
ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ನಾವು ಆರೋಗ್ಯದ ಕುರಿತು ಚಿಂತಿಸುತ್ತೇವೆ. ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಂತೆ ಮತ್ತೇ ಆ ಕುರಿತು ಚಿಂತಿಸುವುದಿಲ್ಲ. ಇತ್ತೀಚಿನ ಜೀವನಶೈಲಿ, ಅನೇಕ ಅಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದು ಮಧ್ಯ ವಯಸ್ಸಿನವರಲ್ಲಿ ಮತ್ತು ಯುವಕರಲ್ಲಿಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಈ ಆತಂಕಕಾರಿ ಬೆಳವಣಿಗೆಯನ್ನು ತಡೆಗಟ್ಟಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಜೊತೆ ಜಾಗೃತಿ ಮೂಡಿಸಲು, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಭೌತಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿ ಸುಸ್ಥಿಯಲ್ಲಿರುವುದು ಎಂದು ವ್ಯಾಖ್ಯಾನಿಸಿದೆ ಮತ್ತು ಇದು ರೋಗ ಅಥವಾ ದೇಹ ದೌರ್ಬಲ್ಯದ ಅನುಪಸ್ಥಿತಿಯಲ್ಲ ಎಂದೂ ಸಹ ಹೇಳಿದೆ. ಈ ನಾಲ್ಕು ಆಯಾಮಗಳಲ್ಲಿ ವ್ಯಕ್ತಿ ಸುಸ್ಥಿತಿಯಲ್ಲಿರಬೇಕಾದರೆ ಹುಟ್ಟಿನಿಂದ ಕೊನೆಯವರೆಗೆ ಉತ್ತಮ ಜೀವನಶೈಲಿ ಅತ್ಯವಶ್ಯಕ. ಎಲ್ಲಾ ಕಾಲಘಟ್ಟಗಳಲ್ಲಿ ಜೀವನಶೈಲಿಯ ಕುರಿತು ನಮಗೆ ವಿವರಗಳು, ನಿದರ್ಶನಗಳು, ಮಾರ್ಗ ದರ್ಶನ ಸಿಕ್ಕಿದೆ. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಪ್ರವಚಕರು ಉತ್ತಮ ಜೀವನಶೈಲಿಯ ಕುರಿತು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ದಾರ್ಶನಿಕರ ಉದ್ದೇಶ ಆಧ್ಯಾತ್ಮಿಕವಾಗಿದ್ದರೂ ಅದು ಭೌತಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಚಿಂತನೆಗಳನ್ನು ಹೊಂದಿರುವದನ್ನು ಕಾಣಬಹುದು. ೧೨ ನೇ ಶತಮಾನದ ಶರಣ ಸಂಸ್ಕೃತಿಯಲ್ಲಿ ಅವರ ನಡೆ ನುಡಿ, ಆಚಾರ ವಿಚಾರಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯ ದೂರ ದೃಷ್ಟಿಯನ್ನುಳ್ಳವಾಗಿದ್ದವು. ಅವರ ಜೀವನಶೈಲಿ ವ್ಯಕ್ತಿಯ ಉನ್ನತ ಆರೋಗ್ಯ ವೃದ್ಧಿಗೆ ಪೂರಕವಾಗಿದ್ದವು ಎಂದು ಹೇಳಬಹುದು.
ನಡೆಯ ಕಲಿಸಿದ ಬಸವ,
ನುಡಿಯ ಕಲಿಸಿದ ಬಸವ
ಉಣಲು ಕಲಿಸಿದ ಬಸವ,
ಉಡಲು ಕಲಿಸಿದ ಬಸವ
ಎಂಬ ಹರಿಹರನ ಹೇಳಿಕೆಯಲ್ಲಿ ಇದನ್ನು ಕಾಣಬಹದು.
ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನವನ್ನು ಅಕ್ಕಮಹಾದೇವಿಯ ಈ ವಚನದಲ್ಲಿ ಕಾಣಬಹುದು.
ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನಃ ಶುಚಿ, ಭಾವ ಶುಚಿ.
ಇಂತಿ ಪಂಚ ತೀರ್ಥವನ್ನೊಳಗೊಂಡು ಮರ್ತ್ಯದಲ್ಲಿ ನಿಂದ
ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-811 / ವಚನ ಸಂಖ್ಯೆ-244)
ನಡೆ, ನುಡಿ, ತನು, ಮನ ಮತ್ತು ಭಾವ ಭೌತಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಒಳಗೊಂಡ ಸಾಕ್ಷಿ ಪ್ರಜ್ಷೆ. ಈ ನಾಲ್ಕು ಆಯಾಮಗಳಲ್ಲಿ ಪರಿಪೂರ್ಣತೆ ಇರುವವರೇ ಶರಣರು ಎಂಬ ಚಿಂತನೆ ಸಂಪೂರ್ಣ ಆರೋಗ್ಯದ ಕಲ್ಪನೆಯಾಗಿದೆ.
ವಚನ ಸಾಹಿತ್ಯದಲ್ಲಿ ಭೌತಿಕ ಆರೋಗ್ಯದ ಕುರಿತು ಸ್ಪಷ್ಟ ಚಿಂತನೆ ಮತ್ತು ಅರಿವು ಇತ್ತು ಎಂಬುದನ್ನು ಅನೇಕ ವಚನಗಳಲ್ಲಿ ಕಾಣಬಹುದು.
ಅರ್ಥರೇಖೆಯಿದ್ದು ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು?
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-19 / ವಚನ ಸಂಖ್ಯೆ-108)
ಎನ್ನುವಲ್ಲಿ ಬಸವಣ್ಣನವರು ಕಾಯದ ಕಾಪಾಡಾವಿಕೆಯ ಕುರಿತು ಚಿಂತನೆ ವ್ಯಕ್ತಪಡಿಸುತ್ತಾರೆ. ಕಾಯವಿದ್ದರೆ ಮಾತ್ರ ಎಲ್ಲವೂ ಸಾಧ್ಯ ಮತ್ತು ಈ ಕಾಯವನ್ನು ಸಂಪೂರ್ಣ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು.
ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ. ಉರದಲೊತ್ತಿ ಬಾರಿಸು,
ಕೂಡಲ ಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-47 / ವಚನ ಸಂಖ್ಯೆ-499)
ಎನ್ನುವ ಬಸವಣ್ಣನವರು ದೇಹವನ್ನು ಶಿವಾಲಯ ದೇವಾಲಯ ಎಂದು ಕರೆಯುವದರ ಮೂಲಕ ದೇಹಕ್ಕೆ ಪವಿತ್ರತೆಯನ್ನು ಮತ್ತು ಪೂಜ್ಯತೆಯನ್ನು ಮೂಡಿಸಿ ಶರಣ ಸಂಸ್ಕೃತಿಯಲ್ಲಿ ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ಪ್ರೇರೆಪಿಸಿದರು.
ಇದನ್ನೇ ಪ್ರತಿಪಾದಿಸಿದ ಅಕ್ಕಮಹಾದೇವಿ
ಆಹಾರವ ಕಿರಿದು ಮಾಡಿರಣ್ಣಾ,
ಆಹಾರವ ಕಿರಿದು ಮಾಡಿರಣ್ಣಾ,
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.
ಆಹಾರದಿಂದ ನಿದ್ರೆ, ನಿದ್ರೆಯಿಂದ ತಾಮಸ, ಅಜ್ಞಾನ, ಮೈಮರಹು,
ಅಜ್ಞಾನದಿಂ ಕಾಮವಿಕಾರ ಹೆಚ್ಚಿ,
ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ,
ಭಾವವಿಕಾರ, ವಾಯುವಿಕಾರವನುಂಟು ಮಾಡಿ,
ಸೃಷ್ಟಿಗೆ ತಹುದಾದ ಕಾರಣ ಕಾಯದ ಆತಿಪೋಷಣೆ ಬೇಡ.
ಅತಿ ಪೋಷಣೆ ಮೃತ್ಯುವೆಂದುದು.
ಜಪ ತಪ ಧ್ಯಾನ ಧಾರಣ ಪೂಜೆಗೆ
ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೇ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು.
ತನುವ ಪೋಷಣೆಯಿಂದ ತಾಮಸ ಹೆಚ್ಚಿ,
ಅಜ್ಞಾನದಿಂದ ವಿರಕ್ತಿಹಾನಿ,
ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ,
ಚೆನ್ನಮಲ್ಲಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳುಸಿಕೊಳ್ಳಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-794 / ವಚನ ಸಂಖ್ಯೆ-68)
ಎನ್ನುತ್ತಾಳೆ.
ಇಂದಿನ ಜೀವನಶೈಲಿಯಲ್ಲಿ ಸರಿಯಾದ ಆಹಾರದ ಬಳಕೆಯಿಲ್ಲದೆ ಬೊಜ್ಜುತನ ಹೆಚ್ಚಾಗುತ್ತಿದೆ. ಬೊಜ್ಜುತನ ಹೆಚ್ಚಾದಂತೆ ದೇಹದಲ್ಲಿ ಕೋಲೆಸ್ಟ್ರಾಲ್, ಸಕ್ಕರೆ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ. ದೈಹಿಕ ಶ್ರಮವಿಲ್ಲದೆ ಹೆಚ್ಚಾದ ಮಾನಸಿಕ ಶ್ರಮದಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹ್ರದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ. ಮಿತ ಆಹಾರ ಮತ್ತು ಮಿತ ನಿದ್ರೆಯ ಕುರಿತು ಬಹುರೂಪಿ ಚೌಡಯ್ಯ ಅವರ ನಿಲುವನ್ನು ಈ ವಚನದಲ್ಲಿ ಕಾಣಬಹುದು.
ಮಿತ ಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ,
ಯೋಗ ಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ
ರೇಕಣ್ಣ ಪ್ರಿಯ ನಾಗಿನಾಥನಲ್ಲಿ ಅಳಿಯದಂತೆ
ಉಳಿಹಿಕೊಳ್ಳಿರಣ್ಣಾ ಯೋಗ ಸಾಧ್ಯವಪ್ಪನ್ನಕ್ಕ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1374 / ವಚನ ಸಂಖ್ಯೆ-173)
ಆಸೆಯೆಂಬುದು, ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-866 / ವಚನ ಸಂಖ್ಯೆ-709)
ಎನ್ನುವ ಆಯ್ದಕ್ಕಿ ಲಕ್ಕಮ್ಮಳ ಮಾತುಗಳಲ್ಲಿ ಸಹ ಆಸೆಯ ನಿಯಂತ್ರಣದ ಜೊತೆ ಮಿತ ಆಹಾರದ ಕಲ್ಪನೆಯನ್ನು ಕಾಣಬಹುದು.
