ವಚನ ಸಾಹಿತ್ಯದಲ್ಲಿ ಗುರು/ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ವಚನ ಸಾಹಿತ್ಯ ಶರಣರ ಬದುಕಿನ ಮೌಲಿಕತೆಯನ್ನು ಬಿಂಬಿಸುವ ಆಂತರಿಕ ಅರಿವಿನ ಧರ್ಮವಾಗಿದೆ. ಪ್ರಗತಿಪರ ಚಿಂತನೆಯ ತತ್ವ ಸಿದ್ಧಾಂತಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಪರಿಶುದ್ಧಗೊಳಿಸುವ ಪರಿಯದು. ಯಾವುದೇ ಧರ್ಮವಾದರೂ ನೀತಿ ಸತ್ಯದ ನಿಷ್ಠೆಯಾಗಿರಬೇಕು. ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು. ಇದು ಮಾನವ ಧರ್ಮ. ಇದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಇದನ್ನು ಹಿಂದುಗಳು ಮುಕ್ತಿ ಎಂದರು. ಜೈನರು ನಿರ್ವಾಣವೆಂದರು. ಬೌದ್ಧರರು ವಿಮಕ್ತಿಗಾಗಿ ಅನ್ವೇಷಣೆ ಎಂದರು. ಸಿಖರು ಧ್ಯಾನದ ಮೂಲಕ ದೇವರಲ್ಲಿ ಒಂದಾಗುವುದೆಂದರು.

ಎಲ್ಲಾ ಧರ್ಮದಲ್ಲಿ ಧರ್ಮದ ಮಹತ್ವವನ್ನು ಸಾರಿದ ಮಹಾನ್ ಗುರುಗಳಿದ್ದಾರೆ. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ತಾತ್ವಿಕ ಗಟ್ಟಿ ತಳಪಾಯವಿದೆ. ಶರಣ ಧರ್ಮದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಈ ಎಂಟು ಆವರಣಗಳು ಸಾಧನಗಳನ್ನಾಗಿ ಭಕ್ತನ ಚಾರಿತ್ರಿಕ ಶಕ್ತಿಗಳಾಗಿ ಬಳಸಿಕೊಳ್ಳುತ್ತೇವೆ. ಆವರಣವೆಂದರೆ ರಕ್ಷಾ ಕವಚ. ಭವಿಯಾದವನ ಮನಸ್ಸಿನ ಮನಸ್ಥಿತಿಯನ್ನು ಶುದ್ಧೀಕರಿಸಬೇಕಾದರೆ ಭಕ್ತಿ ಎಂಬ ಕವಚ ಧರಿಸಬೇಕು. ಇದು ಸದ್ಭಕ್ತನಿಗೆ ರಕ್ಷಾಕವಚವಾಗುತ್ತದೆ. ಕಾಯದಲ್ಲಿ ಗುರುವಾಗಿ ಜೀವದಲ್ಲಿ ಲಿಂಗವಾಗಿ ಪ್ರಾಣದಲ್ಲಿ ಜಂಗಮವಾಗಿ ಗುರುವಿನಿಂದ ಮಂತ್ರವನ್ನು ಪಡೆದು ಲಿಂಗ ರೂಪದಿಂದ ಪೂಜೆಯನ್ನು ಕೈಕೊಂಡು ಜಂಗಮದ ಶಕ್ತಿಯಿಂದ ಪಾದೋದಕ ಪ್ರಸಾದವನ್ನು ಅರ್ಪಿಸಿಕೊಂಡು ದೇಹದ ಪ್ರಸಾದವೇ ಶಿವ ಪ್ರಸಾದವಾಗಿ ಭಸ್ಮಧಾರಣ ಆಚಾರವಾಗಿ ನೇತ್ರಗಳನ್ನು ರುದ್ರಾಕ್ಷಿಯಾಗಿ ಪಂಚಾಕ್ಷರಿಯ ಮಂತ್ರ ಆಧ್ಯಾತ್ಮಿಕ ಅಧಿಕಾರವಾಗಿ…ಪ್ರತಿಪಾದಸುವುದೇ ಶರಣ ಧರ್ಮದ ಅಷ್ಟಾವರಣದ ಪರಮ ಗುರಿ ಎಂದು ಸ್ಪಷ್ಟಪಡಿಸಬಹುದು.

