಂದೆ ಅಂತಹ ಹೇಯ ಕೆಲಸದಲ್ಲಿ ನಾನು ತೊಡಗಿಕೊಳ್ಳುವುದಿಲ್ಲ ಎಂದು ನಿರ್ಲಜ್ಜೇಶ್ವರನ ಮೇಲೆ ಪ್ರಮಾಣ ಮಾಡ್ತಾಳೆ. ವಜ್ರವನ್ನು ಭದ್ರವಾಗಿ ತೆಗೆದಿಟ್ಟಹಾಗೆ ಕಸವನ್ನು ಯಾರಾದರು ತೆಗೆದಿಡ್ತೀವಾ ಇಲ್ಲ ತಾನೆ? ವಜ್ರ ಬರೀ ಹೊಳೆಯುವುದಷ್ಟೇ ಅಲ್ಲ ಕೊಯ್ಯುವ ಕೆಲಸವನ್ನು ಸಹ ಮಾಡುತ್ತೇ. ಅದಕ್ಕೇ ವಸ್ತುಗಳನ್ನು ಬಳಸುವಾಗ ಅದರ ಆಗು ಹೋಗುಗಳನ್ನು ಅರಿತು ಬಳಸಬೇಕು. ಬರೀ ವಸ್ತುಗಳನ್ನಷ್ಟೇ ಅಲ್ಲ ನಮ್ಮ ಪಂಚೇಂದ್ರಿಯಗಳನ್ನು ಸಹ ಸರಿಯಾಗಿ ಅರಿತು ಬಳಸಬೇಕು. ಆ ಹೇಯ ಕೆಲಸದಲ್ಲಿ ತೊಡಗಿದ್ದ ಆ ತಾಯಿಯನ್ನು ಅದರಿಂದ ಹೊರ ಬಂದು ಅನುಭವ ಮಂಟಪದಲ್ಲಿ ಬೇರೆಲ್ಲಾ ಶರಣರೊಂದಿಗೆ ಕುಳಿತು ವಚನ ರಚಿಸಿದರು. ಮಹಿಳಾ ಸಬಲೀಕರಣ ಎಂದರೆ ಇದೇ ತಾನೆ.

ಹಾಗೆ ಕೊಟ್ಟಣದ ಸೋಮಮ್ಮ ಅವರ ಒಂದು ವಚನ ಹೀಗಿದೆ:

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವೃತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದೆಡೆ,
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-289 / ವಚನ ಸಂಖ್ಯೆ-750)

ಎಂದು. ಅಕ್ಕಿಯನ್ನು ಹಾಗೆ ಕುಟ್ಟಿದರೇನೆ ನುಚ್ಚಾಗುತ್ತೆ ಇನ್ನು ಹೆಂಗೆ ಬೇಕೋ ಹಂಗೆ ಬೇಕಾ ಬಿಟ್ಟಿಯಾಗಿ ಕುಟ್ಟಿದರೆ ನುಚ್ಚಾಗದೆ ಅಕ್ಕಿಯಾಗೆ ಉಳಿಯುತ್ತಾ ಇಲ್ಲ ತಾನೆ. ಹಾಗೆ ಕೆಟ್ಟವರೊಂದಿಗೆ ಸ್ನೇಹವ ಮಾಡಿದರೆ ಕೆಟ್ಟ ಹೆಸರೇ ಹೊರತು ಒಳ್ಳೆಯ ಹೆಸರು ಬರಲು ಸಾದ್ಯವೇ ಇಲ್ಲ. ಅಂದರೆ ನಾವು ಮಾಡುವ ಕೆಲಸದಲ್ಲಿ ನಿಷ್ಟೆ, ಪ್ರಾಮಾಣಿಕತೆ, ಪಾವಿತ್ರತೆ ಇರಬೇಕು ಎನ್ನುವುದನ್ನೇ ನಮ್ಮ ಎಲ್ಲಾ ಶರಣ-ಶರಣೆಯರು ಹೇಳಿದ್ದು. ಸೂಳೆ ಸಂಕವ್ವೆ ಮತ್ತು ಕೊಟ್ಟಣದ ಸೋಮಮ್ಮ ಇವರುಗಳ ಕೇವಲ ಒಂದೊಂದೇ ವಚನವು ದೊರೆತಿವೆ, ಸಿಕ್ಕಿರುವ ಒಂದೊಂದೇ ವಚನದಲ್ಲಿಯೇ ಅವರ ವೃತ್ತಿ ಪರತೆಯನ್ನು, ಪ್ರತಿ ವೃತ್ತಿಗೂ ಅದರದೆ ಆದ ಗೌರವ, ಮಾನ್ಯತೆ, ಕುರುಹುಗಳಿವೆಯೆಂದು, ಯಾವ ಮುಚ್ಚುಮರೆಯಿಲ್ಲದೆ ನಿರ್ಭಿಡೆಯಿಂದ ಹೇಳಿದ್ದಾರೆ.

ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಸಂಗಮಕ್ಕೆ ಹೋದ ನಂತರ ತಮ್ಮ ಸತಿ ನೀಲಾಂಬಿಕೆಯನ್ನು ಕರೆದು ತರುವಂತೆ ಹಡಪದ ಅಪ್ಪಣ್ಣನವರನ್ನು ಕಳಿಸಿದಾಗ ನೀಲಾಂಬಿಕೆಯವರು ಹಡಪದ ಅಪ್ಪಣ್ಣನವರಿಗೆ

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ?
ಪರಿಣಾಮ ಮೂರ್ತಿ ಬಸವನರೂಪು
ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ
ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ?”
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-360 / ವಚನ ಸಂಖ್ಯೆ-978)

ತನ್ನ ಪತಿಯೇ ತನ್ನನ್ನು ಕರೆಕಳಿಸಿದರೂ ತನ್ನ ಅಂಗೈಲಿರುವ ಲಿಂಗದಲ್ಲೇ ಆ ಬಸವನನ್ನು ನಾನು ನೋಡುತ್ತಿರುವಾಗ ಅಲ್ಲಿಗೇತಕೆ ಬರಲಿ ಎಂದು ನೇರವಾಗಿ ಪ್ರಶ್ನೆ ಮಾಡುತ್ತಾಳೆ.

ಇನ್ನು ಎಲ್ಲರಿಂದಾದವನು ಸರ್ವಜ್ಞ ಎನ್ನುವ ಮಾತಿದೆ. ಮಹಾನ್ ಬದ್ಧಿವಂತರಾಗಿದ್ದ ಸರ್ವಜ್ಞರು
ಮುಟ್ಟಾದ ಹೊಲೆಯೊಳಗೆ ಹುಟ್ಟುವುದು ಜಗವೆಲ್ಲ
ಮುಟ್ಟಬೇಡೆಂದ ತೊಲಗುವಾ ಹಾರುವನು
ಹುಟ್ಟಿರುವನೆಲ್ಲಿ ಸರ್ವಜ್ಞ.

ಹೆಣ್ಣು ಮುಟ್ಟಾಗುವುದರಿಂದ ಅವಳು ಮೈಲಿಗೆ ಆ 5 ದಿನಗಳಲ್ಲಿ ಆಕೆಯನ್ನು ಯಾರು ಮುಟ್ಟಬಾರದು ಆಕೆಯನ್ನು ಹೊರಗಿಡಬೇಕು ಎನ್ನುವ ಸಂದರ್ಭದಲ್ಲಿ ಮುಟ್ಟೇ ಆಗದಿದ್ದರೆ ಮಗು ಎಲ್ಲಿಂದ ಬರುತ್ತೇ? ಸರ್ವಜ್ಞ ಆದ ನಾನು ಹುಟ್ಟಲಿಕ್ಕೆ ಆ ಮುಟ್ಟೇ ಕಾರಣ ಹಾಗಾಗಿ ಆಕೆ ಮೈಲಿಗೆಯಲ್ಲಾ ಎಂದು ಬರೆದುಕೊಂಡಿದ್ದಾರೆ.