ದೈಹಿಕ ಶ್ರಮದ ಕುರಿತು ಅನೇಕ ವಚನಗಳಲ್ಲಿ ಕಾಣಬಹದು. ಕಾಯಕ ಎನ್ನುವ ಪರಿಕಲ್ಪನೆಯಲ್ಲಿ ದೈಹಿಕ ಶ್ರಮದ ನಿರ್ದೇಶನವಿದೆ. ಕಾಯಕದಲ್ಲಿ ನಿರತರಾಗುವುದು ಮತ್ತು ಪ್ರತಿ ಕಾಯಕವನ್ನು ಪೂಜ್ಯತೆಯಿಂದ ಮಾಡುವುದು ಮುಖ್ಯ. ಅದು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ದೈಹಿಕ ಶ್ತಮವಹಿಸಿ ಮಾಡುವ ಕೆಲಸದಿಂದ ದೇಹದ ತೂಕ ನಿಯಂತ್ರಣದಲ್ಲಿರುವುದು. ದೈಹಿಕ ಶ್ರಮದಿಂದಾಗಿ ದೇಹದ ಚಯಾಪಚಯ ಕ್ರಿಯೆ ಸರಿಯಾಗಿರುತ್ತದೆ. ದೇಹದ ರಕ್ತಪರಿಚಲನೆ, ರಕ್ತದೊತ್ತಡ, ಸಕ್ಕರೆಯ ಪ್ರಮಾಣ, ಕೋಲೆಸ್ಟ್ರಾಲ್ ಪ್ರಮಾಣ ಇತ್ಯಾದಿಗಳು ಸರಿಯಾದ ಪ್ರಮಾಣದಲ್ಲಿದ್ದು ವ್ಯಕ್ತಿಯ ಆರೋಗ್ಯ ಸೂಚ್ಯಾಂಕಗಳು ಧನಾತ್ಮಕವಾಗಿರುತ್ತವೆ.
ಆಯ್ದಕ್ಕಿ ಮಾರಯ್ಯ ಅವರು ಅದಕ್ಕೆ ಕಾಯಕವೇ ಕೈಲಾಸ ಎಂದಿದ್ದಾರೆ
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1068 / ವಚನ ಸಂಖ್ಯೆ-1165)
ನಮಗೆ ಸಿಗುವ ಪದಾರ್ಥಗಳನ್ನು ಕೆಡದಂತೆ ಲಿಂಗಾರ್ಪಿತವ ಮಾಡಿ ಅಂದರೆ ಸರಿಯಾಗಿ ವಿಶ್ಲೇಷಿಸಿ ಅವಶ್ಯಕತೆಗೆ ಅನುಗುಣವಾಗಿ ಸೇವಿಸಿ ಎನ್ನುವುದು ಬಸವಣ್ಣನವರ ನಿಲುವು
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-70/ವಚನ ಸಂಖ್ಯೆ-775)
ನಮ್ಮ ಆರೋಗ್ಯದ ಸೂಚ್ಯಾಂಕಗಳನ್ನು ನಾವು ಅರಿಯಬೇಕು. ನಮ್ಮ ಆರೋಗ್ಯದ ಸೂಚ್ಯಾಂಕಗಳು ನಮ್ಮ ರಕ್ತದೊತ್ತಡ, ಎತ್ತರ, ತೂಕ, ಸಕ್ಕರೆ ಮತ್ತು ಕೋಲೆಸ್ಟ್ರಾಲ್ ಇತ್ಯಾದಿಗಳ ಪ್ರಮಾಣ. ಅಗಾಗ್ಗೆ ವೈದ್ಯರ ಸಲಹೆಯಂತೆ ಇನ್ನಿತರ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಆದ್ಯದಲ್ಲಿ ಯಾವುದೇ ಚಿಹ್ನೆಗಳನ್ನು ವ್ಯಕ್ತಪಡಿಸುವುದಿಲ್ಲ. ಕೇವಲ ಪರೀಕ್ಷೆ ಮಾಡಿಸಿದಾಗ ಮಾತ್ರ ತಿಳಿದು ಬರುತ್ತದೆ. ನಮ್ಮನ್ನು ನಾವು ತಿಳಿದಿರಬೇಕೆಂದು ಅಲ್ಲಮಪ್ರಭು ಅವರು ಹೇಳಿರುವದನ್ನು ವಿಶ್ಲೇಷಿಸಬಹುದು.
ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ, ತನ್ನ ಮಾತಾಡದಾತ ಮೂಕ.
ದಿಟದಿಂತ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
ದಿಟದಿಂದ ತನ್ನ ತಾ ಮಾತಾಡಬೇಕು.
ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ_ಗುಹೇಶ್ವರಾ
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-230/ವಚನ ಸಂಖ್ಯೆ-992)
ಇಂದ್ರಿಯಗಳ ಮೂಲಕವೇ ರೋಗಗಳು ಬರುವುದು ಎನ್ನವುದು ಆಯುರ್ವೇದವೇ ಆಚರಣೆಯಲ್ಲಿದ್ದ ಆ ಕಾಲದಲ್ಲಿ ತಿಳಿದಿದ್ದ ಅವರು ಇಂದ್ರಿಯ ನಿಗ್ರಹಣೆಗೆ ಒತ್ತು ನೀಡಿದ್ದರು.
ಜಿಹ್ವೆಂದ್ರಿಯವೆಂಬ ರೋಗ ಬಾಯಲ್ಲಿ ಹುಟ್ಟಿ,
ಗುಹ್ಯೇಂದ್ರಿಯವೆಂಬ ರೋಗ ಚಿತ್ತದಲ್ಲಿ ತತ್ತರಿಸುತ್ತಿದೆ ನೋಡಾ.
ಆಸೆಯೆಂಬ ರೋಗ ಸರ್ವಾಂಗದಲ್ಲಿ ಹೊಕ್ಕು,
ಸರ್ವರಿಗೆಲ್ಲಕ್ಕೂ ಪಾಷಂಡಿ ವೇಷಧಾರಿಗಳೆನಿಸುತ್ತಿದೆ ನೋಡಾ.
ಈ ರೋಗ ನಿರೋಗವಹುದಕ್ಕೊಂದು ಮದ್ದುಂಟು.
ಅದು ಬೇರು ಮೂರು, ಶಾಖೆ ಐದು, ಎಲೆ ಆರು, ಕೊನೆ ಇಪ್ಪತ್ತೈದು.
ಇಂತೀ ಗಿಡುವ ಸಹ ಮೂಲಸಹಿತ ತಂದು, ಕಂಗಳ ಕಲ್ಲಿನಲ್ಲಿ ಇಂಗಿಸಿ,
ಆನಂದಾಶ್ರುವೆಂಬ ಜಲವನೆರೆದು,
ಚಿತ್ತಶುದ್ಧವೆಂಬ ಗುಂಡಿನಲ್ಲಿ ಲಕ್ಷಿಸಿ ಅರೆಯಲಾಗಿ, ಮದ್ದು ನೀರೊಳಡಗಿತ್ತು .
ಕಲ್ಲು ಗುಂಡಿನಲ್ಲಿಗೆ ಸಾಧ್ಯವಲ್ಲದೆ ಹೋಯಿತ್ತು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿಗೆ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1630/ವಚನ ಸಂಖ್ಯೆ-118)
ಎನ್ನುತ್ತಾರೆ ವೈದ್ಯ ಸಂಗಣ್ಣ.
ಮಾನಸಿಕ ಆರೋಗ್ಯ:
ಆತ್ಮನೆಂಬ ಮೂಲ ಪುರುಷನು ವಾಯುವೆಂಬ ಭೂತದೊಡನೆ ಸೇರಿ ಮನವು ಉತ್ಪತ್ತಿಯಾಗಿದೆ ಎನ್ನುತ್ತಾರೆ ಶರಣರು. ನಮ್ಮನ್ನು ಕೆಟ್ಟ ವಿಷಯಗಳಿಗೆ ಪ್ರೇರೇಪಿಸುವ ಅವಸ್ಥೆಯನ್ನು ಅಳಿಮನವೆಂದು, ನಮ್ಮನ್ನು ಉತ್ತಮ ಕಾರ್ಯಗಳಿಗೆ ಪ್ರೇರೇಪಿಸುವ ಮನಸ್ಸಿನ ಸ್ಥಿತಿಯನ್ನು ಘನಮನವೆಂದು ಮತು ಒಳ್ಳೆಯದು ಕೆಟ್ಟದು, ಸುಖ ದುಃಖ, ನೋವು ನಲಿವು, ಮಾನ ಅಪಮಾನ, ಈ ದ್ವಂದ್ವಗಳನ್ನು ಮೀರಿ ನಿಂತ ಮನಸ್ಸಿನ ಸ್ಥಿತಿಯನ್ನು ಉನ್ಮನವೆಂದು ಹೇಳಿರುವರು.
ಮರವನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ.
ಬೆಂದ ಮನವ ನಾನೆಂತು ನಂಬುವೆನಯ್ಯಾ? ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-13/ವಚನ ಸಂಖ್ಯೆ-33)
ಎನ್ನುತ್ತಾರೆ ಬಸವಣ್ಣನವರು.
ಸಕಲೇಂದ್ರಿಯಗಳಲ್ಲಿ ವಿಕರಿಸುವ ಮನವ ಸೆಳೆದು ನಿಂದಾತ ಸುಖಿ,
ಪಂಚೇಂದ್ರಿಯಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ,
ಮನವು ಬಹಿರ್ಮುಖವಾಗಲು ಮಾಯಾಪ್ರಪಂಚಿ,
ಮನವಂತರ್ಮುಖವಾದಡವಿರಳಜ್ಞಾನಿ,
ಮನವು ಮಹದಲ್ಲಿ ನಿಂದಡಾತ ಮುಕ್ತನು.
ಮನೋಲಯವಾದಡೆ
ಸೌರಾಷ್ಟ್ರಸೋಮೇಶ್ವರಲಿಂಗದಲ್ಲಿ ಅಭೇಧ್ಯನು
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1067/ವಚನ ಸಂಖ್ಯೆ-1119)
ಎನ್ನುತ್ತಾರೆ ಆದಯ್ಯ ಶರಣರು.
ಓತಿ ಬೇಲಿವರಿವಂತೆ ಎನ್ನ ಮನವಯ್ಯಾ,
ಹೊತ್ತಿಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು
ಬಾವುಲ ಬಾಳುವೆಯಂತೆನ್ನ ಮನವು,
ನಡುವಿರುಳೆದ್ದ ಕುರುಡಂಗೆ ಅಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದಡುಂಟೆ
ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-32/ವಚನ ಸಂಖ್ಯೆ-288)
ಎನ್ನುತ್ತಲೇ … …
ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯಾ,
ವಿಚಾರಿಸಿದಡೆ ಏನೂ ಹುರುಳಿಲ್ಲವಯ್ಯಾ
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಿ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-13/ವಚನ ಸಂಖ್ಯೆ-29)
ಎಂದು ಬಸವಣ್ಣನವರು ಮನಸ್ಸು ಹೇಗೆ ವರ್ತಿಸುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಸಿದ್ಧರಾಮೇಶ್ವರ ಅವರು ದೇಹ ಮತ್ತು ಮನಸ್ಸನ್ನು ಒಂದುಗೂಡಿಸಲು ಪ್ರಯತ್ನಿಸಿದ್ದಾರೆ.
ದೇಹ ನಾನೆಂದು ನಂಬಿದೆ, ಎಲೆ ಮನವೇ,
ದೇಹದಲ್ಲಿಹ ಗುಣಂಗಳು ನಿನ್ನಲ್ಲಿ ಕಂಡಯ್ಯಾ ಮನವೆ.
ಪೃಥ್ವಿಯ ಗುಣ ಶಾಂತಿ, ಉದಕದ ಗುಣ ಸ್ವಾದ,
ಅಗ್ನಿಯ ಗುಣ ಸರ್ವಭಕ್ಷಣ, ವಾಯುವಿನ ಗುಣ ನಿರ್ಮಲತ್ವ,
ಆಕಾಶದ ಗುಣ ನಿರ್ವಯಲು,
ಇಂತೀ ಪಂಚತತ್ವದ ಗುಣ ನಿನ್ನಲ್ಲಿರಲು,
ನೀನೇ ಪಂಚಮುಖ ನೋಡಾ ಮನವೆ,
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-615/ವಚನ ಸಂಖ್ಯೆ-1454)
ಮನಸ್ಸಿನ ನಿಗ್ರಹ ಅತಿ ಮುಖ್ಯ. ಮಾನಸಿಕ ಒತ್ತಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವದರಿಂದ ಭೌತಿಕ ಆರೋಗ್ಯದಲ್ಲಿ ಏರುಪೇರನ್ನು ಅನುಭವಿಸುತ್ತಿದ್ದೇವೆ,
ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ.
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ.
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ.
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-15/ವಚನ ಸಂಖ್ಯೆ-59)
ಎನ್ನುವ ಬಸವಣ್ಣನವರ ಪ್ರಾರ್ಥನೆ ಮನಸ್ಸಿನ ನಿಗ್ತಹದಿಂದಲೇ ಇದು ಸಾಧ್ಯ.
ಇಂದು ಮಕ್ಕಳ ಬೆಳವಣಿಗೆ ಒತ್ತಡದ ಪರಿಸರದಲ್ಲಿ ಆಗುತ್ತಿದೆ. ಶಾಲೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಬೇಕು ಎನ್ನುವ ಸ್ಪರ್ಧಾತ್ಮಕ ಸ್ಥಿತಿ ನಿರ್ಮಾಣವಾಗಿದೆ. ರಿಯಾಲಿಟಿ ಶೋಗಳು ಸಹ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿವೆ. ಹೊರಾಂಗಣ ಕ್ರೀಡೆಗಳು ಕಡಿಮೆಯಾಗಿ ಗಣಕಯಂತ್ರ ಆಧಾರಿತ ಸಮಯ ಕಳೆಯುವಿಕೆ ಹೆಚ್ಚಾಗುತ್ತಿದೆ. ಇದು ಈಗಾಗಲೇ ಯುವ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ಕಾಣಬಹುದು.
ಕಲ್ಯಾಣವೆಂಬುದು ಭೌಗೋಳಿಕ ಸೀಮೆಗಳನ್ನು ಹೊಂದಿದ್ದಲ್ಲ. ಕಲ್ಯಾಣವೆಂಬುದು ವಿಶ್ವಕ್ಕೆ ಅನ್ವಯವಾಗುವ ಸಂದೇಶ. ವ್ಯಕ್ತಿಗಳನ್ನು ಷಟಸ್ಥಲ, ಸದಾಚಾರಗಳ ಮೂಲಕ ಶರಣರನ್ನಾಗಿಸಿ ಅವರ ಭೌತಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಉನ್ನತ ಮಟ್ಟಕ್ಕೇರಿಸುವ ಸಾಧನ ಕಲ್ಯಾಣದ ಕನಸು.
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ
ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
(ಸಮಗ್ರ ವಚನ ಸಂಪುಟ: ಒಂದು-2016/ ಪುಟ ಸಂಖ್ಯೆ-801/ ವಚನ ಸಂಖ್ಯೆ-147)
ಎನ್ನುವ ಅಕ್ಕಮಹಾದೇವಿಯ ಆಶಯ ಈಡೇರಲಿ.
ಸರ್ವೇ ಜನ ಸುಖಿನೋ ಭವಂತು! ಸಕಲರಿಗೆ ಲೇಸನೇ ಬಯಸೋಣ!
ಡಾ ಸುರೇಶ ಸಗರದ.
ಹೃದಯ ರೋಗ ತಜ್ಞರು,
ಸಗರದ ಮೆಡಿಕಲ್ ಸೆಂಟರ್,
ರಾಯಚೂರು – 584 101
ಮೋಬೈಲ್. ನಂ. 94481 39339
e-mail ID: drssagarad@hotmail.com