ಲೌಕಿಕ ಮತ್ತು ಪಾರಮಾರ್ಥಿಕ ಆಧಾರದ ಮೇಲೆ ಶರಣ ಧರ್ಮದ ಅಷ್ಟಾವರಣ ಸಮರ್ಥನೆ ನಿಂತಿದೆ. ಏಕೆಂದರೆ ಅರ್ಚನೆ ಅರ್ಪಿತ ಆಚಾರ ಅವಧಾನಗಳನ್ನು ಶರಣರು ವಿರೋಧಿಸಿದ್ದಾರೆ. ಶರಣರು ಕಂಡುಕೊಂಡ ಅಷ್ಟಾವರಣದ ಆಚಾರ ವಿಚಾರಗಳನ್ನು ಅಂತರಂಗದ ಅನುಭವದೊಡನೆ ಬೆಸೆದಿದ್ದಾರೆ. ತನುತ್ರಯಗಳನ್ನು ದಾರ್ಶನಿಕ ಪರಿಕಲ್ಪನೆಗಳನ್ನು ತಾತ್ವಿಕವಾಗಿ ಹೇಳಿದ ವಿವೇಚನೆ ಶರಣ ಧರ್ಮದ ಪವಿತ್ರತೆಯ ಪರಮಾಧಿಕಾರವಾಗಿ ಸಮಾಜಿಕವಾಗಿ ಆಚರಿಸಲ್ಪಟ್ಟಿತು. ಅಷ್ಟಾವರಣವೇ ಅಂಗವಾಗಿ ಪಂಚಾಚಾರ ಪ್ರಾಣವಾಗಿ ಷಟ್ ಸ್ಥಲ ಮಾರ್ಗದಲ್ಲಿ ನಡೆಯುವ ಶರಣನಾಗುತ್ತಾನೆ. ಅರಿವು ಸುಪ್ತ ಅಭಿವ್ಯಕ್ತತೆಯ ಮಾರ್ಗ. ಇದು ನಮ್ಮನ್ನು ಅರಿವೇ ಗುರುವಿನ ಮಾರ್ಗದತ್ತ ಕೊಂಡಯುತ್ತದೆ. ಅಷ್ಟಾವರಣ ದೇಹವಾದರೆ ಪಂಚಾಚಾರಗಳು ಈ ದೇಹದಲ್ಲಿರುವ ಪಂಚಪ್ರಾಣಗಳು. ಷಟ್ ಸ್ಥಲವೇ ಆತ್ಮ. ಹೀಗಾಗಿ ಶರಣರ ದರ್ಶನದ ರೂಪಗಳು ಆಧ್ಯಾತ್ಮದ ಸೂಕ್ಷ್ಮತೆಯ ಧಾರ್ಮಿಕತೆಯ ಆಪ್ತ ಪ್ರಜ್ಞೆಯಾಗಿದೆ.

ಸನಾತನ ಧರ್ಮದ ಗುರು-ಶಿಷ್ಯರ ಸಂಬಂಧಕ್ಕಿಂತ ವಚನಕಾರರ ಗುರು ಶಿಷ್ಯ ಸಂಬಂಧ ಸಂಪೂರ್ಣ ಭಿನ್ನ. ಯಾವುದೇ ಕಟ್ಟಪ್ಪಣೆ ಇಲ್ಲದೆ ಬೆಳೆದ ಪ್ರಜಾತಾಂತ್ರಿಕವಾದ ಸಂಬಂಧವಾಗಿದೆ. ಅರಿವು ಕಲಾತ್ಮಕವಾದ ಯಶಸ್ಸಿನ ಹಿಂದೆ ಅನುಭಾವ ಅಡಗಿದೆ. ಅರಿವಿನ ತೃಪ್ತಿಗೆ ಅನುಭಾವದ ಅನುಭೂತಿಯೇ ಆಶ್ರಯವಾಗಿದೆ. ಅರಿವೇ ಗುರು ಅನುಭಾವವೇ ಗುರಿಯಾಗಬೇಕು. ಲೌಕಿಕ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಪ್ರತಿಯೊಂದು ವಸ್ತುವೂ ಕೂಡ ನಮ್ಮ ಜೀವನದ ಮೌಲ್ಯವನ್ನು ಸ್ಪಷ್ಟಪಡಿಸುತ್ತದೆ. ಅಲ್ಲಮ ಪ್ರಭುಗಳ ಈ ವಚನ:

ಗುರುವಿಡಿದ ಅರಿವು ಅರಿವಲ್ಲ
ಲಿಂಗ ವಿಡಿದ ಅರಿವು ಅರಿವಲ್ಲ
ಗುರು ಇಲ್ಲದ ಲಿಂಗ ಕಲ್ಪಿತಕ್ಕೆ
ಅರಿವಹುದೆ? ತನ್ನಿಂದ ತಾನರಿವುದೇ
ಅರಿವು ಗುಹೇಶ್ವರ.

ಗುರುವಿನ ಅರಿವು ಅರಿವಲ್ಲ ಎಂಬ ಅಲ್ಲಮರ ಮಾತುಗಳನ್ನು ಒಪ್ಪಿಕೊಂಡರು. ಗುರು ವ್ಯಕ್ತಿಯಲ್ಲ ತತ್ವ. ಏಕೆಂದರೆ ಗುರುವಂಬ ಶಬ್ದದ ಮೇಲೆ ಪೂಜ್ಯತೆಯ ಹಾಗೂ ಮನ ಸಂವೇದನೆಯ ಭಾವ ಅಡಗಿರುತ್ತದೆ. ಆತ್ಮಲಿಂಗವಾದ ಗುರು ತೀವ್ರತರವಾಗಿ ತನ್ನ ಅರಿವಿನ ಅಧ್ಯಾತ್ಮದ ಪಯಣವನ್ನು ಪ್ರಾರಂಭಿಸುತ್ತಾನೆ. ಅರಿವೇ ಗುರು, ಅದು ಆನಂದದ ಸ್ಥಿತಿ. ಏಕೆಂದರೆ ನಿರಾಕಾರ ತತ್ವದಲ್ಲಿ ಗುರುವನ್ನು ಕಂಡಂತಹ ಅಲ್ಲಮರು ಹಿಂದಿನ ಚೇತನ ರೂಪದಲ್ಲಿ ನಮ್ಮೊಳಗಿನ ಅತಿಂದ್ರೀಯ ಶಕ್ತಿಯನ್ನು ಪಡೆದುಕೊಂಡಿರುತ್ತೇವೆ. ಗುರು ವ್ಯಕ್ತಿಯಲ್ಲ ಒಂದು ಪರಿಪೂರ್ಣ ಶಕ್ತಿ. ಅಜ್ಞಾನ ಮತ್ತು ನಮ್ಮೊಳಗಿನ ಕತ್ತಲೆಯ ಹೊದಿಕೆಯನ್ನು ಕಳಚಿಕೊಂಡಾಗ ಅರಿವೆಂಬ ಜ್ಞಾನದ ಬೆಳಕು ನೀಡಲು ಪ್ರಾರಂಭಿಸುತ್ತದೆ.

ಭವಿಯನ್ನು ಭಕ್ತನನ್ನಾಗಿಸುವ ಗುರು ಕೊಟ್ಟ ಲಿಂಗದ ಮೂಲಕ ಅರಿವನ್ನು ಮೂಡಿಸುವ ಪ್ರಕ್ರಿಯೆ ಆವರಣವಾಗಿದೆ. ಭಕ್ತನಿಗೆ ಇರಲೇಬೇಕಾದ ಮೊದಲ ಅರ್ಹತೆ ಭವವನ್ನು ನಿರಾಕರಿಸಬೇಕು. ಅಲ್ಲ ಮರು ಕೇಳುವಂತೆ ಕರಸ್ಥಲದ ಲಿಂಗದ ಅರಿವು ಅರಿವಲ್ಲ. ಸಮಾಜ ವ್ಯವಸ್ಥೆಯಲ್ಲಿ ಸ್ಥಾವರ ಲಿಂಗಕ್ಕೆ ಒಳಗಾಗುವ ಭಯ. ಹೀಗಾಗಿ ಲಿಂಗವಿಡಿದ ಅರಿವು ಅರಿವಲ್ಲ. ಜಡಗೊಂಡ ಸ್ಥಾವರ ಲಿಂಗದ ಖಂಡನೆಯೊಂದಿಗೆ ಸ್ಥೂಲ ಸೂಕ್ಷ್ಮ ಶರೀರದ ಅರಿವು ಅರಿವಾಗುತ್ತದೆ. ಸ್ಥಾವರಲಿಂಗ ಕರಸ್ಥಲಲಿಂಗದ ಶಿಷ್ಟಾಚಾರದ ಡಾಂಬಿಕ ಭಕ್ತಿಯಾಗುತ್ತದೆ. ಗುರು ಕೊಟ್ಟ ಲಿಂಗ ಲಿಂಗವಲ್ಲ. ಕಲ್ಪನೆಯ ಪ್ರತೀಕ. ತನ್ನ ತಾನರಿತವನೆ ಶ್ರೇಷ್ಠ ವ್ಯಕ್ತಿ ಅವನೇ ಅರಿವೇ ಗುರು.

ಭವಕ್ಕೆ ಬಂದ ಈ ಜೀವಕ್ಕೆ ಚೈತನ್ಯ ಬೇಕು. ಪ್ರೀತಿ ವಿಶ್ವಾಸ ಸಂಬಂಧಗಳು ನಮ್ಮ ಭವದ ಅರ್ಥವಂತಿಕೆ ಹೆಚ್ಚಿಸುವ ಗುಣಗಳಿವು. ನಮ್ಮ ಇರುವಿಕೆಗೆ ಕಲಿಕೆಗೆ ಬೆನ್ನುಡಿ ಬರೆಯುವವನು ಗುರುವಾಗುತ್ತಾನೆ. ಭವಿಯನ್ನ ಭಕ್ತನನ್ನಾಗಿಸುವ ಸದ್ಗುರು ಕಾರುಣ್ಯ ಶ್ರೀ ತೋಂಟದ ಸಿದ್ದಲಿಂಗೇಶ್ವರರ ವಚನದಲ್ಲಿ ಹೀಗೆ ಕಾಣಬಹುದು.

ಭವ ತಿಮಿರೆಂಬ ಅಜ್ಞಾನದಿಂದ
ಮುಸುಕಿಕೊಂಡು ಕಾಣಬಾರದೆ ಇದ್ದ ಕಣ್ಣಿಂಗೆ
ಜ್ಞಾನವೆಂಬ ಅಂಜನವ ನೆಚ್ಚು
ಶಿವಪಥ ವಿದೆಂದು ತೋರಿಸಿದ ಸದ್ಗುರುದೇವಂಗೆ
ನಮೋ ನಮೋ ಎಂಬೆನಯ್ಯ
ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೆ

ಬೇರೆ ಧರ್ಮಗಳಲ್ಲಿ ಗುರುವೆಂಬ ಸ್ಥಾನ ಜನನದಿಂದ ಪ್ರಾರಂಭವಾದರೂ ಶರಣ ಧರ್ಮದಲ್ಲಿ ಅರ್ಹತೆಯಿಂದ ಲಭಿಸುತ್ತದೆ. ಇಲ್ಲಿ ಜಾತಿ ಮುಖ್ಯವಲ್ಲ, ಧರ್ಮ ಮುಖ್ಯವಾಗುತ್ತದೆ. ಇಂತಹ ಗುರು ಶಿಷ್ಯರ ಸಂಬಂಧದ ಒಡಲಲ್ಲಿ ಭಕ್ತಿ ದೈನತೆ ಕಳವಳ ಅಡಗಿರುತ್ತದೆ. ಶರಣ ಧರ್ಮದ ನಿಜಗುರು ಬಸವಣ್ಣನವರು. ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಮಂತ್ರವು ಶರಣ ಧರ್ಮದ ಪವಿತ್ರತೆಯನ್ನು ಸಾರುವ ಮೇರು ಮಂತ್ರವಿದು. ಯುಗಪುರುಷ ಸಾಂಸ್ಕೃತಿಕ ನಾಯಕನೆಂಬ ಅಂಶ ಪ್ರಬಲವಾಗಿ ಪ್ರತಿಪಾದಿಸಿತು. ಅಲ್ಲಮ ಪ್ರಭು ಹೇಳುವಂತೆ ಗುಹೇಶ್ವರ ನಿಮ್ಮ ಶರಣ ಸಂಗನ ಬಸವಣ್ಣನ ಸಾನಿದ್ಯದಿಂದ ನಾನು ಸದ್ಭಕ್ತನಾದೆ. ಏಕೆಂದರೆ ಬಸವನೆಂಬ ಗುರು ಸಮಾಜವಾಗಿ ಧರ್ಮವಾಗಿ ಮೌಲ್ಯಗಳ ಮೊತ್ತವನ್ನು ನೀಡಿದವನು. ಹೀಗಾಗಿ ಗುರು ಅಂದು ಕ್ರಾಂತಿಕಾರಿಕ ವಿಚಾರವಾಗಿತ್ತು.

ಕಲ್ಪನೆ ನಮ್ಮ ಶರಣ ಧರ್ಮದ್ದು ಕಲ್ಯಾಣ ನಮ್ಮ ಧ್ಯೆಯ ಗುರಿಯಾಗಿ ನೋಡಿ ಧರ್ಮವನ್ನೇ ಜನರ ಹತ್ತಿರ ಕೊಂಡೊಯ್ದವರು. ನಮ್ಮ ಧರ್ಮ ಗುರುಗಳಾಗಿದ್ದರು. ಜೀವನದ ಸತ್ಯಾಸತ್ಯತೆಯ ಅವಲೋಕನಕ್ಕೆ ಗುರುವೆಂಬ ನಂಬಿಕೆ ಸಾಮಾನ್ಯರದು. ಸತ್ಯ ದರ್ಶನದ ಆತ್ಮ ಸಾಕ್ಷಾತ್ಕಾರಕ್ಕೆ ಆಧ್ಯಾತ್ಮಿಕ ಮಾರ್ಗದ ಮುನ್ನುಡಿಗಿ ಆಂತರಿಕ ವಿಕಾಸಕ್ಕೆ ಗುರು ಬೇಕೇ ಬೇಕು. ಗುರುಪತಕ್ಕೆ ಬೇಕಾಗುವ ಮಡಿಕೆ ಮಣ್ಣು ಹೊನ್ನು.. ಗುರು ಸಾಮರಸ್ಯ ಬಯಸುವ ಶಬ್ದಗಳಾಗಿವೆ. ಕಾಯವನ್ನು ಮಡಿಕೆಯಾಗಿ ನೋಡಿದವರು ಶರಣರು.

ಮಡಕೆಯ ಮಾಡುವಡೆ ಮಣ್ಣೆ ಮೊದಲು
ತೊಡಿಗೆಯ ಮಾಡು ವಡೆ ಹೊನ್ನೇ ಮೊದಲು
ಶಿವ ಪಥ ವನರಿವಡಿ ಗುರು ಪಥವೇ ಮೊದಲು

ಬಸವಣ್ಣನವರ ಈ ವಚನದ ಭಾಷೆ ಗುರು ಶಿಷ್ಯರ ಸಂವಾದದ ಭಾಷೆಯಾಗಿದೆ. ಮೊದಲು ದ್ವೈತವಾಗಿತ್ತು. ಗುರು ಪಥದಲ್ಲಿ ಅದ್ವೈತವಾಗುತ್ತದೆ. ಈ ಭವದಲ್ಲಿ ಕಂಡು ಬರುವ ಸಂಸಾರದ ಅತೃಪ್ತಿ ಅಶಾಂತಿ ಕನವರಿಕೆಗಳು ಪ್ರಧಾನವಾಗುತ್ತವೆ. ಭವ ಬಂಧನದಲ್ಲಿ ಅಂತ್ಯವಿಲ್ಲದೆ ಅನುಭವಿಸಿದ ತಾತ್ವಿಕ ನಿಲುವುಗಳು ಶಿವ ಪಥದೊಳಗೆ ವಿಲೀನವಾಗುವ ಆಧ್ಯಾತ್ಮಿಕ ಮನಸ್ಥಿತಿಯದು. ಗುರು ಕೊಟ್ಟ ಜ್ಞಾನ ದೈವ ಜ್ಞಾನವಾಗಿ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ನಮನದ ಗುರು ಕಾರುಣ್ಯದ ಪರಿಶುಬ್ರತೆಯಾಗಿದೆ.

ಗುರುಲಿಂಗ ಜಂಗಮದ ಬಗ್ಗೆ ಗೌರವ ಉಳ್ಳವರು ಅನಾಚಾರದಲ್ಲಿ ತೊಡಗಿಸಿಕೊಂಡು ಶಿಷ್ಯನಿಗೆ ಬೋಧನೆ ಮಾಡಿದರೆ ಕೆಟ್ಟ ಧರ್ಮ ಸಮಾಜ ಸೃಷ್ಟಿಯಾಗುತ್ತದೆ. ಗುರುವಾದವನು ಸೂಕ್ಷ್ಮ ಸಂವೇದನೆಯುಳ್ಳ ನರನನ್ನು ಹರನನ್ನಾಗಿಸುವ ಪರಿಕ್ರಮವಾಗಿರಬೇಕು. ಅಂಬಿಗರ ಚೌಡಯ್ಯನವರು ಗುರು ಶಿಷ್ಯರ ಪ್ರಖರತೆಯನ್ನು ವೈಚಾರಿಕತೆಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ.

ಗುರುಲಿಂಗ ಜಂಗಮ ಅರಿಯದ
ಗೊಡ್ದುಗಳ ಶಿಷ್ಯನ ಮಾಡಿಕೊಂಬವ
ಹೆಡ್ಡ ಜಡ ಜೀವಿಗಳೇ ನೆಂಬೆನಯ್ಯ
ಆಚಾರ ಅನಾಚಾರದ ಬೇದವ ನರಿಯದ
ಹೆಡ್ಡ ಮಾನವರಿಗೆ ಉಪದೇಶ ಕೊಡುವ
ಮತಿ ಭ್ರಷ್ಟರನು ಏನೆಂಬೆನಯ್ಯ
ಅವನ ಅಜ್ಞಾನ ವಳಿಯದೆ ಅವನ ನಡೆ
ನುಡಿಯ ಹಸೆ ಮಾಡದೆ ಅವನ ಆದಿ ಅಂತ್ಯವ
ತಿಳಿಯದೆ ಧನ ಧಾನ್ಯ ದ್ರವ್ಯದಾಸೆಗೆ
ಶಿವ ದೀಕ್ಷೆಯ ಮಾಡುವನೊಬ್ಬ ಗುರುವ
ಹುಟ್ಟ ಅಂದಕನೆಂಬೆನಯ್ಯ ತನ್ನ ಗುರುತ್ವ
ವರಿಯದ ಗುರುವಿನಿಂದ ಉಪದೇಶ
ಪಡೆದವನೊಬ್ಬ ಶಿಷ್ಯನ ಕೆಟ್ಟ ಗಣ್ಯ
ವನೆಂಬೆನಯ್ಯ ಇಂತಿವರ ಗುರು ಶಿಷ್ಯರೆಂದಡೆ
ನಮ್ಮ ನಮ್ಮ ಪ್ರಮಥರು ಮಿಚ್ಚರಯ್ಯ
ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ
ಗುರು ಶಿಷ್ಯರಿಬ್ಬರಿಗೆಯೂ ಯಮದಂಡನೆ
ತಪ್ಪದೆಂದಾತನು ಅಂಬಿಗರ ಚೌಡಯ್ಯನು

ಅಂಬಿಗರ ಚೌಡಯ್ಯನವರ ಗುರು ಪರಿಪೂರ್ಣನಲ್ಲ ಶಿಷ್ಯನು ಅನ್ವೇಷಕನು ಅಲ್ಲ ಚಾರಿತ್ರಿಕ ಸನ್ನಿವೇಶಗಳ ಮುಖಾಮುಖಿಯ ವಾಸ್ತವತೆ ಇಲ್ಲಿದೆ. ಅಂದು ಸಮುದಾಯದಲ್ಲಿ ಜನರ ಅನಾಗರಿಕತೆ ಮೌಡ್ಯತೆಯನ್ನು ನಂಬಿದ ಶಿಷ್ಯರು ಹೆಚ್ಚಾಗಿದ್ದರು. ಇವರನ್ನು ಮತಿಭ್ರಷ್ಟರೆಂದು ಹೀಯಾಳಿಸುವ ಸ್ಪಷ್ಟತೆಯನ್ನು ಕಾಣಬಹುದು. ಅಜ್ಞಾನ ಸ್ವಾರ್ಥಗಳೇ ತುಂಬಿದ ಸಮಾಜದಲ್ಲಿ ಗುರು ಹಿತಚಿಂತಕನಾಗಬೇಕಾಗಿತ್ತು. ಭ್ರಷ್ಟ ಶಿಷ್ಯರು ಸಮಾಜದಲ್ಲಿ ಮೈಲಿಗೆ ಎಂದು ತಿಳಿದು ಅವರ ಕೊಳಕನ್ನು ತೊಳೆಯಲು ಇಂತಹ ವಚನಗಳ ಮೂಲಕ ಎಚ್ಚರಿಸಿದ್ದಾರೆ. ಸಮ ಸಮಾಜಕ್ಕಾಗಿ ಅರಿವಿನ ಬೆಳಕನ್ನು ನೀಡಿದ್ದಾರೆ. ಸಹಬಾಳ್ವೆ ಉನ್ನತಿಯ ಮಾರ್ಗವನ್ನು ಕಂಡಿದ್ದು ಗುರುಲಿಂಗ ಜಂಗಮರಾಗಿದ್ದರು. ಎಲ್ಲಾ ನದಿಗಳು ಸಮುದ್ರ ಸೇರುವಂತೆ ಮನುಷ್ಯ ಧರ್ಮಕ್ಕೆ ಒಂದೇ ಕುಲ. ಒಂದೇ ಜಾತಿ. ಗುರುವಿಗೆ ಆದರ್ಶ ಶಿಷ್ಯನ ಅವಶ್ಯಕತೆ ಇರುವಂತೆ ಶಿಷ್ಯನಿಗೂ ಆದಶ೯ಯುತವಾದ ಗುರುವಿನ ಅವಶ್ಯಕತೆ ಇರುತ್ತದೆ. ನಿಜದ ಗಣಾಚಾರ ಝಳುಪಿಸಬೇಕು. ಶರಣರ ಆಶಯದಂತೆ ಕಲುಷಿತ ಗೊಂಡ ಸಮಾಜ ನಿರ್ಮಲವಾಗಬಹದು. ಹರ ಮುನಿದರೆ ಗುರು ಕಾಯುವನು ಎಂಬ ತಾತ್ವಿಕತೆ ಬಲವಾಗಿದ್ದ ಕಾಲದಲ್ಲಿ ಗುರು ದೇವರಾಗಿ ಸಮಾನತೆಯ ಆಶಯದೊಂದಿಗೆ ಅಷ್ಟಾವರಣದ ಕಾಳಜಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಶಿವ ದೀಕ್ಷೆಗೆ ಗುರುವೇ ಮಾರ್ಗದರ್ಶಕ. ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ದಿ ಮುಖ್ಯವಾದದ್ದು. ಪ್ರತಿಯೊಬ್ಬ ಶಿಷ್ಯನಿಗೆ ಗುರುಭಕ್ತಿ ಅವಶ್ಯವಾಗಿ ಬೇಕಾಗುತ್ತದೆ. ಹೀಗಾಗಿ ಶಿವ ಪಥದ ಅರಿವು ಅಭಿಮಾನದ ಮಾತಲ್ಲ. ಅನುಭಾವದ ಮಾತದು. ಏಕೆಂದರೆ ಅಷ್ಟವರಣದ ಮೀಮಾಂಸಾ ಅನುಸಂಧಾನ ಶರಣರ ಶೋಧವದು. ಶಿವಪಥದ ಅರಿವು ಸರ್ವವ್ಯಾಪಿಯಾಗಿರುತ್ತದೆ. ಅವನ ಆದಿ ಅಂತ್ಯವ ತಿಳಿಯದೆ ಧನ ದ್ರವ್ಯದಾಸೆಗೆ ಶಿವದೀಕ್ಷೆ ನೀಡಿದರೆ ಧರ್ಮಕ್ಕೆ ಮೋಸ ಮಾಡಿದಂತೆ. ಸಮಾಜದ ಕಳವಳಕ್ಕೆ ಗುರುವೆಂಬ ಶಕ್ತಿಯ ವೈಚಾರಿಕತೆಗೆ ಸದಾ ಗೆಲುವು ಇರುತ್ತದೆ.

ಪ್ರಸ್ತುತ ದಿನಗಳಲ್ಲಿ ಗುರು-ಶಿಷ್ಯರ ಸಂಬಂಧ ವ್ಯವಹಾರಿಕವಾಗಿದೆ. ಆಧ್ಯಾತ್ಮಿಕ ನೈತಿಕ ಸಂಬಂಧಗಳು ಮರೆಯಾಗಿವೆ. ನವನವೀನ ಎನಿಸುವ ಶರಣರ ವಿಚಾರಧಾರೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತವೆ. “ದೇಹ ಅರ್ಥ ಪ್ರಾಣ ಅಭಿಮಾನಕ್ಕೆ ಶ್ರೀ ಗುರು ಕರ್ತನು ತಾನು ಬೃತ್ಯನೆಂದು“ ಆದಯ್ಯನವರ ಈ ವಚನದ ಸಾಲನ್ನು ಗಮನಿಸಬೇಕು.

ವಚನ ಸಾಹಿತ್ಯದ ಭಕ್ತಿ ಪರಂಪರೆಯಲ್ಲಿ ಸ್ತ್ರೀಯನ್ನು ಪುರುಷ ಶಕ್ತಿ ಹುಡುಕುತ್ತಾ ಹೋಗುತ್ತದೆ. ಆದರೆ ಒಬ್ಬ ಪುರುಷ ಇನ್ನೊಂದು ಪುರುಷನೊಂದಿಗೆ ಅನುರಕ್ತವಾಗುವುದು ಕುತೂಹಲಕರ. ಶರಣರ ಶರಣ ಸತಿ ಲಿಂಗಪತಿ ಎನ್ನುವ ಭಾವ…ಗುರುವನ್ನು ದೇವರಾಗಿ ಕಂಡ ಶರಣರು ತಾವು ಗುರುವಿನ ಹೆಂಡತಿಯಂದು ಹೇಳಿದ್ದು ಚೆನ್ನಬಸವಣ್ಣನವರ ಈ ವಚನ”

ಗುರುವೇ ಹೆಂಡತಿಯಾಗಿ ಹೆಂಡತಿಯೆ ತಾಯಾಗಿ
ತಾಯೆ ಹೆಂಡತಿಯಾಗಿ ಶಿಷ್ಯನೇ ಗಂಡನಾಗಿ
ಏನೆಂದು ಹೇಳುವೆ ಏನೆಂದು ಉಪನಿಸುವೆ
ಕೂಡಲ ಚೆನ್ನಸಂಗಯ್ಯ ಇಹ ಪರ ವಿಲ್ಲವಾಗಿ

ಭಕ್ತಿಯ ಪರಾಕಾಷ್ಠೆಯಲ್ಲಿ ಮೊದಲ ಆದ್ಯತೆ ಗುರುವಂಬ ಸಾಂಗತ್ಯಕ್ಕೆ ಮಾತ್ರ… ಗುರುವಿನ ಅನ್ಯೋನ್ಯತೆಯಲ್ಲಿ ಪತಿಯೆಂಬ ಗುರುವಿನ ಮೂಲಕ ಆಧ್ಯಾತ್ಮಿಕ ಸಂಸಾರ ನಡೆಯುತ್ತದೆ. ನಾನೀಗ ಚರ್ಚಿಸುತ್ತಿರುವುದು ಗುರುವೇ ಹೆಂಡತಿಯಾಗಿ ಪ್ರಣಯ ಮತ್ತು ಶೃಂಗಾರದ ಒಳನೋಟದ ಸಾಂಕೇತಿಕತೆ. ಶರಣರು ಸ್ಪಷ್ಟಪಡಿಸಿದ ಸೃಷ್ಟಿ ಸೃಷ್ಟಿಕರ್ತ. ಶಿವ ಜೀವರಿಗೆ ಅಭೇಧವನ್ನು ಕಲ್ಪಿಸದೆ ಒಂದೇ ಎಂಬ ಧೋರಣೆಯಲ್ಲಿ ಸಮೀಕರಿಸಿ ಹೇಳಿದರು. ಭಕ್ತಿಯ ಮೇರುತನದಲ್ಲಿ ಮೊದಲ ಆದ್ಯತೆ ಗುರುವಂಬ ಸತಿ ಭಾವವಾಗಿದೆ. ಸತಿ ಭಾವದ ಅನ್ಯೋನ್ಯತೆಯಲ್ಲಿ ಗುರುಪತಿಯಾಗಿ ಶಿಷ್ಯ ಸತಿಯಾಗಿ ಆಧ್ಯಾತ್ಮಿಕ ಸಂಸಾರ ಮುಂದುವರಿಯುತ್ತದೆ. ಸತಿಪತಿ ಭಾವದ ಗೌರವದಲ್ಲಿ ಅರಿವಿನ ನಂಬಿಕೆ ಬಹಳ ಮುಖ್ಯವಾದದ್ದು. ಅಕ್ಕಮಹಾದೇವಿ ಹೇಳುವಂತೆ:

ಕರ್ಮವೆಂಬ ಗಂಡನ ಭಾವಿ ಟೊಣೆದು
ಹಾದರ ಮಾಡುವೆನು ಹರನ ಕೂಡ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವ ಕಲಿತೆನು ಶಿವನೊಡನೆ

ಸತಿಪತಿ ಭಾವದ ತಾತ್ವಿಕತೆ ಸುಖದ ಕಲ್ಪನೆಯಾದರೂ ವಾಸ್ತವದ ತಿಳುವಳಿಕೆಯೊಂದಿಗೆ ಅನುಭಾವದ ಸ್ವಂತಿಕೆಯ ಅರಿವನ್ನು ಕೊಡುತ್ತಾಳೆ. ಹೆಚ್ಚಾಗಿ ಶರಣರು ಹೆಣ್ಣಿನ ಮನಸ್ಸಿನೊಂದಿಗೆ ಸಂಸಾರದ ಮೌಲ್ಯಗಳನ್ನು ಶ್ರೇಷ್ಠವಾಗಿ ಸ್ಪಷ್ಟಪಡಿಸಿ ಹೇಳಿದ್ದಾರೆ. ಸತಿಪತಿ ಧರ್ಮವು ಲೌಕಿಕ ಪ್ರಣಯವಾಗಿದ್ದು ಮುಂದೆ ಆಧ್ಯಾತ್ಮದ ಅನುಭವದಲ್ಲಿ ಪರಿಶುದ್ಧವಾಗುವುದು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀ ಮಾದರಿಗಳನ್ನು ಆದರ್ಶಯುತವಾಗಿ ಪರಿಭಾವಿಸುವ ವೈಚಾರಿಕತೆ ಇಂದು ನೆನ್ನೆಯದಲ್ಲ ಅನಾದಿ ಕಾಲದಿಂದ ಬಂದದ್ದು. ಗುರು ಶಿಷ್ಯ ಸಂಬಂಧದಲ್ಲಿ ದ್ವೈತವಾಗಿದ್ದು ಮುಂದೆ ಅದ್ವೈತವಾಗುತ್ತದೆ. ಶಿವ ಜೀವರಿಗೆ ಸಂಬಂಧಿಸಿದ ಆತ್ಮತೃಪ್ತಿಯೇ ssಆತ್ಮ ತತ್ವವಾಗಿದೆ. ಇದನ್ನು ಗುರುವಿನ ಮೂಲಕ ವ್ಯಕ್ತಪಡಿಸಿದರು.

ದೈವವಾದ ಗುರುವಿನ ಮೂಲಕ ಐಕ್ಯ ಪಡೆಯಬೇಕೆಂಬುದಾಗಿದೆ. ಹೀಗಾಗಿ ತತ್ವಮಯವಾದ ಈ ಶರೀರದಲ್ಲಿ ಗುರು ಪ್ರಣವ ಸ್ವರೂಪನಾಗಿದ್ದಾನೆ. ಅರಿವಿನ ಆತ್ಮಕ್ಕೆ ನಮೋ ಎನ್ನುತ್ತಾರೆ. ಗುರು ತಂದೆಯಾಗಿ ದೈವವಾಗುತ್ತಾನೆ. ಕುರುಹು ಇದ್ದು ಇಲ್ಲದೆ ಉರಿ ಹಿಡಿದ ಕರ್ಪೂರದ ಗಿರಿಯಂತೆ ಈ ದೈವಿಕ ಸಂಬಂಧಗಳು ಗುರು ಸಂಬಂಧಗಳಾಗುತ್ತವೆ.

ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು.
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.

ಫೋನ್ ನಂ:+91 94499 46839

Loading

Leave a Reply