ಪ್ರತೀ ಮನೆಯಲ್ಲೂ 12 ನೇ ಶತಮಾನದಲ್ಲಿ ಇದ್ದಂತಹ ಅಕ್ಕ ನಾಗಮ್ಮ, ಬಸವಣ್ಣನವರ ವಿಚಾರ ಪತ್ನಿ ನಾಗಲಾಂಬಿಕೆ, ಸತ್ಯಕ್ಕ, ಸೂಳೆ ಸಂಕವ್ವೆ, ಕೊಟ್ಟಣದ ಸೋಮಮ್ಮ, ಆಯ್ದಕ್ಕಿ ಲಕ್ಕಮ್ಮನಂತಹ ಹೆಣ್ಣುಮಕ್ಕಳು ಇದ್ದರೆ ಯಾವ ಮನೆಗಳ ಮನಗಳು ತೂತಾಗುವುದಿಲ್ಲ. ಹಾಗಾದರೆ ಬರೀ ಗಂಡೇ ತಪ್ಪಿ ನಡಿತಾನಾ? ಹೆಣ್ಣು ನಡೆಯುವುದಿಲ್ಲವೇ? ಹಾಗೇನು ಇಲ್ಲ ಹೆಣ್ಣು ಸಹ ತಪ್ಪಿ ನಡಿತಾಳೆ. ಲಾಲಸೆಗಳ ಹಿಂದೆ ಬೀಳದೆ ಅರಿವು – ಜ್ಞಾನದೊಂದಿಗೆ ನಾವುಗಳು ಹೆಜ್ಜೆ ಇಟ್ಟಾಗ ಬದುಕು ಬಂಗಾರವಾಗುತ್ತೇ. ಈ ಎಲ್ಲಾ ಶರಣೆಯರ ವಚನಗಳನ್ನು ಅವಲೋಕಿಸಿದರೆ ಆ ಶರಣೆಯರ ವಚನಗಳಲ್ಲಿ ಎಂತಹ ಸಂವೇದನಾ ಶೀಲತೆ, ಸ್ತ್ರೀ ಸ್ವಾತಂತ್ರ್ಯತೆ, ಸಾಮಾಜಿಕ ಕಳಕಳಿ, ಪ್ರಬುದ್ಧತೆ, ನಿರ್ಭಿಡತೆ, ಜ್ಞಾನ, ವೈಚಾರಿಕತೆ ಇತ್ತು ಎನ್ನುವುದು ಗೊತ್ತಾಗುತ್ತದೆ. ಬರೀ ಇವರಷ್ಟೇ ಶರಣೆಯರಲ್ಲ ಇನ್ನು ಅನೇಕರಿದ್ದಾರೆ. ಆಗಬೇಕಾದದ್ದು ಕೇವಲ ಆರ್ಥಿಕ, ಸಾಮಾಜಿಕ ಸಬಲೀಕರಣ ಮಾತ್ರವಲ್ಲ ಮಾನಸಿಕ ಸಬಲೀಕರಣವೂ ಕೂಡ. ಇವತ್ತಿನ ಸಮಾಜದಲ್ಲಿ ಹೆಣ್ಣು ಆರ್ಥಿಕವಾಗಿ ಸಬಲಳಾದರೆ ಸಾಕಾ? ಈಗೆಲ್ಲಾ ಮಹಿಳೆಯರು 4 ರಿಂದ 5 ಅಕಿಯವರೆಗೂ ಸಂಬಳ ತರುತ್ತಾರೆ. ಆ ಹೆಣ್ಣಿನ ಶೋಷಣೆ ತನ್ನ ಮನೆಯವರಿಂದಲೇ ಆಗ್ತಾ ಇಲ್ವಾ? ಮನೆಯವರುಗಳ ಅಗತ್ಯತೆಗನುಗುಣವಾಗಿ ಹೆಣ್ಣನ್ನು ಶೋಷಣೆ ಮಾಡ್ತಾ ಇಲ್ವಾ? ನಮ್ಮ ಮನೆಗಳಲ್ಲಿ ಸಾಮಾಜಿಕವಾಗಿಯೂ ಹೆಣ್ಣು ಶೋಷಣೆಗೆ ಒಳಗಾಗತಾ ಇದ್ದಾಳೆ ಅಲ್ವೆ?

ಹಾಗಾದರೆ ಶೋಷಣೆಗಳಿಂದ ಹೊರಬಂದು ಸಬಲಳಾಗುವುದು ಹೇಗೆ? ಮತ್ತದೇ ನಮ್ಮ 12 ನೇ ಶತಮಾನದ ಶರಣ-ಶರಣೆಯರ ಹಾದಿಯಲ್ಲಿ ನಡೆದಾಗ, ವಚನ ಸಾಹಿತ್ಯವನ್ನು ಓದಿ, ಅರ್ಥೈಸಿಕೊಂಡು, ಅನುಷ್ಠಾನಗೊಳಿಸಿಕೊಂಡಾಗ ಮಾತ್ರ ಸಬಲೀಕರಣ ಸಾಧ್ಯ.
ಸಬಲೀಕರಣ ಆಗ ಬೇಕಾದದ್ದು ಬರೀ ಮಹಿಳೆಯರಿಗಾ? ಪುರುಷರಿಗೆ ಬೇಡವಾ? ಯೋಚಿಸಿ. ಸಬಲೀಕರಣ ಬರೀ ಹೆಣ್ಣಿಗೆ ಮಾತ್ರವಲ್ಲ ಗಂಡಿಗೂ ಆಗಬೇಕಾಗಿದೆ. ಗಂಡೂ ಸಹ ಶೋಷಣೆಗೆ ಒಳಗಾಗತಾ ಇದ್ದಾನೆ.

ಶ್ರೀಮತಿ. ನಾಗರತ್ನ ಜಿ. ಕೆ.
1017, 4/9 ಮೇನ್,
E & F ಬ್ಲಾಕ್, ರಾಮಕೃಷ್ಣ ನಗರ,
ಮೈಸೂರು – 570 022.
ಮೋಬೈಲ್‌ ಸಂ. 96320 20928.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply